Wednesday, August 8, 2012

ಕಾಯಬೇಕು

ಕಾಯಬೇಕು ಹೀಗೆ
ಕಾಲದ ತಲೆಯ ಮೇಲೆ ಮೆಟ್ಟಿಕೊಂಡು
ಹಲ್ಲುಕಚ್ಚಿ, ಎದೆ ಕಲ್ಲುಮಾಡಿಕೊಂಡು
ಕಾಯುವುದು ಸಲೀಸಾಗಬೇಕು;
ಒಳಗೆ ಬೇಯುವುದು ಗೊತ್ತಾಗದಂತೆ

ನೋಯದ ಹೊರತು
ಎದೆಯಲ್ಲಿ ನಾದ ಹುಟ್ಟದು
ಭೂಮಿ ಹುಟ್ಟಿದ್ದೇ ದೊಡ್ಡ ಆಸ್ಫೋಟದಿಂದ
ಎಂದು ಕೇಳಿದ ನೆನಪು

ನಿನ್ನ ಸೋಕಿದ ಮೇಲೆ
ಇಹಕ್ಕೂ ಪರಕ್ಕೂ ವ್ಯತ್ಯಾಸವೆಂಬುದಿಲ್ಲ
ಎರಡರ ನಡುವೆ ನನ್ನದು ನಿರಂತರ ಚಲನೆ

ಕತ್ತಲು ಗರ್ಭಗುಡಿಯಲ್ಲಿ
ನಿನ್ನ ಮೂರ್ತಿಯೊಂದರ ಹೊರತು ಮತ್ತೇನೂ ಇಲ್ಲ
ನನ್ನ ಒಡಲ ನಡುಕ
ಈಗ ನನಗೇ ಕಾಣುವಷ್ಟು ಮೂರ್ತ

ಕಾಯ ಬಳಲುತ್ತದೆ
ಜೀವ ಹಿಡಿಯಾಗಿ ನಲುಗುತ್ತದೆ
ಆದರೂ ಪರಸ್ಪರ ಕಾಯಬೇಕು
ಒಳಗೊಳಗೆ ಹೊರಳಿಹೊರಳಿ
ಮುದ್ದೆಯಾಗಿ, ಹಿಡಿಯಾಗಿ, ಧೂಳಾಗಬೇಕು

ನೀನು ಎಚ್ಚರವಿದ್ದಾಗ ನಾನು ನಿದ್ದೆ
ನಾನು ಎಚ್ಚರವಿದ್ದಾಗ ನೀನು ನಿದ್ದೆ
ನಿನ್ನ ಕನಸನ್ನು ನಾನು ಕಾಯುವೆ
ನನ್ನ ಕನಸನ್ನು ನೀನು ಕಾಯುತ್ತೀಯ
ನಿದ್ದೆಯಲ್ಲೇ ನಮ್ಮ ಎಚ್ಚರವನ್ನು ಮುಟ್ಟಬೇಕು
ಪ್ರಜ್ಞೆಯ ತಳದಲ್ಲಿ ವಿಶ್ವಾಸದ ಬೆಳಕು ಹುಡುಕಬೇಕು

ಕಾಯೋಣ ಕಣ್ಣೆವೆ ಮುಚ್ಚದೆ

ಆನಂತರ....

ಮೂಗಿಗೆ ಯಾರೋ ಹತ್ತಿ ಗಿಡಿದಿದ್ದಾರೆ
ಕಿರಿಕಿರಿ, ಯಾತನೆ
ಜೋರಾಗಿ ಉಸಿರುಬಿಟ್ಟು ಹತ್ತಿ ಹಾರುವಂತೆ ಮಾಡಲಾರೆ
ಉಸಿರು ನಿಂತು ಹೋಗಿದೆ

ಕೈಗಳನ್ನು ಕಾಲುಗಳನ್ನು ಮಡಿಚಿದ್ದಾರೆ
ಊಹೂಂ, ಅಕ್ಷರಶಃ ಲಟಲಟನೆ ಮುರಿದಿದ್ದಾರೆ
ನೋವಿಗೆ ಚೀರೋಣವೆಂದರೆ ನಾಲಗೆ ಹೊರಳುತ್ತಿಲ್ಲ
ಹಣೆಯ ಮೇಲೆ ವಿಭೂತಿ ಬಳಿಯಲಾಗಿದೆ
ನಂಗೆ ವಿಭೂತಿ, ಕುಂಕುಮ ಅಲರ್ಜಿ ಕಣ್ರಯ್ಯಾ,
ನವೆತ ಶುರುವಾಗುತ್ತೆ ಅಂತ ಹೇಳಬೇಕಿನಿಸುತ್ತದೆ, ಆಗುತ್ತಿಲ್ಲ
ಹಣೆಯ ಮೇಲೆ ನಾಲ್ಕಾಣೆ ಪಾವಲಿ ಅಂಟಿಸಲಾಗಿದೆ
ಅದು ತಣ್ಣಗೆ ಕೊರೆಯುತ್ತಿದೆ ಎದೆಯವರೆಗೆ

ಬಾಯಿ ಬಿಡಿಸಿದಂತೇ ಇದೆ;
ಇಡೀ ನೆತ್ತಿ ಗಲ್ಲ ಒಂದು ಮಾಡಿ ಬ್ಯಾಂಡೇಜು ಕಟ್ಟಿ
ಬಾಯಿ ಮುಚ್ಚಿದ್ದಾರೆ
ಆದರೂ ಹಲ್ಲು ಕಾಣುತ್ತಿದೆ; ವಿಕಾರವಾಗಿ
ಹೀಗೆ ಕಟ್ಟುವ ಬದಲು ತುಟಿಗಳನ್ನು ಹೊಲೆದುಬಿಡಬಾರದಿತ್ತೆ
ಎಂಬ ಪ್ರಶ್ನೆ ನನ್ನದು, ಯಾರನ್ನು ಕೇಳಲಿ?

ಸ್ನಾನಕ್ಕೆ ಕರೆದೊಯ್ದಿದ್ದರು, ಬೆನ್ನು ನಿಲ್ಲುತ್ತಿರಲಿಲ್ಲ
ಒಬ್ಬ ಭುಜ ಹಿಡಿದುಕೊಂಡಿದ್ದ
ಪೂರ್ತಿ ಬೆತ್ತಲೆ ನಾನು
ಇಷ್ಟು ವರ್ಷ ಮುಚ್ಚಿಟ್ಟುಕೊಂಡಿದ್ದ ಕಲೆಗಳು, ವ್ರಣಗಳು, ಮಚ್ಚೆಗಳು
ಎಲ್ಲಾ ಬಟಾಬಯಲು
ಬಿಸಿಬಿಸಿ ನೀರು ಸುರಿಯುತ್ತಿದ್ದಾರೆ, ಮೈ ಹಬೆಯಾಡುತ್ತಿದೆ
ಒಂದು ಕೈ ಒರಟಾಗಿ ಉಜ್ಜಿದ್ದಕ್ಕೆ ಎದೆಯ ಚರ್ಮ ಕಿತ್ತುಬಂದಿದೆ
ಇಶ್ಯೀ ಎಂದು ಆ ಕೈಯನ್ನು ಸೋಪಿನಿಂದ ಉಜ್ಜಿ ತೊಳೆಯಲಾಗಿದೆ

ನಾನು ಸತ್ತಿದ್ದೇನೆ
ಹಾಗಂತ ಎಲ್ಲ ಮಾತನಾಡುತ್ತಿದ್ದಾರೆ
ಈಗ ನಾನು ಅವನೂ ಅಲ್ಲ, ಇವನೂ ಅಲ್ಲ, ಅದು ಮಾತ್ರ
ದೊಡ್ಡಗಂಟಲಲ್ಲಿ ಯಾರೋ ಅಳುತ್ತಿದ್ದಾರೆ
ತಲೆ ಸವರಿ ಸಮಾಧಾನ ಹೇಳಬೇಕಿನಿಸುತ್ತಿದೆ, ಹೇಳಲಾರೆ

ರಾಶಿರಾಶಿ ಹೂವು, ಅದರ ಗಂಧಕ್ಕೆ ವಾಕರಿಕೆಯಾಗುತ್ತಿದೆ
ಪಕ್ಕದಲ್ಲಿ ಹಚ್ಚಿಟ್ಟ ಕಂತೆಗಟ್ಟಲೆ ಅಗರಬತ್ತಿಯ ಘಮವೂ ಹೇಸಿಗೆ
ಹೂವ ಒಡಲಲ್ಲಿ ಸಾವಿನ ಗಂಧ ಹುಟ್ಟಿದ್ದನ್ನು ಇವತ್ತೇ ನೋಡಿದ್ದು ನಾನು

ಅದೋ ವಿದ್ಯುತ್ ಚಿತಾಗಾರ
ಎಲ್ಲ ಕಿತ್ತು ಬರಿಮೈಯನ್ನು ಒಳಗೆ ತಳ್ಳಲಾಗಿದೆ
ಎಂಥದ್ದೋ ಅಸಂಬದ್ಧ ಮಂತ್ರ, ಚೀರಾಟ
ಬಾಗಿಲು ಮುಚ್ಚಿದ ಮೇಲೆ ಒಳಗೆ ಕಂಡಿದ್ದು
ಬೆಂಕಿಯ ಕುಲುಮೆ, ಇನ್ಯಾವುದೋ ಹೆಣ ಬೇಯುವ ಚಿಟಪಟ ಸದ್ದು

ನಾನೀಗ ಬೇಯುತ್ತೇನೆ, ಗಂಟೆಗಟ್ಟಲೆ
ಬೂದಿಯಾಗುವವರೆಗೆ
ಬೂದಿ ಯಾವುದೋ ನದಿಯಲ್ಲಿ ಕರಗಿಹೋಗುತ್ತದೆ

ಬೆಂಕಿಯಲ್ಲಿ, ನೀರಲ್ಲಿ, ಗಾಳಿಯಲ್ಲಿ, ಮಣ್ಣಿನಲ್ಲಿ
ನನ್ನ ದೇಹ ಹರಿದು ಹಂಚಿಹೋಗಿದೆ

ಎಲ್ಲ ವಿಸರ್ಜನೆಯಾದ ಮೇಲೆ ಈಗ ನಿರಾಳ
ನನ್ನನ್ನು ನಾನು ಸುಲಭವಾಗಿ
ಹುಡುಕಿಕೊಳ್ಳಬಹುದು;
ಯಾರ ಅಂಕೆ, ತಂಟೆ, ತಕರಾರುಗಳೂ ಇಲ್ಲದೆ
ನಾನೀಗ ಸ್ವಯಂಪೂರ್ಣ

ಹೊಕ್ಕುಳ ಮೇಲೆ ಹಚ್ಚಿಟ್ಟ ಹಣತೆ

ವಿಪರೀತ ಹೊಟ್ಟೆ ನೋವು ಕಣೇ ಅಮ್ಮ
ಎಂದು ನರಳಾಡುವಾಗ
ಆಕೆ ಭಟ್ಟಿ ಜಾರಿರಬೇಕು ಎಂದು ಧಾವಂತಕ್ಕೆ ಬಿದ್ದಳು
ಹೊಕ್ಕುಳ ಮೇಲೆ ಸೆಗಣಿಯ ಕೆರಕ
ಅದರ ಮೇಲೆ ದೀಪ ಹಚ್ಚಿಟ್ಟಳು
ಹೊಟ್ಟೆ ನೀವಿ ನೀವಿ
ಜಾರಿದ ಭಟ್ಟಿ ಮತ್ತೆ ಸ್ವಸ್ಥಾನಕ್ಕೆ
ನನಗೂ ಅವಳಿಗೂ
ಯಾತನೆಯಿಂದ ಬಿಡುಗಡೆ

ಅವತ್ತು ಆ ದೀಪದ ಬೆಳಕಿಗೆ ಕಣ್ಣು ಕೀಲಿಸಿ ನಿಂತಿದ್ದು
ಇವತ್ತಿಗೂ ಹಾಗೇ ನೆಟ್ಟನೋಟದಲ್ಲಿ ನೋಡುತ್ತಿದ್ದೇನೆ
ಹೊಕ್ಕುಳ ಮೇಲೆ ಹಚ್ಚಿಟ್ಟ ಹಣತೆ
ಉರಿದರೆ ಬದುಕು, ಆರಿದರೆ ಸಾವು
ದೀಪ ಆರದಂತೆ ಬದುಕಬೇಕು
ಅದು ಬೆಳಗುವಷ್ಟು ಕಾಲ ಸಾವೂ ಜೀವಂತ

ಹೊಕ್ಕುಳ ಮೇಲೆ ದೀಪ ಹಚ್ಚಿಟ್ಟು
ವರ್ಷಗಳು ಆದ ಮೇಲೆ ಒಂದೊಂದೇ ಗಾಯ
ಯಾರೋ ಜಿಗುಟಿದ್ದು, ಚುಚ್ಚಿದ್ದು..
ಒಮ್ಮೊಮ್ಮೆ ನಾನೇ ತರಿದುಕೊಂಡಿದ್ದು
ಈ ನೋವು ತಡಕೊಳ್ಳಬೇಕು
ತಡಕೊಂಡಷ್ಟು ಕಾಲ ದೀಪ ಬೆಳಗುತ್ತದೆ

ದೀಪದ ಬೆಳಕಿಗೆ ಕಣ್ಣು ಕೊಟ್ಟಿದ್ದೇನೆ
ಕಣ್ಣುಗುಡ್ಡೆಗಳಲ್ಲಿ ಮಂಜು ಮಂಜು
ಆಗಾಗ ನೀರು ಧಾರೆ ಧಾರೆ; ವಿನಾಕಾರಣ

ಸುಖಾಸುಮ್ಮನೆ ಒಂದಷ್ಟು ಹೊಕ್ಕುಳ ಬಳ್ಳಿಗಳು
ಹೀಗೇ ಹುಟ್ಟಿಕೊಳ್ಳುತ್ತವೆ
ಯಾರೋ ಕತ್ತರಿಸಿ ಕತ್ತರಿಸಿ ಎಸೆಯುತ್ತಾರೆ
ನಾನು ಅಸಹಾಯಕ
ಕೂಸು ಅಲ್ಲಿ ವಿಲಕ್ಷಣವಾಗಿ ಕಿರುಚಿ
ಸಾಯುವುದನ್ನು ನೋಡಲಾರೆ
ಧಮನಿಧಮನಿಗಳಿಂದ ರಕ್ತ ಹರಿಸಿದ್ದೆ
ಈಗ ಕಡುಗೆಂಪು ನನ್ನ ಹೊಟ್ಟೆಯಮೇಲೆ
ಮಾಂಸ ಕತ್ತರಿಸುವ ಮರದ ತುಂಡು

ದೀಪದ ಬೆಳಕ ದಿಟ್ಟಿಸುತ್ತಲೇ ಇದ್ದೇನೆ
ಇದೇನು ಸಾವೋ, ಬದುಕೋ
ಒಂದೂ ಅರ್ಥವಾಗದ ಸೋಜಿಗ

ಕಣ್ಣುಗಳು ಬಳಲಿವೆ, ಇನ್ನು ನೋಡಲಾರೆ
ದೃಷ್ಟಿ ತೆಗೆದ ಕೂಡಲೇ ದೀಪ ಆರುತ್ತದೆ
ಜೀವ ಆರುವ ಕ್ಷಣಕ್ಕೆ ಸಿದ್ಧನಾಗಬೇಕು

ಅಮ್ಮನಿಗೆ ಕೇಳಬೇಕಿನಿಸುತ್ತದೆ
ಭಟ್ಟಿಯಲ್ಲ, ಜಾರುತ್ತಿರುವುದು ಜೀವ
ಉಳಿಸಿಕೊಡು, ಆತ್ಮವನ್ನು ನೀವಿನೀವಿ

ಚಲನೆ

ಎಡದ ಮಗ್ಗುಲಲ್ಲಿ ಏಳಬಾರದಂತೆ
ಹಾಗಂತ ಹಿರಿಯರು ಹೇಳಿದ ಮಾತು

ನಾನು ಎಡದಲ್ಲೂ, ಬಲದಲ್ಲೂ ದಿಢೀರನೆ ಏಳಲಾರೆ
ಪುಟ್ಟ ಹೃದಯದ ಗೂಡಲ್ಲಿ ನೀನು ಮಲಗಿರುತ್ತೀ
ನಿದ್ದೆಗೆಡದಂತೆ ನಿಧಾನ ಏಳಬೇಕು

ಚಿಮ್ಮಿ ನೆಗೆಯುವ ಕರು
ತಾಯ ಮೊಲೆಯಲ್ಲಿ ಬಾಯಿಡುವ ಘಳಿಗೆ
ತುಟಿ, ಮೊಲೆ ಎರಡರ ಬಳಿಯೂ ಶಬ್ದವಿಲ್ಲ

ಮಳೆಗೆ ಇಳೆ ಕಾಯುತ್ತದೆ;
ನನಗೆ ನೀನು ಕಾಯುವಂತೆ
ಕಾಯುವ ಪ್ರತಿ ಕ್ಷಣವೂ
ಸುಖದ ಬೇಗೆಯಲ್ಲಿ ಬೇಯುತ್ತದೆ

ಹೂವನ್ನೂ ಅದರ ಸುಗಂಧವನ್ನೂ
ಬೇರೆ ಮಾಡಲಾಗದು
ಒಂದನ್ನು ಬಿಟ್ಟು ಒಂದರ ಅಸ್ತಿತ್ವವಿಲ್ಲ
ಮಲ್ಲಿಗೆಯ ಹೊಕ್ಕುಳಲ್ಲಿ ಗಂಧ ನಿಶ್ಚಿತ

ಬಾ, ನಿನ್ನ ಕಣ್ಣುಗಳನ್ನು ಸಂಧಿಸುತ್ತೇನೆ
ಹೊಸ ಹುಟ್ಟೊಂದು ಸಾಧ್ಯವಾಗಲಿ
ಕಣ್ಣು ಕಣ್ಣು ಕೂಡಿಸುವ ಬೆಳಕಿನ ರೇಖೆಗಳಿಗೆ
ಹೊಸಗರ್ಭ ಕಟ್ಟಿಸುವ ಶಕ್ತಿಯಿದೆ

ಮುಮ್ಮುಖವೋ, ಹಿಮ್ಮುಖವೋ
ಚಲನೆ ಎಂಬುದು ಚಲನೆಯೇ ದಿಟ
ರಕ್ತ ತಣ್ಣಗಾಗುವ ಮುನ್ನ
ಚಲಿಸುತ್ತಲೇ ಇದ್ದುಬಿಡೋಣ

ನಿರಾಕಾರ ತುಂಬುತ್ತ

ಎದುರಿಗಿನ ದಿಬ್ಬ ಹತ್ತಲಾರದೆ
ಅಬ್ಬರಿಸುವ ಲಾರಿ,
ತುಟಿಗೆ ತಾಗಿಸದ ಲಸ್ಸಿ
ತಣ್ಣಗೆ ಕುಳಿತಿದೆ ಲೋಟದಲ್ಲಿ;

ಗಂಟು ಕಟ್ಟಿ ಕಟ್ಟಿ
ವೈನಾಗಿ ಬಾಡಿಸಿದ
ಕೆಸುವಿನ ಎಲೆಯ ಮೇಲೆ
ಒನದಾಡಿದ ಒಂದು ನೀರ ಹನಿ
ಬೆಳಕು ಹಾಯಬೇಕು
ಬಣ್ಣ ತುಂಬಲು;

ಅದಕ್ಕೊಂದು ಕಸುವಿದೆ,
ತೆಳ್ಳಗೆ ಪದರು ಪದರಾಗಿ
ಉತ್ತರಿಸುವ ಕಳಲೆ ಕೈಯಿಗೆ,
ಅದಕ್ಕೂ ಕಸುವಿದೆ,
ಪದರು ಪದರನ್ನೆ
ಒಂದೊಂದಾಗಿ ನಾಲಿಗೆಯ
ಪದರದ ಮೇಲಿಡುವುದಕ್ಕೆ;

ದೇಹಬಿಟ್ಟ ಮನದಂತೆ
ಭೋ...ಎಂದು ಧುಮ್ಮಿಕ್ಕುವ ಜಲಪಾತ
ಮೈದುಂಬಿ ಹರಿಯುತ್ತದೆ,
ಆಕಾರ ಪಡೆಯುತ್ತ,
ನಿರಾಕಾರ ತುಂಬುತ್ತ.

ಆಕಾರ....

ಆಕಾರಗಳ ಮಾತು ಬಿಡು
ಇಲ್ಲಿ ಯಾವುದಕ್ಕೂ ಆಕಾರವಿಲ್ಲ
ಬಾಚಿ ತಬ್ಬಿದಂತೆಲ್ಲ
ನಾನು ನಿನಗೊಂದು ಹಿಡಿ
ನೀನು ನನಗೊಂದು ಹಿಡಿ

ಇಡಿಯಾಗಿ ಹಿಡಿದೆವೆಂಬ ಭ್ರಮೆಗೆ
ಆಯಸ್ಸು ಕಡಿಮೆ
ಹುಡುಕುತ್ತ ಹೋದರೆ, ಹಿಡಿಯುತ್ತ ಹೋದರೆ
ಎಲ್ಲವೂ ಅಮೂರ್ತ

ಮಣ್ಣು ಕಲೆಸಿ ಮಡಿಕೆ ಮಾಡಿದವನಿಗಷ್ಟೇ ಗೊತ್ತು
ಮಣ್ಣೂ ಮಡಕೆಯೂ ಒಂದೇ ಎಂದು
ಮಣ್ಣು ಅನ್ನವೂ ಆಗುತ್ತದೆ
ಅನ್ನ ಅದೇ ಮಡಕೆಯೊಳಗೆ ಬೇಯುತ್ತದೆ
ಅನ್ನ ಬೂದಿಯೂ ಆಗುತ್ತದೆ

ಹೂಂ, ನೀ ಹೇಳುವುದು ನಿಜ
ಕಂಡ ಆಕೃತಿಗಳು ಸುಳ್ಳಾದರೆ
ನಿಜಾಯಿತಿಯ ಕೊರಳು ಕೊಯ್ದುಹೋದರೆ
ನೋವ ಸಹಿಸುವುದು ಕಷ್ಟ

ಉಸಿರು, ನಿಟ್ಟುಸಿರು
ಹಾಗೆ ದೀರ್ಘವಾಗಿ ಎಳೆಯಬೇಡ
ವಾಪಾಸು ಬರುವ ಗಾಳಿ
ಈಟಿಯಂತೆ ಚುಚ್ಚುತ್ತದೆ;
ನಿನ್ನನ್ನೂ ನನ್ನನ್ನೂ

ಹಾಗೆ ನೋಡಿದರೆ
ಉಸಿರಿಗೂ ನೋವಿಗೂ ಆಕಾರವಿಲ್ಲ
ಕಣ್ಣಂಚಲ್ಲಿ ಜಿನುಗುವ ನೀರಿಗೂ ಆಕಾರವಿಲ್ಲ

ಅದಕ್ಕೆ ಹೇಳಿದ್ದು ಕಣೇ
ಆಕಾರಗಳ ಗೊಡವೆ ಬಿಡು
ಬಾ, ನನ್ನೆದೆಗೂಡಲ್ಲಿ ಬೆಚ್ಚಗೆ ಮಲಗು
ಎದೆಗೂಡಿಗೊಂದು ಆಕಾರ ಸಿಕ್ಕರೂ ಸಿಗಲಿ

ಜೀವಬೆಳಕು.

ನಿಲ್ಲಿಸದೆ ಬಡಿಯುತ
ಯಾವುದು ಯಾವುದೆಂದು
ಬೇರೆಮಾಡಲಾಗದೆ ಬೆರೆತ
ಜೇನು-ಬಯಲು;
ಜೀ...ಎಂದು ಜೀಕುತ್ತ
ರಾತ್ರಿ ಕನಸುಗಳ ತೂಗುಯ್ಯಾಲೆಯಲಿ,
ಮುಂಚಾಚಿ ಚೂಪು
ಮುಳ್ಳೆಂಬ ಬಾಯಿಯ
ನೀನು ಮುಟ್ಟಿದ್ದಾದರೂ ಏನು?
ಅದುರುವ ಹೂವ ಹೊಕ್ಕಳು!
ಒಂದೊಂದೇ ಗಳಿಗೆಯ ಒಂದುಮಾಡಿ,
ತುಂಬಿದ ಜೀವರಸದ ಬಟ್ಟಲು!
ಬಾನ ಸಜ್ಜದ ಕೆಳಗೆ
ನೇತುಬಿದ್ದ ನಿನ್ನ ಸಂತತಿ,
ಬಿಳಲ ತುದಿಗೂ ಇದೆಯಲ್ಲ ಬೇರಿನ ಶೃತಿ!

ಉರಿವ ಹಣತೆಯ ಕೆಳಗೆ
ಹೊಟ್ಟೆಯಾನಿಸಿ ಮಲಗಿಬಿಟ್ಟ
ಹಲ್ಲಿಯ ಕಣ್ಗುಡ್ಡೆಗಳಿಗೆ
ಹಿಡಿದು, ತಬ್ಬಿ ಸಂಗಾತಿ ತುಟಿಯ
ಜೇನು ನೆಕ್ಕುವ ತವಕ;

ಅದುರುವ ತುಟಿ, ಕಣ್ಣು, ಹೊಕ್ಕಳಿನ
ಕೆಳಗೆ ಕಾಣದ ಕತ್ತಲು,
ಕತ್ತಲಲಿ ಕೂಡಿಟ್ಟ ಜೇನಹನಿ
ಜೀವಬೆಳಕು

ಬಾ....

ಕರುಳು ಒಂದಕ್ಕೊಂದು
ಹೆಣೆದು ಜಡೆಯಾಗಿ
ನಡುವೆ ಸುಳಿವ ರಕ್ತ ಸಿಕ್ಕುಸಿಕ್ಕಾಗಿ
ಒಡಲು ಭಗಭಗ
ಬಾ ಈ ಗಂಟು ಬಿಡಿಸಿಬಿಡು

ಹೃದಯದಲ್ಲಿ ನೂರೆಂಟು ಸೀಳು
ಒಮ್ಮೆಗೇ ಪ್ರಾಣ ಕಿತ್ತು ಹೋದಂತೆ
ಕ್ಷಣಕ್ಕೊಂದು ಸೀಳಿನಿಂದ ನೋವು
ಎದೆ ಮತ್ತೆ ಮತ್ತೆ ಭಾರ
ಬಾ ಈ ಸೀಳುಗಳನ್ನು ಹೊಲೆದುಬಿಡು

ನೆತ್ತಿ ಅದುರುವಂತೆ
ಇದೇನೋ ಯಾತನೆ
ಮೆದುಳು ಬಳ್ಳಿ ಹರಿದುಹೋದಂತೆ
ಧುಮುಗುಡುವ ಹಣೆ
ಬಾ ನೆತ್ತಿಯನೊಮ್ಮೆ ಕೂಡಿಸಿಬಿಡು

ತೊಡೆಗಳಲ್ಲಿ ನಡುಕ
ಕಿಬ್ಬೊಟ್ಟೆಯಲ್ಲಿ ಆರದ ಕೀವು
ಬೆರಳ ಗೆಣ್ಣುಗಳಲ್ಲಿ ಬಾವು
ಪಾದದಲ್ಲಿ ಸೆಳೆತ
ಬಾ ಎಲ್ಲ ವಾಸಿಮಾಡಿಬಿಡು

ಬಾ, ಬಂದು ಹಾಗೇ ಹೋಗಬೇಡ
ಖಾಲಿ ಕೈಯಲ್ಲಿ ಕಳಿಸಲಾರೆ
ಜೀವವೊಂದು ಉಳಿದಿದೆ;
ಅದನ್ನೇ ನಿನ್ನ ಮಡಿಲಿಗೆ ಸುರಿದು ಕಳಿಸುವೆ
ಜೀವರಸವನ್ನೇ ತನಿಯೆರೆಯುವೆ ನಿನ್ನ ನೆತ್ತಿಯ ಮೇಲೆ

ಅನಂತ ಸುಖ

ಈ ಎಲ್ಲವೂ ನಾನೇ ಆಗಿದ್ದೆ;
ಹೆಣೆದ ಕರುಳು, ಒಡೆದ ತುಟಿ
ಮುರಿದ ಹೃದಯ, ಸೆಟೆದ ಕೈ ಕಾಲು
ತುಂಬಿದ ಕೊಳವಾದ ಕಣ್ಣುಗಳು
ಅಪೂರ್ಣ ಆತ್ಮ, ಅಮೂರ್ತ ಕಾಯ

ನೀನು ಹೊತ್ತು ತಂದದ್ದು ಅನಂತ ಸುಖ
ಮೊದಲು ಸಣ್ಣ ಮಿಸುಕಾಟ
ಆಮೇಲೆ ಚಲನೆ
ತದನಂತರ ಸಾವಿರ ಅಶ್ವಗಳ ಓಡಾಟ
ಕೆನೆದು ಕೆನೆದು ನಿಂತಿತು ದೇಹ

ಕಲ್ಲುಗಳೆಡೆಯಲ್ಲಿ ಒರತೆ ಹುಟ್ಟಿ
ಚಿಮ್ಮನೆ ಹಾರುವಂತೆ
ಜಡಗೊಂಡ ದೇಹ ಒಂದೇ ಸಮನೆ ಜಿನುಗುತ್ತಿದೆ
ಬೆವರುತ್ತಿದೆ, ಹನಿಯುತ್ತಿದೆ

ಹೀಗೆ ಜಿನುಗಿ, ಬೆವರಿ, ಹನಿದು
ಪೂರ್ತಿ ಕರುಗುವ ಮುನ್ನ
ಆ ಅನಂತ ಸುಖವನ್ನೊಮ್ಮೆ
ಇಡಿಯಾಗಿ ಅನುಭವಿಸಲುಬಿಡು

ನನ್ನ ಪೂರ್ಣಗೊಳಿಸು
ಗೆರೆ, ವೃತ್ತಗಳಿಂದ ಹೇಗೆ ಕೂಡಿಸಲು
ಸಾಧ್ಯವೋ ಹಾಗೆ ಕೂಡಿಸುತ್ತ ಹೋಗು
ನಾನು ನಿನಗೆ ದಕ್ಕುತ್ತೇನೆ, ಇಡಿಯಾಗಿ

ಎದೆಯಲ್ಲಿ ಒಂದು ಹಕ್ಕಿ
ಈಗ ಎದ್ದು ಚಡಪಡಿಸಿ ರೆಕ್ಕೆ ಬಡಿದಿದೆ
ಸಣ್ಣ ಚಳುಕು, ನೀನು ಹಕ್ಕಿ
ಅದರ ಗುಟುಕು ಜೀವ ನಾನು

ಹೌದು, ಅನಂತ ಸುಖವೆಂದರೆ
ಸಾವು ಮತ್ತು ಬದುಕು
ಎರಡನ್ನೂ ಬಿಗಿಯಾಗಿ ತಬ್ಬದ ಹೊರತು
ಅದು ದಕ್ಕುವುದಿಲ್ಲ
ದಕ್ಕಿಸಿಕೊಳ್ಳೋಣ...

ಮಾತು ಮಾತು ಮಾತು...

-೧-
ಪಾತಿ ಮಾಡಿ, ಈಗ ಹುಗಿದಿಟ್ಟ ಗಿಡದಂತೆ
ಮಾತು, ಮಾತು
ಅದು ಬೆಳೆದಂತೆ ಮೌನ ಮುಸುಕು ಹೊದ್ದು
ಮಲಗಿದೆ, ಗಾಢ ನಿದ್ದೆ

-೨-
ನಿಜ, ಒಂದು ಹಿತವಾದ ಅಪ್ಪುಗೆಗೆ
ಸಾವಿರ ಮಾತಿನ ಶಕ್ತಿ
ಆದರೆ, ತಬ್ಬಿದಾಗ ಆಡಿದ ಮಾತಿಗೆ
ಲಕ್ಷ ದೀಪಗಳ ಮೆರುಗು

-೩-
ನಾನು ನಿದ್ದೆಗೆ ಹೊರಳಿದ್ದಾಗ
ನೀನು ಪೂರ್ಣ ಎಚ್ಚರ
ನಿನ್ನ ಕಣ್ಣ ಪಹರೆಯಲ್ಲಿ
ನಾನು ಯುಗಯುಗಗಳನ್ನು ದಾಟಿ ಹೋದೆ

-೪-
ಈಗಷ್ಟೆ ತೊಟ್ಟು ಕಳಚಿದ
ಹೂವು ನಿನ್ನ ಪಾದದ ಮೇಲೆ
ಹೂವಿಗಂಟಿದ ನೀರಹನಿಯಾಗಿ ಸೋಕಿದ್ದೇನೆ
ಧೂಳಿನ ಜತೆ ನೀರ ಸರಸ

-೫-
ನೀನು ನನ್ನ ಎಂದೂ ತೀರದ ಹಸಿವು
ಭಗಭಗನೆ ಒಡಲು ಉರಿಸುವ ದಾಹ
ಪ್ರೀತಿ ಮೋಕ್ಷವೂ ಅಲ್ಲ, ಧರ್ಮವೂ ಅಲ್ಲ
ಪ್ರೀತಿ ಹಸಿವು, ಪ್ರೀತಿ ದಾಹ

-೬-
ನಿನ್ನ ಕಂಡುಕೊಳ್ಳುವುದಕ್ಕೆ
ನೀನಾಗಹೊರಟೆ ನಾನು
ದಾರಿಗುಂಟ ಸಾವಿರ ವಿಸ್ಮಯ
ನೀನಾಗುವುದೆಂದರೆ ಹೊಸಜನ್ಮ ಎತ್ತಿ ಬರುವುದು

-೭-
ಎಷ್ಟೊಂದು ಹೆಜ್ಜೆ ಗುರುತುಗಳು
ನಿನ್ನವೂ ನನ್ನವೂ
ಒಂದರ ಮೇಲೊಂದು ಹರಡಿ
ಮಿಲನದ ಖುಷಿಯಲ್ಲಿವೆ
-೮-
ನೀನು ಪ್ರೀತಿಸುವ ಮುನ್ನ
ಈ ನನ್ನ ಕಾಯ ಇಷ್ಟು ಪ್ರಿಯವಾಗಿರಲಿಲ್ಲ
ಆತ್ಮವನ್ನು ಹೀಗೆ ಬೆತ್ತಲೆಯಾಗಿ
ನೋಡುವ ಶಕ್ತಿಯೂ ನನಗಿರಲಿಲ್ಲ

-೯-
ನಿನ್ನನ್ನು ಪ್ರೀತಿಸುವುದೆಂದರೆ
ಎಲ್ಲ ಅರ್ಥಗಳನ್ನು ಒಡೆದು ಕಟ್ಟುವುದು
ಪ್ರೀತಿ, ಕಾಮ, ನೋವು, ಸಾವು
ಎಲ್ಲದಕ್ಕೂ ಹೊಸ ಅರ್ಥಗಳನ್ನು ಸೃಜಿಸುವುದು

-೧೦-
ಪ್ರೀತಿ ಕೊಡುವುದು ಸುಲಭ
ನಿನ್ನ ಸಮುದ್ರದ ಅಲೆಗಳಂಥ ಪ್ರೀತಿಗೆ
ತಾಳಿಕೊಳ್ಳುವುದು ಕಷ್ಟ
ನಾನೀಗ ದಡವಾಗಿ ಉಳಿದಿಲ್ಲ

ಧಾರಣೆ

ಅಯ್ಯಾ
ಗಂಟಲು ತುಂಬಿ ಬರುವ
ಪ್ರೀತಿಯನ್ನು ಹೀಗೆ
ಧರಿಸುವುದು ಇಷ್ಟೊಂದು
ಕಷ್ಟವೆಂದು ಗೊತ್ತಿರಲಿಲ್ಲ
ಶಕ್ತಿ ಕೊಡು

ಮೀನಿಗೆ ನೀರಲ್ಲಿ
ಈಜುವುದು ಗೊತ್ತು
ನೀರೇ ಆಗಿಬಿಡುವುದು ಕಷ್ಟ
ಮೀನೂ, ನೀರೂ ಎರಡೂ ಆಗಿ
ಈಜುತ್ತಿದ್ದೇನೆ, ರೆಕ್ಕೆಗಳಿಗೆ ಎಲ್ಲಿಲ್ಲದ ಕಸುವು

ನಾನು ಸಮುದ್ರದಡಿಯ
ಕಪ್ಪೆಚಿಪ್ಪು
ಹೊರಗಿನ ಕವಾಟ ಗಟ್ಟಿ
ಒಳಗೆ ಪಿತಪಿತ, ಬಲು ಸೂಕ್ಷ್ಮ
ನಿನ್ನ ಕೈಯಾರೆ ನನ್ನ ಉಪಚರಿಸು

ಎಲ್ಲ ತೊರೆದು ಹೋಗಿ
ಕಾಡಗರ್ಭದಲ್ಲಿ ನಿಂತರೂ
ಇದೊಂದು ಪ್ರೀತಿ
ಎದೆಗೊತ್ತಿ ನಿಲ್ಲುತ್ತದೆ
ಬುದ್ಧನ ನಿಲುವಂಗಿ ಕಿತ್ತೆಸೆದು
ನಿರ್ವಾಣನಾಗಿ ಓಡಿಬರುತ್ತೇನೆ

ಅಯ್ಯಾ
ಶಕ್ತಿ ಕೊಡು
ಇದನ್ನು ತೊರೆದು ಬದುಕಲಾರೆ
ಧರಿಸಬೇಕು
ಹಣೆಯ ಮೇಲೆ, ನೆತ್ತಿಯ ಮೇಲೆ
ಎದೆಯ ಮೇಲೆ
ಎಲ್ಲೆಂದರಲ್ಲಿ ಧರಿಸಬೇಕು
ತೇಯ್ದು ಹಚ್ಚಿದ ಗಂಧದ ಅಂಟು
ಕೊರಳ ಸುತ್ತ ಘಮಘಮಿಸಬೇಕು

ಧರಿಸಬೇಕು,
ಚರ್ಮವನು ದಾಟಿ ಒಳಗೆ, ಇನ್ನೂ ಒಳಗೆ
ಕಣ್ಣಪಾಪೆಯ ಒಳಗೆ, ಮಿದುಳ ಬಳ್ಳಿಯ ಮೇಲೆ
ಕರುಳ ಸುರಂಗದ ಒಳಗೆ, ಹೃದಯ ಕವಾಟಗಳ ಮೇಲೆ
ಎಲ್ಲೆಂದರಲ್ಲಿ ಧರಿಸಬೇಕು

ಅಯ್ಯಾ,
ಪ್ರೀತಿ ಧರಿಸುವುದು ಅಷ್ಟು ಸುಲಭವಲ್ಲ
ನನ್ನದೆನ್ನುವ ಎಲ್ಲವನ್ನೂ ಕಿತ್ತು ಒಗೆಯಬೇಕು
ಸಾವಿನ ಕುಲುಕುಲು ನಗುವಿಗೆ
ಹತ್ತಿರ, ಮತ್ತಷ್ಟು ಹತ್ತಿರವಾಗಬೇಕು
ಅದರ ಹಿತವಾದ ಸಪ್ಪಳಕ್ಕೆ ಕಿವಿಯಾಗಬೇಕು

ನೀನು ನಿರಾಕಾರಿ, ನಿರಂಹಕಾರಿ, ನಿರ್ಗುಣಿ
ಎಲ್ಲ ಧರಿಸಿ ನಿಲ್ಲಬಲ್ಲೆ;
ನನ್ನ ಪಾಡು ಕೇಳು
ಇದರ ಸುಖಾನುಭೂತಿಗೆ
ಮುಟ್ಟಿದಲ್ಲೆಲ್ಲ ರಕ್ತ ಜಿನುಗುತ್ತದೆ
ಆ ಕೆಂಪಿನಲ್ಲಿ
ನನ್ನ ಬಣ್ಣಗಳೆಲ್ಲ ದಿಕ್ಕಾಪಾಲಾಗಿದೆ

ಪ್ರೀತಿಯನ್ನು ಧರಿಸುವುದೆಂದರೆ
ಕಾಲನ ಜತೆ ಅನುಸಂಧಾನ
ಸಾವಿನ ಜತೆ ಕುಶಲೋಪರಿ
ನಿನ್ನ ಜತೆಗೆ ಹುಸಿ ಮುನಿಸು

ಅಯ್ಯಾ ಶಕ್ತಿ ಕೊಡು
ಈ ಆಸೀಮ ಪ್ರೀತಿಯನ್ನು ಧರಿಸಿದ್ದೇನೆ
ಬೆಳಕು ಬೊಗಸೆಯಲ್ಲಿ ಕುಳಿತಿದೆ
ಅದು ಚೆಲ್ಲದಂತೆ ಗಟಗಟ ಕುಡಿದುಬಿಡಲು
ಪ್ರಾಣವಾಯು ಕೊಡು

ನಾನು ಮತ್ತೆ ಉಸಿರಾಡುತ್ತೇನೆ

Saturday, July 7, 2012

ಜೀವ


ನಕ್ಷತ್ರ ಇಡಿ ಇಡಿಯಾಗಿ ಕಳಚಿ
ಉಡಿಗೆ ಬಂದು ಬಿದ್ದಿದೆ
ಅದರ ಶಾಖಕ್ಕೆ ಇಂಚಿಂಚೇ
ಕರಗುತ್ತಿದ್ದೇನೆ

ಎವೆಯಿಕ್ಕಿ ನೋಡಲಾರೆ
ಬೆಳಕಿಗೆ ಕಣ್ಣು ಹೋದೀತೆಂಬ ಭೀತಿ

ಆಕಾಶದ ಕೊರಳಿಗೆ
ಸುಗಂಧರಾಜನ ಮಾಲೆ ಕಟ್ಟುತ್ತಿದ್ದೇನೆ
ಮಾಲೆಯ ಭಾರಕ್ಕೆ
ಆಕಾಶ ತೊನೆಯುತ್ತಿದೆ

ಎಲ್ಲೋ ಆಳದಲ್ಲಿ
ಇದು ಮಿಸುಕಾಡುತ್ತಿದೆ
ರಕ್ತ ಧಿಮಿಧಿಮಿ ಹರಡುತ್ತಿದೆ
ಅದರ ಕುದಿಗೆ
ಕನಸೊಂದು ಬೇಯುತ್ತಿದೆ

ಮುಂಗಾರಿನ ಹಸಿಮೈ
ಮಣ್ಣು ಅಗೆದು, ನೇಗಿಲು ಗೀರಿ
ಒಳನುಗ್ಗುವ ಸಂಭ್ರಮ
ಅಗೋ, ಭೂಮಿಯೇ ಬಸಿರಾದಂತೆ
ಧೂಳು ಗಿರಿಗಿಟ್ಟಲೆಯಾಡುತ್ತಿದೆ

ಇದು ಮಿಸುಕುತ್ತಿದೆ
ಕೈಚಾಚಿ ನಿಂತಿದೆ
ನಾನಿದರ ಪಾದವಾಗುತ್ತೇನೆ
ನೆತ್ತಿಯಾಗುತ್ತೇನೆ, ಹಣೆಯಾಗುತ್ತೇನೆ
ತುಟಿಯಾಗುತ್ತೇನೆ, ಕೊರಳಾಗುತ್ತೇನೆ

ಅದರ ಪುಟ್ಟ ಹಸ್ತ
ನನ್ನ ಬೊಗಸೆಯೊಳಗೆ
ಇದಕ್ಕೆ ಜೀವ ಉಣಿಸಬೇಕು
ಅದರಾತ್ಮವನ್ನು
ಎದೆಯ ಮೇಲೆ ಧರಿಸಬೇಕು

ಇತ್ತಿತ್ತಲಾಗಿ

ಈ ನಗರದಲ್ಲಿ ಹಾಡಹಗಲೇ
ಬೆಳದಿಂಗಳ ಕೊಲೆಯಾಗಿದೆ


ಚೂಪು ಮೂತಿಯ ಇಮಾರತುಗಳು
ಚಂದ್ರನನ್ನು ದಸ್ತಗಿರಿ ಮಾಡಿಕೊಂಡಿವೆ

ನೋಟುಗಳ ಮೇಲೆ ಕ್ರೌರ್ಯದ ವಿಷ ಛಾಪಿಸಲ್ಪಟ್ಟಿದೆ
ಗಾಂಧಿ ಮುಖ ಕಣ್ಮರೆಯಾಗಿದೆ

ಇತ್ತಿತ್ತಲಾಗಿ

ಮ್ಯಾನ್ ಹೋಲುಗಳಲ್ಲಿ ಮನುಷ್ಯರ ವಿಸರ್ಜನೆಗಳಿಗಿಂತ
ಹೆಚ್ಚು ರಕ್ತವೇ ಹರಿಯುತ್ತಿದೆ

ವಿದ್ಯುತ್ ತಂತಿಗೂ ಮನುಷ್ಯನ ನರನಾಡಿಗಳಿಗೂ
ಕೂಡಿಸಿ ವೆಲ್ಡಿಂಗ್ ಮಾಡಲಾಗಿದೆ

ರಾತ್ರಿ ಕ್ರೋಧೋನ್ಮತ್ತ ನರಿಗಳು ಓಡಾಡುತ್ತವೆ;
ಅವುಗಳ ಕಿರುಚಾಟಕ್ಕೆ ಮಕ್ಕಳ ನಿದ್ದೆ ಹಾರಿಹೋಗಿದೆ

ಇತ್ತಿತ್ತಲಾಗಿ

ದೇವರ ಹೆಸರಿನಲ್ಲಿ ಸೈತಾನರು ವಿಜೃಂಭಿಸುತ್ತಿದ್ದಾರೆ
ಸೈತಾನರ ಕಂಡರೆ ಭೀತಿ ಜನರಿಗೆ

ಮನೆಗಳಿಗೆ ಕಬ್ಬಿಣದ ಸರಳಿನ ಬಾಗಿಲು ಜಡಿಯಲಾಗಿದೆ
ಎಂದೂ ತೆರೆಯದಂತೆ ಗ್ರಿಲ್ ಮಾಡಲಾಗಿದೆ

ಮನೆಬೆಕ್ಕುಗಳು ಆಚೆ ಹೋಗಲಾಗದೆ
ದೇವರ ಕೋಣೆಯಲ್ಲೇ ಕಕ್ಕಸ್ಸು ಮಾಡಿವೆ

ಇತ್ತಿತ್ತಲಾಗಿ

ಹೊಸ ಪೀಳಿಗೆಯ ರಾಜಮಹಾರಾಜರು
ಹಾದಿಬೀದಿಯಲ್ಲೇ ಮೈಥುನ ಮಾಡುತ್ತಾರೆ

ಮ್ಯೂಸಿಯಮ್ಮುಗಳಲ್ಲಿ ಯಾರದೋ ಕನ್ನಡಕ
ಮತ್ಯಾರದೋ ಖಾದಿ ಅಂಗಿ ಕರಗಿಹೋಗಿವೆ

ದಾರಿತಪ್ಪಿದ ನಾಯಿಗಳು ಎಳೆ ಮಕ್ಕಳನ್ನೇ ಹರಿದು ತಿನ್ನುತ್ತಿವೆ,
ಯಾರ ಮೇಲಿನ ದ್ವೇಷವೋ?

ಇತ್ತಿತ್ತಲಾಗಿ

ಪರಂಪರೆಯ ಖಾಸಗಿ ಅಂಗವನ್ನು
ಇವರೆಲ್ಲ ಮುತ್ತಿಕ್ಕಿ ಮುದ್ದಾಡುತ್ತಿದ್ದಾರೆ

ಕರಗಿದ ಹೆಣದಿಂದ ಎಬ್ಬಿಸಿದ
ಮೂಳೆಗಳ ಮೇಲೂ ಧರ್ಮದ ವ್ಯಾಖ್ಯಾನ

ಯಜ್ಞದ ಬೆಂಕಿಯಲ್ಲಿ ಮಣ್ಣಿನ
ಅಂತಃಸಾಕ್ಷಿಯೇ ಸುಟ್ಟು ಭಸ್ಮವಾಗುತ್ತಿದೆ


ಶಾಪಿಂಗ್ ಮಾಲ್‌ಗಳಲ್ಲಿ ಕರುಣಾಜನಕ ಕಣ್ಣುಗಳನ್ನು
ಎಗ್ಗಿಲ್ಲದಂತೆ ಸುಟ್ಟು ತಿನ್ನಲಾಗುತ್ತದೆ

ಪಿಜ್ಜಾ ಕಾರ್ನರುಗಳಲ್ಲಿ ಮೆಟ್ರೋ ಟ್ರೈನಿನ ಗಡಗಡ ಸದ್ದನ್ನು
ನೆಂಚಿಕೊಳ್ಳಲು ನೀಡಲಾಗುತ್ತದೆ

ಕಾಫಿ ಡೇಗಳ ನೀಟಾಗಿ ಪೇರಿಸಿಟ್ಟ ಕುಂಡಗಳಲ್ಲಿ ಕ್ರೌರ್ಯದ
ಹೂವುಗಳು ಅರಳುತ್ತಿವೆ

ಇತ್ತಿತ್ತಲಾಗಿ

ಹದ್ದುಗಳು ಕೆಳಗೆ, ಇನ್ನೂ ಕೆಳಗೆ ಹಾರುತ್ತಿವೆ
ಸತ್ತವರ ಮಾಂಸಕ್ಕಿಂತ ಜೀವಂತ ಮಾಂಸವೇ ಬಲುಪ್ರಿಯ

ಚಂಡಮಾರುತಗಳು ಸರಹದ್ದು ದಾಟಿ ಬಿಜಂಗೈಯುತ್ತಿವೆ
ಅವೂ ಕೂಡ ಜಾಗತೀಕರಣಗೊಂಡಿವೆ

ಜೋಡಿ ಪಾರಿವಾಳಗಳಿಗೆ ಕೂಡುವುದು ಸಾಧ್ಯವಾಗುತ್ತಿಲ್ಲ
ಮನುಷ್ಯರ ನಿಟ್ಟುಸಿರ ಶಾಖಕ್ಕೆ ವೀರ್ಯ ಬಸಿದುಹೋಗಿದೆ

ಇತ್ತಿತ್ತಲಾಗಿ

ಸಂಪ್ರದಾಯದ ಹೆಣಗಳು ಒಂದೊಂದಾಗಿ ಉರಿಯುತ್ತಿವೆ
ಬೂದಿಯಷ್ಟೇ ಉಳಿಯಬೇಕು

ಬೂದಿ ಕರಗಿದ ಮೇಲೆ
ಹೊಸ ಮಿಂಚುಹುಳಗಳು ಹುಟ್ಟಲೇಬೇಕು, ಬೆಳಗಲೇಬೇಕು

ಎಲ್ಲ ಮುಗಿದ ಮೇಲೆ
ಹೊಸ ಬೆಳಕು ಮೂಡಲೇಬೇಕು

ಇತ್ತಿತ್ತಲಾಗಿ
ಒಂಚೂರು ಚೂರೇ ಬೆಳಕಾಗುತ್ತಿದೆ

ತಹತಹ...

ಇಲ್ಲಿ ಸುಡುವ ಧಗೆಯ ನಡುಬೇಸಿಗೆ
ಬೆಂಕಿಯ ಹೊಕ್ಕು ಬಂದಿದೆ ಗಾಳಿ
ಕೊತಕೊತನೆ ಕುದಿಯುತ್ತಿದೆ ರಕ್ತ
ಅದನ್ನು ತಣಿಸಲು ಬಿರುಮಳೆಯೇ ಬೀಳಬೇಕು

ಬಟ್ಟೆ ಕಳಚಿ ಅಂಗಾತ ಮಲಗಿದ್ದೇನೆ
ಫ್ಯಾನು ಗಿರಗಟ್ಟಲೆಯಂತೆ ಸುತ್ತುತ್ತಿದೆ
ಅದಕ್ಕೂ ಹುಚ್ಚು ಆವೇಶ
ಅದರ ನೆರಳು ಗೋಡೆಯ ಮೇಲೆ ಏಕತ್ರಗೊಂಡಿದೆ
ಕೆಟ್ಟ ಮುಲುಕಾಟ, ವಿಕಾರ ಚಿತ್ರ

ಒಂದು ಸಣ್ಣ ತಂಪು ಗಾಳಿ ಕಿಟಕಿಯೊಳಗಿಂದ
ತೂರಿ ಬಂದು ಹಾಗೇ ವಾಪಾಸಾಗಿದೆ
ಬರದೇ ಇದ್ದಿದ್ದರೆ ಒಳಿತಿತ್ತು
ಇನ್ನು ಈ ಧಗೆಯ ಸಹಿಸಲಾರೆ
ನಿದ್ರೆಯಲ್ಲೂ ಅದು ನನ್ನ ಕೊಂದು ತಿನ್ನುತ್ತದೆ

ಮೈಯೆಲ್ಲಾ ಬೆವರಲ್ಲಿ ಒದ್ದೆಮುದ್ದೆ
ಹಿಂಡಿಹಿಂಡಿ ಹರಿದುಹೋಗುತ್ತಿರುವುದು
ನನ್ನದೇ ರಕ್ತವೇ?
ಜೀವ ಬಸಿದು ಬಸಿದು ಸೋರಿಹೋಗಿ
ಒಣಕಲು ಮೂಳೆಗೂಡುಗಳಷ್ಟೆ ಉಳಿದಿವೆ

ಹುಡಿಯಾಗಲಿನ್ನೂ ಅವಸರವಿಲ್ಲ
ನಾಗರಿಕತೆಯ ಮಣ್ಣ ಮೇಲೆ
ಹೊಸ ಹನಿಗಳು ಬೀಳಬಹುದು
ಮೊದಲ ಮಳೆಗೆ ಮಣ್ಣೂ ಪುಳಕಗೊಳ್ಳಬಹುದು

ಮತ್ತೆ ಜೀವ ತುಂಬಿಬಂದು
ಒಡ್ಡುಗಳಿಂದ ಚೈತನ್ಯ ಹರಿಯಬಹುದು
ಬಹುದು, ಬಹುದು, ಬಹುದು
ಸದ್ಯಕ್ಕೆ ನಾನು ತಹತಹ ಕುದಿಯುತ್ತಿದ್ದೇನೆ
ನನ್ನ ಅಸ್ತಿತ್ವ ನೋಡಿಕೊಳ್ಳಲು ಇದು ಒಳ್ಳೆಯ ಕಾಲ

ದೇವರು, ಗರ್ಭಗುಡಿ ಮತ್ತು ಪ್ರೀತಿ

ಗರ್ಭಗುಡಿಯಲ್ಲಿ ಏನಿರುತ್ತೆ?
ಇದು ಎಂದೂ ತಣಿಯದ ಕುತೂಹಲ
ದೇಗುಲದಲ್ಲಿ ಇದ್ದಷ್ಟು ಹೊತ್ತು
ಇಣುಕಿ ಕತ್ತು ನೋವು

ದೇವರ ಮೂರ್ತಿ ತುಂಬ ತರಾವರಿ ಹೂವು
ಅಲಂಕಾರಕ್ಕೆ ಅವನ ದೇಹ ಕಾಣದು
ಗಂಧ-ಕುಂಕುಮ ಮೆತ್ತಿದ ಹಣೆಯಲ್ಲಿ
ನೆರಿಗೆಗಳು ಮಾಯ

ಒಳಗೆ ಕತ್ತಲು, ಗೌಗತ್ತಲು
ಎರಡು ನಂದಾದೀಪಗಳು ಬೆಳಗುತ್ತಿವೆ
ಸಾಲದು ಬೆಳಕು,
ಅವನು ಕಾಣನು

ಜಾಗಟೆ-ನಗಾರಿಗಳು
ಎದೆ ಒಡೆವಂತೆ ಹೊಡೆದುಕೊಳ್ಳುತ್ತಿವೆ,
ಅವುಗಳೂ ಈಗ ವಿದ್ಯುದೀಕರಣಗೊಂಡಿವೆ ಭೀ
ತಿ ಹುಟ್ಟಿಸುವ ಶಬ್ದದ ನಡುವೆ ಕತ್ತಲಿಗೆ ಇನ್ನಷ್ಟು ಶಕ್ತಿ

ಅವನನ್ನು ಕಾಣುವಾಸೆ ನನಗೆ
ಮಹಾಮಂಗಳಾರತಿ ತಟ್ಟೆಯ ಪ್ರಭೆ ಕಣ್ಣುಕುಕ್ಕುತ್ತಿದೆ
ಅದನ್ನು ನೋಡಿದ ಮೇಲೆ ಗರ್ಭಗುಡಿಯಲ್ಲಿ ಮತ್ತೂ ಕತ್ತಲು

ಮನುಷ್ಯನ ಅತ್ಯಂತಿಕ ಗುರಿ ದೇವರು ಮತ್ತು ಪ್ರೀತಿ
ಹಾಗಂತ ಎಲ್ಲೋ ಕೇಳಿದ ನೆನಪು
ದೇವರು ಆರತಿ ತಟ್ಟೆಯ ಝಣಝಣದಲ್ಲಿ
ಧೂಪದ ಮಸುಕಿನಲ್ಲಿ, ಭಕ್ತರ ಬೆವರ ವಾಸನೆಯಲ್ಲಿ
ಪೂಜಾರಿಯ ಬೆತ್ತಲೆ ಕಂಕುಳಲ್ಲಿ ಕಳೆದುಹೋಗಿದ್ದಾನೆ

ಪ್ರೀತಿ ಎಲ್ಲಿದೆ?
ಕತ್ತಲ ಗರ್ಭಗುಡಿಯಲ್ಲಿರಬಹುದೇ?
ಗೊತ್ತಿಲ್ಲ
ಪ್ರೀತಿಯೇ ದೇವರಾಗುವ
ದೇವರೇ ಪ್ರೀತಿಯಾಗುವ
ಕ್ಷಣಕ್ಕೆ ನಾನು ಹಂಬಲಿಸಿದ್ದೇನೆ

ಆಫ್ರೀನ್ ಕೇಳುತ್ತಿದ್ದಾಳೆ: ಅಪ್ಪ, ನನ್ನದೇನು ತಪ್ಪು?

ಇವತ್ತು ನನ್ನ ನಮಾಜ್-ಇ-ಜನಾಜಾ
ಕಡೆಯ ಪ್ರಾರ್ಥನೆ ನನಗಾಗಿ,
ನೀವೂ ಪ್ರಾರ್ಥಿಸಿ

ಕಿವಿಯಲ್ಲಿ ಇನ್ನೂ ಆಜಾನ್
ಮೊಳಗು ಹಾಗೇ ಇದೆ
ನಾನು ಆಫ್ರೀನ್,
ಆಫ್ರೀನ್ ಅಂದರೆ ಉತ್ತೇಜನ

ಅಮ್ಮಳ ಗರ್ಭಚೀಲದಲ್ಲಿ
ಬೆಚ್ಚಗೆ ಈಜಾಡುವಾಗಲೇ
ನನಗೊಬ್ಬಳು ಜತೆಗಾತಿಯಿದ್ದಳು-ನಮ್ಮಕ್ಕ
ಅಪ್ಪನ ಹಿಂಸೆಗೆ ಅವಳು ಅಲ್ಲೇ ಸತ್ತಳು

ಅಮ್ಮಳ ತುಂಬಿದ ಹೊಟ್ಟೆಯ ಮೇಲೆ
ಅಪ್ಪನ ಕೆಕ್ಕರುಗಣ್ಣು
ಭಯದಲ್ಲಿ ಮುದುಡಿ ಕುಳಿತಿದ್ದೆ ನಾನು

ಈ ಜಗಕ್ಕೆ ಕಣ್ಣು ತೆರೆದುಕೊಂಡ
ಮೊದಲ ಆರು ದಿನಗಳು ದೇವತೆಗಳೇ
ಆರೈಕೆ ಮಾಡುತ್ತಾರಂತೆ
ಅಪ್ಪ ಅಡ್ಡ ನಿಂತಿದ್ದ- ದೇವತೆಗಳಿಗೂ ನನ್ನ ಹಾಲುಗಲ್ಲಕ್ಕೂ ನಡುವೆ

ಪವಿತ್ರ ಜಮ್ ಜಮ್ ನೀರು
ನನ್ನ ಗಂಟಲಿಗೆ ಇಳಿಯುವ ಮುನ್ನವೇ
ಅಪ್ಪ ನನ್ನ ಎದೆಗೆ ಉರಿಯುವ ಸಿಗರೇಟು ಚುಚ್ಚಿ ಬಿಟ್ಟ
ಮೆದುಳು ಹರಿಯುವ ಹಾಗೆ ಗೋಡೆಗೆ ತಲೆ ಜಜ್ಜಿಬಿಟ್ಟ

ನೆತ್ತಿ ಕೂಡಿಲ್ಲ, ಹೊಕ್ಕುಳ ಗಾಯ ಆರಿಲ್ಲ
ಅಳುವುದೊಂದು ಗೊತ್ತಿತ್ತು ನನಗೆ
ಅಪ್ಪನಿಗೇನು ದ್ವೇಷ ನನ್ನ ಮೇಲೆ?

ಹೇಗೆ ಕೇಳಲಿ? ನಾಲಿಗೆ ಹೊರಳುತ್ತಿಲ್ಲ
ಅಪ್ಪಾ ಎಂದು ಚೀರಲೂ ನನ್ನಿಂದ ಸಾಧ್ಯವಿಲ್ಲ
ಎಳೇ ಮೆದುಳು ನುಜ್ಜುಗಜ್ಜು ಅಪ್ಪನ ಹೊಡೆತಕ್ಕೆ ಫಿಡ್ಸು,
ತಲೆಯಲ್ಲಿ ರಕ್ತಸ್ರಾವ ಇನ್ನು ಬದುಕಲಾರೆ ಎಂದು ಹೊರಟುಬಿಟ್ಟೆ

ನನ್ನ ಕಳಕೊಂಡು ಅಮ್ಮ ಈಗ ತಬ್ಬಲಿಯಾಗಿದ್ದಾಳೆ
ಅವಳದಿನ್ನೂ ಹಸಿಮೈ, ಉಕ್ಕಿಚೆಲ್ಲುವ ಮೊಲೆಹಾಲು
ಎಲ್ಲ ಬಿಟ್ಟು ಹೊರಟಿದ್ದೇನೆ
ಇವತ್ತು ನನ್ನ ಜನಾಜಾ,
ಆಮೇಲೆ ಮಣ್ಣು

ಹೋಗುವ ಮುನ್ನ
ಅವನನ್ನು ಕೇಳಬೇಕಿತ್ತು
ಅಪ್ಪ, ನನ್ನದೇನು ತಪ್ಪು?

ವಿದಾಯದ ಗಳಿಗೆ


ಬಾ
ಹಣೆಗೆ ಹಣೆ ಹಚ್ಚಿ
ಬಿಗಿದುಬಂದ ಗಂಟಲಲ್ಲಿ
ಗೊಗ್ಗರು ಧ್ವನಿಯಲ್ಲೇ ಮಾತನಾಡೋಣ

ವಿದಾಯದ ಗಳಿಗೆಯಲ್ಲಿ
ಯಾವ ಮಾತೂ ಉಳಿಯದೇ ಹೋಗಲಿ
ಏನೊಂದೂ ಅತೀತವಾಗದಿರಲಿ

ಬಾ ಏಕಾಂತದ ಜಗಲಿಯಿಂದ ಈಚೆ ಬಾ
ಉಡುವುದಕ್ಕೆ ಕತ್ತಲೆಯಿದೆ
ಮೈತುಂಬಾ ಹೊದ್ದು ಬೆತ್ತಲೆಯಾಗಿರೋಣ
ಜಗದ ಹಳವಂಡಗಳನ್ನೆಲ್ಲ ಒಂದು ಕ್ಷಣ ಮರೆತುಬಿಡೋಣ

ಮಾತಿಗೆ ಕೂರೋಣ, ಮೈಮರೆತುಬಿಡೋಣ
ನೀನು ಭೂಮಿ, ನಾನು ಕಾಲ
ಎಷ್ಟು ಹೊತ್ತು ತಬ್ಬಿ ಕುಳಿತಿರಲು ಸಾಧ್ಯ?
ಬಿಡುಗಡೆ ಬೇಕು ಇಬ್ಬರಿಗೂ

ಬಾ ಇಬ್ಬರೂ ನಾಲ್ಕು ಹನಿ ಕಣ್ಣೀರಿಡೋಣ
ತೋಯ್ದ ಕೆನ್ನೆಗಳಲ್ಲಿ ಇಬ್ಬರ ಸುಖವೂ ಬೆಂದುಹೋಗಲಿ Z
ಣಕಾಲವಾದರೂ ಅಹಂಕಾರ ಹುಗಿಯೋಣ
ನಪುಗಳ ಹುಣ್ಣು ಕತ್ತರಿಸಿ ಎಸೆದು
ಧ್ಯಾನಕ್ಕೆ ಕೂರೋಣ, ಅಖಂಡ ಧ್ಯಾನ

ನಗಬೇಕು, ಎದೆ ಬಿರಿಯುವಂತೆ ರೋಷಾವೇಶದಲ್ಲಿ
ಸಾವು ಎದ್ದು ಒದೆಯುವಷ್ಟು
ನಕ್ಕುಬಿಡೋಣ

ಬಾ ವಿದಾಯದ ಗಳಿಗೆಯಲ್ಲಿ
ಏನೊಂದನ್ನೂ ಕಳೆದುಕೊಳ್ಳುವುದು ಬೇಡ
ಪೂರ್ತಿಯಾಗಿ ಕರಗಿಬಿಡೋಣ
ಕಾಲವಾಗೋಣ ಲಯವಾಗೋಣ
ಎಲ್ಲದಕ್ಕೂ ಇಲ್ಲವಾಗೋಣ

ಸೀತೆ

ಎದುರಿಗೆ ಅಗ್ನಿಕುಂಡ, ಪಕ್ಕದಲ್ಲಿ ಅಗ್ನಿಯಂಥ ಗಂಡ
ತೊದಲುವ ನಾಲಗೆ ಬೆದರುಗಣ್ಣು, ಬಾಣಲೆ ಮನಸ್ಸುಗಳು

ಇಲ್ಲಿ ಮಾತು ನಂಬಿಕೆಗೆಟ್ಟಿದೆ
ಅಗ್ನಿಗೂ ಬೇಕಿದೆ ಪರೀಕ್ಷೆ

ಅಶೋಕವನದ ಶೋಕದ ನಡುವೆಯೂ
ಕಟ್ಟಿಕೊಂಡ ಕನಸುಗಳಿಗೆ ಈಗ ಸಂಸ್ಕಾರ ಆಗಬೇಕು
ಸೂತಕ ಕಳೆಯಬೇಕು

ಎಷ್ಟು ದಿವಸದ ವಿರಹವೇ ಸೀತೆ?
ವಿರಹ ಕರಗಿ ಅವನೆದುರು ನಿಂತಾಗ
ಈ ಅನುಮಾನದ ಕಣ್ಣೇ?
ಇದು ಆತ್ಮಕ್ಕೂ ಅಂಟಿದ ಕಳಂಕವೇ ಹೆಣ್ಣೇ?

ಕಳಕೊಂಡಿದ್ದು ಸಿಕ್ಕೀತೇ ಎಂದು
ಕಳೆದುಹೋದ ನನ್ನವನು ದಕ್ಕಿಸಿಕೊಂಡಾನೇ ಎಂದು
ಜೀವ ಬಿಕ್ಕಳಿಸಿ ಬಿಕ್ಕಳಿಸಿ
ಹಿಡಿಯಷ್ಟಾಗಿ, ಅಣುವಾಗಿ ಕಾದವಳಿಗೀಗ
ಎದುರಿಗೆ ಅಗ್ನಿಕುಂಡ ಜತೆಯಲ್ಲಿ ಅಗ್ನಿಯಂಥ
ಗಂಡ ಬೇಯುತ್ತಾಳವಳು, ಉರಿಯುತ್ತಾಳವಳು

ಬೆಂದು, ಉರಿದ ಬೂದಿಯಿಂದ
ಎದ್ದು ಮತ್ತೆ ಹಿಡಿಯಾಗಿ,
ಅಣುವಾಗಿ ಅವನೆದುರು ನಿಂತು ತಣ್ಣಗಾಗುತ್ತಾಳೆ,
ಮುಂದಿನ ಪರೀಕ್ಷೆಗೆ ಸಿದ್ಧಳಾಗುತ್ತಾಳೆ

ಉರಿಯುತ್ತಿವೆ ಹೃದಯಗಳು
ಉರಿವ ಚೀತ್ಕಾರದ ನಡುವೆ
ಎಲ್ಲೋ ರಾವಣನ ಆತ್ಮ
ಗಹಗಹಿಸಿ ನಕ್ಕಿದ್ದು ಮಾತ್ರ ದುರಂತ !

ದಾರಿ

ನಿನ್ನ ಸ್ಮರಣೆಗೆ ಭೂಮಿಯ ತೂಕ
ನನಗೆ ಸಣ್ಣಗೆ ಜ್ವರ, ನಡುಕ

ಧೋ ಎನ್ನುವ ಮಾತಿನ ಸುರಿಮಳೆ
ನೆಂದು ನೆಂದು ನಾನೂ ನೀನು ತೊಪ್ಪೆ

ಒಂದೇ ಒಂದು ಬಿಗಿ ಸ್ಪರ್ಶಕ್ಕೆ
ಸಾವಿರ ಮಾತಿನ ಶಕ್ತಿ, ಆದರೂ ಒಮ್ಮೊಮ್ಮೆ ಮೌನ

ಅರೆನಿದ್ರೆಯಲ್ಲೂ ನಿನ್ನ ನೆನಪಿನ ಮಂಪರು
ಬಾಚಿ ತಬ್ಬಿ ಎದೆಯೊಳಗೆ ಮುಚ್ಚಿಟ್ಟುಕೊಂಡಿದ್ದಷ್ಟೇ ನೆನಪು

ಜೀವ ಸೋಕುವಷ್ಟು ಸನಿಹ ನಿನ್ನ ಉಸಿರು
ಹೀರಿದ್ದೇನೆ, ಒಡಲು ತುಂಬಿಬಂದಿದೆ

ಆಹಾ! ಮತ್ತೆ ಬಂತು ನೋಡು ಬದುಕುವ ಆಸೆ
ಅಯ್ಯೋ! ಅದರೊಂದಿಗೆ ಒದ್ದುಕೊಂಡು ಬಂದಿದ್ದು ಸಾವಿನ ಭೀತಿ

ಇಲ್ಲ, ನಿನ್ನ ಕಣ್ಣ ಬೆಳಗಿಗೆ ಎಲ್ಲ ಭೀತಿಯನ್ನೋಡಿಸುವ ಛಾತಿ
ಪುಟ್ಟ ರೆಪ್ಪೆಗಳ ಅಡಿಯಲ್ಲಿ ನಾನು ಈಗ ಭದ್ರ

ನಡೆದುಬಿಡು, ನನ್ನೊಂದಿಗೆ ಹೀಗೇ ದಾರಿಗುಂಟ
ಜಗದ ಆಚೆಗೂ ಒಂದು ಬದುಕಿದೆಯಾ ನೋಡೇಬಿಡೋಣ

ಇಲ್ಲಿ ನೀನಿದ್ದೀಯ, ನಾನಿದ್ದೇನೆ
ನಮ್ಮೊಂದಿಗೆ ಕಾಲಾತೀತ ದಾರಿ ಸಮುದ್ರದಂತೆ ಬಿದ್ದುಕೊಂಡಿದೆ

ಇಗೋ, ಹಿಡಿ ನನ್ನ ತೋಳು
ಮೊದಲು ಹೊರಡೋಣ, ದಾರಿ ಹುಡುಕುವ ಗೊಡವೆ ಬೇಡ

ಗರ್ಭದ ಸಂಜ್ಞೆ

ನಿನ್ನೆ ತಾನೇ ಪುಟ್ಟಹಕ್ಕಿ
ಗೂಡು ಕಟ್ಟಿದ್ದನ್ನು ಕಂಡೆ
ಮೊಟ್ಟೆ ಇಟ್ಟು ಕಾವಿಗೆ ಕೂತಿದ್ದನ್ನು ಕಂಡೆ

ಇವತ್ತು ನನ್ನ ಹೊಟ್ಟೆಯೊಳಗೆ
ಸಣ್ಣ ಮಿಡುಕಾಟ
ಗರ್ಭ ಕಟ್ಟಿದ ಹಾಗೆ
ಒಂದು ಶಬ್ದವಿಲ್ಲದ ಚಲನೆ

ದಿನವೂ ನನ್ನಂಗಳದ
ಮಲ್ಲಿಗೆ ಬಳ್ಳಿಯಲ್ಲಿ ಹೊಸ ಹೊಸ
ಹೂವು ಅರಳುತ್ತವೆ
ಒಂದೊಂದು ಹೂವೂ
ಈಗಷ್ಟೇ ಹುಟ್ಟಿದ ಹಸುಗೂಸಿನ
ಎಳೇ ಪಾದಗಳ
ಬೆರಳುಗಳಂತೆ ಕಾಣುತ್ತವೆ

ಕಿಬ್ಬೊಟ್ಟೆಯಾಳದಿಂದ ಇದೇನೋ
ವಿಲಕ್ಷಣ ವೇದನೆ
ಮಗು ಕೈಕಾಲು ಬಡಿದ ಗುರುತು

ನನ್ನ ಗರ್ಭದ ಚೀಲ ಒಡೆದುಹೋಗಿದೆ
ಯಾರೋ ಶ್ರದ್ದೆಯಿಂದ ಹೊಲೆದು
ಹೊಸ ಜೀವಕ್ಕೆ ಆಹ್ವಾನವೀಯುತ್ತಿದ್ದಾರೆ

ಹಡೆಯಲಾರೆ, ಹಡೆಯದೇ ಇರಲಾರೆ
ಗರ್ಭದ ಸಂಜ್ಞೆಗಳನ್ನು ಬಹುಕಾಲ ಹೊತ್ತು ಬದುಕಲಾರೆ

ಪುಟ್ಟಹಕ್ಕಿಯ ಮರಿಗಳು
ಈಗ ಮೊಟ್ಟೆಯೊಡೆದು ಹೊರಬಂದಿವೆ
ಸಣ್ಣ ಕೊಕ್ಕುಗಳಿಂದ ಅವು ನನ್ನ ಕಣ್ಣ ಕುಕ್ಕುತ್ತಿವೆ

ಏನು? ಅವು ನನ್ನ ಕಣ್ಣುಗಳ ತಿಂದೇಬಿಡುತ್ತವೆಯೇ?
ಬೇನೆ, ಬೇನೆ, ಬೇನೆ...

ಮಗು ಈಗ ನಿಧಾನ ಬೆಳೆಯುತ್ತಿದೆ
ಪುಟ್ಟ ಮೂಗು, ಪುಟಾಣಿ ಕಣ್ಣು
ಅವಳ ಮೈಯ ವಾಸನೆಗೆ
ಹೊಸಕಣ್ಣುಗಳು ಬಂದಿವೆ

ಗರ್ಭ ಚಲಿಸುತ್ತಿದೆ...

ಏನೂ ಹೇಳದೆಯೇ.....

ಏನೂ ಹೇಳದೆಯೇ
ನನಗೆಲ್ಲಾ ಗೊತ್ತಾಗಬೇಕು
ಕಣ್ಣುಹನಿಯುವ ಮುನ್ನವೇ
ಬೊಗಸೆ ಚಾಚಬೇಕು

ಹಸಿವು ಕೆರಳುವ ಮುನ್ನ
ತುತ್ತು ನಾನಾಗಬೇಕು
ಜೀವದಗುಳುಗಳ ತಂದು
ಪ್ರೀತಿಯುಣಿಸಬೇಕು

ನಿದ್ದೆ ಅಪ್ಪುವ ಮುನ್ನ
ನಾನೇ ತಬ್ಬಬೇಕು
ಕನಸ ಬಣ್ಣದ ಜಾತ್ರೆ
ಮಡಿಲ ತುಂಬಬೇಕು

ಚಿಂತೆ ಕಾಡುವ ಮುನ್ನ
ಚೈತನ್ಯ ಮೊಗೆದಿಡಬೇಕು
ಒಂದು ಸ್ಪರ್ಶದಿಂದ
ನೋವ ನುಂಗಬೇಕು

ಬಾ ಎಂದು ಚೀರುವ ಮುನ್ನ
ಮಂಡಿಯೂರಿ ನಿಂತಿರಬೇಕು
ಕಣ್ಣ ನೋಟದಿಂದ
ಎದೆತಂತಿ ಮೀಟಬೇಕು

ಕರಳು ಹಿಂಡುವ ದಾರಿ
ಆಸರೆಗೆ ಕೈ ಬೇಕು
ನೀನು ಚಾಚಿದಲ್ಲೆಲ್ಲ
ನಾನೇ ಇದ್ದುಬಿಡಬೇಕು

ಸಾವ ಧೇನಿಸುವ ಮುನ್ನ
ಬದುಕ ಹೊತ್ತುತರಬೇಕು
ಜೀವಜೀವದ ಘಮಲು
ಹರಡಿ ಕರಗಬೇಕು

ಏನೂ ಹೇಳದೆಯೇ
ನನಗೆಲ್ಲ ಗೊತ್ತಾಗಬೇಕು
ನಿನ್ನ ಎದೆಯಬಡಿತ
ನನ್ನ ಲೆಕ್ಕಕ್ಕೆ ಸಿಗಬೇಕು

ಪ್ರವೇಶ...

ನಿನ್ನ ಮುಟ್ಟಿದೆ ನಾನು
ತಣ್ಣಗೆ ಕೊರೆಯುತ್ತಿದ್ದವು ನಿನ್ನ ಕೈಗಳು
ಈಗ ಅರಳಿದ ಹೂವು
ಕಳಚಿ ಕೈಗೆ ಬಂದಂತೆ

ನಾನು ಹಬೆಯಾಡುತ್ತಿದ್ದೆ
ಶಾಖಕ್ಕೆ ನಿನ್ನ ಮುಂಗೈ ಸುಟ್ಟಿತಾ?
ಧಾವಂತ ನನಗೆ

ಉಗುರು, ಗೆಣ್ಣುಗಳನ್ನೆಲ್ಲ ತೀಡಿದೆ
ಹುಡುಕಿದೆ ನನ್ನ ಕನಸಿನ ಚಿತ್ರಗಳನ್ನು
ನಿನ್ನ ಚರ್ಮದಲ್ಲಿ ಮೆತ್ತಗೆ ಉಸಿರಾಟ
ತೆಳ್ಳಗೆ ಬೆವರು

ಕೊರಳ ಮೇಲೆ ತುಟಿಯನೊತ್ತಿದೆ
ಕೊಳಲಾಯಿತು ಮನಸು
ಎಂಥದ್ದೋ ನಾದ ಪ್ರವಹಿಸುತ್ತದೆ
ಧಮನಿ ಧಮನಿಗಳಲ್ಲಿ

ಧ್ಯಾನ, ಧ್ಯಾನ, ಧ್ಯಾನ
ನನ್ನ ಚಿತ್ತ ಭಿತ್ತಿಗಳಲ್ಲಿ ನಿನ್ನ ಧ್ಯಾನ
ಧ್ಯಾನಕ್ಕೆ ಕುಳಿತಿದ್ದು ನಾನಲ್ಲದ ನಾನು
ನನ್ನ ಕಳಕೊಂಡ ನಾನು
ನೀನಾಗಿ ಹೋದ ನಾನು

ಎದೆಗೊತ್ತಿಕೊಂಡೆ
ನಿನ್ನ ನೆತ್ತಿಯ ಮೇಲೆ ನನ್ನ ಸುಡುಸುಡು ಉಸಿರು
ಕಟ್ಟಿದ್ದ ಉಸಿರು ಬಿಟ್ಟು ಬಿಡುಗಡೆ
ಉಸಿರು ಹಿಡಕೊಂಡಷ್ಟು ಹೊತ್ತು ಸಾವು
ಬಿಟ್ಟರೆ ಬದುಕು; ನಾನು ಬದುಕಿಕೊಂಡೆ

ಮೊಣಕಾಲೂರಿ ಮಡಿಲಲ್ಲಿ ಮುಖವೊಡ್ಡಿದೆ
ಮಿಂದೆ; ನಿನ್ನುಡಿಯ
ಘಮ್ಮೆನುವ ಮೈಗಂಧಲ್ಲಿ
ತೋಯ್ದು ಹೋದೆ
ಗಂಧಕ್ಕೂ ಜೀವಕ್ಕೂ ಬಿಡಿಸಲಾಗದ ನಂಟು

ನಿನಗೆ ಸಣ್ಣ ನಿದ್ದೆ
ನನ್ನ ಕಣ್ಣ ಪಹರೆಯಲ್ಲಿ
ನಿನ್ನ ದೇಹ ಬಾಗಿ ಒರಗಿದಾಗ
ನೀನಿರಲಿಲ್ಲ, ನಾನೇ ಎಲ್ಲವಾಗಿದ್ದೆ

ಅರೆತೆರೆದ ನಿನ್ನ ಕಣ್ಣರೆಪ್ಪೆಗಳಿಂದ
ನನ್ನ ಕಾವ್ಯ ಜಿನುಗುತ್ತಿದೆ
ನಾನು ಹೀರಿದೆ
ಒಳಗೆ ಇಳಿದಂತೆ ನಾನೇ ಕಾವ್ಯವಾದೆ

ಪ್ರೀತಿ ಅಂದರೆ ಸಮರ್ಪಣೆ
ಪ್ರೀತಿ ಅಂದರೆ ಚಮತ್ಕಾರ
ಪ್ರೀತಿ ಅಂದರೆ ನಿಜಾಯಿತಿ
ಹೀಗೇ ಏನೇನೇ ಕೇಳಿದ್ದೇನೆ
ನನಗನ್ನಿಸಿತು;
ಪ್ರೀತಿ ಅಂದರೆ ಆಗಾಗ
ವಿನಾಕಾರಣ ತುಂಬಿಕೊಳ್ಳುವ ನಿನ್ನ ಕಂಗಳು
ಕಣ್ಣುಗಳೆಡೆಯಲ್ಲಿ ಹುಟ್ಟುವ ಕಾಮನಬಿಲ್ಲು

ನೀನು ಭೂಮಿ
ನನ್ನ ಹೊರುವಾಸೆ ನಿನಗೆ
ನಿನ್ನ ತೋಳೊಳಗೆ ಸೇರುವ ಮೊದಲು
ಎದೆಯ ನೋವು ಕಿತ್ತೆಸೆಯಬೇಕು

ಸುಖ ತುಂಬಾ ಹಗುರ
ರೆಕ್ಕೆ ಬಿಚ್ಚಿ ಪಕ್ಷಿ ಹಾರಿದಂತೆ
ನೋವು ಭಾರ ಭಾರ
ಎದೆ ಜೋತುಬೀಳುತ್ತದೆ

ಹಕ್ಕಿಯ ಪುಕ್ಕದಷ್ಟೇ ಹಗುರಾಗಿ
ನಿನ್ನ ಮೇಲೆ ಬಂದು ಕೂರಬೇಕು
ಕೂತು, ಮಲಗಿ, ಕೊಸರಿ, ಬೆವರಿ
ಕಡೆಗೆ ನಿಶ್ಚಲನಾಗಬೇಕು

ಬಟ್ಟೆ ಬಚ್ಚಿ ಕಳಚಿದಷ್ಟೇ ಸರಾಗವಾಗಿ
ಮೈಯ ಅಂಗಾಗಗಳನ್ನೆಲ್ಲ ಕಳಚಿಡಬೇಕು
ಎಲ್ಲ ಕಳಚಿ, ಏನೂ ಇಲ್ಲದಂತಾಗಿ
ನಿನ್ನೊಳಗೆ ನಿರ್ವಾಣವಾಗಿ ಪ್ರವೇಶಿಸಬೇಕು.

ನಿನ್ನ ಸ್ಮೃತಿಯನ್ನು ಮುಟ್ಟಿ ಮುಟ್ಟಿ ಬರಬೇಕು
ಹಣೆಯೊಳಗೆ ಇಳಿದು ಗಂಟಲಿಗೆ ಪ್ರವೇಶಿಸಬೇಕು
ಹೊರಗೆ ಬರಲಾರೆ, ಅಲ್ಲೇ ಇದ್ದು
ಲೋಕದ ಸದ್ದುಗಳನ್ನೆಲ್ಲ ಕೇಳಿಸಿಕೊಳ್ಳಬೇಕು

ಹೌದು ಕಣೇ,
ನಾನು ದೇಹದಿಂದ ಮುಕ್ತನಾಗಬೇಕು
ಆಮೇಲೆ ನಿನ್ನ ಪವಿತ್ರ ಆತ್ಮದಲ್ಲಿ ಕರಗಬೇಕು

ಇಕೋ ಬಂದೆ
ನಿನ್ನ ಹಣೆಯಲ್ಲಿ ಹೊಳೆವ ಸಿಂಧೂರದ
ನಟ್ಟ ನಡುವಿನಲ್ಲೇ ಒಂದು ಚುಕ್ಕಿಯಾಗಿ
ಇಳಿಯುತ್ತೇನೆ

ಆಳ
ಆಳ
ಮತ್ತೂ ಆಳ
ಮತ್ತೆಂದೂ ಹೊರಗೆ ಬಾರದಷ್ಟು
ಆಳ

ನೋವು...

ಹಾಗೆ ಯಾರ ದೇಹದ ನೋವನ್ನೂ ಯಾರೂ
ಹೀರಿ ನೀಗಿಸುವಂತಿಲ್ಲ
ಹೀರುವಂತಿದ್ದರೆ ನಿನ್ನ ನೋವನ್ನು
ನಾನೇ ತುಟಿಯೊತ್ತಿ ಗಟಗಟನೆ ಕುಡಿದುಬಿಡುತ್ತಿದ್ದೆ

ಮನಸ್ಸು ನೋಯುತ್ತದೆ,
ದುಃಖ ಕಟ್ಟಿ ನಿಲ್ಲುತ್ತದೆ ಎದೆಯಲ್ಲಿ, ಗಂಟಲಲ್ಲಿ, ಕಿಬ್ಬೊಟ್ಟೆಯಲ್ಲಿ
ಒಂದು ಸಾಂಗತ್ಯದ ಮಾತಿಗೆ ದುಃಖ ಕರಗಬಹುದು
ದೇಹದ ನೋವು ಹಾಗಲ್ಲ, ಅದು ಸುಲಭಕ್ಕೆ ಕರಗುವುದಿಲ್ಲ

ದಿನೇದಿನೇ ಕರಗುವ ಕಸದಂತೆ ದೇಹ
ನಮ್ಮದೇ ಅಂಗಾಂಗಗಳು ನಮಗೇ ಪರಕೀಯ
ಆಪರೇಷನ್ ಥಿಯೇಟರಿನಲ್ಲಿ ಮಸುಕುಧಾರಿ ವೈದ್ಯರು
ಒಂದೊಂದೇ ಅವಯವಗಳನ್ನು
ನಿರ್ದಯವಾಗಿ ಕತ್ತರಿಸಿ ಎಸೆಯುತ್ತಾರೆ
ನಿತ್ಯ ಒಂದು ವೈಕಲ್ಯ

ಮುಟ್ಟಿ, ತಬ್ಬಿ, ಮುತ್ತಿಟ್ಟು
ನೋವ ಮರೆಸುವ ಜಾದೂ ನನಗೆ ಗೊತ್ತಿಲ್ಲ
ಹಾಗೆ ಉಪಚರಿಸುವೆನೆಂಬ ನನ್ನ ಅಹಂಕಾರವೇ ಬೊಗಳೆ
ನೀನು ನೋಯುತ್ತೀಯ, ನಾನು ಬೇಯುತ್ತೇನೆ
ಇದಿಷ್ಟೇ ಸತ್ಯ

ಆದರೂ ನಿನ್ನ ಗಾಯಕ್ಕೆ ನನ್ನ ಹಲ್ಲನ್ನೂರುತ್ತೇನೆ
ಬಾಯಿ ತುಂಬಾ ರಕ್ತ ರಕ್ತ ರಕ್ತ...
ಮುಕ್ಕುಳಿಸಿ ಎಸೆದು
ಮತ್ತೆ ಮತ್ತೆ ತುಟಿಯೊತ್ತಿ ನಿಲ್ಲುತ್ತೇನೆ

ನನ್ನವು ಅಸಹಾಯಕ ಕೈಗಳು
ಸಂಜೀವಿನಿ ಪರ್ವತ ಹೊತ್ತು ತರಲಾರೆ
ಗಂಟಲು ಒಣಗಿಹೋಗಿದೆ
ಬಿಕ್ಕುವ ನಿನ್ನ ಕಣ್ಣಹನಿಗಳ ಕುಡಿದೇ
ಉಪಚಾರಕ್ಕೆ ನಿಲ್ಲುವೆ,
ನಿನ್ನ ನೋವ ಮರೆಸುವ ಶಕ್ತಿಯನ್ನು
ನೀನೇ ನನಗೆ ಕೊಟ್ಟುಬಿಡು...

Tuesday, May 1, 2012

ಎಲ್ಲಿದೆ ಅಂಬೇಡ್ಕರ್ ಎಳೆದು ತಂದ ಹೋರಾಟದ ರಥ?


ಇದು ನನಗೆ ತುಂಬ ಮಹತ್ವದ ಕಾರ್ಯಕ್ರಮ. ಭಾರತೀಯ ಸೇನೆಯ ಸಂಸ್ಥೆಯಾಗಿರುವ ೫೧೫ ಭೂಸೇನಾ ಕಾರ್ಯಾಗಾರ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೨೧ನೇ ಜನ್ಮದಿನಾಚರಣೆಯನ್ನು ಆಯೋಜಿಸಿ ನನ್ನನ್ನು ಮುಖ್ಯಭಾಷಣಕ್ಕಾಗಿ ಕರೆದಿರುವುದು ನನಗೆ ದೊರೆತ ಗೌರವ ಎಂದೇ ಭಾವಿಸುತ್ತೇನೆ. ಸೇನೆಯಲ್ಲಿ ದುಡಿಯುವವರು ಬಹುತೇಕ ದಮನಿತ ಸಮುದಾಯಗಳಿಗೆ ಸೇರಿದವರೇ ಆಗಿರುತ್ತಾರೆ. ದಮನಿತರಿಗೆ ಧ್ವನಿ ಕೊಟ್ಟ ಬಾಬಾಸಾಹೇಬರನ್ನು ನೆನೆಯುವ ಕಾರ್ಯಕ್ರಮ ಈ ಹಿನ್ನೆಲೆಯಲ್ಲಿ ಅತ್ಯಂತ ಔಚಿತ್ಯಪೂರ್ಣ ಎಂದು ನಾನು ಭಾವಿಸಿದ್ದೇನೆ. ಗಾಂಧೀಜಿಯವರಿಗೆ ಅಹಿಂಸೆಯನ್ನು ಪ್ರತಿಪಾದಿಸುವುದು ಸುಲಭವಾಗಿತ್ತು. ಯಾಕೆಂದರೆ ಗಾಂಧೀಜಿಯವರು ಯಾವ ಸಮುದಾಯದಿಂದ ಬಂದಿದ್ದರೋ ಆ ಸಮುದಾಯ ಸಾಮಾಜಿಕ ತರತಮದ ವ್ಯವಸ್ಥೆಯಿಂದ ಹಿಂಸೆಯನ್ನು ಅನುಭವಿಸಿರಲಿಲ್ಲ. ಹಿಂಸೆಗೆ ಹಿಂಸೆಯೇ ಉತ್ತರ ಅನ್ನುವ ಯುದ್ಧೋನ್ಮಾದಿ ಕಾಲಘಟ್ಟದಲ್ಲಿ ಗಾಂಧೀಜಿಯಂಥ ಜೀವಪರ ಹೋರಾಟಗಾರನಿಗೆ ಅಹಿಂಸೆ ಸಹಜ ಆಯ್ಕೆ ಆಗಿತ್ತು. ಆದರೆ ಇದನ್ನೇ ಅಂಬೇಡ್ಕರ್ ಅವರಿಗೂ ಹೇಳುವಂತಿಲ್ಲ. ಶತಶತಮಾನಗಳಿಂದ ನಡೆದುಬಂದ ಶೋಷಣೆ, ದಬ್ಬಾಳಿಕೆ, ದೈಹಿಕ-ಮಾನಸಿಕ ಹಿಂಸೆಗಳಿಗೆ ಹಿಂಸಾತ್ಮಕ ಮಾರ್ಗದಲ್ಲೇ ಪ್ರತೀಕಾರ ತೆಗೆದುಕೊಳ್ಳೋಣ ಎಂದು ಅಂಬೇಡ್ಕರ್ ಸುಲಭವಾಗಿ ಹೇಳಬಹುದಿತ್ತು. ಆದರೆ ಎಂದೂ ಅವರು ಹಾಗೆ ಹೇಳಲಿಲ್ಲ. ಹೀಗಾಗಿ ನನಗೆ ಗಾಂಧಿಗಿಂತಲೂ ಅಂಬೇಡ್ಕರ್ ನಿಜವಾದ ಅರ್ಥದ ಅಹಿಂಸಾವಾದಿಯಾಗಿ ಕಾಣುತ್ತಾರೆ. ಬುಡಕಟ್ಟು ಜನರ ಹಕ್ಕುಗಳಿಗಾಗಿ ದೇಶದ ಹಲವಾರು ರಾಜ್ಯಗಳಲ್ಲಿ ಹೊತ್ತಿರುವ ನಕ್ಸಲ್ ಚಟುವಟಿಕೆಗಳ ಹಿನ್ನೆಲೆಯಲ್ಲಿ ಇದನ್ನು ನೋಡಬೇಕು. ಅಂಬೇಡ್ಕರ್ ಎಂದೂ ಹಿಂಸೆಗೆ ಪ್ರಚೋದಿಸಲಿಲ್ಲ. ಅಂಬೇಡ್ಕರ್ ಅವರ ಕಾಲಘಟ್ಟದಲ್ಲೇ ಎರಡು ಮಾದರಿಯ ಹೋರಾಟಗಳಿದ್ದವು. ಭಾರತೀಯ ಸೈನ್ಯದಲ್ಲಿದ್ದ ಭಾರತೀಯರನ್ನೇ ಒಗ್ಗೂಡಿಸಿ ಪ್ರತ್ಯೇಕ ಸೈನ್ಯ ಕಟ್ಟುವ ಪ್ರಯತ್ನದಲ್ಲಿ ಸುಭಾಷ್ ಚಂದ್ರ ಬೋಸ್ ಇದ್ದರು. (ಭಾರತಕ್ಕೆ ಸ್ವಾತಂತ್ರ್ಯ ದೊರಕಲು ಮುಖ್ಯ ಕಾರಣವಾಗಿದ್ದು ಇದೇ ಎಂದು ಅಂಬೇಡ್ಕರ್ ಅವರೇ ಹೇಳುತ್ತಾರೆ.) ಮತ್ತೊಂದು ಜನರ ಭಾವನೆಗಳನ್ನು ಸುಲಭವಾಗಿ ಕೆರಳಿಸಬಲ್ಲದಾಗಿದ್ದ ಉಪವಾಸ ಸತ್ಯಾಗ್ರಹದಂಥ ಗಾಂಧಿ ಮಾದರಿಯ ಹೋರಾಟ. ಈ ಎರಡನ್ನೂ ಬಿಟ್ಟು ಅಂಬೇಡ್ಕರ್ ಆಯ್ದುಕೊಂಡಿದ್ದು ಸಾಮಾಜಿಕ ಅನಿಷ್ಠ, ಅಸಮಾನತೆಗಳಿಗೆ ಪ್ರತಿರೋಧಿಸುವ ಬೌದ್ಧಿಕ ಸಂಘರ್ಷದ ಮಾರ್ಗ, ಜನಜಾಗೃತಿಯ ಮಾರ್ಗ. ನಾವು ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳುವುದರಲ್ಲೇ ಎಡವಿದ್ದೇವೆ. ಭಾರತ ಸಂವಿಧಾನ ಅಂಬೇಡ್ಕರ್ ಅವರ ಪೂರ್ಣ ಕನಸೇನೂ ಅಲ್ಲ. ಸಂವಿಧಾನದಲ್ಲಿ ಸೇರಿಸಲು ಸಾಧ್ಯವಾಗದ ಎಷ್ಟೋ ಕನಸುಗಳನ್ನು ಅಂಬೇಡ್ಕರ್ ಹೊಂದಿದ್ದರು. ಎಲ್ಲ ಕೈಗಾರಿಕೆಗಳು ರಾಷ್ಟ್ರೀಕರಣಗೊಳ್ಳಬೇಕು ಎಂದು ಬಾಬಾಸಾಹೇಬರು ಬಯಸಿದ್ದರು. ಕೃಷಿ ಕ್ಷೇತ್ರವೂ ಸಹ ಪೂರ್ಣ ರಾಷ್ಟ್ರೀಕರಣಗೊಳ್ಳಬೇಕು ಎಂದು ಅವರು ಬಯಸಿದ್ದರು. ಸಾವಿರಾರು ಎಕರೆ ಜಮೀನು ಹೊಂದಿರುವ ಭೂಮಾಲೀಕರಿಂದ ಭೂಮಿಯನ್ನು ಹಿಂದಕ್ಕೆ ಪಡೆದು ಸರ್ಕಾರವೇ ಅದನ್ನು ವಹಿಸಿಕೊಳ್ಳಬೇಕು. ಸರ್ಕಾರವೇ ಅದನ್ನು ರೈತರಿಗೆ ಉಳುಮೆ ಮಾಡಲು ಗೇಣಿಗೆ ನೀಡಬೇಕು ಎಂಬುದು ಬಾಬಾಸಾಹೇಬರ ಕನಸಾಗಿತ್ತು. ಕೈಗಾರಿಕೆ ಮತ್ತು ಕೃಷಿ ಎರಡೂ ಪೂರ್ಣ ಪ್ರಮಾಣದಲ್ಲಿ ರಾಷ್ಟ್ರೀಕರಣಗೊಂಡರೆ ಬಡವ ಬಲ್ಲಿದನೆಂಬ ಭೇದ ಎಲ್ಲಿ ಉಳಿಯಲು ಸಾಧ್ಯವಿತ್ತು? ಹಾಗೆ ನೋಡಿದರೆ ಹೆಚ್ಚು ಶ್ರಮಿಕರೇ ಹೆಚ್ಚು ಶ್ರೀಮಂತರಾಗುತ್ತಿದ್ದರು. ದುಡಿಯುವವನೇ ದೊಡ್ಡವನಾಗುತ್ತಿದ್ದ. ಇದು ಸಹಜನ್ಯಾಯವಾಗುತ್ತಿತ್ತು. ಅಂಬೇಡ್ಕರ್ ಅವರ ಈ ಆಶಯಕ್ಕೆ ಸಂವಿಧಾನ ರಚನೆಯ ಸಂದರ್ಭದಲ್ಲಿ ವಿರೋಧಗಳು ಬಂದು ಅವು ಜಾರಿಯಾಗಲಿಲ್ಲ. ಆಗಿದ್ದರೆ ದುಡಿಸಿಕೊಳ್ಳುವವನು ದೊಡ್ಡವನಾಗುವ, ದುಡಿಯುವವನು ಚಿಕ್ಕವನಾಗುವ ವ್ಯವಸ್ಥೆ ತೊಲಗುತ್ತಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದಾಗ ಅವರು ತಮ್ಮ ಆಪ್ತ ಸಹಾಯಕ ನಾನಕ್ ಚಂದ್ ರತ್ತೂ ಬಳಿ ಹೀಗೆ ಹೇಳಿದ್ದರು. “ ನನ್ನ ಮನಸ್ಸಿನಲ್ಲಿರುವುದು, ನನಗೆ ನೋವುಂಟು ಮಾಡುತ್ತಿರುವುದು ಯಾವುದೆಂದು ಬಹುಶಃ ನಿಮಗೆ ಅರ್ಥವಾಗುತ್ತಿಲ್ಲ. ನನ್ನ ಮೊದಲ ಚಿಂತೆ ನನ್ನ ಬದುಕಿನ ಅತಿ ದೊಡ್ಡ ಧ್ಯೇಯವನ್ನು ಈಡೇರಿಸಲು ಸಾಧ್ಯವಾಗಲಿಲ್ಲ ಎನ್ನುವುದು. ನನ್ನ ಜನ ಆಳುವ ವರ್ಗವಾಗುವುದನ್ನು, ಇತರ ಸಮುದಾಯಗಳ ಜತೆ ರಾಜಕೀಯ ಅಧಿಕಾರ ಹಂಚಿಕೊಳ್ಳುವುದನ್ನು ನನ್ನ ಜೀವಮಾನದಲ್ಲೇ ನೋಡಬಯಸಿದ್ದೆ. ಅದಾಗಲಿಲ್ಲ. ನಾನೀಗ ಬಲಹೀನನಾಗಿದ್ದೇನೆ.... ಬಾಬಾ ಸಾಹೇಬರ ನೋವಿನ ನುಡಿಗಳು ಇವು. ದಲಿತರು ಆಳುವ ವರ್ಗವಾಗಬೇಕು ಎಂದು ಅವರು ಬಯಸಿದ್ದರು. ಅವರ ಕನಸಿಗೆ ಅಡ್ಡಗಾಲಾಗಿದ್ದು ಗಾಂಧೀಜಿಯವರೇ. ಪೂನಾ ಒಪ್ಪಂದದಲ್ಲಿ ಗಾಂಧೀಜಿಯವರ ಉಪವಾಸಕ್ಕೆ ಅಂಬೇಡ್ಕರ್ ಮಣಿಯಬೇಕಾಯಿತು. ಒಂದುವೇಳೆ ಅಂಬೇಡ್ಕರ್ ಆಶಯದಂತೆ ಶೋಷಿತರಿಗೆ ಎರಡು ಮತಗಳ ಹಕ್ಕನ್ನು ನೀಡಿದ್ದರೆ ಬಹುಶಃ ದಲಿತ ರಾಜಕಾರಣ ಇಂದಿನ ದುಸ್ಥಿತಿಯನ್ನು ತಲುಪುತ್ತಿರಲಿಲ್ಲ. ಎಲ್ಲಿಯವರೆಗೆ ದಲಿತ ಜನಪ್ರತಿನಿಧಿಗಳು ಮೇಲ್ಜಾತಿ ರಾಜಕಾರಣಿಗಳ ಅಂಕೆಯಲ್ಲಿ ಇರುತ್ತಾರೋ ಅಲ್ಲಿಯವರೆಗೆ ದಲಿತರ ಉದ್ಧಾರ ಸಾಧ್ಯವಿಲ್ಲ ಎಂಬುದನ್ನು ಅಂದೇ ಬಾಬಾಸಾಹೇಬರು ಮನಗಂಡಿದ್ದರು. ಇವತ್ತು ಎಂಥ ಪರಿಸ್ಥಿತಿ ಇದೆ ನೋಡಿ. ಹೋರಾಟದ ರಥವನ್ನು ಇಲ್ಲಿಯತನಕ ಎಳೆದುತಂದು ನಿಲ್ಲಿಸಿರುವೆ, ಎಲ್ಲ ಅಡೆತಡೆಗಳನ್ನೆದುರಿಸಿ ಅದು ಮುಂದೆ ಸಾಗಬೇಕು. ನನ್ನ ಉತ್ತರಾಧಿಕಾರಿಗಳು ಈ ರಥವನ್ನು ಮುಂದೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲದಿದ್ದರೂ ಚಿಂತೆಯಿಲ್ಲ. ಅದನ್ನು ಇದ್ದಲ್ಲಿಯೇ ನಿಲ್ಲಿಸಬೇಕೇ ಹೊರತು ಹಿಂದೆಳೆಯಬಾರದು. ಇದು ನನ್ನ ಕೊನೆಯ ಪ್ರಾರ್ಥನೆ ಎಂದಿದ್ದರು ಅಂಬೇಡ್ಕರ್. ಆದರೆ ರಥವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ, ಹಿಂದಕ್ಕೆಳೆಯುವ ಪ್ರಮೇಯವೇ ಇಲ್ಲದಂತೆ ಸಾಮಾಜಿಕ ನ್ಯಾಯದ ರಥವನ್ನೇ ಮಾಯ ಮಾಡಲಾಗಿದೆ. ಅದು ಕಾಣೆಯಾಗುವಂತೆ ನೋಡಿಕೊಳ್ಳಲಾಗಿದೆ. ಕೋಲಾರ ಜಿಲ್ಲೆ ಚಿಂತಾಮಣಿಯ ಕಂಬಾಲಪಲ್ಲಿಂiಲ್ಲಿ ದಲಿತರ ಸಾಮೂಹಿಕ ನರಮೇಧ ನಡೆಯಿತು. ಏಳು ಮಂದಿ ದಲಿತರು ಬಲಿಯಾದರು. ೨೦೦೦ನೇ ಇಸವಿ ಮಾರ್ಚ್ ೧೧ರಂದು ನಡೆದ ಘಟನೆ ಇದು. ಘಟನೆಯ ವಿಚಾರಣೆ ನಡೆಸಿದ ನ್ಯಾಯಾಧೀಶರು ಬರೆದ ತೀರ್ಪು ಹೀಗಿತ್ತು: ಘಟನೆಗೆ ಸಂಬಂಧಿಸಿದ ಪ್ರಾಥಮಿಕ ಮತ್ತು ಸಾಂದರ್ಭಿಕ ಸಾಕ್ಷ್ಯಗಳ ವಸ್ತುಸ್ಥಿತಿಯನ್ನು ಗಮನಿಸಿದರೆ ಹಾಗೂ ಸರ್ಕಾರಿ ಅಭಿಯೋಜಕರು ಪ್ರಕರಣದಲ್ಲಿ ಹೆಸರಿಸಿರುವ ಆರೋಪಿಗಳೇ ಹತ್ಯೆ ಮಾಡಿದ್ದಾರೆ ಎಂಬುದನ್ನು ಸಾಬೀತುಪಡಿಸಲು ವಿಫಲವಾಗಿರುವುದರಿಂದ ಸಂಖ್ಯೆ ಒಂದರಿಂದ ಮೂವತ್ತೆರಡರವರೆಗಿನ ಎಲ್ಲ ಆರೋಪಿಗಳನ್ನು ನಿರ್ದೋಷಿಗಳೆಂದು ನಿರ್ಧರಿಸಿ ನ್ಯಾಯಾಲಯವು ಖುಲಾಸೆಗೊಳಿಸಿದೆ. ನನಗೆ ನ್ಯಾಯಾಲಯದ ತೀರ್ಪಿಗಿಂತಲೂ ಅಚ್ಚರಿಯೆನಿಸಿದ್ದು ಇದಕ್ಕೆ ನಾಗರಿಕ ಸಮಾಜದ ತಣ್ಣನೆಯ ಪ್ರತಿಕ್ರಿಯೆ. ಅದರಲ್ಲೂ ವಿಶೇಷವಾಗಿ ದಲಿತ ಚಳವಳಿಗಳು ಮತ್ತು ದಲಿತ ಜನಪ್ರತಿನಿಧಿಗಳು ಇದನ್ನು ಸ್ವೀಕರಿಸಿದ ರೀತಿ. ದಲಿತ ಜನಪ್ರತಿನಿಧಿಗಳದ್ದೊಂದು ಸಮಸ್ಯೆ. ಅವರಿಗೆ ತಮ್ಮ ಯಾವುದೋ ಪಕ್ಷದಿಂದ ಕಿತ್ತುಹಾಕಿದಾಗ, ಇನ್ನೇನೋ ಅನ್ಯಾಯವಾದಾಗ ಮಾತ್ರ ಅವರಿಗೆ ದಲಿತರೆಂಬುದು ಸ್ಮರಣೆಗೆ ಬರುತ್ತದೆ. ವಿಧಾನಸಭೆಯಲ್ಲೇ ಬೇಕಿದ್ದರೂ ಬಟ್ಟೆ ಕಳಚಿಕೊಂಡು ನರ್ತಿಸುತ್ತಾರೆ. ಆದರೆ ಕಂಬಾಲಪಲ್ಲಿ ತೀರ್ಪಿನ ಕುರಿತು ಅವರು ಎಂದಿಗೂ ಮಾತನಾಡಲಾರರು. ಇದು ಕಂಬಾಲಪಲ್ಲಿಯ ವಿಷಯ ಮಾತ್ರವಲ್ಲ, ಬಿಹಾರದಲ್ಲೂ ಮೊನ್ನೆಮೊನ್ನೆ ಇಂಥದ್ದೇ ತೀರ್ಪು ಬಂತು. ಇಂಥ ತೀರ್ಪುಗಳು ಬರುತ್ತಲೇ ಇರುತ್ತವೆ. ಇಡೀ ವ್ಯವಸ್ಥೆಯೇ ಇಂಥ ತೀರ್ಪಿನ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುತ್ತದೆ. ಮೊನ್ನೆಮೊನ್ನೆ ದಲಿತನೊಬ್ಬನ ನರಬಲಿಯೂ ಈ ರಾಜ್ಯದಲ್ಲಿ ನಡೆದುಹೋಯಿತು? ಯಾರಾದರೂ ದಲಿತ ಜನಪ್ರತಿನಿಧಿಗಳು ಮಾತನಾಡಿದ್ದನ್ನು ಕೇಳಿದಿರಾ? ಎಲ್ಲಿದೆ ಅಂಬೇಡ್ಕರ್ ಎಳೆದು ತಂದ ಹೋರಾಟದ ರಥ? ಎಲ್ಲಿದ್ದಾರೆ ಅಂಬೇಡ್ಕರ್ ಉತ್ತರಾಧಿಕಾರಿಗಳು? ರಾಷ್ಟ್ರೀಕರಣಗೊಳಿಸುವುದು ಬಡವರಿಗೆ ನ್ಯಾಯ ಕೊಡಿಸುವ ಸುಲಭದ ದಾರಿ ಎನ್ನುವುದು ಅಂಬೇಡ್ಕರ್ ಅವರಿಗೆ ಗೊತ್ತಿತ್ತು. ಆದರೆ ಇವತ್ತು ಉದಾರೀಕರಣದ ಫಲವಾಗಿ ಸರ್ಕಾರಿ ಸಂಸ್ಥೆಗಳೆಲ್ಲವೂ ಖಾಸಗಿಯವರ ಪಾಲಾಗುತ್ತಿದೆ. ಕುಡಿಯುವ ನೀರನ್ನು ಕೂಡ ಖಾಸಗೀಕರಣಗೊಳಿಸಲಾಗಿದೆ. ಎಸ್‌ಇಜಡ್ ಗಳ ಮೂಲಕ ಪರ್ಯಾಯ ಸರ್ಕಾರಗಳು ಅಸ್ತಿತ್ವಕ್ಕೆ ಬರುತ್ತಿವೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಬಂಡವಾಳ ಹಿಂದಕ್ಕೆ ಪಡೆಯಲೆಂದೇ ಕೇಂದ್ರ ಸರ್ಕಾರ ಒಂದು ಪ್ರತ್ಯೇಕ ಇಲಾಖೆ, ಸಚಿವರನ್ನು ನೇಮಿಸಿತ್ತು. ಎಲ್ಲವೂ ಖಾಸಗೀಕರಣವಾದ ಮೇಲೆ ಮೀಸಲಾತಿಗೆ ಮಹತ್ವವೆಲ್ಲಿ ಉಳಿಯಿತು? ಮೀಸಲಾತಿ ಇದ್ದರೆಷ್ಟು ಬಿಟ್ಟರೆಷ್ಟು? ತಂಗರಾಜ್ ಅವರು ಮಾತನಾಡುತ್ತ ಒಂದು ಮಾತನ್ನು ಹೇಳಿದ್ದರು. ಸುಶಿಕ್ಷಿತ ದಲಿತರು ಸರ್ಕಾರ ಮತ್ತು ನಿರ್ಗತಿಕ ದಲಿತರ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕು ಎಂದು ಬಾಬಾಸಾಹೇಬರು ಹೇಳಿದ್ದರು. ಆದರೆ ಈ ಕೆಲಸ ಆಗ್ತಾ ಇಲ್ಲ ಎಂದು. ಹೌದಲ್ಲವೇ? ವಿದ್ಯಾವಂತ ದಲಿತರು, ಮೀಸಲಾತಿಯ ಲಾಭ ಪಡೆದ ದಲಿತರು ಏನು ಮಾಡುತ್ತಿದ್ದಾರೆ? ಈ ಸೇತುವೆಯ ಕೆಲಸ ಮಾಡಿದ್ದರೆ ದಲಿತರಲ್ಲಿ ಇನ್ನೂ ನಿರ್ಗತಿಕರು ಯಾಕೆ ಉಳಿಯುತ್ತಿದ್ದರು? ಯಾಕೆ ಮೇಲಿಂದ ಮೇಲೆ ದೌರ್ಜನ್ಯ ಪ್ರಕರಣಗಳು ಇನ್ನೂ ನಡೆಯುತ್ತಿದ್ದವು? ಸುಶಿಕ್ಷಿತ ದಲಿತರು ಸಾಮಾಜಿಕ ಮನ್ನಣೆಗಾಗಿ ಬ್ರಾಹ್ಮಣ್ಯವನ್ನು ಆವಾಹಿಸಿಕೊಳ್ಳುತ್ತಿದ್ದಾರೆ. ದಲಿತರ ಮನೆಗಳಲ್ಲಿ ಇವತ್ತು ಸತ್ಯನಾರಾಯಣ ಪೂಜೆಗಳು ನಡೆಯುತ್ತಿವೆ. ಈ ಮೀಸಲಾತಿ ಫಲಾನುಭವಿ ದಲಿತರು ಜ್ಯೋತಿಷಿಗಳು-ಪುರೋಹಿತರ ಬೆನ್ನು ಬಿದ್ದಿದ್ದಾರೆ. ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯಲಾರೆ ಎಂದು ಅಂಬೇಡ್ಕರ್ ಬೌದ್ಧ ಧಮ್ಮವನ್ನು ಸ್ವೀಕರಿಸಿದರು. ಆದರೆ ಅಂಬೇಡ್ಕರ್ ಚಿಂತನೆಗಳ ಫಲಾನುಭವಿಗಳು ಶ್ರೇಣೀಕೃತ ಸಮಾಜದಲ್ಲಿ ಬ್ರಾಹ್ಮಣೀಕರಣಗೊಳ್ಳುತ್ತಿದ್ದಾರೆ. ಕೆಲವರು ತಮ್ಮ ಜಾತಿಗಳನ್ನು ಹೇಳಿಕೊಳ್ಳುವುದನ್ನೂ ಬಿಟ್ಟಿದ್ದಾರೆ. ದೇಶದಲ್ಲಿ ಮಲಹೊರುವ ಪದ್ಧತಿ ನಿಷೇಧ ಮಾಡಿ ಆದೇಶ ಹೊರಡಿಸಿದ್ದು ಮೊಟ್ಟಮೊದಲ ಬಾರಿಗೆ ಕರ್ನಾಟಕ ಸರ್ಕಾರ. ನಂತರ ಕೇಂದ್ರ ಸರ್ಕಾರವೂ ಅದನ್ನು ಕಾಯ್ದೆಯಾಗಿ ಜಾರಿಗೆ ತಂದಿದ್ದು. ಆದರೆ ಇವತ್ತಿಗೂ ಕರ್ನಾಟಕದಲ್ಲಿ ಮಲ ಹೊರುವ ಪದ್ಧತಿ ನಡೆದೇ ಇದೆ. ಮಲದ ಗುಂಡಿಗೆ ಇಳಿದು, ವಿಷಯುಕ್ತ ಗಾಳಿ ಸೇವಿಸಿ ಸಾಕಷ್ಟು ಮಂದಿ ಸತ್ತು ಹೋಗಿದ್ದಾರೆ, ಸತ್ತು ಹೋಗ್ತಾನೇ ಇದ್ದಾರೆ. ಮುಂದೆಯೂ ಸಾಯಲಿದ್ದಾರೆ. ಇವರಿಗಾಗಿ ನಮ್ಮ ದಲಿತ ಜನಪ್ರತಿನಿಧಿಗಳು ಏನು ಮಾಡಿದ್ದಾರೆ? ಯಾಕೆ ಕಾಯ್ದೆ ಅನುಷ್ಠಾನಕ್ಕೆ ತರಲು ಇವರು ಒತ್ತಡ ಹೇರೋದಿಲ್ಲ? ದಲಿತ ಜನಪ್ರತಿನಿಧಿಗಳ ಮಾತು ಹಾಗಿರಲಿ. ನಾಗರಿಕ ಸಮಾಜದಲ್ಲಿ ಬದುಕುತ್ತಿರುವ ಯಾವನಿಗೇ ಆದರೂ ಮಲದ ಗುಂಡಿ ಶುದ್ಧ ಮಾಡಲು ಹೋಗಿ ಜನರು ಸಾಯುತ್ತಿರುವುದನ್ನು ಕಂಡು ಒಂದಷ್ಟು ನಾಚಿಕೆಯೆನಿಸಬೇಕು. ಏನಾಗಿ ಹೋಗಿದೆ ನಮ್ಮ ಸಂವೇದನೆಗಳಿಗೆ? ಎಲ್ಲಿದೆ ಅಂಬೇಡ್ಕರ್ ಅವರು ಎಳೆದು ತಂದ ಹೋರಾಟದ ರಥ? ದಲಿತರಿಗೆ ಅಸ್ಪೃಶ್ಯತೆಯಿಂದ ಮುಕ್ತಿ ದೊರೆತರೆ ಸಾಲದು, ಸಾಮಾಜಿಕ ಸಮಾನತೆ ಬೇಕು. ಇತರ ಜನವರ್ಗದವರೊಂದಿಗೆ ಸಮಾನವಾಗಿ ಬದುಕುವ ವಾತಾವರಣ ನಿರ್ಮಾಣವಾಗಬೇಕು ಎಂದು ಬಾಬಾಸಾಹೇಬರು ಬಯಸಿದ್ದರು. ಇವತ್ತು ಅಸ್ಪೃಶ್ಯತೆಯೂ ಜೀವಂತವಾಗಿದೆ, ಸಾಮಾಜಿಕ ಸಮಾನತೆಯೂ ಇಲ್ಲದಂತಾಗಿದೆ. ಅಸ್ಪೃಶ್ಯತೆ ಎಂದರೆ ಕೇವಲ ಮುಟ್ಟಬಾರದು ಅನ್ನೋ ಮಾತಲ್ಲಿ ಇಲ್ಲ. ದಲಿತನೊಬ್ಬನೊಂದಿಗೆ ಶೇಕ್ ಹ್ಯಾಂಡ್ ಮಾಡಿದ ಮಾತ್ರಕ್ಕೆ, ಹೊಟೆಲಿನಲ್ಲಿ ಒಟ್ಟಿಗೆ ಕುಳಿತು ಊಟ ಮಾಡಿದ ಮಾತ್ರಕ್ಕೆ ಅಸ್ಪೃಶ್ಯತೆ ತೊಲಗಿತು ಎಂದರ್ಥವಲ್ಲ. ಕಣ್ಣಲ್ಲೇ ಇರಿಯುವ ಅಸ್ಪೃಶ್ಯತೆಯ ಭಾವವನ್ನು ಪ್ರದರ್ಶಿಸುವಷ್ಟು ಸವರ್ಣೀಯರು ಶಕ್ತರು. ಮಾನಸಿಕ ಅಸ್ಪೃಶ್ಯತೆ ಮೊದಲು ತೊಲಗಬೇಕು. ದಲಿತರ ಹಕ್ಕುಗಳಿಂದ ವಂಚಿಸುವಂಥ ಎಲ್ಲ ವಿಧಾನಗಳೂ ಅಸ್ಪೃಶ್ಯತೆಯೇ. ದಲಿತರಿಗೆ ಸಾಮಾಜಿಕ ಸ್ಥಾನಮಾನವನ್ನು ನೀಡಲೊಲ್ಲದ ಮನಸ್ಥಿತಿಯೂ ಅಸ್ಪೃಶ್ಯತೆಯ ರೂಪವೇ ಆಗಿರುತ್ತದೆ. ಅಂಬೇಡ್ಕರ್ ಕನಸಿನ ಭಾರತ ಇನ್ನೂ ನಿರ್ಮಾಣವಾಗಿಲ್ಲ. ಬುದ್ಧ, ಬಸವ, ಅಂಬೇಡ್ಕರ್ ಅವರು ಕೊಟ್ಟ ಬೆಳಕಲ್ಲಿ ನಾವಿನ್ನೂ ಸಾಗಬೇಕಾದ ಹಾದಿ ಇನ್ನೂ ದೂರವಿದೆ, ಒಟ್ಟಾಗಿ ಸಾಗೋಣ ಎಂದು ಕಳಕಳಿಯಿಂದ ವಿನಂತಿಸುವೆ. ಸೇನಾಧಿಕಾರಿಗಳ ಜತೆ ವೇದಿಕೆ ಹಂಚಿಕೊಂಡ ಮೊದಲ ಕಾರ್ಯಕ್ರಮ ಇದು. ೫೧೫ ಭೂಸೇನಾ ಕಾರ್ಯಾಗಾರದ ವ್ಯವಸ್ಥಾಪಕ ನಿರ್ದೇಶಕರಾದ ಕಮಾಂಡೆಂಟ್ ಬ್ರಿಗೇಡಿಯರ್ ರಾಜೇಶ್ ಜಸ್ವಾಲ್ ಅವರು ಸೊಗಸಾಗಿ ಮಾತನಾಡಿದರು. ದಲಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವಾಗ, ೨೫ ವರ್ಷ ಸೇವೆ ಸಲ್ಲಿಸಿದ ದಲಿತ ನೌಕರರನ್ನು ಸನ್ಮಾನಿಸುವಾಗ ಅವರೊಂದಿಗೆ ಒಡನಾಡಿದ ರೀತಿ, ಅವರ ಅಂತಃಕರಣ ನನಗೆ ನಿಜಕ್ಕೂ ಇಷ್ಟವಾಯಿತು. ೫೧೫ ರಾಜೇಶ್ ಅವರ ನೇತೃತ್ವದಲ್ಲಿ ೫೧೫ ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದು ಆಶಿಸುವೆ. ನಾನು ನನ್ನ ಭಾಷಣವನ್ನು ಈ ನೆಲದ ಭಾಷೆಯಾದ ಕನ್ನಡದಲ್ಲೇ ಮಾಡಿದ್ದೇನೆ. ಎಲ್ಲರಿಗೂ ಅರ್ಥವಾಗಿದೆಯೆಂದು ಭಾವಿಸುತ್ತೇನೆ. ೫೧೫ ಸ್ವಾತಂತ್ರ್ಯಪೂರ್ವದಿಂದಲೇ ಇಲ್ಲಿ ಸ್ಥಾಪನೆಯಾಗಿರುವ ಸಂಸ್ಥೆ. ಈ ನೆಲದಲ್ಲಿರುವುದರಿಂದ ನೆಲದ ಭಾಷೆಯನ್ನೂ ಇಲ್ಲಿ ಕೆಲಸ ನಿರ್ವಹಿಸುವವರು ಕಲಿತು ಮಾತನಾಡುವಂತಾಗಬೇಕು ಎನ್ನುವುದು ನನ್ನ ಅಪೇಕ್ಷೆ. ನಾನು ತಮಿಳುನಾಡಿಗೋ, ಆಂಧ್ರಕ್ಕೋ ಜೀವನೋಪಾಯಕ್ಕಾಗಿ ವಲಸೆ ಹೋದರೆ ಅಲ್ಲಿನ ಭಾಷೆಗಳನ್ನು ಕಲಿತು ಬೆರೆಯಬೇಕು. ಹಾಗೆಯೇ ಇಲ್ಲಿಗೆ ಬಂದವರೂ ಕೂಡ. ಇಷ್ಟನ್ನು ಹೇಳುತ್ತಾ ಈ ಸದವಕಾಶ ಕಲ್ಪಿಸಿದ್ದಕ್ಕಾಗಿ ಎಲ್ಲರಿಗೂ ವಂದಿಸಿ ನನ್ನ ಮಾತು ಮುಗಿಸುತ್ತೇನೆ ಕಾರ್ಯಕ್ರಮ: ೫೧೫ ಭೂಸೇನಾ ಕಾರ್ಯಾಗಾರದ ನೌಕರ ಸಂಘಟನೆಗಳು ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಉಪಸ್ಥಿತರು: ಬ್ರಿಗೇಡಿಯರ್ ರಾಜೇಶ್ ಜಸ್ವಾಲ್, ಕಮಾಂಡೆಂಟ್ ಹಾಗು ಎಂಡಿ, ೫೧೫ ಭೂಸೇನಾ ಕಾರ್ಯಾಗಾರ ಶ್ರೀ ತಂಗರಾಜು, ಆಯುಕ್ತರು, ರಾಜ್ಯ ಮಾಹಿತಿ ಆಯೋಗ.

Thursday, April 26, 2012

ಡಬ್ಬಿಂಗ್, ವಿಜಯ್ ಎತ್ತಿದ ಪ್ರಶ್ನೆಗಳಿಗೆ ಕೆಲವು ಉತ್ತರಗಳು...

ಡಬ್ಬಿಂಗ್ ಕುರಿತು ನಾನು ಬರೆದಿದ್ದ ಲೇಖನಕ್ಕೆ ವಿಜಯ ಕನಕೆರೆ ಪ್ರತಿಕ್ರಿಯಿಸಿದ್ದಾರೆ. ವಿಜಯ ಕನ್ನಡ ಚಲನಚಿತ್ರ ರಂಗದಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡ್ತಾ ಇದ್ದಾರೆ. ಅವರ ಪ್ರತಿಕ್ರಿಯೆಗೆ ನನ್ನ ಉತ್ತರ ಇಲ್ಲಿದೆ.
ಪ್ರಿಯ ವಿಜಯ್ ಹನಕೆರೆ, ನೇರವಾಗಿ ವಿಷಯಕ್ಕೆ ಬರ‍್ತೀನಿ. ಈ ಚಾನಲ್‌ಗಳ ಟಿಆರ್‌ಪಿ-ಜಿಆರ್‌ಪಿ ಬಗ್ಗೆ ನಂಗೂ ಅಲ್ಪಸ್ವಲ್ಪ ಗೊತ್ತು. ಬೆಂಗಳೂರಲ್ಲಿ ನಂ.೧ ಚಾನಲ್ ಯಾವುದು ಗೊತ್ತಾ? ನಮ್ಮ ಉದಯ ಟಿವಿನೂ ಅಲ್ಲ, ಸುವರ್ಣನೂ ಅಲ್ಲ, ಈ ಟಿವಿ-ಜಿಟಿವಿಗಳೂ ಅಲ್ಲ. ನಂ.೧ ಸ್ಥಾನದಲ್ಲಿ ಇರೋದು ಸನ್ ಟಿವಿ. ಇದನ್ನು ಹೇಳೋದಕ್ಕೆ ಸಂಕಟ ಆಗುತ್ತೆ ಕಣ್ರೀ. ಹಾಗಂತ ನಾನು ತಮಿಳು ಭಾಷೆಯ ದ್ವೇಷಿನೂ ಅಲ್ಲ, ತಮಿಳು ಚಾನಲ್ ವಿರೋಧಿನೂ ಅಲ್ಲ. ಬರೀ ತಮಿಳರಷ್ಟೇ ಸನ್ ಟಿವಿ ನೋಡ್ತಾ ಇದ್ದಿದ್ದರೆ ಅದು ನಂ.೧ ಆಗೋದಕ್ಕೆ ಸಾಧ್ಯನೇ ಇರಲಿಲ್ಲ. ಕನ್ನಡಿಗರು ನೋಡ್ತಾರೆ. ಅದರಿಂದಾಗಿಯೇ ಅದು ನಂ.೧ ಆಗಿದೆ. ಸನ್ ಟಿವಿ ಮೊದಲ ಸ್ಥಾನಕ್ಕೆ ಬರೋದಕ್ಕೆ ಬೆಂಗಳೂರಲ್ಲಿ ತಮಿಳಿಗರು ಹೆಚ್ಚಿನ ಸಂಖ್ಯೆಯಲ್ಲಿ ಇರೋದೇ ಕಾರಣ ಅಂತ ನೀವು ಉಡಾಫೆಯಾಗಿ ಉತ್ತರ ಕೊಟ್ಟುಬಿಡಬಹುದು. ಆದರೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಸಾರವಿರುವ ಪತ್ರಿಕೆಗಳ ರೇಟಿಂಗು ತೆಗೆದುಕೊಳ್ಳಿ.. ಅಲ್ಲಿ ತಮಿಳು ಪತ್ರಿಕೆ ಯಾವತ್ತಿಗೂ ನಂ.೫ರೊಳಗೆ ಪ್ರವೇಶ ಮಾಡಲು ಸಾಧ್ಯವಾಗಿಲ್ಲ. ಚಾನಲ್ ವಿಷಯದಲ್ಲಿ ಯಾಕೆ ಹೀಗೆ? ಕರ್ನಾಟಕದಲ್ಲಿ ಸನ್ ಟಿವಿಯೋ, ಜೆಮಿನಿ ಟಿವಿಯೋ ಪ್ರವರ್ಧಮಾನಕ್ಕೆ ಬಂದರೆ, ಅದನ್ನು ಕನ್ನಡಿಗರೂ ನೋಡುವುದನ್ನು ಅಭ್ಯಾಸ ಮಾಡಿಕೊಂಡರೆ ನಿಮ್ಮ ಸಿನಿಮಾ-ಟಿವಿ ಇಂಡಸ್ಟ್ರಿಯವರಿಗೇನು ಬೇಜಾರಾಗೋದಿಲ್ಲ. ತಮಿಳಿನ ೩ ಸಿನಿಮಾ ನೋಡಿ ಮೆಚ್ಚಿಕೊಂಡೆ, ಮಗಧೀರ ಕರ್ನಾಟಕದಲ್ಲಿ ಯಶಸ್ವಿಯಾಗಿದ್ದಕ್ಕೆ ಸಂತೋಷವಾಗಿದೆ ಎಂದು ನಿಮ್ಮ ಸಿನಿಮಾನಟರುಗಳೇ ಬಹಿರಂಗ ಹೇಳಿಕೆ ಕೊಡುತ್ತಾರೆ. ಬೇರೇನೂ ಬೇಡ, ನಿಮ್ಮ ಸಿನಿಮಾ ತಯಾರಾಗುವ ಸೆಟ್ ಗಳಲ್ಲೂ ಕನ್ನಡಕ್ಕಿಂತ ಹೆಚ್ಚು ತಮಿಳೇ ಕೇಳಿಸ್ತಾ ಇರುತ್ತೆ. ಯಾವುದಕ್ಕೂ ನಿಮಗೆ ಆತ್ಮಾಭಿಮಾನ ಕೆರಳೋದೇ ಇಲ್ಲ. ಒಂದು ಧಾರಾವಾಹಿಯನ್ನಾಗಲೀ, ಚಿತ್ರವನ್ನಾಗಲೀ ನಿರ್ದೇಶನ/ನಿರ್ಮಾಣ ಮಾಡದೇ ಇರುವ ನೀವು.... ಎಂದು ನನಗೆ ಸಂಬೋಧಿಸಿದ್ದೀರಿ. ನಾನು ಒಬ್ಬ ವೀಕ್ಷಕನಾಗಿ ನನಗೇನು ಬೇಕು ಎಂದು ಕೇಳುವ ಹಕ್ಕು ಇಲ್ಲವೇ? ಭತ್ತ ಬೆಳೆಯಲಾಗದವನು ಅನ್ನ ತಿನ್ನಲೇಬಾರದಾ? ನಾನೊಬ್ಬ ಗ್ರಾಹಕ, ನನಗೆ ಬೇಕಾದ್ದನ್ನೇ ನಾನು ಕೇಳುತ್ತೇನೆ. ಇದು ಸಾಮಾನ್ಯ ಜ್ಞಾನ. ಇನ್ನು ನೀವು ಹಸಿವಿನ ವಿಷಯ ಮಾತಾಡಿದ್ದೀರಿ. ಹಸಿವು ಏನೆಂಬುದು ನನಗೂ ಗೊತ್ತು. ಈ ನೆಲದ ರೈತನ, ಕೂಲಿ ಕಾರ್ಮಿಕರ, ದಲಿತರ, ಬಡವರ ಹಸಿವನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದೇನೆ. ನಮ್ಮ ರೈತನನ್ನು ಬಲವಂತವಾಗಿ, ಅವನಿಗೆ ಗೊತ್ತೇ ಇಲ್ಲದಂತೆ ಜಾಗತೀಕರಣದ ಸ್ಪರ್ಧೆಗೆ ದೂಡಲಾಯಿತು. ಮೂಡಿಗೆರೆಯ ಸಣ್ಣ ಕಾಫಿ ಬೆಳೆಗಾರ ಮತ್ತು ಅವನ ಬಳಿ ಕೂಲಿ ಮಾಡುವವರು ಬ್ರೆಜಿಲ್ ನ ದೊಡ್ಡ ಕಾಫಿ ಬೆಳೆಗಾರರೊಂದಿಗೆ ಅವರಿಗೇ ಗೊತ್ತಿಲ್ಲದಂತೆ ಸ್ಪರ್ಧೆ ಮಾಡಬೇಕಾಯಿತು. ಅರಸೀಕೆರೆಯ ತೆಂಗು ಬೆಳೆಗಾರ ಶ್ರೀಲಂಕಾದ ಬೆಳೆಗಾರನೊಂದಿಗೆ ಸ್ಪರ್ಧೆ ಮಾಡಿದ. ಆದರೆ ಯಾವತ್ತೂ ಮಾರುಕಟ್ಟೆಗೆ ನನ್ನ ಕಾಫಿಯಷ್ಟೇ ಬರಬೇಕು, ಬ್ರೆಜಿಲ್ ನ ಕಾಫಿ ಬರಕೂಡದು, ಬಂದರೆ ನಾನು ಅದನ್ನು ನನ್ನ ತೋಳ್ಬಲದಿಂದ ತಡೆಯುತ್ತೇನೆ ಎಂದು ರೈತ ಹೇಳಲಿಲ್ಲ. ಯಾಕೆಂದರೆ ಅವನಿಗೆ ಸಿನಿಮಾ ನಟರಿಗೆ ಇರುವ ಫ್ಯಾನ್ ಫಾಲೋಯಿಂಗ್ ಇಲ್ಲ. ದುಡ್ಡು ಮೊದಲೇ ಇಲ್ಲ, ತೊಡೆತಟ್ಟಿ ಯುದ್ಧಕ್ಕೆ ನಿಂತರೆ ಅವತ್ತಿನ ಕೂಳೂ ಇಲ್ಲದಂತಾಗುತ್ತದೆ ಎಂಬ ಭೀತಿ. ನನ್ನ ತೇಜಸ್ವಿ ಡಾಕ್ಯುಮೆಂಟರಿ ಸರಣಿ ೮ ಕಂತುಗಳಲ್ಲಿ ಪ್ರಸಾರವಾಯಿತು. ಇನ್ನಷ್ಟು ಕಂತು ಮಾಡಬಹುದಿತ್ತು ನಿಜ. ಒಂದು ವೇಳೆ ಇದು ಯಶಸ್ವಿಯಾಗಿಲ್ಲ ಎಂದು ನಿಮಗನ್ನಿಸಿದ್ದರೆ, ಅದನ್ನು ಜನರು ಹೆಚ್ಚು ನೋಡಿಲ್ಲ ಎಂದನಿಸಿದ್ದರೆ ಅದಕ್ಕೆ ನಾನೇ ಹೊಣೆ. ಜನರನ್ನು ಹೊಣೆಯಾಗಿಸುವುದು ಸರಿಯಲ್ಲ. ಚಿಗುರಿದ ಕನಸು, ಕಲ್ಲರಳಿ ಹೂವಾಗಿ ಸಿನಿಮಾಗಳು ವ್ಯಾವಹಾರಿಕವಾಗಿ ಯಶಸ್ವಿಯಾಗಲಿಲ್ಲ. ಇದಕ್ಕೆ ಬೇರೆಯದೇ ತೆರನಾದ ಆತ್ಮಶೋಧನೆ ಆಗಬೇಕು. ನೋಡುಗರ ಅಭಿರುಚಿಯನ್ನು ಕೆಡಿಸಿದವರು ನಾವು. ಅದಕ್ಕೆ ಜನರನ್ನು ದೂರಿ ಪ್ರಯೋಜನವೂ ಇಲ್ಲ. ಜನರು ಏನನ್ನು ಬಯಸುತ್ತಾರೋ ಅದನ್ನು ಕೊಡುತ್ತೇವೆ ಎಂಬುದು ಯಾವುದೇ ಸಮೂಹ ಮಾಧ್ಯಮದ ನಿಲುವಾಗಬಾರದು. ಜನರಿಗೆ ಏನು ಅಗತ್ಯವಿದೆಯೋ ಅದನ್ನು ಕೊಡಬೇಕು. ನಾವು ಅಭಿರುಚಿಯನ್ನು ಬೆಳೆಸಲಿಲ್ಲ. ಅದರ ಫಲವನ್ನು ಈಗ ಉಣ್ಣುತ್ತಿದ್ದೇವೆ, ಅಷ್ಟೆ. ವಿಜಯ್, ಕನ್ನಡ ನಿಮ್ಮ ಸ್ಟ್ರಾಟಜಿ ಅಂತ ಹೇಳಿದ್ದೀರಿ. ಈ ಥರದ ಮಾತುಗಳನ್ನು ಆಡುವ ಮುನ್ನ ಹತ್ತು ಸಲ ಯೋಚನೆ ಮಾಡಿ. ಕನ್ನಡ ನಮ್ಮ ಬದುಕು ಕಣ್ರೀ, ನಮ್ಮ ಸಂಸ್ಕೃತಿ, ಅದು ನಮ್ಮ ಭಾವ. ಕನ್ನಡವನ್ನು ಸ್ಟ್ರಾಟಜಿ ಮಾಡಿಕೊಳ್ಳುವಷ್ಟು ಹರಾಮಿಕೋರತನ ನನಗಂತೂ ಇಲ್ಲ. ನೀವು ಮಣಿಪುರಿಗಳ ಬಗ್ಗೆ ಯಾಕೆ ಬರೆದಿಲ್ಲ ಅಂತ ಕೇಳ್ತಾ ಇದ್ದೀರಿ. ಕರವೇ ನಲ್ನುಡಿಯಲ್ಲೇ ನಾನು ಮಣಿಪುರಿಗಳ ಕುರಿತು ಸುದೀರ್ಘ ಲೇಖನ ಬರೆದಿದ್ದೇನೆ. ಬೇಕಿದ್ದರೆ ಆ ಸಂಚಿಕೆ ನಿಮಗೂ ಕಳಿಸ್ತೇನೆ. ಕನ್ನಡವನ್ನು ಪ್ರೀತಿಸುವುದು ಅಂದರೆ ಇತರ ಭಾಷೆಗಳನ್ನು ದ್ವೇಷಿಸುವುದು ಎಂದಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ಭಾಷೆ, ರಾಜ್ಯಗಳು ಸಮಾನವಾದ ಅಧಿಕಾರ, ಹಕ್ಕು ಮತ್ತು ಗೌರವವನ್ನು ಪಡೆಯಬೇಕು ಎಂಬುದಷ್ಟೇ ನಮ್ಮ ನಿಲುವು. ನಿಮಗೆ ಐದು ಸಾವಿರ ಮಂದಿ ಕಾರ್ಮಿಕರ ಹೊಟ್ಟೆ ಹಸಿವಿನ ಚಿಂತೆ. ನನಗೆ ಆರು ಕೋಟಿ ಕನ್ನಡಿಗರ ಜ್ಞಾನದ ಹಸಿವಿನ ಚಿಂತೆ. ನಮ್ಮ ಮಕ್ಕಳಿಗೆ ಡಿಸ್ಕವರಿ, ಅನಿಮಲ್ ಪ್ಲಾನೆಟ್ ಇತ್ಯಾದಿಗಳೆಲ್ಲವೂ ಕನ್ನಡದಲ್ಲೇ ಸಿಗುವಂತಾಗಬೇಕು, ತಮಿಳಿಗರಿಗೆ ಸಿಕ್ಕ ಹಾಗೆ. ಅದಕ್ಕೆ ನಿಮ್ಮ ಸಿನಿಮಾ ಇಂಡಸ್ಟ್ರಿಯೇ ದೊಡ್ಡ ಅಡ್ಡಿ, ನಿಮ್ಮ ಹಸಿವೇ ಅಡ್ಡಿ. ಕನ್ನಡ ಮತ್ತು ಕನ್ನಡ ಸಿನಿಮಾ ಎಂಬ ಎರಡು ಆಯ್ಕೆಗಳು ನನ್ನ ಮುಂದಿದ್ದರೆ ನಾನು ಕನ್ನಡವನ್ನೇ ಆಯ್ದುಕೊಳ್ಳುತ್ತೇನೆ. ಕನ್ನಡ ಸಿನಿಮಾಗೆ ನೂರು ವರ್ಷಗಳ ಇತಿಹಾಸವೂ ಇಲ್ಲ, ಆದರೆ ಕನ್ನಡಕ್ಕೆ, ಕನ್ನಡ ಸಂಸ್ಕೃತಿಗೆ ೨೦೦೦ ವರ್ಷಗಳ ಇತಿಹಾಸವಿದೆ. ಸಂಸ್ಕೃತಿಯ ಬಗ್ಗೆ ಮಾತನಾಡುವವರಿಗೆ ಈ ವಿವೇಕ ಇದ್ದರೆ ಒಳ್ಳೆಯದು. ಈಗ ಹೇಳಿ ವಿಜಯ್, ಅಜ್ಜಿಗೆ ಅರಿವೆ ಚಿಂತೆಯಾದರೆ ಮೊಮ್ಮಗಳಿಗೆ ಮಿಂಡನ ಚಿಂತೆ ಅನ್ನೋ ಗಾದೆ ನಿಮಗೇ ಹೆಚ್ಚು ಅನ್ವಯವಾಗುತ್ತೆ ಅಲ್ವಾ? (ಕ್ಷಮಿಸಿ ಈ ಥರದ ಗಾದೆಗಳನ್ನು ನಾನು ನನ್ನ ಬರೆಹದಲ್ಲಿ ಬಳಸೋದಿಲ್ಲ. ನೀವು ಹೇಳಿರೋದ್ರಿಂದ, ಮತ್ತು ಅದು ನಿಮಗೇ ಹೆಚ್ಚು ಅನ್ವಯಿಸಿದ್ದರಿಂದ ಈ ಪ್ರಶ್ನೆ ಕೇಳಬೇಕಾಯಿತು. ಪ್ರೀತಿ ಇರಲಿ ನಮಸ್ಕಾರಗಳು.

Wednesday, April 4, 2012

ಕೊಳೆತ


ಕೊಳೆಯುವಿಕೆ ಸಾಂಕ್ರಾಮಿಕ
ಎಲ್ಲ ಕೊಳೆಯುತ್ತದೆ
ಗಿಡ, ಮರ, ಹೂವು, ಹಣ್ಣು, ಅನ್ನ
ಪ್ರೀತಿ, ಕನಸು, ಮೋಹ, ಸಂಬಂಧ
ಮಾತು, ನಗು, ಮೌನ, ಶಬ್ದ
ಘಮಘಮಿಸುವ ಎಲ್ಲವೂ

ನಿಶ್ಚಲ ನಿನ್ನೆಗಳು
ದೀರ್ಘಗೊಳ್ಳುವ ರಾತ್ರಿಗಳು
ಅಬ್ಬೇಪಾರಿ ಹಗಲು, ಸಂಜೆಯ ಹಳದಿ ಸೂರ್ಯ
ಈ ತಂಗಾಳಿ, ಆ ಸುಡುಗಾಳಿ
ಎಲ್ಲವೂ ಕೊಳೆಯುತ್ತವೆ

ಕಟ್ಟಿಕೊಂಡ ಕೋಟೆಕೊತ್ತಲುಗಳು
ಗಡಿರೇಖೆಗಳು
ಬಾಗಿಲು, ಚಿಲಕ, ಬೀಗ
ಎಲ್ಲ ಎಲ್ಲ ಕೊಳೆಯುತ್ತವೆ.

ನಿನ್ನೆ ತಾನೇ ಕುಣಿದ ನವಿಲ ರೆಕ್ಕೆಗಳೂ ಕೊಳೆಯುತ್ತವೆ
ದೇಹ ಕೊಳೆಯುತ್ತದೆ, ಮನಸ್ಸು ಕೊಳೆಯುತ್ತದೆ
ಆದರೆ ಆತ್ಮ ಕೊಳೆಯಲಾಗದು;
ಹೀಗಂತ ಕೇಳಿದ ನೆನಪು

ಒಮ್ಮೊಮ್ಮೆ ಆತ್ಮವೂ ಪಿತಿಪಿತಿ
ಅದರ ಸುತ್ತಲೂ ನೊಣ ಮುತ್ತುತ್ತದೆ

ಆವಾಹಿಸಿಕೊಂಡಷ್ಟೇ ವೇಗವಾಗಿ ವಿಸರ್ಜಿಸಿಬಿಡು-
ಬುದ್ಧಿಯೂ ಕೊಳೆಯುತ್ತದೆ
ಎನ್ನುತ್ತಾರೆ ಬುದ್ಧಮಾರ್ಗಿಗಳು
ಆವಾಹನೆ ಸುಲಭ, ವಿಸರ್ಜನೆ ಕಷ್ಟ ಕಷ್ಟ

ವರ್ಣ ಕೊಳೆತಿದೆ, ಧರ್ಮ ಕೊಳೆತಿದೆ
ತರ್ಕ, ಸಿದ್ಧಾಂತಗಳು ಕೊಳೆತಿವೆ
ಎದೆ ಬಗೆದು ತೋರಿಸಿದ ದೇವರ ಪಟಗಳೂ ಕೊಳೆತಿವೆ
ಕೊಳೆತ ಎಲ್ಲದಕ್ಕೂ ಹೆಂಡದ ರುಚಿ, ಅಮಲು

ಯುಗವನ್ನೇ ಹೂತುಬಿಡಬೇಕು
ಕೊಳೆತದ್ದೆಲ್ಲ ಗೊಬ್ಬರವಾಗಬೇಕು
ಹೊಸ ಹಾಡು ಹುಟ್ಟಬೇಕು
ನವಿಲ ತೊಡೆಗಳಿಗೆ ಹೊಸ ಚೈತನ್ಯ ಬರಬೇಕು

Sunday, March 25, 2012

ಮಾದ್ರೀಶಾಪ


ದಿವ್ಯವಾದ ಏನನ್ನೂ ಮುಟ್ಟಲಾರೆ
ಮುಟ್ಟಿದ್ದೆಲ್ಲ ಚಟಚಟನೆ ಉರಿದುಹೋಗುತ್ತದೆ
ಮಾದ್ರೀಶಾಪ

ಮುಟ್ಟಗೊಡಬೇಡ ನಿನ್ನ
ಬೆರಳು, ಹೆರಳು, ಕೊರಳ
ಸುಡುವುದು ಇಷ್ಟವಿಲ್ಲ ನನಗೆ

ನನ್ನ ನಿಟ್ಟುಸಿರು
ಈಗ ಬರಿಯಕಣ್ಣಿಗೆ ಕಾಣುವಷ್ಟು
ಮೂರ್ತ

ಹಸಿವು, ಹಸಿವು
ದೈವತ್ವ ಕಳಚಿಕೊಂಡು
ಮನುಷ್ಯನಾಗುತ್ತಿರುವ ಕುರುಹು

ಮಾದ್ರಿಯ ಬೆತ್ತಲೆ
ತೊಡೆಯ ಮೇಲೆ
ಪಾಂಡುವಿನ ಮೂಳೆಯ ಹುಡಿ

ದೂರ ನಿಲ್ಲು
ನಿನ್ನ ಅಂಗೈ ರೇಖೆಗಳ ಮೇಲೆ
ನವಿಲುಗಳು ಕುಣಿಯುತ್ತವೆ

ನವಿಲ ಪಾದಗಳಿಂದ
ಹಾಡು ಹುಟ್ಟುತ್ತದೆ
ಆ ಹಾಡಾಗಿ ನಾ ನಿನ್ನ ಮುಟ್ಟುತ್ತೇನೆ

ದೇಹ-ಮನಸು


ಮತ್ತೆ ಈ ಅವಿಧೇಯ ದೇಹ
ನನ್ನ ಮಾತು ಕೇಳುತ್ತಿಲ್ಲ

ಅವಳೆನ್ನುತ್ತಾಳೆ:
ಮನಸ್ಸು-ದೇಹ ಕೂಡಿಸಬೇಕು ಕಣೋ
ಕೂಡುವ ಕ್ಷಣದಲ್ಲಿ
ಜಗತ್ತು ನಮ್ಮ ಕಣ್ಣಲ್ಲಿ
ಮತ್ತೆ ಹುಟ್ಟಬೇಕು

ವೀಣೆಯ ತಂತಿ ಬಿಗಿ ಮಾಡಿ
ನಾದ ಹೊಮ್ಮಿಸಬೇಕು
ರಾಗ ವೀಣೆಯಾಗಿ, ವೀಣೆ ರಾಗವಾಗಿ
ಬದಲಾಗಬೇಕು

ಇಲ್ಲ,
ಅದು ಸಾಧ್ಯವಿಲ್ಲವೆನ್ನುತ್ತಿದೆ ದೇಹ

ಅವಳ ನೀಳ ಬೆರಳ ಕಂಡಾಗಲೆಲ್ಲ
ಕೊರಳಸೆರೆ ಬಿಗಿಯುತ್ತದೆ
ತೊಡೆಗಳಲ್ಲಿ ಕಂಪನ

ದೇಹ ಬಯಲು
ಮನಸು ಬೆತ್ತಲು
ಲಯವಾಗಿದ್ದು ಒಳಗಿನ ಕತ್ತಲು

ಹೌದು
ದೇಹ-ಮನಸು ಕೂಡಬೇಕು
ಜಗತ್ತು ಹುಟ್ಟದಿದ್ದರೂ ಚಿಂತೆಯಿಲ್ಲ;
ನಮ್ಮ ಸಾವನ್ನಾದರೂ ನಾವು ಹೆರಬೇಕು

Saturday, March 17, 2012

ಗಂಧ


ತೇಯುತ್ತಲೇ ಇದ್ದೇನೆ
ದೇಹಕ್ಕೆ ಆತ್ಮ...
ನುಣುಪು ನುಣುಪಾಗಿ
ಗಂಧದಂತೆ ಏನೋ ಹೊರಡುತ್ತಿದೆ
ಹಣೆಗೆ ಹಚ್ಚಿಕೊಳ್ಳಬೇಕು...

ನಿನ್ನ ಪಾದದ ಹೆಬ್ಬೆರಳು ಸ್ಪರ್ಶಿಸಬೇಕು
ಅಲ್ಲಿ ಚಕ್ರದಂತೆ ಸುಳಿಸುಳಿ ಸುತ್ತಬೇಕು
ಸಣ್ಣ ಬೆವರಿನ ಕಣವ ತಂದು ಎದೆಗಂಟಿಸಿಕೊಳ್ಳಬೇಕು
ಎದೆಯ ಸಾವಿರ ಕೋಗಿಲೆಗಳಿಗೆ ಗಂಟಲಾಗಬೇಕು

ಅರೆಕ್ಷಣವಾದರೂ ಸೈ
ಹೆಣ್ಣಾಗಬೇಕು
ಮುಡಿಯಲ್ಲಿ ನಿನ್ನ ಮುಖ ಹುದುಗಿಸಿ ಮಗುವಾಗಿಸಬೇಕು
ಮಡಿಲಲ್ಲಿ ಜಿನುಗಿಸಿ ನಿನ್ನ ಕಣ್ಣಾಗಬೇಕು
ಮೊಲೆಯೂಡಿಸಿ ನಿನ್ನ ಒಡಲಾಗಬೇಕು

ಬೆನ್ನ ಮೇಲೆಲ್ಲ
ನೀನು ಬರಸೆಳೆದು ಗೀರಿದ ಗುರುತು
ಪ್ರತಿ ಗಾಯದಲ್ಲೂ
ನಾನು ಮತ್ತೆ ಮತ್ತೆ ಹುಟ್ಟಿದ್ದೇನೆ

ತೇಯುತ್ತಲೇ ಇದ್ದೇನೆ
ದೇಹಕ್ಕೆ ಆತ್ಮ
ಗಂಧದಂತೆ ಹೊರಟಿದ್ದು ನೀನಾ?
ತೇಯ್ದು ತೇಯ್ದು ದೇಹವೂ ಆತ್ಮವೂ ಅಳಿದಾಗ
ಉಳಿಯುವುದು ಬರಿಯ ನೀನೇನಾ?
ಅಥವಾ ನೀನೆಂಬ ನಾನಾ?

ಅಗೋ,
ಮಿಂಚುಹುಳದ ಗರ್ಭದಲ್ಲಿ
ಚಂದಿರ ಹುಟ್ಟುತ್ತಿದ್ದಾನೆ
ಬಾ, ಅವನಿಗೊಂದು ಹೆಸರು ಇಡೋಣ

Monday, February 27, 2012

ಬಿಡುಗಡೆ


ಉರಿವ ಸೂರ್ಯನ ಜತೆ ಗುದ್ದಾಡಿ
ಹಿಡಿ ಬೆಳಕ ತಂದಿದ್ದೇನೆ
ಮುಡಿಸಲೇ ನಿನ್ನ ತುರುಬಿಗೆ?

ಚೈತನ್ಯ ಬೆಳಕಿಗೆ ಮಾತ್ರವಲ್ಲ
ಅದನ್ನು ಮುಡಿದ ತುರುಬಿಗೂ

ಬಾ ಜಡೆ ಹೆಣೆಯುತ್ತೇನೆ
ಬೆಳಕಿನ ಎಳೆಗಳನ್ನು
ಒಂದರ ಮೇಲೊಂದು ಪೇರಿಸಿ
ಕಾಮನಬಿಲ್ಲು ಮೂಡಲಿ ನಿನ್ನ ಹೆರಳಲ್ಲಿ

ಇಕಾ, ಹಿಡಿ ನಿನ್ನ ಕೈಗೆ
ಹೃದಯದ ಬಣ್ಣದ ಗೋರಂಟಿ ಹಚ್ಚುತ್ತೇನೆ
ಅಂಗೈ ಮೇಲೆ ನಕ್ಷತ್ರಗಳ ಚಿತ್ತಾರ
ಮಿನುಗುತ್ತಿರಲಿ ಪಳಪಳ

ನಾನು ಖಾಲಿಖಾಲಿ
ನನ್ನದೇನೂ ಉಳಿದಿಲ್ಲ
ಅನ್ನುವಷ್ಟು ಖಾಲಿ

ನಿನ್ನ ಕಣ್ಣಬೆಳಕಲ್ಲಿ
ಇನ್ನೂ ಒಂದಿಷ್ಟು ದೂರ
ಹಿಂಗೇ ತೆವಳಿ ನಡೆದಿದ್ದೇನೆ

ಬಾ, ನನ್ನ ತೋಳೊಳಗೆ ಹುದುಗಿ
ಕೊಂಚ ನಿದ್ದೆ ಮಾಡು
ಪ್ರೀತಿಯೆಂದರೆ ವಿಸ್ಮೃತಿ ಕಣೇ
ಅಲ್ಲಿ ಎಲ್ಲ ತರ್ಕಗಳ ಸೋಲು

ಹಣೆಯ ಮೇಲೆ ಬೆವರ ಹನಿಗಳ ಸಾಲಾಗಿ
ನೋವೆಲ್ಲ ಹರಿದುಬಿಡಲಿ...
ಹೀರುತ್ತೇನೆ, ಗುಟುಕು ಗುಟುಕಾಗಿ

ಒಂದು ನಗೆಯರಳಿದರೆ ಸಾಕು ನಿನ್ನ ಮೊಗದಲ್ಲಿ
ನಾನು ಬಿಡುಗಡೆಯಾಗುತ್ತೇನೆ

Friday, February 24, 2012

ಹಡಬೆ ಕನಸುಗಳು


ಈಗೀಗ ರಾತ್ರಿಗಳೂ ನಿರಾಳವಲ್ಲ
ಹಡಬೆ ಕನಸುಗಳು
ಛಾತಿಯ ಮೇಲೆ ಕುಕ್ಕರಿಸುತ್ತವೆ

ಸೀಳುನಾಯಿಯಂತೆ ನಾನು
ಯಾರದೋ ಮಾಂಸ ಹರಿದು ತಿಂದಿದ್ದೇನೆ
ಕೈಗಳಲ್ಲಿ ಕೆಂಪುರಕ್ತ

ಹೆಣಗಳ ವಾಸನೆ ತಾಳಲಾರೆ
ಧೂಪದ ಬಿರುಗಾಳಿಯಲ್ಲಿ
ಹೂವುಗಳ ಕಮಟು ಅತ್ತರು

ನಡುಬೀದಿಯಲ್ಲಿ ಬೆತ್ತಲು ನಿಂತಿದ್ದೇನೆ
ಸಾವಿರ ಸಾವಿರ ಕೆಮರಾಗಳು
ಒಮ್ಮಿಂದೊಮ್ಮಿಗೇ ಫೊಟೋ ಕ್ಲಿಕ್ಕಿಸುತ್ತಿವೆ

ಇದು ನಾನಲ್ಲ, ನಾನಲ್ಲ
ಎಂದು ಕಿರುಚುತ್ತಿದ್ದೇನೆ
ಧ್ವನಿ ಕವಾಟವೇ ಒಡೆದುಹೋಗಿದೆ

ಎದ್ದು ಪೂರಾ ಪ್ರಜ್ಞೆಗೆ ಬರುವಾಗ
ಬೆವರಲ್ಲಿ ತೋಯ್ದ ದೇಹ
ಹಣೆಯನ್ನು ತಬ್ಬಿದ ಇವಳ ಅಂಗೈ

ಬಚ್ಚಲ ನಳದಲ್ಲಿ ಕೈಯೊಡ್ಡಿ ನಿಂತಿದ್ದೇನೆ
ಎಷ್ಟು ಉಜ್ಜಿ ತೀಡಿದರೂ
ಮಾಸದ ರಕ್ತದ ಕಲೆ

ನಾನು ಎಂಬುದು ಒಂದೇ, ಎರಡೇ, ಹಲವೇ
ಬೆತ್ತಲಾಗಿ ನಿಂತವನ ತಲೆಯಲ್ಲಿ ಪ್ರಶ್ನೆ
ನರನರಗಳಲ್ಲಿ ಸಣ್ಣ ಮಿಡುಕಾಟ

ರಾತ್ರಿಯೆಂದರೆ ಭಯ ಕಣೇ ಎನ್ನುತ್ತೇನೆ
ಎದೆಯೊಳಗೆ ಮುಖ ಹುದುಗಿಸಿಕೊಂಡು
ಇವಳು ಖಿಲ್ಲನೆ ನಗುತ್ತಾಳೆ

ನನಗೆ ಈಗ ಸಣ್ಣ ಬುದ್ಧನಿದ್ರೆ
ಎದ್ದು ನೋಡಿದರೆ ಕೈಗಳ ಕಲೆ ಮಾಯ
ನಿದ್ದೆ ಹೋದ ಇವಳ ಮೊಗದಲ್ಲಿ ತುಂಟ ನಗೆ

Monday, February 20, 2012

ದಾಕ್ಷಾಯಿಣಿಯ ನೆನೆದು...


ಮಹಾಕೋಪಕ್ಕೆ ರೂಪಕ ಶಿವ
ಮೂರನೇ ಕಣ್ಣು ತೆರೆದನೆಂದರೆ ಜಗತ್ತು ಸರ್ವನಾಶ
ಹಾಗಂತ ನಂಬಿಕೆ

ಸಿಟ್ಟು ಬಂದಾಗ ತಾಂಡವನೃತ್ಯಗೈಯುವ ಶಿವ
ನಿಂತ ನೆಲವೇ ಅವನಿಗೆ ದಕ್ಷಬ್ರಹ್ಮನ ಯಜ್ಞಕುಂಡ
ಕುಣಿಯುವ ಕಾಲಿಗೆ ಪದೇ ಪದೇ ಎಡತಾಕಿದ್ದು
ಬ್ರಾಹ್ಮಣ್ಯದ ಬೆಂಕಿಗೆ ಸಿಕ್ಕು ಚಿಟಪಟನೆ ಬೆಂದುಹೋದ
ದಾಕ್ಷಾಯಿಣಿಯ ನೆನಪು
ನಡುಗುವ ತೊಡೆಗಳಲ್ಲಿ ಅವಳ ಆತ್ಮಸಂಚಾರ

ಇಕೋ, ಮೂರನೇ ಕಣ್ಣನೂ ತೆರೆದುಬಿಟ್ಟ
ಆ ಕಣ್ಣೋ ಲಾವಾರಸ ಸುರಿಸುವ ಅಗ್ನಿಕುಂಡ
ಅಲ್ಲಿ ದಾಕ್ಷಾಯಿಣಿ ಬೆಳಕಾಗಿ ಹರಿಯುತ್ತಾಳೆ

ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ
ಪಂಚ ಪತಿವ್ರತೆಯರ ಪಟ್ಟಿಯಲ್ಲಿ ಇಲ್ಲದ ಹೆಸರು ದಾಕ್ಷಾಯಿಣಿ
ಹೇಗೆ ಸೇರಿಸಿಯಾರು?
ಅಪ್ಪನ ಗೊಡ್ಡು ಕಂದಾಚಾರ ಮೀರಿ ಅಂತರ್ಜಾತೀಯ ಮದುವೆಯಾದಳು
ಸ್ಮಶಾನವಾಸಿಯನ್ನು ಕೂಡಿ ಅಪ್ಪನ ಬ್ರಾಹ್ಮಣ್ಯದ ಸೊಕ್ಕನ್ನು ಮುರಿದವಳು
ಗಂಡನ ಮಾತು ಮೀರಿ ಅಪ್ಪನ ಯಜ್ಞ ನೋಡಲು ಬಂದವಳು
ಬಂದ ತಪ್ಪಿಗೆ ಅಪಮಾನಿತಳಾಗಿ ಯಜ್ಞ ಕುಂಡದಲ್ಲೇ ಬಿದ್ದು ಸತ್ತವಳು
ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ!

ಪುರುಷಾಹಂಕಾರ ಮೆಟ್ಟಿ ನಿಂತ ತಪ್ಪಿಗೆ
ಧೂರ್ತ ಆಚಾರಗಳನ್ನು ಧಿಕ್ಕರಿಸಿದ ತಪ್ಪಿಗೆ
ಅವಳಿಗೆ ಪೂಜೆಯಿಲ್ಲ, ಪುರಸ್ಕಾರವಿಲ್ಲ
ಗಂಗೆ-ಗೌರಿಯರ ಮಧ್ಯೆ ಇವಳಿಗೊಂದು ಜಾಗವೇ ಇಲ್ಲ

ಶಿವ ಕುಣಿಯುತ್ತಲೇ ಇದ್ದಾನೆ
ಎದೆಯಲ್ಲಿ ದಾಕ್ಷಾಯಿಣಿಯ ಪೂರ್ಣಾಹುತಿಯ ಬೆಂಕಿ
ರುದ್ರತಾಂಡವ ನಿಲ್ಲಿಸಲು ತಾಯ್ಗಂಡ ದೇವತೆಗಳು
ಮೇನಕೆಯರನ್ನು ಬೆತ್ತಲೆ ನಿಲ್ಲಿಸಬಹುದು

ದೇವತೆಗಳ ವ್ಯಭಿಚಾರದ ನಡುವೆ
ದಾಕ್ಷಾಯಿಣಿಯ ಮರ್ಯಾದಾ ಹತ್ಯೆಗಳು ನಡೆಯುತ್ತಲೇ ಇರುತ್ತದೆ

Thursday, February 16, 2012

ರಾತ್ರಿ


ನನ್ನಿಡೀ ದಿನವನ್ನು
ನಗರದ ಟ್ರಾಫಿಕ್ಕು ಸಂದಣಿಯಲ್ಲಿ
ಎಷ್ಟೋ ವಾಹನಗಳು ತುಳಿದು ಹೋದವು

ಈಗ ರಾತ್ರಿ

ಗೀ ಗೀ ಎನ್ನುವ
ಹುಳುಗಳ ಹಾಡು
ಅದೇನು ಮೈಥುನದ ಚಡಪಡಿಕೆಯೋ?

ಎಲ್ಲ ಮಲಗಿದಂತಿದೆ
ಯಾರದೋ ಗೊರಕೆಯ ನಡುವೆ
ಮತ್ತೆ ಯಾರದೋ
ನಿಟ್ಟುಸಿರ ಏರಿಳಿತ

ಯಾವುದೋ ಮಗು
ಕೆಟ್ಟ ಕನಸು ಕಂಡು
ಕಿಟಾರನೆ ಕಿರುಚಿ ಎದ್ದಿದೆ
ತಾಯ ಮೊಲೆ ಕವುಚಿಕೊಂಡು
ಮತ್ತೆ ನಿದ್ದೆಗೆ ಜಾರಿದೆ

ನಾಯಿಯೊಂದರ ಆರ್ತನಾದ
ಎಂಥ ನೋವೋ?
ಅದರ ಯಜಮಾನ ರೇಗಿದ್ದಾನೆ
ಅದೀಗ ಸುಮ್ಮನೆ ಮಲಗಿದೆ

ಹೊರಗೆ ಗಾಳಿ
ಈ ರಾತ್ರಿಯಲ್ಲೂ ಯಾರೋ ಮಿಡುಕಿ ಬಿದ್ದಂತೆ
ಮುಚ್ಚಿದ ಕಿಟಕಿಗಳನ್ನು ದಾಟಿ
ಒಳಬರಲು ಹವಣಿಸುತ್ತಿದೆ

ಎಲ್ಲ ಶಬ್ದಗಳನ್ನು
ಒಂದಕ್ಕೊಂದು ಹೆಣೆಯುತ್ತಿದ್ದೇನೆ
ಅಪೂರ್ಣ ಪದ್ಯಗಳಿಗೆ
ಹೊಸ ಪದಗಳನ್ನು ಹುಡುಕುತ್ತಿದ್ದೇನೆ

ಸತ್ತು ಹೋದ ದಿನಕ್ಕೆ
ಇನ್ನೂ ಸಂಸ್ಕಾರ ಮುಗಿದಿಲ್ಲ
ಆಗಲೇ ರಾತ್ರಿ
ಅದು ಬದುಕಿರುವುದಕ್ಕೆ ನನ್ನ ಉಸಿರಷ್ಟೇ ಸಾಕ್ಷಿ

ಆಗಾಗ ರೆಪ್ಪೆಗಳ ನರ್ತನ
ಒಡಲಲ್ಲಿ ಬೇಯುವ ಬೆಂಕಿ
ಮಗ್ಗುಲು ಬದಲಾಯಿಸಿದಾಗ
ಪಥ ಬದಲಿಸುವ ನೆತ್ತರು

ರಾತ್ರಿ ಇನ್ನೂ ಬೆಳೆದಿದೆ
ಈಗ ಕನವರಿಕೆ, ಆಗಾಗ ಒಂದು ಸಣ್ಣನಗು
ಮುಷ್ಠಿ ಸಡಿಲಗೊಂಡು
ಬೆರಳುಗಳಿಗೆ ದಿಢೀರನೆ ಬಿಡುಗಡೆ

ದೇಹ ಹಗುರವಾಗುತ್ತಿದೆ
ನಿದ್ದೆ ಹತ್ತುತ್ತಿರಬೇಕು
ಬೆಳಗ್ಗಿನವರೆಗೂ ನಾನು ನಿಶ್ಚಿಂತ
ನನ್ನ ರಾತ್ರಿ ಸಾಯುವುದು ನನಗೆ ಗೊತ್ತಾಗುವುದಿಲ್ಲ

Thursday, February 9, 2012

ಗೀಜಗ


ಸಣ್ಣ ಗೀಜಗದ ಮರಿ
ಚಿನ್ನದ ಗರಿ
ಕೆದರಿಕೊಂಡು
ಹಾರಿ ಹೋಗಿದೆ

ಇಲ್ಲೇ ಆಟವಾಡುತ್ತಿತ್ತು
ಮಂಜಿನ ಹನಿಗಳ ಕೊಡವಿ
ಚಿತ್ತಾರ ಮೂಡಿಸುತ್ತ ಲಗಾಟಿ ಹೊಡೆಯುತ್ತಿತ್ತು
ನನ್ನ ಬಿಸಿಯುಸಿರ ಶಾಖದಲ್ಲಿ ಬೆಚ್ಚಗಿತ್ತು

ನನ್ನ ಅಂಗಳಕ್ಕೆ ಬಂದಾಗ ಮಂಕೋಮಂಕು
ಗಾಯವಾಗಿತ್ತೇ? ಏಟು ತಿಂದಿತ್ತೇ?
ವ್ರಣ-ಕೀವು
ತನಗೆ ತಾನೇ ಶುಶ್ರೂಶೆ ಮಾಡಿಕೊಳ್ಳುತ್ತಿತ್ತು

ನನಗೋ ರೆಕ್ಕೆ ತಡವಿ ಸಂತೈಸುವ ಆಸೆ
ಹುಲುಮಾನವರು ಸ್ಪರ್ಶಿಸಿದ ಹಕ್ಕಿಯನ್ನು ಅದರ ಪರಿವಾರವೇ ದೂರ ತಳ್ಳುತ್ತದಂತೆ
ಹೆದರಿ ಸುಮ್ಮನಾದೆ
ಮನುಷ್ಯರೆಂದರೆ ಹಕ್ಕಿಗಳಿಗೂ ಅಲರ್ಜಿ

ನೋಡನೋಡುತ್ತ
ಗೀಜಗನ ಕಣ್ಣಲ್ಲಿ ಬಂಗಾರದ ಮಿಂಚು
ರೆಕ್ಕೆಗಳಿಗೋ ಥಳಥಳ ಮೆರುಗು
ಕುಕಿಲಲ್ಲಿ ಆತ್ಮವಿಶ್ವಾಸದ ರಂಗು

ಅದರ ಖುಷಿಯನ್ನು ಸಂಭ್ರಮಿಸುವುದರೊಳಗೆ
ಇವತ್ತು
ಗೀಜಗ ಹಾರಿ ಹೋಗಿದೆ
ಪುಕ್ಕವೊಂದು ಉಳಿಸಿ ಹೋಗಿದೆ ನನ್ನ ನೆನಪಿಗೆ

ಕಣ್ಣು ಸಾಗುವಷ್ಟು ದೂರ ನೋಡುತ್ತಿದ್ದೇನೆ
ಹಕ್ಕಿ ಕಾಣುತ್ತಿಲ್ಲ
ಆಕಾಶವನ್ನು ಭೂಮಿಗೆ ಎಳೆತರುವ ಉಮ್ಮೀದಿನಲ್ಲಿ
ಲಗಾಟಿ ಹೊಡೆಯುತ್ತಿರಬಹುದು
ಸೂರ್ಯನನ್ನೊಮ್ಮೆ ಮುಟ್ಟಿ ಬರೋಣ
ಎಂದು ಕನಸು ಕಟ್ಟಿ ಕುಣಿಯುತ್ತಿರಬಹುದು

ಬಾ ಎಂದೊಮ್ಮೆ ಕೂಗಿದೆ
ಬರಲಾರದೇನೋ ದೂರ ಸಾಗಿರಬಹುದು

ಬಂದರೂ ಬರಬಹುದು
ಬಂದಾಗ ನಾನಿಲ್ಲದೇ ಹೋದರೆ?
ಆಡಿ ಬೆಳೆದ ಮರದಲ್ಲೊಮ್ಮೆ ಜೋಲಿ ಹೊಡೆಯಬಯಸಿದರೆ?
ಮಡಿಲು ಇಲ್ಲದಂತಾಗಬಾರದು

ಕಾಯುತ್ತಿದ್ದೇನೆ
ಆಕಾಶದಲ್ಲಿ ಕಣ್ಣುನೆಟ್ಟು


ಚಿತ್ರ: ವಿಕಿಪೀಡಿಯಾ

Thursday, January 26, 2012

ಕರಗಬೇಕು


ಕಾಲನ ಆಕಳಿಕೆಯ ಸದ್ದಿಗೆ ಜಡವಾಗದೆ
ಇಂಚಿಂಚೇ ಕರಗಿ
ನೀರಾಗಿ ಹರಿಯಬೇಕು

ಮನಸ್ಸಿಗೆ ಚಲನೆ ಗೊತ್ತು
ನಾಗಾಲೋಟ
ಮನಸ್ಸನ್ನು ಹಿಡಿದು ದೇಹದ ಭಾರಕ್ಕೆ
ಹೊಂದಿಸಬೇಕು

ಪುಟಿಯಬೇಕು, ಅದುರಬೇಕು
ನಡುಗಬೇಕು, ಬೆಚ್ಚಬೇಕು
ಹನಿಹನಿಯಾಗಿ ಜಿನುಗಬೇಕು

ಹೀಗೆ ಕರಗದ ಹೊರತು
ಸಾವಿಗೊಂದು ಚೈತನ್ಯ ಸಿಗದು
ಆತ್ಮದ ಕಾಣ್ಕೆಗೆ
ಕಣ್ಣು ಸಿಗದು

ಕರಗಬೇಕು, ಖಾಲಿಯಾಗಬೇಕು
ಯಾವುದೂ ಶೇಷವಾಗದಂತೆ
ಸೊನ್ನೆಯಾಗಬೇಕು
ಕರಗಿ
ಮಲ್ಲಿಗೆ ಬಳ್ಳಿಯ ಪಾದಕ್ಕೆ
ನೀರಾಗಿ ತೊಡರಿಕೊಂಡು
ಹೊಸಜೀವದ ಚೇತನವಾಗಬೇಕು

ಬುದ್ಧನಾಗಬೇಕು

Monday, January 23, 2012

ಆಹ್ವಾನ


ಕಲ್ಲುಕವಣೆ ತೂರುವವರು ತೂರಲಿ
ಅವರ ವಿಕೃತ ಖುಷಿಯನ್ನು ನೋಡಿ
ನಾನು ಮರುಕಪಡುತ್ತೇನೆ

ಅವರಿಗೆ ಗೊತ್ತಿಲ್ಲ
ಕಲ್ಲೆಂದರೆ ನನಗೆ ಪ್ರೀತಿ
ಅದರ ಏಟು ಬಿದ್ದ ಜಾಗದಲ್ಲೆಲ್ಲ
ನಾನು ಮತ್ತೆ ಮತ್ತೆ ಹುಟ್ಟಿದ್ದೇನೆ
ರಕ್ತ ಬೀಜಾಸುರನಂತೆ

ನನ್ನ ಅಕ್ಷರಗಳು
ಸುಡುಗಾಡಿನಲ್ಲೂ ಹುಟ್ಟುತ್ತವೆ
ಅವುಗಳಿಗೆ ಯಾರ ಹಂಗೂ ಇಲ್ಲ
ಯಾರಿಲ್ಲವೆಂದರೂ ಕರಗಿದ ಶವಗಳ
ಅಸ್ಥಿಗಳೊಂದಿಗೆ ಮಾತನಾಡುತ್ತವೆ

ಕಡಲ ಮುಂದೆ ಕುಳಿತಿದ್ದೇನೆ
ಇಡಿ ಇಡಿಯಾಗಿ ಕುಡಿದುಬಿಡುವ ಉನ್ಮಾದ
ನೆತ್ತಿಮೇಲೆ ಸುಡುವ ಸೂರ್ಯ
ಇಡಿಯಾಗಿ ಒಳಗೆ ಎಳೆದುಕೊಳ್ಳುವ ಸಡಗರ

ಸಕಲ ಸದ್ಗುಣ ಸಂಪನ್ನರೆಂದರೆ
ವಾಕರಿಕೆ ನನಗೆ,
ಎಂತಲೇ ಅವರಿಗೆ ಆಹ್ವಾನ ನೀಡುತ್ತಿರುವೆ
ಕಲ್ಲು ತೂರುವ ಅವಿವೇಕಿಗಳೇ
ಬನ್ನಿ, ನನ್ನ ಅಹಂಕಾರವನ್ನು ಮೀಟಿ ಒಮ್ಮೆ
ಎಸೆಯುವುದಾದರೆ ಪರ್ವತವನ್ನು ಬುಡಸಮೇತ
ಕಿತ್ತು ಎಸೆಯಿರಿ

ಅಗೋ ಸಂಜೆಯಾಗಿದೆ
ಹೊನ್ನ ಬೆಳಕು
ನಾನು ಆಕಾಶವನ್ನೇ ತಬ್ಬಬೇಕು
ಈಗ ತೊಲಗಿ ಇಲ್ಲಿಂದ

Sunday, January 22, 2012

ಬೆಂಕಿ


ರಾಮನವಮಿಯಂದು
ರಾವಣನ ಭೂತ ಧಗಧಗ ಉರಿಯುತ್ತದೆ
ಹತ್ತು ತಲೆಗಳ ತುಂಬಾ ಪಟಾಕಿಗಳ ಢಮಢಮ

ಸೀತೆ ಸುಟ್ಟುಕೊಂಡಿದ್ದಳು
ತನ್ನನ್ನು ತಾನೇ
ರಾಮ ಪ್ರೇಕ್ಷಕ ಅಥವಾ ನಿರ್ದೇಶಕ

ಸುಟ್ಟುಕೊಳ್ಳಬೇಕು ಅಥವಾ ಸುಡಿಸಿಕೊಳ್ಳಬೇಕು
ನಿಜಾಯಿತಿಯ ಪ್ರದರ್ಶನಕ್ಕೆ

ಚಿತೆ ಉರಿಯುವಾಗ
ಸುತ್ತ ನೆರೆದವರಿಂದ
ಉರಿದುಹೋದವನ ಬದುಕಿನ
ಪೋಸ್ಟ್ ಮಾರ‍್ಟಮ್

ಬೆಂಕಿ ಅಂದರೆ ಹಾಗೆಯೇ
ಅದರ ಎದೆಯ ಆಳದಲ್ಲೇ
ಋಜುತ್ವದ ಪರೀಕ್ಷೆಗಳು
ಕ್ಯಾರೆಕ್ಟರ್ ಸರ್ಟಿಫಿಕೇಟುಗಳು

ನೀನು ಉರಿಯುತ್ತಿದ್ದೀಯ
ಕಣ್ಣುಗಳಿಂದ ಕಿಡಿಗಳು ಹೊಮ್ಮುತ್ತಿವೆ
ದೇಹಕ್ಕೂ ತಟ್ಟಿದೆ ತಾಪ

ಈಗ ತಣ್ಣಗಾಗು
ಸಾಕು ಉರಿದಿದ್ದು
ಆತ್ಮಕ್ಕೆ ದೇಹ ಉತ್ತರ ಕೊಟ್ಟುಕೊಳ್ಳಲಿ

ಸೀತೆಯ ಸ್ವಯಂಚಿತೆಯ ಎದುರು
ರಾಮನ ಆತ್ಮಸಾಕ್ಷಿ ಉರಿಯುತ್ತಿದೆ

Monday, January 16, 2012

ಕತ್ತಲಿಗಾಗಿ ಹಂಬಲಿಸಿ...


ಬೆಳಕು-ಬಿಸಿಲು
ಎದೆಯೊಳಗೆ ಇಳಿಯುತ್ತಿದೆ
ನಾನು ಭೀತಿಯಿಂದ
ಕತ್ತಲಿಗೆ ಆತು ನಿಂತಿದ್ದೇನೆ

ಕತ್ತಲು ನನ್ನ ಆತ್ಮಸಂಗಾತಿ
ಬೆಳಕಿನಿಂದ ಸುಟ್ಟ ನನ್ನ ರೆಕ್ಕೆಗಳಿಗೆ ಮುಲಾಮು
ರಾತ್ರಿಗಳಲ್ಲಿ ಬಂದು ತಬ್ಬಿ
ನೆತ್ತಿ ನೇವರಿಸುವ ಗೆಳೆಯ

ಬೆಳಕು ಇಳಿಯುತ್ತಿದೆ ಒಳಗೆ
ಬೆಳಕೋ ಪರಮ ಅಹಂಕಾರಿ
ಎದೆಯ ವ್ರಣ-ಕೀವು ನೋಡಿ
ಗಹಗಹಿಸಿ ನಕ್ಕು ಗೇಲಿ ಮಾಡುತ್ತದೆ

ಬೆಳಕು ನನ್ನ ದೃಷ್ಟಿ ಕಿತ್ತುಕೊಂಡಿದೆ
ಪ್ರಿಯವಾದ ಏನನ್ನೂ ನೋಡಲಾರೆ
ಹಾಗೆ ನೋಡಲು ನನಗೆ
ಕತ್ತಲೆಯೇ ಬೇಕು, ಅದರ ಭವ್ಯ ದೃಷ್ಟಿಯೇ ಬೇಕು

ಕಣ್ಣುಮುಚ್ಚಿ ಕತ್ತಲನ್ನು ಧೇನಿಸುತ್ತೇನೆ
ಉಂಡೆ ಉಂಡೆಯಂತೆ
ವರ್ಣವರ್ಣಗಳಲ್ಲಿ ಬೆಳಕು ಹಾಜರಾಗುತ್ತದೆ
ಪಾಪಿ ಚಿರಾಯು

ಹೊಕ್ಕುಳ ಮೇಲೆ
ದೀಪದ ಬಳ್ಳಿ ಯಾರು ಹಚ್ಚಿದರೋ
ನಾನಂತೂ ಆರಿಸಲಾರೆ
ಕಣ್ಣು ಕಪ್ಪು ಕಪ್ಪು

ಹೊರಡಬೇಕು ಈಗ
ಬೆಳಕಿಲ್ಲದ ಜಾಗಕ್ಕೆ
ಕತ್ತಲನ್ನೇ ಹಾಸಿ ಹೊದ್ದು
ನೆಮ್ಮದಿಯಿಂದ ಮಲಗಬೇಕು

ಆಕೃತಿ


ಹೀಗೆ ಕಣ್ಣೆದುರು ಎದ್ದುನಿಂತ
ಆಕೃತಿಗಳೆಲ್ಲ
ಸುಳ್ಳುಸುಳ್ಳಾದ ಮೇಲೆ
ಚಿತ್ರ ಬರೆಯುವುದನ್ನೇ ಬಿಟ್ಟಿದ್ದೇನೆ

ಗೀಚಿದ ರೇಖೆಗಳೆಲ್ಲ
ಸುಳ್ಳಾಗಿ
ಅಣಕಿಸುವಾಗ
ಸತ್ಯ ತೆರೆ ಹಿಂದೆ ನಿಂತು
ಅಮೂರ್ತ ನಗೆ ಚಿಮ್ಮುತ್ತದೆ

ಮೊದಲೆಲ್ಲ
ರೇಖೆ ಎಳೆದು, ಬಣ್ಣ ತುಂಬಿ
ಅದು ಜೀವತುಂಬುವಾಗಲೆಲ್ಲ
ಖುಷಿಯಿಂದ ಕುಣಿದು ಕುಪ್ಪಳಿಸಿದ್ದೇನೆ

ಬಣ್ಣ ಕರಗಿ, ರೇಖೆಗಳು ಅಸ್ಪಷ್ಟವಾಗಿ
ಕಂಡ ಆಕೃತಿಯೇ ಸುಳ್ಳಾದಮೇಲೆ
ಖುಷಿ ಸತ್ತಿದೆ
ರೇಖೆ ಎಳೆವ ಬೆರಳುಗಳೂ ಸತ್ತಿವೆ

ಆಕೃತಿಗಳು
ನನ್ನ ಕೃತಿಗಳಲ್ಲ, ಅದನ್ನು ಕಡೆಯುವ ಸ್ವಾತಂತ್ರ್ಯ ನನಗಿಲ್ಲ
ಹೀಗಂತ ಸಮಾಧಾನ ಹೇಳಿಕೊಳ್ಳುತ್ತೇನೆ

ಚಿತ್ರಗಳಿಂದಾಚೆ
ಹುಡುಕಬೇಕು
ಸಿಕ್ಕಷ್ಟು ಮುಟ್ಟಿ ತಡವಿ ಸುಮ್ಮನಾಗಬೇಕು
ಯಾಕೆಂದರೆ ಇಲ್ಲಿ ಯಾವುದಕ್ಕೂ ಆಕಾರವಿಲ್ಲ
ನನಗೂ, ನಿನಗೂ...

Saturday, January 14, 2012

ಚಹರೆ


ನಿನ್ನ ಮೊಗದಲ್ಲಿ
ನಿನ್ನ ಚಹರೆಯೇ ನಾಪತ್ತೆ

ಜೋರುಗಾಳಿಗೆ ಹೂವು ಅದುರಿ
ಕೆಳಗೆ ಬಿತ್ತು ಈಗಷ್ಟೆ
ನಿನಗದು ಕೇಳಿಸಲೇ ಇಲ್ಲ
ನಿನ್ನೆಮೊನ್ನೆಯವರೆಗೆ ಮರಿಗುಬ್ಬಿಗಳ
ನಿಟ್ಟುಸಿರ ಸದ್ದೂ ಕೇಳುತ್ತಿತ್ತಲ್ಲವೇ ನಿನಗೆ?

ಎದುರು ನಿಂತಿದ್ದೇನೆ
ನನ್ನ ಗುರುತಿಸುತ್ತಿಲ್ಲ ನೀನು
ಆ ಕಣ್ಣುಗಳೂ ನಿನ್ನವಲ್ಲ
ಅಪರಿಚಿತ ದೃಷ್ಟಿ
ಮೈಲುಮೈಲುಗಳ ದೂರದಲ್ಲೇ
ಗುರುತು ಹಿಡಿಯುತ್ತಿದ್ದ ಕಣ್ಣುಗಳಲ್ಲವೇ ಅವು

ಕಮಟು ಅತ್ತರಿನ ವಾಸನೆ
ನನಗೆ ಉಸಿರುಗಟ್ಟುತ್ತಿದೆ
ನಿನಗೂ ಚೇಳು ಕುಟುಕಿದಂತಾಗಬೇಕಿತ್ತು
ಆದರೂ ನಿರ್ಜೀವ ಪ್ರತಿಕ್ರಿಯೆ

ಇಲ್ಲ, ಇದು ನೀನಲ್ಲ
ಇದು ನಿನ್ನ ಚಹರೆಯಲ್ಲ

ಯಾರೋ ನಿನ್ನನ್ನು ಸೀಳುತ್ತಿದ್ದಾರೆ
ಕೈಯಲ್ಲಿ ಗರಗಸ
ನಿನ್ನ ದೇಹ ಗಾಳಿಯಲ್ಲಿ
ತೂಯ್ದು ಓಲಾಡುತ್ತಿದೆ
ನಿನ್ನ ಪ್ರತಿಕ್ರಿಯೆ ಶೂನ್ಯ

ಹೊರಡು ಇಲ್ಲಿಂದ
ಬೆಳಕಿನಲ್ಲಿ ಶಬ್ದ ಹುಡುಕಬೇಡ
ಹುಡುಕಿ ನಿನ್ನ
ಚಹರೆ ಕಳೆದುಕೊಳ್ಳಬೇಡ

ಬೆಳಕಿಗೆ ಕಣ್ಣು ಸುಟ್ಟುಕೊಂಡವರು
ಸಾವಿರ ಸಾವಿರ ಜನರು ಜಗದಲ್ಲಿ

ಕಣ್ಣು
ಕಳೆದುಕೊಳ್ಳಬೇಡ

Friday, January 13, 2012

ತುತ್ತು


ಒಂದೊಂದೇ ಅಗುಳು
ಹೀಗೆ ಬೆರಳಲ್ಲಿ ನಯವಾಗಿ ಸ್ಪರ್ಶಿಸಿ
ಗುಟುಕು ಗುಟುಕಾಗಿ
ನಿನ್ನ ಬಾಯಿಗಿಡುತ್ತಿದ್ದೇನೆ

ನನ್ನ ಹೊಟ್ಟೆ ಭರ್ತಿ ಈಗ
ನಿನ್ನ ಕಣ್ಣ ಹನಿಗಳನ್ನೇ ಕುಡಿದು

ಇಕೋ ತುತ್ತು
ಕಣ್ಮುಚ್ಚು
ಹೀಗೆ ನನ್ನ ನೋಡಬೇಡ
ಪ್ರಶ್ನೆಗಳಿಗೆ ಉತ್ತರವಿಲ್ಲ

ಅಗುಳು ಅಗುಳ ಮೇಲೂ
ಯಾರದ್ದೋ ಹೆಸರಿರುತ್ತಂತೆ
ಇದರ ಮೇಲೆ ನಿನ್ನ ಹೆಸರಿದೆಯಾ?
ಗೊತ್ತಿಲ್ಲ ನನಗೆ

ಸೆರೆ ಉಬ್ಬಿಸಬೇಡ
ಅನ್ನ ಗಂಟಲಿಗಿಳಿಯದು
ಉಸಿರಿಗೂ, ಅನ್ನಕ್ಕೂ
ಒಂದೇ ದಾರಿ ದೇಹದಲ್ಲಿ

ಹೊಟ್ಟೆ ತುಂಬಾ ತಿನ್ನು ಮಗುವೇ
ನನ್ನ ಕೈಯಲ್ಲಿ ತಿಂದೆಯೆಂಬುದನ್ನು ಮರೆತುಬಿಡು
ಮಲಗು ಈಗ ಗಡದ್ದಾಗಿ
ನಕ್ಷತ್ರಗಳ ಮೂಲಕ ಕನಸ ಹೆಣೆದು ಕಳಿಸುತ್ತೇನೆ

ತುತ್ತೆಂದರೆ ಸುಮ್ಮನಲ್ಲ
ತುಟಿ ಸೋಕಿದ
ಒಂದೊಂದೇ ಅಗುಳ ಮೇಲೂ
ಕಾಲನ ಹೆಣಿಗೆಯುಂಟು

Thursday, January 12, 2012

ದಾಹ


ಎಷ್ಟು ನೀರು ಕುಡಿದರೂ
ಇಂಗದ ದಾಹ
ಗಂಟಲಿಗಿಳಿದಷ್ಟೂ
ದಾಹ

ಏನು? ಒಳಗೆ ಬೆಂಕಿ ಹೊತ್ತಿದೆಯೇ?
ಇಳಿದ ನೀರು ಲಾವಾರಸದಂತೆ
ಬುಸುಗುಡುತ್ತಿದೆ
ಅದನ್ನು ಆರಿಸಲೂ ನೀರೇ ಬೇಕು

ಮೈ ಬಿಸಿಯಾಗುತ್ತಿದೆ
ಜಲಪಾತಕ್ಕೆ ಮೈಯೊಡ್ಡುವ ಬಯಕೆ
ಚರ್ಮಕ್ಕೂ ದಾಹ
ರೋಮರೋಮಗಳಿಗೂ ದಾಹ

ದಾಹ ತಣಿಯದ ದಾಹ
ಉರಿವ ಸೂರ‍್ಯನಿಗೆ ನನ್ನದೇ ರಕ್ತ ಬೇಕು
ಒಂದೊಂದೇ ಹನಿ ರಕ್ತ ಬಸಿದು ಕೊಟ್ಟು
ನಾನು ನಿರ್ಜಲನಾಗುತ್ತಿದ್ದೇನೆ

ನನ್ನ ಕವಿತೆಗೂ ದಾಹ
ಅದು ನನ್ನನ್ನೇ ಕುಡಿಯಬಯಸುತ್ತದೆ
ನಾನು ಇಂಚಿಂಚೇ ಕರುಗುತ್ತೇನೆ
ಕರಗಿ ಕವಿತೆಯಲ್ಲಿ ಸೇರಿಹೋಗುತ್ತೇನೆ
ಬೆತ್ತಲಾಗುತ್ತೇನೆ

ಅಳಲು ಒಂದು ಹನಿ
ಕಣ್ಣೀರಾದಾರೂ ಬೇಕು
ಕಣ್ಣ ರೆಪ್ಪೆ ಮಿಡುಕುತ್ತಿದೆ
ಏನು? ಕಣ್ಣೀರೂ ಖಾಲಿಯಾಯಿತೇ?
ಕಣ್ಣಿಗೂ ದಾಹ

ದಾಹ, ಎಂದೂ ತೀರದ ದಾಹ
ಜೀವಾತ್ಮಕ್ಕೂ ಆವರಿಸಿದ ದಾಹ

Tuesday, January 10, 2012

ನಿನ್ನ ಸನ್ನಿಧಿ



ಮಂಜು ಮುತ್ತಿದ ಬೆಟ್ಟ
ಹೊಳೆವ ಹೊಳೆ, ಸುರಿವ ಝರಿ
ಸುರುಳಿ ಸುರುಳಿ ಸುತ್ತುವ ತೊರೆ
ನಿನ್ನ ಸನ್ನಿಧಿ

ಕಡಲಿನಂತೆ ವಿಸ್ತಾರ ಕಾಡು
ಗುಡ್ಡದಂಥ ಮರ, ಮರದಂಥ ಬಳ್ಳಿ
ಹೂವು, ಎಲೆ, ಕಾಯಿ, ಹಣ್ಣು, ಹೀಚು
ನಿನ್ನ ಸನ್ನಿಧಿ

ಹಕ್ಕಿಯ ಕೇಕೆ
ಜೀರುಂಡೆಯ ಜೀರ್ ಧ್ವನಿ
ಹುಳಹುಪ್ಪಟೆಗಳ ಕುಟುಕುಟು
ನಿನ್ನ ಸನ್ನಿಧಿ

ಕಾಡತಬ್ಬಿದ ಮಹಾಮೌನ
ಗಿಡಗಳೆಡೆಯಲ್ಲಿ ಹರಡಿದ ನೆರಳು
ಕಲ್ಲು, ಮಣ್ಣು,
ನಿನ್ನ ಸನ್ನಿಧಿ

ನೀರು, ನೀರು, ನೀರು
ಕಲ್ಲನಡುವೆ ಸುಳಿವ ನೀರು
ಭೂಮಿಯಿಂದೆದ್ದ ನೀರು
ಅಮೃತದಂಥ ನೀರು
ಹೊಸಹುಟ್ಟು ಕೊಟ್ಟ ನೀರು
ನಿನ್ನ ಸನ್ನಿಧಿ

ಗಾಳಿ ಗಾಳಿ ಗಾಳಿ
ಧಿಮ್ಮನೆ ಎದ್ದ ಗಾಳಿ
ನರನಾಡಿಗಳಲ್ಲೂ ಹರಿದ ಗಾಳಿ
ನಿನ್ನ ಕಾಲಸಪ್ಪಳ ಕೇಳಿಸಿದ ಗಾಳಿ
ನಿನ್ನೆದೆಯ ಸದ್ದು ಹೊರಡಿಸಿದ ಗಾಳಿ
ನಿನ್ನ ಸನ್ನಿಧಿ

ಮೊಗೆದಷ್ಟೂ ನೀನು-ಕುಡಿದಷ್ಟೂ ನೀನು
ಕಂಡಷ್ಟೂ ನೀನು-ಕೈ ಚಾಚಿದಷ್ಟೂ ನೀನು

ನನ್ನ ತೋಯಿಸಿದ ನೀನು
ನಾನು ಧ್ಯಾನಿಸಿದ ನೀನು

ಕಾಡೆಂದರೆ ನಿನ್ನ ಸನ್ನಿಧಿ

ಭ್ರೂಣದ ಮಾತು


ಬೆರಳಿಗೆ ಬೆರಳು
ಬೆಸೆಯುವಾಗೆಲ್ಲ
ಕೊರಳು ಉಬ್ಬುತ್ತದೆ
ಹೊಟ್ಟೆಯಲ್ಲಿ ಸಣ್ಣ ಮಿಂಚು
ಒಳಗೇನೋ ಮಿಸುಕಾಡಿದ,
ಕಿಬ್ಬೊಟ್ಟೆಯ ಒಳಗೋಡೆಗೆ ಮೆತ್ತಗೆ ಒದ್ದ ಅನುಭೂತಿ

ನನ್ನ ಒಡಲಲ್ಲೂ ಒಂದು ಭ್ರೂಣವಿದೆಯೇ?
ಕಿಬ್ಬೊಟ್ಟೆ ಮೇಲೆ ನೀನು ಮಂಡಿಯೂರಿದಾಗೆಲ್ಲ
ಆ ಕೂಸು ನಿನ್ನೊಂದಿಗೆ ಮಾತಿಗೆ ನಿಲ್ಲುತ್ತದೆಯೇ?

ಜಗತ್ತೆಲ್ಲ ಸುತ್ತಾಡು
ಕಡೆಗೊಮ್ಮೆ ನನ್ನ ಮಡಿಲಿಗೇ ವಾಪಾಸು ಬರುತ್ತೀ
ಎಂದು ನೀನೇ ಹೇಳಿದ ನೆನಪು
ಒಳಗಿರಬಹುದಾದ ಭ್ರೂಣ ಕಿಲಕಿಲನೆ ನಗುತ್ತದೆ

ಹೌದಲ್ಲವೇ
ಹಾಗೆ ಜಗತ್ತು ಸುತ್ತುವಾಗ
ಒಡಲಲ್ಲಿ ಇದೊಂದು ಭ್ರೂಣ ಪರಿಭ್ರಮಿಸುತ್ತಲೇ ಇತ್ತಲ್ಲವೇ?
ಒಳಗೇ ಇರುವಾಗ ಮತ್ತೆ ವಾಪಾಸು ಹೋಗುವುದೆಲ್ಲಿಂದ?

ಮತ್ತೆ ಮತ್ತೆ ಕಿವಿಯಲ್ಲಿ ಯಾರೋ
ಕೂಗಿ ಕೂಗಿ ನನ್ನ ಹೆಸರು ಕರೆದಂತಾಗುತ್ತದೆ
ನಾನು ಮಂಕುಬಡಿದು ಕುಳಿತಿದ್ದೇನೆ
ಭ್ರೂಣ ಮತ್ತೆ ಮತ್ತೆ ಮಾತಾಡುತ್ತದೆ
ಕಲಕಲ ಓಡಾಟ, ಕಿಲಕಿಲ ನಗು

ನಾನು ನನ್ನನ್ನೇ
ಇರಿದುಕೊಳ್ಳುತ್ತಿದ್ದೇನೆ

Monday, January 9, 2012

ಕವಿತೆಯಾಗಲಾರೆ ನಾನು


ಕವಿತೆಯಾಗಲಾರೆ ನಾನು
ಜಾಳುಜಾಳು
ಇಡಿಇಡಿಯಾಗಿ ಹಿಡಿತಕ್ಕೆ ಸಿಕ್ಕಂತೆ
ಬರೀ ವಾಚ್ಯ

ಹಣೆ ಮೇಲಿನ
ನಾಲ್ಕು ಅಡ್ಡಗೆರೆ
ಮೂರು ಉದ್ದಗೆರೆ
ಕಥೆ-ಕಣಿ ಹೇಳುತ್ತವೆ

ನಿನ್ನ ಮಡಿಲಲ್ಲಿ ನೆಂದು
ತೊಪ್ಪೆಯಾದ ದಿನ
ನೆನಪಿದೆ, ನಾನು ಕವಿತೆಯಾಗಿ ಝಲ್ಲನೆ
ಉಕ್ಕಿದ್ದೆ
ಆಹಾ, ಏನು ಪ್ರತಿಮೆ? ಏನು ರೂಪಕ?
ಭಾವಸಾಗರದಲ್ಲಿ ತೇಲುವಾಗ
ದೇಹದ ಕಣಕಣವೂ ಕಾವ್ಯ

ಮತ್ತೆ ಹೊರಗೆ ಬಿಸಿಲಿಗೆ ಬಂದು
ನಿಂತೆ ನೋಡು
ಕಾವು, ಧಗಧಗ ಉರಿ
ಕವಿತೆ ಕರಗಿ ಕಥೆಯಾದೆ
ಆಮೇಲೆ ಅದೂ ಮುಗಿದು
ಬಿಗಿ ನಿಟ್ಟುಸಿರು, ಮಹಾಮೌನ

ಹೂಂ ಕಣೆ
ನಾನು ಕವಿತೆಯಾಗಲಾರೆ

Friday, January 6, 2012

ಮಗುವಿಗೆ....


ಪ್ರಾಣಬಿಂದು ಎಲ್ಲಿದೆ?
ಬೆರಳಲ್ಲೋ, ಕೊರಳಲ್ಲೋ?
ಹೊಕ್ಕುಳಲ್ಲೋ, ಪಾದದಲ್ಲೋ?
ಅಥವಾ ನೆತ್ತಿಯಲ್ಲೋ?

ಮಗೂ
ನಿನ್ನ ನೆತ್ತಿ ಮೇಲೆ
ಕೈಯಿಟ್ಟಾಗ ಕೈಗೆ ತಾಕಿದ್ದು
ಪ್ರಾಣಬಿಂದುವೇ?

ಹಾಗೆ ಕೈಯಿಡುವಾಗ
ನನ್ನದೂ ಒಂದಷ್ಟು ಆಯಸ್ಸು
ನಿನಗೆ ದಾಟಿಸುವಂತಿದ್ದರೆ
ಎಷ್ಟು ಚೆನ್ನಾಗಿತ್ತು?

ಕಣ್ಣು ಅರಳಿಸಿ ನೋಡಿದಾಗ
ನನ್ನ ದೃಷ್ಟಿಯೇ ತಾಕಿದಂತಾಗಿ
ಆಕಾಶ ನೋಡುತ್ತೇನೆ
ದಿಟ್ಟಿಸುವ ಧೈರ‍್ಯವೂ ಉಡುಗುತ್ತದೆ

ಹೊಕ್ಕುಳ ಬಳ್ಳಿಗಳು
ಹೀಗೂ ಹೆಣೆದುಕೊಳ್ಳುತ್ತವೆಯೇ?
ನಿನ್ನ ಕಣ್ಣಲ್ಲಿ
ಅರ್ಥಗಳನ್ನು ಹುಡುಕುತ್ತಿದ್ದೇನೆ

ಅಗೋ,
ಅಲ್ಲಿ ಹಕ್ಕಿ
ತನ್ನ ಮರಿಗೆ ಗುಟುಕು ಕೊಡುತ್ತಿದೆ
ಒಂದೊಂದೇ ಗುಟುಕು ಇಳಿದಂತೆ
ಮರಿಹಕ್ಕಿ ರೆಕ್ಕೆ ಪಡಪಡಿಸಿ
ಜೀವಸಂಚಾರ

ಮಗೂ,
ಬೆಚ್ಚಗಿರು ಬದುಕಿನುದ್ದಕ್ಕೂ
ರಕ್ಷೆಗಿರಲಿ ನನ್ನ ಪ್ರಾಣಬಿಂದು
ನಿನ್ನ ಈ ನಿರ್ಮಲ ನಗು
ಹಾಗೇ ಜಗಮಗಿಸಲಿ
ಬೆಳಕು ಕೊಡಲಿ ಜಗಕೆ

ಮೂಲೆಯಲ್ಲಿ ಕೂತ
ಜಂಗಮ ನಾನು
ನಿನ್ನ ಹರ್ಷವನ್ನು
ಸಂಭ್ರಮಿಸುತ್ತೇನೆ

ದೇಹಾತ್ಮ


ಅಯ್ಯಾ..

ತಕೋ ಹಿಡಿ
ನನ್ನ ಹಣೆಯನ್ನು
ನಿನ್ನ ಪಾದಕ್ಕೆ ಒತ್ತಿದ್ದೇನೆ
ಮಂಡಿಯೂರಿದ್ದೇನೆ

ಹುಡುಕಿದೆ ಅಹಂಕಾರದ ಕಣ್ಣು
ಪಾದದಲ್ಲೇದಾರೂ ಕಂಡರೆ
ಹೊಸಕಿ ಹಾಕಿ
ನಿನಗೆ ಬಿಡುಗಡೆ ಕೊಡೋಣವೆಂದುಕೊಂಡೆ
ಕಾಣಲಿಲ್ಲ, ನನ್ನ ಕಣ್ಣೇ ಮಂಜು

ಅಯ್ಯಾ

ಹಿಡಿ ನನ್ನದೇ ತೊಗಲು
ಕಿತ್ತು
ಅರಿವೆ ಮಾಡಿ
ಹೊದೆಸಿದ್ದೇನೆ


ಏನು? ಚಳಿಯೇ ನಿನಗೆ?
ಆದರೂ ನಡುಗಿದ ಸೂಚನೆಯಿಲ್ಲ
ತೊಗಲು ಕಿತ್ತುಕೊಂಡ ನಾನೇ
ಗಡಗಡ ಅದುರುತ್ತಿದ್ದೇನೆ

ಅಯ್ಯಾ

ಇಕೋ ನನ್ನದೇ ಹಸಿಮಾಂಸ
ನೈವೇದ್ಯವಾಗಿ ಇಕ್ಕಿದ್ದೇನೆ
ಜತೆಗೆ ರಕ್ತರಕ್ತ
ಝಲ್ಲನೆ ತೋಯಿಸಿದ್ದೇನೆ

ನೀನು ತಿಂದಿದ್ದು ಕಾಣೆ
ನೀನು ಹಸಿದಿದ್ದಾರೂ ಯಾವಾಗ?
ಹಸಿವು-ನಿದ್ದೆ-ಮೈಥುನ
ಮೀರಿದವನಲ್ಲವೇ ನೀನು?

ಅಯ್ಯಾ

ನನಗೆ ಬಿಡುಗಡೆ ಬೇಕು
ಇದರಿಂದ, ಅದರಿಂದ, ಎಲ್ಲದರಿಂದ
ಕಡೆಗೆ ನಿನ್ನಿಂದಲೂ

ನಾನು ದೇಹ
ನೀನು ಆತ್ಮ
ನಿನ್ನೊಳಗೆ ನಾನು ಸೇರಲಾರೆ
ನನ್ನೊಳಗೆ ನೀನು ಸೇರಲಾರೆ

ಒಂದೇ ದೇಹವಾಗಿಸು
ಅಥವಾ ಆತ್ಮವಾಗಿಸು
ಇಲ್ಲವೇ ದೇಹಾತ್ಮಗಳಿಲ್ಲದ
ಅಮೃತಬಿಂದುವಾಗಿಸು

ಅಯ್ಯಾ

ಇಕೋ ಹಿಡಿ
ಇಡೀ ದೇಹ ನಿನಗರ್ಪಿಸಿದೆ
ಆತ್ಮ ಅರ್ಪಿಸಿ ಎಷ್ಟೋ ಕಾಲವಾಯಿತು.

Thursday, January 5, 2012

ಸಾವಿನೊಡನೆ ಮಾತು


ಸಾವು ಆಗಾಗ
ಹೀಗೆ ಕದತಟ್ಟಿ ಬಂದು
ನಿಲ್ಲುವುದುಂಟು
ನಾನು ಕುಶಲೋಪರಿ ಕೇಳುತ್ತೇನೆ

ಒಮ್ಮೊಮ್ಮೆ ಅದು ಬಂದಷ್ಟೇ
ವೇಗವಾಗಿ ಸರಸರನೆ ವಾಪಾಸು
ಹೋಗುವುದುಂಟು

ಕೆಲವೊಮ್ಮೆ
ಸಲೀಸಾಗಿ ಹೋಗುವುದಿಲ್ಲ
ಮಾತು, ಮಾತು, ಮಾತು
ವಾಚಾಳಿ

ಮಾತೋ, ಬರಿಯ ವಟವಟ
ಕೇಳಿಕೇಳಿ ಸಾಕಾಗಿ ಹೋಗುವಷ್ಟು
ಬೇಕಿದ್ದರೆ ಎಳೆದುಕೊಂಡು ಹೋಗು
ಮಾತುಮುಗಿಸು
ಕೇಳಲಾರೆ, ಸಾಕುಮಾಡು
ಎಂದು ಗೋಗರೆಯುತ್ತೇನೆ

ಸಾವಿಗೆ ಮಾತಿನ ಚಟ
ಒಡಲಬೆಂಕಿಗೆ ಮತ್ತೆ ಮತ್ತೆ ತುಪ್ಪ ಸುರಿದು
ಗಾಳಿಬೀಸಿ
ಎದ್ದು ಹೋಗುತ್ತದೆ

ನಾನು ಉರಿದು ಉರಿದು
ಚಟಚಟನೆ ಮೈಮುರಿದು ಏಳುತ್ತೇನೆ
ಸಾವು ಹತ್ತಿರದಲ್ಲೇ ಇದ್ದೇನೆ, ಮತ್ತೆ ಬರುತ್ತೇನೆ
ಎನ್ನುತ್ತ ಮುಸಿಮುಸಿ ನಗುತ್ತದೆ

Wednesday, January 4, 2012

ಸೋರಿಕೆ


ಪ್ರಿಯವಾದದ್ದೆಲ್ಲ
ಕಣ್ಣೆದುರೇ ಬೊಗಸೆಯಿಂದ
ಸೋರಿ ಹೋಗುತ್ತದೆ
ನಾನು ಅಸಹಾಯಕ

ಕಣ್ಣೀರು ಉಮ್ಮಳಿಸಿಬರುವಾಗ
ಯಾರೂ ನೋಡದಿರಲಿ
ಕೆನ್ನೆ ಕೆಂಪಾಗಿ ಅದುರುವುದು
ಯಾರಿಗೂ ಕಾಣದಿರಲಿ

ಕಾಲನ ಬಳಿ ಮಂಡಿಯೂರಿ
ನಿಂತು ಅಂಗಲಾಚಿದ್ದು ಸಾಕು
ರೆಕ್ಕೆ ಮುರಿದುಬಿದ್ದ ಮೇಲೆ
ಹಾರುವ ಯೋಚನೆಯೂ ಸಾಕು

ಹೀಗೆಂದುಕೊಂಡೇ
ಮತ್ತೆ ಮತ್ತೆ ಮೊಗೆಯಹೊರುಡುತ್ತೇನೆ
ಬಾವಿ, ಹಳ್ಳ, ಹೊಳೆ, ಸಮುದ್ರ
ಕಡೆಗೇನೂ ಸಿಗದಿದ್ದರೆ ಕಣ್ಣೀರ ಅಂತರ್ಜಲ

ಬೊಗಸೆಯೇನೋ ತುಂಬುತ್ತದೆ
ಬೆರಳುಗಳ ಅಂಚಿನಿಂದ ಸೋರಿಹೋಗುತ್ತದೆ
ಮತ್ತೆ ಕೈ ಖಾಲಿ
ಒಡಲು ಬರಿದು
ಮಡಿಲು ಬಿಕ್ಕುತ್ತದೆ.

ಏನನ್ನೂ ಕೇಳದೇ....


ಏನನ್ನೂ ಕೇಳದೆ
ಪ್ರೀತಿಸುವುದು ಕಷ್ಟಕಷ್ಟ

ಪ್ರತಿನಿತ್ಯ ಖಾಲಿ ಹೊಟ್ಟೆ
ಬರಿಗೈ

ಬೇಡವಾದ ಪ್ರೀತಿ
ಎಷ್ಟು ಸುರಿದರೇನು?

ನಾನೇನು ಕೇಳಿದ್ದೆನಾ
ಅನ್ನಿಸಿಕೊಂಡಾಗಲೆಲ್ಲ
ಎದೆ ಮುಳ್ಳರಾಶಿಯ ಮೇಲೆ
ಮಗ್ಗುಲು ಬದಲಾಯಿಸುತ್ತದೆ

ಏನನ್ನೂ ಬೇಡದೆಯೂ
ಭಿಕ್ಷುಕನ ಮನಸ್ಸು

ಕೊಟ್ಟಿದ್ದು ಬೇಡವಾದಾಗ
ಇರುವುದೆಲ್ಲ ರದ್ದಿ
ಒಡಲು ಕಸದ ತೊಟ್ಟಿ

ಕಸದ ರಾಶಿಯಲ್ಲಿ
ಹುಳಹುಪ್ಪಟೆಗಳು ಬೆಳೆಯುತ್ತವೆ
ಎಲ್ಲ ಕೊಳೆಯುತ್ತದೆ
ಕೊಳೆತು ಗೊಬ್ಬರವಾಗುತ್ತದೆ

ಏನನ್ನೂ ಕೇಳದೇ
ಪ್ರೀತಿಸುವುದೆಂದರೆ
ಸಾಪೇಕ್ಷ ನೋವು
ನಿರಪೇಕ್ಷ ಮೌನ
ಮತ್ತು....

ಸದ್ದಿಲ್ಲದೆ
ಆವರಿಸುವ
ಸಾವು

Tuesday, January 3, 2012

ನಾನು


ನಂದೂ ಒಂದು ಹೆಸರು
ನೀನು, ಅವರು, ಎಲ್ಲರೂ
ಕರೆಯೋದ್ರಿಂದ
ಅದೇ ನಾನು

ಹೌದಾ?
ನಾನಂದರೆ ಬರೀ ನನ್ನ ಹೆಸರಾ?
ಅಥವಾ ಇನ್ನೂ ಏನೇನಾದರೂ
ಇರಬಹುದೇ?

ನನ್ನೊಳಗಿನ ನೀನು?
ನಿನ್ನೊಳಗಿನ ನಾನು?
ಮೊನ್ನೆ ಸತ್ತಿದ್ದ ನಾನು?
ಇವತ್ತು ಹುಟ್ಟಿದ ನಾನು?

ಅವತ್ತು ಛೀ
ಎಂದು ಅನಿಸಿಬಿಟ್ಟಿದ್ದ ನಾನು
ಇನ್ಯಾವತ್ತೋ ಉಬ್ಬಿ
ಬಿರಿದುಹೋಗಿದ್ದ ನಾನು

ನಿನ್ನೆಯಿದ್ದಂತೆ ಇವತ್ತಿಲ್ಲ
ಮೊನ್ನೆಯಿದ್ದಂತೆ ನಿನ್ನೆಯಿರಲಿಲ್ಲ
ಮೊನ್ನೆ ಕಣ್ಣ ಸುತ್ತ ಕಪ್ಪು ಉಂಗುರ ಮೂಡಿರಲಿಲ್ಲ
ನಿನ್ನೆ ಗಡ್ಡದಲ್ಲಿ ಬಿಳಿಕೂದಲು ಇರಲಿಲ್ಲ
ಮೊನ್ನೆ ಇದ್ದವನೂ ನಾನೇನಾ?
ನಿನ್ನೆಯವನೂ ನಾನೇನಾ?
ಇವತ್ತು ಹೀಗೆ ಈ ಕ್ಷಣಕ್ಕೆ ಇರುವವನು ನಾನೇನಾ?
ನಾಳೆ ಬೆಳಿಗ್ಗೆ ಹುಟ್ಟುವವನೂ ನಾನೇನಾ?

ನಿನ್ನೆ ಕುಕ್ಕುರುಗಾಲು ಬಡಿದುಕೊಂಡು ಕೂತು
ಕಣ್ತುಂಬ ಅತ್ತಿದ್ದೆಲ್ಲ
ಇವತ್ತು ನೆನಪಾಗಿ ನಗು ಉಕ್ಕುಕ್ಕಿ ಬರುತ್ತಿದೆ

ಹೌದು,
ನಾನು
ಸ್ಥಾವರನಲ್ಲ
ಜಂಗಮ
ಸಾಯುವವರೆಗೆ
ನಾನು ನಾನೇ
ಸತ್ತ ಮೇಲೆ ಮಾತ್ರ
ಅದು

Monday, January 2, 2012

ಮನಸ್ಸು ಮುಟ್ಟೋದು ಅಂದ್ರೆ


ಮನಸ್ಸು ಮುಟ್ಟೋದು ಅಂದ್ರೆ
ದೇಹ ಹಿಡಿ ಮಾಡಿಕೊಂಡು
ಮಂಡಿಯೂರಿ ನಿಲ್ಲೋದು

ಕೆನ್ನೆ ಮೇಲೆ ವಿನಾಕಾರಣ
ಬೆಳೆದುನಿಲ್ಲೋ
ಅಹಂಕಾರದ ದುರ್ಮಾಂಸವನ್ನು
ಕಿತ್ತು ಕಸದ ತೊಟ್ಟಿಗೆ ಎಸೆಯೋದು

ದೇಹಕ್ಕೆ ಮನಸ್ಸು ಆವಾಹಿಸಿಕೊಳ್ಳೋದು ಕಷ್ಟ
ದೇಹ ಮನಸ್ಸಲ್ಲಿ ಕರಗದ ಹೊರತು
ಪ್ರತಿ ಸ್ಪರ್ಶಕ್ಕೂ
ಯಂತ್ರದ ನಿರ್ಜೀವತೆ

ಶಬ್ದ ಕೇಳಿಸಿಕೋ
ಹಕ್ಕಿ ಮಿಡಿದ ಸದ್ದು
ಎಲೆ ಅರಳಿದ ಸದ್ದು
ಮಂಜಹನಿ ಹೊರಳಿದ ಸದ್ದು
ಚಿಟ್ಟೆ ರೆಕ್ಕೆ ಆಡಿಸಿದ ಸದ್ದು
ಹಸುವಿನ ಕೆಚ್ಚಲ ಮೊಲೆತೊಟ್ಟುಗಳು
ಒಂದಕ್ಕೊಂದು ತಾಗಿದ ಸದ್ದು

ಒಮ್ಮೆ ಉಸಿರು ಬಿಗಿಹಿಡಿದು
ನಿಟ್ಟುಸಿರು ಬಿಟ್ಟು ಮತ್ತೆ ಉಸಿರೆಳೆದುಕೋ
ವಿಧವಿಧದ ಗಂಧ ತಾಕಬೇಕು
ಮಣ್ಣ ಗಂಧ
ಮಕರ ಗಂಧ
ಗಾಳಿ ಗಂಧ
ನೀರ ಗಂಧ
ಸಕಲಜೀವಗಳ ಮಿಥುನ ಗಂಧ

ರೆಪ್ಪೆ ಪಡಪಡನೆ ಹೊಡೆದು ಒಮ್ಮೆ
ಅಕ್ಷಿಪಟಲ ತೆರೆದು ನೋ??
ಕೋಟಿಕೋಟಿ ನಕ್ಷತ್ರಗಳು
ಬಣ್ಣಬಣ್ಣದ ಕಣಗಳಾಗಿ ಹೊಳೆಯಬೇಕು

ಹೀಗೆ ಕಾಣದ, ಕೇಳದ, ಆಘ್ರಾಣಿಸದ ಹೊರತು
ಮನಸ್ಸು ಮುಟ್ಟಲಾಗದು

ಮನಸ್ಸು ಮುಟ್ಟಲು
ದೇಹ ಕರಗಿಸಬೇಕು,
ಎದೆ ಹೊನಲಾಗಿ
ಹರಿಯಬೇಕು.