Wednesday, December 31, 2008

ನಾಳೆ ಎಲ್ಲವೂ ಬದಲಾಗುತ್ತದೆ ಗೆಳತಿ...




ಯಾಕೋ ಎಲ್ಲವೂ ಎಂದಿನಂತಿಲ್ಲ ಗೆಳತಿ
ಅಲಾರಾಮು ಹೊಡಕೊಂಡರೆ
ಯಾರೋ ಕರುಳು ಸೀಳಿದಂತೆ
ಕಾಲಿಂಗ್ ಬೆಲ್ ರಿಂಗಣಿಸಿದರೆ
ಹೃದಯ ಚೂರು ಚೂರಾದಂತೆ
ಬಾಗಿಲು ಬಡಿದ ಶಬ್ದಕ್ಕೆ
ಮಿದುಳು ಹರಿದು ಹೋದಂತೆ

ಯಾಕೋ ಎಲ್ಲವೂ ಎಂದಿನಂತಿಲ್ಲ ಗೆಳತಿ
ಬೇಟೆನಾಯಿಗಳು ಕೋರೆ ಅಗಲಿಸಿಕೊಂಡು ಕೂತಿವೆ
ಆ ಕುನ್ನಿಗಳಿಗೆ ಆಹಾರ ಯಾರು? ನೀನೇ? ನಾನೇ?
ಮೇಲೆ ನಭದಲ್ಲಿ ದಿಕ್ಕಾಪಾಲಾದ ಮೋಡಗಳು
ಸುರಿಸಿದ್ದು ಮಳೆಯೇ? ಬೆಂಕಿಯ ಉಂಡೆಗಳೆ?

ಕಿಟಕಿ ತೆರೆದು ನೋಡುತ್ತಿದ್ದೇನೆ
ಎಲ್ಲರ ಹೆಗಲ ಮೇಲೂ ಬಗೆಬಗೆಯ ಶಸ್ತ್ರಾಸ್ತ್ರಗಳ ಮಣಭಾರ
ಈಗೀಗ ಅನ್ನಕ್ಕಿಂತ ಬಂದೂಕೇ ಶ್ರೇಷ್ಠ
ನೀರಿಗಿಂತ ಬಿಸಿಬಿಸಿ ರಕ್ತವೇ ಸಸ್ತಾ

ಬೆದರಬೇಡ ಗೆಳತಿ
ಹಾಗೇ ಮಲಗು, ನಿದ್ದೆ ಹತ್ತಲಿ ನಿನಗೆ
ಇವೆಲ್ಲವೂ ನಾಳೆ ಬೆಳಗಾಗುವುದರೊಳಗೆ ಬದಲಾಗುತ್ತವೆ
ನಿರೀಕ್ಷೆ ಇಟ್ಟುಕೋ
ನಿನ್ನ ಸೈರಣೆಗಿದೋ ಅಗ್ನಿಪರೀಕ್ಷೆ

ಸೂರ್ಯನನ್ನೂ ಅಪಹರಿಸಲಾಗಿದೆ
ಅವನೇ ಒತ್ತೆಯಾಳು
ಅವನನ್ನು ಹೊತ್ತೊಯ್ದವರ ಬೇಡಿಕೆ
ನನ್ನ ನಿನ್ನ ಗುಟುಕು ಜೀವ

ಆಶೆಗಳನ್ನು ಕಟ್ಟಿಕೋ
ಕರಿಮೋಡಗಳನ್ನು ದಾಟಿ ಸೂರ್ಯನನ್ನು ತಲುಪಿ
ಬಿಡಿಸಿ ತರೋಣ ಅವನನ್ನು
ಹರಿಸೋಣ ಬೆಳಕನ್ನು
ಬೆಳಗೋಣ ಎಲ್ಲರೆದೆ ಗೂಡನ್ನೂ

ದ್ವೇಷ ಸುಡುವುದಕ್ಕೂ ಧೈರ್ಯ ಬೇಕು ಕಣೆ ಗೆಳತಿ
ಇಳಿಯಬೇಕು ಅಂತರಂಗಕ್ಕೆ
ಆಳಕ್ಕೆ, ಮತ್ತೂ ಆಳಕ್ಕೆ
ಅಲ್ಲಿ ಅಂಧಕಾರವಿಲ್ಲ, ಬೆಳಕೇ ಎಲ್ಲ
ಯಾವುದು ಜಗತ್ತೋ ಅದಕ್ಕೆ ಕತ್ತಲೆಯ ಹಂಗಿಲ್ಲ

ವಿದಾಯ ಹೇಳೋಣ ಬಾ
ಕಾಡಿದ ಕೆಟ್ಟ ಕನಸುಗಳಿಗೆ
ಬಾಡಿಗೆ ಹಂತಕ ತ್ರಿಶೂಲಗಳಿಗೆ, ಬಾಂಬುಗಳಿಗೆ

ನಂಬು ಗೆಳತಿ
ಎಲ್ಲ ಸರಿಹೋಗುತ್ತದೆ
ಸಿಡಿಲು, ಬಿರುಗಾಳಿ, ಸಮುದ್ರದುಬ್ಬರ
ಎಲ್ಲ ಅಬ್ಬರಗಳ ನಡುವೆಯೂ
ಒಂದೇ ಒಂದು ತೆನೆ ನನ್ನ, ನಿನ್ನ
ಹೊಟ್ಟೆ ತುಂಬಿಸುತ್ತದೆ

ಬಾ ಗೆಳತಿ
ನನ್ನ ತೋಳೊಳಗೆ ಹುದುಗಿ
ಗಡದ್ದಾಗಿ ನಿದ್ದೆ ಮಾಡು
ನಾಳೆ ಎಲ್ಲವೂ ಬದಲಾಗುತ್ತದೆ

Sunday, December 28, 2008

ರಾಮಚಂದ್ರಗೌಡರ ‘ಬ್ರಾಹ್ಮಿನ್ ಫೋಬಿಯಾ’

‘ಜಗತ್ತಿಗೆ ಆದರ್ಶಪ್ರಾಯರೆನಿಸಿದ ಬ್ರಾಹ್ಮಣರಿಗೆ ಬಿಜೆಪಿ ಹೆಚ್ಚಿನ ಆದ್ಯತೆ ನೀಡಿದೆ. ಒಟ್ಟು ೧೧ ಮಂದಿ ಬ್ರಾಹ್ಮಣರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಿ ಮೇಲ್ಪಂಕ್ತಿ ಹಾಕಲಾಗಿದೆ. ಹಾಗಾಗಿ ನಮ್ಮದು ಬ್ರಾಹ್ಮಣರ ಸರ್ಕಾರ.’

‘ಬ್ರಾಹ್ಮಣರು ಈ ರೀತಿಯ ಸ್ಥಾನಮಾನ ಪಡೆಯಲು ಅರ್ಹರು. ಏಕೆಂದರೆ ಬ್ರಾಹ್ಮಣರು ಚಿಂತನೆ ಮಾಡುವ ಜನ. ಅವರಿಗೆ ಸಾಧಿಸುವ ಛಲವಿದೆ. ಅಸಾಧ್ಯವಾದುದನ್ನು ಸಾಧಿಸುವ ಯುಕ್ತಿ ಶಕ್ತಿ ಇದೆ. ಸರ್ಕಾರಕ್ಕೆ ಬ್ರಾಹ್ಮಣರ ಮಾರ್ಗದರ್ಶನ ಅಗತ್ಯವಾಗಿದೆ. ಹಾಗೆಯೇ ಸ್ವಾಮೀಜಿಗಳ ಸಹಕಾರ ಕೂಡ ಬೇಕಿದೆ.’

ಕೂಟ ಮಹಾಜಗತ್ತು ಸಾಲಿಗ್ರಾಮ ಹಾಗು ಕೂಟ ಸಮಾಜ ಸಂಸ್ಥೆಗಳ ಒಕ್ಕೂಟ ಡಿ.೨೭ರ ಶನಿವಾರ ಏರ್ಪಡಿಸಿದ್ದ ೨ನೇ ವಿಶ್ವಕೂಟ ಸಮ್ಮೇಳನದಲ್ಲಿ ಭಾಗವಹಿಸಿದ್ದ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ಹೇಳಿರುವ ಮಾತುಗಳು ಇವು. (ಪ್ರಜಾವಾಣಿ/೨೮-೧೨-೨೦೦೮, ಪುಟ-೯)

ನಿಸ್ಸಂಶಯವಾಗಿ ಇದು ಅನಾಗರಿಕ ಮಂತ್ರಿಯೊಬ್ಬ ನೀಡಬಹುದಾದ ಅನಾಗರಿಕ ಹೇಳಿಕೆ. ನೇರವಾಗಿ ಇದು ಪ್ರಜಾಪ್ರಭುತ್ವದ ಅವಹೇಳನ. ತೀರಾ ಬ್ರಾಹ್ಮಣ ಸಮುದಾಯದ ಜನರೇ ಮುಜುಗರ ಪಟ್ಟುಕೊಳ್ಳುವಂತೆ, ಅಸಹ್ಯ ಪಟ್ಟುಕೊಳ್ಳುವಂತಿದೆ ಈ ಹೇಳಿಕೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟ ಒಬ್ಬನೇ ಒಬ್ಬ ಒಳ್ಳೆಯ ಬ್ರಾಹ್ಮಣನೂ ರಾಮಚಂದ್ರ ಗೌಡರ ಈ ಭಟ್ಟಂಗಿತನವನ್ನು ಒಪ್ಪಲಾರ ಎಂಬುದು ಸತ್ಯ. ಅದರರ್ಥ ಇದು ಬ್ರಾಹ್ಮಣರಿಗೇ ಅಪಥ್ಯವಾಗುವ, ಅಸಹನೀಯ ಅನಿಸುವ ಹೇಳಿಕೆ.

ಕರ್ನಾಟಕ ಸರ್ಕಾರವನ್ನು ಬ್ರಾಹ್ಮಣರ ಸರ್ಕಾರ ಎಂದು ಹೇಳುವ ಮೂಲಕ ಶೇ.೯೭ರಷ್ಟು ಬ್ರಾಹ್ಮಣೇತರರನ್ನು ಅವಮಾನಿಸಿ ರಾಮಚಂದ್ರಗೌಡರು ಹೊಸಮಾರ್ಗವೊಂದನ್ನು ತುಳಿದಿದ್ದಾರೆ. ಇಂಡಿಯಾದ ಇತಿಹಾಸದಲ್ಲಿ ಒಬ್ಬನೇ ಒಬ್ಬ ಮಂತ್ರಿಯೂ ತಾನು ಪ್ರತಿನಿಧಿಸುವ ಸರ್ಕಾರವನ್ನು ಬ್ರಾಹ್ಮಣರ ಸರ್ಕಾರ ಎಂತಲೋ, ಒಕ್ಕಲಿಗರ ಸರ್ಕಾರ ಎಂದೋ, ಬನಿಯಾಗಳ ಸರ್ಕಾರ ಎಂದೋ, ಮಾರ್ವಾಡಿಗಳ ಸರ್ಕಾರ ಎಂದೋ, ಹೊಲೆಯರ ಸರ್ಕಾರ ಎಂದೋ ಕರೆದಿರಲಿಲ್ಲ. ರಾಮಚಂದ್ರಗೌಡರು ಒಂದು ರಾಜ್ಯಸರ್ಕಾರವನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವ ಮೂಲಕ ಇತಿಹಾಸದಲ್ಲಿ ದಾಖಲಾಗುವಂಥ ಹೇಳಿಕೆ ನೀಡಿದ್ದಾರೆ; ತನ್ಮೂಲಕ ತಾವೂ ಸಹ ಇತಿಹಾಸದ ಪುಟಗಳನ್ನು ಸೇರಿದ್ದಾರೆ. ರಾಜ್ಯ ಸರ್ಕಾರ ಬ್ರಾಹ್ಮಣರದ್ದು ಎಂದು ಹೇಳಿದರೆ ಬ್ರಾಹ್ಮಣೇತರರು ಏನಂದುಕೊಂಡಾರು ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲದ ರಾಮಚಂದ್ರಗೌಡರು ಮುಂದೆ ತಮ್ಮ ಹೇಳಿಕೆಯನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೋ ಕಾದು ನೋಡಬೇಕು.

ರಾಮಚಂದ್ರಗೌಡರು ಹೇಳಿದಂತೆ ಬ್ರಾಹ್ಮಣರು ಇವತ್ತಿನ ರಾಜ್ಯ ಸರ್ಕಾರದಲ್ಲಿ ತಮ್ಮ ಸಂಖ್ಯಾಬಲವನ್ನು ಮೀರಿ ಆದ್ಯತೆ ಪಡೆದುಕೊಂಡಿದ್ದಾರೆ. ಸಹಜವಾಗಿ ಬ್ರಾಹ್ಮಣರಿಗೆ ಕೊಡಮಾಡಲಾದ ಹೆಚ್ಚುವರಿ ಸ್ಥಾನಮಾನಗಳು ಇತರ ಸಮುದಾಯಗಳ ಪಾಲು ಎಂದು ಬೇರೆ ಹೇಳಬೇಕಾಗಿಲ್ಲ. ಇದಕ್ಕಾಗಿ ರಾಮಚಂದ್ರಗೌಡರಾದಿಯಾಗಿ ಸರ್ಕಾರದ ಮುಖ್ಯಸ್ಥರು ಪಶ್ಚಾತ್ತಾಪಪಡಬೇಕೆ ಹೊರತು ಹೀಗೆ ನಿರ್ಲಜ್ಜೆಯಿಂದ ಸಮರ್ಥಿಸಿಕೊಳ್ಳಬೇಕಾಗಿರಲಿಲ್ಲ.
ಸರ್ಕಾರಕ್ಕೆ ಬ್ರಾಹ್ಮಣರ ಮಾರ್ಗದರ್ಶನ ಅಗತ್ಯವಾಗಿದೆ ಎಂದು ರಾಮಚಂದ್ರಗೌಡರು ಫರ್ಮಾನು ಹೊರಡಿಸಿದ್ದಾರೆ. ಹಾಗಿದ್ದರೆ ಸರ್ಕಾರಕ್ಕೆ ದಲಿತರ ಮಾರ್ಗದರ್ಶನ ಬೇಡವೆ? ಹಿಂದುಳಿದ ಜಾತಿಜನರ ಮಾರ್ಗದರ್ಶನ ಬೇಡವೆ? ಒಕ್ಕಲಿಗರು-ಲಿಂಗಾಯಿತರ ಮಾರ್ಗದರ್ಶನ ಬೇಡವೆ? ಕ್ರಿಶ್ವಿಯನ್ನರು-ಮುಸ್ಲಿಮರ ಮಾರ್ಗದರ್ಶನ ಬೇಡವೆ? ಆದಿವಾಸಿಗಳು-ಅಲೆಮಾರಿಗಳ ಮಾರ್ಗದರ್ಶನ ಬೇಡವೆ? ರಾಮಚಂದ್ರಗೌಡರ ಮಾತಿನಲ್ಲೇ ಹೇಳುವುದಾದರೆ ಈ ಎಲ್ಲ ಸಮುದಾಯಗಳ ಜನರಿಗೆ ಸಾಧಿಸುವ ಛಲವಿಲ್ಲವೆ, ಯುಕ್ತಿ-ಶಕ್ತಿ ಇಲ್ಲವೆ?

ರಾಮಚಂದ್ರಗೌಡರು ಹೀಗೆ ಹೊಣೆಗೇಡಿಯಂತೆ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಯಡಿಯೂರಪ್ಪನವರ ಸಂಪುಟದ ಸದಸ್ಯರಲ್ಲಿ ಹಲವರು ಪದೇ ಪದೇ ಹೀಗೆ ಅಪ್ರಬುದ್ಧ, ಅವಾಂತರಕಾರಿ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಸ್ವತಃ ಯಡಿಯೂರಪ್ಪನವರೇ ಆಗಾಗ ಇಂಥ ಹೇಳಿಕೆ ನೀಡುವ ಮೂಲಕ ತನ್ನ ಸ್ಥಾನದ ಘನತೆಯನ್ನು ಕೆಳಕ್ಕೆ ಇಳಿಸುತ್ತ ಬಂದಿದ್ದಾರೆ. ಹಾಗಾಗಿ ರಾಮಚಂದ್ರಗೌಡರ ಮಾತುಗಳು ಹೆಚ್ಚು ಆಶ್ಚರ್ಯವನ್ನೇನೂ ಉಂಟುಮಾಡುವುದಿಲ್ಲವಾದರೂ ಸರ್ಕಾರದ ಘನತೆಯ ಪ್ರಶ್ನೆಯನ್ನು ಹರಾಜಿಗಿಡುವ, ಸಂವಿಧಾನದ ಸಮಾನತೆಯ ತಳಹದಿಯನ್ನು ಅಭದ್ರಗೊಳಿಸುವ ಇಂಥ ಪ್ರಯತ್ನಗಳು ಪ್ರಜಾಪ್ರಭುತ್ವವಾದಿ ಮನಸ್ಸುಗಳನ್ನು ಘಾಸಿಗೊಳಿಸುತ್ತಲೇ ಇರುತ್ತವೆ.

ರಾಮಚಂದ್ರಗೌಡರಿಗೆ ಆಗಿರುವುದಾದರೂ ಏನು? ಯಾಕೆ ಅವರು ಬ್ರಾಹ್ಮಣರನ್ನು ಮಾತ್ರ ಸರ್ವಶ್ರೇಷ್ಠರೆಂದು ಭಾವಿಸುತ್ತಾರೆ? ಎಲ್ಲ ಸಮುದಾಯಗಳ ಜನರು ಆಯ್ಕೆ ಮಾಡಿ ಕಳುಹಿಸಿದ ಸರ್ಕಾರವನ್ನು ‘ಬ್ರಾಹ್ಮಣರ ಸರ್ಕಾರ’ ಎಂದು ಕರೆಯುವ ಮೂಲಕ ಅವರು ಯಾಕೆ ಬ್ರಾಹ್ಮಣೇತರರನ್ನು ಕ್ಷುಲ್ಲಕವಾಗಿ ನೋಡುತ್ತಾರೆ? ಕರ್ನಾಟಕದ ಆರು ಕೋಟಿಗೂ ಹೆಚ್ಚು ಜನಸಂಖ್ಯೆಯ ಪ್ರತಿಯೊಬ್ಬ ವ್ಯಕ್ತಿಗೂ ಈ ಸರ್ಕಾರ ಉತ್ತರದಾಯಿಯಾಗಿರುತ್ತದೆ, ಮಾತ್ರವಲ್ಲದೆ ಆ ಎಲ್ಲ ಜನಸಮುದಾಯಗಳ ಪಾಲಿಗೆ ಇದು ಅವರದೇ ಸರ್ಕಾರ ಎಂದು ರಾಮಚಂದ್ರಗೌಡರಿಗೆ ಯಾಕೆ ಅನಿಸುವುದಿಲ್ಲ?

ನನಗನ್ನಿಸುವ ಮಟ್ಟಿಗೆ ರಾಮಚಂದ್ರಗೌಡರು ತೀವ್ರ ಸ್ವರೂಪದ ‘ಬ್ರಾಹ್ಮಿನ್ ಫೋಬಿಯಾ’ಗೆ ಒಳಗಾಗಿದ್ದಾರೆ. ಇದು ಒಂದು ಬಗೆಯ ಖಾಯಿಲೆ. ಸಮಾಜಶಾಸ್ತ್ರೀಯ ಅಧ್ಯಯನದಲ್ಲಿ ತೊಡಗಿಕೊಂಡಿರುವ ಚಿಂತಕ ಡಾ.ಸಿ.ಜಿ.ಲಕ್ಷ್ಮಿಪತಿಯವರು ತಮ್ಮ ಕ್ಯಾಸ್ಟ್ ಕೆಮಿಸ್ಟ್ರಿ ಎಂಬ ಕೃತಿಯಲ್ಲಿ ಈ ‘ಬ್ರಾಹ್ಮಿನ್ ಫೋಬಿಯಾ’ ಕುರಿತು ಉಲ್ಲೇಖಿಸಿದ್ದಾರೆ. ಅವರ ಪ್ರಕಾರ ‘ಬ್ರಾಹ್ಮಿನ್ ಫೋಬಿಯಾ’ ಎಂದರೆ ಬ್ರಾಹ್ಮಣರ ಕುರಿತು ಬ್ರಾಹ್ಮಣೇತರರಿಗೆ ಇರಬಹುದಾದ ಅಂಜಿಕೆ, ಅಗಾಧ ಭಯ, ಅಳುಕು, ಕೀಳರಿಮೆ, ಬಲಿಪಶುತನದ ಕಲ್ಪನೆ ಹಾಗು ಅನುಭವಿಸುವಿಕೆ, ಮುಂದೆ ಎಂದಾದರೂ ಬ್ರಾಹ್ಮಣರಿಂದ ತೊಂದರೆಗೋ, ಕುತಂತ್ರಕ್ಕೋ ಒಳಗಾಗಬಹುದೆಂಬ ಅನುಮಾನಿತ ಸತ್ಯ, ಇತ್ಯಾದಿ.

‘ಬ್ರಾಹ್ಮಿನ್ ಫೋಬಿಯಾ’ಗೆ ಕೇವಲ ರಾಮಚಂದ್ರಗೌಡರು ಒಳಗಾಗಿದ್ದಾರೆ ಎಂದು ಭಾವಿಸಬೇಕಾಗಿಲ್ಲ. ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ಆದಿಯಾಗಿ ಸಾಕಷ್ಟು ಮಂದಿ ಈ ಬಗೆಯ ಖಾಯಿಲೆಯಿಂದ ನರಳುತ್ತಿದ್ದಾರೆ. ಹೊಸದಾಗಿ ಈಗ ‘ಮಠಾಧೀಶರ ಫೋಬಿಯಾ’ ಸಹ ನಮ್ಮ ಮುಖಂಡರನ್ನು ಆವರಿಸಿಕೊಂಡಿದೆ. ಎಲ್ಲೋ ಒಬ್ಬ ಎಚ್.ವಿಶ್ವನಾಥ್ ಅಂಥವರು ಇದನ್ನು ಮೀರಿದರಾದರೂ ಕರ್ನಾಟಕದ ಸಂದರ್ಭದಲ್ಲಿ ಮಠಾಧೀಶರ ಫೋಬಿಯಾದಿಂದ ತಪ್ಪಿಸಿಕೊಳ್ಳದ ಜನನಾಯಕರೇ ಇಲ್ಲ.

ಡಾ.ಸಿ.ಜಿ.ಲಕ್ಷ್ಮಿಪತಿಯವರು ಅಧಿಕಾರಶಾಹಿಯ ‘ಬ್ರಾಹ್ಮಿನ್ ಫೋಬಿಯಾ’ ಕುರಿತು ಹೀಗೆ ಬರೆಯುತ್ತಾರೆ: “ಮಧ್ಯಮ ವರ್ಗ/ಅಧಿಕಾರಶಾಹಿಯಲ್ಲಿರುವ ಬ್ರಾಹ್ಮಣೇತರರು ‘ಬ್ರಾಹ್ಮಿನ್ ಫೋಬಿಯಾ’ದಿಂದ ನರಳುತ್ತಿರುವ ಗುಂಪಿನಲ್ಲಿ ಪ್ರಥಮಸ್ಥಾನದಲ್ಲಿ ನಿಲ್ಲುತ್ತಾರೆ. ಅಧಿಕಾರಶಾಹಿಯ ಉನ್ನತಸ್ಥಾನದಲ್ಲಿ ಬ್ರಾಹ್ಮಣರು ಇರುವುದರಿಂದಲೂ, ಪರಂಪರಾನುಗತವಾಗಿ ಸರ್ಕಾರಿ ಕಾನೂನುಗಳನ್ನು ಬಲ್ಲ ಬ್ರಾಹ್ಮಣ ಜಾತಿಯವರನ್ನು ಜ್ಞಾನಿಗಳೆಂದು ಭಾವಿಸುವ ಬ್ರಾಹ್ಮಣೇತರರು ಕಾನೂನಿನಲ್ಲಿ ಅವರನ್ನು ಮೀರಿಸುವವರೇ ಇಲ್ಲವೆಂದು ಭಾವಿಸಿ ಅವರು ಹೇಳಿದ್ದನ್ನು ಸರಿಯಿರಲಿ, ತಪ್ಪಿರಲಿ, ಸತ್ಯವೆಂದೇ ಗ್ರಹಿಸುತ್ತಾರೆ.”

ರಾಮಚಂದ್ರಗೌಡರು ಹೇಳಿಕೇಳಿ ಭಾರತೀಯ ಜನತಾ ಪಕ್ಷದ ಮುಖಂಡ. ಹೀಗಾಗಿ ಗೌಡರಿಗೆ ‘ಕೇಶವಶಿಲ್ಪ’ದವರನ್ನು ಒಲಿಸಿಕೊಳ್ಳುವ ಧಾವಂತ. ಕೇಶವಶಿಲ್ಪದವರನ್ನು ಮೆಚ್ಚಿಸಲು ಬ್ರಾಹ್ಮಣರನ್ನು ಹೊಗಳಬೇಕು ಎಂದು ರಾಮಚಂದ್ರಗೌಡರು ಭಾವಿಸಿದ್ದರೆ ಆಶ್ಚರ್ಯವೇನಿಲ್ಲ. ಕೆಲ ದಿನಗಳ ಹಿಂದೆ ರಾಮಚಂದ್ರಗೌಡರನ್ನು ಸಂಪುಟದಿಂದ ಕೈಬಿಡಲಾಗುವುದು ಎಂಬ ವದಂತಿಗಳು ಹಬ್ಬಿದ್ದವು. ಯಾರನ್ನೇ ಆಗಲಿ ಸಂಪುಟಕ್ಕೆ ಸೇರಿಸಿಕೊಳ್ಳಲು ಅಥವಾ ಸಂಪುಟದಿಂದ ಕೈಬಿಡಲು ‘ಕೇಶವಶಿಲ್ಪ’ದ ಅನುಮತಿ ಬೇಕು ಎಂಬುದು ರಹಸ್ಯವೇನಲ್ಲ. ರಾಮಚಂದ್ರಗೌಡರು ಇಂಥ ಹೇಳಿಕೆಗಳನ್ನು ನೀಡುವ ಮೂಲಕ ಯಾರ ಮನವೊಲಿಸಲು ಯತ್ನಿಸುತ್ತಿದ್ದಾರೆ ಎಂದು ಬಿಡಿಸಿ ಹೇಳಬೇಕಾಗಿಲ್ಲ.

ಗೌಡರಿಗೆ ಬಹುಶಃ ತೀವ್ರ ಸ್ವರೂಪದ ಕೀಳರಿಮೆಯೂ ಕಾಡುತ್ತಿರಬಹುದು. ಯಾವತ್ತೂ ರಾಮಚಂದ್ರಗೌಡರು ತಮ್ಮ ಜಾತಿಯ ಸಭೆಯಲ್ಲಿ ಭಾಗವಹಿಸಿ, ‘ಒಕ್ಕಲಿಗರು ಯಾರಿಗೂ ಏನೂ ಕಡಿಮೆಯಿಲ್ಲ, ನಾವು ಎಲ್ಲದಕ್ಕೂ ಸಮರ್ಥರು’ ಎಂದು ಹೇಳಿಕೆ ನೀಡಿದ ನೆನಪು ನನಗಿಲ್ಲ. ಹಾಗೆ ನೋಡಿದರೆ ಇಂಥ ವಿಶ್ವಾಸದ ನುಡಿಗಳು ಬೇಕಾಗಿರುವುದು ಈಗೀಗ ಪ್ರವರ್ಧಮಾನಕ್ಕೆ ಬರುತ್ತಿರುವ ಒಕ್ಕಲಿಗ ಸಮುದಾಯಕ್ಕೇ ಹೊರತು, ಬ್ರಾಹ್ಮಣ ಸಮುದಾಯಕ್ಕಲ್ಲ.

ತಮಾಶೆಯೆಂದರೆ ಈ ಬ್ರಾಹ್ಮಿನ್ ಫೋಬಿಯಾ ಕೇವಲ ರಾಜಕಾರಣಿಗಳನ್ನು ಮಾತ್ರ ಭಾದಿಸುತ್ತಿಲ್ಲ. ಕೆಳಸಮುದಾಯಗಳ ಮಠಾಧೀಶರೂ ಈ ಖಾಯಿಲೆಯಿಂದ ನರಳುತ್ತಿದ್ದಾರೆ. ಒಕ್ಕಲಿಗ ಮಠಾಧೀಶರೊಬ್ಬರು ಹಿಂದೆ ಬ್ರಾಹ್ಮಣ ಮಠಾಧೀಶರ ಕಾಲಿಗೆ ಎರಗಿದಾಗ ಒಬ್ಬರು ಅವರಿಗೆ ಹೀಗೆ ಪ್ರಶ್ನೆ ಕೇಳಿದರಂತೆ: ‘ಸ್ವಾಮೀಜಿ, ನೀವೂ ಸಹ ಜಗದ್ಗುರುಗಳು, ಅವರೂ (ಬ್ರಾಹ್ಮಣ ಮಠಾಧೀಶರು) ಸಹ ಜಗದ್ಗುರುಗಳು. ಹೀಗಿರುವಾಗ ನೀವು ಅವರ ಪಾದಕ್ಕೆ ನಮಸ್ಕರಿಸಿದ್ದು ತಪ್ಪಲ್ಲವೆ?’

ಈ ಪ್ರಶ್ನೆಗೆ ಒಕ್ಕಲಿಗ ಸ್ವಾಮೀಜಿಯ ಉತ್ತರ ಹೀಗಿತ್ತು: ‘ನೀವು ಹೇಳುವುದು ಸರಿ. ನಾವಿಬ್ಬರೂ ಜಗದ್ಗುರುಗಳೇ ಹೌದು. ಆದರೆ ಅವರು ಬ್ರಾಹ್ಮಣರಾದ್ದರಿಂದ ಅವರ ಪಾದಕ್ಕೆ ನಮಸ್ಕರಿಸಿದೆ!’

ಜನಸಾಮಾನ್ಯರಲ್ಲಿರುವ ‘ಬ್ರಾಹ್ಮಿನ್ ಫೋಬಿಯಾ’ ಬಗ್ಗೆ ಹೊಸದಾಗಿ ಏನೂ ಹೇಳಬೇಕಾಗಿಲ್ಲ. ‘ಬ್ರಹ್ಮಹತ್ಯೆ ಮಹಾಪಾಪ’ ಎಂಬ ಭಾವ ಈ ದೇಶದ ಶೂದ್ರರ ನರನಾಡಿಗಳಲ್ಲೂ ಸೇರಿಹೋಗಿದೆ. ಬ್ರಾಹ್ಮಣನನ್ನು ದೈಹಿಕವಾಗಿ ಅಥವಾ ಮಾನಸಿಕವಾಗಿ ನೋಯಿಸುವುದನ್ನು ಈ ಜನ ಕಲ್ಪಿಸಿಕೊಳ್ಳಲಿಕ್ಕೂ ಬೆದರುತ್ತಾರೆ. ಬ್ರಾಹ್ಮಣರಿಗೆ ಎಲ್ಲ ಕ್ಷೇತ್ರಗಳಲ್ಲೂ ಮೊದಲ ಆದ್ಯತೆ ಎಂಬ ಮಂತ್ರವನ್ನು ಎಲ್ಲ ಸಮುದಾಯಗಳೂ ಪ್ರತಿಭಟನೆಯೇ ಇಲ್ಲದಂತೆ ಒಪ್ಪಿಕೊಂಡಿವೆ. ಪಂಚಾಂಗ, ಜ್ಯೋತಿಷ್ಯ, ವಾಸ್ತು, ಭೂತಪ್ರೇತ, ಸ್ವರ್ಗ-ನರಕಗಳು, ಸ್ಮೃತಿ-ಪುರಾಣಗಳು ಬ್ರಾಹ್ಮಣೇತರರು ಬ್ರಾಹ್ಮಣರನ್ನು ಭೀತಿಯಿಂದ, ಒಂದು ಬಗೆಯ ಕೀಳರಿಮೆಯಿಂದ ಬೆದರುವಂತೆ ಮಾಡಿವೆ. ರಾಮಚಂದ್ರಗೌಡರು ಸಹ ಈ ನರಕದಲ್ಲೇ ಬದುಕುತ್ತಿದ್ದಾರೆ.

ರಾಮಚಂದ್ರಗೌಡರ ಹೇಳಿಕೆಯನ್ನು ಮತ್ತೆಮತ್ತೆ ಬೇರೆಬೇರೆ ಆಯಾಮಗಳಲ್ಲಿ ಪರಿಶೀಲಿಸಿ ನೋಡಿದಾಗ ಅವರನ್ನು ಕಾಡುತ್ತಿರುವುದು ‘ಬ್ರಾಹ್ಮಿನ್ ಫೋಬಿಯಾ’ ಎಂಬ ಖಾಯಿಲೆ ಎಂದು ಮನದಟ್ಟಾಗಿ, ಇಷ್ಟೆಲ್ಲ ಬರೆದಿದ್ದೇನೆ. ಸರ್ಕಾರವನ್ನು ಒಂದು ಜಾತಿಯ ತಲೆಗೆ ಕಟ್ಟಿದ ಮಂತ್ರಿಯನ್ನು ಇನ್ನೂ ಸಂಪುಟದಲ್ಲೇ ಇಟ್ಟುಕೊಂಡರೆ ಅದು ಯಡಿಯೂರಪ್ಪನವರಿಗೇ ಅವಮಾನ. ಯಡಿಯೂರಪ್ಪ ರಾಜ್ಯದ ಎಲ್ಲ ಬ್ರಾಹ್ಮಣೇತರರಲ್ಲೂ ಕ್ಷಮೆ ಯಾಚಿಸುವ ಜತೆಗೆ ರಾಮಚಂದ್ರಗೌಡರ ಹೇಳಿಕೆಯಿಂದ ಕಿರಿಕಿರಿ ಅನುಭವಿಸಿರಬಹುದಾದ ಸಜ್ಜನ ಬ್ರಾಹ್ಮಣರಲ್ಲೂ ಕ್ಷಮೆ ಕೋರಬೇಕು. ಆದರೆ ಇವತ್ತಿನ ರಾಜಕೀಯ ವ್ಯವಸ್ಥೆಯಲ್ಲಿ, ಇಂಥದ್ದನ್ನೆಲ್ಲ ತಿಪ್ಪೆ ಸಾರಿಸುವ ಪರಿಪಾಠವೇ ನಡೆದಿರುವುದರಿಂದ ಏನನ್ನೂ ನಿರೀಕ್ಷಿಸುವಂತಿಲ್ಲ. ಹಾಗಿದ್ದೂ ರಾಜ್ಯದ ಪ್ರಜ್ಞಾವಂತ ಜನರು ತಮ್ಮ ಸಿಟ್ಟನ್ನು ದಾಖಲಿಸದೇಹೋದಲ್ಲಿ ರಾಮಚಂದ್ರಗೌಡರಂಥವರನ್ನು ಸಾರಾಸಗಟಾಗಿ ಎಲ್ಲರೂ ಒಪ್ಪಿಕೊಂಡಂತಾಗುತ್ತದೆ.

‘ಬ್ರಾಹ್ಮಿನ್ ಫೋಬಿಯಾ’ಗೆ ಒಳಗಾಗಿರುವ ರಾಮಚಂದ್ರಗೌಡರ ಕುರಿತು ಇನ್ನೇನು ಹೇಳುವುದು? ಈ ಕ್ಷಣಕ್ಕೆ ಅವರ ಕುರಿತು ನನಗಂತೂ ಸಿಟ್ಟು ಬರುತ್ತಿಲ್ಲ, ಅನುಕಂಪವಾಗುತ್ತಿದೆ. ಬೇಗ ಅವರು ತಮ್ಮ ಖಾಯಿಲೆಯಿಂದ ಗುಣಮುಖರಾಗಲಿ.

ಗೆಟ್ ವೆಲ್ ಸೂನ್ ಮಿ.ರಾಮಚಂದ್ರಗೌಡ!

Friday, December 19, 2008

ಸಾವು ಅಲ್ಲಿ ಮನೆಮನೆಯ ಮುಂದೆ ಗಸ್ತು ಹೊಡೆಯುತ್ತಿದೆ


ಎರಡನೇ ಮಹಾಯುದ್ಧದ ಕಾಲವದು. ನಾಜೀ ಆಧಿಪತ್ಯದ ಜರ್ಮನಿ ತನ್ನ ಸುತ್ತಮುತ್ತಲಿನ ಒಂದೊಂದೇ ರಾಷ್ಟ್ರಗಳನ್ನು ಆಕ್ರಮಿಸಿಕೊಳ್ಳುತ್ತಿತ್ತು. ಪೋಲೆಂಡ್, ಡೆನ್ಮಾರ್ಕ್, ನಾರ್ವೆ, ನೆದರ್‌ಲ್ಯಾಂಡ್, ಬೆಲ್ಜಿಯಂಗಳನ್ನು ತನ್ನ ಅಸಾಮಾನ್ಯ ಸೈನ್ಯಬಲದಿಂದ ವಶಪಡಿಸಿಕೊಂಡ ಜರ್ಮನಿ ಬಲಶಾಲಿ ಫ್ರಾನ್ಸ್ ದೇಶವನ್ನೂ ಸಹ ಆಕ್ರಮಿಸಿಕೊಂಡಿತ್ತು.

ಆ ಕಾಲಕ್ಕೆ ಜರ್ಮನಿ ‘ಅಟ್ಲಾಂಟಿಸ್ ಎಂಬ ರಹಸ್ಯ ನೌಕೆಯೊಂದನ್ನು ದಕ್ಷಿಣ ಅಟ್ಲಾಂಟಿಕ್ ಹಾಗು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ದಾಳಿಗೆ ಇಳಿಸಿತ್ತು. ಮಹಾಯುದ್ಧದ ಮಿತ್ರರಾಷ್ಟ್ರಗಳ ಹಡಗುಗಳನ್ನು ನಾಶಗೊಳಿಸುವುದು ಈ ರಹಸ್ಯ ನೌಕೆಗೆ ನೀಡಲಾಗಿದ್ದ ಕಾರ್‍ಯಸೂಚಿ. ಇಂಥ ಹಲವು ರಹಸ್ಯ ನೌಕೆಗಳನ್ನು ಜರ್ಮನಿ ಉಪಯೋಗಿಸುತ್ತಿತ್ತಾದರೂ ಅತ್ಯಂತ ಭೀಕರ ನೌಕೆ ಎನಿಸಿಕೊಂಡಿದ್ದು ‘ಅಟ್ಲಾಂಟಿಸ್. ಅದಕ್ಕೆ ಕಾರಣ ‘ಅಟ್ಲಾಂಟಿಸ್ ನೌಕೆಯ ಕ್ಯಾಪ್ಟನ್ ಬರ್ನ್‌ಹಾರ್ಡ್ ರೋಗೆ ಎಂಬಾತನ ಅದ್ಭುತ ಸಾಮರ್ಥ್ಯ ಹಾಗು ಸಾಹಸಗಳು.

ಮಿತ್ರರಾಷ್ಟ್ರಗಳ ಹಲವಾರು ನೌಕೆಗಳನ್ನು ನಾಶಪಡಿಸಿದ ‘ಅಟ್ಲಾಂಟಿಸ್ ಹೆಸರು ಕೇಳಿದರೆ ನಡುಗುವ ಸ್ಥಿತಿ ಆಗ ನಿರ್ಮಾಣವಾಗಿತ್ತು. ಮಾಮೂಲು ಸರಕು ಸಾಗಣೆ ಹಡಗಿನಂತೆ ಕಾಣುತ್ತಿದ್ದ ಈ ನೌಕೆಯಲ್ಲಿ ಆ ಕಾಲದ ಅತ್ಯಾಧುನಿಕ ಫಿರಂಗಿಗಳು, ಮಿಷನ್ ಗನ್ನುಗಳು, ಜಲಾಂತರ್ಗಾಮಿ ವಿಮಾನಗಳನ್ನು ಅಡಗಿಸಿಡಲಾಗುತ್ತಿತ್ತು. ಎದುರಿಗೆ ಯಾವುದಾದರೂ ನೌಕೆ ಬಂದಾಗ ಹಡಗಿನ ಸ್ವರೂಪವನ್ನೇ ಬದಲಿಸಿ ಅದನ್ನು ಜಪಾನ್ ದೇಶದ ಹಡಗಿನಂತೆಯೋ, ಸೋವಿಯತ್ ದೇಶದ ಹಡಗಿನಂತೆಯೋ ಅಣಿಗೊಳಿಸಲಾಗುತ್ತಿತ್ತು. ವೈರಿ ನೌಕೆ ಹತ್ತಿರವಾಗುತ್ತಿದ್ದಂತೆ ಅದರ ಮೇಲೆ ದಾಳಿ ನಡೆಸಿ ಮುಳುಗಿಸಲಾಗುತ್ತಿತ್ತು.

ಇಷ್ಟೆಲ್ಲ ಸಾಹಸಗಳನ್ನು ಅತ್ಯಂತ ನೈಪುಣ್ಯದಿಂದ ಮಾಡುತ್ತಿದ್ದ ರೋಗೆ ಪ್ರಥಮ ವಿಶ್ವಯುದ್ಧದಲ್ಲೂ ಪಾಲ್ಗೊಂಡಿದ್ದ. ಆದರೆ ಈತ ಪ್ರವರ್ಧಮಾನಕ್ಕೆ ಬಂದಿದ್ದು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ. ೧೯೩೯ರ ಡಿಸೆಂಬರ್‌ನಲ್ಲಿ ಜರ್ಮನಿ ‘ಅಟ್ಲಾಂಟಿಸ್ ನೌಕೆಯನ್ನು ರೂಪಿಸಿ, ೧೯೪೦ರಲ್ಲಿ ಸಾಗರದ ಕುರುಕ್ಷೇತ್ರಕ್ಕೆ ಇಳಿಸಿತ್ತು. ೧೯೪೧ರಲ್ಲಿ ನವೆಂಬರ್ ೨೨ರಂದು ಬ್ರಿಟನ್ ಯುದ್ಧನೌಕೆ ಡವಾನ್ ಶೈರ್ ದಾಳಿಗೆ ಸಿಲುಕಿ ನಾಶವಾಗುವುದಕ್ಕೆ ಮುನ್ನ ಈ ನೌಕೆ ನಡೆಸಿದ ಕಾರ್ಯಾಚರಣೆ, ತೋರಿದ ಸಾಹಸಗಳಿಗೆ ಲೆಕ್ಕವಿಲ್ಲ.

ಇದೆಲ್ಲ ರೋಗೆಯ ಸಾಹಸದ ಕಥೆಯಾಯಿತು. ಆದರೆ ಬಹುಮುಖ್ಯವಾಗಿ ಗುರುತಿಸಬೇಕಾದ ವಿಷಯವೇ ಬೇರೆ. ರೋಗೆ ಇತರ ಯುದ್ಧಪಿಪಾಸುಗಳ ಹಾಗೆ ಇರಲಿಲ್ಲ. ಆತ ಅತ್ಯಂತ ಪ್ರಾಮಾಣಿಕವಾಗಿ ಯುದ್ಧನೀತಿಯನ್ನು ಪಾಲಿಸುತ್ತಿದ್ದ. ವೈರಿನೌಕೆಗಳ ಮೇಲೆ ದಾಳಿ ನಡೆಸಿದಾಗ ಆತ ಯಾರನ್ನೂ ಕೊಲ್ಲುತ್ತಿರಲಿಲ್ಲ. ಆತ ಮಾನವಹಕ್ಕುಗಳನ್ನು ಗೌರವಿಸುತ್ತಿದ್ದ. ವೈರಿ ನೌಕೆಗಳನ್ನು ಮುಳುಗಿಸುವ ಮುನ್ನ ಅವನು ಆ ನೌಕೆಯಲ್ಲಿ ಇದ್ದ ಎಲ್ಲರನ್ನೂ ತನ್ನ ನೌಕೆಗೆ ಹತ್ತಿಸಿಕೊಳ್ಳುತ್ತಿದ್ದ. ಆ ಯುದ್ಧ ಖೈದಿಗಳಿಗೆ ಊಟ, ತಿಂಡಿ, ಮಲಗಲು ಕೋಣೆ ಎಲ್ಲವನ್ನೂ ಒದಗಿಸುತ್ತಿದ್ದ. ಯುದ್ಧ ಖೈದಿಗಳು ಎಲ್ಲರಂತೆ ಆರಾಮವಾಗಿ ಓಡಾಡಿಕೊಂಡಿರಬಹುದಾಗಿತ್ತು.

ಇನ್ನೂ ವಿಚಿತ್ರವೆಂದರೆ ರೋಗೆ ಜತೆಗಿದ್ದ ಯುದ್ಧಖೈದಿಗಳು ಅಟ್ಲಾಂಟಿಸ್‌ನಲ್ಲೇ ಒಂದು ಕ್ಲಬ್ ಮಾಡಿಕೊಂಡಿದ್ದರು. ಆ ಕ್ಲಬ್ ನಡೆಸುವ ಕಾರ್ಯಕ್ರಮಗಳಿಗೆ ರೋಗೆ ಸೇರಿದಂತೆ ಅಟ್ಲಾಂಟಿಸ್‌ನ ಅಧಿಕಾರಿಗಳು ಅತಿಥಿಗಳಾಗಿ ಬರುತ್ತಿದ್ದರು. ಯುದ್ಧಖೈದಿಗಳನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ರೋಗೆ ಅವರಿಗೆ ಬೀಳ್ಕೊಡುಗೆ ಪಾರ್ಟಿ ಕೊಡುತ್ತಿದ್ದ.

ಇಂಥ ಮಾನವೀಯ ಗುಣಗಳಿಂದಲೇ ರೋಗೆ ಇತಿಹಾಸದ ಪುಟ ಸೇರಿಹೋದ. ಹಲವು ರಾಷ್ಟ್ರಗಳು ಆತನಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದವು. ಜರ್ಮನಿ ಸೋಲುಂಡರೂ ಮಿತ್ರರಾಷ್ಟ್ರಗಳು ರೋಗೆಯನ್ನು ಬಂಧಿಸಲಿಲ್ಲ. ೧೯೮೨ರ ಜೂನ್ ೨೯ರಂದು ಮೃತಪಟ್ಟ ರೋಗೆ ೮೨ ವರ್ಷಗಳ ತುಂಬು ಜೀವನವನ್ನು ನಡೆಸಿದ.

********

ಯುದ್ಧವೆಂಬುದೇ ಅಮಾನವೀಯ. ಅದರಲ್ಲಿ ರೋಗೆಯಂಥವರನ್ನು ಹುಡುಕುವುದು ಕಷ್ಟ. ಕೊಲ್ಲಿಯಲ್ಲಿ ನಡೆಯುತ್ತಿರುವ ಯುದ್ಧದ ನಡುವೆ ಇದೆಲ್ಲವೂ ನೆನಪಾಗುತ್ತಿದೆ. ಬುಷ್ ಹಾಗು ಟೋನಿ ಬ್ಲೇರ್‌ಗಳ ರಣಹದ್ದುಗಳಂಥ ಸೈನ್ಯ ಇರಾಕ್‌ನ ಮೇಲೆ ಹಗಲಿರುಳೆನ್ನದೆ ಎರಗುತ್ತಿದೆ. ಕೇವಲ ಇರಾಕಿ ಸೈನ್ಯ ಈ ಪಡೆಗಳ ಗುರಿಯಲ್ಲ. ನೇರವಾಗಿ ಅಮಾಯಕ ಇರಾಕಿ ನಾಗರಿಕರು ಬಲಿಯಾಗುತ್ತಿದ್ದಾರೆ. ಬುಷ್ ಸೈನ್ಯ ಜನವಸತಿ ಪ್ರದೇಶಗಳ ಮೇಲೆ ಮಿಸೈಲುಗಳನ್ನು ಬಿಟ್ಟು ಸಾವಿರಾರು ಮುಗ್ಧರನ್ನು ಕೊಲ್ಲುತ್ತಿದೆ.

ಪ್ರಮುಖ ಬಂದರುಗಳನ್ನು ಅಮೆರಿಕ ಹಿಡಿದಿಟ್ಟುಕೊಂಡಿರುವುದರಿಂದ ಇರಾಕ್‌ನಲ್ಲಿ ಈಗ ಜೀವನಾವಶ್ಯಕ ವಸ್ತುಗಳ ಸಾಗಣೆ ಕಾರ್ಯ ನಿಂತುಹೋಗಿದೆ. ಮಕ್ಕಳು ಹಸಿವಿನಿಂದ ಸಾಯುತ್ತಿವೆ. ಕಳೆದ ಕೊಲ್ಲಿ ಯುದ್ಧದಲ್ಲಿ ಸುಮಾರು ೨೫,೦೦೦ ಎಳೆಯ ಕಂದಮ್ಮಗಳು ಹಸಿವಿನಿಂದಲೇ ಸತ್ತು ಹೋಗಿದ್ದವು. ಈ ಬಾರಿ ಈ ಸಂಖ್ಯೆ ಇದಕ್ಕಿಂತ ಕಡಿಮೆಯಿರುವುದು ಸಾಧ್ಯವೇ ಇಲ್ಲ.

ಯುದ್ಧವೆಂಬುದಕ್ಕೆ ಮಾನವೀಯತೆ ಇರುವುದು ಸಾಧ್ಯವಿಲ್ಲ. ಧರ್ಮಸ್ಥಾಪನೆಗಾಗಿ ಯುದ್ಧ ಎಂಬ ಸ್ಲೋಗನ್ನನ್ನು ಎಲ್ಲ ಧರ್ಮಗಳು ಬಳಸುತ್ತವೆ. ಆದರೆ ಸತ್ಯ ಏನೆಂದರೆ ಎಲ್ಲ ಧರ್ಮಗಳೂ ಯುದ್ಧೋನ್ಮಾದಿಗಳು. ಅಹಿಂಸೆಯನ್ನು ಪ್ರತಿಪಾದಿಸಿದ, ಪರಿಪಾಲಿಸಿದ ಬುದ್ಧಧಮ್ಮ ನಮ್ಮ ಇಂದಿನ ರಣೋತ್ಸಾಹಿಗಳ ನಡುವೆ ಔಟ್‌ಡೇಟ್ ಆದ ಧರ್ಮ. ಹಿಟ್ಲರ್ ಮಹಾಯುದ್ಧಗಳ ಸಂದರ್ಭದಲ್ಲಿ ಜ್ಯೂಗಳ ಮಕ್ಕಳನ್ನೆಲ್ಲ ಕುರಿಗಳನ್ನು ತುಂಬುವ ಹಾಗೆ ತುಂಬಿ ಸಾಗಿಸಿ ಕೊಲ್ಲುತ್ತಿದ್ದ. ಬಹುತೇಕ ಮಕ್ಕಳು ಲಾರಿಗಳಲ್ಲೇ ಉಸಿರುಗಟ್ಟಿ ಸಾಯುತ್ತಿದ್ದವು. ಬದುಕುಳಿದವುಗಳನ್ನು ಗ್ಯಾಸ್ ಚೇಂಬರ್‌ಗಳಲ್ಲಿ ಹಾಕಿ ಸಾಯಿಸಲಾಗುತ್ತಿತ್ತು. ಈಗ ಜಾರ್ಜ್ ಬುಷ್ ಸರದಿ. ಈತ ಇರಾಕಿ ಮಕ್ಕಳನ್ನು ಹಸಿವೆಯಿಂದ ಕೊಲ್ಲುತ್ತಿದ್ದಾನೆ.

ಒಬ್ಬ ಕ್ಯಾಪ್ಟನ್ ರೋಗೆಯ ಮಾನವೀಯತೆ ಬುಷ್‌ನಲ್ಲಾಗಲೀ, ಬ್ಲೇರ್‌ನಲ್ಲಾಗಲಿ, ಸದ್ದಾಂ ಹುಸೇನ್‌ನಲ್ಲಾಗಲೀ ಇಲ್ಲವೇ ಇಲ್ಲ. ಹಾಗಾಗಿ ‘ಸಾವು ಇರಾಕ್‌ನ ಮನೆಮನೆಯ ಮುಂದೆಯೂ ಗಸ್ತು ಹೊಡೆಯುತ್ತಿದೆ. ಮುಗ್ಧಮಕ್ಕಳು ಗುಂಡಿಗೆ, ಬಾಂಬಿಗೆ, ಹಸಿವಿಗೆ ಪ್ರಾಣ ಬಿಡುತ್ತಿವೆ.
ಯುದ್ಧಕ್ಕೆ ಧಿಕ್ಕಾರವಿರಲಿ

ಏಪ್ರಿಲ್ ೧೫, ೨೦೦೩, ಅಭಿಮನ್ಯು ಪತ್ರಿಕೆ

******

ಇರಾಕ್ ಮೇಲೆ ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ನಡೆಸಿದ ದಾಳಿ ಸಂದರ್ಭದಲ್ಲಿ ಬರೆದ ಲೇಖನವಿದು.

ಜಾರ್ಜ್ ಬುಷ್ ಮೇಲೆ ಇರಾಕಿ ಪತ್ರಕರ್ತ ಅಲ್‌ಜೈದಿ ಬೂಟು ಎಸೆದು ಸುದ್ದಿಯಾಗಿದ್ದಾನೆ. ಆತ ಮೊದಲ ಬೂಟನ್ನು ಎಸೆಯುವಾಗ ‘ಎಲೆ ನಾಯಿ, ಇರಾಕಿ ಜನರಿಂದ ಇದು ನಿನಗೆ ವಿದಾಯ ಮುತ್ತು ಎಂದು ಹೇಳಿದ್ದ. ಎರಡನೇ ಬೂಟನ್ನು ಎಸೆಯುವಾಗ ‘ವಿಧವೆಯರ, ತಬ್ಬಲಿ ಮಕ್ಕಳ, ಯುದ್ಧದಲ್ಲಿ ಸತ್ತ ಎಲ್ಲರ ಪರವಾಗಿ ನಿನಗಿದು ಕಾಣಿಕೆ ಎಂದು ಹೇಳಿದ್ದಾನೆ.

ಇರಾಕ್‌ನಲ್ಲಿ ಸಮೂಹನಾಶಕ ಶಸ್ತ್ರಾಸ್ತ್ರಗಳಿವೆ ಎಂಬ ಕುಂಟುನೆಪವನ್ನೊಡ್ಡಿ ಅಮೆರಿಕ ಆ ದೇಶದ ಮೇಲೆ ಯುದ್ಧ ಹೇರಿತು. ಜಗತ್ತಿನ ಇತರ ರಾಷ್ಟ್ರಗಳಿಗೆ ಈ ಯುದ್ಧವನ್ನು ವಿರೋಧಿಸುವ ಶಕ್ತಿಯೂ ಇರಲಿಲ್ಲ. ಯುದ್ಧ ಮುಗಿದ ಮೇಲೆ ಇರಾಕ್‌ನಲ್ಲಿ ಯಾವ ಸಮೂಹನಾಶಕ ಶಸ್ತ್ರಾಸ್ತ್ರವೂ ಲಭ್ಯವಾಗಲಿಲ್ಲ.
ಆದರೆ ಲಕ್ಷಗಟ್ಟಲೆ ಜನ ಸತ್ತು ಹೋದರು. ಕೊಲೆಗಡುಕ ಬುಷ್ ಅಮಾಯಕ ಮಕ್ಕಳನ್ನು ಹಸಿವೆಯಿಂದ ಸಾಯುವಂತೆ ಮಾಡಿದ. ಯಾವ ಕೋರ್ಟಿನಲ್ಲೂ ಈ ಕೊಲೆಗಳಿಗಾಗಿ ಬುಷ್‌ಗೆ ಶಿಕ್ಷೆಯಾಗುವುದಿಲ್ಲ. ಜೈದಿ ಬೂಟು ಎಸೆದ ತಕ್ಷಣ ಆ ಮಕ್ಕಳು ಬದುಕಿ ಬರಲಾರರು ನಿಜ, ಆದರೆ ಅಲ್‌ಜೈದಿ ಇರಾಕಿ ಜನರ ಒಡಲುರಿಯನ್ನೇ ಅಭಿವ್ಯಕ್ತಿಸಿದ್ದಾನೆ.

ಮುಂಬೈ ದಾಳಿಯ ನಂತರ ಪಾಕಿಸ್ತಾನದ ಮೇಲೆ ಯುದ್ಧ ಹೂಡಬೇಕು ಎಂದು ನಮ್ಮ ಕೆಲ ದೇಶಭಕ್ತ ಯುದ್ಧೋನ್ಮಾದಿಗಳು ಒಕ್ಕೊರಲಿನಿಂದ ಕೂಗಿಡುತ್ತಿದ್ದಾರೆ. ಬೂಟು ಪ್ರಕರಣ ಹಾಗು ಯುದ್ಧೋನ್ಮಾದಿಗಳ ಅರಚಾಟದ ನಡುವೆ ೨೦೦೩ರಲ್ಲಿ ಬರೆದಿದ್ದ ಈ ಲೇಖನ ನೆನಪಾಯಿತು. ಅದನ್ನು ಇಲ್ಲಿ ಪ್ರಕಟಿಸಿದ್ದೇನೆ.

Tuesday, December 2, 2008

enough is enough!

ಮುಂಬೈ ಇತಿಹಾಸದ ಕರಾಳ ದಿನಗಳು ಕಳೆದ ನಂತರ ಈಗ ಎಲ್ಲೆಡೆ ದೂಷಣೆಯ ಆಟಗಳು ನಡೆಯುತ್ತಿವೆ. ಎಲ್ಲ ಟಿವಿ ಚಾನೆಲ್‌ಗಳು ನೇರವಾಗಿ ರಾಜಕಾರಣಿಗಳನ್ನು ಟಾರ್ಗೆಟ್ ಮಾಡಿಕೊಂಡು ಬಯ್ಗುಳಗಳ ಸುರಿಮಳೆ ಕರೆಯುತ್ತಿವೆ.

ಜನ ಆಕ್ರೋಶಗೊಂಡಿರುವುದು ನಿಜ. ಮುಂಬೈ ಭಯೋತ್ಪಾದನೆಯ ನಂತರ ಜನರ ವಿಶ್ವಾಸವೇ ಕುಸಿಯುತ್ತಿದೆ. ದೇಶದ ಪಾಲಿಗೆ ಸಂಕಟದ ದಿನಗಳು ಇವು. ಭಯೋತ್ಪಾದನೆಯ ಪೀಡೆಗೆ ಉತ್ತರಗಳನ್ನು ಹುಡುಕಿಕೊಳ್ಳಲು ನಮ್ಮ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂಬುದು ಅಕ್ಷರಶಃ ನಿಜ.

ಆದರೆ ಯಾಕೆ ಇಂಥ ಆರೋಪಗಳೆಲ್ಲ ಕೇವಲ ರಾಜಕಾರಣಿಗಳನ್ನೇ ಕೇಂದ್ರೀಕರಿಸಿವೆ? ಶಾಸನ ರೂಪಿಸುವ ಜನ ರಾಜಕಾರಣಿಗಳಾದರೂ ಅದನ್ನು ಅನುಷ್ಠಾನಗೊಳಿಸುವವರು ಆಡಳಿತಶಾಹಿ ವ್ಯವಸ್ಥೆಯಲ್ಲವೆ? ಯಾಕೆ ಯಾರೂ ಸಹ ಬ್ಯೂರಾಕ್ರಸಿ ವಿರುದ್ಧ ಮಾತನಾಡುತ್ತಿಲ್ಲ.?

‘ಲಿಪ್‌ಸ್ಟಿಕ್ ಹಾಕಿಕೊಂಡ, ಕೋಟು ಧರಿಸಿಕೊಂಡ ಕೆಲವರು ಬೀದಿಗಿಳಿದರೆ ಅವರು ಇಡೀ ದೇಶದ ಪ್ರತಿನಿಧಿಗಳಾಗಲು ಸಾಧ್ಯವೆ? ಭಯೋತ್ಪಾದನೆ ನಡೆಸುತ್ತಿರುವುದು ಪಾಕಿಸ್ತಾನದ ಕೆಲವರು ಮತ್ತು ಅದಕ್ಕೆ ಪ್ರೇರಣೆ ನೀಡುತ್ತಿರುವುದು ಐಎಸ್‌ಐ. ರಾಜಕಾರಣಿಗಳ ಮೇಲೆ ಯಾಕೆ ಇಷ್ಟು ಆಕ್ರೋಶ?

ಹೀಗೆ ಭಾರತೀಯ ಜನತಾ ಪಕ್ಷದ ಮುಖಂಡ ಮುಕ್ತಾರ್ ಅಬ್ಬಾಸ್ ನಕ್ವಿ ಹೇಳುತ್ತಿದ್ದಂತೆ ಟೈಮ್ಸ್ ನೌ ಚಾನೆಲ್‌ನಲ್ಲಿ ಪ್ರತಿಕ್ರಿಯೆಗಳ ಸುರಿಮಳೆ. ಎಲ್ಲರೂ ನಕ್ವಿಯನ್ನು ವಾಚಾಮಗೋಚರ ಬೈಯುವವರೇ.

ಆದರೆ ಆಳಕ್ಕಿಳಿದು ಯೋಚಿಸುವುದಾದರೆ ನಮ್ಮ ಸೋ ಕಾಲ್ಡ್ ಸುಶಿಕ್ಷಿತ ಜನರು ಎಂದಾದರೂ ಮತಗಟ್ಟೆಗೆ ಬಂದು ಮತಚಲಾಯಿಸಿದ ಉದಾಹರಣೆ ಇದೆಯೇ? ಚುನಾವಣೆಗೆ ನಿಲ್ಲುವವರೆಲ್ಲ ಕೊಳಕರು ಎಂದು ಸಾರಾಸಗಟಾಗಿ ಹೇಳುವ ಇದೇ ಜನ ಎಂದಾದರೂ ಕನಿಷ್ಠ ನಗರಪಾಲಿಕೆ ಚುನಾವಣೆಯಲ್ಲಿ ನಿಲ್ಲುವ ಧೈರ್ಯ ತೋರಿದ್ದಾರೆಯೇ? ಜನಪ್ರತಿನಿಧಿಗಳ ಆಯ್ಕೆ ವಿಷಯದಲ್ಲಿ ಯಾವತ್ತೂ ಮುಗುಮ್ಮಾಗಿ ಇರುವ ಈ ಜನರು ಈಗ ರಾಜಕಾರಣಿಗಳ ವಿರುದ್ಧ ಆಕ್ರೋಶ ತೋಡಿಕೊಂಡರೆ ಪ್ರಯೋಜನವೇನು?

******




ಎನಫ್ ಈಸ್ ಎನಫ್, ಇಂಡಿಯಾಸ್ ೯/೧೧, ಸ್ಪಿರಿಟ್ ಆಫ್ ಮುಂಬೈ... ಇಂಥ ಸವಕಲು ಶಬ್ದಗಳನ್ನೇ ನಮ್ಮ ಟಿವಿ ಚಾನೆಲ್‌ಗಳು ಧಾರಾಳವಾಗಿ ಬಳಸುತ್ತಿವೆ. ವೀ ನೀಡ್ ಆಕ್ಷನ್ ಎಂದು ಒಂದೇ ಸಮನೆ ಚಾನೆಲ್‌ಗಳ ನಿರೂಪಕರು, ವರದಿಗಾರರು ಅಬ್ಬರಿಸುತ್ತಿದ್ದಾರೆ.

ಮುಂಬೈನ ಲೋಕಲ್ ಟ್ರೈನ್‌ಗಳಲ್ಲಿ ಭೀಕರ ಸ್ಫೋಟಗಳು ನಡೆದ ಘಟನೆಯ ನಂತರ ಮಾರನೇ ದಿನವೇ ಮುಂಬೈ ನಿವಾಸಿಗಳು ಮತ್ತೆ ದೈನಂದಿನ ಬದುಕಿಗೆ ಹಿಂತಿರುಗಿದರು. ಆಗ ಹುಟ್ಟಿಕೊಂಡಿದ್ದು ಸ್ಪಿರಿಟ್ ಆಫ್ ಮುಂಬೈ ಎಂಬ ಪದಪುಂಜ. ಆದರೆ ಮುಂಬೈ, ಬೆಂಗಳೂರಿನಂಥ ನಗರಗಳಲ್ಲಿ ಎಂಥ ಸ್ಫೋಟಗಳು ಸಂಭವಿಸಿದರೂ ಮಾರನೇ ದಿನ ಹೊಟ್ಟೆಪಾಡಿನ ಕೆಲಸಗಳಿಗೆ ಹೋಗಲೇಬೇಕಾದ ಅನಿವಾರ್ಯತೆ ಸಾಮಾನ್ಯ ಜನರದ್ದು. ಸ್ಪಿರಿಟ್ ಎನ್ನುವುದಕ್ಕಿಂತ ಅದು ಬದುಕಿನ ಅನಿವಾರ್ಯತೆ.

ಆದರೆ ಈ ಎಲ್ಲ ಚಾನೆಲ್‌ಗಳು ಮರೆಮಾಚುತ್ತಿರುವ ಅಂಶವೆಂದರೆ ಮುಂಬೈ ಮೇಲೆ ನಡೆದ ದಾಳಿಯನ್ನು ಅಗತ್ಯಕ್ಕಿಂತ ಹೆಚ್ಚು ವೈಭವೀಕರಿಸುವುದರೊಂದಿಗೆ ಭಯೋತ್ಪಾದಕರ ಉದ್ದೇಶವನ್ನು ಸಫಲಗೊಳಿಸಿದ್ದು ಇದೇ ಚಾನೆಲ್‌ಗಳು! ಉಗ್ರಗಾಮಿಗಳೆಂಬ ನರರಾಕ್ಷಸರು ನಡೆಸಿದ ಭಯೋತ್ಪಾದನೆಯದ್ದು ಒಂದು ತೂಕವಾದರೆ ಇಡೀ ದೇಶದ ಜನರಲ್ಲಿ ಭೀತಿ, ಆತಂಕ ಹುಟ್ಟಿಸಿದ ಚಾನೆಲ್‌ಗಳ ಭಯೋತ್ಪಾದನೆಯದ್ದು ಇನ್ನೊಂದು ತೂಕ.

*******

ಶುಕ್ರವಾರ ಎನ್‌ಎಸ್‌ಜಿ ಕಮ್ಯಾಂಡೋಗಳು ನಾರಿಮನ್ ಹೌಸ್, ತಾಜ್, ಒಬೆರಾಯ್‌ಗಳಲ್ಲಿ ಅಂತಿಮ ಕಾರ್ಯಾಚರಣೆ ನಡೆಸುತ್ತಿದ್ದ ಹೊತ್ತಿನಲ್ಲೇ ಮಧ್ಯಾಹ್ನದ ಸುಮಾರಿಗೆ ಎಲ್ಲ ಚಾನೆಲ್‌ಗಳು ಬ್ರೇಕಿಂಗ್ ನ್ಯೂಸ್ ಹೆಸರಿನಲ್ಲಿ ವಿಟಿ ಸ್ಟೇಷನ್‌ನಲ್ಲಿ ಮತ್ತೆ ಗುಂಡಿನ ದಾಳಿ ಎಂಬ ಸುದ್ದಿ ಬಿತ್ತರಿಸತೊಡಗಿದವು.

ಎರಡು ಸುತ್ತಿನ ಗುಂಡಿನ ದಾಳಿ ನಡೆದಿದೆ. ಜನ ಭಯಭೀತರಾಗಿ ಓಡುತ್ತಿದ್ದಾರೆ ಎಂದು ಪುಂಖಾನುಪುಂಖ ವರದಿಗಳು ಪ್ರಸಾರವಾದವು. ಇಡೀ ಮುಂಬೈಗೆ ಹುಚ್ಚು ಹಿಡಿಸುವಂಥ ಸನ್ನಿವೇಶ ಅದು. ಇನ್ನೇನು ಕಮ್ಯಾಂಡೋ ಆಪರೇಷನ್ ಮುಗಿದು ಎಲ್ಲವೂ ಸರಿಹೋಗಲಿದೆ ಎಂದುಕೊಂಡಿದ್ದ ಮುಂಬೈ ನಿವಾಸಿಗಳು ಸ್ಫೋಟಗೊಳ್ಳಲು ಮತ್ತೇನು ಬೇಕಿತ್ತು?

ಕೆಲಕ್ಷಣಗಳಲ್ಲೇ ಮುಂಬೈ ಪೊಲೀಸರು ಈ ಸುದ್ದಿ ಸುಳ್ಳು ಎಂಬ ಪ್ರಕಟಣೆ ನೀಡಿದರು. ಹಾಗೆ ಪ್ರಕಟಣೆ ನೀಡಿದ ನಂತರವೂ ಹೊಸದಾಗಿ ದಾಳಿ ನಡೆದಿರುವುದು ನಿಜ ಎಂದೇ ಚಾನೆಲ್‌ಗಳು ಹೇಳುತ್ತಿದ್ದವು.

ಟೈಮ್ಸ್ ನೌ ಚಾನೆಲ್‌ನಲ್ಲಿ ವರದಿಗಾರ್ತಿಯೊಬ್ಬಳು ಅಕ್ಷರಶಃ ಅಳುತ್ತ, ‘ಅರ್ನಾಬ್ ನಾನು ವಿಟಿ ಸ್ಟೇಷನ್ ಬಳಿ ಇದ್ದೇನೆ. ಎರಡು ಸುತ್ತಿನ ಗನ್ ಫೈರ್ ಮುಗಿದು ಈಗ ಮೂರನೇ ಸುತ್ತಿನ ಫೈರಿಂಗ್ ನಡೆಯುತ್ತಿದೆ. ಜನ ದಿಕ್ಕಾಪಾಲಾಗಿ ಓಡುತ್ತಿದ್ದಾರೆಎಂದು ವದರಲಾರಂಭಿಸಿದ್ದಳು.

ಆದರೆ ವಿಚಿತ್ರವೆಂದರೆ ಫೈರಿಂಗ್ ನಡೆದೇ ಇರಲಿಲ್ಲ; ಮತ್ತು ಅದನ್ನು ಮಹಾರಾಷ್ಟ್ರ ಪೊಲೀಸರು ಪದೇಪದೇ ಚಾನೆಲ್‌ಗಳಿಗೆ ಹೇಳಿದರೂ ಅವರು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ನಡೆಯದ ಗುಂಡಿನ ದಾಳಿಯನ್ನು ನೋಡಿ ಚಾನೆಲ್ ವರದಿಗಾರ್ತಿ ಅಳುತ್ತಾ ವರದಿ ಮಾಡುತ್ತಾಳೆ ಎಂದರೆ ಅದನ್ನು ಹೇಗೆ ಕಲ್ಪಿಸಿಕೊಳ್ಳುವುದು? ಒಂದೇ ಆಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿರಬಹುದು. ಅಥವಾ ಆಕೆಯನ್ನು ನಂಬುವವರಿಗೆ ತಲೆಕೆಟ್ಟಿರಬೇಕು.

ಇದಾದ ಕೆಲವು ಕ್ಷಣಗಳಲ್ಲಿ ಸಿಎನ್‌ಎನ್ ಐಬಿಎನ್‌ನ ರಾಜದೀಪ್ ಸರದೇಸಾಯಿ ಇಂಥ ಸುದ್ದಿಯನ್ನು ತಮ್ಮ ಚಾನೆಲ್‌ನಲ್ಲೂ ಪ್ರಸಾರ ಮಾಡಿದ್ದಕ್ಕಾಗಿ ಎಲ್ಲ ವೀಕ್ಷಕರ ಕ್ಷಮೆ ಕೋರುವುದಾಗಿ ಹೇಳಿದರು. ಪೊಲೀಸ್ ಇಲಾಖೆಯ ಒತ್ತಡದಿಂದಾಗಿ ಅರ್ನಾಬ್ ಗೋಸ್ವಾಮಿ ಸಹ ನಾವು ಸ್ಪೆಕ್ಯುಲೇಷನ್ ಮಾಡುವುದಿಲ್ಲ ಎಂದು ಪದೇ ಪದೇ ಹೇಳಿದರು.

ಆದರೆ ಅಷ್ಟು ಹೊತ್ತಿಗೆ ಅನಾಹುತ ಸಂಭವಿಸಿತ್ತು. ವಿಟಿ ಸ್ಟೇಷನ್ ಬಳಿ ಜನ ದಿಕ್ಕೆಟ್ಟು ಓಡತೊಡಗಿದ್ದರು. ಸಮೀಪದ ಆಸ್ಪತ್ರೆಯಿಂದ ರೋಗಿಗಳ ಸಮೇತ ಎಲ್ಲರೂ ಜೀವ ಕೈಯಲ್ಲಿ ಹಿಡಿದು ದಿಕ್ಕಾಪಾಲಾಗಿ ಓಡಿದರು. ಇದನ್ನೂ ಸಹ ಈ ಚಾನೆಲ್‌ಗಳು ಪ್ರಸಾರ ಮಾಡಿ ‘ಪುಣ್ಯ ಕಟ್ಟಿಕೊಂಡವು.

********

ಚಾನೆಲ್‌ಗಳು ಸಹ ಭಯೋತ್ಪಾದನೆಯಲ್ಲಿ ತೊಡಗಿರುವುದನ್ನು ಗಮನಿಸಿದ ಮುಂಬೈ ಪೊಲೀಸರು ಇಡೀ ನಗರದಾದ್ಯಂತ ಕೇಬಲ್ ಟಿವಿಗಳನ್ನು ಬಂದ್ ಮಾಡಿಸಿದರು. ಚಾನೆಲ್‌ಗಳ ಹರಡುವ ಸುಳ್ಳು ಸುದ್ದಿಯನ್ನು ತಡೆಯುವ ಸಾಹಸ ಮಾಡುವುದಕ್ಕಿಂತ ಚಾನೆಲ್‌ಗಳ ಪ್ರಸಾರ ಬಂದ್ ಮಾಡುವುದೇ ಸುಲಭ ಎಂದು ಅವರು ಭಾವಿಸಿರಬೇಕು.

ಸ್ಪೆಕ್ಯುಲೇಷನ್ ಮಾಡುವುದಿಲ್ಲ ಎಂದು ಘೋಷಿಸುತ್ತ ಕುಳಿತಿದ್ದ ಅರ್ನಾಬ್ ಮತ್ತೆ ತಮ್ಮ ಹಳೆ ವರಸೆಗೆ ಹಿಂದಿರುಗಿದರು. ಮುಂಬೈನಲ್ಲಿ ಚಾನೆಲ್‌ಗಳನ್ನು ಬಂದ್ ಮಾಡಲಾಗಿದೆಯಂತೆ. ನನ್ನ ಮೊಬೈಲ್‌ಗೆ ಎಸ್‌ಎಂಎಸ್‌ಗಳ ಸುರಿಮಳೆಯಾಗುತ್ತಿದೆ.

ಇದು ಮುಂಬೈ ಇತಿಹಾಸದ ಕರಾಳ ದಿನ, ಮಾಧ್ಯಮಗಳ ಇತಿಹಾಸದ ಕರಾಳ ದಿನ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದೆಲ್ಲಾ ಅರಚಾಡತೊಡಗಿದರು.

ಚಾನೆಲ್‌ಗಳು ಬಂದ್ ಆದರೆ ಜನ ಇನ್ನಷ್ಟು ಭೀತರಾಗಬಹುದು. ಏನೋ ಅನಾಹುತ ನಡೆದಿದೆ ಎಂದು ಜನ ಭಾವಿಸಲು ಅವಕಾಶವಿದೆ. ನಾವು ಸಂಯಮದಿಂದಲೇ ವರದಿ ಮಾಡುತ್ತೇವೆ. ಪೊಲೀಸ್ ಇಲಾಖೆಯವರು ಚಾನೆಲ್‌ಗಳನ್ನು ತೆರಯಲಿ ಎಂದು ರಾಜ್‌ದೀಪ್ ಸರ್‌ದೇಸಾಯಿ ಕೊಂಚ ವಿನಯದಿಂದಲೇ ಸಿಎನ್‌ಎನ್ ಐಬಿಎನ್‌ನಲ್ಲಿ ಹೇಳುತ್ತಿದ್ದರು.

********

ತಾಜ್ ಹೋಟೆಲ್‌ನಲ್ಲಿ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ಮೀಡಿಯಾಗಳೆಲ್ಲ ಏನು ಮಾಡುತ್ತಿದ್ದವು? ಕೇವಲ ನೂರು ಅಡಿ ಅಂತರದಲ್ಲಿ ನಾವಿದ್ದೇವೆ ಎನ್ನುತ್ತ ಮಲಗಿಕೊಂಡೇ ವರದಿ ಮಾಡಿದರು ನಮ್ಮ ವರದಿಗಾರರು. ಅವರ ಸಾಹಸಕ್ಕೆ ಮೆಚ್ಚೋಣ. ಆದರೆ ಅಂಥ ಹುಚ್ಚಾಟ ಬೇಕಿತ್ತೆ?

ಒಂದು ಗುಂಡು ಮೊಳಗಿದ ತಕ್ಷಣ ತಾಜ್ ಬಳಿ ಮಲಗಿದ ವರದಿಗಾರರು ಟಿವಿ ಪರದೆಗಳ ಮುಂದೆ ಪ್ರತ್ಯಕ್ಷರಾಗಿ ತಾಜಾ ಸುದ್ದಿ ಹೇಳುತ್ತಿದ್ದರು. ಇಡೀ ದೇಶ ಇದನ್ನು ನೋಡುತ್ತಿರುತ್ತದೆ ಎಂಬ ಪರಿವೆಯೇ ಇಲ್ಲದಂತೆ ತಮ್ಮ ಸಾಹಸ ಪ್ರದರ್ಶನಕ್ಕೇ ಎಲ್ಲ ಚಾನೆಲ್‌ಗಳು ಮುಗಿಬಿದ್ದಿದ್ದವು.

ಪೊಲೀಸರು ಪದೇ ಪದೇ ಬಂದು ಮೀಡಿಯಾದವರನ್ನು ಅಲ್ಲಿಂದ ದೂರ ಕಳಿಸಲು ನಡೆಸಿದ ಎಲ್ಲ ಯತ್ನಗಳು ವಿಫಲವಾದವು. ತಮ್ಮ ಸಿಬ್ಬಂದಿ ಭಯೋತ್ಪಾದಕರ ಗುಂಡಿಗೆ ಬಲಿಯಾಗಿ ಹುತಾತ್ಮರಾಗಲಿ ಎಂದು ಚಾನೆಲ್‌ಗಳ ಒಡೆಯರು ಬಯಸಿದ್ದರೆ?

ಈ ಚಿತ್ರ ಕೇವಲ ನಮ್ಮ ಬಳಿ ಇದೆ, ಈ ಸುದ್ದಿಯನ್ನು ನಾವೇ ಮೊದಲು ಬ್ರೇಕ್ ಮಾಡಿದ್ದು, ನಮ್ಮ ವರದಿಗಾರರು ಕೆಲವೇ ಅಡಿ ದೂರದಲ್ಲಿದ್ದು ವರದಿ ಮಾಡಿದರು, ಒಂದು ಗುಂಡು ನಮ್ಮ ಕ್ಯಾಮೆರಾ ಕ್ರೂ ಸಮೀಪವೇ ಹಾದಿ ಹೋಯಿತು... ಎಂದೆಲ್ಲ ತೀರಾ ಅಸಹ್ಯಕರವಾಗಿ ತಮ್ಮ ಚಾನೆಲ್‌ಗಳ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಯತ್ನಿಸಿದ್ದು ಬೆಂದ ಮನೆಯಲ್ಲಿ ಗಳ ಹಿರಿದಂತೆ ಅಲ್ಲವೆ?

ಮೀಡಿಯಾದವರು ಇದ್ದಾರೆ ಎಂಬ ಕಾರಣಕ್ಕೆ ಉಗ್ರರು ಆ ಭಾಗದಲ್ಲೇ ಹೆಚ್ಚು ಬಾಂಬ್‌ಗಳನ್ನು ಸಿಡಿಸಿದರು, ಗುಂಡಿನ ದಾಳಿ ನಡೆಸಿದರು. ತನ್ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರಚಾರ ಗಳಿಸಿದರು ಎಂದು ಬ್ಲಾಗ್ ಒಂದರಲ್ಲಿ ಬರೆದಿದ್ದನ್ನು ಗಮನಿಸಿದೆ. ಯಾಕೆ, ಮೀಡಿಯಾದವರಿಗೆ ಇಷ್ಟು ಸರಳ ಸೂಕ್ಷ್ಮಗಳು ಅರ್ಥವಾಗಲಿಲ್ಲವೆ?

ದಾಳಿಯಿಂದ ಬದುಕುಳಿದ ಬಂದ ಕೆಲ ಅಮೆರಿಕನ್ ಪ್ರಜೆಗಳು ಸಿಎನ್‌ಎನ್ ಚಾನೆಲ್‌ನಲ್ಲಿ ತಾವು ಯಾವ ಕೊಠಡಿಯಲ್ಲಿ ಇದ್ದೆವು ಎಂದು ಪ್ರಸಾರ ಮಾಡಿದ್ದರಿಂದಾಗಿ ಜೀವ ಉಳಿಸಿಕೊಂಡಿದ್ದೇ ಹೆಚ್ಚು ಎಂದು ಹೇಳಿಕೊಂಡಿದ್ದಾರೆ. ಅಲ್ಲಿ ಸಿಕ್ಕಿಬಿದ್ದಿದ್ದ ಜನರ ಪ್ರಾಣದ ಬೆಲೆಗಿಂತ ರೋಚಕ ಸುದ್ದಿಗಳನ್ನು ಉಣಬಡಿಸುವ ಚಾನೆಲ್‌ಗಳ ರಕ್ತದಾಹದ ಅಬ್ಬರವೇ ಹೆಚ್ಚಾಗಿ ಹೋಯಿತಲ್ಲ?

ಭಯೋತ್ಪಾದಕರು ಈ ಬಾರಿ ಮುಂಬೈಗೆ ಕಾಲಿಟ್ಟಾಗಲೇ ವಿದೇಶೀಯರನ್ನು ಗುರಿಯಾಗಿರಿಸಿಕೊಂಡಿದ್ದರು. ಸಾಕಷ್ಟು ವಿದೇಶೀಯರನ್ನು ಕೊಂದು ಹಾಕುವಲ್ಲಿ ಸಫಲರಾದರು. ವಿಶ್ವವೇ ತಮ್ಮನ್ನು ಗಮನಿಸಿಬೇಕು ಎಂದು ಅವರು ಬಯಸಿದ್ದರು. ಅವರ ಬಯಕೆಯಂತೆ ನಮ್ಮ ಮೀಡಿಯಾಗಳು ಭಯೋತ್ಪಾದಕರ ವಿಧ್ವಂಸಕ ದೃಶ್ಯಗಳನ್ನು ಲೈವ್ ಪ್ರಸಾರ ಮಾಡಿದವು. ಮತ್ತು ಅವರ ಉದ್ದೇಶವನ್ನು ಈಡೇರಿಸಿದವು.

*******

ಮೀಡಿಯಾಗಳು ಯಾವ ಪರಿಯ ಭಯೋತ್ಪಾದನೆ ಹುಟ್ಟು ಹಾಕಿದವೆಂದರೆ ಗಾನಕೋಗಿಲೆ ಲತಾ ಮಂಗೇಶ್ಕರ್ ಟಿವಿಗಳನ್ನು ನೋಡುತ್ತ ೩೦೦ ಬಾರಿ ಅತ್ತುಬಿಟ್ಟೆ ಎಂದು ಹೇಳಿಕೆ ನೀಡಿದರು. ಪಾಪ ಅವರಿಗೆ ಗೊತ್ತಿರದ ವಿಷಯವೆಂದರೆ ಟಿವಿ ಚಾನೆಲ್‌ಗಳು ಒಂದೇ ದೃಶ್ಯವನ್ನು ಸಾವಿರ ಬಾರಿ ತೋರಿಸಿ, ಅದನ್ನು ಈಗಷ್ಟೆ ನಡೆದಿದೆ ಎಂಬಂತೆ ಬಿಂಬಿಸುತ್ತಾರೆ. ಕಡೇ ಪಕ್ಷ ಆ ದೃಶ್ಯದ ಮೇಲ್ಭಾಗದಲ್ಲಿ ಕಾಣಿಸುವ ಲೈವ್ ಎಂಬ ಅಕ್ಷರಗಳನ್ನು ಕಿತ್ತುಹಾಕಬೇಕೆನ್ನುವ ಸೌಜನ್ಯವೂ ಅವರಿಗಿರುವುದಿಲ್ಲ.

ಟಿವಿಗಳ ಮುಂದೆ ಕುಳಿತ ಅಮಾಯಕ ಜನರು, ಇನ್ನೊಂದು ಗುಂಡು ಬಿತ್ತು, ಇನ್ನೊಂದು ಬಾಂಬು ಸ್ಫೋಟಿಸಿತು ಎಂದು ಗಾಬರಿಪಡುತ್ತಲೇ, ಬೆದರುತ್ತಲೇ ಕಾಲ ಕಳೆಯುತ್ತಾರೆ.

ಹಾಗಂತ ಮುಂಬೈನಲ್ಲಿ ನಡೆದ ಘಟನೆ ಸಾಮಾನ್ಯ ಪ್ರಮಾಣದ್ದು ಎಂದೇನು ಹೇಳುತ್ತಿಲ್ಲ. ನಿಸ್ಸಂಶಯವಾಗಿ ಇದು ಭಾರತದ ಮೇಲೆ ನಡೆದ ಬಹುದೊಡ್ಡ ಆಕ್ರಮಣ. ಇದನ್ನು ಸುಲಭವಾಗಿ ಅರಗಿಸಿಕೊಳ್ಳುವುದು ಸಾಧ್ಯವಿಲ್ಲ. ಆದರೆ ಚಾನೆಲ್‌ಗಳು ಇಂಥ ದೊಡ್ಡ ಆಕ್ರಮಣವೊಂದನ್ನು ಇನ್ನಷ್ಟು ಬೆಳೆಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸಿದವು.

*******

ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ಕಾರ್ಯಾಚರಣೆ ಮುಗಿದ ನಂತರ ತಾಜ್ ಹೋಟೆಲಿಗೆ ಭೇಟಿ ನೀಡಿದರು. ಆಗ ಅವರೊಂದಿಗೆ ಪುತ್ರ, ಬಾಲಿವುಡ್ ನಟ ರಿತೇಶ್ ದೇಶಮುಖ್ ಇದ್ದರು. ಅವರೊಂದಿಗೆ ಬಾಲಿವುಡ್ ನಿರ್ದೇಶಕ, ನಿರ್ಮಾಪಕ ರಾಮ್‌ಗೋಪಾಲ್ ವರ್ಮಾ ಸಹ ಇದ್ದರು.

ದೇಶಮುಖ್ ತಮ್ಮೊಂದಿಗೆ ಹಿರಿಯ ಅಧಿಕಾರಿಗಳನ್ನು ಕರೆದೊಯ್ದಿದ್ದರೆ, ಸಚಿವ ಸಂಪುಟದ ಸದಸ್ಯರನ್ನು ಕರೆದೊಯ್ದಿದ್ದರೆ ಯಾರ ಆಕ್ಷೇಪಣೆಯೂ ಇರಲಿಲ್ಲ. ರಿತೇಶ್‌ಗೆ, ವರ್ಮಾಗೆ ಅಲ್ಲೇನು ಕೆಲಸವಿತ್ತು. ಸಹಜವಾಗಿಯೇ ಇದು ವಿವಾದಕ್ಕೆ ಕಾರಣವಾಯಿತು. ದೇಶಮುಖ್ ಉದ್ದೇಶಪೂರ್ವಕವಾಗಿ ಅವರನ್ನು ಕರೆದೊಯ್ದಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು. ಉದ್ದೇಶಪೂರ್ವಕವಾಗಿ ಕರೆದೊಯ್ಯದಿದ್ದರೂ ಅದು ಅಕ್ಷಮ್ಯ ಎಂಬುದರಲ್ಲಿ ಎರಡು ಮಾತಿಲ್ಲ.

ಚಾನೆಲ್‌ಗಳು ಯಥಾಪ್ರಕಾರ ದೇಶಮುಖ್ ವಿರುದ್ಧ ಹರಿಹಾಯುತ್ತಿವೆ. ವರ್ಮಾ ಮುಂದಿನ ಸಿನಿಮಾಗೆ ತಯಾರಿ ನಡೆಸಲು ಅಲ್ಲಿಗೆ ಹೋಗಿದ್ದಾನೆ ಎಂಬಲ್ಲಿಂದ ಹಿಡಿದು, ಟೆರರ್ ಟೂರಿಸಮ್, ಪಿಕ್ನಿಕ್ ಮಾಡಿದರು ಎನ್ನುವವರೆಗೆ ಟೀಕೆಗಳು ಮುಂದುವರೆಯುತ್ತಿವೆ. ದೇಶಮುಖ್ ಅವರನ್ನು ಎಲ್ಲರೂ ಖಂಡಿಸಬೇಕು, ನಿಜ.

ಆದರೆ ಇದೇ ಚಾನೆಲ್‌ಗಳು ಮುಂಬೈನಲ್ಲಿ ನಡೆದ ಇಡೀ ದೃಶ್ಯಾವಳಿಗಳನ್ನು ಡಾಕ್ಯುಮೆಂಟರಿ ರೂಪದಲ್ಲಿ ಪ್ರಸ್ತುತಪಡಿಸುತ್ತ ಇದೇ ವರ್ಮಾನ ಅಂಡರ್‌ವರ್ಲ್ಡ್ ಸಿನಿಮಾಗಳ ಮ್ಯೂಸಿಕ್ ಟ್ಯೂನ್‌ಗಳನ್ನು ಹಿನ್ನೆಲೆಯಲ್ಲಿ ಬಳಸಿ ಮಾಡಿದ್ದೇನು? ಇಡೀ ಮುಂಬೈ ದೃಶ್ಯಾವಳಿಗಳನ್ನು ಇವರು ಹಾಲಿವುಡ್ ಆಕ್ಷನ್ ಸಿನಿಮಾಗಳ ಹಾಗೇ ತೋರಿಸಲಿಲ್ಲವೆ?

ಸಿನಿಮಾಗಳಲ್ಲಿ ಇರುವ ನಾಟಕೀಯತೆ, ಹಿನ್ನೆಲೆ ಸಂಗೀತ, ವೈಭವ ಎಲ್ಲವೂ ಇವರು ತೋರಿಸುವ ತುಣುಕುಗಳಲಿಲ್ಲವೆ?

*******

ಜನ ಆಕ್ರೋಶಗೊಂಡಿದ್ದಾರೆ. ಸಿಟ್ಟು ನೆತ್ತಿಗೇರಿದೆ. ತಮ್ಮನ್ನು ರಕ್ಷಿಸುವ ಜನರೆಲ್ಲ ಎಲ್ಲಿ ಹೋದರು ಎಂದು ಕೇಳುತ್ತಿದ್ದಾರೆ. ಟಿವಿ ಚಾನೆಲ್‌ಗಳು ಇದನ್ನು ಬಳಸಿಕೊಂಡು ಈಗ ರಾಜಕಾರಣಿಗಳ ವಿರುದ್ಧ ಯುದ್ಧ ಸಾರಿವೆ.

ಈ ಪ್ರಕ್ರಿಯೆಯಲ್ಲಿ ಹರಿದುಬರುತ್ತಿರುವ ಪ್ರತಿಕ್ರಿಯೆಗಳನ್ನು ಗಮನಿಸಿ. ದೇಶದ ಆಡಳಿತ ಸೂತ್ರವನ್ನು ಎನ್‌ಎಸ್‌ಜಿಯೇ ನಡೆಸಬೇಕು, ಮಿಲಿಟರಿ ಆಡಳಿತ ಬರಬೇಕು, ಅಮೆರಿಕ ದೇಶವು ಇರಾಕ್ ಹಾಗು ಅಫಘಾನಿಸ್ತಾನಗಳ ಮೇಲೆ ನಡೆಸಿದಂತೆ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕು, ರಾಜಕಾರಣಿಗಳಿಗೆ ಇರುವ ಭದ್ರತೆ ತೆಗೆದುಹಾಕಿ ಅವರನ್ನು ಸಾಯಲು ಬಿಡಬೇಕು... ಇಂಥದ್ದೇ ತಲೆಬುಡವಿಲ್ಲದ ಸುಧಾರಣಾ ಪ್ರಸ್ತಾಪಗಳು.

ಬೆಂಗಳೂರಿನಲ್ಲಿ ೧೧-೩೦ಕ್ಕೆ ಡಿಸ್ಕೋಥೆಕ್‌ಗಳನ್ನು ಬಂದ್ ಮಾಡಿ ಎಂದರೆ ಗಾಂಧಿ ಪ್ರತಿಮೆ ಬಳಿ ಬಂದು ಪ್ರತಿಭಟನೆ ನಡೆಸುವ ಜನರೇ ಇಂಥ ಪ್ರಸ್ತಾಪಗಳನ್ನು ಒಡ್ಡುತ್ತಿದ್ದಾರೆ ಎಂಬುದು ವಿಶೇಷ. ಒಂದು ಹೊಟೆಲ್‌ನಲ್ಲಿ ಸಣ್ಣ ಚೆಕಿಂಗ್ ವ್ಯವಸ್ಥೆಗೆ ಒಳಗಾಗಲು ಕೊಸರಾಡುವ ಜನ ಮಿಲಿಟರಿ ಆಡಳಿತದ ಬಗ್ಗೆ ಮಾತನಾಡುತ್ತಾರೆ ಎಂಬುದೇ ದೊಡ್ಡ ತಮಾಶೆ. ಮಿಲಿಟರಿ ಆಡಳಿತವು ದೇಶದ ಜನರ ಬದುಕುವ ಹಕ್ಕನ್ನು ನಿರಾಕರಿಸುತ್ತದೆ ಎಂಬ ಸರಳ ಸತ್ಯ ಈ ಪುಣ್ಯಾತ್ಮರಿಗೆ ಗೊತ್ತಿಲ್ಲದಿರುವಷ್ಟು ಅಮಾಯಕರೆ ಈ ಜನ? ಮಹಾತ್ಮಗಾಂಧಿ, ಇಂದಿರಾಗಾಂಧಿ, ರಾಜೀವ್‌ಗಾಂಧಿ..ಹೀಗೆ ಹಲವು ಮಂದಿ ಈಗಾಗಲೇ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದಾರೆ. ನಮ್ಮ ವಿಐಪಿಗಳ ಭದ್ರತೆ ಹಿಂದಕ್ಕೆ ತೆಗೆದುಕೊಂಡು, ಅವರುಗಳೂ ಸತ್ತುಹೋದರೆ ದೇಶ ಉದ್ಧಾರವಾಗುತ್ತದೆಯೇ?

ಪಾಕಿಸ್ತಾನ ಒಂದು ಅಣು ರಾಷ್ಟ್ರ. ಹೆಸರಿಗೆ ಅಲ್ಲಿರುವುದು ಪ್ರಜಾಪ್ರಭುತ್ವ ಸರ್ಕಾರವಾದರೂ ಅಲ್ಲಿರುವುದು ಅರಾಜಕ ವ್ಯವಸ್ಥೆ. ಆ ದೇಶದ ಅಧ್ಯಕ್ಷನಿಗೆ ಮಾನಸಿಕ ಸ್ಥಿಮಿತ ಇಲ್ಲ ಎಂಬ ಮಾಹಿತಿಗಳಿವೆ. ಐಎಸ್‌ಐ, ಸೇನೆಯಂಥ ಅಪಾಯಕಾರಿ ಅಂಗಗಳೂ ಸಹ ಅಧ್ಯಕ್ಷ, ಪ್ರಧಾನಿಯ ಹಿಡಿತದಲ್ಲಿ ಇಲ್ಲ.

ಆ ದೇಶ ಎಂಥ ದುರ್ಗತಿಯಲ್ಲಿದೆ ಎಂದರೆ ಭಾರತದ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಗೆ ತಯಾರಿಸಲಾದ ಮುಜಾಹಿದಿನ್‌ಗಳು ಇವತ್ತು ಪಾಕಿಸ್ತಾನವನ್ನೇ ನುಂಗುವಷ್ಟು ಬೆಳೆದಿದ್ದಾರೆ. ಅವರು ಸಾಕಿದ ಘಟಸರ್ಪಗಳು ಅವರನ್ನೇ ಕಡಿಯುತ್ತಿವೆ. ಇಂಡಿಯಾದಲ್ಲಿ ನಡೆಯುವ ಹಾಗೆಯೇ ಪಾಕಿಸ್ತಾನದಲ್ಲೂ ಭಯೋತ್ಪಾದಕರ ಸಾವಿನ ಆಟಗಳು ನಡೆಯುತ್ತಿವೆ.

ಒಂದೆಡೆ ಚೀನಾ, ಮತ್ತೊಂದೆಡೆ ಅಮೆರಿಕದ ಚದುರಂಗದ ಆಟದ ಕಾಯಿಯಾಗಿರುವ ಪಾಕಿಸ್ತಾನ ನಿಜಕ್ಕೂ ಕ್ಷೆಭೆಯಲ್ಲಿದೆ. ಇಂಥ ಅಸ್ವಸ್ಥ ಮನಸ್ಸಿನ ರಾಷ್ಟ್ರವೊಂದರ ಮೇಲೆ ಏಕಾಏಕಿ ಯುದ್ಧ ಹೂಡಿದರೆ, ಒಂದೊಮ್ಮೆ ಅದು ತನ್ನಲ್ಲಿನ ಅಣ್ವಸ್ತ್ರವನ್ನು ಭಾರತದ ಮೇಲೆ ಪ್ರಯೋಗಿಸಿದರೆ ಅದರ ಪರಿಣಾಮಗಳೇನಾಗುತ್ತವೆ? ಅದರ ಬಗ್ಗೆ ಯೋಚಿಸುವವರ್‍ಯಾರು?

******

ಟಿವಿ ಚಾನೆಲ್‌ಗಳಲ್ಲಿ ಇಂಥ ವಿಷಯಗಳನ್ನು ಚರ್ಚೆ ಮಾಡಲು ಬರುತ್ತಿರುವ ಎಕ್ಸ್‌ಪರ್ಟ್‌ಗಳಾದರೂ ಯಾರು? ಕಿರುತೆರೆ ನಟಿ ಸ್ಮೃತಿ ಇರಾನಿ, ಬಾಲಿವುಡ್ ನಟ ರಾಹುಲ್ ಬೋಸ್ ತರಹದ ಸಿನಿಮಾ ಮುಖಗಳು, ಪ್ರಸಾದ್ ಬಿದ್ದಪ್ಪನ ತರಹದ ಫ್ಯಾಷನ್ ಗುರುಗಳು, ದೇಶದ ಸಾಮಾಜಿಕ ಬದುಕಿನ ಚಿತ್ರವೇ ಗೊತ್ತಿಲ್ಲದ ಒಂದಷ್ಟು ಟೆಕ್ಕಿಗಳು, ಉದ್ಯಮಿಗಳು, ಡಿಜೆಗಳು, ಎನ್‌ಜಿಓಗಳ ಹೆಸರಿನ ಕೆಲ ಸಮಾಜಸೇವಕರು...

ಯಾಕೆ ತಮ್ಮ ಪ್ಯಾನೆಲ್‌ನಲ್ಲಿ ಒಬ್ಬ ರಿಕ್ಷಾವಾಲನನ್ನು, ಒಬ್ಬ ಕೂಲಿ ಕಾರ್ಮಿಕನನ್ನು, ಒಬ್ಬ ಬಸ್ ಡ್ರೈವರನ್ನು, ಒಬ್ಬ ಕೊಳಗೇರಿ ಹೆಂಗಸನ್ನು ಇವರು ಕೂಡಿಸಿಕೊಳ್ಳುವುದಿಲ್ಲ? ಯಾಕೆ ಅವರ ಅಭಿಪ್ರಾಯಗಳನ್ನು ಪಡೆಯುವುದಿಲ್ಲ? ಅವರ್‍ಯಾರೂ ಈ ದೇಶದ ಪ್ರಜೆಗಳಲ್ಲವೆ? ಈ ದೇಶದ ಬಡ ಶ್ರಮಿಕ ಜನವರ್ಗದ ಅಭಿಪ್ರಾಯಗಳನ್ನು ಕೇಳಿ ನೋಡಿ, ಈ ಟಿವಿ ಚಾನೆಲ್‌ಗಳ ಪ್ಯಾನೆಲ್‌ಗಳಲ್ಲಿ ಕುಳಿತು ಮಾತನಾಡುವ ಪ್ರಭೃತಿಗಳಿಗಿಂತ ಸೆನ್ಸಿಬಲ್ ಆಗಿ ಅವರು ಮಾತನಾಡಬಲ್ಲರು.

ವಿ ನೀಡ್ ಟು ಡು ಸಮ್‌ಥಿಂಗ್ ಎಂದು ಸಾರಿ ಹೋಗುವ ಈ ಜನರು ಜವಾಬ್ದಾರಿ ತಮ್ಮ ಮೇಲೆ ತೆಗೆದುಕೊಳ್ಳಲು ಹಿಂಜರಿಯುವವರು. ಚುನಾವಣೆಗೆ ಸ್ಪರ್ಧಿಸಿ ಎಂದರೆ ಮುಖಮುಚ್ಚಿಕೊಳ್ಳುವವರು. ಕಡೆ ಪಕ್ಷ ಮತದಾನವನ್ನಾದರೂ ಮಾಡಿ ಅಂದರೆ ಅವರಿಗೆ ಚುನಾವಣೆಯ ದಿನ ಬ್ಯುಸಿ ಷೆಡ್ಯೂಲ್‌ಗಳಿರುತ್ತವೆ!

ಎನ್‌ಡಿಟಿವಿಯ ಬರ್ಖಾ ದತ್ ದಾಳಿಯ ನಂತರ ನಡೆಸಿಕೊಟ್ಟ ವಿ ದ ಪೀಪಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಏಕೈಕ ರಾಜಕಾರಣಿ ಅಭಿಷೇಕ್ ಸಿಂಗ್ವಿ. ಈ ಕಾರ್ಯಕ್ರಮಕ್ಕೆ ಬಂದರೆ ಜನರ ಕೈಯಲ್ಲಿ ಹೊಡೆಸಿಕೊಳ್ಳಬೇಕಾಗುತ್ತದೆ ಎಂದು ಯಾರೂ ಬಂದಿಲ್ಲ ಎಂದು ಬರ್ಖಾ ಬಾಲಿಷವಾಗಿ ಹೇಳಿ ಜನರನ್ನು ಕೆರಳಿಸುತ್ತಿದ್ದರು.

ಎಲೆಕ್ಟ್ರಾನಿಕ್ ಮಾಧ್ಯಮಗಳ ಕೆಲ ಪತ್ರಕರ್ತರು ದೇಶದ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಮತ್ತು ಅದೇ ರೀತಿಯ ಉನ್ನತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರಿಗೆ ಇಂಥ ಪ್ರಶಸ್ತಿ ಕೊಟ್ಟವರು ಯಥಾಪ್ರಕಾರ ರಾಜಕಾರಣಿಗಳೇ.

ರಾಜಕಾರಣಿಗಳ ವಿರುದ್ಧ ಹರಿಹಾಯುತ್ತಿರುವ ಈ ಪತ್ರಕರ್ತರಲ್ಲಿ ಕೆಲವರಾದರೂ ತಮ್ಮ ಪ್ರಶಸ್ತಿಗಳನ್ನು ವಾಪಾಸು ಮಾಡಿ ಪ್ರತಿಭಟನೆ ದಾಖಲಿಸುವರೋ ಎಂದು ಕಾಯುತ್ತಿದ್ದೇನೆ!

**********

ಮುಂಬೈ ಬಾಂಬ್ ಸ್ಫೋಟದ ಪರಿಣಾಮಗಳು ವಿಪರೀತ. ತೀರಾ ಗಂಭೀರವೆಂದರೆ ದೇಶದಲ್ಲಿ ಮತ್ತೆ ಧರ್ಮದ ಹೆಸರಿನಲ್ಲಿ ಧ್ರುವೀಕರಣ ನಡೆಯುತ್ತಿದೆ. ಮುಸ್ಲಿಮರು ಸುಲಭವಾಗಿ ಹಿಂದೂ ಮೂಲಭೂತವಾದಿಗಳ ಸಾಫ್ಟ್ ಟಾರ್ಗೆಟ್ ಆಗುವ ಸಾಧ್ಯತೆಗಳೂ ಇವೆ.

ನಿಜ, ಭಾರತೀಯ ಮುಸ್ಲಿಮರಲ್ಲೂ ಭಯೋತ್ಪಾದಕರನ್ನು ಬೆಂಬಲಿಸುವ, ಭಯೋತ್ಪಾದನೆಯಲ್ಲಿ ತೊಡಗಿಕೊಂಡಿರುವ ಸಣ್ಣ ಗುಂಪೊಂದಿದೆ. ಗಡಿಯಾಚೆಗಿನ ಭಯೋತ್ಪಾದನೆ ಇಂದು ದೇಶದ ಒಳಗಿನ ಭಯೋತ್ಪಾದನೆಯಾಗಿ ರೂಪಾಂತರಗೊಳ್ಳುತ್ತಿದೆ. ಅದೇ ಸಂದರ್ಭದಲ್ಲಿ ಮುಸ್ಲಿಮರು ನಡೆಸುವ ಭಯೋತ್ಪಾದನೆಗೆ ಪ್ರತಿಯಾಗಿ ಹಿಂದೂಗಳ ಭಯೋತ್ಪಾದನೆಯೂ ಆರಂಭಗೊಂಡಿದೆ.

ಮಾಲೇಗಾಂವ್ ಸ್ಫೋಟದ ಪ್ರಕರಣ ಹಿಂದೂ ಭಯೋತ್ಪಾದನೆಯ ಮೊದಲ ಪ್ರಕರಣ ಎಂದು ಸುಳ್ಳು ಸುಳ್ಳೇ ಹೇಳುವುದು ಬೇಡ. ಬಾಬರಿ ಮಸೀದಿ ಧ್ವಂಸದಿಂದ ಹಿಡಿದು ಗುಜರಾತ್ ನರಮೇಧದವರೆಗೆ ಹಿಂದೂ ಮೂಲಭೂತವಾದಿಗಳು ನಡೆಸಿದ ದುಷ್ಕೃತ್ಯಗಳೂ ಸಹ ಭಯೋತ್ಪಾದನೆಯೇ ಎಂಬುದನ್ನು ಮರೆಮಾಚುವಂತಿಲ್ಲ.

ಮಾಲೆಗಾಂವ್ ಸ್ಫೋಟದ ತನಿಖೆ ನಡೆಸಿದ್ದ ಮುಂಬೈ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಭಯೋತ್ಪಾದಕರ ಗುಂಡಿಗೆ ಬಲಿಯಾದರು. ಒಂದು ವೇಳೆ ಅವರು ಬದುಕಿದ್ದರೆ ಇವತ್ತು ಅವರನ್ನು ಹೀರೋ ಮಾಡಿರುವ ಜನರೆಲ್ಲ ಅವರ ವಿರುದ್ಧ ಕೊಳಕುಶಬ್ದಗಳಲ್ಲಿ ಮಾತನಾಡುತ್ತಿದ್ದರು. ಇಡೀ ಮುಂಬೈ ದಾಳಿಯ ಹೊಣೆಯನ್ನು ಕರ್ಕರೆ ತಲೆಗೆ ಹೊರಿಸಿ, ಆತನನ್ನು ಮಾನಸಿಕವಾಗಿ ಸಾಯಿಸಿಬಿಡುತ್ತಿದ್ದರು. ಇದರ ಅರಿವಿರುವ ಕರ್ಕರೆ ಪತ್ನಿ ನರೇಂದ್ರ ಮೋದಿ ಕೊಡಲು ಬಯಸಿದ್ದ ಭಕ್ಷೀಸನ್ನು ತಿರಸ್ಕರಿಸಿದರು.

ದೇಶ ಇಂದು ಒಗ್ಗಟ್ಟಾಗಿ, ಎದುರಾಗಿರುವ ಸಂಕಟಗಳಿಗೆ ಉತ್ತರ ಕಂಡುಕೊಳ್ಳಬೇಕು. ದೇಶಕ್ಕಾಗಿ ಮಡಿದ ವೀರಯೋಧರ ತ್ಯಾಗ-ಬಲಿದಾನಗಳು ವ್ಯರ್ಥವಾಗದಂತೆ ನಮ್ಮ ಆಡಳಿತ ವ್ಯವಸ್ಥೆ ಕ್ರಮಕೈಗೊಳ್ಳಬೇಕು. ದೇಶದ ಆಂತರಿಕ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಏನೇನು ಮಾಡಲು ಸಾಧ್ಯವೋ ಅದೆಲ್ಲವನ್ನೂ ನಮ್ಮ ಸರ್ಕಾರಗಳು ಮಾಡಬೇಕು. ಸಿನಿಕ ಪ್ರತಿಕ್ರಿಯೆಗಳ ಅಬ್ಬರದಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಗೆಡಹುವ ಪ್ರಯತ್ನಗಳು ಸಲ್ಲದು. ದೇಶದ ಧರ್ಮದ ಹೆಸರಿನಲ್ಲಿ ಸಂಪೂರ್ಣ ಒಡೆದುಹೋಗದಂತೆ ತಡೆಯಬೇಕಾಗಿರುವುದು ತಕ್ಷಣದ ಅಗತ್ಯ. ಹಿಂದೂಗಳು ತಮ್ಮೊಳಗಿನ ಭಯೋತ್ಪಾದಕರ ವಿರುದ್ಧ, ಮುಸ್ಲಿಮರು ತಮ್ಮೊಳಗಿನ ಭಯೋತ್ಪಾದಕರ ವಿರುದ್ಧ ಹೋರಾಡುವಂತಾಗಬೇಕು. ಚಾನೆಲ್‌ಗಳು ಇಂಥ ವಿಷಯಗಳಿಗೆ ಆದ್ಯತೆ ನೀಡುವ ಬದಲು ನಕ್ವಿ, ಆರ್.ಆರ್.ಪಾಟೀಲ್, ದೇಶಮುಖ್, ಅಚ್ಯುತಾನಂದನ್ ಇತ್ಯಾದಿ ವ್ಯಕ್ತಿಗಳ ವಿರುದ್ಧ ಸಮರ ಸಾರುತ್ತಲೇ ಕುಳಿತಿದ್ದರೆ ಅವರ ಟಿಆರ್‌ಪಿ ಹೆಚ್ಚುತ್ತದೆಯೇ ಹೊರತು ದೇಶ ಉದ್ಧಾರವಾಗಲಾರದು.

ಇಡೀ ಜಗತ್ತಿಗೆ ಬುದ್ಧಿ ಹೇಳುವ ಚಾನೆಲ್‌ಗಳ ಜನ ಇದನ್ನು ಗಮನಿಸುವರೆ?
ಚಾನೆಲ್‌ಗಳು ಹೇಳುತ್ತಿರುವ ಮಾತನ್ನು ಅವರಿಗೇ ಅನ್ವಯಿಸಿ ಹೇಳುವುದಾದರೆ...
enough is enough!

********

Monday, November 3, 2008

ನಾರಾಯಣಗೌಡರು ಕರ್ನಾಟಕದ ರಾಜ್ ಠಾಕ್ರೆ ಆಗಬೇಕೆ?


ಪ್ರಾದೇಶಿಕ ಅಸ್ಮಿತೆಯನ್ನು ಉಳಿಸಿಕೊಳ್ಳುವ ಬಿಡಿಬಿಡಿ ಹೋರಾಟಗಳು ಈಗ ನಿರ್ಣಾಯಕ ಸ್ಥಿತಿ ತಲುಪಿವೆ. ದಕ್ಷಿಣ ಭಾರತದಲ್ಲಿ ವಿಶೇಷವಾಗಿ ತಮಿಳುನಾಡಿನಲ್ಲಿ ಹಿಂದಿ ವಿರೋಧಿ ಚಳವಳಿ ಯಶಸ್ವಿಯಾಗಿದ್ದು ಈಗ ಇತಿಹಾಸ. ತಮಿಳುನಾಡಿನಲ್ಲಿ ಈಗ ಇರುವುದು ದ್ವಿಭಾಷಾ ಸೂತ್ರ ಮಾತ್ರ. ಹಿಂದಿಹೇರಿಕೆಯನ್ನು ಸಮರ್ಥವಾಗಿ ಮಟ್ಟ ಹಾಕಿದ್ದು ತಮಿಳುನಾಡು ಮಾತ್ರ. ಆದರೆ ಕರ್ನಾಟಕ ಸೇರಿದಂತೆ ಇತರ ದಕ್ಷಿಣಭಾರತದ ರಾಜ್ಯಗಳು ಹಿಂದಿಯನ್ನು ಮೈಮೇಲೆ ಬಿಟ್ಟುಕೊಂಡಿವೆ.

ಹಿಂದಿಭೂತದ ಸಮಸ್ಯೆ ಇತರೆಲ್ಲ ರಾಜ್ಯಗಳಿಂದ ಹೆಚ್ಚು ಬಾಧಿಸುತ್ತಿರುವುದು ಮಹಾರಾಷ್ಟ್ರವನ್ನು. ಮರಾಠಿ ಅಸ್ಮಿತೆಯ ಹೋರಾಟವನ್ನು ಕೈಗೆತ್ತಿಕೊಂಡ ಶಿವಸೇನೆ ಈಗ ಅದರ ಅಧಿನಾಯಕ ಬಾಳಾ ಸಾಹೇಬ್ ಠಾಕ್ರೆಯ ಹಾಗೆ ಮುದಿಬಿದ್ದಿದೆ. ಬಾಳಾ ಠಾಕ್ರೆ ಮಹಾರಾಷ್ಟ್ರಕ್ಕೆ, ವಿಶೇಷವಾಗಿ ಮುಂಬೈಗೆ ಇದ್ದ ಸಮಸ್ಯೆ ಕನ್ನಡಿಗರದ್ದು, ತಮಿಳರದ್ದು ಎಂದು ಭಾವಿಸಿದ್ದರು. ಶಿವಸೇನೆ ಹೇಳಿಕೇಳಿ ಬಿಜೆಪಿಗಿಂತ ಹೆಚ್ಚು ಹಿಂದುತ್ವವನ್ನು ಪ್ರತಿಪಾದಿಸಿದ ರಾಜಕೀಯ ಪಕ್ಷ. ಹೀಗಾಗಿ ಬಿಜೆಪಿಯ ಏಕಧರ್ಮ, ಏಕಸಂಸ್ಕೃತಿ ಸಿದ್ಧಾಂತಗಳು ಶಿವಸೇನೆಯನ್ನೂ ಆವರಿಸಿತ್ತು. ಆದಕಾರಣ ಹಿಂದಿ ಅವರಿಗೆ ಹೊರಗಿನ ಭಾಷೇಯೇನಾಗಿರಲಿಲ್ಲ. ಹೀಗಾಗಿ ಉತ್ತರಭಾರತೀಯರ ವಿರುದ್ಧ ಬಾಳಾ ಠಾಕ್ರೆ ಎಂದೂ ಜಗಳಕ್ಕೆ ನಿಂತಿರಲಿಲ್ಲ.

ಆದರೆ ಶಿವಸೇನೆಯ ಉತ್ತರಾಧಿಕಾರತ್ವಕ್ಕಾಗಿ ಹಾತೊರೆದು ನಿಂತಿದ್ದ ಬಾಳಾ ಠಾಕ್ರೆಯ ಅಣ್ಣನ ಮಗ ರಾಜ್ ಠಾಕ್ರೆ ಅದು ದಕ್ಕದೇ ಹೋದಾಗ ಆಯ್ದುಕೊಂಡಿದ್ದು ಪರ್ಯಾಯ ಮಾರ್ಗವನ್ನು. ಮಹಾರಾಷ್ಟ್ರ ನವನಿರ್ಮಾಣ ಸಮಿತಿ (ಎಂ.ಎನ್.ಎಸ್) ಮೂಲಕ ರಾಜ್ ಠಾಕ್ರೆ ಹಿಂದೀವಾಲಗಳ ವಿರುದ್ಧ ಸಮರ ಸಾರಿದರು. ಅಲ್ಲಿಯವರೆಗೆ ಉತ್ತರಭಾರತೀಯರ ವಿರುದ್ಧ ಮೆದುವಾಗಿದ್ದ ಬಾಳಾ ಠಾಕ್ರೆ ಸಹ ಅನಿವಾರ್ಯವಾಗಿ ರಾಜ್ ಹಿಡಿದ ಹಾದಿಯನ್ನೇ ಹಿಡಿಯಬೇಕಾಯಿತು.

ಕಳೆದ ಎರಡು ವರ್ಷಗಳಲ್ಲಿ ಅದರಲ್ಲೂ ವಿಶೇಷವಾಗಿ ಕಳೆದ ಒಂದು ತಿಂಗಳಿನಿಂದ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ. ರೈಲ್ವೆ ಇಲಾಖೆ ನೇಮಕಾತಿ ಸಂದರ್ಭದಲ್ಲಿ ಬಿಹಾರಿ ಯುವಕರನ್ನು ಹಿಡಿದು ತದುಕಿದ್ದು, ರಾಜ್ ಠಾಕ್ರೆ ಬಂಧನವಾಗಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಹಲವೆಡೆ ಹಿಂಸಾಚಾರಗಳು ನಡೆದಿದ್ದು, ನಾಟಕೀಯ ಬೆಳವಣಿಗೆಯಲ್ಲಿ ಠಾಕ್ರೆಯನ್ನು ಕೊಲ್ಲುವೆ ಎಂದು ಪಿಸ್ತೂಲು ಹಿಡಿದು ಹುಚ್ಚಾಟ ಮಾಡಿದ ಬಿಹಾರಿ ಯುವಕನನ್ನು ಪೊಲೀಸರು ಕೊಂದಿದ್ದು, ಇದೆಲ್ಲದಕ್ಕೆ ಪ್ರತಿಕ್ರಿಯೆಯಾಗಿ ಬಿಹಾರದಲ್ಲಿ ರೈಲುಗಳಿಗೆ, ರೈಲು ನಿಲ್ದಾಣಗಳಿಗೆ ಬೆಂಕಿ ಹಚ್ಚಿದ್ದು... ಹೀಗೆ ಹಲವು ಕ್ರಿಯೆ-ಪ್ರತಿಕ್ರಿಯೆಗಳು ನಡೆಯುತ್ತಲೇ ಇವೆ. ಬಿಹಾರದ ಎಲ್ಲ ರಾಜಕಾರಣಿಗಳು ಪಕ್ಷಭೇದ ಮರೆತು ರಾಜ್ ಠಾಕ್ರೆ ವಿರುದ್ಧ ಕದನಕ್ಕೆ ನಿಂತಿದ್ದಾರೆ.

*******

ಇದೆಲ್ಲದರ ನಡುವೆ ಹಲವರು ಎಂಇಎಸ್ ಹಾಗು ಕರ್ನಾಟಕ ರಕ್ಷಣಾ ವೇದಿಕೆಯನ್ನು, ರಾಜ್ ಠಾಕ್ರೆಯನ್ನು ಹಾಗು ಟಿ.ಎ.ನಾರಾಯಣಗೌಡರನ್ನು ಹೋಲಿಸಿ ಮಾತನಾಡುತ್ತಿದ್ದಾರೆ. ಮತ್ತೆ ಕೆಲವರು ನಾರಾಯಣಗೌಡರು ಕರ್ನಾಟಕದ ರಾಜ್ ಠಾಕ್ರೆ ಆಗಬೇಕು ಎನ್ನುತ್ತಿದ್ದಾರೆ.

ಹಿಂದೆ ಗೌಡರೊಂದಿಗೆ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ಒಬ್ಬ ಭಾಷಣಕಾರರು ಮಾತನಾಡುತ್ತ ಗೌಡರು ಕರ್ನಾಟಕದ ಬಾಳ ಠಾಕ್ರೆಯಾಗಬೇಕು ಎಂದಿದ್ದರು. ನನ್ನ ಸರದಿ ಬಂದಾಗ ನಾನು ಹೇಳಿದೆ: ನಾರಾಯಣಗೌಡರು ಕರ್ನಾಟಕದ ಬಾಳ ಠಾಕ್ರೆಯಾಗುವುದೂ ರಾಜ್ ಠಾಕ್ರೆಯಾಗುವುದೂ ಬೇಡ. ಬೇಕಿದ್ದರೆ ರಾಜ್ ಠಾಕ್ರೆಯೇ ಮಹಾರಾಷ್ಟ್ರದ ನಾರಾಯಣಗೌಡರಾಗಲಿ. ಗೌಡರು ಇನ್ನೊಬ್ಬರ ಮಾದರಿಯನ್ನು ಅನುಸರಿಸಬೇಕಾಗಿಲ್ಲ. ತಮ್ಮದೇ ಮಾದರಿಯನ್ನು ಸೃಷ್ಟಿಸಬೇಕು. ನಾರಾಯಣ ಗೌಡರು ನಾರಾಯಣಗೌಡರಾಗೇ ಉಳಿಯಬೇಕು, ಹಾಗೆಯೇ ಬೆಳೆಯಬೇಕು.

ಹೀಗೆ ಮಾತನಾಡುವಾಗ ಗೌಡರನ್ನು ಗಮನಿಸಿದ್ದೆ; ಅವರು ಮುಗುಳ್ನಗುತ್ತ ನನ್ನ ಮಾತಿಗೆ ಸಮ್ಮತಿಯೆಂಬಂತೆ ತಲೆಯಾಡಿಸಿದ್ದರು.

ಬಹುಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಎರಡೂ ಸಂಘಟನೆಗಳು ರೂಪುಗೊಂಡಿರುವುದೇ ಭಿನ್ನ ಉದ್ದೇಶ, ಆಲೋಚನೆಗಳು ಹಾಗು ಸಿದ್ಧಾಂತಗಳೊಂದಿಗೆ. ಎಂ.ಎನ್.ಎಸ್ ಹಾಗು ಶಿವಸೇನೆಗಳು ಅಪ್ಪಟ ರಾಜಕೀಯ ಪಕ್ಷಗಳು. ಮರಾಠಿ ಅಸ್ಮಿತೆಯ ಹೆಸರಿನಲ್ಲೇ ಶಿವಸೇನೆ ಮಹಾರಾಷ್ಟ್ರದಲ್ಲಿ ಅಧಿಕಾರ ಪಡೆಯಲು ಸಾಧ್ಯವಾಗಿದ್ದು. ಶಿವಸೇನೆಯ ಹಾಗೆಯೇ ಮರಾಠಿ ಭಾವನೆಗಳನ್ನು ಕೆರಳಿಸುವ ಮೂಲಕ ಅಧಿಕಾರ ಸ್ಥಾನದತ್ತ ಸಾಗಲು ರಾಜ್ ಠಾಕ್ರೆ ಪ್ರಯತ್ನಿಸುತ್ತಿದ್ದಾರೆ.

ಆದರೆ ಕರ್ನಾಟಕ ರಕ್ಷಣಾ ವೇದಿಕೆ ಹುಟ್ಟಿದಾಗಲೂ ರಾಜಕೀಯ ಪಕ್ಷವಾಗಿರಲಿಲ್ಲ. ಸರಿಸುಮಾರು ಒಂದು ದಶಕ ಕ್ರಮಿಸಿದರೂ (ಸ್ಥಾಪನೆ:೧೯೯೯) ಇನ್ನೂ ಅದು ರಾಜಕೀಯ ಪಕ್ಷವಾಗಿ ಬದಲಾಗಿಲ್ಲ. ಕರ್ನಾಟಕಕ್ಕೆ ಒಂದು ಪ್ರಾದೇಶಿಕ ಪಕ್ಷ ಬೇಕು; ರಾಜ್ಯದ ಎಲ್ಲ ಭಾಗಗಳಲ್ಲೂ ಸಂಘಟನೆ ಹೊಂದಿರುವ ಕರ್ನಾಟಕ ರಕ್ಷಣಾ ವೇದಿಕೆಯೇ ಹೊಸ ಪ್ರಾದೇಶಿಕ ಪಕ್ಷ ಕಟ್ಟಬೇಕು ಎಂದು ಹಲವರು ಆಗಾಗ ಹೇಳುತ್ತಿರುತ್ತಾರೆ. ಆದರೆ ನಾರಾಯಣಗೌಡರಿಗೆ ತಮ್ಮ ಇತಿಮಿತಿಗಳು ಗೊತ್ತು, ರಾಜಕಾರಣದ ಒಳಸುಳಿಗಳು ಗೊತ್ತು. ಈ ಬಗ್ಗೆ ಅವರನ್ನು ಕೇಳಿದಾಗ ‘ರಾಜಕೀಯ ನಮಗೆಲ್ಲ ಸರಿಹೋಗಲ್ಲ ದಿನೇಶ್, ನಾನು ಸಂಘಟನೆಯನ್ನೇ ಬೆಳೆಸಿಕೊಂಡು ಹೋಗುತ್ತೇನೆ, ಇದರಲ್ಲೇ ನನಗೆ ಆತ್ಮತೃಪ್ತಿ ಇದೆ. ರಾಜಕಾರಣದಲ್ಲಿ ತೊಡಗಿ ಮಾಡಬಹುದಾಗಿದ್ದನ್ನು ಸಂಘಟನೆಯಿಂದಲೇ ಮಾಡುತ್ತೇನೆ. ಮುಂದೆ ಜನರೇ ಬಯಸಿದರೆ, ಪ್ರಾದೇಶಿಕ ಪಕ್ಷದಿಂದಷ್ಟೆ ಕನ್ನಡದ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎನ್ನುವುದಾದರೆ ಆ ಬಗ್ಗೆ ಯೋಚನೆ ಮಾಡೋಣ. ಸದ್ಯಕ್ಕಂತೂ ನೂರಾರು ಕೋಟಿ ರೂ.ಗಳ ವ್ಯವಹಾರವಾಗಿರುವ ಈ ರಾಜಕಾರಣದಲ್ಲಿ ಕಾಲಿಟ್ಟು ನಗೆಪಾಟಲಾಗುವುದು ಸರಿಯಲ್ಲ. ಮೊನ್ನೆ ಒಬ್ಬರು ಹಿರಿಯ ಸಾಹಿತಿಗಳು ಪ್ರಾದೇಶಿಕ ಪಕ್ಷ ಕಟ್ಟಲು ಹೊರಟಾಗಲೂ ನಾನು ಅವರಿಗೆ ಇದನ್ನೇ ಹೇಳಿದ್ದೆ ಎಂದಿದ್ದರು.

*******

ಶಿವಸೇನೆ ಅಪ್ಪಟ ಕೋಮುವಾದಿ ರಾಜಕೀಯ ಪಕ್ಷ. ಎಂ.ಎನ್.ಎಸ್. ಹಿಂದುತ್ವದ ಕುರಿತಾಗಿ ತನ್ನ ನಿಲುವನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಆದರೆ ರಾಜ್ ಠಾಕ್ರೆ ಸಹ ಶಿವಸೇನೆಯಲ್ಲೇ ಇದ್ದವರು, ಅವರ ಅನುಯಾಯಿಗಳು ಸಹ ಆಕಾಶದಿಂದ ಉದ್ಭವಿಸಿದವರಲ್ಲ. ಅವರೂ ಶಿವಸೇನೆಯಲ್ಲೇ ಇದ್ದವರು. ಹೀಗಾಗಿ ಹಿಂದುತ್ವದ ಗುಪ್ತ ಕಾರ್ಯಸೂಚಿಗಳು ಎಂಎನ್‌ಎಸ್‌ನಲ್ಲೂ ಇದ್ದರೆ ಆಶ್ಚರ್ಯವೇನಿಲ್ಲ. ಸದ್ಯಕ್ಕೆ ರಾಜ್ ಅವರ ಯುದ್ಧ ನಡೆದಿರುವುದು ಯುಪಿವಾಲಾಗಳು ಹಾಗು ಬಿಹಾರಿಗಳ ಮೇಲೆ. ಹೀಗಾಗಿ ಸದ್ಯಕ್ಕೆ ಅವರ ಸಂಪೂರ್ಣ ಬಣ್ಣ ಹೊರಗೆ ಬಂದಿಲ್ಲ.

ಕರ್ನಾಟಕ ರಕ್ಷಣಾ ವೇದಿಕೆಗೆ ಇಂಥ ಹಿಡನ್ ಅಜೆಂಡಾಗಳು ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ. ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎಂಬುದು ವೇದಿಕೆಯ ಘೋಷವಾಕ್ಯ. ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ ಎಂದು ಘೋಷಿಸಿದ ಕುವೆಂಪು ಅವರ ಭಾವಚಿತ್ರವು ವೇದಿಕೆಯ ಹೆಸರಿನ ಜತೆಯೇ ಸದಾ ಕಂಗೊಳಿಸುತ್ತದೆ. ನಾರಾಯಣಗೌಡರಂತೂ ನಾನು ಗಮನಿಸಿದಂತೆ ಕುವೆಂಪು ಅವರ ಒಂದು ಕವಿತೆಯನ್ನಾದರೂ ಉದ್ದರಿಸದೆ ಭಾಷಣ ಮಾಡಿದ್ದೇ ಇಲ್ಲ. ಇದಕ್ಕೆ ಹಲವರು ಜಾತಿಯ ಬಣ್ಣ ಹಚ್ಚಿ ಕೊಳಕು ಮನಸ್ಥಿತಿ ತೋರಿದ್ದೂ ಉಂಟು.

ಕುವೆಂಪು ಅವರನ್ನು ಆದರ್ಶವಾಗಿ ಸ್ವೀಕರಿಸಿದಂತೆ ಗೌಡರು ಡಾ.ರಾಜ್ ಕುಮಾರ್‌ರವರನ್ನು ತಮ್ಮ ಗುರು ಎಂದೇ ಭಾವಿಸುತ್ತಾರೆ. ಅದನ್ನು ಸಾಕಷ್ಟು ಬಾರಿ ಹೇಳಿಕೊಂಡೂ ಇದ್ದಾರೆ. ನಾನು ಕನ್ನಡ ಹೋರಾಟದ ದೀಕ್ಷೆ ಪಡೆದಿದ್ದೇ ರಾಜ್ ಕುಮಾರ್ ಅವರಿಂದ. ಅವರ ಸಿನಿಮಾಗಳನ್ನು, ಅವರ ಹೋರಾಟಗಳನ್ನು ನೋಡಿಯೇ ನಾನು ಚಳವಳಿಗೆ ಬಂದೆ ಎನ್ನುತ್ತಾರೆ ಅವರು. ಗೌಡರ ಅದೃಷ್ಟಕ್ಕೆ ರಾಜ್‌ಕುಮಾರ್ ಅವರು ಒಕ್ಕಲಿಗರಲ್ಲ!

ಕರ್ನಾಟಕ ರಕ್ಷಣಾ ವೇದಿಕೆಯನ್ನು ನಾನೂ ಸಹ ಹಲವು ಅನುಮಾನಗಳ ಜತೆಯೇ ಹತ್ತಿರದಿಂದ ನೋಡಿಕೊಂಡು ಬಂದಿದ್ದೇನೆ. ಕನಿಷ್ಠ ವೇದಿಕೆಯ ಒಂದುನೂರು ಕಾರ್ಯಕ್ರಮಗಳಲ್ಲಿ ನಾನು ಅತಿಥಿಯಾಗಿ ಭಾಷಣ ಮಾಡಿದ್ದುಂಟು. ಅಲ್ಲಿ ಎಲ್ಲ ಜಾತಿಯ ಜನರಿದ್ದಾರೆ. ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯೇ ಒಬ್ಬ ಕ್ರಿಶ್ಚಿಯನ್. ಗಣನೀಯ ಪ್ರಮಾಣದಲ್ಲಿ ಮುಸ್ಲಿಮರೂ ಸಹ ಸಂಘಟನೆಯಲ್ಲಿದ್ದಾರೆ. ಬ್ರಾಹ್ಮಣರು, ದಲಿತರು, ಹಿಂದುಳಿದವರು ಹೀಗೆ ಎಲ್ಲ ಸಮುದಾಯದವರೂ ಅಲ್ಲಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಹಲವು ಜಿಲ್ಲಾ ಘಟಕಗಳ ಉಸ್ತುವಾರಿ ಹೊತ್ತಿರುವವರು ವೀರಶೈವರು. ನಾರಾಯಣಗೌಡರ ಬಗ್ಗೆ ಒಕ್ಕಲಿಗ ಹುಡುಗರಲ್ಲಿ ವಿಶೇಷವಾದ ಆಕರ್ಷಣೆ ಇದೆ ಎಂಬುದೇನೋ ನಿಜ. ಆದರೆ ಅದರರ್ಥ ಗೌಡರು ಜಾತಿವಾದಿ ಎಂದೇನಲ್ಲ. ನಾನು ಗಮನಿಸಿದಂತೆ ಅವರು ಅಪ್ಪಟ ದೈವಭಕ್ತ. ಆದರೆ ಜಾತಿವಾದಿಯೂ ಅಲ್ಲ, ಕೋಮುವಾದಿಯೂ ಅಲ್ಲ.

*******

ನಾರಾಯಣಗೌಡರು ಕರ್ನಾಟಕ ರಕ್ಷಣಾ ವೇದಿಕೆಯನ್ನೂ ಬೆಳೆಸುತ್ತಲೇ ಇತರ ಸಂಘಟನೆಗಳ ಜತೆ ಸದಾ ಸಂಪರ್ಕ, ಸಂವಹನ ಕಾಪಾಡಿಕೊಂಡು ಬಂದವರು. ಕನ್ನಡ-ಕರ್ನಾಟಕಕ್ಕೆ ಕುತ್ತು ಬರುವ ಸಂದರ್ಭಗಳು ಎದ್ದಾಗಲೆಲ್ಲ ಅವರು ನಾಡಪರ ಸಂಘಟನೆಗಳನ್ನೆಲ್ಲ ಕರೆದು ಸಭೆ ನಡೆಸಿಯೇ ಹೋರಾಟಕ್ಕೆ ಅಣಿಯಾಗುತ್ತಾರೆ. ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘಟನೆಗಳು, ವಿವಿಧ ಕನ್ನಡ ಸಂಘಟನೆಗಳು, ಪ್ರಗತಿಪರ ಸಂಘಟನೆಗಳನ್ನು ಸೇರಿಸಿ ಹೋರಾಟ ಹೇಗಿರಬೇಕು ಎಂದು ಸಲಹೆ ಸೂಚನೆಗಳನ್ನು ಪಡೆಯುತ್ತಾರೆ.

ಇಂಥ ಹಲವು ಸಭೆಗಳಲ್ಲಿ ನಾನು ಪಾಲ್ಗೊಂಡಿದ್ದೇನೆ. ಗೌಡರು ಸದಾ ತಮ್ಮ ಕಿವಿಗಳನ್ನು ತೆರೆದಿಟ್ಟುಕೊಂಡಿರುತ್ತಾರೆ. ಎಲ್ಲವನ್ನು ಕೇಳಿಸಿಕೊಂಡೇ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ನನಗೆ ಗೊತ್ತಿರುವಂತೆ ಅವರು ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು, ಪತ್ರಕರ್ತರಿಂದ ಹಿಡಿದು ಬೇರೆಬೇರೆ ವಲಯಗಳಲ್ಲ್ಲಿರುವ ಕೆಲ ಪ್ರಜ್ಞಾವಂತರಿಂದ ಸದಾ ಸಲಹೆ ಪಡೆಯುತ್ತಾರೆ. ಕರವೇ ಜತೆ ಇವರ್‍ಯಾರೂ ನೇರವಾಗಿ ಇಲ್ಲವಾದರೂ ಗೌಡರ ಜತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದಾರೆ. ಹಾಗೆಂದ ಮಾತ್ರಕ್ಕೆ ಯಾರೋ ಹೇಳಿದ್ದೆಲ್ಲವನ್ನು ಗೌಡರು ಕೇಳುತ್ತಾರೆ ಎಂದೇನಲ್ಲ. ಎಲ್ಲವನ್ನು ಕೇಳಿಸಿಕೊಂಡೇ ಅವರು ಹೆಜ್ಜೆ ಇಡುತ್ತಾರೆ. ತಮ್ಮದೇ ಆದ ನಿರ್ಧಾರವನ್ನು ಕೈಗೊಳ್ಳುತ್ತಾರೆ.

ಗೌಡರಿಗೆ ಇತರ ಕನ್ನಡ ಸಂಘಟನೆಗಳಲ್ಲೇ ಸಾಕಷ್ಟು ಜನ ಶತ್ರುಗಳಿದ್ದಾರೆ. ಹಲವರು ಕರವೇ ಬಿಟ್ಟು ಹೊರಹೋದವರು. ಮತ್ತೆ ಕೆಲವರು ಪರ್ಯಾಯ ಕರವೇಗಳನ್ನು ಕಟ್ಟಿಕೊಂಡವರು. ಮತ್ತೆ ಕೆಲವರು ಗೌಡರ ಜನಪ್ರಿಯತೆ ಸಹಿಸಲಾಗದೆ ದ್ವೇಷ ಕಾರುವವರು. ಆಗಾಗ ಗೌಡರ ಕಾಲೆಳೆಯುವ ಯತ್ನಗಳು ನಡೆಯುತ್ತಲೇ ಇರುತ್ತವೆ. ಇಂಥ ಪ್ರಚೋದನೆಗಳನ್ನು ಲಘುವಾಗಿಯೇ ಸ್ವೀಕರಿಸುವ ಗೌಡರು ಇತರ ಸಂಘಟನೆಗಳ ಮುಖಂಡರ ಬಗ್ಗೆ ವಿನಾಕಾರಣ ಕಾಲುಕೆದರಿ ಜಗಳಕ್ಕೆ ನಿಂತವರಲ್ಲ.

ಉಡುಪಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ನಾರಾಯಣಗೌಡರು ಕನ್ನಡ ಚಳವಳಿ ಕುರಿತಾಗಿ ಒಬ್ಬ ಭಾಷಣಕಾರರು. ಗೌಡರು ಅಲ್ಲಿ ವೇದಿಕೆ ಹತ್ತಬಾರದು ಎಂದು ತಡೆಯಲು ವಿರೋಧಿ ಗುಂಪಿನವರು ಸಾಕಷ್ಟು ಯತ್ನಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ.

ಕಾರ್ಯಕ್ರಮ ಮುಗಿಸಿ ವಾಪಾಸು ಬರುವಾಗ ಗೌಡರ ಕಾರಿನಲ್ಲೇ ನಾನೂ ಇದ್ದೆ. ಇದ್ದಕ್ಕಿದ್ದಂತೆ ಎಲ್ಲರ ಮೊಬೈಲುಗಳು ಹೊಡೆದುಕೊಳ್ಳಲಾರಂಭಿಸಿದವು. ಗೌಡರ ಕಾರಿಗೆ ಕಲ್ಲು ಬಿತ್ತಂತೆ, ಟಿವಿಯಲ್ಲಿ ಫ್ಲಾಶ್ ನ್ಯೂಸ್ ಬರುತ್ತಿದೆ ಎಂದು ಕರೆ ಮಾಡಿದವರೆಲ್ಲ ಹೇಳುತ್ತಿದ್ದರು. ಗೌಡರಿಗೂ ಇದೇ ಕರೆಗಳು ಬರಲಾರಂಭಿಸಿದವು. ಕೆಲ ನಿಮಿಷಗಳು ಕಳೆದ ನಂತರ ನಿಜವಾಗಿಯೂ ಕಲ್ಲುಗಳು ಬೀಳತೊಡಗಿದವು. ಎಲ್ಲವೂ ಗುರಿತಪ್ಪಿದರೂ ನಾವು ಕುಳಿತಿದ್ದ ವಾಹನದ ಮುಂಭಾಗದಲ್ಲಿದ್ದ ಮತ್ತೊಂದು ವಾಹನಕ್ಕೆ ದೊಡ್ಡ ಕಲ್ಲೊಂದು ಬಿತ್ತು. ಗೌಡರ ವಾಹನವೂ ಸೇರಿ ಜತೆಯಲ್ಲಿ ಬಂದಿದ್ದ ವೇದಿಕೆಯ ಕಾರ್ಯಕರ್ತರ ವಾಹನಗಳೆಲ್ಲ ಗಕ್ಕನೆ ನಿಂತವು. ಕಾಡು, ಗವ್ ಗತ್ತಲು... ಯಾರ ಸುಳಿವೂ ಇಲ್ಲ. ಬೆಂಗಾವಲಾಗಿ ಬಂದಿದ್ದ ಪೊಲೀಸರೂ ಕಂಗಾಲು.

ಈ ಸಮಯದಲ್ಲಿ ಗೌಡರು ಎಷ್ಟು ಸ್ಥಿತಪ್ರಜ್ಞತೆಯಿಂದ ವರ್ತಿಸಿದರೆಂದರೆ ಅಲ್ಲಿದ್ದ ಎಲ್ಲ ವಾಹನಗಳನ್ನು ಹೊರಡಿಸಿ, ಆಕ್ರೋಶದಿಂದ ಕುದಿಯುತ್ತಿದ್ದ ಕಾರ್ಯಕರ್ತರನ್ನೆಲ್ಲ ಸಮಾಧಾನಪಡಿಸಿದ್ದರು. ಏನೋ ಅನಾಹುತವಾಗಲಿದೆ ಎಂಬ ವಾತಾವರಣವನ್ನು ಹಾಗೇ ತಿಳಿಗೊಳಿಸಿದ್ದನ್ನು ನೋಡಿ ಆಶ್ಚರ್ಯವೆನ್ನಿಸಿತ್ತು.

ತಮಾಶೆಯೆಂದರೆ ಗೌಡರ ಕಾರಿಗೆ ಕಲ್ಲು ಬಿದ್ದಿರಲೇ ಇಲ್ಲ, ಬಿದ್ದ ಕಲ್ಲೂ ಸಹ ಬೇರೆ ವಾಹನಕ್ಕೆ ಬಿದ್ದಿತ್ತು. ಆದರೆ ಕಲ್ಲು ಬೀಳುವ ಮುನ್ನವೇ ಎರಡು ಟಿವಿ ಸುದ್ದಿವಾಹಿನಿಗಳು ಕಿಗ್ಗಾ ಸಮೀಪ ನಾರಾಯಣಗೌಡರ ಕಾರಿಗೆ ಕಲ್ಲು ಎಂದು ಸುದ್ದಿ ಬಿತ್ತರಿಸಿದ್ದವು. ತಕ್ಷಣ ನೆನಪಾಗಿದ್ದು ಅಂಬರೀಷ್ ಅಭಿನಯದ ನ್ಯೂಡೆಲ್ಲಿ ಸಿನಿಮಾ.

*******

ಎಂಇಎಸ್ ಹಾಗು ಕರವೇ ಕಾರ್ಯವೈಖರಿಯ ಮಾದರಿಗಳಲ್ಲೇ ಸಾಕಷ್ಟು ಭಿನ್ನತೆಗಳಿವೆ. ಠಾಕ್ರೆಯದು ಹೊಡಿಬಡಿ ಮಾದರಿ. ಆದರೆ ದೈಹಿಕ ಹಲ್ಲೆ ಕರವೇಗೆ ಅಪಥ್ಯ. ಎಂಇಎಸ್ ವಿರುದ್ಧದ ಚಳವಳಿ ಸಂದರ್ಭದಲ್ಲಿ ಬೆಳಗಾವಿ ಮೇಯರ್ ಆಗಿದ್ದ ಮೋರೆ ಮೂತಿಗೆ ಮಸಿ ಬಳಿದದ್ದು ಇದಕ್ಕೆ ಅಪವಾದ. ಕರವೇ ಇತಿಹಾಸದಲ್ಲಿ ಇಂಥ ಪ್ರಕರಣಗಳು ತೀರಾ ಕಡಿಮೆ. ಮೋರೆ ಮೂತಿಗೆ ಮಸಿ ಬಳಿಯುವ ಕ್ರಿಯೆಯೂ ಒಂದು ಸಾಂಕೇತಿಕ ಅರ್ಥವನ್ನು ಧ್ವನಿಸುತ್ತಿತ್ತು. ಕರವೇ ಮುಖಂಡರನ್ನು ಭಯೋತ್ಪಾದಕರಿಗೆ ಹೋಲಿಸಿ ಕೆಲ ಬುದ್ಧಿಜೀವಿಗಳು ಮಾತನಾಡುತ್ತಿದ್ದಾಗ ಪೂರ್ಣಚಂದ್ರ ತೇಜಸ್ವಿಯವರು ‘ಅಲ್ರೀ ಅವನಿಗೆ ಮಸಿ ಬಳಿಯದೆ ಮತ್ತೇನು ಫೇರ್ ಅಂಡ್ ಲವ್ಲೀ ಬಳೀಬೇಕಿತ್ತಾ ಎಂದು ಝಾಡಿಸಿದ್ದರು.

ಇನ್ನು ನೋಡ್ರೀ, ಈ ಕರವೇಯವರು ಸಿಕ್ಕಸಿಕ್ಕವರಿಗೆಲ್ಲ ಹೋಡೀತಾರೆ, ಮಸಿ ಬಳೀತಾರೆ ಎಂದು ಹಲವರು ಹೇಳಿಕೊಂಡು ಓಡಾಡಿದರು. ಅವರಿಗೆಲ್ಲ ನಿರಾಶೆಯಾಯಿತು, ಮತ್ತೆ ಇನ್ನ್ಯಾರಿಗೂ ಮಸಿ ಬಳಿಯುವ ಕಾಯಕ ನಡೆಯಲಿಲ್ಲ. ಮಸಿ ಬಳಿಸಿಕೊಳ್ಳುವುದಕ್ಕೂ ಒಂದು ‘ಯೋಗ್ಯತೆ ಬೇಕಲ್ಲವೆ?!

ಕರವೇ ಯುವಕರ ಹೋರಾಟಗಳನ್ನು ಗಮನಿಸಿ ನೋಡಿ, ಅವರು ತಮ್ಮ ಆಕ್ರೋಶವನ್ನೆಲ್ಲ ತೀರಿಸಿಕೊಳ್ಳುವುದು ನಿರ್ಜೀವ ವಸ್ತುಗಳ ಮೇಲೆ. ಯಾವುದೋ ಪೋಸ್ಟರು, ಇನ್ನ್ಯಾವುದೋ ಕಛೇರಿಯ ಮೇಜು-ಕುರ್ಚಿ, ಕಂಪ್ಯೂಟರ್‌ಗಳು ಹೀಗೆ ನಿರ್ಜೀವ ವಸ್ತುಗಳು ಆಕ್ರೋಶಕ್ಕೆ ಗುರಿಯಾಗುತ್ತವೆ.

ರೈಲ್ವೆ ನೇಮಕಾತಿಯ ಹೋರಾಟದ ಸಂದರ್ಭದಲ್ಲಿ ಬಿಹಾರಿ ಯುವಕರನ್ನು ಥಳಿಸಲಾಯಿತು ಎಂದೇ ಕೆಲವರು ಸುಳ್ಳು ಹೇಳಿಕೊಂಡು ಬಂದಿದ್ದಾರೆ. ಪ್ರತಿಭಟನೆ ನಡೆಸುವಾಗ ಬೆದರಿ ಬಿಹಾರಿ ಯುವಕರು ಓಡಿ ಹೋದರೆ ‘ಥಳಿಸಲಾಯಿತು ಎಂದು ವ್ಯಾಖ್ಯಾನಿಸಬೇಕೆ? ಬೆಂಗಳೂರಿನ ಹೃದಯ ಭಾಗದಲ್ಲಿರುವ ರೈಲ್ವೆ ವಲಯ ವ್ಯವಸ್ಥಾಪಕ ಮಹೇಶ್ ಮಂಗಲ್ ಕಛೇರಿಗೆ ನುಗ್ಗಿ ಕರವೇ ಕಾರ್ಯಕರ್ತರು ದಾಂಧಲೆ ನಡೆಸಿದರು. ಬಿಹಾರಿ ಅಧಿಕಾರಿ ಎದುರಿಗೇ ಇದ್ದರೂ ಕಾರ್ಯಕರ್ತರು ಒಡೆದಿದ್ದು ಕೇವಲ ಕುರ್ಚಿಗಳನ್ನಷ್ಟೆ. ಒಂದು ವೇಳೆ ಎಂ.ಎನ್.ಎಸ್ ಇದೇ ಹೋರಾಟ ನಡೆಸುತ್ತಿದ್ದರೆ ಬಿಹಾರಿ ಅಧಿಕಾರಿಗೆ ಹಿಡಿದು ಥಳಿಸುತ್ತಿದ್ದರಲ್ಲವೆ?

ಸಾಸ್ಕೆನ್ ಎಂಬ ಐಟಿ ಕಂಪೆನಿಯ ಉದ್ಯೋಗಿಯೊಬ್ಬ ಕನ್ನಡಿಗರನ್ನು ಹೀಯಾಳಿಸಿ ಪದ್ಯ ಬರೆದು ಓದುವ ವಿಷಯ ವಿವಾದವಾದಾಗಲೂ ಅಷ್ಟೆ. ಕರವೇ ಕಾರ್ಯಕರ್ತರು ಆ ಸಂಸ್ಥೆಯ ಯಾವೊಬ್ಬ ಉದ್ಯೋಗಿಯನ್ನೂ ಥಳಿಸಲು ಹೋಗಲಿಲ್ಲ. ಬದಲಾಗಿ ಸಂಸ್ಥೆಯ ಅಮೂಲ್ಯ ಕಂಪ್ಯೂಟರ್‌ಗಳನ್ನು ಹಾಳುಗೆಡವಿ ಬಂದರು.

ಹಿಂದಿ ಸಿನಿಮಾಗಳು ನಿಯಮ ಮೀರಿ ಪ್ರದರ್ಶನವಾಗುತ್ತಿದ್ದಾಗ ಕರವೇ ಕಾರ್ಯಕರ್ತರು ಥಿಯೇಟರುಗಳಿಗೆ ನುಗ್ಗಿದಾಗಲೂ ಪ್ರೇಕ್ಷಕರನ್ನು ಮುಟ್ಟಲಿಲ್ಲ. ತಮ್ಮ ಕೈಯಿಂದಲೇ ಗಾಜುಗಳನ್ನು ಒಡೆದು ಸ್ವತಃ ತಾವೇ ಗಾಯ ಮಾಡಿಕೊಂಡರು. ಈಗಲೂ ಕರವೇ ಹುಡುಗರ ಕೈಯಲ್ಲಿ ಗಾಯದ ಗುರುತುಗಳಿವೆ.

*******

ಕರವೇ ಹುಡುಗರು ಒಂಥರಾ ಆತ್ಮಹತ್ಯಾ ದಳಗಳಿದ್ದಂತೆ. ಆದರೆ ಇದು ಬೇರೆ ಅರ್ಥದ ಆತ್ಮಹತ್ಯಾ ದಳಗಳು. ಈ ದಳಗಳು ಬೇರೆಯವರನ್ನು ದೈಹಿಕವಾಗಿ ಹಿಂಸಿಸದೆ ತಮಗೆ ತಾವೇ ನೋವು ಕೊಟ್ಟುಕೊಂಡು ಹೋರಾಟ ನಡೆಸುತ್ತವೆ. ಪೊಲೀಸ್ ಠಾಣೆಗಳಲ್ಲಿ ಪೊಲೀಸರು ಹಲ್ಲೆ ನಡೆಸಲು ಮುಂದಾದರೆ, ಪ್ರತಿಭಟನೆಗಳ ಸಂದರ್ಭದಲ್ಲಿ ಪೊಲೀಸರು ಅತಿರೇಕದಿಂದ ವರ್ತಿಸಿದರೆ ಕಾರ್ಯಕರ್ತರು ಮೈಮೇಲೆ ಹಾಕಿದ ಹಳದಿ-ಕೆಂಪು ಶಾಲನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸುವ ಮೂಲಕ ಪೊಲೀಸರ ಸ್ಥೈರ್ಯ ಉಡುಗಿಸುತ್ತಾರೆ.

ಅಮಾಯಕ ಟ್ಯಾಕ್ಸಿ ಡ್ರೈವರ್‌ಗಳನ್ನು ಬೀದಿಬೀದಿಯಲ್ಲಿ ಹಿಡಿದು ಎಂಎನ್‌ಎಸ್‌ನವರು ಹೊಡೆದಂತೆ ಕರವೇ ಕಾರ್ಯಕರ್ತರು ಮಾಡುತ್ತ ಹೋಗಿದ್ದರೆ ಅವರನ್ನು ಕನ್ನಡದ ಶಾಂತಿಪ್ರಿಯ ಜನರು ಒಪ್ಪಲು ಸಾಧ್ಯವೇ ಇರಲಿಲ್ಲ. ಇಂಥ ಕಾರ್ಯಾಚರಣೆಗಳನ್ನು ಮಾಡುವುದಿದ್ದರೆ ದಿನಕ್ಕೊಂದು ದಾಂಧಲೆ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದರೆ ಕರವೇ ಈ ಬಗೆಯ ಹಿಂಸೆಗಳಲ್ಲಿ ನಂಬಿಕೆ ಇಟ್ಟಿಲ್ಲ ಎಂಬುದು ಗಮನಾರ್ಹ.

ಚಳವಳಿಗಳು ನೂರಾರು ನಡೆದಿವೆ. ಹಲವನ್ನು ನಾವೇ ಮರೆತುಹೋಗಿದ್ದೇವೆ. ಆದರೆ ಕರವೇ ಕಾರ್ಯಕರ್ತರು ತಮ್ಮ ಮೇಲೆ ಕೇಸುಗಳ ಮೇಲೆ ಕೇಸುಗಳನ್ನು ಹೇರಿಕೊಂಡಿದ್ದಾರೆ. ಕೋರ್ಟುಗಳಿಗೆ ತಿರುಗಿ ತಿರುಗಿ ಹೈರಾಣಾಗಿದ್ದಾರೆ. ಎಂದೋ ನಡೆಸಿದ ಹೋರಾಟದ ಕೇಸಿಗೆ ಸಂಬಂಧಿಸಿದಂತೆ ಇನ್ನ್ಯಾವತ್ತೋ ವಾರೆಂಟ್ ಬಂದಿರುತ್ತದೆ. ಮನೆಗಳಿಗೆ ಆಗಾಗ ಪೊಲೀಸರು ಹುಡುಕಿಕೊಂಡು ಬರುತ್ತಾರೆ. ಕೋರ್ಟುಗಳಲ್ಲಿ ನ್ಯಾಯಾಧೀಶರು ಸಿಡುಕುತ್ತಾರೆ; ಯಾಕ್ರಯ್ಯಾ ಹಿಂಗೆಲ್ಲಾ ಮಾಡ್ಕೊತೀರಾ? ಎನ್ನುತ್ತಾರೆ. ಕೆಲವು ನ್ಯಾಯಾಧೀಶರು ಪ್ರೀತಿಯಿಂದಲೂ ಗದರಿ ಬಿಟ್ಟು ಕಳಿಸುವುದುಂಟು.

ಏನೇ ಆದರೂ ಕರವೇ ಹುಡುಗರ ನೈತಿಕ ಸ್ಥೈರ್ಯ ಉಡುಗುವುದಿಲ್ಲ. ಯಾಕೆಂದರೆ ಅವರ ಬೆನ್ನಿಗೆ ನಾರಾಯಣಗೌಡರು ಇದ್ದಾರೆ ಮತ್ತು ಇರುತ್ತಾರೆ. ತಮ್ಮ ಹುಡುಗರ ಬಗ್ಗೆ ಗೌಡರು ವಿಪರೀತ ಪ್ರೊಟೆಕ್ಟಿವ್. ಎಲ್ಲ ಹೋರಾಟಗಳು ಆರಂಭಗೊಂಡು ಟಿವಿ ವಾಹಿನಿಯವರಿಗೆ, ಪತ್ರಿಕಾ ಛಾಯಾಗ್ರಾಹಕರಿಗೆ ಮಸ್ತಾದ ಚಿತ್ರಗಳು ಸಿಕ್ಕ ನಂತರ ವಿವಿಧ ಪೊಲೀಸ್ ಠಾಣೆಗಳಲ್ಲಿ ಸಿಕ್ಕಿಕೊಂಡ ಹುಡುಗರನ್ನು ಬಿಡಿಸಿ ತರುವವರೆಗೆ ಅವರು ಸಮಾಧಾನದಿಂದ ಇರುವುದಿಲ್ಲ.

ರೈಲ್ವೆ ಹೋರಾಟದ ಸಂದರ್ಭದಲ್ಲಿ ಹುಬ್ಬಳ್ಳಿಯ ವೇದಿಕೆಯ ಒಬ್ಬ ಮುಖಂಡನನ್ನು ಅಲ್ಲಿನ ಎಸ್‌ಪಿಯೊಬ್ಬರು ಕದ್ದುಮುಚ್ಚಿ ಕರೆದುಕೊಂಡು ಹೋಗಿ ಪ್ರವಾಸಿಮಂದಿರದಲ್ಲಿ ಕೂಡಿಟ್ಟು ಚಿತ್ರಹಿಂಸೆ ನೀಡಿದ್ದರು. ರಾತ್ರಿ ಎರಡು ಗಂಟೆಯ ವೇಳೆಗೆ ಗೌಡರಿಗೆ ವಿಷಯ ಹೋಗುತ್ತದೆ. ಆ ಅಧಿಕಾರಿಗೆ ಆ ಹೊತ್ತಿನಲ್ಲೇ ದೂರವಾಣಿ ಕರೆ ಮಾಡಿ ಗೌಡರು ಹೇಳಿದ್ದೇನು ಗೊತ್ತೆ? ತಾಯಿಯ ಎದೆಹಾಲು ಕುಡಿದವರ್‍ಯಾರೂ ಹೀಗೆ ಮಾಡಲು ಸಾಧ್ಯವಿಲ್ಲ. ನೀನೂ ಕನ್ನಡಿಗನೇ. ಆತನ ಮೇಲೆ ಸಿಟ್ಟಿದ್ದರೆ ಕೇಸು ಹೂಡಬಹುದಿತ್ತು. ಹೀಗೆ ಅನ್ಯಾಯವಾಗಿ ಹೇಡಿಯಂತೆ ಹೊಡೆಯುವ ಅಗತ್ಯವಿರಲಿಲ್ಲ.

ತದನಂತರ ಕರವೇ ಮುಖಂಡನ ಬಿಡುಗಡೆಯೂ ಆಯ್ತು. ಇಂಥ ಉದಾಹರಣೆಗಳು ನೂರಾರು. ಒಬ್ಬ ನಾಯಕನಿಗೆ ಇರಬೇಕಾದ ಎಲ್ಲ ಲಕ್ಷಣಗಳೂ ನಾರಾಯಣಗೌಡರಿಗೆ ಇದೆ ಎನ್ನಲು ಇದನ್ನು ಉಲ್ಲೇಖಿಸಿದೆ.

*******

ಗೌಡರು ತಮ್ಮ ಈ ಎಲ್ಲ ಗುಣಗಳಿಂದ ಸಾಕಷ್ಟು ಜನರನ್ನು ಆಕರ್ಷಿಸಿದ್ದಾರೆ. ಅವರನ್ನು ಬೆಂಬಲಿಸುವ ಅನಿವಾಸಿ ಕನ್ನಡಿಗರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಕನ್ನಡದ ಉದ್ಯಮಿಗಳು ಅವರನ್ನು ಪ್ರೀತಿಸುತ್ತಾರೆ. ಐಟಿಬಿಟಿ ಮತ್ತಿತರ ಕಾರ್ಪರೇಟ್ ಸಂಸ್ಥೆಗಳಲ್ಲಿ ದುಡಿಯುವ ಕನ್ನಡಿಗ ಟೆಕಿಗಳಲ್ಲಿ ಬಹುಪಾಲು ಜನರು ಗೌಡರ ಅಭಿಮಾನಿಗಳೇ ಆಗಿಹೋಗಿದ್ದಾರೆ. ಕರವೇ ಹೋರಾಟವನ್ನು ನೇರವಾಗಿ ಬೆಂಬಲಿಸುತ್ತಲೇ ಬನವಾಸಿ ಬಳಗದಂಥ ಸಂಘಟನೆಗಳು ಕ್ರಿಯಾಶೀಲವಾಗಿವೆ.

ಇತ್ತೀಚಿಗಷ್ಟೆ ಇಂಗ್ಲಿಷ್ ಪತ್ರಕರ್ತರೊಬ್ಬರು ಕರವೇ ಕುರಿತು ಬರೆಯುತ್ತ ಕರವೇ ಹುಡುಗರ ಬಳಿ ಕುವೆಂಪು, ಬೇಂದ್ರೆಯವರ ಒಂದು ಪದ್ಯ ಹೇಳಿಸಿ ನೋಡೋಣ ಎಂದಿದ್ದರು. ಹೀಗೆಲ್ಲ ಹೇಳೋದು ಕ್ಷುಲ್ಲಕ ಅನಿಸುವುದಿಲ್ಲವೆ? ಕನ್ನಡಪರವಾಗಿ ಮಾತನಾಡುವವರು, ಚಳವಳಿ ಮಾಡುವವರಿಗೆಲ್ಲ ಕುವೆಂಪು-ಬೇಂದ್ರೆ ಪದ್ಯಗಳು ಕಂಠಪಾಠ ಬರಬೇಕು ಎಂದು ಬಯಸುವ ಮನಸ್ಥಿತಿಯೇ ಅನಾರೋಗ್ಯಕರವಾದದ್ದು. ಕಾವ್ಯಮೀಮಾಂಸೆಗಳನ್ನೆಲ್ಲ ಅರೆದು ಕುಡಿಯದೇ ಇರುವವನು ಕವಿತೆಯನ್ನೇ ಬರೆಯಬಾರದು, ಶೇಕ್ಸ್‌ಪಿಯರ್, ಕಾಳಿದಾಸರ ನಾಟಕ ಓದದವನು ನಾಟಕವನ್ನೇ ಬರೆಯಬಾರದು ಎಂದರೆ ಹೇಗೆ? ಕನ್ನಡವನ್ನೂ ಸಂಸ್ಕೃತದಂತೆ ಪಂಡಿತರ ಭಾಷೆಯನ್ನಾಗಿ ಮಾಡಿ ಬಹುಸಂಖ್ಯಾತರಿಂದ ದೂರ ಮಾಡುವ ಹುನ್ನಾರವಿದು. ಕನ್ನಡವನ್ನು ಶಾಸ್ತ್ರೀಯವಾಗಿ ಕಲಿತವರಷ್ಟೆ ಹೋರಾಟ ಮಾಡಬೇಕು ಎಂದರೆ ಹೇಗೆ? ಕನ್ನಡ ಎಂದರೆ ಪುಸ್ತಕಗಳ ಕನ್ನಡ ಮಾತ್ರವೇ. ಶತಶತಮಾನಗಳಿಂದ ನಮ್ಮ ಹಳ್ಳಿಗಳಲ್ಲಿ ಆಡುತ್ತ ಬಂದಿರುವ ಭಾಷೆಯೂ ಕನ್ನಡವಲ್ಲವೆ?

ಈ ಪತ್ರಕರ್ತರ ಬರೆಹ ಓದುತ್ತಿದ್ದಾಗ ನಾರಾಯಣಗೌಡರ ಉಚ್ಛಾರಣೆ ಕುರಿತಾಗಿ ಒಂದೆರಡು ಪತ್ರಿಕೆಗಳಲ್ಲಿ ಬಂದಿದ್ದ ಕುಟುಕು ಮಾತುಗಳು ನೆನಪಾದವು. ಗೌಡರ ಹಕಾರ ದೋಷದ ಬಗ್ಗೆ ವ್ಯಂಗ್ಯವಾಗಿ ಆಗಾಗ ಬರೆಯಲಾಗುತ್ತವೆ. ಗೌಡರನ್ನು ಹಣಿಯಲು ಯತ್ನಿಸುವವರೆಲ್ಲ ಈ ಅಸ್ತ್ರವನ್ನು ಆಗಾಗ ಬಳಸುತ್ತಾರೆ.

ಇಡೀ ಕರ್ನಾಟಕ ತುಂಬ ಓಡಾಡಿದರೆ ಒಂದು ಕಡೆ ಬಳಸುವ ಕನ್ನಡ ಮತ್ತೊಂದು ಕಡೆ ಬಳಸುವುದಿಲ್ಲ. ಒಂದೊಂದು ಕಡೆ ಒಂದು ಭಾಷಾ ಶೈಲಿಯಿದೆ. ಇನ್ನು ಉಚ್ಛಾರಣೆಗಳ ಕುರಿತು ಹೇಳುವುದಾದರೆ ಪರಿಪೂರ್ಣವಾಗಿ ಭಾಷಾಶುದ್ಧಿಯಿಂದ ಮಾತನಾಡುವವರ ಸಂಖ್ಯೆ ತೀರಾ ಕಡಿಮೆ. ಗೌಡರನ್ನು ಟೀಕಿಸುವ ಪತ್ರಕರ್ತರು ಬರೆಯುವ ಪತ್ರಿಕೆಗಳಲ್ಲೇ ಅಲ್ಪಪ್ರಾಣ ಮಹಾಪ್ರಾಣಗಳ ದೋಷಗಳು ಕಾಣಿಸಿಕೊಳ್ಳುತ್ತವೆ.

ಇದೆಲ್ಲ ಗೊತ್ತಿದ್ದೂ ಸಂಸ್ಕೃತಭೂಯಿಷ್ಠವಾದ ಕನ್ನಡವನ್ನೇ ಮಾತನಾಡಬೇಕು ಎಂದು ಅಪ್ಪಣೆ ಹೊರಡಿಸುವವರು ತಾವು ಆಡುವುದು ಮಾತ್ರ ಕನ್ನಡ, ಮಿಕ್ಕವರದು ಅಲ್ಲ ಎಂದು ಕೀಳರಿಮೆ ಹೇರಲು ಯತ್ನಿಸುತ್ತಿರುತ್ತಾರೆ. ಕನ್ನಡ ಭಾಷೆಯಲ್ಲಿ ಸೇರಿಹೋಗಿರುವ ಸಂಸ್ಕೃತ ಪದಗಳನ್ನು ಉಚ್ಛರಿಸಲು ಶೂದ್ರ ಸಮುದಾಯ ತ್ರಾಸಪಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕನ್ನಡವನ್ನು ಶಾಸ್ತ್ರೀಯಗೊಳಿಸುವ ಮೂಲಕ, ಕನ್ನಡದ ಹೊರತು ಮತ್ತ್ಯಾವ ಭಾಷೆಯೂ ಗೊತ್ತಿಲ್ಲದ ಜನರನ್ನೂ ಹಂಗಿಸುವ, ಅವಮಾನಿಸುವ ಕುಚೋದ್ಯಗಳು ನಡೆಯುತ್ತಲೇ ಬಂದಿವೆ.

ಮತ್ತೆ ನಮ್ಮ ಇಂಗ್ಲಿಷ್ ಪತ್ರಕರ್ತರು ಬರೆದ ವಿಷಯಕ್ಕೆ ಬರುವುದಾದರೆ ಕನ್ನಡವನ್ನು ಕಟ್ಟಿ ಬೆಳೆಸಿದ್ದು ಕೇವಲ ಕುವೆಂಪು-ಬೇಂದ್ರೆ ಮಾತ್ರವಲ್ಲ. ಜನಪದರು ತಮ್ಮ ಆಡುಭಾಷೆಯಲ್ಲೇ ಸಾಕಷ್ಟು ಬರೆದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಶಿಷ್ಟ ಭಾಷೆಯಲ್ಲಿ, ಶಿಷ್ಟ ಸಂವೇದನೆಗಳನ್ನು ಬರೆಯದ ಜನಪದರು ಕನ್ನಡ ಸಾಹಿತಿಗಳಲ್ಲವೆ? ಅವರು ಕನ್ನಡಿಗರಲ್ಲವೆ? ಅವರು ಕನ್ನಡದ ಜ್ಞಾನಪರಂಪರೆಯನ್ನು ಪ್ರತಿನಿಧಿಸುವುದಿಲ್ಲವೆ? ನಮ್ಮ ಜನಪದ ಸಾಹಿತಿಗಳು ಪಂಪ, ರನ್ನರನ್ನು ಓದಿಕೊಂಡೇ ಕಾವ್ಯ ರಚಿಸಿದರೆ?

*******

ಕನ್ನಡದ ಬಹುತೇಕ ಚಳವಳಿಗಳು ಭಾವನಾತ್ಮಕ ನೆಲೆಯಲ್ಲಿ ನಡೆದವುಗಳು. ಇತ್ತೀಚಿನ ಕೆಲವರ್ಷಗಳಲ್ಲಿ ಇದಕ್ಕೆ ಅಪವಾದವೆಂಬಂತೆ ಕನ್ನಡಿಗರ ಬದುಕಿಗೆ ಸಂಬಂಧಿಸಿದ ಹೋರಾಟಗಳು ನಡೆದಿವೆ.

ಗೋಕಾಕ್ ಚಳವಳಿಯನ್ನು ನೆನಪಿಸಿಕೊಳ್ಳಿ. ಶಿಕ್ಷಣದಲ್ಲಿ ಕನ್ನಡ ಹಾಗು ಸಂಸ್ಕೃತದ ಸ್ಥಾನಮಾನಗಳ ಕುರಿತಂತೆ ಅಧ್ಯಯನ ನಡೆಸಿ ವರದಿ ನೀಡಲು ಆಗಿನ ಗುಂಡೂರಾಯರ ಸರ್ಕಾರ ಪೇಜಾವರ ಸ್ವಾಮಿಗಳ ಚಿತಾವಣೆಗೆ ಬಿದ್ದು ವಿ.ಕೃ.ಗೋಕಾಕ್ ನೇತೃತದ ಸಮಿತಿಯನ್ನು ರಚಿಸಿತ್ತು. ಸಮಿತಿ ರಚನೆಯನ್ನೇ ಅಂದು ಸಾಹಿತಿಗಳು ವಿರೋಧಿಸಿ ಗೋಕಾಕ್ ಗೋಬ್ಯಾಕ್ ಎಂದು ಚಳವಳಿ ನಡೆಸಿದ್ದರು. ಆದರೆ ಗೋಕಾಕ್ ನೀಡಿದ್ದ ವರದಿ ಕನ್ನಡಕ್ಕೆ ವರದಾನವಾಗಿತ್ತು. ಆನಂತರ ನಡೆದಿದ್ದು ಗೋಕಾಕ್ ವರದಿ ಜಾರಿಗೊಳಿಸಿ ಎಂಬ ಬೃಹತ್ ಆಂದೋಲನ. ಗೋಕಾಕ್ ಸಮಿತಿ ಯಾಕೆ ರಚನೆಯಾಯಿತು? ಯಾಕೆ ಅದು ಜಾರಿಯಾಗಬೇಕು ಎಂಬ ಜ್ಞಾನವೂ ಇಲ್ಲದ ಜನರೆಲ್ಲ ಆ ಆಂದೋಲನದಲ್ಲಿ ತೊಡಗಿಕೊಂಡರು. ಡಾ.ರಾಜ್‌ಕುಮಾರ್ ಅವರು ಚಳವಳಿಯ ನೇತೃತ್ವ ವಹಿಸಿಕೊಂಡ ಮೇಲಂತೂ ರಾಜ್ ಅವರನ್ನು ಸಿನಿಮಾಗಳಲ್ಲಿ ನೋಡಿ ಅಭಿಮಾನಿಗಳಾಗಿದ್ದವರೆಲ್ಲ ಚಳವಳಿಯಲ್ಲಿ ತೊಡಗಿದ್ದರು.

ಅದು ನಿಜಕ್ಕೂ ಭಾವಾವೇಶದ ಚಳವಳಿ. ಗೋಕಾಕ್ ವರದಿ ಜಾರಿಯಿಂದ ಕನ್ನಡದ ಎಲ್ಲ ಸಮಸ್ಯೆಗಳೂ ಬಗೆಹರಿಯಬಹುದು ಎಂಬ ಕನಸು ಆ ಕಾಲಕ್ಕೆ ಚಳವಳಿಗೆ ಇಳಿದಿದ್ದ ಜನಸಾಮಾನ್ಯರಿಗೂ ಇದ್ದಿರಬಹುದು. ಚಳವಳಿ ತನ್ನ ಉದ್ದೇಶವನ್ನು ಮೀರಿ ರಾಜ್ಯದಲ್ಲಿ ಕನ್ನಡಪ್ರಜ್ಞೆಯನ್ನು, ಕನ್ನಡದ ಅಭಿಮಾನವನ್ನು ಹರಡಿಸಿ ಯಶಸ್ವಿಯಾಗಿದ್ದು ಇತಿಹಾಸ.

ತದನಂತರದ ಚಳವಳಿಗಳೂ ಸಹ ಭಾವನಾತ್ಮಕ ಆವೇಶಗಳಿಂದ ಹುಟ್ಟಿಕೊಂಡ ಚಳವಳಿಗಳು. ಉರ್ದು ವಾರ್ತೆ ವಿರೋಧಿ ಚಳವಳಿ ಹಾಗು ಕಾವೇರಿ ನದಿನೀರಿನ ವಿಚಾರದಲ್ಲಿ ಆಗಾಗ ನಡೆದ ಚಳವಳಿಗಳೆಲ್ಲ ಇಂಥ ಭಾವಾವೇಶದ ಚಳವಳಿಗಳೇ ಆಗಿದ್ದವು. ಕಾವೇರಿ ನದಿನೀರು ಅನ್ಯಾಯಯುತ ಹಂಚಿಕೆಯಿಂದ ಕರ್ನಾಟಕದ ಸಾವಿರಾರು ರೈತರಿಗೆ ಅನ್ಯಾಯವಾಗುತ್ತದೆ ಎಂಬುದೇನೋ ನಿಜ. ಆದರೆ ಇದಕ್ಕೆ ಪ್ರತಿಯಾಗಿ ನಡೆದ ಹೋರಾಟಗಳು ಕನ್ನಡಿಗರು ಹಾಗು ತಮಿಳರ ನಡುವಿನ ಕಾಳಗವಾಗಿದ್ದು ದುರಂತ. ೮೦ ಹಾಗು ೯೦ರ ದಶಕದಲ್ಲಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ತಮಿಳರು ಬಹಿರಂಗವಾಗಿ ತಮಿಳುನಾಡಿಗೆ ನಿಷ್ಠೆ ವ್ಯಕ್ತಪಡಿಸುತ್ತಿದ್ದರಿಂದ ಕನ್ನಡಿಗರೂ ಸಹಜವಾಗಿ ಕೆರಳುತ್ತಿದ್ದರು. ಹೀಗಾಗಿ ಕಾವೇರಿ ಚಳವಳಿ ತಮಿಳಿಗರ ವಿರುದ್ಧದ ಚಳವಳಿಯಾಗಿಯೇ ಪರಿವರ್ತನೆಗೊಳ್ಳುತ್ತಿತ್ತು. ಉರ್ದು ವಾರ್ತೆ ವಿರುದ್ಧದ ಚಳವಳಿಯೂ ಕೋಮುವಾದಿಗಳ ಕುತಂತ್ರದಿಂದ ದಾರಿತಪ್ಪಿ ಹಿಂದೂ-ಮುಸ್ಲಿಂ ಹೊಡೆದಾಟದೊಂದಿಗೆ ಅರ್ಥ ಕಳೆದುಕೊಂಡಿದ್ದನ್ನೂ ನಾವು ಗಮನಿಸಿದ್ದೇವೆ.

ಆದರೆ ಕರ್ನಾಟಕ ರಕ್ಷಣಾ ವೇದಿಕೆ ಕ್ರಿಯೆಗಿಳಿದ ನಂತರ ಕನ್ನಡಿಗರ ಬದುಕಿನ ಹೋರಾಟಗಳು ಆರಂಭಗೊಂಡಿದ್ದು ವಿಶೇಷ. ಕರವೇ ಆರಂಭದ ದಿನಗಳಲ್ಲಿ ಮೈಸೂರು ಕರ್ನಾಟಕ ಭಾಗದ ರೈತರು ಆರಂಭಿಸಿದ್ದ ನೀರಾ ಚಳವಳಿಯೊಂದಿಗೆ ಗುರುತಿಸಿಕೊಂಡಿತ್ತು. ವಿವಿಧ ಬೆಳೆಗಳ ಬೆಂಬಲ ಬೆಲೆಗಾಗಿ ನಡೆದ ಹೋರಾಟಗಳಲ್ಲೂ ಕರವೇ ಭಾಗಿಯಾಯಿತು. ತದನಂತರ ನಿಧಾನವಾಗಿ ಕನ್ನಡಿಗರಿಗೆ ಉದ್ಯೋಗ ದೊರೆಯಬೇಕು ಎಂಬುದೇ ಕರವೇ ಹೋರಾಟಗಳ ಪ್ರಮುಖ ಧ್ವನಿಯಾಯಿತು ಎಂಬುದನ್ನು ಗಮನಿಸಬೇಕು.

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬುದು ವೇದಿಕೆಯ ಮತ್ತೊಂದು ಘೋಷವಾಕ್ಯ. ಕನ್ನಡಿಗರು ಕರ್ನಾಟಕದಲ್ಲಿ ದೈನೇಸಿ ಸ್ಥಿತಿಗೆ ತಲುಪುವಂತಾಗದೆ ಎಲ್ಲ ಸೌಲಭ್ಯ, ಸಂಪತ್ತನ್ನು ಅನುಭವಿಸಬೇಕು ಎಂಬುದು ಈ ಘೋಷವಾಕ್ಯದ ಹಿಂದಿನ ಧೋರಣೆ. ಅದನ್ನು ಸಾಧ್ಯವಾಗಿಸುವತ್ತ ಕರವೇ ಇಟ್ಟಿರುವ ಹೆಜ್ಜೆಗಳು ಇವತ್ತಿಗೆ ಹೆಚ್ಚು ಹೆಚ್ಚು ಪ್ರಸ್ತುತವಾಗಿರುವುದರಿಂದಲೇ ಅದು ದಿನದಿಂದ ದಿನಕ್ಕೆ ಬಲಶಾಲಿಯಾಗಿ ಬೆಳೆಯುತ್ತಲೇ ಇದೆ.

*******

ಕೆಲವು ಉದಾಹರಣೆಗಳನ್ನು ಗಮನಿಸಿ. ರೈಲ್ವೆ ಇಲಾಖೆಯಲ್ಲಿ ಕನ್ನಡಿಗರನ್ನು ಕಡೆಗಣಿಸಿ ಬಿಹಾರಿಗಳನ್ನು ತುಂಬುವ ಯತ್ನವನ್ನು ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಆರಂಭಿಸಿದಾಗ ಮೊದಲು ಕೆರಳಿದ್ದು ಕರವೇ. ಕನಿಷ್ಠ ಸಿ ಮತ್ತು ಡಿ ದರ್ಜೆ ಹುದ್ದೆಗಳನ್ನಾದರೂ ಸ್ಥಳೀಯರಿಗೆ ಕೊಡಿ ಎಂದರೆ ಕೇಂದ್ರ ಸರ್ಕಾರ ಕಿವಿಗೊಡಲೇ ಇಲ್ಲ. ಈ ಕುರಿತು ಮಾತನಾಡಬೇಕಾದ ಸಂಸದರೂ ತುಟಿಬಿಚ್ಚಲಿಲ್ಲ. ಹೀಗಿದ್ದಾಗ ಏಕಾಂಗಿಯಾಗಿ ಹೋರಾಟ ಸಂಘಟಿಸಿದ್ದು ಕರವೇ. ತದನಂತರ ಹೋರಾಟದ ಸಾಗರಕ್ಕೆ ನೂರಾರು ನದಿಗಳು ಸೇರಿಕೊಂಡವು.

ಇಡೀ ಚಳವಳಿಯ ಬಿರುಸಿಗೆ ಬೆಚ್ಚಿಬಿದ್ದ ರೈಲ್ವೆ ಇಲಾಖೆ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡಿತು. ಕಳೆದ ತಿಂಗಳು ಮತ್ತೆ ನೇಮಕಾತಿ ಪರೀಕ್ಷೆ ನಡೆಸಲು ಯತ್ನಿಸಿ ಇಲಾಖೆ ಕೈ ಸುಟ್ಟುಕೊಂಡಿದೆ. ಸ್ಥಳೀಯರಿಗೆ ಮೀಸಲಾತಿ ನೀಡದ ಹೊರತು ಇಲ್ಲಿ ನೇಮಕಾತಿ ಮಾಡಿಕೊಳ್ಳುವುದು ಕಷ್ಟ ಎಂದು ಈಗ ಕೇಂದ್ರ ಸರ್ಕಾರಕ್ಕೆ ರೈಲ್ವೆ ಅಧಿಕಾರಿಗಳು ವರದಿ ನೀಡಿದ್ದಾರಂತೆ. ಕನ್ನಡಿಗರಿಗೆ ಆದ್ಯತೆ ನೀಡದೆ ಈ ಹುದ್ದೆಗಳನ್ನು ತುಂಬುವುದು ರೈಲ್ವೆ ಇಲಾಖೆಗೆ ಅಸಾಧ್ಯ ಎಂಬಂಥ ವಾತಾವರಣ ಈಗ ನಿರ್ಮಾಣವಾಗಿದೆ.

ಹೊಗೇನಕಲ್ ಹೋರಾಟವೂ ಹೀಗೆಯೇ. ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಿದ್ದ ಕಾಲದಲ್ಲಿ ತಮಿಳುನಾಡು ಸರ್ಕಾರ ಹೊಗೇನಕಲ್‌ನಲ್ಲಿ ತನ್ನ ನೀರಾವರಿ ಹಾಗು ಜಲವಿದ್ಯುತ್ ಯೋಜನೆ ಆರಂಭಿಸಲು ಯತ್ನಿಸಿತು. ಸರ್ಕಾರವೇ ಇಲ್ಲದ ಅರಾಜಕ ಸನ್ನಿವೇಶದಲ್ಲಿ ಕರವೇ ಇತರ ಸಂಘಟನೆಗಳ ಹೋರಾಟದ ನಡುವೆಯೇ ತೀವ್ರ ಸ್ವರೂಪದಲ್ಲಿ ತೊಡಗಿಕೊಂಡಿತು. ತಮಿಳು ಸಿನಿಮಾಗಳು, ಚಾನೆಲ್‌ಗಳು ಬಂದ್ ಆಗುತ್ತಿದ್ದಂತೆ ತಮಿಳುನಾಡು ಸರ್ಕಾರದ ಉಸಿರು ಕಟ್ಟಿಹೋದಂತಾಯಿತು. ಕರುಣಾನಿಧಿ ಹೇಳಿಕೆ ನೀಡಿ ಹೊಗೇನಕಲ್ ಯೋಜನೆಯನ್ನು ಕರ್ನಾಟಕದಲ್ಲಿ ಜನಪ್ರಿಯ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ಆರಂಭಿಸುವುದಿಲ್ಲ ಎಂದು ಹೇಳಿಕೆ ನೀಡಿದರು.

ಈಗ ಮತ್ತೆ ಹೊಗೇನಕಲ್‌ನಲ್ಲಿ ಚಟುವಟಿಕೆ ಆರಂಭವಾಗುವ ಲಕ್ಷಣಗಳಿವೆ. ಈ ಬಾರಿ ಅದನ್ನು ತಡೆಯುವ ಹೊಣೆ ರಾಜ್ಯದಲ್ಲಿರುವ ಜನಪ್ರಿಯ ಸರ್ಕಾರದ ಹೆಗಲಿಗೇರಿದೆ. ಸರ್ಕಾರವಿಲ್ಲದ ಅರಾಜಕ ಪರಿಸ್ಥಿತಿಯಲ್ಲಿ ಯೋಜನೆ ನಡೆಯದಂತೆ ತಡೆದದ್ದು ಕರವೇ ಸಾಧನೆಯಲ್ಲವೆ?

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಲು ಒತ್ತಾಯಿಸಿ ಕರವೇ ನಡೆಸಿದ ಹೋರಾಟದ ಪರಿಣಾಮವಾಗಿ ತೃಪ್ತಿಕರವಾಗಲ್ಲದಿದ್ದರೂ ಸ್ವಲ್ಪ ಪ್ರಮಾಣದಲ್ಲಾದರೂ ಕನ್ನಡಿಗರಿಗೆ ಆದ್ಯತೆ ನೀಡುವ ಕೆಲಸ ಆಗಿದೆ. ಈ ಕುರಿತು ಸ್ವತಃ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರವೇ ಹಲವು ಬಾರಿ ಸ್ಪಷ್ಟೀಕರಣ ನೀಡಿದೆ.

ಇನ್ನು ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಆರಂಭಗೊಂಡ ಚಳವಳಿಗೆ ವೇಗ ತಂದುಕೊಟ್ಟಿದ್ದು ಕರವೇ. ಕನ್ನಡಿಗರ ಹೋರಾಟವನ್ನು ದೆಹಲಿಗೆ ಕೊಂಡೊಯ್ದು ಜಂತರ್ ಮಂತರ್ ಮುಂಭಾಗ ಸುಮಾರು ಎರಡು ಸಾವಿರ ಕರವೇ ಕಾರ್ಯಕರ್ತರೊಂದಿಗೆ ಧರಣಿ ನಡೆಸಿದ್ದ ಗೌಡರು ಪ್ರಧಾನಿ, ಗೃಹಸಚಿವರಿಗೆ ಮನವಿ ಪತ್ರ ನೀಡಿ ಬಂದಿದ್ದರು. ಇದಲ್ಲದೆ ಮತ್ತೊಮ್ಮೆ ರಾಜ್ಯದ ಕೆಲ ಮಠಾಧೀಶರನ್ನು ಕರೆದೊಯ್ದು ದೆಹಲಿಯಲ್ಲಿ ಧರಣಿ ಹಮ್ಮಿಕೊಂಡಿದ್ದರು.

ಎಲ್ಲ ಹೋರಾಟಗಳ ಪ್ರತಿಫಲವಾಗಿಯೇ ಕನ್ನಡಕ್ಕೆ ಸಲ್ಲಬೇಕಾಗಿದ್ದ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರೆತಿದೆ. ಈ ಸ್ಥಾನಮಾನದಿಂದ ಕನ್ನಡ ಭಾಷೆ ಏಕಾಏಕಿ ಉದ್ಧಾರವಾಗುತ್ತದೆ ಎಂಬ ಭ್ರಮೆ ನನಗೇನೂ ಇಲ್ಲ. ಆದರೆ ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬಂತೆ ಕನ್ನಡದಷ್ಟೇ ಪ್ರಾಚೀನವಾದ ತಮಿಳಿಗೆ ರಾಜಕೀಯ ಕಾರಣಗಳಿಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಿ ಕನ್ನಡವನ್ನು ವಂಚಿಸುವುದನ್ನು ಸಹಿಸಿಕೊಳ್ಳುವುದಾದರೂ ಹೇಗೆ?

*******

ಸದ್ಯದ ಪರಿಸ್ಥಿತಿಯಲ್ಲಿ ಕನ್ನಡದ ಅನೇಕ ಸಮಸ್ಯೆಗಳಿಗೆ ಮುಖಾಮುಖಿಯಾಗಿ ಕರವೇ ಚಳವಳಿ ನಡೆಸುತ್ತ ಬಂದಿದೆ. ಚಳವಳಿಗೆ ಆಯ್ದುಕೊಳ್ಳುವ ವಿಷಯಗಳ ಪರಿಧಿಯೂ ವಿಶಾಲವಾಗಿದೆ. ಕನ್ನಡಿಗರನ್ನು ಜೂಜುಕೋರರನ್ನಾಗಿಸುತ್ತಿದ್ದ ಆನ್‌ಲೈನ್ ಲಾಟರಿ ವಿರುದ್ಧ ತಿರುಗಿಬಿದ್ದಿದ್ದ ಕರವೇ ಕಾರ್ಯಕರ್ತರು ಲಾಟರಿ ಯಂತ್ರಗಳು ಕಂಡಲೆಲ್ಲ ಅದನ್ನು ನೆಲಕ್ಕೆ ಹಾಕಿ ಧ್ವಂಸಗೊಳಿಸಿ ಆ ಲಾಟರಿ ನಿಷೇಧಿಸುವುದಕ್ಕೆ ಕಾರಣವಾಗಿದ್ದರು. ಹಿಂದೀ ದಿವಸ್, ಹಿಂದೀ ಸಪ್ತಾಪದಂಥ ಹಿಂದಿ ಹೇರಿಕೆಯ ಕಾರ್ಯಕ್ರಮಗಳು ನಡೆದ ಜಾಗದಲ್ಲಿ ಬಲವಾಗಿ ಪ್ರತಿಭಟಿಸಿ ಕರ್ನಾಟಕದಲ್ಲಿ ಹಿಂದಿ ಹೇರುವ ಹಿಡನ್ ಅಜೆಂಡಾಗಳನ್ನು ಬಯಲಾಗಿಸಿದ್ದೂ ಕರವೇ. ಕನ್ನಡ ಭಾಷೆ ಸಂಸ್ಕೃತಿಯನ್ನು ತಿರಸ್ಕಾರದ ಭಾವನೆಯಿಂದ ನೋಡುವ ಐಟಿಬಿಟಿ ಸಂಸ್ಥೆಗಳ ಪರಭಾಷಿಕ ಧಣಿಗಳಿಗೆ ಆಗಾಗ ಚುರುಕು ಮುಟ್ಟಿಸಿದ್ದೂ ಕರವೇ. ಇಂಗ್ಲಿಷ್ ಮತ್ತು ಹಿಂದಿ ಹಾಡುಗಳನ್ನೇ ಪ್ರಸಾರ ಮಾಡುತ್ತಿದ್ದ ಬೆಂಗಳೂರಿನ ಖಾಸಗಿ ರೇಡಿಯೋ ಸ್ಟೇಷನ್‌ಗಳ ಮುಂದೆ ಆಗಾಗ ಪ್ರತಿಭಟನೆ ನಡೆಸಿ ಅಲ್ಲೂ ಸಹ ಸಂಪೂರ್ಣ ಕನ್ನಡೀಕರಣ ಆಗಲು ಕಾರಣವಾಗಿದ್ದೂ ಕರವೇ.

ಕನ್ನಡದ ಶತ್ರುಗಳೆಲ್ಲ ನಮ್ಮ ಶತ್ರುಗಳು ಎಂದು ನಾರಾಯಣಗೌಡರು ಆಗಾಗ ಹೇಳುತ್ತಿರುತ್ತಾರೆ. ವಿಶೇಷವೆಂದರೆ ಕೆಲ ಕನ್ನಡದ ಶತ್ರುಗಳು ಕನ್ನಡ ಪ್ರೇಮಿಗಳ ವೇಷದಲ್ಲೇ ಇರುತ್ತಾರೆ. ಇಂಥ ಶತ್ರುಗಳ ವಿರುದ್ಧ ಕರವೇ ಆಗಾಗ ಧ್ವನಿ ಮೊಳಗಿಸಿದೆ. ಶಿವಸೇನೆಯನ್ನು ಕರ್ನಾಟಕದಲ್ಲಿ ಸ್ಥಾಪಿಸಲು ಹೊರಟ ಪ್ರಮೋದ್ ಮುತಾಲಿಕ್, ಕರ್ನಾಟಕ ಕಾವೇರಿ ನ್ಯಾಯಮಂಡಳಿಯ ಅನ್ಯಾಯದ ತೀರ್ಪನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ ಗಿರೀಶ್ ಕಾರ್ನಾಡ್, ಕನ್ನಡದ ಹೋರಾಟವನ್ನು ಗೇಲಿ ಮಾಡಿದ ತೇಜಸ್ವಿನಿ ಶ್ರೀರಮೇಶ್, ಕಾವೇರಿ ನಮ್ಮದು ಎಂದು ಪಾದಯಾತ್ರೆ ಮಾಡಿ ರಾತ್ರೋ ರಾತ್ರಿ ತಮಿಳುನಾಡಿಗೆ ನೀರು ಬಿಟ್ಟ ಎಸ್.ಎಂ.ಕೃಷ್ಣ, ಕನ್ನಡಿಗರನ್ನು ಕೊಳಕರು ಎಂದ ಲಾಲೂ ಪ್ರಸಾದ್ ಯಾದವ್, ಕನ್ನಡಿಗರನ್ನು ಒದೆಯಬಾರದೆ ಎಂದ ರಜನೀಕಾಂತ್, ಕರ್ನಾಟಕಕ್ಕೆ ಕರವೇ ಬೇಕಿಲ್ಲ ಎಂದ ಎಂ.ಎಸ್.ಸತ್ಯು ಹೀಗೆ ಬಹಳಷ್ಟು ಜನ ಕರವೇ ಹೋರಾಟದ ಬಿಸಿಯನ್ನು ಅನುಭವಿಸಿದ್ದಾರೆ.

ಆದರೆ ಇದೆಲ್ಲವನ್ನು ವೈಯಕ್ತಿಕ ದ್ವೇಷದ ನೆಲೆಯಲ್ಲಿ ಬೆಳೆಸದೇ ಇರುವುದೂ ಕರವೇ ಹೆಚ್ಚುಗಾರಿಕೆ. ಮೋರೆ ಮಸಿ ಪ್ರಕರಣವನ್ನು ಯು.ಆರ್.ಅನಂತಮೂರ್ತಿಯವರು ಕಟುವಾಗಿ ಟೀಕಿಸಿದರೂ ಅವರು ರಾಜ್ಯಸಭಾ ಚುನಾವಣೆಗೆ ನಿಂತಾಗ ಸ್ವಾಭಿಮಾನವಿದ್ದರೆ ಅನಂತಮೂರ್ತಿಯವರಿಗೆ ಮತ ಹಾಕಿ ಎಂದು ಶಾಸಕರಿಗೆ ಅಬ್ಬರಿಸಿದ್ದೂ ನಾರಾಯಣಗೌಡರೇ. (ಆದರೆ ಸ್ವಾಭಿಮಾನವಿಲ್ಲದ ಶಾಸಕರು ಮತವನ್ನು ಮಾರಿಕೊಂಡು ಅನಂತಮೂರ್ತಿಯವರನ್ನು ಸೋಲಿಸಿದರು ಎಂಬುದು ಬೇರೆ ವಿಚಾರ)

*******

ಡೆರಿಕ್ ಫುಲ್ ಇನ್ಫಾ ಎಂಬ ಆಂಗ್ಲೋ ಇಂಡಿಯನ್ ಶಾಸಕ ಕನ್ನಡ ಗೊತ್ತಿದ್ದೂ ವಿಧಾನಸಭೆಯಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿದರು. ಬೇರೆ ಸದಸ್ಯರು ಹಾಗು ಸ್ವತಃ ಸ್ಪೀಕರ್ ಮನವಿ ಮಾಡಿಕೊಂಡರೂ ಅವರು ಕನ್ನಡದಲ್ಲಿ ಮಾತನಾಡಲು ಒಲ್ಲೆ ಎಂದರು. ಇಂಗ್ಲಿಷ್‌ನಲ್ಲಿ ಮಾತನಾಡುವುದು ನನ್ನ ಹಕ್ಕು ಎಂದು ಉದ್ಧಟತನದಿಂದ ಮಾತನಾಡಿದರು. ಇಂಗ್ಲಿಷ್‌ನಲ್ಲಿ ಮಾತನಾಡಲು ಅವರಿಗೆ ಸಾಂವಿಧಾನಿಕ ಅವಕಾಶಗಳು ಇರುತ್ತವೆ, ನಿಜ. ಆದರೆ ಕನ್ನಡವನ್ನು ಗೌರವಿಸಲು ಕನ್ನಡದಲ್ಲೇ ಮಾತನಾಡಿ ಎಂದು ಪ್ರೀತಿಯಿಂದ ಹೇಳಿದರೂ ಕೇಳದಿದ್ದರೆ ಅದನ್ನು ಹೇಗೆ ಗ್ರಹಿಸುವುದು?

ಡೆರಿಕ್ ಫುಲ್ ಇನ್ಫಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಅಧ್ಯಕ್ಷರೂ ಆಗಿದ್ದಾರೆ. ಅವರ ನೇತೃತ್ವದಲ್ಲಿ ಮಲ್ಲೇಶ್ವರಂನ ಬಿಜೆಪಿ ಕಛೇರಿಯಲ್ಲಿ ಸಭೆ ನಡೆಯುತ್ತಿತ್ತು. ಅಲ್ಲಿಗೆ ಕರವೇಯ ಸುಮಾರು ಇನ್ನೂರು ಕಾರ್ಯಕರ್ತರು ಆಗಮಿಸಿ ಫುಲ್ ಇನ್ಫಾಗೆ ನೀರಿಳಿಸಿದರು.

ಪತ್ರಕರ್ತ ಗೆಳೆಯರೊಬ್ಬರನ್ನು ಕಾಣಲೆಂದು ಅಲ್ಲಿಗೆ ಹೋಗಿದ್ದ ನಾನು ಆಕಸ್ಮಿಕವಾಗಿ ಈ ಘಟನೆಗೆ ಸಾಕ್ಷಿಯಾಗಿದ್ದೆ. ಇದೆಲ್ಲ ನಡೆದ ಕೆಲಕ್ಷಣದಲ್ಲೇ ಮೊಬೈಲ್ ಮೂಲಕ ಗೌಡರು ಧಾವಂತದಿಂದ ನನ್ನನ್ನು ಕೇಳಿದರು. ನಮ್ಮ ಹುಡುಗರು ಏನಾದರೂ ಹೆಚ್ಚು ಕಡಿಮೆ ಮಾಡಿದರಾ? ನಾನು ಅಲ್ಲಿ ನಡೆದಿದ್ದೆಲ್ಲವನ್ನೂ ಅವರಿಗೆ ಒಪ್ಪಿಸಿದೆ.

“ಹಾಗೇನೂ ಆಗಲಿಲ್ಲ. ಫುಲ್ ಇನ್ಫಾ ವೇದಿಕೆಯಲ್ಲಿದ್ದರು. ಕಾರ್ಯಕ್ರಮ ಆರಂಭವಾಗಿರಲಿಲ್ಲ. ಅಷ್ಟೊತ್ತಿಗೆ ಕಾರ್ಯಕರ್ತರು ಬಂದರು. ಸಭೆಗೆ ಬಂದಿದ್ದವರೆಲ್ಲ ಅಲ್ಲಿಂದ ಕಾಲ್ತೆಗೆದರು. ನೂಕುನುಗ್ಗಾಟದಲ್ಲಿ ಫುಲ್ ಇನ್ಫಾಗೆ ತೊಂದರೆಯಾಗಬಾರದೆಂದು ಕಾರ್ಯಕರ್ತರೇ ಒಬ್ಬರ ಕೈ ಒಬ್ಬರು ಹಿಡಿದು ಅವರ ಸುತ್ತ ಕೋಟೆ ಕಟ್ಟಿದರು.

ಕರ್ನಾಟಕ ರಕ್ಷಣಾ ವೇದಿಕೆ ಯಾವ ವಿಷಯ ಕುರಿತು ಪ್ರತಿಭಟಿಸಲು ಬಂದಿದೆ ಎಂಬುದನ್ನು ನಿಮ್ಮ ದಾ.ಪಿ.ಆಂಜನಪ್ಪ ನಿಧಾನವಾಗಿ ಬಿಡಿಸಿ ಹೇಳಿದರು. ಅವರು ಹೇಳುವಾಗಲೂ ನಿಂದನೆಯ, ಅವಮಾನಿಸುವ ಒಂದಂಶವೂ ಇರಲಿಲ್ಲ. ಫುಲ್ ಇನ್ಫಾ ಸಹ ಅವರು ಹೇಳಿದ್ದೆಲ್ಲವನ್ನು ಕೇಳಿಸಿಕೊಂಡು ಹೌದು, ನನ್ನಿಂದ ತಪ್ಪಾಗಿದೆ, ಮುಂದೆ ನಾನು ಕನ್ನಡದಲ್ಲೇ ಮಾತನಾಡುತ್ತೇನೆ, ಕ್ಷಮಿಸಿ ಎಂದು ಹೇಳಿದರು. ಆನಂತರ ಕಾರ್ಯಕರ್ತರು ಘೋಷಣೆ ಕೂಗುತ್ತ ಅಲ್ಲಿಂದ ನಡೆದುಹೋದರು. ಕೆಲ ಟಿವಿಯವರ ಜತೆ ಮಾತನಾಡಿ ಅಲ್ಲಿಂದ ಹೋದರು. ನಂತರ ಪೊಲೀಸರು ಬಂದರು.

ಅಷ್ಟೊಂದು ಜನ ನಡೆದು ಬರುವಾಗ ಒಂದು ಹೂಕುಂಡ ಒಡೆದುಹೋಯಿತು. ಅದನ್ನು ಬಿಟ್ಟರೆ ಮತ್ತೇನೂ ಆಗಿಲ್ಲ. ತುಂಬ ಗೌರವದಿಂದಲೇ ಶಾಸಕರ ಜತೆ ಕಾರ್ಯಕರ್ತರು ವರ್ತಿಸಿದರು. ತಮ್ಮ ಉದ್ದೇಶ ಈಡೇರಿದ ನಂತರ ಶಾಂತಿಯಿಂದಲೇ ಹೊರಟು ಹೋದರು

ಇಷ್ಟನ್ನು ಹೇಳಿದ ಮೇಲೆಯೇ ಅವರಿಗೆ ಸಮಾಧಾನವಾಗಿದ್ದು. ಕೆಲ ಪೊಲೀಸ್ ಅಧಿಕಾರಿಗಳು ಅವರಿಗೆ ನಿಮ್ಮ ಹುಡುಗರು ಸಭೆ ನಡೆಯುತ್ತಿದ್ದ ಕಛೇರಿ ಧ್ವಂಸಗೊಳಿಸಿದ್ದಾರೆ. ಫುಲ್ ಇನ್ಫಾ ಮೇಲೆ ದಾಳಿ ಮಾಡಿದ್ದಾರೆ ಇತ್ಯಾದಿ ಸುಳ್ಳು ಹೇಳಿದ್ದರು.

ನಾರಾಯಣಗೌಡರ ಕಾರ್ಯಕರ್ತರು ಬಹುಪಾಲು ಸಂದರ್ಭಗಳಲ್ಲಿ ತಮ್ಮ ನಾಯಕನ ಅಣತಿ ಮೀರಿ ಏನನ್ನೂ ಮಾಡುವುದಿಲ್ಲ. ಗೌಡರೂ ಸಹ ಹದ್ದುಮೀರಿ ತಮ್ಮ ಕಾರ್ಯಕರ್ತರಿಂದ ಏನನ್ನೂ ಮಾಡಿಸುವುದಿಲ್ಲ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ.
ಈ ಘಟನೆಯಾದ ಎರಡನೇ ದಿನವೇ ಡೆರಿಕ್ ಫುಲ್ ಇನ್ಫಾ ನೇರವಾಗಿ ಗಾಂಧಿನಗರದ ಕರವೇ ಕಛೇರಿಗೆ ಪತ್ನಿಸಮೇತರಾಗಿ ಬಂದು ನಾರಾಯಣಗೌಡರ ಜತೆ ಚರ್ಚೆ ನಡೆಸಿದರು. ನೇರವಾಗಿ ಮೀಡಿಯಾದವರ ಸಮ್ಮುಖದಲ್ಲಿ ಕ್ಷಮೆ ಯಾಚಿಸಿ ಮುಂದೆ ಕನ್ನಡದಲ್ಲೇ ಮಾತನಾಡುತ್ತೇನೆ ಎಂದು ಹೇಳಿಹೋದರು.

*******

ಕರ್ನಾಟಕ ರಕ್ಷಣಾ ವೇದಿಕೆಯ ಮೇಲಿರುವ ಗುರುತರ ಆರೋಪವೆಂದರೆ ಅದು ಹಿಂಸೆಯ ಮೂಲಕ ಚಳವಳಿ ನಡೆಸುತ್ತದೆ ಎಂಬುದು. ನಾನು ಇದಕ್ಕೆ ಭಿನ್ನವಾದ ವಾದವನ್ನೇ ಮಂಡಿಸುತ್ತೇನೆ. ಕರ್ನಾಟಕ ರಕ್ಷಣಾ ವೇದಿಕೆ ರಂಗಕ್ಕಿಳಿದ ನಂತರವೇ ಕನ್ನಡ ಚಳವಳಿಯಲ್ಲಿನ ಹಿಂಸೆಯ ಪ್ರಮಾಣ ಕಡಿಮೆಯಾಗುತ್ತ ಬಂತು. ಇದು ಸಮರ್ಥನೆಗಾಗಿ ಹೇಳುತ್ತಿರುವ ಮಾತಲ್ಲ.

ಕರ್ನಾಟಕ ರಕ್ಷಣಾ ವೇದಿಕೆಗೂ ಪೂರ್ವದಲ್ಲಿ ರಾಜ್ಯದ ಉದ್ದಗಲಕ್ಕೂ ಹರಡಿಕೊಂಡಿದ್ದ ಸಂಘಟನೆಯೆಂದರೆ ಅದು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ. ವಿಶೇಷವೆಂದರೆ ನಾರಾಯಣಗೌಡರೂ ಈ ಸಂಘಟನೆಯ ಮೂಲಕವೇ ಚಳವಳಿಯ ಲೋಕಕ್ಕೆ ಕಾಲಿಟ್ಟವರು.

ರಾಜ್‌ಕುಮಾರ್ ಅಭಿಮಾನಿ ಸಂಘ ಹಿಂದೆಯೆಲ್ಲಾ ಚಳವಳಿಗೆ ಬೀದಿಗೆ ಇಳಿದರೆ ಕಲ್ಲು ಹೊಡೆಯುವವರಿಗೇನು ಬರವಿರಲಿಲ್ಲ. ರಾಜ್ ಕುಮಾರ್ ವಿರುದ್ಧ ಯಾರೇ ಏನೇ ಟೀಕೆ ಮಾಡಿದರೂ ಅವರ ಅಭಿಮಾನಿಗಳು ಹಿಡಿದು ಹೊಡೆಯುತ್ತಿದ್ದರು. ಅಭಿಮಾನಿ ಸಂಘಕ್ಕೆ ಸಾ.ರಾ.ಗೋವಿಂದು ಅಧ್ಯಕ್ಷರಾಗಿದ್ದರು, ಆದರೆ ಲಕ್ಷಾಂತರ ಕಾರ್ಯಕರ್ತರನ್ನು ನಿಯಂತ್ರಿಸುವುದು ಯಾರಿಗೂ ಸಾಧ್ಯವಿರಲಿಲ್ಲ. ಹೀಗಾಗಿ ಅಭಿಮಾನಿ ಸಂಘದ ಎಲ್ಲ ಕಾರ್ಯಕರ್ತರೂ ನಾಯಕರೇ ಆಗಿದ್ದರು ಹಾಗು ಅವರು ತಮಗೆ ಸರಿಯೆನಿಸಿದ್ದನ್ನು ಮುಲಾಜಿಲ್ಲದೆ ಮಾಡುತ್ತಿದ್ದರು. ಸ್ವತಃ ಡಾ.ರಾಜಕುಮಾರ್ ಮೆರವಣಿಗೆಯ ಮುಂಚೂಣಿಯಲ್ಲಿದ್ದರೆ ಮೆರವಣಿಗೆಯ ಇನ್ನೊಂದು ತುದಿಯಲ್ಲಿದ್ದ ಕಾರ್ಯಕರ್ತರು ಇಂಗ್ಲಿಷ್ ಬೋರ್ಡು ಕಂಡರೆ ಕಲ್ಲು ಬೀಸುತ್ತಿದ್ದರು.

ಕರವೇಗೂ ಮುನ್ನ ನಡೆದ ಉರ್ದು ವಾರ್ತೆ ವಿರೋಧಿ ಚಳವಳಿ, ಕಾವೇರಿ ಚಳವಳಿಗಳ ಸಂದರ್ಭದಲ್ಲಿ ಬೆಂಗಳೂರಿಗೆ ಬೆಂಗಳೂರೇ ಹೊತ್ತಿ ಉರಿದಿತ್ತು. ಹಾಗೆ ಹಿಂಸೆಗಿಳಿದವರು ಸಂಘಟಿತರಲ್ಲ. ಅವರಿಗೆ ಯಾವ ನಾಯಕನೂ ಇರಲಿಲ್ಲ. ಅವರು ಯಾವ ಸಂಘಟನೆಯ ಕಟ್ಟುಪಾಡಿಗೆ ಬದ್ಧರಾದವರಲ್ಲ.

ಆದರೆ ರಕ್ಷಣಾ ವೇದಿಕೆ ಬೆಳೆದಂತೆ ಕನ್ನಡ ಕಾರ್ಯಕರ್ತರೆಲ್ಲ ಈ ಸಂಘಟನೆಯೊಂದಿಗೆ ಗುರುತಿಸಿಕೊಳ್ಳಲಾರಂಭಿಸಿದರು. ಸಹಜವಾಗಿಯೇ ಅವರಿಗೆ ಜವಾಬ್ದಾರಿಗಳೂ ನಿಗದಿಯಾದವು. ಹೋರಾಟಗಳ ಸಂದರ್ಭದಲ್ಲಿ ಒಂದು ಬಗೆಯ ಶಿಸ್ತು ಮೂಡತೊಡಗಿತು. ಚಳವಳಿಗಳ ಸಂದರ್ಭದಲ್ಲಿ ಅರಾಜಕ ಹಿಂಸಾಚಾರಗಳು ನಡೆಯುತ್ತಿದ್ದವಲ್ಲ, ಅದೆಲ್ಲ ಮರೆಯಾದಂತೆ ರಕ್ಷಣಾ ವೇದಿಕೆ ಹಿಂಸೆಯ ಪ್ರಮಾಣವನ್ನು ಸಾಂಕೇತಿಕ ಮಟ್ಟಕ್ಕೆ ಇಳಿಸಿತು.

ಕಳೆದ ವರ್ಷ ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಕನ್ನಡಿಗರ ಸಮಾವೇಶ ನಡೆಯಿತು. ಅರಮನೆ ಮೈದಾನಕ್ಕೆ ಸುಮಾರು ಒಂದು ಲಕ್ಷ ಜನ ಕಾರ್ಯಕರ್ತರು ಮೆರವಣಿಗೆಯಲ್ಲೇ ಬರಬೇಕಿತ್ತು. ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಕರವೇ ಮುಖಂಡರೊಂದಿಗೆ ಸಭೆ ನಡೆಸಿದಾಗ ಒಬ್ಬ ಡಿಸಿಪಿ ಯಾವುದೇ ಕಾರಣಕ್ಕೂ ಮೆರವಣಿಗೆಗೆ ಅವಕಾಶ ಕೊಡಲಾಗುವುದಿಲ್ಲ ಎಂದು ಪಟ್ಟು ಹಿಡಿದರು. ‘ಏನಾದ್ರೂ ಹೆಚ್ಚುಕಡಿಮೆಯಾದರೆ ನನ್ನ ಕೆಲಸ ಹೋಗುತ್ತೆ ಕಣ್ರೀ ಎಂದು ಅವರು ಅಳಲು ತೋಡಿಕೊಂಡಿದ್ದರು. ಆಗ ಗೌಡರು ಕನ್ನಡದ ಕೆಲಸ ಇದು, ಅದರ ಮುಂದೆ ನಿಮ್ಮ ಕೆಲಸ ಎಂಥದ್ದು, ಹೋದ್ರೆ ಹೋಗಲಿ ಬಿಡಿ ಸಾರ್ ಎಂದು ನಗುತ್ತಲೇ ಹೇಳಿದ್ದರು.

ಮೆರವಣಿಗೆ ಅಭೂತಪೂರ್ವ ಎನ್ನುವಂತೆ ನಡೆಯಿತು. ಮೆರವಣಿಗೆ ಉದ್ದಕ್ಕೂ ಡಿಸಿಪಿ ಸಾಹೇಬರು ನಡೆದು ಬಂದರು. ಎಲ್ಲವೂ ಮುಗಿದ ಮೇಲೆ ಪತ್ರಕರ್ತರ ಜತೆ ಮಾತನಾಡುತ್ತ ಅವರು ಹೇಳಿದ ಮಾತು: ರಕ್ಷಣಾ ವೇದಿಕೆಯವರು ಅಂದ್ರೆ ಕಲ್ಲು ಹೊಡೆಯೋರು, ಗಲಾಟೆ ಮಾಡೋರು ಅಂದುಕೊಂಡಿದ್ದೆ. ಇಷ್ಟು ಜನ ಮೆರವಣಿಗೆಯಲ್ಲಿ ಬಂದ್ರೂ ಒಂದೇ ಒಂದು ಅಹಿತಕರ ಘಟನೆ ನಡೆಯಲಿಲ್ಲ. ಇವ್ರು ಹೀಗೆಲ್ಲ ಇದ್ದಾರೆ ಅಂತ ಗೊತ್ತೇ ಇರಲಿಲ್ಲ ಕಣ್ರೀ.

ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ಹೊರಬಂದ ಸಂದರ್ಭದಲ್ಲಿ, ಹೊಗೇನಕಲ್ ಹೋರಾಟ ಉತ್ಕರ್ಷಕ್ಕೆ ಏರಿದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಒಬ್ಬನೇ ಒಬ್ಬ ತಮಿಳನ ಮೇಲೂ ಸಣ್ಣ ಹಲ್ಲೆಯೂ ನಡೆಯಲಿಲ್ಲ. ಹೊಗೇನಕಲ್ ಹೋರಾಟ ನಡೆಯುತ್ತಿದ್ದಾಗ ಕರ್ನಾಟಕದ ಪ್ರಬಲ ತಮಿಳು ಸಂಘಟನೆಯಾದ ಬೆಂಗಳೂರು ತಮಿಳು ಸಂಘಂನ ಪದಾಧಿಕಾರಿಗಳೊಂದಿಗೆ ಕರವೇ ಮುಖಂಡರು ರಚನಾತ್ಮಕವಾದ ಚರ್ಚೆಯಲ್ಲಿ ತೊಡಗಿದ್ದರು. ಪ್ರೆಸ್ ಕ್ಲಬ್‌ನಲ್ಲಿ ಗೌಡರು ಪತ್ರಿಕಾಗೋಷ್ಠಿ ನಡೆಸಲು ಬಂದಿದ್ದಾಗ ಟಿವಿ-ಪತ್ರಿಕಾ ಮಾಧ್ಯಮದ ಎದುರಿನಲ್ಲೇ ಸಂಘದ ಅಧ್ಯಕ್ಷ ಷಣ್ಮುಗ ಸುಂದರಂ ಬಂದು ಹೂಗುಚ್ಚ ನೀಡಿ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ. ನಾವು ನಮ್ಮ ನಿರ್ಣಯವನ್ನು ತಮಿಳುನಾಡು ಸರ್ಕಾರಕ್ಕೂ ಕಳುಹಿಸುತ್ತೇವೆ ಎಂದು ಬಹಿರಂಗವಾಗೇ ಘೋಷಿಸಿದರು. ಕರ್ನಾಟಕದ ಎರಡು ಪ್ರಬಲ ಭಾಷಾ ಸಂಘಟನೆಗಳು ಹೀಗೆ ಒಂದೇ ವೇದಿಕೆಯಲ್ಲಿ ಕುಳಿತಿದ್ದೇ ಒಂದು ಇತಿಹಾಸ. ಯಾಕೋ ಏನೋ ಈ ಮಹತ್ವದ ಘಟನೆ ಸುದ್ದಿಮಾಧ್ಯಮಗಳಲ್ಲಿ ಅಷ್ಟು ಪ್ರಮುಖ ಸುದ್ದಿಯಾಗಲೇ ಇಲ್ಲ.

ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಈಗ ತಮಿಳರೂ ಕೆಲಸ ಮಾಡುತ್ತಿದ್ದಾರೆ. ತಮಿಳರೇ ಅಲ್ಲಲ್ಲಿ ರಾಜ್ಯೋತ್ಸವ ಮಾಡಿ ನಾರಾಯಣಗೌಡರನ್ನು ಆಹ್ವಾನಿಸುತ್ತಾರೆ. ಇಂಥದ್ದೊಂದು ಕಾರ್ಯವನ್ನು ಗುರುತಿಸುವ ಕೆಲಸ ಆಗಿಲ್ಲ ಅಷ್ಟೆ.

ಕರವೇ ಕನ್ನಡ ಚಳವಳಿಯ ಹಿಂಸಾತ್ಮಕ ಮಾರ್ಗವನ್ನು ಸಾಂಕೇತಿಕ ಮಟ್ಟಕ್ಕೆ ಇಳಿಸಿತು ಎಂದು ಹೇಳುವ ಮೂಲಕ ಈ ಸಾಂಕೇತಿಕ ಹಿಂಸೆಯನ್ನು ನಾನು ಸಮರ್ಥಿಸುತ್ತಿದ್ದೇನೆ ಎಂದು ಅರ್ಥ ಮಾಡಿಕೊಳ್ಳಬೇಕಾಗಿಲ್ಲ. ಕರವೇ ಸಹ ಎಲ್ಲ ಬಗೆಯ ಹಿಂಸೆಯ ಮಾರ್ಗಗಳಿಂದ ಮುಕ್ತವಾಗಬೇಕು ಎಂದು ಬಯಸುವವನು ನಾನು. ಹಿಂದೆ ಅಧಿಕಾರಿಗಳನ್ನು ಕಟ್ಟಿ ಹಾಕಿ, ಕಪಾಳಕ್ಕೆ ಬಿಗಿದು ತೀವ್ರಗಾಮಿಯಾಗಿ ನಡೆಯುತ್ತಿದ್ದ ರೈತ ಚಳವಳಿಯೂ ಕಾಲಾಂತರದಲ್ಲಿ ಸ್ವಯಂ ನಿಯಂತ್ರಣಗಳನ್ನು ಹೇರಿಕೊಂಡು ಬದಲಾದದ್ದು ನಮ್ಮೆದುರಿನ ಇತಿಹಾಸ. ಕರವೇ ಹೀಗೆ ಬದಲಾಗುವ ಕಾಲವೂ ದೂರವಿಲ್ಲ ಎಂಬ ಆಶಾವಾದ ನನ್ನದು.

*******

ರಕ್ಷಣಾ ವೇದಿಕೆಗೆ ದುಡ್ಡು ಎಲ್ಲಿಂದ ಬರುತ್ರೀ ಎಂದು ಬಹಳ ಜನ ನನ್ನನ್ನು ಪ್ರಶ್ನಿಸುತ್ತಿರುತ್ತಾರೆ. ಹೀಗೆ ಪ್ರಶ್ನಿಸುವವರ್‍ಯಾರೂ ದೇಶಪಾಂಡೆಯವರಿಗೆ, ಯಡಿಯೂರಪ್ಪನವರಿಗೆ, ಕುಮಾರಸ್ವಾಮಿಯವರಿಗೆ ದುಡ್ಡು ಎಲ್ಲಿಂದ ಬರುತ್ತೆ ಎಂದು ಯಾವತ್ತೂ ಪ್ರಶ್ನಿಸಿದವರಲ್ಲ.

ಗೌಡರು ವಿವಿಧ ಜಿಲ್ಲೆಗಳಿಗೆ ಪ್ರವಾಸ ಹೋದಾಗಲೂ ಅಲ್ಲಿ ಪತ್ರಕರ್ತರು ತುಂಬ ಆಸ್ಥೆಯಿಂದ ಕೇಳುವ ಪ್ರಶ್ನೆ ರಕ್ಷಣಾ ವೇದಿಕೆಯ ಖರ್ಚಿನ ಬಾಬತ್ತನ್ನು ಹೇಗೆ ಪೂರೈಸುತ್ತೀರಿ ಎಂಬುದೇ. ನೀವು ಅಲ್ಲಿ ಇಲ್ಲಿ ವಸೂಲಿ ಮಾಡ್ತೀರಾ ಎಂಬ ಆರೋಪವೇ ಪ್ರಶ್ನೆ ಕೇಳುವಾತನ ಮನಸ್ಸಿನಲ್ಲಿ ಇರುತ್ತದೆ.

ಗೌಡರು ತುಂಬ ಸಲೀಸಾಗಿ ಹೇಳುತ್ತಾರೆ: ರಾಜ್ಯದಲ್ಲಿ ಒಟ್ಟು ನಲವತ್ತು ಲಕ್ಷ ಜನ ಕರವೇ ನೋಂದಾಯಿತ ಕಾರ್ಯಕರ್ತರಿದ್ದಾರೆ. ಅವರೆಲ್ಲ ಒಂದೊಂದು ರೂಪಾಯಿ ಕೊಟ್ಟರು ನಲವತ್ತು ಲಕ್ಷ ರೂಪಾಯಿ ಆಗುತ್ತೆ. ಕೆಲ ಅನಿವಾಸಿ ಕನ್ನಡಿಗರು ವೇದಿಕೆಗೆ ಸಹಾಯ ಮಾಡ್ತಾರೆ. ಅದರ ವಿವರ ಬೇಕಾದರೆ ಕಛೇರಿಗೆ ಬನ್ನಿ. ಇಲ್ಲಿನ ಉದ್ಯಮಿಗಳೂ ಸಹಾಯ ಮಾಡುವುದುಂಟು. ಯಾರನ್ನೂ ಬೆದರಿಸಿ ಹಣ ಕೇಳುವ ಪ್ರಶ್ನೆಯೇ ಇಲ್ಲ. ಯಾರು ಪ್ರೀತಿಯಿಂದ ಕೊಡ್ತಾರೋ ಅದನ್ನು ಕನ್ನಡದ ಕೆಲಸಕ್ಕೆ ಬಳಸುತ್ತೇವೆ.

ತುಂಬ ತಮಾಶೆಯೆಂದರೆ ಗೌಡರು ಇತ್ತೀಚಿನವರೆಗೂ ಬಾಡಿಗೆ ಮನೆಯಲ್ಲೇ ಇದ್ದರು. ಅವರಿಗೆ ಬಾಡಿಗೆಗೆ ಮನೆ ಕೊಡಲೂ ಮನೆಮಾಲೀಕರು ಹಿಂಜರಿಯುತ್ತಿದ್ದರು. ಇದಕ್ಕೆ ಕಾರಣ ಮನೆ ಖಾಲಿ ಮಾಡದೇ ಇದ್ದರೆ ಎಂಬ ಭೀತಿ. ಕನ್ನಡದ ಮತ್ತೋರ್ವ ಅಗ್ರಗಣ್ಯ ನಾಯಕರು ಮನೆಯೊಂದನ್ನು ಸೇರಿಕೊಂಡು ಅದನ್ನು ಖಾಲಿ ಮಾಡದೆ ಸತಾಯಿಸಿದ ಕಥೆ ಎಲ್ಲರಿಗೂ ಗೊತ್ತು ಎಂದು ಭಾವಿಸಿದ್ದೇನೆ. ಕಡೆಗೆ ಬಡಪಾಯಿ ಮಾಲೀಕ ಕೋರ್ಟಿನ ಮೂಲಕ ಅವರನ್ನು ಖಾಲಿ ಮಾಡಿಸಬೇಕಾಗಿ ಬಂತು.

ನಾನು ಕಂಡಂತೆ ಗೌಡರು ಅವರ ಮನೆಯವರು ಐಶಾರಾಮಿ ಜೀವನವನ್ನೇನು ನಡೆಸುತ್ತಿಲ್ಲ. ಗೌಡರಿಗೆ ಇಬ್ಬರು ಮಕ್ಕಳು. ಆ ಇಬ್ಬರು ಹುಟ್ಟುವಾಗಲೂ ಅವರು ಜೈಲಿನಲ್ಲೇ ಇದ್ದರು.

ಈಗಲೂ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಅವರು ಓಡಾಡುತ್ತಾರೆ. ಬೆಳಿಗ್ಗೆ ಬೆಳಗಾವಿಯಲ್ಲಿದ್ದರೆ, ಸಂಜೆ ಹೊತ್ತಿಗೆ ಬೆಂಗಳೂರು, ಮಾರನೇ ದಿನ ಮಂಗಳೂರು, ಅದರ ನಂತರದ ದಿನ ಗುಲ್ಬರ್ಗ. ಈ ಬಿಡುವಿಲ್ಲದ ಚಟುವಟಿಕೆಗಳಲ್ಲಿ ತಮ್ಮ ಆರೋಗ್ಯವನ್ನೂ ಸರಿಯಾಗಿಟ್ಟುಕೊಳ್ಳಲೂ ಸಹ ಅವರಿಗೆ ಸಾಧ್ಯವಾಗುವುದಿಲ್ಲ. ರಾತ್ರಿ ಎರಡು ಗಂಟೆಯ ಹೊತ್ತಿಗೆ ಯಾರೋ ಕರೆ ಮಾಡುತ್ತಾರೆ. ಅವರು ನಿದ್ರೆಯಿಂದ ಎದ್ದು ಮಾತನಾಡಿದರೆ, ಯಾವುದೋ ನೋವಿನ ಕತೆ, ಸಹಾಯದ ಮೊರೆ. ಕನ್ನಡಿಗರಿಗೆ ಅನ್ಯಾಯವಾಗ್ತಾ ಇದೆ. ನೀವೇನು ಮಾಡ್ತಾ ಇದ್ದೀರಿ ಎಂಬ ಉದ್ಧಟ ಪ್ರಶ್ನೆ (ಕೆಲವರು ಚಳವಳಿಗಾರರನ್ನು ಸಂಬಳಕ್ಕೆ ನಿಯೋಜಿಸಿ ಇಟ್ಟುಕೊಂಡಂತೆ ಅದ್ಯಾಕ್ರೀ ಮಾಡ್ಲಿಲ್ಲ, ಇದ್ಯಾಕ್ರೀ ಮಾಡ್ಲಿಲ್ಲ ಎಂದು ಪ್ರಶ್ನಿಸುತ್ತಿರುತ್ತಾರೆ. ಮನೆ ಎದುರು ಒಂದು ಮೆರವಣಿಗೆ ನಡೆದರೆ ಮೊದಲು ಬಾಗಿಲು ಕಿಟಿಕಿ ಬಂದ್ ಮಾಡಿಕೊಳ್ಳುವ ಜನ ಇವರು). ಅಪರಾತ್ರಿ ಎನ್ನುವುದನ್ನು ಮರೆತು ಮಾತನಾಡಿದವರಿಗೆಲ್ಲ ತಾಳ್ಮೆಯಿಂದ ಉತ್ತರಿಸಬೇಕು. ರಾತ್ರಿವೇಳೆಯ ಈ ಫೋನ್ ಕಾಲ್‌ಗಳ ಬಗ್ಗೆ ಗೌಡರು ಆಗಾಗ ಸ್ವಾರಸ್ಯಕರವಾಗಿ ಹೇಳುತ್ತಿರುತ್ತಾರೆ. ಅದನ್ನು ಮುಂದೆ ಎಂದಾದರೂ ಬರೆಯುತ್ತೇನೆ.

ಇದ್ಯಾವುದೂ ಗೊತ್ತಿಲ್ಲದ ಜನ ಮನಸ್ಸಿಗೆ ತೋಚಿದ್ದನ್ನು ಮಾತನಾಡುತ್ತಾರೆ. ನಾರಾಯಣಗೌಡನ್ನ ನೋಡ್ರೀ ಹೆಂಗೆ ಇನೋವಾದಲ್ಲಿ ಓಡಾಡ್ತಾನೆ? ಅಂತ ಕರುಬುತ್ತಾರೆ. ಯಾಕ್ರೀ ಕನ್ನಡ ಚಳವಳಿಗಾರರು ಕಾರು ಇಟ್ಟುಕೊಳ್ಳಬಾರ್‍ದಾ, ಅವರೇನು ಸಂನ್ಯಾಸಿಗಳಾ ಎಂದು ಕೇಳಿದರೆ ಅದು ಹಂಗಲ್ಲ... ಎಂದು ಬಡಬಡಿಸುತ್ತಾರೆ.

ನಾವಂತೂ ಯಾರ ಬಳಿಯೂ ರೋಲ್‌ಕಾಲ್ ಮಾಡೋದಿಲ್ಲ, ವೇದಿಕೆಯ ಯಾರೇ ಅದನ್ನು ಮಾಡಿದರೂ ಪೊಲೀಸರಿಗೆ ದೂರು ಕೊಡಿ, ಸಾಧ್ಯವಾದರೆ ನಮಗೂ ದೂರು ಕೊಡಿ ಎಂದು ಕರವೇ ಮುಖಂಡರು ಸಾಕಷ್ಟು ಬಾರಿ ಹೇಳಿದ್ದಾರೆ. ಆದರೂ ಇಂಥ ಪ್ರಶ್ನೆಗಳು ಉದ್ಭವಿಸುತ್ತಲೇ ಇರುತ್ತವೆ. ನಿಜ, ಸಾರ್ವಜನಿಕ ಜೀವನದಲ್ಲಿರುವವರು ಇಂಥ ಪ್ರಶ್ನೆಗಳನ್ನು ಎದುರಿಸಲೇಬೇಕು.

*******

ನಾರಾಯಣಗೌಡರ ಬಗ್ಗೆ ಏನೇನೂ ಗೊತ್ತಿಲ್ಲದ ಇಂಗ್ಲಿಷ್ ಪತ್ರಕರ್ತನೊಬ್ಬ ಡೆರಿಕ್ ಫುಲ್ ಇನ್ಫಾ ಕನ್ನಡದಲ್ಲೇ ಮಾತನಾಡುವಂತೆ ವೇದಿಕೆ ನಡೆಸಿದ ಹೋರಾಟದ ಕುರಿತು ಸಾಕಷ್ಟು ಬರೆದಿದ್ದರು. ಹೀಗೆಲ್ಲ ಕರವೇ ಬಗ್ಗೆ ಬರೆದಿರುವುದರಿಂದ ನಾನು ಅವರ ದಾಳಿಗೆ ಒಳಗಾಗಬಹುದು ಎಂದು ಭೀತಿ ವ್ಯಕ್ತಪಡಿಸಿದ್ದರು. ಇದೂ ಒಂದು ಬಗೆಯ ಆತ್ಮರತಿ! ಓದಿ ನಗು ಬಂತು. ಹೀಗೆ ಬರೆಯುವ ಪತ್ರಕರ್ತರು ದೆಹಲಿಯಲ್ಲಲ್ಲ, ಬೆಂಗಳೂರಿನಲ್ಲೇ ನೂರಾರು ಮಂದಿಯಿದ್ದಾರೆ. ಹಾಗೆ ತಮ್ಮ ವಿರುದ್ಧ ಬರೆದವರ ಮೇಲೆಲ್ಲ ಗೌಡರು ಹಲ್ಲೆ ನಡೆಸುತ್ತಿದ್ದರೆ ದಿನಕ್ಕೊಬ್ಬ ಪತ್ರಕರ್ತನ ಮೇಲೆ ದಾಳಿಯಾಗಬೇಕಿತ್ತು.

ಹಾಗೆ ನೋಡಿದರೆ ಗೌಡರು ಹಾಗು ಕರವೇ ಮಾಧ್ಯಮದ ಜನರಿಗೆ ಆಗಾಗ ಶಿಕಾರಿಯಾಗುತ್ತಲೇ ಇರುತ್ತಾರೆ. ಗೌಡರನ್ನು, ಕರವೇ ಮುಖಂಡರನ್ನು ‘ತಥಾಕಥಿತ ಕನ್ನಡ ರಕ್ಷಕರು, ‘ಸ್ವಯಂ ಘೋಷಿತ ಕನ್ನಡ ರಕ್ಷಕರು ಎಂದೇ ಕೆಲವು ಮಾಧ್ಯಮಗಳಲ್ಲಿ ಜರಿಯಲಾಗುತ್ತದೆ. ಎಲ್ಲೋ ಒಬ್ಬ ಕಾರ್ಯಕರ್ತ ಯಾವುದೋ ಕ್ರೈಂ ಪ್ರಕರಣದಲ್ಲಿ ಭಾಗಿಯಾದಾಗ ದಪ್ಪಕ್ಷರಗಳಲ್ಲಿ ಕರವೇ ಮುಖಂಡನ ಬಂಧನ ಎಂದು ಬರೆಯಲಾಗುತ್ತದೆ. ಕೆಲವರಂತೂ ಕರವೇ ವಿರುದ್ಧ ಬರೆಯುವುದನ್ನೇ ಗುತ್ತಿಗೆ ಪಡೆದುಕೊಂಡಂತೆ ಬರೆಯುತ್ತಿದ್ದಾರೆ. ಇಂಥ ಟೀಕೆಗಳನ್ನೆಲ್ಲ ಸ್ಫೂರ್ತಿಯಿಂದಲೇ ಸ್ವೀಕರಿಸುತ್ತ ಬರಲಾಗಿದೆ ಎಂಬುದು ಪಾಪ, ಇಂಗ್ಲಿಷ್ ಪತ್ರಕರ್ತರಿಗೆ ಗೊತ್ತಿಲ್ಲ.

ಮೇಯರ್ ಮೋರೆ ಮಸಿ ಪ್ರಕರಣದ ನಂತರ ಬೆಳಗಾವಿಯಲ್ಲಿ ಕನ್ನಡಿಗರು ತಲೆ ಎತ್ತಿ ಓಡಾಡುವಂತಾಗಿ ಕಡೆಗೆ ಕನ್ನಡದ ಮೇಯರ್ ಆಯ್ಕೆಯಾಗಿದ್ದು ಈಗ ಇತಿಹಾಸ. ಮೇಯರ್ ಹುದ್ದೆ ಏರಿದಾಕೆಯೂ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತೆ. ಈಕೆಯ ಪತಿ ಕರವೇ ನಗರ ಘಟಕದ ಅಧ್ಯಕ್ಷ. ಮೇಯರ್ ಹಾಗು ಉಪಮೇಯರ್ ಇಬ್ಬರನ್ನೂ ಬೆಂಗಳೂರಿಗೆ ಕರೆಸಿ ಅಭಿನಂದನಾ ಸಮಾರಂಭವನ್ನು ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ನಿಷ್ಠುರವಾಗಿ ಮಾತನಾಡುವ ಕನ್ನಡಪ್ರಭದ ಸಂಪಾದಕ ಎಚ್.ಆರ್.ರಂಗನಾಥ್ ಅವತ್ತು ಕರವೇ ಕನ್ನಡ ಕಾಳಜಿಯನ್ನು ಸಮರ್ಥಿಸುತ್ತಲೇ ವೇದಿಕೆಯ ಹುಡುಗರ ಲೋಪದೋಷಗಳನ್ನು ನೇರವಾಗಿ ಹೇಳುತ್ತ ಹೋದರು. ಮುಂದೆ ಇರುವ ಸವಾಲುಗಳ ಕುರಿತೂ ಗಂಭೀರವಾಗಿ ಮಾತನಾಡಿದರು. ಕರವೇಯನ್ನು ಪುಂಡರ ಗುಂಪು ಎಂದು ಬ್ರಾಂಡ್ ಮಾಡದಂತೆ ನೋಡಿಕೊಳ್ಳಿ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಎಲ್ಲಿ ರಂಗನಾಥ್ ವಿರುದ್ಧ ಕರವೇ ಕಾರ್ಯಕರ್ತರು ತಿರುಗಿಬೀಳುತ್ತಾರೋ ಎಂದು ಭೀತರಾದ ಪೊಲೀಸರು ವೇದಿಕೆಯ ಇಕ್ಕೆಲಗಳಲ್ಲೂ ನೆರೆದುಬಿಟ್ಟರು. ಗೌಡರು ಅದನ್ನು ಗಮನಿಸಿ ಕಣ್ಣಿನಿಂದಲೇ ಅಲ್ಲಿಂದ ಹೋಗುವಂತೆ ಪೊಲೀಸರಿಗೆ ಹೇಳಿದರು.

ರಂಗನಾಥ್ ಮಾತನಾಡಿದ್ದೆಲ್ಲವನ್ನೂ ಕಾರ್ಯಕರ್ತರು ತಾಳ್ಮೆಯಿಂದ ಕೇಳಿದರು. ಚಪ್ಪಾಳೆಯನ್ನೂ ಹೊಡೆದರು. ಹಾಗೆಯೇ ನಾರಾಯಣಗೌಡರು ಮಾತನಾಡುತ್ತ ರಂಗನಾಥ್ ಮಾತನಾಡುತ್ತಿದ್ದಾಗ ನಮಗೆಲ್ಲ ಯಾವುದೋ ಚಿಂತನಾ ಕಾರ್ಯಾಗಾರದಲ್ಲಿ ಕುಳಿತ ಅನುಭವವಾಯಿತು. ನಿಮ್ಮ ಅನಿಸಿಕೆಗಳನ್ನು ಸದಾ ಹೀಗೇ ಮುಕ್ತವಾಗಿ ಹೇಳಿ, ತಪ್ಪುಗಳನ್ನು ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮನಪೂರ್ವಕವಾಗಿ ಹೇಳಿದ್ದರು.

ನಾರಾಯಣಗೌಡರ ಕುರಿತಾಗಿ ಸಾಕಷ್ಟು ಜನರಿಗೆ ವಿಚಿತ್ರವಾದ ಪೂರ್ವಾಗ್ರಹಗಳಿವೆ, ಅನುಮಾನಗಳಿವೆ, ಭೀತಿಯಿದೆ. ಹೋರಾಟಗಳ ಸಂದರ್ಭದಲ್ಲಿ ಹುಬ್ಬುಗಂಟಿಕ್ಕಿಕೊಂಡು ಸರ್ಕಾರಗಳಿಗೆ ಎಚ್ಚರಿಕೆ ನೀಡುವ ಗೌಡರ ದೃಶ್ಯಗಳನ್ನು ಟಿವಿಗಳಲ್ಲಿ ನೋಡಿನೋಡಿ ಜನರಿಗೆ ಈ ಬಗೆಯ ಭೀತಿಗಳಿರಬಹುದು. ಆದರೆ ಆಂತರ್ಯದಲ್ಲಿ ಅವರದು ಹೆಂಗರಳು. ತಮ್ಮ ಬಳಿಗೆ ಸಮಸ್ಯೆ ಹೇಳಿಕೊಂಡು ಬರುವ ಎಷ್ಟೋ ಜನರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ.

ತಮ್ಮ ಕಾರ್ಯಕರ್ತರ ಜತೆ ಇರುವಾಗಲೂ ಅವರು ಸಹಜವಾಗಿಯೇ ವರ್ತಿಸುತ್ತಾರೆ. ಹೊರಗೆ ಕಾರ್ಯಕ್ರಮಗಳಿಗೆ ಹೋಗುವ ಸಂದರ್ಭದಲ್ಲಿ ಎಲ್ಲರೂ ಏನನ್ನು ತಿನ್ನುತ್ತಾರೋ ಅದನ್ನೇ ತಾವೂ ತಿನ್ನುತ್ತಾರೆ. ಎಲ್ಲರೂ ಯಾವ ಹೊಟೆಲ್‌ನಲ್ಲಿ ಮಲಗುತ್ತಾರೋ ಅಲ್ಲೇ ಅವರೂ ಮಲಗುತ್ತಾರೆ.

ಟೀಕೆಗಳ ವಿಷಯದಲ್ಲಿ ಅವರು ಈ ಮೊದಲೇ ಹೇಳಿದಂತೆ ಕಿವಿ ತೆರೆದೇ ಇಟ್ಟುಕೊಂಡಿರುತ್ತಾರೆ. ಟೀಕೆ ರಚನಾತ್ಮಕವಾಗಿದ್ದರೆ ಸ್ವೀಕರಿಸುತ್ತಾರೆ, ಇಲ್ಲವಾದಲ್ಲಿ ಕಸದ ಬುಟ್ಟಿಗೆ ಎಸೆಯುತ್ತಾರೆ.

ಬಹಳ ಜನರಿಗೆ ಗೊತ್ತಿಲ್ಲದ ವಿಚಾರವೆಂದರೆ ನಾರಾಯಣಗೌಡರಿಗೆ ಸೆನ್ಸ್ ಆಫ್ ಹ್ಯೂಮರ್ ಇದೆ. ಎಷ್ಟಿದೆಯೆಂದರೆ ಅವರ ಜತೆ ಇರುವವರಿಗೆ ಕಾಲ ಕಳೆದಿದ್ದೇ ಗೊತ್ತಾಗುವುದಿಲ್ಲ. ತಮ್ಮ ಅನುಭವದ ಕಥೆಗಳನ್ನೇ ಅವರು ಹೇಳುತ್ತ ಸುತ್ತಲಿರುವವರನ್ನು ನಗಿಸುತ್ತ ಇರುತ್ತಾರೆ. ತಾವೂ ಮನಬಿಚ್ಚಿ ನಗುತ್ತಾರೆ, ಜತೆಗಿರುವವರಿಗೂ ಆ ನಗುವನ್ನು ಹಂಚುತ್ತಾರೆ.

*******

ಇತ್ತೀಚಿಗೆ ತಾನೇ ಕರ್ನಾಟಕ ರಕ್ಷಣಾ ವೇದಿಕೆಯ ಔಷಧಿ ಅಂಗಡಿ ವ್ಯಾಪಾರಿಗಳ ಘಟಕವನ್ನು ಗೌಡರೇ ಉದ್ಘಾಟಿಸಿದರು. ಈ ತರಹದ ಘಟಕಗಳು ಸಾಕಷ್ಟಿವೆ. ನೇಕಾರರ ಘಟಕ, ಚಿನ್ನ ಬೆಳ್ಳಿ ವರ್ತಕರ ಘಟಕ, ಕಾರ್ಮಿಕ ಘಟಕ, ಗಾರ್ಮೆಂಟ್ಸ್ ಘಟಕ, ಆಟೋ ಚಾಲಕರ ಘಟಕ, ಟ್ಯಾಕ್ಸಿ ಚಾಲಕರ ಘಟಕ, ವಕೀಲರ ಘಟಕ, ಉದ್ದಿಮೆದಾರರ ಘಟಕ, ಹಣ್ಣು ಹೂವು ಮಾರಾಟಗಾರರ ಘಟಕ, ಬೀದಿ ಬದಿ ವ್ಯಾಪಾರಿಗಳ ಘಟಕ ಹೀಗೆ ಹಲವು ಘಟಕಗಳಿವೆ. ಮಾರ್‍ವಾಡಿಗಳ ಕಾಟದಿಂದ ಕುಲಕಸುಬುಗಳನ್ನು ನೆಚ್ಚಿಕೊಂಡ ಬಹುತೇಕ ಕನ್ನಡಿಗರು, ಈಗ ಬೀದಿಗೆ ಬಿದ್ದಿದ್ದಾರೆ, ಮಾರ್‍ವಾಡಿಗಳಿಗೆ ತಮ್ಮೆಲ್ಲ ಆಸ್ತಿ ಅಡವು ಮಾಡಿ ಅವರ ಬಳಿಯೇ ಈಗ ಕೂಲಿ ಮಾಡಿಕೊಂಡಿರಬೇಕಾದ ದಾರುಣ ಸ್ಥಿತಿಗೆ ತಲುಪಿದ್ದಾರೆ.

ಕರವೇ ಈಗ ಇಂಥ ಕುಲಕಸುಬು ನೆಚ್ಚಿಕೊಂಡವರಿಗೆಲ್ಲ ಆಧಾರವಾಗಿ ನಿಂತಿದೆ. ಹೀಗಾಗಿ ಎಲ್ಲರೂ ರಕ್ಷಣಾ ವೇದಿಕೆಯ ಅಡಿಯಲ್ಲಿ ಸಂಘಟಿತರಾಗಿ ತಮ್ಮ ವಿರುದ್ಧದ ದಾಳಿಯ ವಿರುದ್ಧ ಹೋರಾಡುತ್ತಿದ್ದಾರೆ.

ನೇಕಾರರ ಘಟಕದ ಉದ್ಘಾಟನೆ ಸಂದರ್ಭದಲ್ಲಿ ನಾನೂ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಆ ಸಂದರ್ಭದಲ್ಲಿ ಆ ಯುವಕರ ಆವೇಶವನ್ನು ನೋಡಿ ಅವರ ಕಣ್ಣಲ್ಲಿ ಎಷ್ಟೊ ವರ್ಷಗಳ ಆಕ್ರೋಶ, ಸಂಕಟದ ಬೆಂಕಿಯನ್ನು ಗುರುತಿಸಿದ್ದೆ. ನಾನು ಮಾತನಾಡುವಾಗ ಅದನ್ನೇ ಹೇಳಿದ್ದೆ. ನಿಮ್ಮ ಕಣ್ಣೊಳಗಿನ ಬೆಂಕಿ ನಿಮ್ಮ ಜೀವನವನ್ನು ಬೆಳಗಿಸುವ ದೀಪವಾಗಲಿ ಎಂದು ಹೇಳಿದ್ದೆ.

ಬೇರೆಯವರಿಗೆ ನೀವು ತೊಂದರೆ ಕೊಡಬೇಡಿ. ಆದರೆ ನಿಮ್ಮ ಅನ್ನಕ್ಕೆ ಕುತ್ತು ಬಂದರೆ, ನಿಮ್ಮ ಮೇಲೆ ಯಾವುದೇ ಸ್ವರೂಪದ ದಾಳಿ ನಡೆದರೂ ನೀವು ಎದೆಗುಂದಬೇಡಿ. ವೇದಿಕೆಯ ಲಕ್ಷಾಂತರ ಕಾರ್ಯಕರ್ತರು ನಿಮ್ಮ ಜತೆಗಿರುತ್ತಾರೆ. ಎಂಥ ಸವಾಲನ್ನೇ ಆಗಲಿ ಎದುರಿಸಲು ನಾವು ಸದಾ ಸಜ್ಜಾಗಿದ್ದೇವೆ, ಎದೆಗುಂದಬೇಡಿ ಎಂದಿದ್ದರು ನಾರಾಯಣಗೌಡರು.

ಈ ಕೆಲಸವನ್ನು ಇಷ್ಟು ವರ್ಷಗಳ ಸ್ವಾತಂತ್ರ್ಯೋತ್ತರ ಇತಿಹಾಸದಲ್ಲಿ ಯಾರು ಮಾಡಿದ್ದರು? ಯಾವ ರಾಜಕಾರಣಿ ಹೀಗೆ ಮಾತನಾಡಲು ಸಾಧ್ಯ? ಪಾಪ, ರಾಜಕಾರಣಿಗಳಿಗೆ ಮಾರ್‍ವಾಡಿಗಳ ವೋಟೂ ಬೇಕಲ್ಲವೆ? ಅವರೇಕೆ ಹೀಗೆಲ್ಲ ಮಾತನಾಡುತ್ತಾರೆ?

*******

ಕನ್ನಡದ ಎಲ್ಲ ಚಳವಳಿಗಳೂ ಹಳೇ ಮೈಸೂರು ಕೇಂದ್ರಿತವಾಗಿದ್ದಾಗ ಕರವೇ ಅದನ್ನು ಇಡೀ ರಾಜ್ಯಕ್ಕೆ ವ್ಯಾಪಿಸುವಂತೆ ಮಾಡಿತು. ಕೃಷ್ಣಾ ಹೋರಾಟ, ಕಳಸಾ ಬಂಡೂರಿ ಹೋರಾಟ, ಬೆಳಗಾವಿ ಹೋರಾಟ, ಕಾರವಾರ ಹೋರಾಟ, ಬಾಗೇಪಲ್ಲಿ ಚಿತ್ರಾವತಿ ಅಣೆಕಟ್ಟು ಹೋರಾಟ... ಹೀಗೆ ಚಳವಳಿಯ ನೆಲೆಯನ್ನು ವಿಸ್ತರಿಸುತ್ತ ಹೋಗಿದ್ದು ಕರವೇ.

ಮಹದಾಯಿ ನದಿ ಹೋರಾಟದ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಕರವೇ ಆಯೋಜಿಸಿದ್ದ ಬೃಹತ್ ಸಭೆಯೊಂದರಲ್ಲಿ ನಾನೂ ಭಾಗವಹಿಸಿದ್ದೆ. ಆ ಸಂದರ್ಭದಲ್ಲಿ ನಾಡೋಜ ಪಾಟೀಲ ಪುಟ್ಟಪ್ಪನವರೂ ಇದ್ದರು. ಬೆಂಗಳೂರು ಮೂಲದ ಸಂಘಟನೆಯೊಂದು ಹೀಗೆ ಉತ್ತರಕರ್ನಾಟಕದಲ್ಲಿ ಹೋರಾಟದ ರಣಕಹಳೆ ಮೊಳಗಿಸಿದ್ದಕ್ಕೆ ಪಾಪು ಅಚ್ಚರಿಗೊಂಡಿದ್ದರು.

ಕಾವೇರಿ ನದಿವಿವಾದ ಭುಗಿಲೆದ್ದಾಗೆಲ್ಲ ಕರ್ನಾಟಕ ಬಂದ್ ಕರೆ ನೀಡುವುದು ಸಂಪ್ರದಾಯ. ಹಿಂದೆಲ್ಲ ಹೀಗೆ ಬಂದ್ ಕರೆ ನೀಡಿದಾಗ ಉತ್ತರ ಕರ್ನಾಟಕದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ನಮ್ಮ ಭಾಗದ ಸಮಸ್ಯೆ ಬಂದಾಗ ಯಾರೂ ಇತ್ತ ತಿರುಗಿ ನೋಡುವುದಿಲ್ಲ. ಈಗ ರಾಜ್ಯ ಬಂದ್ ಕರೆ ಕೊಟ್ಟರೆ ನಾವೇಕೆ ಬಂದ್ ಮಾಡಬೇಕು ಎಂದು ಉತ್ತರ ಕರ್ನಾಟಕ ಭಾಗದ ಜನರು ಹೇಳುತ್ತಿದ್ದರು.

ಆದರೆ ಕಾವೇರಿ ನ್ಯಾಯ ಮಂಡಳಿಯ ಅಂತಿಮ ತೀರ್ಪಿನ ವಿರುದ್ಧ ನಡೆದ ರಾಜ್ಯ ಬಂದ್ ಉತ್ತರಕರ್ನಾಟಕದಲ್ಲೂ ಯಶಸ್ವಿಯಾಯಿತು. ಹಳೆ ಮೈಸೂರು ಭಾಗದವರು ನಮ್ಮ ಸಮಸ್ಯೆಗಳಿಗೂ ಕಿವಿಗೊಡುತ್ತಿದ್ದಾರೆ ಎಂಬ ಭಾವನೆ ಮೂಡಿದ್ದರಿಂದಲೇ ಇದು ಸಾಧ್ಯವಾಯಿತು.

ಮೊನ್ನೆ ಶಾಸ್ತ್ರೀಯ ಭಾಷೆಯ ಹೋರಾಟ ಯಶಸ್ವಿಯಾದ ಮೇಲೆ ಗೌಡರು ಹೇಳುತ್ತಿದ್ದರು: ನಮ್ಮ ಮುಂದಿನ ಹೋರಾಟ ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂಬಂಧ ಸಂವಿಧಾನ ತಿದ್ದುಪಡಿಗಾಗಿ ಹಾಗು ಮಹದಾಯಿ ಅನ್ಯಾಯದ ವಿರುದ್ಧ.

*******

ಇಷ್ಟೆಲ್ಲ ಹೇಳಿದ ಮೇಲೆ ನಾರಾಯಣಗೌಡರಿಗೆ, ಕರವೇಗೆ ದೌರ್ಬಲ್ಯಗಳೇ ಇಲ್ಲವೆ ಎಂದು ನೀವು ಕೇಳಬಹುದು. ನಿಜ ದೌರ್ಬಲ್ಯಗಳಿಲ್ಲದ ಸಂಘಟನೆಗಳಿಲ್ಲ, ವ್ಯಕ್ತಿಗಳಿಲ್ಲ. ಗೌಡರು, ಕರವೇ ಸಹ ಇದಕ್ಕೆ ಹೊರತಲ್ಲ.

ನಾನು ಗೌಡರನ್ನು ಕಂಡಿದ್ದು ಜಾಣಗೆರೆ ವೆಂಕಟರಾಮಯ್ಯನವರು ಕರುನಾಡ ಸಂಜೆ ಪತ್ರಿಕೆಯನ್ನು ನಡೆಸುತ್ತಿದ್ದ ಸಮಯದಲ್ಲಿ. ಜಾಣಗೆರೆಯವರ ಜಾಣಗೆರೆ ಪತ್ರಿಕೆಗೆ ನಾನು ಕೆಲವು ವಾರ ಬರೆದಿದ್ದರಿಂದಾಗಿ ಅವರ ಪರಿಚಯವಿತ್ತು. ಅವರನ್ನು ಕಾಣಲು ಹೋದಾಗಲೆಲ್ಲ ಗೌಡರನ್ನು ನೋಡುತ್ತಿದ್ದೆ. ಇಬ್ಬರೂ ಪರಸ್ಪರ ನಮಸ್ಕಾರ ಹೇಳಿಕೊಳ್ಳುತ್ತಿದ್ದೆವು, ಮಾತನಾಡುತ್ತಿರಲಿಲ್ಲ. ನಂತರ ಸ್ವಲ್ಪ ಕಾಲದ ನಂತರ ಕರುನಾಡ ಸಂಜೆಯನ್ನು ಜಾಣಗೆರೆಯವರು ಗುರುಟೀಕ್‌ನ ಗಂಗಾಧರ್ ಅವರಿಗೆ ಕೊಟ್ಟರು. ನಾನು ಕರುನಾಡ ಸಂಜೆಯ ಸುದ್ದಿ ಸಂಪಾದಕನಾಗಿ ಸೇರ್ಪಡೆಗೊಂಡೆ. ಜಾಣಗೆರೆಯವರಿಂದ ಬೇರೆಯಾದ ನಂತರ ಗೌಡರು ಆಗಾಗ ಕರುನಾಡ ಸಂಜೆಗೆ ಬರುತ್ತಿದ್ದರು. ನಂತರ ಸತತವಾಗಿ ಅವರೊಂದಿಗೆ ಒಡನಾಡಿದ್ದೇನೆ.

ಕಾವೇರಿ ಹೋರಾಟದ ಸಂದರ್ಭದಲ್ಲಿ ಸಾವಿರಾರು ಕನ್ನಡ ಕಾರ್ಯಕರ್ತರು, ರೈತರನ್ನು ದೆಹಲಿಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಅವರ ಸಂಘಟನಾಶಕ್ತಿ ಕಂಡು ಆಶ್ಚರ್ಯಪಟ್ಟವರಲ್ಲಿ ನಾನೂ ಒಬ್ಬ.

ಸಾಕಷ್ಟು ವಿಷಯಗಳನ್ನು ನಾನು ಅವರೊಂದಿಗೆ ಹಂಚಿಕೊಂಡಿದ್ದಿದೆ. ಯಾವುದೋ ಒಂದು ಚರ್ಚ್ ಗಲಾಟೆಯಲ್ಲಿ ಕರವೇ ಹುಡುಗರು ಭಾಗವಹಿಸಿದ್ದಾಗ ಅವರೊಂದಿಗೆ ನೇರವಾಗಿ ಅಸಮಾಧಾನ ತೋರ್ಪಡಿಸಿಕೊಂಡಿದ್ದೂ ಇದೆ. ನನಗೆ ಸರಿಯೆನಿಸಿದ್ದನ್ನು ಅವರಿಗೆ ಹೇಳಿದ್ದೇನೆ, ಸರಿ ಕಾಣದ್ದನ್ನೂ ಅಷ್ಟೆ ನಿರ್ಭಿಡೆಯಿಂದ ಹೇಳಿದ್ದೇನೆ. ಅಷ್ಟು ಮುಕ್ತ ಅವಕಾಶವನ್ನು ನನಗೆ, ನನ್ನಂಥವರಿಗೆ ಕೊಟ್ಟಿದ್ದಾರೆ. ವಿಶೇಷವೆಂದರೆ ಗೌಡರ ಜತೆ ಯಾರು ಬೇಕಾದರೂ ಅರ್ಥಪೂರ್ಣ ಸಂವಾದ ನಡೆಸಬಹುದು.

ಒಂದೊಂದು ಬಾರಿ ಎಲ್ಲರೊಂದಿಗೆ ಎಲ್ಲ ವಿಷಯವನ್ನು ಮಾತನಾಡಿ ಗೌಡರು ಯಡವಟ್ಟು ಮಾಡಿಕೊಳ್ಳುವುದುಂಟು. ಎದುರಿಗೆ ಕುಳಿತವರನ್ನು ಬಹುಬೇಗ ನಂಬುವುದರಿಂದ ಹೀಗೆ ಮಾತನಾಡಿ ಸಮಸ್ಯೆಗಳನ್ನು ಎದುರಿಸುವುದುಂಟು. ಇಂಥ ದೌರ್ಬಲ್ಯಗಳಿದ್ದರೂ ಗೌಡರು ಅದನ್ನು ಮೀರಲು ಯತ್ನಿಸುವುದನ್ನೂ ನಾನು ಗಮನಿಸಿದ್ದೇನೆ. ಇದು ಉತ್ತಮ ನಾಯಕನ ಲಕ್ಷಣ ಎಂದಷ್ಟೇ ಹೇಳಬಲ್ಲೆ.

*******

ಮಹಾರಾಷ್ಟ್ರದಲ್ಲಿನ ಹೋರಾಟಕ್ಕೂ ಕರ್ನಾಟಕದ ಚಳವಳಿಗಳಿಗೂ ಕೆಲ ಸಾಮ್ಯತೆಗಳಿವೆ, ನಿಜ. ಆದರೆ ಎರಡನ್ನೂ ಒಂದೇ ಎಂದು ಹೇಳಲು ಸಾಧ್ಯವಾಗದು. ಮಹಾರಾಷ್ಟ್ರದಲ್ಲಿ ಈಗ ನಡೆಯುತ್ತಿರುವ ಮರಾಠಿ ಅಸ್ಮಿತೆಯ ಚಳವಳಿ ಎತ್ತಿರುವ ಪ್ರಶ್ನೆಗಳು ಗಂಭೀರವಾಗಿವೆ. ಆದರೆ ಚಳವಳಿಗೆ ತೊಡಗಿರುವವರು ರಾಜಕಾರಣಿಗಳು. ಮರಾಠಿಗರನ್ನು ಭಾವನಾತ್ಮಕವಾಗಿ ಕೆರಳಿಸಿ ರಾಜಕೀಯ ಲಾಭ ಗಳಿಸಲು ಎಂಎನ್‌ಎಸ್ ಹಾಗು ಶಿವಸೇನೆ ಪ್ರಯತ್ನಿಸುತ್ತಿವೆ. ಈ ಎರಡು ರಾಜಕೀಯ ಪಕ್ಷಗಳ ನಡುವೆ ಜಗಳ ಹಚ್ಚಿ ಅದರ ಲಾಭ ಪಡೆಯಲು ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷಗಳು ತುದಿಗಾಲಲ್ಲಿ ನಿಂತಿವೆ. ರಾಜ್ ಠಾಕ್ರೆಯನ್ನು ಬೆಳೆಯಲು ಬಿಡುವ ಮೂಲಕ ಶಿವಸೇನೆಯನ್ನು ನಾಶ ಮಾಡಲು ಕಾಂಗ್ರೆಸ್ ಯತ್ನಿಸುತ್ತಿರುವುದು ಸ್ಪಷ್ಟ.

ಆದರೆ ಕರ್ನಾಟಕದ ಪರಿಸ್ಥಿತಿಯೇ ಬೇರೆ. ಇಲ್ಲಿ ಯಾವ ರಾಜಕೀಯ ಪಕ್ಷವೂ ಭಾಷಾ ಚಳವಳಿಯನ್ನು ಕೈಗೆತ್ತಿಕೊಂಡಿಲ್ಲ. ಭಾಷಾ ಚಳವಳಿಯ ನೇತೃತ್ವ ವಹಿಸಿರುವ ಕರವೇ ಮತ್ತಿತರ ಸಂಘಟನೆಗಳು ಎಂಎನ್‌ಎಸ್ ಮಾದರಿಯಲ್ಲಿ ದುಂಡಾವರ್ತಿಯನ್ನೇನು ನಡೆಸುತ್ತಿಲ್ಲ. ನಾನು ಮೊದಲೇ ಉಲ್ಲೇಖಿಸಿದಂತೆ ಕರವೇ ಕಾರ್ಯಕರ್ತರು ತಮ್ಮನ್ನು ತಾವು ಘಾಸಿ ಮಾಡಿಕೊಂಡು ಹೋರಾಟ ನಡೆಸುತ್ತಿದ್ದಾರೆ.

ಹೀಗಿರುವಾಗ ಕರ್ನಾಟಕದಲ್ಲೊಬ್ಬ ರಾಜ್ ಠಾಕ್ರೆ ಹುಟ್ಟಿಕೊಳ್ಳಲಿ ಎಂದು ಹೇಳುವುದೇ ಮೂರ್ಖತನ. ನಾರಾಯಣಗೌಡರು ರಾಜ್ ಠಾಕ್ರೆಯಾಗಲಿ ಎಂದು ಬಯಸುವುದರ ಹಿಂದೆಯೇ ನನಗೆ ಹಲವು ಬಗೆಯ ಅನುಮಾನಗಳಿವೆ. ಬಹುಶಃ ಕರವೇಯನ್ನು, ನಾರಾಯಣಗೌಡರನ್ನು ಬಲಿಪಶು ಮಾಡುವ ಉದ್ದೇಶವಿದ್ದರೂ ಆಶ್ಚರ್ಯವೇನಿಲ್ಲ.

ನಿಜವಾಗಿಯೂ ಮಹಾರಾಷ್ಟ್ರದ ಚಳವಳಿಯನ್ನು ಒಬ್ಬ ರಾಜಕೀಯೇತರ ವ್ಯಕ್ತಿ ಮುನ್ನಡೆಸುವ ಅಗತ್ಯವಿದೆ. ಈ ಹೋರಾಟ ಆದಷ್ಟು ಪ್ರಜಾಸತ್ತಾತ್ಮಕವಾಗಿ, ಇತರ ಭಾಷಿಗರ ಮೇಲಿನ ಹಲ್ಲೆ-ಕೊಲೆಗಳಿಂದ ಮುಕ್ತವಾಗಿ, ಮರಾಠಿಗರ ಸ್ವಾಭಿಮಾನದ ಅಭಿವ್ಯಕ್ತಿಯಾಗಿ ಮೂಡಿಬರಬೇಕಿದೆ.. ಹೀಗಾಗಿ ರಾಜ್ ಠಾಕ್ರೆಯೇ ನಾರಾಯಣಗೌಡರಾಗುವ ಅಗತ್ಯವಿದೆಯೇ ಹೊರತು ಗೌಡರು ರಾಜ್ ಠಾಕ್ರೆಯಾಗಬೇಕಿಲ್ಲ.

ಹಾಗಾಗಲಾರರು ಎಂಬ ನಂಬಿಕೆಯೂ ನನಗಿದೆ. ಒಂದೊಮ್ಮೆ ಗೌಡರು ನಾಳೆ ರಾಜಕಾರಣಕ್ಕೆ ಇಳಿದರೂ ಅವರು ರಾಜ್ ಠಾಕ್ರೆಯಾಗಲಾರರು. ಕನ್ನಡಿಗರು ಹೊಸಹೊಸ ಮಾದರಿಗಳನ್ನು ಜಗತ್ತಿಗೆ ನೀಡಿದವರು. ನಾವು ಬೇರೆಯವರ ಮಾದರಿಗಳನ್ನು, ಅದರಲ್ಲೂ ಕೆಟ್ಟ ಮಾದರಿಗಳನ್ನು ಎರವಲು ಪಡೆಯಬೇಕಾಗಿಲ್ಲ. ಇದನ್ನು ಮತ್ತೆಮತ್ತೆ ಸ್ಪಷ್ಟಪಡಿಸುತ್ತ ವಿರಮಿಸುತ್ತೇನೆ.

*******

ನಾನು ಇಲ್ಲಿ ಏನನ್ನು ಬರೆದಿದ್ದೇನೋ ಅದು ಎಲ್ಲೋ ಕೇಳಿದ, ಯಾರೋ ಹೇಳಿದ, ಇನ್ನ್ಯಾರೋ ಬರೆದಿಟ್ಟ ವಿಷಯಗಳೇನಲ್ಲ. ನಾನು ಸ್ವತಃ ಕಣ್ಣಾರೆ ಕಂಡಿದ್ದನ್ನೇ ಬರೆದಿದ್ದೇನೆ.

ಈ ಕುರಿತು ಚರ್ಚೆಗೆ ನಾನಂತೂ ಸಿದ್ಧ. ಪೂರ್ವಾಗ್ರಹಪೀಡಿತರಲ್ಲದ ಯಾರು ಬೇಕಾದರೂ ನನ್ನೊಂದಿಗೆ ಚರ್ಚೆ ನಡೆಸಬಹುದು. ನೇರವಾಗಿಯೂ ನನ್ನನ್ನು ಕಂಡು ಚರ್ಚಿಸಬಹುದು. ಚರ್ಚಿಸುವವರು ಅಂತೆಕಂತೆಗಳನ್ನು ಬಿಟ್ಟು ಮಾತನಾಡಿ ಎಂಬುದು ನನ್ನ ಅರಿಕೆ. ಒಂದು ಸಮರ್ಥ ಶಕ್ತಿಶಾಲಿ ಸಂಘಟನೆಯನ್ನು ದಾರಿತಪ್ಪದಂತೆ, ಜನಪರವಾಗಿಯೇ ಇರುವಂತೆ ನೋಡಿಕೊಳ್ಳುವ ಬದಲು ಅಸಹನೆಯಿಂದ ಟೀಕಿಸುತ್ತಲೇ ಇರುವುದು ಪ್ರಜ್ಞಾವಂತರಿಗೆ ಸಾಧುವಲ್ಲ ಎಂಬುದು ನನ್ನ ಅಭಿಮತ.

ಕುಚೋದ್ಯವಿಲ್ಲದ ಅಭಿಪ್ರಾಯಗಳಿಗೆ ಸ್ವಾಗತ.

Sunday, October 19, 2008

ಮುಸ್ಲಿಂ ರಾಜಕಾರಣದಲ್ಲಿ ಒಂದು ಸುತ್ತು.....


ಮೆರಾಜುದ್ದೀನ್ ಪಟೇಲರು ಈಗ ಬರೀ ನೆನಪು. ಅವರು ನಿಜವಾದ ಅರ್ಥದಲ್ಲಿ ಸರಳ, ಸಜ್ಜನಿಕೆಯ ರಾಜಕಾರಣಿ. ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ಅವರಿಗೆ ಬಯಸದೇ ಬಂದ ಪಟ್ಟ. ಜನತಾದಳದೊಂದಿಗಿನ ಹಾಗು ದೇವೇಗೌಡರ ಕುಟುಂಬದೊಂದಿಗಿನ ನಿಷ್ಠೆ ಅವರನ್ನು ಆ ಗಾದಿಗೆ ತಂದಿತ್ತು. ಆದರೆ ಜೆಡಿಎಸ್‌ನಲ್ಲಿ ದೇವೇಗೌಡರ ಕುಟುಂಬದ ಬಿಗಿಹಿಡಿತದಿಂದಾಗಿ ಯಾರು ಯಾವ ಪಟ್ಟ ಅಲಂಕರಿಸಿದರೂ, ಅವರು ಗೌಡರ ಆಣತಿಯಂತೇ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇರುವುದರಿಂದ ಮೆರಾಜುದ್ದೀನ್ ಅಂಥವರು ಅಲಂಕಾರದ ಬೊಂಬೆಯಾಗುವ ಅಪಾಯ ತಪ್ಪಿದ್ದಲ್ಲ. ಇದೆಲ್ಲ ಗೊತ್ತಿದ್ದೂ ಮೆರಾಜುದ್ದೀನ್ ಉತ್ಸಾಹದಿಂದ ಓಡಾಡಿಕೊಂಡಿದ್ದರು. ಅವರ ನಿರ್ಗಮನ ಆ ಪಕ್ಷವನ್ನಂತೂ ಭಾದಿಸುತ್ತದೆ.

ಮೆರಾಜುದ್ದೀನ್ ಸಕ್ಕರೆ ಕಾರ್ಖಾನೆಯ ಸಮಸ್ಯೆಗಳಿಗೆ ಸಿಲುಕಿ ಕೈ ಸುಟ್ಟುಕೊಂಡಿದ್ದರು. ಮನೆ ತುಂಬ ಹೆಣ್ಣುಮಕ್ಕಳು. ಒಮ್ಮೆ ಹೃದಯಾಘಾತವಾಗಿತ್ತು. ಅವರು ಇನ್ನಷ್ಟು ವರ್ಷ ಬದುಕಿದ್ದರೆ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತಿದ್ದರಾ? ಒಂದೊಮ್ಮೆ ಮುಂದೆ ರಾಜಕೀಯ ಪಲ್ಲಟಗಳಾಗಿ ಜೆಡಿಎಸ್‌ಗೆ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಹುದ್ದೆ ದಕ್ಕಿದ್ದರೆ ಅವರನ್ನು ಗೌಡರು ಮತ್ತವರ ಮಕ್ಕಳು ಆ ಸ್ಥಾನಕ್ಕೆ ನಿಯೋಜಿಸುತ್ತಿದ್ದರಾ? ಉತ್ತರ ಹುಡುಕುವುದು ಬಲು ಕಷ್ಟವೇನಲ್ಲ. ಆ ಬಗ್ಗೆ ಇಲ್ಲಿ ಚರ್ಚೆ ಬೇಡ.

**********

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯುವ ಹೆಸರು ನಜೀರ್ ಸಾಬ್ ಅವರದ್ದು. ಅಸಮಾನ್ಯ ದೂರದೃಷ್ಟಿಯ ಅಪರೂಪದ ನಾಯಕ ಅವರು. ಯಾರಿಗೂ ಬೇಡವಾಗಿದ್ದ ಗ್ರಾಮೀಣಾಭಿವೃದ್ಧಿ ಖಾತೆಯನ್ನು ಕೇಳಿ ಪಡೆದು ಹೆಗಡೆ ಸಂಪುಟದಲ್ಲಿ ನೀರು ಸಾಬ್ ಎಂದೇ ಹೆಸರಾದವರು ಅವರು.

ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಜನರಿಗೆ ನೀರು ಕೊಟ್ಟಿದ್ದು ನಜೀರ್ ಸಾಬ್ ಅವರ ಸಾಧನೆ. ನಜೀರ್ ಹಳ್ಳಿ ಹಳ್ಳಿಗಳಲ್ಲೂ ಬೋರ್‌ವೆಲ್‌ಗಳನ್ನು ಕೊರೆಸಿದರು. ಪಂಚಾಯತ್ ರಾಜ್ ವ್ಯವಸ್ಥೆಯ ಕುರಿತಾಗಿ ಅವರಿಗೆ ಸ್ಪಷ್ಟ ಕಲ್ಪನೆಯಿತ್ತು. ಅಧಿಕಾರ ವಿಕೇಂದ್ರೀರಣದ ಕಲ್ಪನೆಯನ್ನು ಸಾಧ್ಯವಾಗಿಸಿ, ಇಡೀ ದೇಶಕ್ಕೆ ಮಾದರಿಯಾಗಿದ್ದು ಕರ್ನಾಟಕ. ನಜೀರ್ ಸಾಬ್ ಅವರಂಥವರಿಂದಲೇ ಇದೆಲ್ಲವೂ ಸಾಧ್ಯವಾಗಿದ್ದು.

ಆದರೆ ಮುಸ್ಲಿಂ ಸಮುದಾಯ ನಜೀರ್ ಸಾಬ್‌ರನ್ನು ತಮ್ಮ ನಾಯಕ ಎಂದು ಒಪ್ಪಿಕೊಂಡಿತ್ತೆ? ಈ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟ. ಯಾರು ಮುಸ್ಲಿಂ ಸಮುದಾಯದೊಳಗೆ ನಾಯಕರಾಗಿ ರೂಪುಗೊಳ್ಳುತ್ತಾರೋ ಅವರು ಇಡೀ ಸಮಾಜದ ನಾಯಕರಾಗಿ ಹೊರಹೊಮ್ಮಿದ ಉದಾಹರಣೆಗಳು ಬಹಳ ಕಡಿಮೆ. ಇಡೀ ಸಮಾಜದ ಮುಖಂಡರಾಗಿ ರೂಪುಗೊಂಡ ಮುಸ್ಲಿಂ ರಾಜಕಾರಣಿಯನ್ನು ಮುಸ್ಲಿಂ ಸಮುದಾಯ ಒಪ್ಪಿಕೊಳ್ಳುವುದು ಕಷ್ಟ.

ಇವತ್ತಿಗೂ ಮುಸ್ಲಿಂ ಸಮುದಾಯದ ನಾಯಕತ್ವ ಇರುವುದು ಆ ಸಮುದಾಯದ ರಾಜಕಾರಣಿಗಳ ಬಳಿಯಲ್ಲ. ಮೌಲ್ವಿಗಳೇ ಆ ಸಮುದಾಯದ ನಾಯಕರು. ರಾಜಕೀಯ ಮುಖಂಡರ ಭವಿಷ್ಯವನ್ನು ನಿರ್ಧರಿಸುವ, ಬದಲಿಸುವ ಶಕ್ತಿಯೂ ಇವರಿಗಿದೆ. ಧರ್ಮದ ಕಟ್ಟುಪಾಡುಗಳನ್ನು ಮೀರಿ ಒಬ್ಬ ಮುಸ್ಲಿಂ ರಾಜಕಾರಣಿ ಬೆಳೆದ ಉದಾಹರಣೆಗಳು ಕಡಿಮೆ.

*******



ಜಾಫರ್ ಷರೀಫ್ ಈಗ ಹಣ್ಣಾಗಿದ್ದಾರೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಅವರು ಎಚ್.ಟಿ.ಸಾಂಗ್ಲಿಯಾನ ಎದುರು ಸೋಲು ಅನುಭವಿಸಿದರು. ಪರೋಕ್ಷವಾಗಿ ಷರೀಫರನ್ನು ಸೋಲಿಸಿದವರು ಸಿ.ಎಂ.ಇಬ್ರಾಹಿಂ ಎಂಬ ಮತ್ತೊಬ್ಬ ಮುಸ್ಲಿಂ ಮುಖಂಡ. ಇಬ್ರಾಹಿಂ ಸ್ಪರ್ಧೆಯಲ್ಲಿ ಇರದೇ ಹೋಗಿದ್ದರೆ ಷರೀಫ್ ಗೆಲ್ಲುತ್ತಿದ್ದರೇನೋ?

ಒಂದೊಮ್ಮೆ ಷರೀಫರು ಗೆದ್ದಿದ್ದರೆ ಕೇಂದ್ರದ ಯುಪಿಎ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗುವ ಅವಕಾಶಗಳಿದ್ದವು. ಸೋಲಿನಿಂದಾಗಿ ನಷ್ಟ ಅನುಭವಿಸಿದ್ದು ಕರ್ನಾಟಕ ರಾಜ್ಯ. ಯಾಕೆಂದರೆ ಕಾಂಗ್ರೆಸ್‌ನಿಂದ ಗೆದ್ದವರ ಪೈಕಿ ಯುಪಿಎ ಸರ್ಕಾರಕ್ಕೆ ಕರ್ನಾಟಕದಿಂದ ಸಂಪುಟ ದರ್ಜೆ ಸಚಿವರಾಗುವ ಯೋಗ್ಯತೆಯ ಒಬ್ಬ ಮನುಷ್ಯನೂ ಕಾಣಿಸಲಿಲ್ಲ!

ಷರೀಫ್ ಕೇಂದ್ರ ರೈಲ್ವೆ ಸಚಿವರಾಗಿದ್ದಾಗಲೇ ಕರ್ನಾಟಕ ರೈಲ್ವೆ ಅಲ್ಪಸ್ವಲ್ಪ ಉದ್ಧಾರವಾಗಿದ್ದು. ಕನ್ನಡಿಗರಿಗೆ ರೈಲ್ವೆಯಲ್ಲಿ ಉದ್ಯೋಗ ದೊರೆತಿದ್ದು. ಜಾಫರ್ ಷರೀಫ್ ಹಟ ಹಿಡಿದು ಬೆಂಗಳೂರಿಗೆ ಅಚ್ಚು ಮತ್ತು ಗಾಲಿ ಕಾರ್ಖಾನೆ ತಂದರು. ಅಲ್ಲೂ ಸಹ ಕನ್ನಡಿಗರಿಗೆ ತಕ್ಕಮಟ್ಟಿಗೆ ಉದ್ಯೋಗ ದೊರೆಯಿತು. ಇತರೆ ರಾಜ್ಯಗಳವರ ಕಿರಿಕಿರಿ, ಆರೋಪಗಳನ್ನೆಲ್ಲ ಸಮರ್ಥವಾಗಿ ಎದುರಿಸುತ್ತಲೇ ಷರೀಫ್ ಕರ್ನಾಟಕಕ್ಕೆ ಏನೇನು ಮಾಡಲು ಸಾಧ್ಯವಿತ್ತೋ ಎಲ್ಲವನ್ನೂ ಮಾಡಿದರು.

ಷರೀಫ್ ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವವರು. ಹಾಗೆಯೇ ಮಾಡುವವರು. ಕಾಂಗ್ರೆಸ್ ಪಕ್ಷದಲ್ಲಿ ಷರೀಫ್ ಒಳಬಂಡಾಯಗಾರ. ಅದಕ್ಕಾಗಿ ಅವರು ಕಳೆದುಕೊಂಡಿದ್ದೇ ಹೆಚ್ಚು. ಪಕ್ಷದಲ್ಲಿ ಮೂಲೆಗುಂಪಾದ ಷರೀಫ್ ಒಮ್ಮೆ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಬಿಎಸ್ಪಿ ಸಮಾವೇಶಕ್ಕೆ ಹೋಗಿ ಕುಳಿತಿದ್ದರು. ಮಾಯಾವತಿ ಷರೀಫರನ್ನು ಗುರುತಿಸಿ ಅವರನ್ನು ವೇದಿಕೆಯಲ್ಲೇ ತಮ್ಮ ಪಕ್ಕದಲ್ಲೇ ಕೂರಿಸಿಕೊಂಡಿದ್ದರು. ಈ ಘಟನೆಯಿಂದ ರಾಜ್ಯದ ಕಾಂಗ್ರೆಸ್ ಮುಖಂಡರೆಲ್ಲ ಕಕ್ಕಾಬಿಕ್ಕಿಯಾಗಿದ್ದರು.

ಷರೀಫರ ಮೇಲಿರುವ ಗಂಭೀರ ಆರೋಪವೆಂದರೆ ಅವರು ಎರಡನೇ ಸಾಲಿನ ಮುಸ್ಲಿಂ ಮುಖಂಡರನ್ನು ಬೆಳೆಸದೇ ಹೋದರು ಎಂಬುದು. ಈಗಲೂ ರಾಜ್ಯವ್ಯಾಪಿಯಾಗಿ ಅವರಿಗೆ ತಮ್ಮದೇ ಆದ ಅಭಿಮಾನಿಗಳ, ಅನುಯಾಯಿಗಳ ಬಳಗವಿಲ್ಲ. ಹೊಸ ಮುಖಂಡರನ್ನು ಸಿದ್ಧಪಡಿಸುವಲ್ಲಿ ಅವರು ತೋರಿದ ನಿರ್ಲಕ್ಷ್ಯಕ್ಕೆ ಕಾರಣವೇನು ಎಂಬುದನ್ನು ಅವರೇ ಹೇಳಬೇಕು.

ಷರೀಫರ ಮಕ್ಕಳು ಅವರ ಸ್ಥಾನ ತುಂಬುವ ಯಾವ ಯತ್ನವನ್ನೂ ಮಾಡಲಿಲ್ಲ. ಒಬ್ಬ ಮಗ ತೀರಿಹೋದರು. ಇನ್ನೊಬ್ಬ ಮಗನೂ ರಾಜಕೀಯವಾಗಿ ಬೆಳೆಯಲಿಲ್ಲ. ಇಬ್ಬರೂ ವ್ಯಸನಗಳಿಗೆ ಸಿಕ್ಕು ಅವಕಾಶಗಳನ್ನು ತಪ್ಪಿಸಿಕೊಂಡರು ಎಂದೇ ಅವರ ಸುತ್ತಲಿನ ಜನರು ಹೇಳುತ್ತಾರೆ. ಈಗ ಅವರ ಮೊಮ್ಮಗ ರೆಹಮಾನ್ ಷರೀಫ್ ಅಖಾಡಕ್ಕೆ ಇಳಿದಿದ್ದಾರೆ. ಅವರಿಗಾದರೂ ರಾಜಕೀಯ ದೂರದೃಷ್ಟಿಯಿದೆಯಾ? ಕಾಲವೇ ಹೇಳಬೇಕು.

ಷರೀಫ್ ಅದ್ಭುತವಾಗಿ ಕನ್ನಡ ಮಾತನಾಡುತ್ತಾರೆ. ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪಿನ ವಿರುದ್ಧ ಕರ್ನಾಟಕ ಬಂದ್ ಕರೆ ನೀಡಿದಾಗ, ಬಂದ್ ಯಶಸ್ಸುಗೊಳಿಸಲು ಕನ್ನಡ ಸಂಘಟನೆಗಳು ಎಲ್ಲೆಡೆ ಸಭೆಗಳನ್ನು ನಡೆಸುತ್ತಿದ್ದವು. ಟಿ.ಎ.ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಶಿವಾಜಿನಗರದಲ್ಲಿ ಬಂದ್ ಹಿಂದಿನ ರಾತ್ರಿ ಸಭೆ ನಡೆಸಿತ್ತು. ಷರೀಫರು ಆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ರಾಜಕೀಯ ವ್ಯವಸ್ಥೆ ನೋಡಿ ಜಿಗುಪ್ಸೆ ಬಂದಿದೆ. ಇದೆಲ್ಲವನ್ನು ಗಮನಿಸಿದರೆ ಸುಮ್ಮನೆ ನಾರಾಯಣಗೌಡರ ರಕ್ಷಣಾ ವೇದಿಕೆಯಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಹೋಗುವ ಆಸೆಯಾಗುತ್ತಿದೆ ಎಂದಿದ್ದರು ಅವರು. ಷರೀಷ್ ಅವರ ಮಾತಿನಲ್ಲಿ ಕೃತ್ತಿಮತೆ ಇದ್ದಂತೆ ಕಾಣಲಿಲ್ಲ. ಷರೀಫರು ಸೊಗಸಾಗಿ ಕನ್ನಡ ಮಾತನಾಡುತ್ತಾರೆ. ಹಾಗೆಯೇ ಕನ್ನಡವನ್ನು ಪ್ರೀತಿಸುತ್ತಾರೆ.

ಅದೇ ಸಭೆಯಲ್ಲಿ ಮಾತನಾಡುತ್ತಾ ನಾನು ಹೇಳಿದೆ. ಮುಸ್ಲಿಮರಿಗೆ ಲಾಡೆನ್, ಸದ್ದಾಂ ಆದರ್ಶವಾಗಬಾರದು. ಕನ್ನಡದ ನೆಲದಲ್ಲಿ ಹುಟ್ಟಿದ ಶಿಶುನಾಳ ಷರೀಫ, ಇಮಾಮ್ ಸಾಬ್, ನಜೀರ್ ಸಾಬ್‌ರಂಥವರು ಆದರ್ಶವಾಗಬೇಕು.. ಕನ್ನಡ ನಾಡಿಗೆ ಮುಸ್ಲಿಂ ಸಂತರು, ಕವಿಗಳು, ಸೂಫಿ ಚಿಂತಕರು ನೀಡಿದ ಕೊಡುಗೆ ಅಪಾರ. ತಮಾಶೆಯೆಂದರೆ ಈಗಲೂ ಸಾಮಾನ್ಯ ಮುಸ್ಲಿಮರಲ್ಲಿ ಬಹುತೇಕ ಮಂದಿಗೆ ಸಂತ ಶಿಶುನಾಳ ಷರೀಫರೂ ಗೊತ್ತಿಲ್ಲ, ಜಾನಪದ ಜಂಗಮ ಎಸ್.ಕೆ.ಕರೀಂಖಾನರೂ ಗೊತ್ತಿಲ್ಲ. ಹಾಗಾಗಬಾರದು.

ಷರೀಫ್ ಬಗ್ಗೆ ಪತ್ರಕರ್ತ ಎನ್.ಎ.ಎಂ.ಇಸ್ಮಾಯಿಲ್ ಅವರು ಕೆಂಡಸಂಪಿಗೆಯಲ್ಲಿ ಈ ಹಿಂದೆಯೇ ಬರೆದಿದ್ದಾರೆ. ಜಾಫರ್ ಷರೀಫ್ ತಮಗೆ ಬೇಕಾದಾಗ ಮಾತ್ರ ಮುಸ್ಲಿಂ ಮುಖಂಡ ಎನ್ನುವುದು ಲೇಖನದ ಶೀರ್ಷಿಕೆ. ಷರೀಫ್ ವ್ಯಕ್ತಿತ್ವ ಕುರಿತ ಇನ್ನಷ್ಟು ಚಿತ್ರಣ ಇಲ್ಲಿದೆ.

***********



ನಕ್ಸಲ್ ಮುಖಂಡ ಸಾಕೇತ್ ರಾಜನ್ ಅವರನ್ನು ಧರ್ಮಸಿಂಗ್ ಸರ್ಕಾರವಿದ್ದಾಗ ಪೊಲೀಸರು ಗುಂಡಿಟ್ಟು ಕೊಂದರು. ಆಗ ರೋಷನ್ ಬೇಗ್ ಧರ್ಮಸಿಂಗ್ ಸಂಪುಟದಲ್ಲಿದ್ದರು. ಸಾಕೇತ್ ರಾಜನ್ ಅವರ ಶವವನ್ನು ಸ್ವೀಕರಿಸಲು ಅವರ ತಾಯಿಯೇ ನಿರಾಕರಿಸಿದರು. ಸಾಕೇತ್ ಅವರ ಸ್ನೇಹಿತರು, ಕೆಲ ಮಾವೋವಾದಿ ಚಿಂತನೆಯ ಬುದ್ಧಿಜೀವಿಗಳು ಶವ ಪಡೆಯಲು ಯತ್ನಿಸಿದರಾದರೂ ಪೊಲೀಸರು ಕೊಡಲು ಒಪ್ಪಲಿಲ್ಲ.

ಆಶ್ಚರ್ಯವೆಂದರೆ ರೋಷನ್ ಬೇಗ್ ಅವರು ಇದ್ದಕ್ಕಿದ್ದಂತೆ ತಮಗೆ ಶವ ಕೊಡಲು ಕೇಳಿಕೊಂಡರು. ತಾವೇ ಅಂತ್ಯಸಂಸ್ಕಾರ ಮಾಡುವುದಾಗಿ ಹೇಳಿದರು. ಬೇಗ್ ಹೀಗೇಕೆ ಕೇಳುತ್ತಿದ್ದಾರೆ ಎಂಬ ಆಶ್ಚರ್ಯ ಎಲ್ಲರದಾಗಿತ್ತು.

ಸಾಕೇತ್ ಸಹ ಹೋರಾಟಗಾರ. ಸಮಾಜದ ಒಳಿತಿಗಾಗಿ ಜೀವ ಸವೆಸಿದವರು. ಅವರು ಆಯ್ಕೆ ಮಾಡಿಕೊಂಡ ದಾರಿ ಸರಿಯಲ್ಲದಿರಬಹುದು, ಆದರೆ ಅವರ ಜನಪರ ಕಾಳಜಿಯನ್ನು ಅನುಮಾನಿಸಲು ಸಾಧ್ಯವಿಲ್ಲ. ಹೀಗಾಗಿ ನಾನು ಶವ ಕೇಳಿದೆ ಎಂದು ಬೇಗ್ ತಮ್ಮ ಆಪ್ತರಲ್ಲಿ ಹೇಳಿದ್ದರಂತೆ. ಹೀಗೆ ಒಬ್ಬ ನಕ್ಸಲ್ ನಾಯಕನ ಶವಸಂಸ್ಕಾರ ತಾನೇ ಮಾಡುವುದಾಗಿ ಹೇಳಲು ಬೇಗ್ ಎಂಥ ಗುಂಡಿಗೆ ಹೊಂದಿದ್ದರು ಎಂಬುದನ್ನು ಗಮನಿಸಬೇಕು.

ರೋಷನ್ ಬೇಗ್ ಸ್ವಭಾವವೇ ಹಾಗೆ. ಅವರು ಹಿಂದೂ ಮಿಲಿಟೆಂಟ್‌ಗಳನ್ನು ಎದುರಿಸುವ ಹಾಗೆಯೇ ಮುಸ್ಲಿಂ ಸಂಪ್ರದಾಯವಾದಿಗಳನ್ನೂ ಎದುರಿಸುತ್ತಾರೆ. ಹಾಗಾಗಿ ತಮ್ಮ ಸಮುದಾಯದೊಳಗೂ ಅಸಮಾಧಾನ, ವಿರೋಧಗಳನ್ನು ಎದುರಿಸಿದವರು. ಬೇಗ್ ಶಾಸಕರಾದ ನಂತರ ಶಿವಾಜಿನಗರ ಮತ್ತು ಸುತ್ತಮುತ್ತ ಕೋಮುಗಲಭೆಗಳೆಲ್ಲ ನಿಂತುಹೋಗಿದ್ದು ಕಾಕತಾಳೀಯವೇನೂ ಅಲ್ಲ. ಬೇಗ್ ಅವರ ಶ್ರಮ ಅದಕ್ಕೆ ಕಾರಣ.

ಹಿಂದೊಮ್ಮೆ ಪ್ರವೀಣ್ ತೊಗಾಡಿಯಾ ಹಾಗೆಯೇ ಒಬ್ಬ ಮುಸ್ಲಿಂ ಗುರು ಪ್ರಚೋದನಕಾರಿ ಉಪನ್ಯಾಸ ನೀಡುತ್ತಿದ್ದುದನ್ನು ಗಮನಿಸಿದ ಬೇಗ್ ಕೂಡಲೇ ಆ ಗುರುವನ್ನು ಜಾಗಖಾಲಿ ಮಾಡಿಸಿದರು. ಇದಕ್ಕಾಗಿ ವಿರೋಧ ಎದುರಾದರೂ ಅವರು ಲೆಕ್ಕಿಸಿರಲಿಲ್ಲ.

ಬೇಗ್ ಸುವರ್ಣ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಶಿವಾಜಿನಗರದಲ್ಲಿ ಸಾವಿರಾರು ಮುಸ್ಲಿಮರನ್ನು ಸೇರಿಸಿ ಅಭೂತಪೂರ್ವ ರಾಜ್ಯೋತ್ಸವ ಮಾಡಿ ಸೈ ಎನಿಸಿಕೊಂಡವರು. ಮದರಸಾಗಳಲ್ಲಿ ಕೇವಲ ಧಾರ್ಮಿಕ ಶಿಕ್ಷಣ ಕೊಟ್ಟರೆ ಸಾಲದು, ಟಿವಿ-ಕಂಪ್ಯೂಟರ್‌ಗಳೂ ಅಲ್ಲಿಗೆ ಬರಬೇಕು. ನಮ್ಮ ಮಕ್ಕಳೂ ಆಧುನಿಕ ಶಿಕ್ಷಣ ಪಡೆಯಬೇಕು ಎಂದು ಬೇಗ್ ಹೇಳಿದಾಗಲೂ ಪ್ರತಿರೋಧ ಎದುರಿಸಬೇಕಾಯಿತು. ಆದರೆ ಬೇಗ್ ಕಟ್ಟರ್‌ಧಾರ್ಮಿಕರ ವಿರೋಧ ಎದುರಿಸುತ್ತಲೇ, ಅವರನ್ನು ಮನವೊಲಿಸಿ ಬದಲಾವಣೆಗಳನ್ನು ತರಲು ಯತ್ನಿಸಿದರು. ತಕ್ಕ ಮಟ್ಟಿಗೆ ಯಶಸ್ವಿಯೂ ಆದವರು.

ರೋಷನ್ ಬೇಗ್ ಅವರಿಗೆ ಹಿಂದೂ-ಮುಸ್ಲಿಂ ಸಾಮರಸ್ಯದ ಅಗತ್ಯಗಳು ಚೆನ್ನಾಗಿ ಗೊತ್ತು. ಈ ಸಾಮರಸ್ಯಕ್ಕಾಗಿ ಹೇಗೆ ಹೆಣಗಬೇಕು ಎಂಬುದೂ ಗೊತ್ತು. ವಿರೋಧಗಳನ್ನು ಹೇಗೆ ಸಂಭಾಳಿಸಬೇಕು ಎಂಬುದೂ ಗೊತ್ತು. ಹೀಗಾಗಿ ಎಲ್ಲಾದರೂ ಕೋಮುಗಲಭೆಯ ವಾಸನೆ ಗೊತ್ತಾದರೂ ಅಲ್ಲಿ ಬೇಗ್ ಹಾಜರ್. ಕೆಲಕ್ಷಣಗಳಲ್ಲೇ ಅದನ್ನು ತಿಳಿಗೊಳಿಸುವ ಶಕ್ತಿಯೂ ಅವರಿಗಿರುವುದರಿಂದ ಪೊಲೀಸರೂ ಸಹ ಬೇಗ್ ಬರುವುದನ್ನೇ ಕಾಯುತ್ತಾರೆ.

ಇಂಥ ರೋಷನ್ ಬೇಗ್ ಛಾಪಾ ಕಾಗದ ಹಗರಣದಲ್ಲಿ ಹೆಸರು ಕೆಡಿಸಿಕೊಂಡರು. ಅವರು ಹಗರಣದಲ್ಲಿ ಕ್ಲೀನ್ ಚಿಟ್ ಪಡೆದುಕೊಂಡರೂ ಹಗರಣದಲ್ಲಿ ತಮ್ಮ ಹೆಸರು ಥಳುಕು ಹಾಕಿಕೊಂಡಿದ್ದರಿಂದ ಅನುಭವಿಸಿದ ಕಷ್ಟ-ಕೋಟಲೆಗಳು ನೂರಾರು. ಈಗಲೂ ಆ ಹಗರಣದ ನೆರಳಿನಿಂದ ಹೊರಬರಲು ಬೇಗ್ ಅವರಿಗೆ ಸಂಪೂರ್ಣ ಸಾಧ್ಯವಾಗಿಲ್ಲ.

ಬೇಗ್ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರನ್ನೇ ಎದುರುಹಾಕಿಕೊಂಡವರು. ಈಗಲೂ ಆ ಜಿದ್ದಾಜಿದ್ದಿ ಮುಂದುವರೆದೇ ಇದೆ. ಅವರು ಇಡೀ ರಾಜ್ಯದ ಮುಸ್ಲಿಮರಿಗೆ ನಾಯಕತ್ವ ನೀಡುವ ಮುಖಂಡರಾಗಿ ಹೊರಹೊಮ್ಮುತ್ತಾರಾ? ಕಾದು ನೋಡಬೇಕು.

*******



ಅಹಿಂದ ಮುಖಂಡ ಸಿ.ಎಂ.ಇಬ್ರಾಹಿಂ ಅವರದ್ದು ವರ್ಣರಂಜಿತ ವ್ಯಕ್ತಿತ್ವ. ಗುಂಡೂರಾಯರ ಸರ್ಕಾರದಲ್ಲಿ ಇಬ್ರಾಹಿಂ ಮಿಂಚಿದ್ದೇ ಮಿಂಚಿದ್ದು. ಯಾವಾಗ ಇಡೀ ರಾಜ್ಯದ ಜನ ಗುಂಡೂರಾಯರ ಜನವಿರೋಧಿ ಸರ್ಕಾರದ ವಿರುದ್ಧ ತಿರುಗಿಬಿತ್ತೋ ಇಬ್ರಾಹಿಂ ಆದಿಯಾಗಿ ಎಲ್ಲರೂ ಮನೆ ಸೇರಿದರು. ಆಮೇಲೆ ಇಬ್ರಾಹಿಂ ಸಾಹೇಬರು ಮಾಡಿದ್ದೆಲ್ಲಾ ಹಿಂಬಾಗಿಲ ರಾಜಕಾರಣ.

ಮುಂಬಾಗಿಲ ರಾಜಕಾರಣ ಇಬ್ರಾಹಿಂ ಅವರಿಗೆ ಇಷ್ಟವಿಲ್ಲ ಎಂದೇನಲ್ಲ. ಆದರೆ ೮೦ರ ದಶಕದಿಂದ ಈಚೆಗೆ ಅವರು ನೇರ ಚುನಾವಣೆಗಳಲ್ಲಿ ನಿಂತು ನಿಂತು ಸೋತು ಹೈರಾಣಾಗಿ ಹೋಗಿದ್ದಾರೆ. ಹಾಗೆ ನೋಡಿದರೆ ಅವರು ನಿಜಲಿಂಗಪ್ಪ, ವಿರೇಂದ್ರ ಪಾಟೀಲ್, ಹೆಗಡೆ, ದೇವೇಗೌಡ, ಬೊಮ್ಮಾಯಿ ಹೀಗೆ ಹಲವು ಘಟಾನುಘಟಿಗಳ ಗರಡಿಗಳಲ್ಲಿ ಪಳಗಿದವರು. ಯಾರ ಜತೆಯೂ ಪರ್ಮನೆಂಟ್ ಸ್ನೇಹ, ಪರ್ಮನೆಂಟ್ ದುಷ್ಮನಿ ಉಳಿಸಿಕೊಂಡವರಲ್ಲ.

ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಚಿಟಿಕೆ ಹೊಡೆಯುವಷ್ಟರಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದವನ್ನು ಬಗೆಹರಿಸಿದ ಖ್ಯಾತಿ ಇಬ್ರಾಹಿಂ ಅವರದ್ದು. ಗೌಡರು ಪ್ರಧಾನಿಯಾಗುತ್ತಿದ್ದಂತೆ ಅವರ ಪಂಚೆಯ ಚುಂಗು ಹಿಡಿದು ದಿಲ್ಲಿಗೆ ಹೋದ ಇಬ್ರಾಹಿಂ ಕೇಂದ್ರ ಸಂಪುಟದಲ್ಲಿ ಸಚಿವರಾಗಿ ಫಳಫಳಿಸಿದರು.

ಗೌಡರು ಗಾದಿ ಕಳೆದುಕೊಂಡು ವಾಪಾಸು ಬಂದಮೇಲೆ ಇಬ್ರಾಹಿಂ ಹುಡುಕಿಕೊಂಡ ಹೊಸ ಜತೆಗಾರ ಸಿದ್ಧರಾಮಯ್ಯ. ಅಲ್ಲೇ ಹುಟ್ಟಿಕೊಂಡ ಐಡಿಯಾ ಅಹಿಂದ. ಅಸಾಧ್ಯ ವಾಗ್ಪಟು ಇಬ್ರಾಹಿಂ ಸಾವಿರಸಾವಿರ ಸಂಖ್ಯೆಯ ಪ್ರೇಕ್ಷಕರನ್ನು ನಿಬ್ಬೆರಗಾಗಿಸುವಂತೆ ಮಾತನಾಡಬಲ್ಲರು. ಬಸವಣ್ಣನವರ ವಚನಗಳನ್ನು ಹೇಳುತ್ತಲೇ ಎದುರಾಳಿ ರಾಜಕಾರಣಿಗಳನ್ನು ತಮ್ಮ ಮಾತಿನಲ್ಲೇ ಕುಟ್ಟಿ ಬಿಸಾಡಬಲ್ಲವರು.

ಇಬ್ರಾಹಿ ಜಾತಿ ಸಮೀಕರಣದಲ್ಲಿ ಅತಿ ಹೆಚ್ಚು ನಂಬಿಕೆಯಿಟ್ಟವರು. ದೇವೇಗೌಡರ ಹಾಗೆಯೇ ಎಲ್ಲ ಜಾತಿಗಳ ಹೆಸರುಗಳನ್ನು ಬರೆದು ಕಳೆದು, ಕೂಡಿಸಿ, ಭಾಗಿಸಿ ತಮ್ಮ ಅನುಕೂಲದ ಲೆಕ್ಕಾಚಾರ ಹಾಕುವವರು. ಸಿದ್ಧರಾಮಯ್ಯ ಅವರ ತಲೆಗೂ ಈ ಸಮೀಕರಣವನ್ನು ತುಂಬಿಸಿ ಅವರ ರಾಜಕೀಯ ಜೀವನದ ದಿಕ್ಕನ್ನೇ ಬದಲಾಯಿಸಿದರು ಎಂಬ ಆರೋಪವೂ ಇದೆ.

ಇಂಥ ಇಬ್ರಾಹಿಂ ಸಾಹೇಬರು ಇವತ್ತು ಬೆಂಗಳೂರಿನಲ್ಲಿದ್ದರೆ ನಾಳೆ ಕೇರಳದ ಯಾವುದೋ ಊರಿನಲ್ಲಿರುತ್ತಾರೆ, ನಾಡಿದ್ದು ದಿಲ್ಲಿ, ಮತ್ತೊಂದು ದಿನ ತಮಿಳುನಾಡು. ಅವರ ಹೆಜ್ಜೆ ಜಾಡು ಕಂಡುಹಿಡಿಯುವುದು ಕಷ್ಟ. ಅವರ ಆಸ್ತಿಪಾಸ್ತಿ ಲೆಕ್ಕಾಚಾರವೂ ಅಷ್ಟು ಸುಲಭವಲ್ಲ ಎನ್ನುತ್ತಾರೆ ಬಲ್ಲವರು.

ಇಷ್ಟೆಲ್ಲ ಇದ್ದರೂ ಇಬ್ರಾಹಿಂ ಅವರನ್ನು ೮೦ರ ದಶಕದಿಂದೀಚೆಗೆ ಜನ ತಿರಸ್ಕರಿಸುತ್ತಲೇ ಬರುತ್ತಿದ್ದಾರೆ. ಜನ ತಿರಸ್ಕರಿಸಿದ ನಾಯಕ ಎಷ್ಟೇ ತಂತ್ರ ಮಾಡಿ ರಾಜ್ಯಸಭೆ, ವಿಧಾನಪರಿಷತ್ತು ಸೀಟುಗಳನ್ನು ಗಿಟ್ಟಿಸಿಕೊಂಡರೂ ಆತನನ್ನು ಪರಿಪೂರ್ಣ ರಾಜಕಾರಣಿ ಎನ್ನಲು ಸಾಧ್ಯವಿಲ್ಲ.

ಇಬ್ರಾಹಿಂ ಅವರಿಗೆ ಒಂದೇ ಒಂದು ಗೆಲುವಿನ ತುರ್ತು ಅಗತ್ಯವಿದೆ. ಅದು ಸಾಧ್ಯವಾಗದೇ ಹೋದರೆ ಸಿದ್ಧರಾಮಯ್ಯ ದಂಡಿನೊಂದಿಗೆ ಜನರನ್ನು ಸೆಳೆಯಲು ಒಬ್ಬ ಸಿನಿಮಾ ಹೀರೋ ಹಾಗೆ ಇಬ್ರಾಹಿಂ ಸುತ್ತುತ್ತಿರಬೇಕು ಅಷ್ಟೆ.

**********

ಇದಿನಬ್ಬ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಅವರು ಅಧ್ಯಕ್ಷರಾಗುವ ಹೊತ್ತಿಗೆ ಅವರಿಗೆ ವೃದ್ಧಾಪ್ಯ ಆವರಿಸಿತ್ತು. ಕೆಲ ಕನ್ನಡದ ಸಾಹಿತಿಗಳು ಪ್ರಾಧಿಕಾರಕ್ಕೆ ಹೀಗೆ ವಯಸ್ಸಾದ ವ್ಯಕ್ತಿ ಬೇಕಿತ್ತೇ ಎಂದು ವ್ಯಂಗ್ಯವಾಡಿದ್ದರು.

ಆದರೆ ಇದಿನಬ್ಬ ವಿಧಾನಮಂಡಲದಲ್ಲಿ ಆಡಿದ್ದ ಭಾಷಣಗಳು ಆ ಕಾಲಕ್ಕೆ ಅದ್ಭುತ. ಹೇಳಿಕೇಳಿ ಇದಿನಬ್ಬ ಆಶುಕವಿ. ಸಮಸ್ಯೆಗಳನ್ನು ತಮ್ಮ ಕವಿತ್ವದಿಂದಲೇ ಸಭೆಯ ಗಮನಕ್ಕೆ ತರುತ್ತಿದ್ದ ಇದಿನಬ್ಬ ಅಪ್ಪಟ ಗಾಂಧಿವಾದಿ.

ತೀರಾ ಧಾರ್ಮಿಕ ಮನಸ್ಸಿನವರೂ ಆಗಿದ್ದ ಇದಿನಬ್ಬ ಅವರಿಗೆ ಸರಿಯಾಗಿ ಉರ್ದು ಬರುತ್ತಿರಲಿಲ್ಲ. ಅವರ ಮಾತೃಭಾಷೆ ಕನ್ನಡ. ದಕ್ಷಿಣ ಕನ್ನಡದಲ್ಲಿ ಹೀಗೆ ಕನ್ನಡವನ್ನೇ ಮಾತೃಭಾಷೆಯಾಗಿ ಹೊಂದಿರುವ ಮುಸ್ಲಿಮರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

ಇದಿನಬ್ಬ ಕನ್ನಡದವರಾಗಿದ್ದರಿಂದ ಅವರು ಉರ್ದು ಮಾತನಾಡುವ ಮುಸ್ಲಿಮರ ಜತೆ ಸಂವಹಿಸಲು ಸ್ವಲ್ಪ ಪ್ರಯಾಸಪಡಬೇಕಾಗಿತ್ತು.

ಕರ್ನಾಟಕ ರಾಜಕಾರಣದಲ್ಲಿ ಕೆಲ ಕಾಲ ಒಂದಷ್ಟು ಮೆರೆದ ಮತ್ತೊಬ್ಬ ಮುಸ್ಲಿಂ ರಾಜಕಾರಣಿ ನಜೀರ್ ಅಹಮದ್. ಕೋಲಾರದ ನಜೀರ್ ಅವರು ಬಂಗಾರಪ್ಪ ಅವರ ಸಂಪುಟದಲ್ಲಿ ಸಣ್ಣ ಕೈಗಾರಿಕೆ ಸಚಿವರಾಗಿದ್ದವರು. ನಜೀರ್ ಹಾಗು ಎಸ್.ರಮೇಶ್ ಇಬ್ಬರೂ ಬಂಗಾರಪ್ಪ ಅವರಿಗೆ ಬಲಗೈ- ಎಡಗೈ ಹಾಗಿದ್ದವರು.

ಸಾಕಷ್ಟು ಆಸ್ತಿ ಸಂಪಾದಿಸಿರುವ ನಜೀರ್ ದಾನ-ಧರ್ಮದಲ್ಲಿ ಎತ್ತಿದ ಕೈ. ಹೀಗಾಗಿ ಮುಸ್ಲಿಂ ಸಮುದಾಯದಲ್ಲಿ ಪ್ರೀತಿ ಗಳಿಸಿಕೊಂಡಿದ್ದಾರೆ. ಆದರೆ ಬಂಗಾರಪ್ಪ ನಿರ್ಗಮನದ ನಂತರ ನಜೀರ್ ರಾಜಕೀಯ ಜೀವನದ ಸುಖಪರ್ವವೆಲ್ಲ ಮುಗಿದುಹೋಗಿತ್ತು. ವಿಧಾನಪರಿಷತ್ ಸದಸ್ಯರಾಗಿರುವ ನಜೀರ್ ತಮ್ಮ ವ್ಯಾಪ್ತಿ, ಮಿತಿಯನ್ನು ಮೀರಿ ಬೆಳೆಯಲು ಯತ್ನಿಸಿದ ಉದಾಹರಣೆಗಳು ಕಡಿಮೆ.

ಖಮರುಲ್ ಇಸ್ಲಾಂ ಸಮಸ್ಯೆ ಇರುವುದೇ ಅವರ ಕನ್ನಡ ಭಾಷಾ ಅಜ್ಞಾನದಲ್ಲಿ. ಕನ್ನಡ ಬಾರದ ಯಾವುದೇ ಧರ್ಮದ ರಾಜಕಾರಣಿ ಕರ್ನಾಟಕದಲ್ಲಿ ಬೆಳೆಯುವುದು ಸಾಧ್ಯವೇ ಇಲ್ಲ. ಅಂಥ ಉದಾಹರಣೆಗಳೂ ಇಲ್ಲ. ಆದರೆ ಖಮರುಲ್ ಅವರಿಗೆ ಕನ್ನಡ ಮಾತನಾಡಲು ಬರುವುದಿಲ್ಲ. ಕಲಿಯುವ ಪ್ರಯತ್ನವನ್ನೂ ಆ ವ್ಯಕ್ತಿ ಮಾಡಿದ ಹಾಗೆ ಕಾಣುವುದಿಲ್ಲ.

ಕನ್ನಡ ಕಲಿಯದೇ ಹೋದರೆ ಖಮರುಲ್ ಮುಂದೆ ಇನ್ನಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇತರರ ಕತೆ ಹಾಗಿರಲಿ ಕನ್ನಡ ಬಾರದ ಶಾಸಕ-ಮಂತ್ರಿ-ಜನಪ್ರತಿನಿಧಿಯನ್ನು ಮುಸ್ಲಿಮರೇ ಒಪ್ಪುವ ಸಾಧ್ಯತೆಗಳು ಕಡಿಮೆ.

ಸಲೀಂ ಅಹಮದ್ ಅವರಿಗೆ ಹಿಂಬಾಗಿಲ ರಾಜಕಾರಣ ಒಗ್ಗಿ ಹೋದಂತಿದೆ. ಹಿಂದೊಮ್ಮೆ ಸಲೀಂ ಬಿನ್ನಿಪೇಟೆಯಲ್ಲಿ ನಿಂತು ಸೋತಿದ್ದರು. ಆಮೇಲೆ ವಿಧಾನಪರಿಷತ್‌ಗೆ ಬಂದರು, ಮುಖ್ಯ ಸಚೇತಕರಾಗಿಯೂ ಇದ್ದವರು. ಆದರೆ ಸಲೀಂ ತಮ್ಮದೇ ಒಂದು ಕ್ಷೇತ್ರ ಗುರುತಿಸಿಕೊಳ್ಳದೇ ಹೋದರೆ ಮುಂದೆ ಅವರು ರಾಜಕೀಯ ಭೂಪಟದಲ್ಲಿ ಕಣ್ಮರೆಯಾಗುವ ಸಾಧ್ಯತೆಗಳೇ ಹೆಚ್ಚು.

***********



ಮುಮ್ತಾಜ್ ಅಲಿ ಖಾನ್ ಈಗ ಬಿಜೆಪಿ ಸರ್ಕಾರದಲ್ಲಿ ಮಂತ್ರಿ. ಭಾರತೀಯ ಜನತಾ ಪಕ್ಷದಲ್ಲಿ ಮಂತ್ರಿಯಾಗಲು ಸಾಧ್ಯವಿದ್ದ ಮುಸ್ಲಿಮರು ಇಬ್ಬರೇ. ಒಬ್ಬಾತ ಅಬ್ಬಾಸ್ ಅಲಿ ಬೋಹ್ರಾ. ಈತ ಮಂಡ್ಯದಲ್ಲಿ ಟಿಕೆಟ್ ಸಿಗಲಿಲ್ಲವೆಂಬ ಕಾರಣಕ್ಕೆ ಬಂಡಾಯವೆದ್ದು ಸ್ಪರ್ಧಿಸಿ ಸೋತವರು. ಹೀಗಾಗಿ ಉಳಿದುಕೊಂಡಿದ್ದು ಮುಮ್ತಾಜ್ ಅಲಿ ಖಾನ್ ಮಾತ್ರ.

ಮುಮ್ತಾಜ್ ಸಹೃದಯಿ, ಸರಳ, ಸಂಪನ್ನರು. ಅದರಲ್ಲಿ ಎರಡು ಮಾತಿಲ್ಲ. ಪಿಎಚ್‌ಡಿ ಮಾಡಿದ್ದಾರೆ, ಹಲವಾರು ಡಿಗ್ರಿಗಳನ್ನು ಪಡೆದಿದ್ದಾರೆ.

ಇದೆಲ್ಲಕ್ಕಿಂತ ಹೆಚ್ಚಾಗಿ ಮುಮ್ತಾಜ್ ಆರ್‌ಎಸ್‌ಎಸ್-ಬಿಜೆಪಿ ವಕ್ತಾರರ ಹಾಗೆ ಪದೇ ಪದೇ ಪತ್ರಿಕೆಗಳ ವಾಚಕರ ವಾಣಿಗಳಲ್ಲಿ ಬರೆದು ಸುದ್ದಿಯಾದವರು. ಅದೇ ಕಾರಣಕ್ಕೆ ಮುಸ್ಲಿಮರ ಕೋಪಕ್ಕೂ ಗುರಿಯಾದವರು. ತಾವೇ ಸಿಕ್ಕಿಬಿದ್ದಿರುವ ಆರ್‌ಎಸ್‌ಎಸ್ ಜಾಲದಿಂದ ಅವರು ಹೊರಬರಲಾರರು.

ಇನ್ನು ಅವರು ಮಂತ್ರಿಯಾಗಿರುವ ವಕ್ಫ್ ಖಾತೆಯ ನಿರ್ವಹಣೆಯಲ್ಲಿ ಅದ್ಭುತವಾದುದ್ದೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಪರಭಾರೆಯಾಗಿರುವ ವಕ್ಫ್ ಆಸ್ತಿ ಬಿಡಿಸಿಕೊಳ್ಳಲು ಹೋದರೆ ಮುಮ್ತಾಜ್ ಅವರಿಗೆ ಮುಂದಿನ ಐದು ವರ್ಷ ಅದೇ ಕೆಲಸ ಆಗಿಹೋಗುತ್ತದೆ. ಅಂಥ ಸಾಹಸವನ್ನು ಅವರಿಗೆ ಮಾಡಲು ಆ ಸಮುದಾಯದ ಪಟ್ಟಭದ್ರರು ಬಿಡುವುದೂ ಅಷ್ಟು ಸಾಧ್ಯವೇನಲ್ಲ.

********

ಜಗಳೂರು ಇಮಾಮ್ ಸಾಬ್ ಅವರ ಬಗ್ಗೆ ಹೊಸ ತಲೆಮಾರಿನ ಮುಸ್ಲಿಂ ಯುವಕರಿಗೆ ಗೊತ್ತಿಲ್ಲದೇ ಇರಬಹುದು. ಇಮಾಮ್ ಸಾಬರು ಚಿತ್ರದುರ್ಗದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಹೋದವರು. ಯುವಮುಸ್ಲಿಂ ಮುಖಂಡರಿಗೆ ಇಮಾಮ್ ಸಾಬ್ ಅವರು ಆದರ್ಶ ಆಗಬಲ್ಲರು ಅನಿಸುತ್ತದೆ.

ಕೆಂಗಲ್ ಹನುಮಂತಯ್ಯನವರ ಸಂಪುಟದಲ್ಲಿ ಇಮಾಮ್ ಸಾಬ್ ಅವರು ಸಾರಿಗೆ ಸಚಿವರಾಗಿದ್ದರಂತೆ. ಆದರೆ ದುರಂತವೆಂದರೆ ಅವರು ತೀರಿಕೊಂಡಾಗ ಅಂತ್ಯಸಂಸ್ಕಾರ ಮಾಡಲೂ ಅವರ ಕುಟುಂಬದವರ ಬಳಿ ಹಣವಿರಲಿಲ್ಲ.

ಇಮಾಮ್ ಸಾಬ್ ಅವರಂಥ ಪ್ರಾಮಾಣಿಕರು ಮುಸ್ಲಿಂ ಸಮುದಾಯದಲ್ಲಿ ಮಾತ್ರವಲ್ಲ, ಎಲ್ಲ ಸಮುದಾಯಗಳಲ್ಲೂ ಅಪರೂಪ.

*******

ಅಜೀಜ್ ಸೇಟ್ ಅವರ ಬಗ್ಗೆ ಬರೆಯದೇ ಹೋದರೆ ಅಪಚಾರವಾದೀತು. ಅಜೀಜ್ ಸೇಟ್ ನಿಜವಾದ ಅರ್ಥದಲ್ಲಿ ಸಮಾಜವಾದಿ. ಅವರು ಜನಮುಖಿ ಆಗಿದ್ದರಿಂದಲೇ ಪ್ರಗತಿಯ ಕಡೆಗೆ ಮುಕ್ತ ಮನಸ್ಸು ಹೊಂದಿದ್ದರು. ಮುಸ್ಲಿಮರ ನಡುವೆ ಇಂಥ ಅಪ್ಪಟ ಸಮಾಜವಾದಿ ಹುಟ್ಟುಕೊಂಡರೆ ಹಿಂದೂ ಕಟ್ಟರ್‌ವಾದಿಗಳು ಸಹಿಸುವುದಿಲ್ಲ. ಈ ಕಾರಣದಿಂದಲೇ ಅವರನ್ನು ತುಳಿಯುವ ಎಲ್ಲ ಯತ್ನಗಳು ಪದೇ ಪದೇ ನಡೆದವು.

ಎಸ್.ಎಂ.ಕೃಷ್ಣ, ಶಾಂತವೇರಿ ಗೋಪಾಲಗೌಡರ ಹಾಗೆ ಸೋಷಿಯಲಿಸ್ಟ್ ಪಾರ್ಟಿಯಿಂದಲೇ ರಾಜಕಾರಣಕ್ಕೆ ಬಂದ ಅಜೀಜ್ ಸೇಟ್ ಕಡೆಯವರೆಗೂ ಸಮಾಜವಾದಿ ಮೌಲ್ಯಗಳನ್ನು ಬಿಟ್ಟುಕೊಟ್ಟವರಲ್ಲ. ಅಜೀಜ್ ಸೇಟ್ ಎಂಥ ಕನ್ನಡಪ್ರೇಮಿ ಎಂದರೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ರ್‍ಯಾಂಕ್ ಪಡೆದವರಿಗೆ ಸ್ವಂತ ಖರ್ಚಿನಲ್ಲಿ ಚಿನ್ನದ ಪದಕ ಕೊಡುತ್ತಿದ್ದರು. ಆದರೆ ಇದೇ ಸೇಟರನ್ನು ಕನ್ನಡವಿರೋಧಿ ಎಂದು ಹುಯಿಲೆಬ್ಬಿಸಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಯತ್ನ ನಡೆದಿತ್ತು.

ಅಜೀಜ್ ಸೇಟರ ಪುತ್ರ ತನ್ವೀರ್ ಸೇಟ್ ಅವರು ಈಗ ರಾಜಕಾರಣದಲ್ಲಿದ್ದಾರೆ. ಅವರಿಗೆ ತಂದೆಯ ಹಾಗೆ ಸಮಾಜವಾದಿ ಸಂಸ್ಕಾರವಿಲ್ಲ. ಹೀಗಿದ್ದರೂ ಸಮುದಾಯದ ಮುಖಂಡರಾಗಿ ಬೆಳೆಯಲು ಎಲ್ಲ ಅವಕಾಶಗಳೂ ಅವರಿಗಿವೆ.

*******

ಮುಸ್ಲಿಂ ರಾಜಕಾರಣದಲ್ಲಿ ಹೊಸ ಧ್ರುವತಾರೆಗಳಂತೆ ಉದ್ಭವಿಸಿದವರು ಅಬ್ದುಲ್ ಅಜೀಂ ಹಾಗು ಬಿ.ಜಡ್.ಜಮೀರ್ ಅಹಮದ್ ಖಾನ್. ಇವರಲ್ಲಿ ಅಜೀಂ ದೇವೇಗೌಡರ ನೆರಳಿನಂತೆ ಇದ್ದುಬಿಟ್ಟಿದ್ದಾರೆ. ಒಮ್ಮೆ ಬಿನ್ನಿಪೇಟೆಯಲ್ಲಿ ವಿಜಯನಗರದ ವೀರಪುತ್ರ ಸೋಮಣ್ಣನವರ ಎದುರಿನಲ್ಲಿ ಅಗ್ನಿಪರೀಕ್ಷೆಗೆ ಒಡ್ಡಿಕೊಂಡು ಸೋತವರು. ಸೋತರೆಂಬ ಅನುಕಂಪದಿಂದ ವಿಧಾನಪರಿಷತ್‌ಗೆ ನಾಮಕರಣವಾದವರು.

ಅಜೀಂ ನಾವೆಲ್ಲರೂ ಕಂಡಂತೆ ಉತ್ತಮ ಪೊಲೀಸ್ ಅಧಿಕಾರಿ. ರೌಡಿಗಳಿಗೆ ನಡುಕ ಹುಟ್ಟಿಸಿದವರು. ಆದರೆ ಒಳ್ಳೆಯ ರಾಜಕಾರಣಿಯಾಗುವುದು ಅಷ್ಟು ಸುಲಭವೇನಲ್ಲ. ಅಜೀಂ ಪೊಲೀಸ್ ಅಧಿಕಾರಿಯಾಗುವುದಕ್ಕೆ ಮುನ್ನವೇ ಶ್ರೀಮಂತರು. ರಾಜಕಾರಣದಲ್ಲಿ ಹಣ ಉಳ್ಳವರು ಹೇಗೆ ಹೇಗೋ ಬಳಕೆಯಾಗುತ್ತಾರೆ. ಅಜೀಂ ಹಾಗಾಗದಿರಲಿ.

ಇನ್ನು ಜಮೀರ್ ಅಹಮದ್ ಖಾನ್ ಆಗಾಗ ಕಾರ್ಟೂನ್ ಸಿನಿಮಾದ ಪಾತ್ರವೊಂದರ ಹಾಗೆ ಕಾಣುತ್ತಾರೆ. ದಿಢೀರನೆ ಯಶಸ್ಸು ಗಳಿಸಿದವರು ಜಮೀರ್. ಎಸ್.ಎಂ.ಕೃಷ್ಣ ರಾಜೀನಾಮೆ ನೀಡಿ ತೆರವಾದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಆರ್.ವಿ.ದೇವರಾಜ್‌ಗೆ ನೀರಿಳಿಸಿದವರು. ಗೆದ್ದ ಕೆಲ ದಿನಗಳಲ್ಲೇ ಮಂತ್ರಿಯಾದವರು. ನಂತರ ಈಗ ಎರಡನೇ ಅವಧಿಗೆ ಮತ್ತೆ ಶಾಸಕರಾಗಿದ್ದಾರೆ.

ಜಮೀರ್ ಅವರಿಗೆ ಇನ್ನೂ ಹುಡುಗುಬುದ್ಧಿ ಎಂದು ಅವರನ್ನು ಗಮನಿಸಿದವರಿಗೇ ಗೊತ್ತಾಗುತ್ತದೆ. ಯಾವ ಕುಮಾರಣ್ಣನ ಹೆಸರಿನಲ್ಲಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರೋ, ಅದೇ ಕುಮಾರಣ್ಣನ ವಿರುದ್ಧ ಬಂಡೆದ್ದು ರಾಜೀನಾಮೆ ಬಿಸಾಕಿದವರು ಜಮೀರ್. ತದನಂತರ ಅದೇ ಕುಮಾರಣ್ಣನ ಜತೆ ಅಷ್ಟೇ ಬೇಗ ರಾಜಿಯಾದವರೂ ಅವರೇ.

ಅವರು ಪ್ರಬುದ್ಧರಾಗುವವರೆಗೆ ಕಾಯಬೇಕು, ಅಷ್ಟೆ.

*******

ಕನ್ನಡ ಚಳವಳಿಯ ಇತಿಹಾಸದಲ್ಲಿ ತಮ್ಮ ಹೆಸರನ್ನು ಉಳಿಸಿಹೋಗಿರುವ ರೆಹಮಾನ್ ಖಾನ್ ಅವರಿಗೆ ರಾಜಕೀಯ ಖಯಾಲಿಗಳಿರಲಿಲ್ಲ. ಬಯಸಿದ್ದರೆ ಅವರು ರಾಜಕಾರಣಕ್ಕೆ ಇಳಿಯಬಹುದಿತ್ತು. ಜೆ.ಎಚ್.ಪಟೇಲರೇ ಅವರಿಗೆ ರಾಜಕಾರಣ ಸೇರಲು ಆಹ್ವಾನ ನೀಡಿದ್ದರಂತೆ. ಆದರೆ ಆ ಜೀವ ಕಡೆಯವರೆಗೆ ಕನ್ನಡಕ್ಕೆ ಹೋರಾಡಿ, ತನ್ನ ಸಮುದಾಯದವರನ್ನು ಎದುರು ಹಾಕಿಕೊಂಡು ಬದುಕಿದರು. ಕನ್ನಡಕ್ಕಾಗಿಯೇ ಜೀವ ತೆತ್ತರು.

ರೆಹಮಾನ್ ಖಾನ್ ಅವರ ತಮ್ಮ ಸಮೀಯುಲ್ಲಾ ಖಾನ್ ಸಹ ಅಪರಿಮಿತ ಕನ್ನಡ ಪ್ರೇಮಿ. ಹಾಗೆಯೇ ಸಮುದಾಯದ ಒಳಗೂ ಈ ಕನ್ನಡಪ್ರೇಮವನ್ನು ಬೆಳೆಸುತ್ತ ಬಂದವರು. ಮದರಸಾಗಳಲ್ಲಿ ಕನ್ನಡ ಕಲಿಸಬೇಕು ಎಂದು ಹೋರಾಟ ನಡೆಸಿದವರು.

ಮೊನ್ನೆ ರಂಜಾನ್ ಸಂದರ್ಭದಲ್ಲಿ ಮತ್ತೀಕೆರೆಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ಸಂದರ್ಭದಲ್ಲಿ ಸುಮಾರು ಐದು ಸಾವಿರ ಮಂದಿ ಸೇರಿದ್ದರು. ಆ ಪ್ರಾರ್ಥನೆಗೆ ಅಲ್ಲಿನ ಸ್ಥಳೀಯ ಪೊಲೀಸ್ ಅಧಿಕಾರಿಯೇ ಅತಿಥಿ. ಸ್ವಾಗತ, ಭಾಷಣ ಎಲ್ಲವೂ ಕನ್ನಡದಲ್ಲೇ ನಡೆದಿದ್ದನ್ನು ನೋಡಿ ಆ ಅಧಿಕಾರಿ ಹೌಹಾರಿದರಂತೆ. ಸಮೀಯುಲ್ಲಾ ಅವರ ಕನ್ನಡಪ್ರೇಮದ ಪರಿಣಾಮವಿದು.

ಸಮೀಯುಲ್ಲಾ ಪ್ರತಿವರ್ಷ ಇಡೀ ರಾಜ್ಯದಲ್ಲಿ ಕನ್ನಡ ಭಾಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿಯರನ್ನೆಲ್ಲ ತಮ್ಮ ಸ್ವಂತ ಖರ್ಚಿನಲ್ಲಿ ಬೆಂಗಳೂರಿಗೆ ಕರೆಸಿಕೊಂಡು ಅವರಿಗೆ ಬಹುಮಾನ, ಪ್ರಶಸ್ತಿ ಪತ್ರ ಕೊಟ್ಟು ಕಳಿಸುತ್ತಾರೆ. ಮತ್ತೀಕೆರೆಯ ಮಸೀದಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲು ಕಾರಣವಾದವರೂ ಇವರೇ. ಮಸೀದಿಗಳಿಗೆ ಹಿಂದೂ ಧರ್ಮದ ಮಠಾಧೀಶರನ್ನು ಕರೆದುಕೊಂಡು ಹೋಗಿ ಭಾಷಣ ಮಾಡಿಸಿದವರೂ ಇವರೇ.

ಹೀಗೆಲ್ಲ ಇರುವ ಸಮೀಯುಲ್ಲಾ ಅವರಿಗೆ ರಾಜಕೀಯ ಸೇರಿಕೊಳ್ಳಿ ಎಂದು ಹೇಳುತ್ತಿರುತ್ತೇನೆ. ಆದರೆ ಸಮೀಯುಲ್ಲಾ ತಮ್ಮ ಅಣ್ಣನ ಹಾಗೆ ವಿನಯದಿಂದ ಅದೆಲ್ಲ ನಮಗೆ ಸರಿಹೋಗಲ್ಲ ಎನ್ನುತ್ತಾರೆ.

*******

ಇನ್ನೊಬ್ಬ ಗೆಳೆಯನಿದ್ದಾನೆ. ಸರಿಸುಮಾರು ಹತ್ತು ವರ್ಷಗಳ ಕಾಲ ಸಕಲೇಶಪುರ ತಾಲ್ಲೂಕು ಬಹುಜನ ಸಮಾಜ ಪಕ್ಷದ ಅಧ್ಯಕ್ಷನಾಗಿದ್ದವನು. ಹೆಸರು ಮೆಹಬೂಬ್. ಅಲ್ಲಯ್ಯಾ, ಈ ಪಕ್ಷದಲ್ಲಿ ಎಷ್ಟು ವರ್ಷ ಇನ್ನೂ ಮಣ್ಣು ಹೊರುತ್ತೀಯಾ? ಬೇರೆ ಪಕ್ಷ ಸೇರಿ ಭವಿಷ್ಯ ರೂಪಿಸಿಕೊಳ್ಳಬಹುದಲ್ಲ? ಎಂದು ಆಗಾಗ ನಾನು ಕಾಲೆಳೆಯುತ್ತೇನೆ. ಆತ ಅಷ್ಟೇ ತಮಾಶೆಯಾಗಿ ಹೇಳುತ್ತಾನೆ: ಮಾಯಾವತಿ ನಮ್ಮ ಅಕ್ಕ, ಅವರನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗೋದಿಲ್ಲ. ಭವಿಷ್ಯ ಹಾಳಾದರೂ ಚಿಂತೆಯಿಲ್ಲ, ಸಿದ್ಧಾಂತ ಬಿಡೋದಿಲ್ಲ....

******

ಕೆ.ಎಫ್.ಡಿ ಹಾಗು ಪಿಎಫ್‌ಐ ಈ ಎರಡು ಸಂಘಟನೆಗಳು ಈಗ ಕರ್ನಾಟಕದ ಮುಸ್ಲಿಂ ಜಗತ್ತಿನಲ್ಲಿ ಸಾಕಷ್ಟು ಕ್ರಿಯಾಶೀಲವಾಗಿವೆ. ಈ ಸಂಘಟನೆಗಳು ಕೇರಳ ಮೂಲದಿಂದ ಬಂದವುಗಳು ಎನ್ನುತ್ತಾರೆ. ನನ್ನ ಮುಸ್ಲಿಂ ಗೆಳೆಯರೇ ಹೇಳುವಂತೆ ಈ ಸಂಘಟನೆಗಳು ಆರ್‌ಎಸ್‌ಎಸ್‌ನ ಇನ್ನೊಂದು ರೂಪ. ಆ ಅನುಮಾನ ನನಗೂ ಇದೆ.

ಕೆ.ಎಫ್.ಡಿ, ಪಿಎಫ್‌ಐಗಳಲ್ಲಿ ಹೊಸ ಮುಖಂಡರು ಹುಟ್ಟಬಹುದೆ? ಧರ್ಮದ ಆಮಲು ತುಂಬಿಕೊಂಡ ನಾಯಕರು ಜನನಾಯಕರಾಗಲು ಸಾಧ್ಯವೆ? ನಾಯಕರಾದರೂ ಮುಸ್ಲಿಮೇತರರಿಗೂ ನಾಯಕತ್ವ ನೀಡುವ ಹಂತಕ್ಕೆ ಬೆಳೆಯಬಲ್ಲರೆ? ಒಂದು ವೇಳೆ ಈ ಸಂಘಟನೆಗಳಿಂದ ರಾಜಕೀಯ ಶಕ್ತಿಯೊಂದು ಹುಟ್ಟಿದರೂ ಅದು ಬಿಜೆಪಿಗಿಂತ ಭಿನ್ನವಾಗಿರಲು ಸಾಧ್ಯವೆ? ಈ ಪ್ರಶ್ನೆಗಳನ್ನು ಕೆಎಫ್‌ಡಿ ಮುಖಂಡರೇ ಕೇಳಿಕೊಳ್ಳಬೇಕಾಗಿದೆ.

ಕೆಎಫ್‌ಡಿ ತತ್ವ-ಸಿದ್ಧಾಂತಗಳ ಬಗ್ಗೆ ನನಗಿನ್ನೂ ಅಷ್ಟಾಗಿ ತಿಳಿದಿಲ್ಲ. ಆದರೆ ಆ ಸಂಘಟನೆಗಳ ಹುಡುಗರ ಅಗ್ರೆಷನ್ ಗಮನಿಸಿದ್ದೇನೆ. ಈ ಅಗ್ರೆಷನ್ ಒಳ್ಳೆಯ ಕೆಲಸಕ್ಕೆ ಬರುವಂತಾಗಬೇಕು. ಸದ್ಯಕ್ಕೆ ಇಷ್ಟನ್ನು ಮಾತ್ರ ಹೇಳಬಲ್ಲೆ.

******

ಇನ್ನಷ್ಟು ಬರೆಯುತ್ತಾ ಹೋಗಬಹುದು. ಇನ್ನಷ್ಟು ಜನರ ಹೆಸರು ಗೊತ್ತಿದ್ದರೂ ಬಿಟ್ಟಿದ್ದೇನೆ. ಇಲ್ಲಿ ಬರೆದಿದ್ದನ್ನು ಬೇರೆಯವರು ಬೇರೆ ಅರ್ಥದಲ್ಲಿ ಗ್ರಹಿಸುವ ಅಪಾಯವೂ ಇದೆ.

ಇಡೀ ಕರ್ನಾಟಕಕ್ಕೆ ನಾಯಕತ್ವ ನೀಡುವ ಮುಸ್ಲಿಂ ಮುಖಂಡರ ತಲಾಷ್ ನನ್ನದು ಅಷ್ಟೆ, ಕಡೇ ಪಕ್ಷ ಇನ್ನು ಹತ್ತು ವರ್ಷದೊಳಗಾದರೂ ಅಂಥ ನಾಯಕತ್ವ ನೀಡುವಾತ ಎದ್ದು ನಿಲ್ಲಲಿ ಎಂಬುದು ದೂರದ ಆಶೆ.

ರಾಜ್ಯದ ಎಲ್ಲರ ನಾಯಕನಾಗಬಲ್ಲ ಒಬ್ಬ ಮುಸ್ಲಿಂ ಮುಖ್ಯಮಂತ್ರಿ ಸ್ಥಾನ ಏರುವಂತಾದರೆ ಅದೊಂದು ಪವಾಡವಾದೀತು. ಅಂಥದ್ದೊಂದು ಸಾಧ್ಯತೆಯನ್ನು ನಮ್ಮ ಯುವ ಮುಸ್ಲಿಂ ಮನಸ್ಸುಗಳು ನಿಜ ಮಾಡಲಿ ಎಂಬುದು ನನ್ನ ಆಸೆ.

ಮುಸ್ಲಿಮರು ಹೆಚ್ಚು ಹೆಚ್ಚು ರಾಜಕೀಯವಾಗಿ ಬೆಳೆದರೆ ಸಹಜವಾಗಿಯೇ ಆ ಸಮುದಾಯ ಮೌಲ್ವಿಗಳ ಹಿಡಿತದಿಂದ ಬಿಡಿಸಿಕೊಳ್ಳುತ್ತದೆ. ಪರಿಣಾಮವಾಗಿ ಆ ಧರ್ಮದ ಒಳಗಿನ ಮತಾಂಧರ ಸಂಖ್ಯೆ ಕಡಿಮೆಯಾಗುತ್ತದೆ. ಮುಸ್ಲಿಮರು ರಾಜಕೀಯವಾಗಿ ಬೆಳೆದಂತೆ ಸಾಮಾಜಿಕವಾಗಿಯೂ, ಆರ್ಥಿಕವಾಗಿಯೂ ಬೆಳವಣಿಗೆ ಸಾಧಿಸಲು ಅನುಕೂಲವಾಗುತ್ತದೆ. ಈ ಕಾರಣಕ್ಕಾಗಿಯಾದರೂ ಒಬ್ಬ ಮುಸ್ಲಿಂ ಮುಖಂಡ ಪ್ರಜ್ವಲಿಸಬೇಕಾಗಿದೆ.

Thursday, October 16, 2008

ಒಬ್ಬ ಜರ್ನಲಿಸ್ಟ್ ಆಕ್ಟಿವಿಸ್ಟ್ ಆಗಿರಬಾರದೆ?

ಗೆಳೆಯರು, ವಿಶೇಷವಾಗಿ ಪತ್ರಕರ್ತ ಮಿತ್ರರು ಕಳೆದ ಮೂರು ದಿನಗಳಿಂದ ಅಭಿನಂದಿಸುತ್ತಿದ್ದಾರೆ. ನಿಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ, ಮುಂದೇನು ಮಾಡ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ. ರಾಜ್ಯದ ೬ಕೋಟಿಗೂ ಹೆಚ್ಚು ಜನರ ಸಂಪೂರ್ಣ ಸಾಮಾಜಿಕ, ಆರ್ಥಿಕ ಮಾಹಿತಿಗಳನ್ನು ಸಂಗ್ರಹಿಸುವ ಜಾತಿವಾರು ಸಮೀಕ್ಷೆಯನ್ನು ಖಾಸಗಿ ಸಂಸ್ಥೆಗಳಿಗೆ ಒಪ್ಪಿಸದಿರಲು ರಾಜ್ಯ ಸರ್ಕಾರ ತೀರ್ಮಾನಿಸುವುದರೊಂದಿಗೆ ಒಂದು ಹೋರಾಟ ಯಶಸ್ವಿಯಾದಂತಾಗಿದೆ. ಒಂದು ಚಳವಳಿ ಯಶಸ್ವಿಯಾಗುವುದು ಇವತ್ತಿನ ಸಂದರ್ಭದಲ್ಲಿ ಅಪರೂಪ. ನಮ್ಮ ಚಳವಳಿ ಗೆದ್ದಿದೆ. ಸಂಭ್ರಮ ಪಡುವುದಕ್ಕೆ ಒಂದು ಕಾರಣ ಸಿಕ್ಕಿದೆ.

*****

ಇದೆಲ್ಲ ಶುರುವಾಗಿದ್ದು ಇಂಗ್ಲಿಷ್ ನಿಯತಕಾಲಿಕೆಗಳ ಪೈಕಿ ನಾವು ಹೆಚ್ಚು ನಂಬಲು ಸಾಧ್ಯವಿರುವ ಔಟ್‌ಲುಕ್‌ನಲ್ಲಿ ಕಾಣಿಸಿಕೊಂಡ ಒಂದು ಲೇಖನದ ಮೂಲಕ. ದೇಶದ ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಒಳನೋಟ ಹೊಂದಿರುವ ಪತ್ರಕರ್ತ ಸುಗತ ಶ್ರೀನಿವಾಸರಾಜು ಔಟ್‌ಲುಕ್‌ನಲ್ಲಿ ಜಾತಿವಾರು ಸಮೀಕ್ಷೆಗೆ ಎದ್ದಿರುವ ವಿರೋಧಗಳ ಬಗ್ಗೆ ತಲಸ್ಪರ್ಶಿಯಾಗಿ ಬರೆದಿದ್ದರು. ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಆರಂಭಿಸಿರುವ ಜಾತಿವಾರು ಸಮೀಕ್ಷೆಗೆ ಎದ್ದಿರುವ ವಿರೋಧಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ಕಾರ್ಪರೇಟ್ ಸಂಸ್ಥೆಗಳು ಆಯೋಗಕ್ಕೆ ಮಾಹಿತಿ ನೀಡಲು ಹಿಂಜರಿಯುತ್ತಿರುವುದನ್ನು ಗುರುತಿಸಿ ಅವರು ಬರೆದಿದ್ದರು. ಇದೇ ಲೇಖನವನ್ನು ಆಧಾರವಾಗಿಟ್ಟುಕೊಂಡು ನಾನು ‘ಜಾತಿವಾರು ಸಮೀಕ್ಷೆಗೆ ಯಥಾಸ್ಥಿತಿವಾದಿಗಳ ಅಡ್ಡಿ ಎಂಬ ವರದಿ ಬರೆದಿದ್ದೆ. ಈ ಬ್ಲಾಗ್ ಮಾತ್ರವಲ್ಲದೆ ಇಂದು ಸಂಜೆ ದೈನಿಕ ಹಾಗು ಅಭಿಮನ್ಯು ಪಾಕ್ಷಿಕ ಪತ್ರಿಕೆಗಳಲ್ಲಿ ಇದೇ ವರದಿಯನ್ನು ವಿಸ್ತರಿಸಿ ಬರೆದಿದ್ದೆ.

ಸುಗತ ತಮ್ಮ ಲೇಖನದಲ್ಲಿ ಸಮೀಕ್ಷೆಯನ್ನು ಖಾಸಗಿ ಸಂಸ್ಥೆಗೆ ಒಪ್ಪಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸೂಚ್ಯವಾಗಿ ಬರೆದಿದ್ದರು. ಕೆಲದಿನಗಳಲ್ಲಿ ಸುಗತ ಬರೆದಿದ್ದು ನಿಜವಾಗಿತ್ತು. ಪ್ರಜಾವಾಣಿಯಲ್ಲಿ ಈ ಕುರಿತಾದ ಟೆಂಡರ್ ಪ್ರಕಟಣೆಯೂ ಕಾಣಿಸಿಕೊಂಡಿತು.

ತಕ್ಷಣ ಕಾರ್ಯೋನ್ಮುಖರಾದವರು ಯುವಜನ ಜಾಗೃತಿ ವೇದಿಕೆಯ ಅಧ್ಯಕ್ಷರೂ, ಅಭಿಮನ್ಯು ಪಾಕ್ಷಿಕ ಪತ್ರಿಕೆಯ ಸಂಪಾದಕರೂ ಆದ ಬಿ.ಎನ್.ರಮೇಶ್ ಅವರು. ಹಲವು ಯಶಸ್ವಿ ಚಳವಳಿಗಳನ್ನು ಮುನ್ನಡೆಸಿದ ಹಿನ್ನೆಲೆ ಅವರದು. ಸದಾ ಜನಪರವಾಗಿ ಯೋಚಿಸುವ ರಮೇಶ್ ಅವರು ಆ ಜಾಹೀರಾತು ಪ್ರಕಟವಾದ ಕೂಡಲೇ ಮಾಡಿದ ಕೆಲಸವೇನೆಂದರೆ ಸಮೀಕ್ಷೆ ಖಾಸಗೀಕರಣ ಬೇಡ ಎಂಬ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು.

ಆನಂತರ ಜಾತಿವಾರು ಸಮೀಕ್ಷೆ ಖಾಸಗೀಕರಣದಿಂದ ಆಗುವ ಅಪಾಯಗಳ ಕುರಿತು ಎಲ್ಲ ಪಕ್ಷಗಳ ಪ್ರಮುಖ ರಾಜಕೀಯ ಮುಖಂಡರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದೆವು. ಹಲವು ರಾಜಕಾರಣಿಗಳನ್ನು ಹುಡುಕಿಕೊಂಡು ಹೋಗಿ ಈ ಸಂಬಂಧ ಮಾತನಾಡಿಸಿದೆವು. ಎಲ್ಲರಿಂದಲೂ ಪೂರಕವಾದ ಪ್ರತಿಕ್ರಿಯೆ ಲಭ್ಯವಾಯಿತು.

ನಮ್ಮೆಲ್ಲರ ಹಿರಿಯಣ್ಣನ ಹಾಗೆ ಇರುವ ಸಮತಾ ಸೈನಿಕ ದಳದ ಎಂ.ವೆಂಕಟಸ್ವಾಮಿ ಅಖಾಡಕ್ಕೆ ಇಳಿದರು. ಹಿಂದುಳಿದ ಜಾತಿಗಳ ಸಂಘಟನೆಗಳು ಮೀನಮೇಷ ಎಣಿಸುತ್ತಿದ್ದಾಗ ವೆಂಕಟಸ್ವಾಮಿಯವರು ನಮ್ಮ ಬೆಂಬಲಕ್ಕೆ ನಿಂತರು. ಒಂದೆರಡು ಸಭೆಗಳೂ ನಡೆದವು. ನಂತರ ಯುವಜನ ಜಾಗೃತಿ ವೇದಿಕೆಯ ಅಡಿಯಲ್ಲಿ ಮಹಾತ್ಮಗಾಂಧಿ ಪ್ರತಿಮೆ ಮುಂಭಾಗ ಒಂದು ಧರಣಿಯನ್ನೂ ನಡೆಸಿದೆವು. ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಜೆ.ಶ್ರೀನಿವಾಸನ್, ಅಹಿಂದ ಅಧ್ಯಕ್ಷ ಮುಕುಡಪ್ಪ, ಸವಿತಾ ಸಮಾಜದ ಮುಖಂಡ ಪ್ರೊ.ಎನ್.ವಿ.ನರಸಿಂಹಯ್ಯ, ಬಲಿಜ ಸಂಘದ ಮುಖಂಡ ಡಾ.ಜಗನ್ನಾಥ್, ಗಾಣಿಗರ ಸಂಘದ ಮುಖಂಡ ಅಮರನಾಥ್, ದಸಂಸ ಸಂಚಾಲಕ ಮಾವಳ್ಳಿ ಶಂಕರ್, ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಜೆ.ಎಂ.ವೀರಸಂಗಯ್ಯ ಹೀಗೆ ವಿವಿಧ ಸಂಘಟನೆಗಳ ಪ್ರಮುಖರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ನಂತರ ಚಳವಳಿ ನಿಧಾನವಾಗಿ ಎಲ್ಲ ಜಿಲ್ಲೆಗಳಿಗೂ ವ್ಯಾಪಿಸತೊಡಗಿದವು. ಕೋಲಾರದಲ್ಲಿ ವೆಂಕಟಸ್ವಾಮಿಯವರ ಸಮತಾ ಸೈನಿಕ ದಳ ಹಾಗು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಗಳ ಆಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ನಡೆಯಿತು. ಶಿವಮೊಗ್ಗದಲ್ಲಿ ಹಿಂದುಳಿದ ಜಾತಿಗಳ ಸಂಘಟನೆಗಳ ಪ್ರಮುಖರು ಧರಣಿ ನಡೆಸಿದರು. ಮೈಸೂರು, ಮಂಡ್ಯ, ಹಾಸನ, ತುಮಕೂರು, ಚಿತ್ರದುರ್ಗಗಳಲ್ಲೂ ಪ್ರತಿಭಟನೆಗಳಿಗೆ ದಿನಾಂಕ ನಿಗದಿಯಾಗಿತ್ತು. ಕೋಲಾರ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಚಳವಳಿ ನಡೆಸಲು ವೆಂಕಟಸ್ವಾಮಿಯವರು ತಯಾರಿ ನಡೆಸಿದ್ದರು.

ಅಷ್ಟರೊಳಗೆ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಿತು. ಆಯೋಗದಿಂದಲೇ ಸಮೀಕ್ಷೆ ನಡೆಸುವುದಾಗಿ ಸರ್ಕಾರದ ಅಧಿಕೃತ ಪ್ರಕಟಣೆ ಹೊರಗೆ ಬರುವುದರೊಂದಿಗೆ ಒಂದು ಅಸಂಬದ್ಧ, ಅನ್ಯಾಯದ, ಅಧಿಕಪ್ರಸಂಗದ ನಿರ್ಧಾರವೊಂದಕ್ಕೆ ತಡೆ ಒಡ್ಡಿದಂತಾಯಿತು.

*****

ಸರ್ಕಾರ ಈ ನಿರ್ಧಾರ ಪ್ರಕಟಿಸುತ್ತಿದ್ದಂತೆ ಎಲ್ಲ ಮಾಧ್ಯಮಗಳಲ್ಲೂ ಈ ವಿಷಯ ವರದಿಯಾಯಿತು. ಟಿವಿ೯ ಮಧ್ಯಾಹ್ನದ ಸುದ್ದಿಯಲ್ಲಿ ಸರ್ಕಾರದ ನಿರ್ಧಾರವನ್ನು ಬಿತ್ತರಿಸಿದಾಗ ನನ್ನನ್ನು ಫೋನ್ ಮೂಲಕ ಮಾತನಾಡಿಸಿದರು. (ಎಲೆಕ್ಟ್ರಾನಿಕ್ ಮಾಧ್ಯಮಗಳ ಭಾಷೆಯಲ್ಲಿ ಇದನ್ನು ‘ಫೋನೋ ಎನ್ನುತ್ತಾರೆ.) ಆಗ ಸುದ್ದಿವಾಚಕ ರೆಹಮಾನ್ ಹಾಸನ್ ನನ್ನನ್ನು ಕೇಳಿದರು: ಖಾಸಗಿಯವರು ಸಮೀಕ್ಷೆ ಮಾಡಿದರೆ ಅದು ಪಾರದರ್ಶಕವಾಗಿ, ಪರಿಪೂರ್ಣವಾಗಿ, ವೈಜ್ಞಾನಿಕವಾಗಿ ಹೊರಬರುವುದಿಲ್ಲ ಎನ್ನುತ್ತೀರಿ. ಹಾಗಿದ್ದರೆ ಸರ್ಕಾರ ಪಾರದರ್ಶಕವಾಗಿ ಸಮೀಕ್ಷೆ ಮಾಡುತ್ತದೆ ಎಂದು ಹೇಗೆ ಹೇಳುತ್ತೀರಿ?

ನಾನು ಉತ್ತರಿಸಿದೆ: ಸರ್ಕಾರ ಸಮೀಕ್ಷೆ ಮಾಡಿದಾಗಲೂ ಲೋಪದೋಷ ಆಗುವುದಿಲ್ಲ ಎಂದೇನಲ್ಲ. ಆದರೂ ಅದು ತೀರಾ ಕಡಿಮೆ. ಎಲ್ಲೋ ಒಂದು ಪರ್ಸೆಂಟ್, ಎರಡು ಪರ್ಸೆಂಟ್ ದೋಷಗಳಾಗಬಹುದು. ಆದರೆ ಸರ್ಕಾರ ಯಾವತ್ತಿದ್ದರೂ ನಮ್ಮ ಸರ್ಕಾರ. ಅದು ಪ್ರಜೆಗಳಿಗೆ ಯಾವತ್ತಿಗೂ ಉತ್ತರದಾಯಿಯಾಗಿರುತ್ತದೆ. ತಪ್ಪಾದರೆ ನಾವು ನಿಲ್ಲಿಸಿ ಕೇಳಬಹುದು. ಅಲ್ಲದೆ ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಸಾಮಾನ್ಯ ಜನಗಣತಿಯನ್ನು ನಿರ್ವಹಿಸುವುದೂ ನಮ್ಮ ಸರ್ಕಾರವೇ. ಇಂಥ ಗಣತಿಯನ್ನು ಮಾಡಿದ ಅನುಭವ ಇರುವ ಶಾಲಾಶಿಕ್ಷಕರು, ವಿವಿಧ ಸ್ವಯಂಸೇವಾ ಸಂಘಟನೆಗಳು, ಸರ್ವಶಿಕ್ಷ ಅಭಿಯಾನ, ಎನ್‌ಎಸ್‌ಎಸ್ ಕಾರ್ಯಕರ್ತರು, ಗ್ರಾಮಪಂಚಾಯ್ತಿ ಕಾರ್ಯದರ್ಶಿಗಳು, ಕಂದಾಯ ಇಲಾಖೆಯ ನೌಕರರು... ಹೀಗೆ ಸರ್ಕಾರದ ಬಳಿ ಸಾಕಷ್ಟು ಮಾನವ ಸಂಪನ್ಮೂಲವಿದೆ. ಆದ್ದರಿಂದ ಸಮೀಕ್ಷೆಯನ್ನು ಆಯೋಗವೇ ಸರ್ಕಾರದ ಸಹಕಾರದೊಂದಿಗೆ ನಡೆಸಬೇಕು.

******

ಇದಾದ ನಂತರ ಒಂದೆಡೆ ಸಮೀಕ್ಷೆಯ ಖಾಸಗೀಕರಣ ನಿಲ್ಲಿಸುತ್ತಲೇ ಮತ್ತೊಂದೆಡೆ ಆಯೋಗದ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಅವರನ್ನು ಬದಲಿಸುವ ಕೆಲಸ ನಡೆಯುತ್ತಿದೆ ಎಂಬ ಗುಮಾನಿಗಳು ಹುಟ್ಟಿಕೊಂಡವು. ಈ ಕುರಿತು ಟಿವಿ೯ ವಾಹಿನಿಯಲ್ಲಿ ಒಂದು ಸುದ್ದಿಯೂ ಪ್ರಸಾರವಾಯಿತು. ಟಿವಿ೯ನ ಜನಪರ ಪತ್ರಕರ್ತ ಲಕ್ಷ್ಮಣ್ ಹೂಗಾರ್ ಈ ಸಂಬಂಧ ನನ್ನ ಬೈಟ್ ಪಡೆದರು. ಆಗ ನಾನು ಹೇಳಿದೆ: ಒಂದು ವೇಳೆ ದ್ವಾರಕಾನಾಥ್ ಅವರನ್ನು ಬದಲಿಸಲು ಸರ್ಕಾರ ಹೊರಟರೆ ಜೇನುಗೂಡಿಗೆ ಕಲ್ಲು ಹೊಡೆದಂತೆ ಆಗುತ್ತದೆ. ಸರ್ಕಾರ ಈಗಾಗಲೇ ಅಲ್ಪಸಂಖ್ಯಾತರ ವಿರೋಧಿ ಎಂಬ ಹಣೆಪಟ್ಟಿ ಹೊತ್ತುಕೊಂಡಿದೆ. ಇಂಥ ದುಸ್ಸಾಹಸಕ್ಕೆ ಕೈ ಹಾಕಿದರೆ ಹಿಂದುಳಿದ ಜಾತಿಗಳ ವಿರೋಧಿ ಎಂದು ಬ್ರಾಂಡ್ ಆಗಬೇಕಾಗುತ್ತದೆ. ಸರ್ಕಾರ ಹಾಗೆ ಮಾಡದಿರಲಿ. ದ್ವಾರಕಾನಾಥ್ ಒಂದು ವರ್ಷದಿಂದ ಸಮೀಕ್ಷೆಯ ತಯಾರಿ ನಡೆಸಿದ್ದಾರೆ. ಸಮೀಕ್ಷೆ ಮುಗಿಯುವವರೆಗೆ ಸರ್ಕಾರ ಎಚ್ಚರಿಕೆಯಿಂದಿರಲಿ.

ಹಿಂದುಳಿದ ವರ್ಗಗಳ ಸಮೀಕ್ಷೆ ಖಾಸಗಿ ಸಂಸ್ಥೆಗೆ ಕೊಡುವ ವಿಷಯವನ್ನು ಕಟುವಾಗಿ ಟೀಕಿಸಿ ಕಸ್ತೂರಿ ವಾಹಿನಿ ಅಗ್ರ ಸುದ್ದಿ ಪ್ರಕಟಿಸಿತ್ತು. ಖಾಸಗೀಕರಣ ರದ್ದಾದ ಮೇಲೆ ಆ ಚಾನೆಲ್‌ನವರು ಬೈಟ್ ಪಡೆದಾಗ ನಾನು ಹೇಳಿದ್ದಿಷ್ಟು: ಸರ್ಕಾರ ಒಳ್ಳೆ ನಿರ್ಧಾರ ಕೈಗೊಂಡಿದೆ. ಅದು ಅನಿವಾರ್ಯವೂ ಆಗಿತ್ತು. ಇಡೀ ರಾಷ್ಟ್ರದಲ್ಲಿ ಸ್ವಾತ್ರಂತ್ರ್ಯ ಪಡೆದ ನಂತರ ಎಲ್ಲೂ ನಡೆಯದ ಸರ್ವೆ ಕರ್ನಾಟಕದಲ್ಲಿ ನಡೆಯುತ್ತಿದೆ. ಆದಷ್ಟು ಶೀಘ್ರ ಈ ಸಮೀಕ್ಷೆಯನ್ನು ಸರ್ಕಾರ ಮಾಡಿ ಮುಗಿಸಿದರೆ ಬಿಜೆಪಿಗೇ ಒಳ್ಳೇ ಹೆಸರು. ಕಾಲಮಿತಿ ನಿಗದಿ ಮಾಡಿಕೊಂಡು ಬೇಗನೇ ಸಮೀಕ್ಷೆ ನಡೆಸಲಿ. ಇಲ್ಲದಿದ್ದಲ್ಲಿ ಹಿಂದುಳಿದ ವರ್ಗದ ಜನರು ಬಹಳ ಸುಲಭವಾಗಿ ಈ ಸರ್ಕಾರವನ್ನು ತಮ್ಮ ವಿರೋಧಿ ಎಂದು ಭಾವಿಸಲು ಅವಕಾಶ ನೀಡಿದಂತಾಗುತ್ತದೆ.

******

ಈ ಬ್ಲಾಗ್ ಆರಂಭಿಸಬೇಕು ಎಂದುಕೊಂಡು ವರ್ಷದ ಹಿಂದೆಯೇ ಯೋಚಿಸಿದ್ದೆ, ಆದರೆ ಸಾಧ್ಯವಾಗಿರಲಿಲ್ಲ. ಸದಾ ಕನ್ನಡವನ್ನೇ ಉಸಿರಾಡುವ ಬನವಾಸಿ ಬಳಗದ ಗೆಳೆಯರೊಂದಿಗೆ ಹಲವು ಬಾರಿ ಈ ಕುರಿತು ಮಾತನಾಡಿದ್ದೆ. ಬನವಾಸಿ ಬಳಗದವರ ಒಪ್ಪಿಗೆ ಪಡೆದು ಅವರು ದಿನವೂ ಬರೆಯುವ ಏನ್‌ಗುರು ಬ್ಲಾಗಿನ ಲೇಖನಗಳನ್ನು ‘ಇಂದು ಸಂಜೆಯಲ್ಲಿ ನಿಯಮಿತವಾಗಿ ಪ್ರಕಟಿಸಲು ಆರಂಭಿಸಿದ್ದೆ. ಅಲ್ಲಿಯವರೆಗೆ ನಾನು ಗಮನಿಸಿದ್ದು, ಓದುತ್ತಿದ್ದುದ್ದು ಬನವಾಸಿ ಬಳಗದ ಬ್ಲಾಗ್ ಹಾಗು ಚುರುಮುರಿಯನ್ನು ಮಾತ್ರ. ಜುಲೈ ತಿಂಗಳಲ್ಲಿ ನಾನು ಸಹ ಬ್ಲಾಗಿಗನಾಗಿ ಪ್ರವೇಶ ಪಡೆದ ನಂತರ ಕನ್ನಡ ಬ್ಲಾಗುಗಳ ಮಹಾಲೋಕವೇ ಪರಿಚಯವಾಯಿತು.

ನಾನು ದೇಸೀಮಾತು ಆರಂಭಿಸುವಾಗ ನನ್ನ ಬರೆಹವನ್ನು ನಾನೇ ಓದಿಕೊಳ್ಳಬೇಕು ಎಂದು ಭಾವಿಸಿದ್ದೆ. ಆದರೆ ನನಗೆ ಅಪರಿಚಿತರಾದ ಹಲವಾರು ಮಂದಿ ಅದು ಹೇಗೋ ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯೆ ನೀಡಲಾರಂಭಿಸಿದಾಗ ಖುಷಿಯಾಗತೊಡಗಿತು. ನಿಧಾನವಾಗಿ ಹೊಸಹೊಸ ಪರಿಚಯಗಳೂ ಆದವು. ನನ್ನ ಬ್ಲಾಗನ್ನು ತಮ್ಮ ಪಟ್ಟಿಯಲ್ಲಿ ಸೇರಿಸಿಕೊಂಡು ಹೊಸ ಓದುಗರನ್ನು ನೀಡಿದ್ದು ಬರಹ ಬಳಗದವರು. ಅವರಿಗೆ ನಾನು ಆಭಾರಿ.

ಇನ್ನಷ್ಟು ಆಪ್ತಬರೆಹಗಳ ಬ್ಲಾಗ್‌ಗಳಿವೆ. ಅವುಗಳ ಕುರಿತು ಮತ್ತೊಮ್ಮೆ ಬರೆಯುತ್ತೇನೆ.


******

ಕೆಲವು ಸಣ್ಣಪುಟ್ಟ ಖುಷಿಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಬೇಕು ಎನಿಸುತ್ತದೆ.

ಪ್ರಜಾವಾಣಿಯ ಒರಿಸ್ಸಾ ಪ್ರಯೋಗ ಲೇಖನ ಬರೆದಾಗ ತುಂಬ ಸಂಕಟವೆನಿಸಿತ್ತು. ಪ್ರಜಾವಾಣಿ ನಿನ್ನೆಗೂ ಇವತ್ತಿಗೂ ನಾಳೆಗೂ ನಮ್ಮ ಪತ್ರಿಕೆ. ಪ್ರಜಾವಾಣಿ ಕುರಿತು ವಿಶೇಷವಾದ ಆಕರ್ಷಣೆ ಇರುವುದರಿಂದಲೇ ಅದರಲ್ಲಿ ಏನೇನೂ ತಪ್ಪಾಗಬಾರದು ಎಂದು ಭಾವಿಸುತ್ತೇವೆ; ಅದು ಸಾಧ್ಯವಿಲ್ಲ ಎಂಬುದು ಗೊತ್ತಿದ್ದರೂ. ಪ್ರಜಾವಾಣಿಯೇ ಬಜರಂಗಿಗಳಿಗೆ ಕುಮ್ಮಕ್ಕು ನೀಡಿದರೆ ಅನಾಹುತಗಳೇ ನಡೆಯುತ್ತದೆ ಎಂದು ಊಹಿಸಲು ವಿಶೇಷ ಬುದ್ಧಿಯೇನು ಖರ್ಚು ಮಾಡಬೇಕಾಗಿಲ್ಲ.

ದುರಂತವೆಂದರೆ ಇದನ್ನು ಬರೆದ ಮುಂದಿನ ವಾರವೇ ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಚರ್ಚುಗಳ ಮೇಲೆ ದಾಳಿ ನಡೆದಿದ್ದು. ಅದು ಕಾಕತಾಳೀಯ ಅಷ್ಟೆ ಎಂದು ನಾವು ಸಮಾಧಾನಪಟ್ಟುಕೊಳ್ಳಬೇಕು. ಆದರೆ ಮತ್ತೆಂದೂ ಪ್ರಜಾವಾಣಿಯಲ್ಲಿ ಬಜರಂಗಿಗಳಿಗೆ ಕುಮ್ಮಕ್ಕು ಕೊಡುವ ಯಾವ ವರದಿಯೂ ಪ್ರಕಟಗೊಳ್ಳಲಿಲ್ಲ. ಪ್ರಜಾವಾಣಿಯಲ್ಲಿ ಜನಹಿತ ಬಯಸುವ ಪತ್ರಕರ್ತರು ಕ್ರಿಯಾಶೀಲರಾಗಿರುವುದಕ್ಕೆ ಇದು ಸಾಕ್ಷಿ.

******

ಮತ್ತೊಂದು ಸಂತಸದ ವಿಷಯ: ಕೆ.ಆರ್.ಪುರಂ.ನಲ್ಲಿರುವ ಹಿಂದುಳಿದ ವರ್ಗಗಳ ಹಾಸ್ಟೆಲ್ ಭೇಟಿ ಕುರಿತು ದೇಸೀಮಾತು ಹಾಗು ಇಂದುಸಂಜೆಯಲ್ಲಿ ಬರೆದಿದ್ದೆ. ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ದಿ ಹಿಂದೂ ಹಾಗು ಇನ್ನಿತರ ಪತ್ರಿಕೆಗಳಲ್ಲಿ, ಕಸ್ತೂರಿ ಟಿವಿಯಲ್ಲಿ ಈ ಕುರಿತು ವರದಿಗಳು ಪ್ರಕಟಗೊಂಡಿದ್ದವು. ಈಗ ಆ ಹಾಸ್ಟೆಲ್ ಬೇರೆ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಮಕ್ಕಳಿಗೆ ಈಗ ಸರಿಯಾಗ ಊಟ-ತಿಂಡಿ ನೀಡಲಾಗುತ್ತಿದೆ. ಅಲ್ಲಿನ ಹುಡುಗಿಯರು ಖುಷಿಯಾಗಿದ್ದಾರೆ. ದ್ವಾರಕಾನಾಥ್ ಅವರೇ ಮತ್ತೊಮ್ಮೆ ಹಾಸ್ಟೆಲ್‌ಗೆ ಹೋಗಿ ಮಕ್ಕಳ ಜತೆ ಊಟ ಮಾಡಿ ಬಂದಿದ್ದಾರೆ.

ಹಾಸ್ಟೆಲ್ ಕಥೆಯನ್ನು ಬರೆದಾಗ ನಮ್ಮ ಪತ್ರಿಕೆಯ ಗೌರಿಬಿದನೂರು ವರದಿಗಾರ ಸಿದ್ಧಪ್ಪ ಕರೆ ಮಾಡಿದ್ದರು. ಅಲ್ಲಿ ನಮ್ಮ ಪತ್ರಿಕೆ ತಲುಪುತ್ತಿದ್ದಂತೆ ಓಬಿಸಿ ಹಾಸ್ಟೆಲ್‌ನಲ್ಲಿ ತರಾತುರಿಯಲ್ಲಿ ಹುಳುಕುಗಳನ್ನು ಮುಚ್ಚುವ ಕೆಲಸ ನಡೆಯಿತಂತೆ. ದ್ವಾರಕಾನಾಥ್ ಇಲ್ಲಿಗೂ ಬಂದರೆ ನಮ್ಮ ಕೆಲಸ ಹೋಗುತ್ತದೆ ಎಂದು ಹೆದರಿದ ಅಧಿಕಾರಿಗಳು ಹಾಸ್ಟೆಲ್‌ನಲ್ಲಿ ಮನುಷ್ಯರು ಬದುಕಲು ಸಾಧ್ಯವಿರುವ ವ್ಯವಸ್ಥೆಗಳನ್ನು ಮಾಡಿದರಂತೆ.

ಒಂದು ಕಡೆ ರಿಪೇರಿ ಮಾಡಿದರೆ ಬೇರೆ ಕಡೆ ತನ್ನಿಂತಾನೇ ರಿಪೇರಿ ಕೆಲಸಗಳು ನಡೆಯುತ್ತವೆ ಅಲ್ಲವೆ?

*****

ಮತಾಂತರ ತಪ್ಪು, ಅದರ ಹೆಸರಲ್ಲಿ ಚರ್ಚ್‌ಗಳ ಮೇಲೆ ದಾಳಿ ಮಾಡುವುದು ತಪ್ಪು ಎಂದು ಹಲವರು ಬ್ಯಾಲೆನ್ಸ್ ಮಾಡುತ್ತ ಇದ್ದಾಗ ಮತಾಂತರ ಸಹಜ ಕ್ರಿಯೆ, ಅದನ್ನು ತಡೆಯುವುದೇ ಮೂರ್ಖತನದ್ದು ಎಂದು ದೇಸೀಮಾತು ಬರೆಯುವುದರೊಂದಿಗೆ ಸಾಕಷ್ಟು ಜನರ ವಿರೋಧ ಕಟ್ಟಿಕೊಂಡಿತು.

ಆದರೆ ಈ ಬಾರಿ ಪೇಜಾವರ ನೇತೃತ್ವದಲ್ಲಿ ಸ್ವಾಮೀಜಿಗಳು ಅಸ್ಪೃಶ್ಯತೆ ಅಳಿಯಬೇಕು, ಈ ಕೆಲಸವನ್ನು ಧರ್ಮಗುರುಗಳೇ ಮಾಡಬೇಕು ಎಂದು ಫರ್ಮಾನು ಹೊರಡಿಸಿದರು. ಕನಿಷ್ಠ ಸೌಜನ್ಯಕ್ಕಾದರೂ ಅಸ್ಪೃಶ್ಯತೆ ಅಳಿಯಬೇಕು ಎಂದರಲ್ಲ ಎಂದು ನಾವು ಸಮಾಧಾನಪಟ್ಟುಕೊಳ್ಳಬೇಕು. ಹಿಂದೆ ಪೇಜಾವರರು ದಲಿತರ ಕೇರಿಯಲ್ಲಿ ಓಡಾಡಿ ತನ್ನನ್ನು ತಾನು ಪ್ರಗತಿಪರ ಎಂದು ಬಿಂಬಿಸಿಕೊಳ್ಳಲು ಯತ್ನಿಸಿದ್ದರು. ಇಂಥ ಹುಸಿನಾಟಕಗಳನ್ನು ಆಡುವ ಬದಲು ನಿಮ್ಮ ಮಠಕ್ಕೆ ದಲಿತ ಉತ್ತರಾಧಿಕಾರಿ ನೇಮಿಸಿ ಎಂದು ಕೇಳಿದರೆ ಅವರು ನಿಶ್ಯಬ್ದರಾಗುತ್ತಾರೆ. ಪಂಕ್ತಿಭೇದ ಕಿತ್ತುಹಾಕಿ ಎಂದರೆ ಒಪ್ಪುವುದಿಲ್ಲ.
ಪೇಜಾವರರು ದಲಿತರನ್ನು ತಮ್ಮ ಪೀಠಕ್ಕೆ ಉತ್ತರಾಧಿಕಾರಿ ಮಾಡುವುದು ಬೇಡ, ಎಂದೂ ಮಾಂಸಾಹಾರ ಸೇವಿಸದ, ಧರ್ಮಿಷ್ಠರಾದ ಒಬ್ಬ ಬ್ರಾಹ್ಮಣ ಮಹಿಳೆಯನ್ನು ಉತ್ತರಾಧಿಕಾರಿ ಮಾಡಲಿ ನೋಡೋಣ. ಇಂಥ ಸವಾಲುಗಳನ್ನು ಸ್ವೀಕರಿಸುವ ಎದೆಗಾರಿಕೆ ಅವರಿಗಿದೆಯೇ?

*****

ಹೋಗುವುದಿದ್ದರೆ ಮೊದಲು ತೊಲಗಿ ಪೀಡೆಗಳೆ ಎಂದು leavingbangalore.com ಕುರಿತು ಬರೆದಾಗ ನಾನು ನಿರೀಕ್ಷಿಸದಷ್ಟು ಪ್ರತಿಕ್ರಿಯೆಗಳು ಹರಿದು ಬಂದವು. ಈಗಲೂ ದಿನವೂ ಆ ಲೇಖನ ಹುಡುಕಿಕೊಂಡೇ ಸಾಕಷ್ಟು ಜನ ದೇಸೀಮಾತುಗೆ ಬರುತ್ತಿದ್ದಾರೆ.
leavingbangalore.com ಶುರುಮಾಡಿದ ಭೂಪರ ಕುರಿತು ಹಲವರು ಮಾಹಿತಿ ನೀಡಿದ್ದಾರೆ. leavingbangalore.com ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಟಿ.ಎ.ನಾರಾಯಣಗೌಡರನ್ನು ಸಂಪರ್ಕಿಸಿದಾಗ ಅವರು ಪತ್ರಿಕಾ ಹೇಳಿಕೆ ನೀಡಿದರು. ಈ ಕುರಿತು ಕೆಲ ಪೊಲೀಸ್ ಅಧಿಕಾರಿಗಳಿಗೆ ದೂರೂ ಸಹ ಹೋಯಿತು. ಕಡೆಗೆ leavingbangalore.com ಆರಂಭಿಸಿದ ಧೂರ್ತರು ತಮ್ಮ ವೆಬ್‌ಸೈಟ್ ಬಾಗಿಲು ಮುಚ್ಚಿಕೊಂಡು ಹೋಗಿದ್ದಾರೆ.

ಹೋಗುವವರನ್ನು ನಿಂದಿಸುವುದು ಬೇಡ, ಹೋಗೋರೆಲ್ಲ ಒಳ್ಳೆಯವರು ಎಂದು ಹೇಳುತ್ತ ಅವರಿಗೆ ಬೀಳ್ಕೊಡುಗೆ ಕೊಡೋಣ.

*****

ನಾನು ಬ್ಲಾಗ್ ಆರಂಭಿಸಿದಾಗಿನಿಂದ ಇತರ ಬ್ಲಾಗ್‌ಗಳೂ ಪರಿಚಯವಾದವು. ಸಹಜವಾಗಿಯೇ ಅವಧಿ, ಕೆಂಡಸಂಪಿಗೆ, ದಟ್ಸ್ ಕನ್ನಡ, ಸಂಪದ ತರಹದ ಬ್ಲಾಗ್‌ಗಳು ಇಷ್ಟವಾದವು. ಮಾತು ಎಂಬ ಕಾಮನ್ ಫ್ಯಾಕ್ಟರ್ ಇದ್ದ ಕಾರಣದಿಂದ ಸುದ್ದಿಮಾತು ಸಹ ನಾನೇ ಬರೆಯಬಹುದು ಎಂದು ಹಲವರು ಭಾವಿಸಿದ್ದರು. ನನ್ನ ಕೆಲವು ಗೆಳೆಯರಿಗೆ ‘ನಾನವನಲ್ಲ ಎಂದು ಆಣೆ ಮಾಡಿ ಹೇಳಬೇಕಾಯಿತು. ಸುದ್ದಿಮಾತು ತನ್ನ ತೀಕ್ಷ್ಣ ಬರೆಹಗಳಿಂದ ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿದೆ. ಅದಕ್ಕಾಗಿ ಅದನ್ನು ಆರಂಭಿಸಿರುವ ಅನಾಮಿಕ ಗೆಳೆಯರಿಗೆ ಅಭಿನಂದನೆಗಳು.

ಅಮೆರಿಕ ರವಿ ಕುರಿತು ಹೆಚ್ಚೇನು ಗೊತ್ತಿರಲಿಲ್ಲ. ಆದರೆ ಆಳಕ್ಕೆ ಇಳಿದು ಬರೆಯುವ ಅವರ ಶೈಲಿ ಇಷ್ಟವಾಯಿತು. ಹಾಗೆಯೇ ಮಂಜುನಾಥಸ್ವಾಮಿಯವರ ಹಳ್ಳಿಕನ್ನಡದಲ್ಲಿ ಮಣ್ಣಿನ ವಾಸನೆ ಇದೆ. ಸುಂದರ ಹುಡುಗ ಮಲ್ಲಿಕಾರ್ಜುನ ತಿಪ್ಪಾರರ ನನ್ನ ಹಾಡು, ನಾಗೇಂದ್ರ ತ್ರಾಸಿಯವರ ಬಹುಮುಖಿ, ಲಕ್ಷ್ಮಿಕಾಂತ್ ಅವರ ಕವಿಬರಹ ನನಗಿಷ್ಟ.

ಹೊಸ ಸುದ್ದಿ ಏನೆಂದರೆ ಜನಪರ ಚಿಂತಕ, ಪತ್ರಕರ್ತ ಎಂ.ಮಂಜುನಾಥ ಅದ್ದೆ ಸದ್ಯದಲ್ಲೇ ಬ್ಲಾಗ್ ಲೋಕ ಪ್ರವೇಶಿಸುತ್ತಿದ್ದಾರೆ. ಗೆಳೆಯ, ಕಲಾವಿದ, ಪತ್ರಕರ್ತ ಹಾಗು ಸಮರ್ಥ ಲೇಖಕ ಸತೀಶ್ ಬಾಬು ಸಹ ತಮ್ಮ ಬ್ಲಾಗ್ ತೆರೆಯಲು ಸಿದ್ಧತೆ ನಡೆಸಿದ್ದಾರೆ. ಪತ್ರಕರ್ತ ಮಿತ್ರರಾದ ನ.ನಾಗೇಶ್, ಜ್ಞಾನೇಂದ್ರ ಕುಮಾರ್ ಸಹ ಬ್ಲಾಗ್ ಲೋಕ ಪ್ರವೇಶಿಸುತ್ತಿದ್ದಾರೆ. ಸದ್ಯದ ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರಾದ ಪತ್ರಕರ್ತ ವೈ.ಗ.ಜಗದೀಶ್ ಹೊರಗಣವನು ಎಂಬ ಬ್ಲಾಗ್ ತೆರೆದು ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ.

ತುಂಬ ಖುಷಿಯ ವಿಚಾರವೆಂದರೆ ಕಲಾವಿದ ಪುಂಡಲೀಕ ಈಗಾಗಲೇ ಪುಂಡಲೀಕ ಕಲಾಪ್ರಪಂಚದೊಂದಿಗೆ ಪ್ರತ್ಯಕ್ಷವಾಗಿದ್ದಾರೆ. ಸಣ್ಣ ಸಣ್ಣ ಹನಿಗಳೊಂದಿಗೆ ಕೆಣಕುವ ಇವಳು ತನ್ನ ಪಾಡಿಗೆ ತಾನು ಬರೆದುಕೊಂಡಿದ್ದಾಳೆ.

ಬ್ಲಾಗ್ ಲೋಕಕ್ಕೆ ಮೊಟ್ಟಮೊದಲ ಬಾರಿಗೆ ನನ್ನನ್ನು ಸ್ವಾಗತಿಸಿದ ಡೆಕ್ಕನ್ ಹೆರಾಲ್ಡ್ ವರದಿಗಾರ ಸತೀಶ್ ಶಿಲೆ ಯಾವಾಗ ತಮ್ಮ ಬ್ಲಾಗ್ ತೆರೆಯುತ್ತಾರೆ ಅಂತ ಕಾಯುತ್ತಿದ್ದೇನೆ.

*****

ಇದೆಲ್ಲದರ ನಡುವೆ ಬಿ.ಎನ್.ರಮೇಶ್ ಅವರ ನೇತೃತ್ವದಲ್ಲಿ ಒಂದು ಹೊಸ ಸಂಘಟನೆ ರೂಪ ಪಡೆದುಕೊಳ್ಳುತ್ತಿದೆ. ‘ಸಾಮಾಜಿಕ ನ್ಯಾಯಕ್ಕಾಗಿ ಸಮಾನ ಮನಸ್ಕರ ಸಂಘಟನೆ' ಎಂಬುದು ಅವರ ಘೋಷವಾಕ್ಯ. ರಮೇಶ್ ಅವರ ಜತೆ ನಾನು ಹಾಗು ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಸಕ್ರಿಯವಾಗಿರುವ ಹೊಸ ಪೀಳಿಗೆಯ ಜನರೆಲ್ಲ ಇರುತ್ತೇವೆ. ಹಿಂದುಳಿದ ಜಾತಿಗಳು, ದಲಿತರು, ಒಕ್ಕಲಿಗರು, ಅಲ್ಪಸಂಖ್ಯಾತರು, ಲಿಂಗಾಯಿತರು, ಬ್ರಾಹ್ಮಣರು ಹೀಗೆ ಎಲ್ಲ ಸಮುದಾಯಗಳ ಯುವಮನಸ್ಸುಗಳು ಈ ಸಂಘಟನೆಯಲ್ಲಿರುತ್ತವೆ.

ಈ ಸಂಘಟನೆಗೆ ಸಂಬಂಧಿಸಿದ ಕೆಲಸಗಳೆಲ್ಲ ಒಂದೊಂದಾಗಿ ನಡೆಯುತ್ತಿವೆ. ನಾವು ಅಂದುಕೊಂಡಂತೆ ಆದರೆ ಬರುವ ನವೆಂಬರ್ ೨೮ರಂದು ಸಂಘಟನೆಯನ್ನು ನಾವೆಲ್ಲರೂ ಇಷ್ಟಪಡುವ ಅಂಬೇಡ್ಕರ್‌ವಾದಿ, ಮಾಜಿ ಕೇಂದ್ರ ಸಚಿವ ಶ್ರೀನಿವಾಸ ಪ್ರಸಾದ್ ಉದ್ಘಾಟಿಸುತ್ತಾರೆ. ಕನಿಷ್ಠ ಐದುಸಾವಿರ ಜನರು ಪಾಲ್ಗೊಳ್ಳುವ ಈ ಬಹಿರಂಗ ಸಭೆಯಲ್ಲಿ ನಾಲ್ಕು ಪುಸ್ತಕಗಳ ಬಿಡುಗಡೆಯನ್ನೂ ಇಟ್ಟುಕೊಂಡಿದ್ದೇವೆ. ಆ ಬಗ್ಗೆ ಮುಂದೆ ಇನ್ನಷ್ಟು ಬರೆಯುತ್ತೇನೆ.

******

ನೀವು ಜರ್ನಲಿಸ್ಟೋ, ಆಕ್ಟಿವಿಸ್ಟೋ ಎಂದು ನನ್ನ ಗೆಳೆಯರು ಆಗಾಗ ಕಾಲೆಳೆಯುತ್ತಿರುತ್ತಾರೆ. ನಾನೂ ಸಹ ಒಮ್ಮೊಮ್ಮೆ ಈ ಎರಡಕ್ಕೂ ವ್ಯತ್ಯಾಸವೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿರುತ್ತೇನೆ. ಜರ್ನಲಿಸ್ಟ್ ಆದವನು ಆಕ್ಟಿವಿಸ್ಟ್ ಆಗಿರುವುದು ಸರಿಯೇ ಎಂಬುದು ಹಲವರ ಪ್ರಶ್ನೆ.

ಬಾಗೂರು ನವಿಲೆ ಹೋರಾಟದ ಸಂದರ್ಭದಲ್ಲಿ ಆಗಿನ ಹಾಸನ ಜಿಲ್ಲಾ ಮಂತ್ರಿ ಎಚ್.ಡಿ.ರೇವಣ್ಣ ಹೋರಾಟ ನಡೆಸುತ್ತಿದ್ದ ಗಂಡಸರಿಗೆ ಪೊಲೀಸರಿಂದ ಹೊಡೆಸಿ ಜೈಲಿಗಟ್ಟಿದ್ದರು. ಕೈಗೆ ಸಿಗದೆ ಉಳಿದ ಗಂಡಸರು ಊರು ಬಿಟ್ಟಿದ್ದರು.

ಆಗ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪೊಲೀಸ್ ದೌರ್ಜನ್ಯ ನಡೆದ ಹಳ್ಳಿಗಳಲ್ಲಿ ಪಾದಯಾತ್ರೆ ನಡೆಸುವ ತೀರ್ಮಾನವಾಯಿತು. ಆದರೆ ಪಾದಯಾತ್ರೆ ಮಾಡಲು ಯತ್ನಿಸಿದರೆ ನಿಮ್ಮ ಮೇಲೆ ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದು ಅಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಸಾಯಿಕುಮಾರ್ ಶೈಲಿಯಲ್ಲಿ ಅಬ್ಬರಿಸಿದ್ದ.

ತಮಾಶೆ ಎಂದರೆ ಹಾಗೆ ಪೊಲೀಸ್ ಅಧಿಕಾರಿ ಹೇಳುತ್ತಿದ್ದಂತೆ ಒಂದು ಸಣ್ಣ ಗುಂಪು ನಾವು ಇಲ್ಲಿ ಪಾದಯಾತ್ರೆಗೆ ಬಂದಿಲ್ಲ, ಫ್ಯಾಕ್ಟ್ಸ್ ಫೈಂಡಿಂಗ್‌ಗೆ ಬಂದಿದ್ದೇವೆ ಎಂದು ಚದುರಿ ಹೋಯಿತು. ಜನತಾಮಾಧ್ಯಮ ಸಂಪಾದಕ ಆರ್.ಪಿ.ವೆಂಕಟೇಶ್ ಮೂರ್ತಿಯವರ ನೇತೃತ್ವದಲ್ಲಿ ಉಳಿದ ಸುಮಾರು ನೂರಕ್ಕೂ ಹೆಚ್ಚು ಪತ್ರಕರ್ತರು ಪೊಲೀಸರ ಬೆದರಿಕೆ ಲೆಕ್ಕಿಸದೆ ಪಾದಯಾತ್ರೆ ಮಾಡಿದೆವು.

ಆಗಲೂ ನನ್ನನ್ನು ಕಾಡಿದ ಪ್ರಶ್ನೆ: ಪತ್ರಕರ್ತರು ತೀರಾ ನಿರ್ಭಾವುಕರಾಗಿ ವರದಿ ಮಾಡುವುದಕ್ಕೆ ಮಾತ್ರ ಸೀಮಿತವಾಗಬೇಕೆ? ಅನಿವಾರ್ಯ ಅನಿಸಿದಾಗ ಆಕ್ಟಿವಿಸ್ಟ್ ಆದರೆ ತಪ್ಪೇನು?

ಯಾರಾದರೂ ಉತ್ತರಿಸುವಿರಾ?