Thursday, May 21, 2009

ಇಲ್ಲೇ ಇದ್ದಾರೆ ಭಯೋತ್ಪಾದಕರು!

ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಹತ್ಯೆಯಾದ ಸಂದರ್ಭದಲ್ಲಿ ಸುವರ್ಣ ನ್ಯೂಸ್ ಚಾನೆಲ್‌ಗೆ ಪತ್ರಕರ್ತ ಇಸ್ಮಾಯಿಲ್ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದರು. `ಆಯುಧ ಕೈಯಲ್ಲಿ ಬಂದ ಮೇಲೆ ಯಾರ ಕೈಗೆ ಸಿಕ್ಕರೂ ಅದು ಅಪಾಯಕಾರಿ. ಒಳ್ಳೆಯ ಕೊಲೆ, ಕೆಟ್ಟ ಕೊಲೆ ಎಂಬ ವಿಭಾಗಗಳಿರಲು ಸಾಧ್ಯವಿಲ್ಲ. ಎಲ್ಲ ಕೊಲೆ, ಹಿಂಸೆಯಲ್ಲೂ ಕೆಟ್ಟದ್ದೇ ಇರುತ್ತದೆ.

ಪ್ರಭಾಕರನ್ ಸಾಯಿಸಿದ್ದು ಅಥವಾ ಅವನ ನಿರ್ದೇಶನದಂತೆ ಸಾಯಿಸಲ್ಪಟ್ಟವರು ಸುಮಾರು ೭೦,೦೦೦ ಜನರು ಎಂಬ ಮಾಹಿತಿಗಳಿವೆ. ಈ ಪೈಕಿ ಅತಿಹೆಚ್ಚು ಮಂದಿ ಅಮಾಯಕ ನಾಗರಿಕರೇ ಆಗಿದ್ದರು. ತಮಿಳರ ಸ್ವಾತಂತ್ರ್ಯದ ಹೋರಾಟವನ್ನು ತಾನು ಕೈಗೆತ್ತಿಕೊಂಡಿರುವುದಾಗಿ ಅವನು ಹೇಳುತ್ತ ಬಂದರೂ, ಪ್ರಭಾಕರನ್‌ನಿಂದ ಅತಿಹೆಚ್ಚು ಅನ್ಯಾಯಕ್ಕೊಳಗಾದವರು, ಹಿಂಸೆಗೊಳಗಾದವರು, ಸತ್ತವರು ತಮಿಳರೇ ಎಂಬುದು ದೊಡ್ಡ ವ್ಯಂಗ್ಯ,

ಪ್ರಭಾಕರನ್ ಪ್ರಜಾಪ್ರಭುತ್ವವಾದಿ ಮಾರ್ಗವನ್ನು ತ್ಯಜಿಸಿದ್ದ; ಆಯುಧದ ಮೂಲಕವೇ ತನ್ನ ಕನಸಿನ ತಮಿಳು ರಾಷ್ಟ್ರ ಕಟ್ಟಲು ಬಯಸಿದ್ದ. ಅದು ಅವನ ಕರ್ಮ. ಆದರೆ ಪ್ರಜಾಪ್ರಭುತ್ವವಾದಿ ಮಾರ್ಗದಲ್ಲಿ ನಡೆಯುವವರ ವಿರುದ್ಧ ಇದ್ದ ಅವನ ಅಸಹನೆಯ ಮಟ್ಟವಾದರೂ ಎಂಥದ್ದು? ಶ್ರೀಲಂಕಾದ ರಾಜಕಾರಣದಲ್ಲಿ ತೊಡಗಲು ಬಯಸಿದ, ತಮಿಳರ ಹೋರಾಟವನ್ನು ಅಹಿಂಸಾತ್ಮಕವಾಗಿ ಮುನ್ನಡೆಸಿದ ಸಾಕಷ್ಟು ತಮಿಳು ನಾಯಕರನ್ನೇ ಆತ ಆಹುತಿ ತೆಗೆದುಕೊಂಡಿದ್ದ.

ಮೂಲತಃ ಶ್ರೀಲಂಕ ದೇಶವು ಹೋರಾಟದ ಮೂಲಕ ಸ್ವಾತಂತ್ರ್ಯ ಗಳಿಸಿಕೊಂಡಿದ್ದಲ್ಲ. ಬ್ರಿಟಿಷರು ಭಾರತವನ್ನು ಬಿಟ್ಟು ಹೋದ ನಂತರ ಶ್ರೀಲಂಕಾವನ್ನೂ ಬಿಟ್ಟು ಹೋದರು. ಆದರೆ ಶ್ರೀಲಂಕ ಆಯ್ದುಕೊಂಡ ಪ್ರಜಾಪ್ರಭುತ್ವ ಎಲ್ಲರನ್ನು ಒಳಗೊಳ್ಳುವಂಥ ಅಂಶಗಳನ್ನು ಹೊಂದಿರಲಿಲ್ಲ. ಅಲ್ಲಿನ ತಮಿಳರಿಗೆ ಹಕ್ಕುಗಳನ್ನು ನಿರಾಕರಿಸಲಾಯಿತು. ಬಹುಸಂಖ್ಯಾತ ಸಿಂಹಳೀಯರ ಆರ್ಭಟದಲ್ಲಿ ಅಲ್ಪಸಂಖ್ಯಾತ ತಮಿಳರು ಸಾಕಷ್ಟು ಶೋಷಣೆಗಳಿಗೆ ಒಳಗಾಗಬೇಕಾಯಿತು. ಇದರ ವಿರುದ್ಧ ಹುಟ್ಟಿಕೊಂಡ ಎಲ್‌ಟಿಟಿಇಗೆ ತಮಿಳು ಸಮುದಾಯದಲ್ಲಿ ಸಹಾನುಭೂತಿ ಇದ್ದದ್ದು ನಿಜ. ಆದರೆ ಪ್ರಭಾಕರನ್ ತುಳಿದ ಹಾದಿ ಈ ಸಹಾನುಭೂತಿಯನ್ನು ನಾಶಪಡಿಸುತ್ತ ಬಂತು.

ಪ್ರಭಾಕರನ್ ತನ್ನ ಅರ್ಹತೆಗೆ ತಕ್ಕನಾದ ಸಾವನ್ನೇ ತಂದುಕೊಂಡಿದ್ದಾನೆ. ಹಿಂಸೆಯ ಹಾದಿಯಲ್ಲಿ ಸಾಗುವವರ ಬದುಕು ಹೀಗೇ ಅಂತ್ಯವಾಗುತ್ತದೆ ಎಂಬುದು ಜಾಗತಿಕ ಸತ್ಯ. ಅದಕ್ಕಾಗಿ ಮರುಗುವುದು ಕೊರಗುವುದು ಅನಗತ್ಯ. ಇದನ್ನು ತಮಿಳರೂ ಅರ್ಥಮಾಡಿಕೊಂಡ ಹಾಗಿದೆ.

ಪ್ರಭಾಕರನ್ ಸತ್ತರೆ ಮರುಕ ಪಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಕೆಲವು ದಿನಗಳ ಹಿಂದಷ್ಟೆ ಎನ್‌ಡಿಟಿವಿ ಜತೆಯಲ್ಲಿ ಮಾತನಾಡುತ್ತ ಹೇಳಿದ್ದರು. ಆದರೆ ಪ್ರಭಾಕರನ್ ಸತ್ತ ನಂತರ ಕರುಣಾನಿಧಿ ಆ ಕುರಿತು ಏನನ್ನೂ ಹೇಳುತ್ತಿಲ್ಲ. ಅವರು ಲಂಕಾ ತಮಿಳರ ಕುರಿತಷ್ಟೇ ಮಾತನಾಡುತ್ತಿದ್ದಾರೆ. ಎಲ್‌ಟಿಟಿಇ ಸಂಘಟನೆಯ ಉಗ್ರ ಬೆಂಬಲಿಗ ವೈಕೋ ಇತ್ತೀಚಿಗೆ ಮಾತನಾಡುತ್ತ, ಒಂದೊಮ್ಮೆ ಪ್ರಭಾಕರನ್ ಸತ್ತರೆ ತಮಿಳುನಾಡು ಹೊತ್ತುರಿಯುತ್ತದೆ ಎಂದಿದ್ದರು. ತಮಿಳುನಾಡು ಸ್ಥಬ್ದವಾಗಿದೆ. ರಕ್ತಪಾತವಿರಲಿ, ಒಂದು ಹೆದ್ದಾರಿ ಬಂದ್ ಆದ ವರದಿಗಳೂ ಕಾಣಿಸುತ್ತಿಲ್ಲ. ಲೋಕಸಭಾ ಚುನಾವಣೆಯಲ್ಲಿ ಎಲ್‌ಟಿಟಿಇ ಬೆಂಬಲಿಗ ಪಕ್ಷಗಳನ್ನು ತಮಿಳುನಾಡಿನ ಜನರು ನಿರ್ದಾಕ್ಷಿಣ್ಯವಾಗಿ ಮನೆಗೆ ಕಳುಹಿಸಿದ್ದಾರೆ.

ತಮಿಳರು ಸ್ವಾಭಾವತಃ ಭಾವುಕರು. ಆದರೆ ಪ್ರಭಾಕರನ್ ಸಾವು ಅವರನ್ನು ಅಷ್ಟಾಗಿ ಕಾಡಿಲ್ಲದೇ ಇರುವುದಕ್ಕೂ ಕಾರಣಗಳಿವೆ. ಎಲ್‌ಟಿಟಿಇ ಮತ್ತು ಪ್ರಭಾಕರನ್ ಕುರಿತಾದ ಮೋಹವನ್ನು ಬಹಳಷ್ಟು ತಮಿಳರು ತೊರೆದು ಬಹಳ ಕಾಲವೇ ಆಗಿದೆ. ರಾಜೀವ್ ಗಾಂಧಿ ಕೊಲೆ ತಮಿಳರ ಪಾಲಿಗೆ ದೊಡ್ಡ ಆಘಾತ. ಭಾಷಾ ದುರಾಂಧರನ್ನು ಹೊರತುಪಡಿಸಿದರೆ, ಸಾಮಾನ್ಯ ತಮಿಳರಿಗೆ ದೇಶದ ಮಾಜಿ ಪ್ರಧಾನಿಯ ಕೊಲೆ ಅತ್ಯಂತ ಹೀನ ಕೃತ್ಯ. ಹೀಗಾಗಿ ಪ್ರಭಾಕರನ್ ಸತ್ತಾಗ ತಮಿಳುನಾಡು ಅಲುಗಾಡದಂತೆ ಸುಮ್ಮನಿದೆ.

ಈ ಚಿತ್ರವನ್ನೊಮ್ಮೆ ನೋಡಿ.




ತಮಿಳುನಾಡಿನ ತಮಿಳರೇ ಸುಮ್ಮನಿರುವಾಗ ಬೆಂಗಳೂರಿನಲ್ಲಿ ಸಮಾನ ಮನಸ್ಕರ ವೇದಿಕೆ ಎಂಬ ಹೆಸರಿನ ಹುಸಿ ಸಂಘಟನೆಯೊಂದನ್ನು ಮಂಗಳವಾರ ಪ್ರತಿಭಟನೆ ನಡೆಸಿದೆ. ಪ್ರತಿಭಟನಾಕಾರರ ಕೈಯಲ್ಲಿ ೭೦ ಸಾವಿರ ಜನರನ್ನು ಕೊಂದ ದುಷ್ಟನ ಭಾವಚಿತ್ರ! ದೇಶದ ಮಾಜಿ ಪ್ರಧಾನಿಯನ್ನು ಕೊಂದವನ ಭಾವಚಿತ್ರವನ್ನು ಈ ಜನರು ಎಗ್ಗಿಲ್ಲದೆ, ನಾಚಿಕೆಯಿಲ್ಲದೆ ಹಿಡಿದು ನಿಂತಿದ್ದಾರೆ. ಇವರನ್ನೇನನ್ನುವುದು?

ಈ ಪ್ರತಿಭಟನೆಯನ್ನು ಆಯೋಜಿಸಿದ ಮಹಾಶಯ ಜೆಡಿಎಸ್ ಪಕ್ಷಕ್ಕೆ ಸೇರಿದವನು. ಕೆ.ಆರ್.ಪುರಂ ಜೆಡಿಎಸ್ ಘಟಕದ ಅಧ್ಯಕ್ಷ. ಆತ ಕರೆತಂದಿರುವ ಸ್ಲಮ್ಮಿನ ತಮಿಳರಿಗೆ ಪ್ರಭಾಕರನ್ ಯಾರೆಂದು ಗೊತ್ತಿದೆಯೋ ಇಲ್ಲವೋ? ತಮಿಳರ ಓಟಿಗಾಗಿ ರಾಜಕೀಯ ಪಕ್ಷಗಳು ಎಂಥ ಕೊಳಕು ಕಾರ್ಯಗಳಿಗೂ ಕೈ ಹಾಕಬಲ್ಲರು ಎಂಬುದಕ್ಕೆ ಈ ಪ್ರತಿಭಟನೆ ಸಾಕ್ಷಿ.

ದೇಶದ ಮಾಜಿ ಪ್ರಧಾನಿಯ ಕೊಲೆಗಡುಕನ ಫೋಟೋ ಹಿಡಿದು ಪ್ರತಿಭಟಿಸಲು ಬೆಂಗಳೂರು ಪೊಲೀಸರು ಅನುಮತಿ ನೀಡಿದ್ದಾದರೂ ಹೇಗೆ? ಒಂದೊಮ್ಮೆ ಗೊತ್ತಿಲ್ಲದೆ ಅನುಮತಿ ನೀಡಿದ್ದರೂ, ಇಂಥದ್ದೊಂದು ದೇಶದ್ರೋಹದ ಕೃತ್ಯವೆಸಗಿದ್ದಕ್ಕೆ ಅವರೇನು ಕ್ರಮ ಕೈಗೊಂಡರು? ಕಿಟಕಿ ಗಾಜು ಒಡೆದ ಕನ್ನಡ ಹೋರಾಟಗಾರರ ಮೇಲೆ ಗೂಂಡಾ ಕಾಯ್ದೆ ಹೇರುವ ಪೊಲೀಸರು, ಒಬ್ಬ ಜಾಗತಿಕ ಭಯೋತ್ಪಾದಕನ ಭಾವಚಿತ್ರ ಹಿಡಿದು ಪ್ರತಿಭಟಿಸುವವರನ್ನು ಹೇಗೆ ಬಿಟ್ಟು ಬಿಡುತ್ತಾರೆ?

ಮುಂಬೈ ದಾಳಿಕೋರ ಅಜ್ಮಲ್ ಅಮೀರ್ ಕಸಬ್‌ನ ಪೋಟೋ ಹಿಡಿದು ನಾಳೆ ಯಾವುದೋ ಸಂಘಟನೆಯವರು ಪ್ರತಿಭಟನೆ ಮಾಡಿದರೆ? ಆಗ ನಮ್ಮ ಸಮಾಜ ಹೇಗೆ ಸ್ವೀಕರಿಸುತ್ತದೆ? ಅಥವಾ ಒಸಾಮ ಬಿನ್ ಲ್ಯಾಡೆನ್ ಫೋಟೋ ಹಿಡಿದು ಮತ್ತಾರೋ ಧರ್ಮ ದುರಾಂಧರು ಪ್ರತಿಭಟಿಸಬಹುದು. ಮಾಲೆಗಾಂವ್ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಭಾವಚಿತ್ರ ಹಿಡಿದು ಇನ್ನ್ಯಾರೋ ಭಿಕಾರಿಗಳು ಬೀದಿಯಲ್ಲಿ ನಿಲ್ಲಬಹುದು. ಅವರನ್ನೂ ಸಹಿಸಿಕೊಳ್ಳಬೇಕೆ?

ಬೆಂಗಳೂರಿನಲ್ಲಿ ಎಲ್‌ಟಿಟಿಇ ಪರವಾದ ಒಂದು ಗುಂಪು ಮೊದಲಿನಿಂದಲೂ ಸಕ್ರಿಯವಾಗಿದೆ. ಎಲ್‌ಟಿಟಿಇ ಜತೆ ನೇರ ಸಂಪರ್ಕ ಇಟ್ಟುಕೊಂಡ ಸಾಕಷ್ಟು ಜನ ಇಲ್ಲಿದ್ದಾರೆ. ಈ ಕಾರಣಕ್ಕೇ ರಾಜೀವ್ ಹತ್ಯೆ ಆರೋಪಿಗಳು ತಮ್ಮ ಪರವಾದ ಸಹಾನುಭೂತಿ ಇರುವ ಜನರನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದು, ಇಲ್ಲಿ ಸಾವನ್ನಪ್ಪಿದ್ದರು. ಡಾ.ರಾಜಕುಮಾರ್ ಅಪಹರಣ ಸಂದರ್ಭದಲ್ಲಿ ಎಲ್‌ಟಿಟಿಇ ಬೇಡಿಕೆಗಳನ್ನೇ ವೀರಪ್ಪನ್ ಮುಂದಿಟ್ಟಿದ್ದರ ಹಿಂದೆಯೂ ಬೆಂಗಳೂರಿನ ಎಲ್‌ಟಿಟಿಇ ಭಕ್ತರ ಚಿತಾವಣೆ ಇತ್ತು. ವೀರಪ್ಪನ್‌ಗೆಂದು ಕಳುಹಿಸಲಾದ ಹಣದಲ್ಲಿ ಒಂದು ಭಾಗ ಈ ಜನರ ಕೈಗೂ ಸೇರಿತು ಎಂಬುದು ರಹಸ್ಯವೇನೂ ಅಲ್ಲ.

ಸದ್ಯಕ್ಕೆ ಶ್ರೀಲಂಕದಲ್ಲಿ ಸರ್ವನಾಶವಾಗಿರುವ ಎಲ್‌ಟಿಟಿಇ, ಹೊಸ ನೆಲೆಗಳನ್ನು ಹುಡುಕಿಕೊಳ್ಳಲು ಯತ್ನಿಸುವುದು ಸಹಜ. ಈಗಾಗಲೇ ಸಾಕಷ್ಟು ಮಂದಿ ಎಲ್‌ಟಿಟಿಇ ಉಗ್ರರು ತಮಿಳುನಾಡು, ಆಂಧ್ರ, ಕರ್ನಾಟಕವನ್ನು ಸೇರಿಕೊಂಡಿರುವ ಸಾಧ್ಯತೆಗಳಿವೆ ಎಂದು ಗುಪ್ತಚರ ವರದಿಗಳು ಹೇಳುತ್ತಲೇ ಬಂದಿವೆ. ಬಂದವರಿಗೆ ಬೆಂಗಳೂರಿನ ಎಲ್‌ಟಿಟಿಇ ಭಕ್ತರು ಆಶ್ರಯ ನೀಡದೇ ಇರುತ್ತಾರೆಯೇ? ಪ್ರಭಾಕರನ್ ಭಾವಚಿತ್ರ ಹಿಡಿದು ಬೀದಿಯಲ್ಲಿ ನಿಲ್ಲುವ ಧೈರ್ಯವಿರುವ ಮಂದಿ, ತಮ್ಮ ತಮ್ಮ ಮನೆಯಲ್ಲಿ ಬಂದೂಕು ಹಿಡಿದ ಉಗ್ರರನ್ನು ಇಟ್ಟುಕೊಳ್ಳಲಾರರು ಎಂದು ನಂಬುವುದಾದರೂ ಹೇಗೆ?

ಮೊನ್ನೆ ಪ್ರತಿಭಟನೆ ನಡೆಸಿ ಪೌರುಷ ತೋರಿದ ಬೆಂಗಳೂರಿನ ಹುಲಿಗಳನ್ನೆಲ್ಲ ಠಾಣೆಗೆ ಕರೆತಂದು ಪೊಲೀಸರು ಇದೆಲ್ಲ ಪ್ರಶ್ನೆಗಳನ್ನು ಕೇಳಬೇಕಾಗಿದೆ. ಒಂದೊಮ್ಮೆ ಅವರು ನಿಜವಾದ ಪ್ರಭಾಕರನ್ ಭಕ್ತರೇ ಆಗಿದ್ದರೆ, ಶ್ರೀಲಂಕ ಪೊಲೀಸರಿಗೆ ಕೊಟ್ಟು ಕೈ ತೊಳೆದುಕೊಳ್ಳುವುದು ಒಳ್ಳೆಯದು.

ಇಲ್ಲವಾದಲ್ಲಿ ಬೆಂಗಳೂರು ಮುಂದಿನ ದಿನಗಳಲ್ಲಿ ನೆಮ್ಮದಿಯಾಗಿರಲು ಸಾಧ್ಯವಿಲ್ಲ.

Tuesday, May 12, 2009

ಎರಡು ಪ್ರತಿಕ್ರಿಯೆಗಳಿಗೆ ಒಂದು ಪ್ರತಿಕ್ರಿಯೆ

ಅಮಾಯಕರ ಮನೆಯೊಳಗಿನ ಬಡತನ ಯಾವತ್ತು ಕಾಣುವುದಿಲ್ಲ.

ಡಿಯರ್ ದಿನೇಶ್,
ಸಂತೋಷ್ ಹೆಗ್ಡೆಯವರ ‘ಬ್ಯೂಟಿಪಾರ್ಲರ್’ ಪದ ಬಳಕೆಯ ಬಗ್ಗೆ ನೀವು ಎತ್ತಿರುವ ಆಕ್ಷೇಪ ಮೆಚ್ಚಬಹುದಾದರು, ನೀವು ಅಗ್ರಹಾರದ ಗೊಂಡಾರಣ್ಯದಲ್ಲಿ ಬಿದ್ದು ಸಾಮಾಜಿಕ ನ್ಯಾಯಕ್ಕಾಗಿ ಚೀರುತ್ತಿರುವಂತೆ ನನಗೆ ಕಾಣಿಸುತ್ತಿದೆ. ಭಯೋತ್ಪಾದನೆ ನಿಗ್ರಹಕ್ಕಾಗಿ ಬ್ಲಾಗ್, SMS, ಇಮೇಲ್, ಟೀಶರ್ಟ್ ಗಳಲ್ಲಿ ಪ್ರಾಣಕೊಡಲು ಸಿದ್ಧರಿರುವ ಸನಾತನಿಗಳ ಸಂಖ್ಯೆ ನಮ್ಮ ಸುತ್ತಲು ಕೋಟಿಯ ಲೆಕ್ಕದಲ್ಲಿ ಸಿಗುತ್ತದೆ. ಅದೇ ಅಸ್ಪೃಶ್ಯತೆ ನಿಗ್ರಹಕ್ಕಾಗಿ ನಿಮ್ಮಲ್ಲೇನಾದರೂ ಒನ್ ಪಾಯಿಂಟ್ ಪ್ರೊಗ್ರಾಮ್ ಇದೆಯಾ ಅಂತ ಸನಾತನ ಮಠಗಳಿಗೆ, ಸನಾತನ ಸರ್ಕಾರಗಳಿಗೆ, ಅಷ್ಟೇಕೆ ಖುದ್ದು ಸನಾತನಿಗಳಿಗೆ ಕೇಳಿ ನೋಡಿ, ತಕ್ಷಣವೇ ಅವರೆಲ್ಲ ತಮ್ಮ ಕಣ್ಣು ಕಿವಿ ಮೂಗು ಬಾಯಿಗಳನ್ನು ಕಳೆದುಕೊಂಡು ಶಿಲಾಯುಗವಾಸಿಗಳಾಗುತ್ತಾರೆ.

ಪುಡಿಗಾಸಿಗೆ ಗಡಿಗಳಲ್ಲಿ ಜೀತಕ್ಕಿರುವ ನಮ್ಮ ಸೈನಿಕರನ್ನು ಕಂಡು ನನಗೆ ಅಯ್ಯೋ ಅನ್ನಿಸುತ್ತದೆ. ಈ ಮಹಾನ್ ದೇಶದ ದೇಶಪ್ರೇಮ ಅವರನ್ನು ಅಲ್ಲಿ ದುಡಿಯುವಂತೆ ಮಾಡಿದೆ ಎಂದುಕೊಂಡಿರುವ ಸನಾತನಿಗಳಿಗೆ, ಆ ಅಮಾಯಕರ ಮನೆಯೊಳಗಿನ ಬಡತನ ಯಾವತ್ತು ಕಾಣುವುದಿಲ್ಲ. ನನಗೆ ಆ ಸೈನಿಕರು ಬರಿ ಗಡಿಗಳನ್ನು ಕಾಯುತ್ತಿಲ್ಲ, ಈ ದೇಶದ ಮಡಿ ಮೈಲಿಗೆಯ ವಿಕಾರಗಳನ್ನು, ಮತಾಂಧರ, ಧರ್ಮದ ತಲೆಹಿಡುಕರ, communal butcherಗಳ ಸೈತಾನಿ ತೆವಲುಗಳನ್ನು ತಮ್ಮ ಪ್ರಾಣ ಒತ್ತೆ ಇಟ್ಟು ಕಾಯುತ್ತಿದ್ದಾರೆನಿಸುತ್ತದೆ. ದಲಿತರು ಮನುಷ್ಯರಲ್ಲ, ಆದರೆ ಅವರು ಹಿಂದೂಗಳು ಎಂದು ಹೇಳುವಷ್ಟು ದೊಡ್ಡಗುಣ ಸನಾತನಿಗಳ ನಾಲಿಗೆಗಿದೆ. ಇಂಥ ನಾಲಿಗೆಯೇ ಇವತ್ತು ಕೊರಮರನ್ನು ಕಳ್ಳಖದೀಮರನ್ನು ಒಂದೇ ಪಟ್ಟಿಗೆ ಸಲೀಸಾಗಿ ಸೇರಿಸುತ್ತದೆ. ಇನ್ನು ಇಂಥವರ ಪಟ್ಟಿಗಳಲ್ಲಿ ಮುಸ್ಲಿಮರ ಶ್ರಮಜೀವಿಗಳ ಸ್ಥಾನಮಾನ ಎಂಥದ್ದು ಎಂಬುದನ್ನು ಈ ದೇಶದ ಯಾರು ಬೇಕಾದರೂ ಸುಲಭವಾಗಿ ಗ್ರಹಿಸಬಹುದು.

ಈ ದೇಶದ ಸಾಮಾಜಿಕ ನ್ಯಾಯದ ಬಗ್ಗೆಯೇ ನನಗೆ ಅನೇಕ ಗುಮಾನಿಗಳಿವೆ. ಲೋಕಾಯುಕ್ತ ಅನ್ನುವುದು ಕೂಡ ಸಂಪೂರ್ಣ ಸಾಚಾ ಇಲಾಖೆಯೇನಲ್ಲ. ಅದು ಆಯಾ ಸರ್ಕಾರದ ಕೃಪಾಪೋಷಿತ ನಾಟಕ ಶಾಲೆ. ಸಂತೋಷ್ ಹೆಗ್ಡೆಯವರು ರಾಶಿಗಟ್ಟಲೆ ಕಾನೂನು ಪುಸ್ತಕಗಳನ್ನೇ ಓದಿರಬಹುದು, ಆದರೆ ಅವರ ತಲೆ ಮಿದುಳುಗಳಲ್ಲಿ ‘ಮನು’ವಿನಂಥ ಒಬ್ಬ ಕ್ರಿಮಿಯಿದ್ದರೆ ಸಾಕಲ್ಲವೇ ಸಾಮಾಜಿಕ ನ್ಯಾಯ ಅನ್ನುವುದು ತಬ್ಬಲಿಯಾಗಲು.

ಹುಟ್ಟಿಗೂ-ಪ್ರತಿಭೆಗೂ, ಜಾತಿಗೂ-ಪ್ರತಿಭೆಗೂ ಏನೇನೂ ಸಂಬಂಧ ಇಲ್ಲದಿರುವುದನ್ನೂ ಕಾಣುವಷ್ಟಾದರೂ ‘ಪ್ರತಿಭೆ’ ಈ ದೊಡ್ಡ ದೇಶಕ್ಕಿನ್ನು ಬಂದಿಲ್ಲ. ದಲಿತರು, ಹಿಂದುಳಿದವರು, ಹಳ್ಳಿಗರು, ಶ್ರಮಿಕರನ್ನು ವಂಚಿಸುವ ಬುದ್ಧಿಯೇ ಭಾರತದಲ್ಲಿ ಪ್ರತಿಭೆ ಎನಿಸಿಕೊಂಡಿದೆ. ಅಗ್ರಹಾರದ ಬೀದಿಗಳಿಂದ ದೇಶಕಾಯಲು ಹೋರಾಟ ಸನಾತನಿಗಳ ಅಂಕಿ ಸಂಖ್ಯೆಯ ಲೆಕ್ಕಾಚಾರದ ಅಂಶಗಳ ಬಗ್ಗೆ ಯಾರಾದರೂ ಬ್ಲಾಗ್ ನ ವೀರಾಧಿವೀರರು ಮಾಹಿತಿ ಕೊಟ್ಟರೆ ನಾನವರಿಗೆ ಋಣಿ.

chandrashekhar aijoor
May 9, 2009


ಸೂಳೆಗಾರಿಕೆ ಹೋಲಿಕೆ ಬೇಕಿತ್ತೆ?

ಶ್ರೀ. ದಿನೇಶ್ ,

ನಿಮ್ಮ ಸಾಮಾಜಿಕ ವಿನ್ಯಾಸದ ಕುರಿತಾಗಿನ ಕಳಕಳಿ ಮತ್ತು ಬದ್ದತೆಗೆ ಧನ್ಯವಾದಗಳು. ಬಳಸುವ ಪದ ಅಥವಾ ವಾಕ್ಯಗಳು ಅಪ್ರಜ್ನ್ಯಾಪೂರ್ವಕವಾಗಿಯಾದರೂ ಸರಿಯೆ ಅದರ ಹಿ೦ದಿನ ರಾಜಕಾರಣ ಮಾತ್ರ ಒ೦ದಷ್ಟು ಸಮುದಾಯಗಳ ಅನನ್ಯತೆಯನ್ನು ಅವರ ಬದುಕಿನ ಕ್ರಮಗಳನ್ನು ಅವಹೇಳನ ಮಾಡುವ ಪರಿಯಲ್ಲಿರುತ್ತದೆ ಎ೦ಬುದಕ್ಕೆ ನೀವೇ ಕೊಟ್ಟಿರುವ ಅನೇಕ ಉದಾಹರಣೆಗಳೇ ಜ್ವಲ೦ತ ಸಾಕ್ಶಿ.

ಬಹುಷ: ಶ್ರೀ. ಸ೦ತೋಷ ಹೆಗಡೆಯವರ ಮಾತನ್ನು ಪ್ರಸ್ತುತ ಸಮಾಜದಲ್ಲಿ ಸೌ೦ದರ್ಯ ಮತ್ತು ಸೌ೦ದರ್ಯವರ್ಧಕಗಳ ಲಾಬಿ ಹೆಸರಲ್ಲಿ ನಡೆಯುತ್ತಿರುವ ದ೦ದೆಯನ್ನು ವಿವರಿಸಿರಬಹುದೇ ಅಥವಾ ಸ್ತ್ರೀ ಪುರುಷರಿಬ್ಬರೂ ಸು೦ದರವಾಗಿರಲೇಬೇಕೆ೦ಬ ಪುರುಷಾಧಿಪತ್ಯ ಮೌಲ್ಯ ಮತ್ತು ಸರಕು-ಗ್ರಾಹಕ ಸ೦ಸ್ಕೃತಿಯ ಹಿನ್ನಲೆಯಲ್ಲಿ ಪ್ರಸ್ತಾಪಿಸಿರಲೂಬಹುದು. [ ಸ್ವಚ್ಚತೆ ಬೇರೆ..ಸೌ೦ದರ್ಯದ ಕುರಿತಾಗಿನ ಮೀಮಾ೦ಸೆ ಬೇರೆ ಎನ್ನು ವುದು ತಮಗೂ ತಿಳಿದಿರಬಹುದು.] ಆದರೆ ಮಾತ್ರ ದುಡಿಮೆ ಹಿ೦ದಿರುವ ಜನವರ್ಗಗಳ ಪರಿಸ್ಥಿತಿ ಮಾತ್ರ ಅರ್ಥವಾಗಬೇಕು ಎ೦ಬ ನಿಮ್ಮ ನಿಲುವು ಸರಿಯಾಗಿಯೇ ಇದೆ.

ನನಗೆ ಆಶ್ಚರ್ಯವೆನ್ನಿಸಿದ್ದು..ಭಾಷೆ ಬಗ್ಗೆ ಮಾತನಾಡುವಾಗ..ಸಹಜವಾಗಿಯೋ ಅಥವಾ ಅಪ್ರಜ್ಞಾಪೂರ್ವಕವಾಗಿಯೋ.. ನೀವು ಬಳಸಿರುವ ಬಾಷೆ ಚರ್ಚೆಗೆ ಗ್ರಾಸವಾಗುತ್ತದೆ. ನಮ್ಮ ಸಮಾಜ ಶ್ರೇಣೀಕೃತ ವ್ಯವಸ್ಥೆ ನಿರ್ಮಿಸಿಕೊಟ್ಟ ಹಾಗೆ ಲಿ೦ಗ ವ್ಯವಸ್ಥೆಯನ್ನೂ ಬಹಳ ಥಳುಕಿನಿ೦ದ ಅಥವಾ ಅಮೂರ್ತ ಸ್ವರೂಪದಲ್ಲಿ ನಿರೂಪಿಸುತ್ತಾ ಬ೦ದಿದ್ದು ಅದರ ಪರಿಣಾಮವಾಗಿ ತಾವು ಕೆಟ್ಟ-ಅಶುದ್ದ ಎ೦ಬ ಪರಿಕಲ್ಪನೆಯಲ್ಲಿ ಮಹಿಳೆಯರ ನ್ನು “ಸೂಳೆಗಾರಿಕೆ-ವೇಶ್ಯಾವಾಟಿಕೆ ” ಪದ ಪ್ರಯೋಗ ಮಾಡಿದ್ದೀರೀ. ಇಲ್ಲೂ ಕೂಡಾ ವ್ಯವಸ್ಥೆಯ ಬಲಿಪಶುಗಳೇ , ವ೦ಚನೆಗಾರರು, ಕೊಲೆಗಡುಕರು ,ದರೋಡೆಕೋರರು. ವೇಶೇಯರು.. ತಲೆ ಹಿಡುಕರ- ವಿಟ ಪುರುಷರು. ಎ೦ಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದರರ್ಥ ಇವೆಲ್ಲವೂ ಸರಿ ಅಥವಾ ತಪ್ಪು ಎ೦ಬ ನಿರ್ಣಯಕ್ಕೆ ನಾನು ಬರುತ್ತಿಲ್ಲ. ಬದಲಿಗೆ ಸಾಮಾಜಿಕ ಸ್ತರವಿನ್ಯಾಸದಲ್ಲಿ ಕಾಯಕವನ್ನು ಕ೦ಡ ಬಗೆಯ ಹಿ೦ದಿರುವ ದೃಷ್ಟಿಕೋನವನ್ನು ಮರುಚಿ೦ತಿಸಬೇಕೇನೋ ಎ೦ದೆನ್ನಿಸಿದೆ.

ಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ಯೋಚಿಸುವ ಪ್ರತಿಯೊಬ್ಬರೂ ಇ೦ಥ ವ್ಯವಸ್ಥೆಯಲ್ಲಿ ನಲುಗುವ ಅನೇಕ ಅನನ್ಯತೆಗಳ..ಕುರಿತೂ ಕಾಳಜಿಯನ್ನುವ್ಯಕ್ತಪಡಿಸಿದರೆ ..ನಿಜವಾಗಿಯೂ ನಮ್ಮ ವೈಚಾರಿಕತೆಗೆ ನ್ಯಾಯ ಒದಗಿಸಿದ೦ತಾಗುತ್ತದೆ.

ದೇಸೀ ಮಾತು ಮೂಲಕ ಬ್ಲಾಗ್ ತೆರೆದು ಮಾತುಕತೆ ಮೂಲಕ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದೀರಿ. ಧನ್ಯವಾದಗಳು.

Kirankumari
May 6, 2009


ನಾನು ಹಿಂದೆ ಬರೆದಿದ್ದ ಲೇಖನವೊಂದಕ್ಕೆ ಚಂದ್ರಶೇಖರ್ ಐಜೂರ್ ಹಾಗು ಕಿರಣ ಕುಮಾರಿಯವರು ಅವಧಿಯಲ್ಲಿ ಕಳೆದ ವಾರ ಪ್ರತಿಕ್ರಿಯಿಸಿರುವುದನ್ನು ಗಮನಿಸಿದೆ. ಈ ಎರಡೂ ಪ್ರತಿಕ್ರಿಯೆಗಳು ತುಂಬ ತೀಕ್ಷ್ಣವಾಗಿ ಕಾಡುವಂಥವುಗಳಾದ್ದರಿಂದ ಅವೆರಡನ್ನೂ ಇಲ್ಲಿ ನೀಡಿದ್ದೇನೆ.

ಐಜೂರ್ ಅವರಿಗೆ ನಾನು ಅಗ್ರಹಾರದ ಗೊಂಡಾರಣ್ಯದಲ್ಲಿ ಬಿದ್ದು ಸಾಮಾಜಿಕ ನ್ಯಾಯಕ್ಕಾಗಿ ಚೀರುತ್ತಿರುವಂತೆ ಕಾಣುತ್ತಿದ್ದೇನೆ! ಸಾಮಾಜಿಕ ನ್ಯಾಯಕ್ಕಾಗಿ ಚೀರುತ್ತಿರುವುದಂತೂ ನಿಜ; ಆದರೆ ಅಗ್ರಹಾರದ ಗೊಂಡಾರಣ್ಯದಲ್ಲಿ ಬಿದ್ದು ಅಲ್ಲ ಎಂದು ಅವರಿಗೆ ಸ್ಪಷ್ಟಪಡಿಸುತ್ತೇನೆ. ಇನ್ನುಳಿದಂತೆ ಅವರು ಹೇಳಿರುವ ಬಹುತೇಕ ಎಲ್ಲ ಮಾತುಗಳಿಗೆ ನನ್ನ ಸಮ್ಮತಿಯಿದೆ.

ಸೂಳೆಗಾರಿಕೆ ಎಂಬ ಪದವನ್ನು ನಾನು ಹೋಲಿಕೆಗಾಗಿ ಬಳಸಿರುವುದನ್ನು ಕಿರಣ್ ಕುಮಾರಿ ಅವರು ಆಕ್ಷೇಪಿಸಿದ್ದಾರೆ. ಈ ಹಿಂದೆಯೂ ಅವಧಿಯಲ್ಲಿ ವಸಂತ ಕಾಜೆ ಎಂಬ ಓದುಗರೊಬ್ಬರು ಈ ಆಕ್ಷೇಪ ಎತ್ತಿದ್ದರು. ಸೂಳೆಗಾರಿಕೆ ಕುರಿತಂತೆ ನಾನು ಹಿಂದಿನಿಂದಲೂ ಹೊಂದಿದ್ದ ಕೊಳಕುಭಾವ ಇದಕ್ಕೆ ಕಾರಣವಾಗಿರಬಹುದು. ಆದರೆ, ವಸಂತ್ ಅವರ ಈ ಆಕ್ಷೇಪವೂ ನನಗೆ ಸರಿಯೆನ್ನಿಸಿದರಿಂದ ನನ್ನ `ದೇಸೀಮಾತು' ಪುಸ್ತಕದಲ್ಲಿ ಆ ಹೋಲಿಕೆಯನ್ನು ಕೈ ಬಿಟ್ಟಿದ್ದೇನೆ.

ಕಿರಣ್ ಕುಮಾರಿ, ಚಂದ್ರಶೇಖರ ಐಜೂರ್ ಹಾಗು ಈ ಹಿಂದೆಯೇ ಅವಧಿಯಲ್ಲಿ ಈ ಲೇಖನ ಕುರಿತು ಚರ್ಚೆ ನಡೆಸಿದ್ದ ಅವಧಿ ಓದುಗರಿಗೆ ಧನ್ಯವಾದಗಳು.