Saturday, September 13, 2008

ಪ್ರಜಾವಾಣಿಯ ‘ಒರಿಸ್ಸಾ ಪ್ರಯೋಗ!

ವೀರಹೆಜ್ಜೆ ಹಾಕಿ ಮುನ್ನೆಡೆದಾಗ ಅನೇಕರಿಗೆ ತಿಳಿಯದು
ಪಂಕ್ತಿಯ ಮುಂತುದಿಯಲ್ಲಿ ನಡೆದವನು ಅವರ ಶತ್ರುವೆಂದು.
ಅವರಿಗೆ ಆಜ್ಞೆ ನೀಡುವ ಧ್ವನಿ
ಅವರ ಶತ್ರುವಿನದೆಂದು.
ಶತ್ರು ಶತ್ರು ಎಂದು ಅರಚುತ್ತಿರುವವನೇ
ಅವರ ಶತ್ರುವೆಂದು

-ಬೆರ್ಟೋಲ್ಟ್ ಬ್ರೆಷ್ಟ್

ಪ್ರಜಾವಾಣಿಗೆ ಏನಾಗಿಹೋಗಿದೆ?
ಒಂದು ಕಾಲದಲ್ಲಿ ಪ್ರಗತಿಪರ ಶಕ್ತಿಗಳ, ಜೀವಪರ ಮನಸ್ಸುಗಳ, ಮಾನವೀಯ ಮೌಲ್ಯಗಳ ಮುಖವಾಣಿಯಂತಿದ್ದ ಪ್ರಜಾವಾಣಿ ಸಂಘಪರಿವಾರದ ತೆಕ್ಕೆಗೆ ಸರಿದು ಹೋಗಿದ್ದು ಹೇಗೆ? ಅಂಥ ಅನಿವಾರ್ಯತೆಯಾದರೂ ಅವರಿಗೆ ಬಂದಿದ್ದೇಕೆ? ಯಾರಿಗಾದರೂ ಉತ್ತರ ಗೊತ್ತಿದ್ದರೆ ದಯವಿಟ್ಟು ಹೇಳಿ.

ಪ್ರಜಾವಾಣಿ ಕರ್ನಾಟಕದ ಜನಮನದ ಅಭಿವ್ಯಕ್ತಿಯಾಗಿಯೇ ಹರಿದು ಬಂದಿದೆ. ಸುದ್ದಿ-ವಿಶ್ಲೇಷಣೆಯಿಂದ ಹಿಡಿದು ಲೇಖನ-ಕವಿತೆ-ಕತೆಯವರೆಗೆ ಪ್ರಜಾವಾಣಿಯಲ್ಲಿ ಪ್ರಕಟವಾಗುವ ಎಲ್ಲ ಬರೆಹಕ್ಕೂ ಒಂದು ಮಾನದಂಡವಿತ್ತು. ಪ್ರಕಟವಾಗುವ ಪ್ರತಿ ಸಾಲಿಗೂ ಅರ್ಹತೆಯ ಅಗತ್ಯವಿತ್ತು.
ಈಗೇನಾಗಿದೆ?

ಸೆಪ್ಟೆಂಬರ್ ೮ರ ಪ್ರಜಾವಾಣಿ ಸಂಚಿಕೆಯನ್ನೊಮ್ಮೆ ಗಮನಿಸಿ. ಮುಖಪುಟದಲ್ಲಿ ಮತಾಂತರ ಯತ್ನ: ಇಬ್ಬರ ಬಂಧನ ಎಂಬ ಶೀರ್ಷಿಕೆಯಡಿಯಲ್ಲಿ ಜೋಗುಪಾಳ್ಯದಲ್ಲಿ ನಡೆದ ಗದ್ದಲದ ವರದಿಯಿದೆ.

ಇಡೀ ವರದಿಯನ್ನು ಪ್ರಮೋದ್ ಮುತಾಲಿಕನೇ (ಚಂಪಾ ಅವರು ಈತನನ್ನು ಆಗಾಗ ಪ್ರಮಾದ ಮುತಾಲಿಕ ಅನ್ನುವುದುಂಟು) ಬರೆದಿದ್ದಾನೇನೋ ಎಂಬಂತಿದೆ. ವರದಿಯ ಭಾಷೆ ಎಷ್ಟು ಅಗ್ರೆಸಿವ್ ಆಗಿದೆಯೆಂದರೆ ವರದಿಗಾರನೇ ಇಲ್ಲಿ ಆರೋಪಿಗಳ ವಿರುದ್ಧ ದೂರು ಸಲ್ಲಿಸಿದ ದೂರುದಾರ, ಆತನೇ ತನಿಖಾಧಿಕಾರಿ, ಆತನೇ ನ್ಯಾಯಾಧೀಶ ಆಗಿದ್ದಾನೆ.

ವರದಿಯ ಭಾಷೆಯನ್ನು ಒಮ್ಮೆ ಗಮನಿಸಿ:
ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಮತಾಂತರಕ್ಕೆ ಯತ್ನಿಸಿದ (ಯತ್ನಿಸಿದರು ಎಂಬ ಆರೋಪಕ್ಕೆ ಗುರಿಯಾಗಿರುವ ಎಂಬ ಪ್ರಯೋಗ ಬೇಕಿತ್ತಲ್ಲವೆ?) ವಿದೇಶಿ ಪ್ರಜೆ ಸೇರಿದಂತೆ ೬ ಮಂದಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಹಲಸೂರಿನ ಜೋಗುಪಾಳ್ಯದಲ್ಲಿ ಭಾನುವಾರ ನಡೆದಿದೆ.......................

ಆರೋಪಿಗಳನ್ನು ಹಿಡಿದುಕೊಟ್ಟರೂ ಪ್ರಕರಣ ದಾಖಲಿಸಲು ವಿಳಂಬ ಮಾಡಿದ (ವಿಳಂಬ ಮಾಡಿದರು ಎಂದು ಆರೋಪಿಸಿ ಎಂದಿರಬೇಕಿತ್ತಲ್ಲವೆ?) ಪೊಲೀಸರ ಕ್ರಮ ಖಂಡಿಸಿ ವಿಶ್ವ ಹಿಂದೂ ಪರಿಷತ್................. ಪ್ರತಿಭಟನೆ ನಡೆಸಿದರು.

ಘಟನೆಯನ್ನು ವರದಿ ಮಾಡಲು ಹೋದ ಟಿವಿ ಮಾಧ್ಯಮದವರ ಕ್ಯಾಮೆರಾವನ್ನೂ ಇನ್ಸ್‌ಪೆಕ್ಟರ್ ಎಂ.ಕೆ.ತಮ್ಮಯ್ಯ ಕಿತ್ತುಕೊಳ್ಳಲು ಯತ್ನಿಸಿದ ಘಟನೆಯೂ ನಡೆಯಿತು.

ಕೊನೆಗೆ ಪ್ರಕರಣ ದಾಖಲಿಸಿದ ಪೊಲೀಸರು ಅಮೆರಿಕಾ ಪ್ರಜೆ ಕ್ಯಾನನ್ ಮತ್ತು ಆಂಧ್ರಪ್ರದೇಶದ ವೆಲ್ಲೂರಿ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದರು. ವರದಿ ಹೀಗೆ ಪ್ರಾರಂಭವಾಗುತ್ತದೆ.

ಮುಂದಿನ ಸಾಲುಗಳೆಲ್ಲ ಪ್ರಮೋದ ಮುತಾಲಿಕನ ಭಾಷೆಯೇ. ಅದರಲ್ಲಿ ಯಾವುದೇ ಅನುಮಾನ ಬೇಡ. ಪ್ರಜಾವಾಣಿ ವರದಿ ಹೀಗೆ ಸಾಗುತ್ತದೆ:
ಜೋಗುಪಾಳ್ಯ ನಿವಾಸಿ ಗುಣಶೇಖರ್ ಎಂಬುವರ ಮನೆಗೆ ಬಂದ ಆರು ಮಂದಿ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರು, ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರೆ ಹಣ ಇನ್ನಿತರ ಸೌಲಭ್ಯ ನೀಡುವುದಾಗಿ ಆಮಿಷ ಒಡ್ಡಿದರು. ವಿಸಿಟಿಂಗ್ ಕಾರ್ಡ್ ನೀಡಿದ ಅವರು ಅದರಲ್ಲಿರುವ ವಿಳಾಸಕ್ಕೆ ಬಂದರೆ ಹಣ ನೀಡುವುದಾಗಿ ಹೇಳಿದರು.

ಕಾರ್ಡ್‌ನಲ್ಲಿರುವ ಇಂದಿರಾನಗರದ ಮೊದಲನೇ ಹಂತ, ಸಿಎಂಎಚ್ ರಸ್ತೆ ಎರಡನೇ ಕ್ರಾಸ್ (ಡೋರ್ ಸಂಖ್ಯೆ ೯೮) ಎಂದಿತ್ತು. ಇದರಿಂದ ಆಕ್ರೋಶಗೊಂಡ ಗುಣಶೇಖರ್, ಆರ್‌ಎಸ್‌ಎಸ್, ವಿಎಚ್‌ಪಿ ಮತ್ತು ರಕ್ಷಣಾ ವೇದಿಕೆ ಸದಸ್ಯರು ಹಾಗು ಸಾರ್ವಜನಿಕರ ಸಹಾಯದಿಂದ ಆರು ಮಂದಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಆದರೆ ರಾತ್ರಿ ೯ ಗಂಟೆಯಾದರೂ ಪೊಲೀಸರು ಪ್ರಕರಣ ದಾಖಲಿಸಲಿಲ್ಲ.

ಇದರಿಂದ ಕುಪಿತರಾದ ಸಾರ್ವಜನಿಕರು ಠಾಣೆಯ ಎದುರು ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಇದಕ್ಕೂ ಪೊಲೀಸರು ಸ್ಪಂದಿಸದಿದ್ದಾಗ ರಸ್ತೆ ತಡೆಯನ್ನೂ ನಡೆಸಿದರು. ಈ ಎಲ್ಲ ಬೆಳವಣಿಗೆಗಳಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಪ್ರಕರಣ ದಾಖಲಿಸಿದ ಪೊಲೀಸರು ಇಬ್ಬರನ್ನು ಬಂಧಿಸಿದರು. ಬಂಧಿತ ವಿದೇಶಿ ಪ್ರಜೆ ಕ್ಯಾನನ್ ಬಗ್ಗೆ ಯಾವುದೇ ಮಾಹಿತಿಯನ್ನೂ ನೀಡಿಲಿಲ್ಲ. ಕ್ಯಾನನ್ ವೀಸಾ ಮತ್ತು ಪಾಸ್‌ಪೋರ್ಟ್ ಬಗ್ಗೆ ಮಾಹಿತಿ ನೀಡಿ ಎಂದು ಕೇಳಿದರೂ ಪ್ರಯೋಜನ ಆಗಲಿಲ್ಲ................
ವರದಿ ಹೀಗೆ ಸಾಗುತ್ತದೆ.

ಇಲ್ಲಿ ಗುಣಶೇಖರ್ ಹೇಳಿದ್ದೆಲ್ಲ ಪ್ರಜಾವಾಣಿಗೆ ಪರಮಸತ್ಯ. ಆತನ ಮನೆಯಲ್ಲಿ ನಡೆಯಿತು ಎನ್ನಲಾದ ಎಲ್ಲ ವಿಷಯಗಳನ್ನೂ ಪ್ರಜಾವಾಣಿ ತಂಡವೇ ಖುದ್ದಾಗಿ ಕಣ್ಣಿಂದ ನೋಡಿದಂತೆ ಬರೆಯಲಾಗಿದೆ. ಇರಬಹುದು, ಗುಣಶೇಖರ್ ದೂರು ಸಂಪೂರ್ಣ ಸತ್ಯವೇ ಇರಬಹುದು. ಆದರೆ ಅದನ್ನು ನಿರ್ಧರಿಸುವವರು ಯಾರು? ಗುಣಶೇಖರ್ ಆರೋಪಗಳನ್ನು ಪ್ರಜಾವಾಣಿಯೇ ಸಂಪೂರ್ಣ ಸತ್ಯ ಎಂದು ಘೋಷಿಸಿದರೆ ಪೊಲೀಸ್ ಠಾಣೆ ಯಾಕೆ ಬೇಕು? ನ್ಯಾಯಾಲಯಗಳು ಯಾಕೆ ಬೇಕು? ಇದು ಸಹ ಒಂದು ಬಗೆಯ ಗೂಂಡಾಗಿರಿಯಲ್ಲವೆ?

ಆರೋಪಿಗಳನ್ನು ಸಾರ್ವಜನಿಕರೇ ಹಿಡಿದುಕೊಟ್ಟರು ಎಂದು ಪ್ರಜಾವಾಣಿಯವರು ಒಂದು ಬಗೆಯ ಪ್ರಶಂಸಾಪೂರ್ವಕವಾಗಿ ಬರೆಯುತ್ತಾರೆ. ಹಾಗೆ ಹಿಡಿದುಕೊಡುವ ಅಧಿಕಾರ ಯಾರು ಕೊಟ್ಟರು? ಹಿಡಿದು ಕೊಡುವಾಗ ಆರೋಪಿಗಳ ಮಾನವಹಕ್ಕುಗಳ ಹರಣ ಆಗುವುದಿಲ್ಲವೆಂಬ ಖಾತ್ರಿಯಾದರೂ ಏನು? ಪೊಲೀಸರೇ ಆರೋಪಿಗಳನ್ನು ಬಂಧಿಸುವಾಗ ಹಲವು ಬಗೆಯ ರೀತಿ-ರಿವಾಜುಗಳನ್ನು ಪಾಲಿಸಬೇಕಾಗುತ್ತದೆ. ಹೀಗಿರುವಾಗ ಪ್ರಜಾವಾಣಿಯವರು ಉಲ್ಲೇಖಿಸುವ ಸೊ ಕಾಲ್ಡ್ ಸಾರ್ವಜನಿಕರು ಯಾವ ರೀತಿ-ನೀತಿ ಬಳಸುತ್ತಾರೆ? ಈ ಪ್ರಶ್ನೆಗಳಿಗೆ ಸಾರ್ವಜನಿಕರ ಉತ್ತರವೇನು? ಕಾಯ್ದೆ ಕಾನೂನು ರೀತಿ ನೀತಿಗಳು ಪ್ರಜಾವಾಣಿಗೆ ಗೊತ್ತಿಲ್ಲವೆ?

ಮತಾಂತರ ಆರೋಪಿಗಳು ಭಯೋತ್ಪಾದಕರಿಗಿಂತ ಅಪಾಯಕಾರಿ, ಭೂಗತ ಪಾತಕಿಗಳಿಗಿಂತ ಡೇಂಜರ್, ರೌಡಿಗಳಿಗಿಂತ ಮೋಸ್ಟ್ ವಾಟೆಂಡ್ ಅಪರಾಧಿಗಳು ಎಂದು ಪ್ರಜಾವಾಣಿಯವರು ಭಾವಿಸಿದಂತಿದೆ. ನಿಜ, ಬಲವಂತದ ಮತದಾನಗಳಿಂದ ಕೋಮುದ್ವೇಷ ಹರಡಬಹುದು ಎಂದುಕೊಳ್ಳೋಣ. ಆದರೆ ಮತಾಂತರಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಯಾರು ತಲೆಕೆಡಿಸಿಕೊಂಡಿದ್ದಾರೆ. ಮತಾಂತರ ವಿರೋಧಿ ಆಂದೋಲನ ಮಾಡುವ ವಿಹಿಂಪದವರು ಅಸ್ಪೃಶ್ಯತೆ ನಿವಾರಣೆಗೆ ಪ್ರಾಮಾಣಿಕ ಯತ್ನವನ್ನು ಎಂದಾದರೂ ನಡೆಸಿದ್ದಾರೆಯೇ? ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂಬ ಮಾತು ಬರಿಯ ಹೇಳಿಕೆಯಾಗಿಯೇ ಉಳಿದಿಲ್ಲವೆ? ಹಿಂದೂಗಳೆಲ್ಲ ಒಂದೇ ಎನ್ನುವ ಭಾವ ದೇಶದ ಯಾವುದೇ ಮೂಲೆಯಲ್ಲಾದರೂ ಇದೆಯೆ? ಸಾಮಾಜಿಕ ಅಸಮತೋಲನವನ್ನು ಸರಿಪಡಿಸದೆ ಮತಾಂತರ ವಿರೋಧ ಮಾಡುವುದು ನೈತಿಕವಾಗಿಯಾದರೂ ಎಷ್ಟು ಸರಿ?

ಗುಜರಾತ್ ರಾಜ್ಯವನ್ನು ಹಿಂದುತ್ವದ ಪ್ರಯೋಗಶಾಲೆ ಮಾಡಿ ಮುಸ್ಲಿಮರ ನರಮೇಧ ನಡೆಸಿದ ಸಂಘಪರಿವಾರ-ಬಿಜೆಪಿ ಈಗ ಒರಿಸ್ಸಾದಲ್ಲಿ ಕ್ರಿಶ್ಚಿಯನ್ನರ ಮೇಲೆ ಬಿದ್ದಿವೆ. ವಿಶ್ವಹಿಂದೂ ಪರಿಷತ್ತಿನ ಸ್ವಾಮೀಜಿಯೊಬ್ಬರನ್ನು ಕ್ರಿಶ್ಚಿಯನ್ನರೇ ಕೊಂದರೆಂದು ಆರೋಪಿಸಿ ಅಲ್ಲಿ ಹತ್ತಾರು ಕ್ರಿಶ್ಚಿಯನ್ನರನ್ನು ಜೀವಂತ ಸುಟ್ಟು ಹಾಕಲಾಗಿದೆ. ಇಂಥದೇ ಪ್ರಯೋಗಗಳನ್ನು ಕರ್ನಾಟಕದಲ್ಲೂ ನಡೆಸಲು ಸಂಘಪರಿವಾರಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನೂ ನಡೆಸಿ ಸಫಲರಾಗಿದ್ದಾರೆ. ಪಾಪ, ಪ್ರಜಾವಾಣಿಯವರಿಗೆ ಜಾಣ ಕುರುಡು. ಇದ್ಯಾವುದೂ ಗೊತ್ತಾಗುವುದಿಲ್ಲ.

ಬಲಪಂಥೀಯರನ್ನು ಒಲಿಸಿಕೊಳ್ಳಲು ಪ್ರಜಾವಾಣಿ ಈ ಸುದ್ದಿಯನ್ನು ಇಷ್ಟು ವೈಭವೀಕರಿಸಿದರೆ ಸಂಘಪರಿವಾರದ ಪರವಾಗೇ ಇರುವ ವಿಜಯ ಕರ್ನಾಟಕ ಅಷ್ಟು ಗಂಭೀರವಾಗಿ ಈ ಸುದ್ದಿಯನ್ನು ಪ್ರಕಟಿಸಲಿಲ್ಲ. ಆದರೆ ಇತ್ತೀಚಿಗೆ ತಾನೇ ಚೆಡ್ಡಿ ಧರಿಸಿರುವ ಪ್ರಜಾವಾಣಿಗೆ ಇದು ರಾಷ್ಟ್ತೀಯ ಮಹತ್ವದ ವಿಷಯವಾಯಿತು.
ಈ ವರದಿಯ ಕಡೆ ಸಾಲುಗಳು ಹೀಗಿವೆ ನೋಡಿ:

ಮತಾಂತರಕ್ಕೆ ಯತ್ನಿಸಿದವರಿಗೆ ಸಹಾಯ ಮಾಡಲು ಬಂದಿದ್ದ ವ್ಯಕ್ತಿಯೋರ್ವನನ್ನು ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದರು.ಠಾಣೆಗೆ ಸಮೀಪ ನಿಂತಿದ್ದ ಆ ವ್ಯಕ್ತಿಯನ್ನು ಹಿಡಿದುಕೊಂಡ ಸಾರ್ವಜನಿಕರು ಅವರ ಬಟ್ಟೆ ಹರಿದು ಹೊಡೆದರು.

ನಿಜವಾದ ಪತ್ರಕರ್ತ ಇದೇ ಸಾಲುಗಳನ್ನು ಹೇಗೆ ಬರೆಯುತ್ತಿದ್ದ ಗೊತ್ತೆ?
ಮತಾಂತರಕ್ಕೆ ಯತ್ನಿಸಿದವರಿಗೆ ಸಹಕರಿಸಿದ ಎಂಬ ಅನುಮಾನದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ವ್ಯಕ್ತಿಯೋರ್ವನನ್ನು ದಾರುಣವಾಗಿ ಹೊಡೆದು ಹಿಂಸಿಸಿದ ಘಟನೆಯೂ ಇದೇ ಸಂದರ್ಭದಲ್ಲಿ ನಡೆಯಿತು. ಠಾಣೆಗೆ ಸಮೀಪ ನಿಂತಿದ್ದ ಆ ವ್ಯಕ್ತಿಯನ್ನು ಕಿಡಿಗೇಡಿಗಳು ಬಟ್ಟೆ ಹರಿದು, ಹೊಡೆದು ದೌರ್ಜನ್ಯವೆಸಗಿದರು. ಈ ಬಗೆಯ ದುರಾಚಾರ ಮಾಧ್ಯಮದವರ ಸಮ್ಮುಖದಲ್ಲೇ ನಡೆಯಿತು (ಪ್ರಜಾವಾಣಿ ಸಮ್ಮುಖದಲ್ಲಿ)

ಕಡೆಯದಾಗಿ ಒಂದು ಮಾತು:
ದುರಂತವೆಂದರೆ ಪ್ರಜಾವಾಣಿಯಲ್ಲಿ ‘ಹೆಣ್ಣಿಗೆ ಹೆಣ್ಣೇ ಶತ್ರು ಎಂದು ಬಾಲಿಷವಾಗಿ ಬರೆಯುವ, ದೇಶದ ಸಾಮಾಜಿಕ ಬದುಕಿನ ಕನಿಷ್ಠ ಜ್ಞಾನವೂ ಇಲ್ಲದ ಹೆಣ್ಣುಮಗಳೊಬ್ಬಳು ಅಂಕಣ ಬರೆಯುತ್ತಾಳೆ. ಅದನ್ನು ಎಗ್ಗಿಲ್ಲದೆ ಕುಲದೀಪ್ ನಯ್ಯರ್ ಅವರ ಅಂಕಣ ಪ್ರಕಟವಾಗುತ್ತಿದ್ದ ಜಾಗದಲ್ಲೇ ಪ್ರಕಟಿಸಲಾಗುತ್ತದೆ.
ಪ್ರಜಾವಾಣಿ ತನ್ನ ಘನತೆಯನ್ನು ಹೀಗೆ ಹರಾಜಿಗಿಡಬಾರದಿತ್ತು.

9 comments:

Anonymous said...

dinesh,
it is true. whatever you said is absolutely right. prajavani, feared of losing circulation, is making efforts to win over fundamentalists by giving wide coverage to such instances. if they don't realise their mistakes the paper will lose its traditional raders as well.
even the national executive meeting of the BJP has been given so much coverage, that even the BJP workers did not expect. it is unbecoming of a paper, which once stood as a forum for secular forces to achieve a class-less society.
- sufi

ಹಳ್ಳಿಕನ್ನಡ said...

"ನಮ್ಮ ಪತ್ರಿಕಾರಂಗ ಮೂರು ಅತಿರೇಕಗಳಲ್ಲಿದೆ. ಒಂದು ವರ್ಗ ಮತಾಂಧತೆಯನ್ನು ಪ್ರಚಾರ ಮಾಡುವುದನ್ನೇ ಪತ್ರಿಕೆಗಳ ಪವಿತ್ರ ಕರ್ತವ್ಯವನ್ನಾಗಿ ಮಾಡಿಕೊಂಡಿದೆ. ಇನ್ನೊಂದು ವರ್ಗ ಇನ್ಫೋಸಿಸ್ ನಾರಾಯಣ ಮೂರ್ತಿ, ಬಯೋಕಾನ್ ಕಿರಣ್ ಮಜುಮ್‌ದಾರ್‌ಗಳನ್ನು ರಾಮದಾಸ್‌ರಂತವರ ಸ್ಥಾನಕ್ಕೆ ತಂದು ಕೂರಿಸುವ ಪವಿತ್ರ ಕಾರ್ಯದಲ್ಲಿ ನಿರತವಾಗಿದೆ. ಮತ್ತೊಂದು ವರ್ಗಕ್ಕೆ ಸೆಕ್ಸ್-ಕ್ರೈಂ ವಿಜೃಂಭಣೆ ಮತ್ತು ಗಂಭೀರವಾದದ್ದನ್ನೆಲ್ಲ ಲಘುವಾಗಿ ಮಾಡುವುದೇ ಪತ್ರಕರ್ತನ ಕಾರ್ಯವಾಗಿದೆ. ಒಂದು ಪತ್ರಿಕೆ ಒಬ್ಬ ಸಾಹಿತಿಯ ತೇಜೋವಧೆ ಮಾಡುವ ಏಕೈಕ ಉದ್ದೇಶದಿಂದ ಕಾರ್ಯಪ್ರವೃತ್ತವಾಗುವ ನೀಚತನವನ್ನು ಪ್ರದರ್ಶಿಸುವ ಸಂದರ್ಭದಲ್ಲೇ...
ಇಂತಹ ಸಂದರ್ಭದಲ್ಲಿ ದಿನಪತ್ರಿಕೆಗಳ ವಲಯದಲ್ಲಿ ಉಳಿದಿರುವ ಏಕೈಕ ಆಶಾಕಿರಣ ಎಂದರೆ ಅದು ಪ್ರಜಾವಾಣಿಯೆ" ಎಂದು
ರವಿ ಕೃಷ್ಣರೆಡ್ಡಿ ವರ್ಷದಕೆಳಗೆ ವಿಕ್ರಾಂತ ಕರ್ನಾಟಕದಲ್ಲಿ ಬರೆದಿದ್ದರು. ಹೀಗ ಅವರ ಅಭಿಪ್ರಾಯ ಬದಲಾಗಿರಬಹುದು.
ಕಳೆದ ವಿಧಾನ ಸಭೆ ಚುನಾವಣೆಯ ಹೊತ್ತಿಗಾಗಲೇ ಪತ್ರಿಕೆ ಹಳ್ಳ ಹಿಡಿದಿತ್ತು.
ಧರೆಯೆ ಹತ್ತಿ ಉರಿಯುವಾಗ ಬದುಕಲ್ಲೆಲ್ಲಿ ಓಡುವೇ? ...
- ಮಂಜುನಾಥ ಸ್ವಾಮಿ

Anonymous said...

ದಿನೇಶ್�ರವರೇ,
ನಿಮಗೆ ನೆನಪಿದೆಯೇ? ಹಿಂದೆ ಇದೇ ಪ್ರಜಾವಾಣಿಯವರು ಕೃಷ್ಣ ಭಟ್ ಎಂಬಾತನ ಕಾಲು ಪುಟದ ಜಾಹೀರಾತನ್ನು ಮುಖಪುಟದಲ್ಲಿ ಪ್ರಕಟಿಸಿದ್ದರು.
ಉಡುಪಿ ಕೃಷ್ಣಮಠಕ್ಕೆ ಸಂಬಂಧಿಸಿದ ವಿವಾದ ಭುಗಿಲೆದ್ದಾಗ ಈ ಜಾಹೀರಾತು ಪ್ರಕಟಗೊಂಡಿತ್ತು. ಜಾಹೀರಾತಿನಲ್ಲಿ ದೊಡ್ಡ ಅಕ್ಷರಗಳಲ್ಲಿ �ಕುರುಬರು ಕುರಿಗಳಂತೆ ವರ್ತಿಸುತ್ತಿದ್ದಾರೆ� ಎಂದು ಪ್ರಕಟಿಸಲಾಗಿತ್ತು. ಪ್ರಜಾವಾಣಿಯವರು ಸಾಮಾಜಿಕ ಜವಾಬ್ದಾರಿಯನ್ನೂ ಮರೆತಿದ್ದಾರೆ
-ಸಂತೋಷ್ ಕೋಗಿಲೆಮನೆ

Anonymous said...

ಸೂಫಿ,
ಧನ್ಯವಾದಗಳು. ಇವತ್ತು ಬಿಜೆಪಿ ಕಾರ್ಯಕಾರಿಣಿಯ ಪುಟಗಟ್ಟಲೆ ಸುದ್ದಿ ಪ್ರಜಾವಾಣಿಯಲ್ಲಿ ಪ್ರಕಟಗೊಂಡಿರುವುದನ್ನೂ ಬರೆಯಬೇಕೆಂದಿದ್ದೆ. ಮರೆತುಹೋದೆ. ನೀವು ಅದನ್ನು ಸೇರಿಸಿದ್ದೀರಿ.
ಪ್ರಜಾವಾಣಿಯಲ್ಲಿ ಯಾಕೆ ಹೀಗಾಗುತ್ತಿದೆಯೋ ಗೊತ್ತಿಲ್ಲ. ಅಲ್ಲಿರುವ ಜನಪರ, ಜೀವಪರ ಪತ್ರಕರ್ತರು ಈಗಲಾದರೂ ಇದನ್ನೆಲ್ಲ ಸರಿಪಡಿಸುವ ಕೆಲಸ ಮಾಡಲಿ. ಮತಾಂಧರ ಕೈ ಮೇಲಾಗದಂತೆ ನೊಡಿಕೊಳ್ಳಲಿ ಎಂಬುದಷ್ಟೆ ನನ್ನ ಕಾಳಜಿ.
ಮಂಜುನಾಥ ಸ್ವಾಮಿಯವರೆ,
ನೀವು ಗುರುತಿಸುವ ಅಪಾಯಗಳನ್ನು ನಿವಾರಿಸುವುದಾದರೂ ಹೇಗೆ? ನಾವು ಸಂಘಿಗಳ ಪರವಾದವರು ಎಂದು ಬೋರ್ಡು ತಗುಲಿಸಿಕೊಂಡಿರುವವರಿಂದ ಅಪಾಯ ಕಡಿಮೆ. ಅವರು ನೇರವಾಗಿ ತಮಗೆ ಅನಿಸಿದ್ದನ್ನು ಹೇಳಿಕೊಳ್ಳುತ್ತಾರೆ. ಆದರೆ ಪ್ರಗತಿಪರ, ಜಾತ್ಯತೀತ ನಿಲುವಿನ ಪತ್ರಿಕೆ ಎಂಬ ಲೇಬಲ್ ಹೊಂದಿರುವ ಪ್ರಜಾವಾಣಿ ದಾರಿ ತಪ್ಪಿದರೆ ಏನು ಮಾಡುವುದು? ನೀವೇ ಹೇಳಿದಂತೆ ಧರೆ ಹತ್ತಿ ಉರಿದರೆ ನಿಲಬಹುದೆ?
ಸಂತೋಷ್,
ಕೃಷ್ಣಭಟ್ ಜಾಹೀರಾತು ಪ್ರಕರಣ ನೆನಪಿದೆ. ಅದನ್ನು ಕಣ್ತಪ್ಪಿನಿಂದ ಆದ ದೋಷ ಎಂದು ಸಮರ್ಥಿಸಿಕೊಳ್ಳಬಹುದು. ಆದರೆ ಕ್ರಿಶ್ಚಿಯನ್ ಸಮುದಾಯದ ಮೇಲೆ ಒರಿಸ್ಸಾದಲ್ಲಿ ಸಂಘಿಗಳು ದಾಳಿ ನಡೆಸುವ ಹೊತ್ತಿನಲ್ಲಿ ಪ್ರಜಾವಾಣಿ ಹೇಗೆ ವರ್ತಿಸಬೇಕಿತ್ತು? ಇಂಥ ಪ್ರಚೋದನಾಕಾರಿ ವರದಿಗಳ ಅಗತ್ಯವಿತ್ತೆ?

Unknown said...

dharmavanu navu artha madikondiruva reethiye asambaddavagide.dharmavemba bhavanatmaka,sookshma vishayagala bagge arivu moodisabekada patrikegalu hagu patrakartaru innu asambaddavagi varthisuttiruvudu viparyasada paraamavadiye.prajavaniye alla ella patrikegalu edanu arithu prajegala pragneyagi samajadali kelasa nirvahisali.dinesh nimma thikshna prathikriyege danyavadagalu nirantharavagi sagali ee reethiya echharikeya kaarya.

Anonymous said...

ಪ್ರಜಾವಾಣಿಯ ಈ ವರದಿಯ ಕೊಂಡಿ ಇಲ್ಲಿದೆ:
http://www.prajavani.net/Content/Sep82008/bangalore2008090895449.asp?section=updatenews
-ಕೇಶವ

Anonymous said...

Bhoomi
Enagide prajavanige?
navella prajavani bagge ittiruva nambikegalannu allina patrakartharu, managment nirdakshanyavagi kolluttiddare. prajavaniya Orissa prayoga egeega nirantharavagi munduvariyuttide ennuvudakke matthondu udaharane illide.
ittichege mathanthara maduttiddaru ennuva aropada hinneleyalli chikkamagaloorinalli Bajarangadala karyakartharu vyakthi mele ganjala suridu, mala horisi amaanaviyavagi varthisiddare. a sthalakke H.D. Kumarswami Beti kottiddare. adu Tv9nalli prasara ayitu. adare maru dina 'Udyavani' bittu berava patrikeyallu suddi illa. nanu thumba nireekshe ittu prjavaniya putagalannu there. adare nirase kadittu. prjavaniyalli a suddi iralilla. prajavani avarige adu suddi annisade iddaddu nijavada durantha.
ade besaradalli patrike pakkakkittu nannannu nanu kelikondidde 'prjavanige enagide' antha. nimma lekanadalli uttara sikkitu. mattu bejarayitu. badalageli prjavani endu ashisutta...

boomika

Anonymous said...

dinesh avare

varadi yondara baalishatanavannu chennaagi gurutisiddeeri. Aadare adara aadhaarada melaagalee, athavaa illi itararu needida kela ghatanegala aadhaarada mele aagalee prajaavani kesareekarana gondide anta generalise maadi biduvudu sinikatana aagabahudeno. Neevu ee varadigalalli kandukonda doshave neevu prajavaaniya bagge taleda nirdhaardalloo ide annuvudannu mareyabedi.

Prajavaani balagadalli ondu kaaladalli kelasa maadida anubhavadalli heluvudaadare, adondu pakkaa bureaucratic organisation. Alli ondashtu baalisha, balapantheeya patrakartaru irabahudu mattu ellaa kaalakkoo iddaru. Avaru maaduva kela anaahutagalannu saripadisabeku ennuva kanishta jnaanavoo illada mandi allina aayakattina jaagadalli iddaare. Alli enthaha stupidity ide anta nimage oohisuvudu kashta. Nijakkoo aa paper hege horabaruttade annuvude nigooDa. Ella inefficiency galannu ittukondu namma sarakaara nadeyudillave haageye.

balapantheeya niluvugalannu samarthisi namma circulation hechchisikollabeku embudu spashtavaada niluvu. Aadare charitreyalle inthaha ondu spashta niluvannu aa patrike tegondadde illa. Hari Kumar iddashtu kaala Deccan Herald ge ondu ideological aada stand ittu. Eega adoo bekaabitti. Haaganta dh/pv galu atta eda panteeyavoo alla, bala panteeyavoo alla atavaa neevu tilkonda haage pragatiparavaoo aagiralilla. Aayaa kaalakke alli idda patrakartara balagadalli yaava niluvige seridavaru hechchu mandi iddaru ennuvudara mele patrikeya niluvu vyatkavaagide ashte..

Neevu sadari varadiyalli kandu konda doshavannu KRV ya bagge maaduva varadigalalliyoo naanu kandukondiddene. Neevu nimma niluvige sahyavaagada ondu varadiyannu kandu pratikriyisiddeeri. Ideology yannu badigittu heluvudaadare idannu PV ya bahuteka varadigalalli kaanabahudu.
Ide PV nalli Yediyurappa Sarakaara banda erado moro dinagalalle sarakaara bidde hoyitu, binnamata prarambhavaayitu ityaadi varadigaloo bandive...haaganta adu bjp virodhi anta nirdharisalaagadu..
Neevu bareyuttaa bereyuttaa Orissadalli aada ghatanegalannu kannaare kandante barediddeerallaa....odi nagu bantu...

60 varsha tumbida prajaavaaniyalli varadigaarikeya kanishta avashyakategalannoo tiliyada reporters/chief reporters/sub-editors ellaa iddaare anta ashte naanu ee varadiyinda kandukolluva satya. Ondu vele neevu maadida aapadane sariye aagiddare nimmondige naano adannu prathibhatisuttene mattu vyathe paduttene. Aadare vaastava adalla mattu adaagadirali annuvude nanna aashaya...

Unknown said...

ಸರ್,
ನಾನೊಬ್ಬ ಪ್ರಜಾವನಿಯ ಅಭಿಮಾನಿ ಓದುಗ. ಕೆಲವೇ ವರ್ಷದ ಹಿಂದಿನ ಪ್ರಜಾವಾನಿಯ ಬರಹ ಶೈಲಿಗೂ ಇಂದಿನ ಬರಹ ಶೈಲಿಗು ಬಹಳವೆ ವ್ಯತ್ಯಾಸವಾಗಿರುವದು ನಿಜ. ಹೀಗೆ ಆಗುತ್ತ ಸಾಗಿದರೆ , ಕೆಲವರ ಕೆಲವು ಹೊಗಳುಭಟ್ಟಂಗಿ ಪತ್ರಿಕೆ(ವಯಕ್ತಿಕವಾಗಿ ಹೆಸರು ಹೇಳಲು ಇಚ್ಚಿಸುವದಿಲ್ಲ.)ಗಳಂತೆ ಪ್ರಜಾವಾನಿಯೂ ಆಗಬಹುದೇನೋ......!!! ಅನ್ನಿಸುತ್ತಿದೆ.
ವಸ್ತುಸ್ಥಿತಿ ಎಲ್ಲರಿಗೂ ತಿಳಿಯುವ ರೀತಿಯಲ್ಲಿ ವಿಷಯವನ್ನು ಬರೆದದ್ದಕ್ಕಾಗಿ ದನ್ಯವಾದಗಳು.