Friday, November 6, 2009

ಮಾಂಸದ ರಾಶಿಯಂಥ ಯಡಿಯೂರಪ್ಪ ಹಾಗು ಸಂವಹನದ ಚಿಂತನಾಗೋಷ್ಠಿ

ಟೊಲೆಡೋದಲ್ಲಿ ಹುಲಿಯೊಂದನ್ನು ಆತ ಪಳಗಿಸಿ ಪ್ರದರ್ಶಿಸುತ್ತಿದ್ದಾನೆ. ಹೊಸ ಜಗತ್ತಿನಿಂದ ರಾಜನಿಗೆ ಸಂದ ಕಾಣಿಕೆ ಅದು. ಸರಪಳಿಯಲ್ಲಿ ಥೇಟು ನಾಯಿಮರಿಯಂತೆ ವಿಧೇಯವಾಗಿ ನಡೆದು ಬರುತ್ತಿದೆ.

ಗೊನ್ಸಾಲೋ ಡಿ ಒವಿಡೋ, ಟೊಲೆಡೋದ ರಾಜ್ಯಪಾಲ, ಹುಲಿಯನ್ನು ಗಮನಿಸುತ್ತಾನೆ. ಅವನ ರಕ್ತ ಹೆಪ್ಪುಗಟ್ಟುತ್ತದೆ. ಜಾಗುವಾರ್‌ನ ನಿಲುವೇ ಅಂಥಾದ್ದು. ಆತ ಹೇಳುತ್ತಾನೆ. ‘ಈ ಪ್ರಾಣಿಯನ್ನು ಪೂರಾ ನಂಬಕೂಡದು. ಸ್ನೇಹದಲ್ಲಿ ಇರಕೂಡದು. ಮನುಷ್ಯರ ಸಂಗಕ್ಕೆ ಹೇಳಿದ ಪ್ರಾಣಿ ಇದಲ್ಲ...

ಹುಲಿಯಾಡಿಸುವಾತ ನಗುತ್ತಾನೆ. ಸರಪಳಿ ಬಿಚ್ಚಿ ಅದರ ಬೆನ್ನು ಸವರುತ್ತಾನೆ. ಹುಲಿ ಗುರುಗುಡುತ್ತದೆ. ಭೂಮಿಯೊಡಲ ಕಂಪನದಂತೆ ಅದು ಒವಿಡೋನ ಗರ್ಭಕ್ಕೇ ಇಳಿಯುತ್ತಿದೆ.

ಕೋರೆಹಲ್ಲಿನ ಈ ಗುರುಗಾಟ ಕೇಡಿನ ಸಂಜ್ಞೆಯಂತಿದೆ. ಒಂದಲ್ಲ ಒಂದು ದಿನ ಹುಲಿಯಾಡಿಸುವಾತ ಅದಕ್ಕೆ ಬಲಿಯಾಗಲೇಬೇಕು. ತಟ್ಟೆಯಲ್ಲಿ ವಿಧೇಯವಾಗಿ ಅನ್ನ ನೆಕ್ಕಲೆಂದು ಆ ದೇವರು ಈ ಭೀಕರ ಪ್ರಾಣಿಗೆ ಹಲ್ಲು ಉಗುರು ದೈತ್ಯ ಶಕ್ತಿ ನೀಡಿದ್ದಾನೆಯೇ? ಈ ಹುಲಿಯ ವಂಶದವರಾರೂ ತಟ್ಟೆಯಲ್ಲಿ ಉಂಡವರಲ್ಲ. ಬಗೆದು ಸೀಳಿ ಜಗಿದು ನುಂಗುವುದು ಬಿಟ್ಟರೆ ಇನ್ನಾವ ನಡವಳಿಕೆ ಈ ಹುಲಿಗೆ ಗೊತ್ತು? ಹುಲಿಯಾಡಿಸುವಾತ ಇನ್ನೂ ನಗುತ್ತಿದ್ದಾನೆ. ಒವಿಡೋನಲ್ಲಿ ಅಲೆಅಲೆಯಾಗಿ ಯೋಚನೆ, ಅಸಹನೆ ಹೊಗೆಯಾಡುತ್ತಿದೆ.

ಹುಲಿಯಾಡಿಸುವಾತ ಈಗ ಕೆಂಪನೆ ಮಾಂಸದ ರಾಶಿಯಂತೆ ಕಾಣಿಸುತ್ತಿದ್ದಾನೆ. ಹೊಸ ಪ್ರಪಂಚದ ಹಿಂಸ್ರ ಸಾರ್ವಭೌಮ, ಸಾಕು ಪ್ರಾಣಿಯಾಗಲು ಸಾಧ್ಯವೇ ಇಲ್ಲ.

ಒವಿಡೋ ಸ್ಫೋಟಗೊಂಡಂತೆ ಮುಖ ತಿರುವಿ ಆಜ್ಞಾಪಿಸುತ್ತಾನೆ. ‘ಅದರ ಉಗುರು ಕಿತ್ತುಹಾಕಿ, ಹಲ್ಲುಗಳನ್ನು ಕಿತ್ತು ಬಿಡಿ

*****

ಎಡುವರ್ಡೊ ಗೆಲಿಯಾನೋ ಬರೆದ ಮೆಮೊರಿ ಆಫ್ ಫೈರ್‌ನ ಒಂದು ಅಧ್ಯಾಯದಲ್ಲಿ ಕಾಣಿಸುವ ಬರೆಹವಿದು. (ಕೆ.ಪಿ.ಸುರೇಶ್ ಅವರ ಅನುವಾದ: ಬೆಂಕಿಯ ನೆನಪು)

ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಈಗಿನ ಪರಿಸ್ಥಿತಿ ಹೀಗೆಯೇ ಇದೆ. ಅವರೀಗ ಕೆಂಪನೆ ಮಾಂಸದ ರಾಶಿಯಂತೆ ಕಾಣುತ್ತಿದ್ದಾರೆ. ಯಡಿಯೂರಪ್ಪ ಅವರ ಮೈ ತುಂಬ ಬಳ್ಳಾರಿಯ ರೆಡ್ಡಿಗಳು ಪರಚಿದ, ಗೀರಿದ ಗಾಯದ ಗುರುತುಗಳು.

ಬಳ್ಳಾರಿಯ ರೆಡ್ಡಿಗಳು ಆಕ್ರಮಣಶೀಲರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಸರ್ಕಾರ ಅಸ್ತಿತ್ವದಲ್ಲಿದ್ದಾಗ ವಿಧಾನಪರಿಷತ್‌ನಲ್ಲಿ ತಮ್ಮದೇ ಸರ್ಕಾರದ ಮುಖ್ಯಮಂತ್ರಿಯ ವಿರುದ್ಧ ೧೫೦ ಕೋಟಿ ರೂ. ಭ್ರಷ್ಟಾಚಾರದ ಆರೋಪವನ್ನು ಹೇರಿದಾತ ಜನಾರ್ದನ ರೆಡ್ಡಿ. ಕಾಲು ಕೆರೆದು ಜಗಳಕ್ಕೆ ನಿಂತರೆ ರೆಡ್ಡಿಗಳು ಥೇಟ್ ತೆಲುಗು ಸಿನಿಮಾದ ವಿಲನ್‌ಗಳಂತೆ ಆಡುತ್ತಾರೆ (ಹೀರೋಗಳಂತೆ ಭಾವಿಸಿಕೊಂಡಿರುತ್ತಾರೆ).ಇದ್ಯಾವುದೂ ಯಡಿಯೂರಪ್ಪ ಅವರಿಗೆ ಗೊತ್ತಿರದ ವಿಷಯಗಳೇನೂ ಆಗಿರಲಿಲ್ಲ.

ಜೆಡಿಎಸ್ ಜತೆ ಮೈತ್ರಿ ಮುರಿದು ಬಿದ್ದ ನಂತರ ರೆಡ್ಡಿಗಳನ್ನು ಅಗತ್ಯಕ್ಕಿಂತ ಹೆಚ್ಚು ಮುದ್ದು ಮಾಡಿದ ಯಡಿಯೂರಪ್ಪ ವಿಧಾನಸಭೆ ಚುನಾವಣೆಯಲ್ಲಿ ಒಂದೇ ಕುಟುಂಬ ನಾಲ್ವರಿಗೆ ಟಿಕೆಟ್ ನೀಡಿದರು. ಬಿಜೆಪಿ ಅಭ್ಯರ್ಥಿಗಳಿಗೆ ಫಂಡು ಕೊಡಿಸಿ ಸ್ವತಃ ತಾವೂ ಹಾಗು ಅಭ್ಯರ್ಥಿಗಳು ಏಕಕಾಲಕ್ಕೆ ಅವರ ಹಂಗಿಗೆ ಬಿದ್ದರು. ಬಹುಮತಕ್ಕೆ ಕೆಲಸ್ಥಾನಗಳು ಕಡಿಮೆ ಬಂದಾಗ ಆರು ಮಂದಿ ಪಕ್ಷೇತರರನ್ನು ಕೊಂಡುಕೊಳ್ಳುವ ಕೆಲಸವನ್ನೂ ರೆಡ್ಡಿಗಳ ಸುಪರ್ದಿಗೇ ಬಿಟ್ಟರು.

ಚುನಾವಣೆಯಲ್ಲಿ ಬಂಡವಾಳ ಹೂಡಿದ ಕಾರಣಕ್ಕಾಗಿ ಒಂದೇ ಕುಟುಂಬದ ಮೂವರಿಗೆ ಸಚಿವಗಿರಿಯನ್ನು ಕೊಡಲಾಯಿತು. ಕಂದಾಯ, ಆರೋಗ್ಯ, ಪ್ರವಾಸೋದ್ಯಮ ಖಾತೆಗಳು ರೆಡ್ಡಿಗಳ ಪಾಲಾಯಿತು.

ಇದಾದ ತರುವಾಯ ನಡೆದದ್ದು ಆಪರೇಷನ್ ಕಮಲ. ಜೆಡಿಎಸ್-ಕಾಂಗ್ರೆಸ್ ಪಕ್ಷಗಳಿಂದ ಶಾಸಕರನ್ನು ಹಿಡಿದು ತಂದು, ರಾಜೀನಾಮೆ ಕೊಡಿಸಿ ಮತ್ತೆ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುವ ಕೆಲಸವನ್ನೂ ರೆಡ್ಡಿಗಳೇ ವಹಿಸಿಕೊಂಡರು. ಕೆಲವು ಆಪರೇಷನ್ ಮುಖ್ಯಮಂತ್ರಿ ಇಶಾರೆಯ ಮೇರೆಗೆ ನಡೆದರೆ ಮತ್ತೆ ಕೆಲವು ರೆಡ್ಡಿಗಳ ಮರ್ಜಿಗೆ ತಕ್ಕಂತೆ ನಡೆದವು.

ಅಲ್ಲಿಗೆ ಮುಖ್ಯಮಂತ್ರಿ ಬಳ್ಳಾರಿಯ ಗಣಿ ದಂಧೆಕೋರರ ಎದುರು ಸಂಪೂರ್ಣ ತಲೆಬಾಗಿಸಿ ನಿಂತಾಗಿತ್ತು. ಬಿಜೆಪಿಯ ಸಾಕಷ್ಟು ಸಂಖ್ಯೆಯ ಶಾಸಕರು, ಸಚಿವರು ರೆಡ್ಡಿಗಳ ಆಜ್ಞಾನುಧಾರಕರಾಗಿ ಬದಲಾಗಿ ಹೋಗಿದ್ದರು. ಅರ್ಥಾತ್ ತಮ್ಮನ್ನು ತಾವು ಸಂಪೂರ್ಣ ರೆಡ್ಡಿಗಳಿಗೆ ಮಾರಿಕೊಂಡಿದ್ದರು.

****

ಇದೆಲ್ಲ ಮುಗಿದ ಮೇಲೆ ನಡೆದದ್ದು ವಿರಸಪರ್ವ. ಅದನ್ನು ಎಲ್ಲರೂ ಊಹಿಸಿದ್ದರು. ರೆಡ್ಡಿಗಳಿಗೆ ಸಂಪೂರ್ಣ ಸರ್ಕಾರವನ್ನೇ ತಮ್ಮ ತೆಕ್ಕೆಗೆ ತಂದುಕೊಳ್ಳುವ ಆತುರ. ಬಂಡವಾಳಶಾಹಿಯ ಮನಸ್ಥಿತಿ ಅದು. ಅದರಲ್ಲೂ ದಿನಕ್ಕೆ ಕೋಟ್ಯಂತರ ರೂ. ದುಡಿಯುವ ರೆಡ್ಡಿಗಳಿಗೆ ಎಲ್ಲರನ್ನೂ ಕೊಂಡುಕೊಳ್ಳುವ ದುರಹಂಕಾರ. ಯಡಿಯೂರಪ್ಪ ಜತೆ ಜಗಳಕ್ಕೆ ಬಿದ್ದರು. ಸಿಟ್ಟಿನ ಮಲ್ಲ ಯಡಿಯೂರಪ್ಪ ಸುಮ್ಮನಿದ್ದಾರೆಯೇ? ಅವರೂ ಜಗಳಕ್ಕೆ ನಿಂತರು.

ಉತ್ತರ ಕರ್ನಾಟಕದಲ್ಲಿ ಭೀಕರ ನೆರೆ. ಅದನ್ನು ಯಾರೂ ಊಹಿಸಿರಲಿಲ್ಲ. ಮುಖ್ಯಮಂತ್ರಿ ಬೆಂಗಳೂರಿನ ಬೀದಿಬೀದಿಯಲ್ಲಿ ಜನರಿಂದ ಭಿಕ್ಷಾಟನೆಗೆ ನಿಂತರೆ ಅತ್ತ ರೆಡ್ಡಿಗಳು ಬಳ್ಳಾರಿ ಗಣಿ ದಂಧೆಕೋರರನ್ನು ಜಿಲ್ಲಾಧಿಕಾರಿ ಕಚೇರಿಗೆ ಕರೆಸಿ ೫೦ ಕೋಟಿ ರೂ. ಸಂಗ್ರಹಿಸಿದರು.

ಉತ್ತರ ಕರ್ನಾಟಕದ ಜನತೆ ನೆರೆಯಿಂದ ಕಂಗೆಟ್ಟಿರುವಾಗ, ಯಡ್ಡಿ-ರೆಡ್ಡಿಗಳು ಒಂದಾಗಿ ಕೆಲಸ ಮಾಡಬೇಕಾದ ಅಗತ್ಯವಿತ್ತು. ಮಾನವೀಯವಾಗಿ ಯೋಚಿಸುವವರು ಇದನ್ನೇ ಮಾಡುತ್ತಿದ್ದರು. ಪರಸ್ಪರ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಲು ನೆರೆ ಪರಿಹಾರದ ಕಾರ್ಯಕ್ರಮಗಳು ಉಭಯ ಬಣದವರಿಗೂ ಒಂದು ವೇದಿಕೆಯಾಗಬೇಕಿತ್ತು. ಆದರೆ ನೆರೆಯನ್ನೇ ವಿಷಯವಾಗಿಟ್ಟುಕೊಂಡು ಮತ್ತಷ್ಟು ದೂರಾದರು.

ನಂತರದ್ದು ಶಕ್ತಿ ಪ್ರದರ್ಶನ. ನೆರೆಯಲ್ಲಿ ನಲುಗುತ್ತಿರುವ ಜನಪ್ರತಿನಿಧಿಗಳು ಗೋವಾ-ಹೈದರಾಬಾದ್‌ಗಳಿಗೆ ಧಾವಿಸಿದರು. ಅಲ್ಲಿ ಅವರಿಗೆ ಸಂಪೂರ್ಣ ಮೋಜು-ಮಸ್ತಿ.

*****

ಬೆಂಗಳೂರಿನಲ್ಲಿ ಅಧಿಕಾರ ಹಿಡಿದು ಕುಳಿತಿರುವ ನೀಚರು... ಕಂಸನ ಸಂಹಾರವಾಗಬೇಕು... ನಮ್ಮ ಕೆಲಸಗಳಿಗೆ ಅಡ್ಡಗಾಲು ಹಾಕುತ್ತಿರುವ ನರಿಗಳು... ಇತ್ಯಾದಿ ಇತ್ಯಾದಿಯಾಗಿ ರೆಡ್ಡಿಗಳು ಮುಖ್ಯಮಂತ್ರಿಯನ್ನೇ ತಿವಿದು ಮಾತನಾಡುತ್ತಿದ್ದಾರೆ. ಹುಲಿಗೆ ಸೀಳಿ, ಜಗಿಯುವುದನ್ನು ಬಿಟ್ಟರೆ ಬೇರೇನು ಗೊತ್ತು? ಅದು ತನ್ನ ಸಹಜ ಕರ್ಮವನ್ನೇ ಆರಂಭಿಸಿದೆ. ಸೀಳುತ್ತಿದೆ, ಜಗಿಯುತ್ತಿದೆ, ಗೀರುತ್ತಿದೆ.

ತಮ್ಮ ವಿರುದ್ಧ ಇಷ್ಟೆಲ್ಲ ಮಾತನಾಡಿದರೂ ಯಡಿಯೂರಪ್ಪ ಅಸಹಾಯಕರು. ಸಂಧಾನ ಸಂಪೂರ್ಣ ಮುರಿದು ಬೀಳುವ ಕಡೆ ಗಳಿಗೆಯವರೆಗೆ ರೆಡ್ಡಿಗಳನ್ನು ಅವರು ಸಂಪುಟದಿಂದ ಕೈ ಬಿಡಲಾರರು. ಎಲ್ಲ ಸ್ವಯಂಕೃತಾಪರಾಧ.

ಈ ನಡುವೆ ಉತ್ತರ ಕರ್ನಾಟಕದ ಜನ ಏನು ಮಾಡಬೇಕು? ಅವರ ಕಷ್ಟಗಳನ್ನು ಕೇಳುವವರು ಯಾರು? ಅಲ್ಲಿ ಮುರಿದು ಬಿದ್ದಿರುವ ಮನೆಗಳನ್ನು ಕಟ್ಟಿಕೊಡುವವರು ಯಾರು? ನಲುಗಿ ಹೋಗಿರುವ ಬದುಕನ್ನು ರಿಪೇರಿ ಮಾಡುವವರು ಯಾರು?

ಸರ್ಕಾರ ಪರಿಹಾರ ನೀಡುತ್ತದೆ, ಅದು ಜನರ ಹಕ್ಕು. ಆದರೆ ರೆಡ್ಡಿಗಳಂತವರು ತಮ್ಮ ಜೇಬಿನಿಂದ ಹಣ ನೀಡಿದರೆ ಅದು ಭಿಕ್ಷೆ. ಜನರೂ ಸಹ ಮಾರಾಟದ ಸರಕುಗಳಾಗುತ್ತಾರೆ. ರೆಡ್ಡಿಗಳು ಈಗಾಗಲೇ ಪರ್ಯಾಯ ಸರ್ಕಾರದಂತೆ ಫೋಸು ಕೊಡುತ್ತಿದ್ದಾರೆ. ತಾವೇ ಮಂತ್ರಿಗಳಾಗಿರುವ ಸರ್ಕಾರವನ್ನೇ, ತಮ್ಮ ಮುಖ್ಯಮಂತ್ರಿಯನ್ನೇ ಗೇಲಿ ಮಾಡಿ, ಕುಸಿದು ಬಿದ್ದಿರೋದು ೫೦,೦೦೦ ಸಾವಿರ ಮನೆಗಳು; ಅವನ್ನು ನಮ್ಮ ಸ್ವಂತ ಹಣದಲ್ಲಿ, ತಮ್ಮ ಗಣಿ ದಂಧೆಕೋರ ಗಣದ ಹಣದಲ್ಲಿ ಕಟ್ಟಿಸ್ತೀವಿ ಬಿಡ್ರೀ ಎಂದು ಗುಟುರು ಹಾಕುತ್ತಿದ್ದಾರೆ.

ಯಡ್ಡಿ-ರೆಡ್ಡಿಗಳು ಇಬ್ಬರೂ ಸೇರಿ ಜನರನ್ನು ಭಿಕ್ಷಕುರನ್ನಾಗಿಸಿದ್ದಾರೆ. ಇದಕ್ಕಿಂತ ಹೀನ, ಅಮಾನವೀಯ ನಡೆ ಇನ್ನೇನಿರಲು ಸಾಧ್ಯ?

*****

ಉತ್ತರ ಕರ್ನಾಟಕದಲ್ಲಿ ಅಪ್ಪಳಿಸಿದ ನೆರೆ, ಮತ್ತದರ ನಂತರದ ಬೆಳವಣಿಗಳು ಗಾಬರಿ ಹುಟ್ಟಿಸುವಂತಿದೆ. ಜನ ನಿಜಕ್ಕೂ ತಬ್ಬಲಿಗಳಾಗಿದ್ದಾರೆ. ತಾವು ಬೀದಿಗೆ ಬಿದ್ದಿದ್ದರೂ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಉಳಿತಾನೇನ್ರೀ ಎಂದು ಕೇಳುವಷ್ಟು ಅವರು ಅಮಾಯಕರು. ಈಗಾಗಲೇ ಋಣಕ್ಕೆ ಬಿದ್ದಿರುವ ಸಾಕಷ್ಟು ಜನರಿಗೆ ರೆಡ್ಡಿ-ಶ್ರೀರಾಮುಲುಗಳೇ ದೇವರು. ಅತ್ಯಂತ ಸಭ್ಯ, ಪ್ರಾಮಾಣಿಕ ಜನರನ್ನೂ ಭ್ರಷ್ಟರಾಗಿಸಿದ ಕೀರ್ತಿ ರೆಡ್ಡಿಗಳದು.

ಇದರ ನಡುವೆ ನೆರೆಯ ನಂತರದ ಕಟ್ಟುವ ಕೆಲಸ ಹೇಗೆ ಸಾಗಿದೆ? ಅದನ್ನು ನಿರ್ವಹಿಸುವವರು ಯಾರು? ಹೇಗೆ? ಈ ಕೆಲಸದಲ್ಲೂ ನಡೆಯುತ್ತಿರುವ ಸ್ವಜನ ಪಕ್ಷಪಾತ, ಸಾಮಾಜಿಕ ತಾರತಮ್ಯದ ಸ್ವರೂಪಗಳು ಎಂಥವು. ಗ್ರಾಮೀಣ ಆರ್ಥಿಕತೆಯ ಎಬಿಸಿಡಿ ಗೊತ್ತಿಲ್ಲದವರು ಅಲ್ಲಿ ಏನನ್ನು ಮಾಡಬಲ್ಲರು? ಸ್ಥಳಾಂತರಗೊಳ್ಳಬೇಕಾದ ಹಳ್ಳಿಗಳ ಜನರ ಕಥೆಗಳೇನು? ನಿಜಕ್ಕೂ ಈ ಗ್ರಾಮಗಳು ಸ್ಥಳಾಂತರಗೊಳ್ಳಬೇಕೆ? ಇಂಥ ನೂರಾರು ಪ್ರಶ್ನೆಗಳನ್ನು ಇಟ್ಟುಕೊಂಡು ಸಂವಹನ ಸಂಘಟನೆ ಇದೇ ೧೨ ರಂದು ಗುರುವಾರ ಇಡೀ ದಿನ ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದ ಸೆನೆಟ್ ಸಭಾಂಗಣದಲ್ಲಿ ಚಿಂತನಾ ಗೋಷ್ಠಿ ಇಟ್ಟುಕೊಂಡಿದೆ.

ಡಾ.ಯು.ಆರ್.ಅನಂತಮೂರ್ತಿ ಗೋಷ್ಠಿಯನ್ನು ಉದ್ಘಾಟಿಸುತ್ತಾರೆ. ನಾಡಿನ ವಿವಿಧ ಕ್ಷೇತ್ರದ ಗಣ್ಯರು ಗೋಷ್ಠಿಯಲ್ಲಿ ಪಾಲ್ಗೊಳ್ಳುತ್ತಾರೆ. ನೀವೆಲ್ಲರೂ ಈ ಗೋಷ್ಠಿಗೆ ಬನ್ನಿ ಎಂಬುದು ನನ್ನ ಪ್ರೀತಿಯ ಮನವಿ.

ಹೆಚ್ಚಿನ ವಿವರಗಳು ಸಂವಹನ ಬ್ಲಾಗ್‌ನಲ್ಲಿದೆ. ಅಲ್ಲೂ ಒಮ್ಮೆ ಹೋಗಿ ಬನ್ನಿ

Wednesday, August 12, 2009

ತಿರುವಳ್ಳುವರ್, ಸಾಹಿತಿಗಳು, ಮಾಧ್ಯಮಗಳು, ಇತ್ಯಾದಿ...

ತಿರುವಳ್ಳುವರ್ ಪ್ರತಿಮೆ ಅನಾವರಣದ ವಿಷಯದಲ್ಲಿ ಕನ್ನಡ ಸಂಘಟನೆಗಳು ನಡೆದುಕೊಂಡ ರೀತಿಯ ಬಗ್ಗೆ ಎಲ್ಲೆಡೆ ಪುಂಖಾನುಪುಂಖ ಉಪದೇಶಗಳ ಸುರಿಮಳೆಯಾಗುತ್ತಿದೆ. ಪತ್ರಿಕೆಗಳ ವಾಚಕರ ವಾಣಿಗಳು ತುಂಬಿ ಹರಿಯುತ್ತಿವೆ. ಸಂಪಾದಕೀಯ ಪುಟಗಳಲ್ಲಿ ಸಂಪಾದಕರು, ಮುಖ್ಯ ವರದಿಗಾರರು, ಇತರ ಪತ್ರಕರ್ತರಾದಿಯಾಗಿ ಎಲ್ಲರೂ ಪುಗಸಟ್ಟೆ ಬೋಧನೆಗಳ ಜ್ಞಾನಾಮೃತವನ್ನು ಹರಿಸುತ್ತಲೇ ಇದ್ದಾರೆ. ತಿರುವಳ್ಳುವರ್ ಪ್ರತಿಮೆ ಅನಾವರಣ ಒಂದು ಐತಿಹಾಸಿಕ ಸಾಧನೆ, ಅದರಿಂದ ಕರ್ನಾಟಕ-ತಮಿಳುನಾಡು ರಾಜ್ಯಗಳ ನಡುವಿನ ದಶಕಗಳ ವಿರಸ ಕೊನೆಗೊಂಡಿದೆ, ಭಾವನಾತ್ಮಕ ಬೆಸುಗೆ ಸಾಧ್ಯವಾಗಿದೆ, ಯಡಿಯೂರಪ್ಪ ಮಹತ್ಸಾಧನೆ ಮಾಡಿದ್ದಾರೆ-ಹೀಗಾಗಿ ಅವರನ್ನು ಕನ್ನಡ ಸಂಘಟನೆಗಳು ಬೆಂಬಲಿಸಬೇಕಿತ್ತು, ಪ್ರತಿಭಟನೆಗೆ ಇಳಿಯಬಾರದಿತ್ತು ಎಂಬುದು ಈ ಎಲ್ಲ ಪಂಡಿತರ ಒಂದೇ ಗಂಟಲಿನ ಕೂಗು.

ಈ ಎಲ್ಲ ಮಹಾನುಭಾವರ ಪ್ರಕಾರ ಕನ್ನಡ ಸಂಘಟನೆಗಳ ಮುಖಂಡರಿಗೆ ಬುದ್ಧಿಯಿಲ್ಲ, ಅವರೆಲ್ಲ ಮೂರ್ಖರು. ಅವರು ಗಲಾಟೆಕೋರರು. ಎ.ಕೆ.ಸುಬ್ಬಯ್ಯ ಹೇಳುವಂತೆ ಹೊಟ್ಟೆಪಾಡಿಗಾಗಿ ಚಳವಳಿ ಮಾಡಿಕೊಂಡವರು. ಹೀಗಾಗಿ ಅವರನ್ನು `ಸರಿದಾರಿಗೆ ತರುವ ಯತ್ನದಲ್ಲಿ ಎಲ್ಲ ಬೋಧನೆಗಳು ನಡೆಯುತ್ತಿವೆ.

ನಿಜ, ಕನ್ನಡ ಸಂಘಟನೆಗಳ ಮುಖಂಡರು ಬುದ್ಧಿವಂತರು, ಮೇಧಾವಿಗಳೇನೂ ಅಲ್ಲ. ಹೀಗಾಗಿಯೇ ಕರ್ನಾಟಕದ ಇತಿಹಾಸದಲ್ಲಿ ಒಬ್ಬನೇ ಒಬ್ಬ ಕನ್ನಡ ಚಳವಳಿಗಾರನಿಗೂ ಇದುವರೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿಲ್ಲ. ಒಬ್ಬನೇ ಒಬ್ಬ ಚಳವಳಿಗಾರನಿಗೂ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿಯಲ್ಲಿ ಬಿಡಿಎ ಸೈಟು ನೀಡಲಾಗಿಲ್ಲ. ಕನ್ನಡ ಚಳವಳಿಗಾರರು ಅಕಾಡೆಮಿ ಅಧ್ಯಕ್ಷರಾಗಲಿಲ್ಲ, ಸರ್ಕಾರ ಮತ್ತದರ ಅಂಗಸಂಸ್ಥೆಗಳು ಕೊಡಮಾಡುವ ಪ್ರಶಸ್ತಿಗಳ ಫಲಾನುಭವಿಗಳೂ ಆಗಲಿಲ್ಲ.

ಕನ್ನಡ ಚಳವಳಿ ಮುಖಂಡರು, ಕಾರ್ಯಕರ್ತರು ನಿಜಕ್ಕೂ ದಡ್ಡರು. ಹೀಗಾಗಿಯೇ ಅವರು ತಮ್ಮ ಮೇಲೆ ಹತ್ತಾರು ಕೇಸುಗಳನ್ನು ಮೈಮೇಲೆ ಹೇರಿಕೊಂಡಿದ್ದಾರೆ. ಆಗಾಗ ಜೈಲಿಗೆ ಹೋಗಿ ಬರುತ್ತಾರೆ. ಪೊಲೀಸರ ಲಾಠಿ ರುಚಿ ಆಗಾಗ ಅನುಭವಿಸುತ್ತಾರೆ. ಕೋರ್ಟಿನಲ್ಲಿ ದಿನವೂ ಹೋಗಿ ಕೈ ಕಟ್ಟಿ ನಿಂತುಕೊಳ್ಳುತ್ತಾರೆ.

ಅವರು ಬುದ್ಧಿವಂತಲ್ಲ, ಬುದ್ಧಿವಂತರಾಗಿದ್ದರೆ, ಅವರೂ ಸಹ ಗಾಜಿನ ಮನೆಯಲ್ಲಿ ಕುಳಿತುಕೊಂಡು ಬೋಧನೆಗೆ ಇಳಿಯುತ್ತಿದ್ದರು. ಚಳವಳಿಗಾರರು ಯಾವ ವಿಷಯವನ್ನು ಚಳವಳಿಗೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಅಲ್ಲೇ ಕುಳಿತು ಆದೇಶ ನೀಡುತ್ತಿದ್ದರು.

****

ಅಸಲಿಗೆ ನಮ್ಮ ಮಾಧ್ಯಮಗಳು ತಿರುವಳ್ಳುವರ್ ಪ್ರತಿಮೆ ಅನಾವರಣದ ವಿಷಯದಲ್ಲಿ ಕನ್ನಡ ಸಂಘಟನೆಗಳ ನಿಲುವು ಏನಾಗಿತ್ತು ಎಂಬುದನ್ನು ಸರಿಯಾಗಿ ಬಿಂಬಿಸಲೇ ಇಲ್ಲ. ತಿರುವಳ್ಳುವರ್ ಪ್ರತಿಮೆ ಅನಾವರಣ ನಡೆಯಲು ನಮ್ಮ ಅಭ್ಯಂತರವೇನೂ ಇಲ್ಲ. ಅದಕ್ಕೂ ಮುನ್ನ ತಮಿಳುನಾಡು ಸರ್ಕಾರದ ಕಿತಾಪತಿಗಳು ನಿಲ್ಲಲಿ ಎಂಬುದು ಅವರ ಬೇಡಿಕೆಯಾಗಿತ್ತು. ತಿರುವಳ್ಳುವರ್ ಬಗ್ಗೆ ನಮಗೆ ಗೌರವವಿದೆ, ಆದರೆ ಪ್ರತಿಮೆ ಹಿಂದೆ ನಿಂತಿರುವ ಭಾಷಾಂಧ ಶಕ್ತಿಗಳನ್ನು ನಾವು ವಿರೋಧಿಸುತ್ತೇವೆ ಎಂದು ಅವರು ಪದೇ ಪದೇ ಹೇಳುತ್ತಲೇ ಬಂದರು.

ಮಾಧ್ಯಮಗಳಿಗೆ ಜಾಣ ಕುರುಡು. ಕನ್ನಡಪರ ಸಂಘಟನೆಗಳನ್ನು ಜಗಳಗಂಟರು ಎಂದು ಬಿಂಬಿಸಲು ಅವುಗಳು ನಿರ್ಧರಿಸಿಯಾಗಿತ್ತು. ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಂಪಾದಕರೋರ್ವರು ತಮ್ಮ ಅಂಕಣದಲ್ಲಿ ಇದನ್ನು ಬರೆದರು. ಮತ್ತೋರ್ವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತರು ತಮ್ಮ ಪತ್ರಿಕೆಯ ಮುಖಪುಟದಲ್ಲಿ ಇಂಥದ್ದೇ ಲೇಖನ ಬರೆದು, ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಮುಂದಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಹಾಡಿ ಕೊಂಡಾಡಿದರು. ಆನಂತರ ನಡೆದಿದ್ದೆಲ್ಲ ನಮ್ಮ ಸಾಹಿತಿ-ಪತ್ರಕರ್ತರ ಹೃದಯ ವೈಶಾಲ್ಯದ, ವಿಶ್ವ ಮಾನವ ಸಂದೇಶಗಳ, ಭಾವೈಕ್ಯತೆ, ರಾಷ್ಟ್ರೀಯತೆಯ ಅನಾವರಣ!

ಪ್ರಜಾವಾಣಿ ಹಾಗು ವಿಜಯಕರ್ನಾಟಕ ಪತ್ರಿಕೆಗಳು ತಳೆದ ನಿಲುವನ್ನೇ ಇತರ ಪತ್ರಿಕೆಗಳು ಅನುಸರಿಸಿದವು. ಕನ್ನಡ ಚಳವಳಿಯ ವಿಷಯದಲ್ಲಿ ಯಾವಾಗಲೂ ಒಂದು ಹೆಜ್ಜೆ ಕನ್ನಡಪರವಾಗೇ ಇರುವ ಕನ್ನಡಪ್ರಭವೂ ಸಹ ಇದನ್ನೇ ಮಾಡಿತು.

ಪತ್ರಿಕೆಗಳು ತನ್ನ ಒಲವು ನಿಲುವುಗಳನ್ನು ನಿರ್ಧರಿಸಲು ಸ್ವತಂತ್ರವಾಗಿರುತ್ತವೆ. ಅವುಗಳನ್ನು ಪ್ರಶ್ನಿಸುವ ಪ್ರಯತ್ನವನ್ನೇನೂ ನಾನು ಮಾಡುತ್ತಿಲ್ಲ. ಕನ್ನಡ ಸಂಘಟನೆಗಳ ನಿಲುವುಗಳನ್ನು ಪತ್ರಿಕೆಗಳು ಒಪ್ಪಬೇಕು ಎಂದೇನೂ ಇಲ್ಲ.

ಆದರೆ ಸಾಹಿತಿಗಳು-ಪತ್ರಕರ್ತರು ತೆಗೆದುಕೊಂಡ ನಿರ್ಧಾರವನ್ನೇ ಒಪ್ಪಬೇಕು ಎಂಬ ದರ್ದು ಕನ್ನಡ ಚಳವಳಿಗಾರರಿಗೂ ಇಲ್ಲ ಎಂಬುದನ್ನು ಮರೆಯುವಂತಿಲ್ಲ. ಕನ್ನಡ ಚಳವಳಿಗಳು ಸಾಹಿತಿಗಳ-ಪತ್ರಕರ್ತರ ಮರ್ಜಿಯಿಂದಲೇ, ಅವರ ಆದೇಶದಿಂದಲೇ, ಅವರ ಕುಮ್ಮಕ್ಕಿನಿಂದಲೇ ನಡೆಯಬೇಕಾಗಿಲ್ಲ. ಕನ್ನಡದ ಅತಿ ಹೆಚ್ಚು ಪ್ರಸಾರದ ಎರಡು ಪತ್ರಿಕೆಗಳ ಸಂಪಾದಕರು ತೆಗೆದುಕೊಂಡ ನಿಲುವನ್ನು ಧಿಕ್ಕರಿಸಿ, ಕನ್ನಡ ಚಳವಳಿಗಾರರು ತಮ್ಮದೇ ದಾರಿ ಹುಡುಕಿಕೊಂಡರು. ಅವರು ನಮ್ಮ ಮಾತು ಕೇಳಬೇಕಿತ್ತು ಎಂಬ ದುರಂಹಕಾರ, ಹಠ ಯಾರಿಗಾದರೂ ಇದ್ದರೆ ಅವರು ಅದನ್ನು ತೆಪ್ಪಗೆ ಕಿತ್ತು ಎಸೆಯುವುದು ಒಳ್ಳೆಯದು.

****

ತಿರುವಳ್ಳುವರ್ ಪ್ರತಿಮೆ ಅನಾವರಣ ನಮ್ಮ ಸಾಹಿತಿ ಮಹೋದಯದ ದೃಷ್ಟಿಯಲ್ಲಿ ಎರಡೂ ರಾಜ್ಯಗಳ ನಡುವಿನ ಭ್ರಾತೃತ್ವವನ್ನು ಬೆಳೆಸುವ ಯತ್ನ. ಹಳೆಯ ಜಗಳವನ್ನು ಮರೆಯುವ, ಹೊಸ ಕೊಡು-ಕೊಳ್ಳುವಿಕೆಯತ್ತ ಸಾಗುವ ಹಾದಿ. ನಿಜವಿರಬಹುದು. ಆದರೆ ತಮಿಳುನಾಡು-ಕರ್ನಾಟಕ ರಾಜ್ಯಗಳ ನಡುವೆ ಇರುವ ಎಲ್ಲ ಸಮಸ್ಯೆಗಳೂ ಒಂದೇ ಏಟಿಗೆ ಬಗೆಹರಿದುಹೋಯಿತು ಎಂಬ ಭ್ರಮೆಯನ್ನು ಬಿತ್ತುವ ಯತ್ನವನ್ನು ಇವರೆಲ್ಲರೂ ಬಿಂಬಿಸಿದರು. ೧೯ ವರ್ಷಗಳ ಹಿಂದೆ ತಿರುವಳ್ಳುವರ್ ಪ್ರತಿಮೆ ಅನಾವರಣ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ ಚಿದಾನಂದಮೂರ್ತಿಯವರು ಒಂದು ಹೆಜ್ಜೆ ಮುಂದೆ ಹೋಗಿ, `ಯಾರು ಏನೇ ಹೇಳಿದರೂ ಇಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣವನ್ನು ಯಾರಿಂದಲೂ ತಪ್ಪಿಸಲಾಗದು ಎಂದು ಥೇಟ್ ಮುಖ್ಯಮಂತ್ರಿಯ (ಆಡಳಿತಗಾರನ ಹಾಗೆ) ಹಾಗೆ ಹೇಳಿದರು.

ಆದರೆ ಅವರೆಲ್ಲರೂ ಮರೆತ ವಿಷಯವೆಂದರೆ, ೧೮ ವರ್ಷಗಳಿಂದ ಇದ್ದ ಮುಸುಕನ್ನು ತೆಗೆಯಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದ್ದಕ್ಕಿದ್ದಂತೆ ಯಾಕೆ ಯತ್ನಿಸಿದರು ಎಂಬುದು. ತಿರುವಳ್ಳುವರ್ ಕುರಿತು ಯಡಿಯೂರಪ್ಪನವರಿಗೆ ಇದ್ದಕ್ಕಿದ್ದಂತೆ ಗೌರವ ಹುಟ್ಟಿದ್ದೇಕೆ ಎಂಬುದರ ಕುರಿತು ಇವರೆಲ್ಲ ಯಾಕೆ ಯೋಚಿಸಲಿಲ್ಲ?

ಕನ್ನಡ ಸಂಘಟನೆಗಳು ಮುಖ್ಯಮಂತ್ರಿಗಳ `ದೂರದೃಷ್ಟಿಯನ್ನು ಚೆನ್ನಾಗಿಯೇ ಗ್ರಹಿಸಿದವು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಮಿಳರ ವೋಟ್‌ಬ್ಯಾಂಕ್ ಪಡೆದರೆ ಇನ್ನೂ ೨೦ ಸ್ಥಾನ ಗೆಲ್ಲುವ ಅವಕಾಶ ಇರುವುದರಿಂದಲೇ ಯಡಿಯೂರಪ್ಪ ಈ ಸಾಹಸಕ್ಕೆ ಕೈ ಹಾಕಿದ್ದಾರೆ ಎಂದು ಈ ಸಂಘಟನೆಗಳು ನೇರವಾಗಿಯೇ ಹೇಳಿದವು.

ಮಹಾಮಾನವತಾವಾದಿ ಬಸವಣ್ಣನವರ ಚಿಂತನೆಗಳನ್ನೇ ಗೌರವಿಸದ ಜನರಿಗೆ ತಿರುವಳ್ಳುವರ್ ಆದರ್ಶಗಳ ಪಾಲನೆ ಇದ್ದಕ್ಕಿದ್ದಂತೆ ನೆನಪಾಗಿದ್ದೇಕೆ ಎಂದು ಈ ಸಾಹಿತಿಗಳಿಗೆ ಅರ್ಥವಾಗಲೇ ಇಲ್ಲ. ಆದರೆ ಕನ್ನಡ ಸಂಘಟನೆಗಳು ಚೆನ್ನಾಗಿಯೇ ಇದನ್ನು ಅರ್ಥ ಮಾಡಿಕೊಂಡಿದ್ದವು. ಆದರೂ ಕನ್ನಡ ಚಳವಳಿಗಾರರೇ ದಡ್ಡರೆಂಬಂತೆ ಬಿಂಬಿಸಲಾಯಿತು.

ತಮಾಶೆಯೆಂದರೆ ಈ ಬಾರಿ ಎಡ-ಬಲ ಬೇಧವಿಲ್ಲದಂತೆ ನಮ್ಮ ಕೆಲ ಸಾಹಿತಿಗಳು ಸರ್ಕಾರದ ಪರವಾಗಿ ನಿಂತುಕೊಂಡರು. ಕೇವಲ ಸರ್ಕಾರದ ಪರ ನಿಂತುಕೊಳ್ಳದೆ, ಕನ್ನಡ ಸಂಘಟನೆಗಳ ವಿರುದ್ಧ ನಿಂತುಕೊಂಡರು. ಪ್ರಜಾವಾಣಿಯ ವಾಚಕರ ವಾಣಿಯಲ್ಲಿ ಬರೆದ ಲೋಹಿಯಾವಾದಿಯೊಬ್ಬರು ಕನ್ನಡ ಸಂಘಟನೆಗಳು ಯಾವ ವಿಷಯವನ್ನು ಚಳವಳಿಗೆ ಆಯ್ಕೆ ಮಾಡಿಕೊಳ್ಳಬಾರದು, ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಉಪದೇಶಾಮೃತ ನೀಡಿದರು. ಕನ್ನಡ ಸಂಘಟನೆಗಳನ್ನು ತಾವೇ ಸಂಬಳ ಕೊಟ್ಟು ಸಾಕಿಕೊಂಡಂತೆ ಇತ್ತು ಅವರ ವಾದಸರಣಿ. ಸಾಲದಕ್ಕೆ ಕನ್ನಡ ಸಂಘಟನೆಗಳನ್ನು ಗಲಾಟೆ ಸಂಘಟನೆಗಳು ಎಂದು ಜರಿದರು.

ಇದಕ್ಕೆ ತಕ್ಕ ಉತ್ತರವನ್ನು ಚಂಪಾ ಅದೇ ವಾಚಕರ ವಾಣಿಯಲ್ಲಿ ನೀಡಿದ್ದಾರೆ. ಚಂಪಾ ಹೀಗೆ ಹೇಳಿದ್ದಾರೆ: ಕ್ರಾಂತಿಯ ಮಿಡಿತವಿರುವ ಬುದ್ಧಿವಂತರು `ಅನುಕೂಲ ನೋಡಿಕೊಂಡು ಮಾರ್ಗದರ್ಶನ ಮಾಡಲಿ. ಇಲ್ಲವಾದರೆ ಇಂಥವರಿಗೆ `ಗಂಟಲು ಸತ್ತ ಬುದ್ಧಿವಂತರು ಎಂದು ನಾವೂ ಕರೆಯಬೇಕಾದೀತು. ಬರೀ ಮೂಗು ಮುರಿಯುತ್ತ ಕುಂತರೆ ವಿಕಾರಗೊಳ್ಳುವುದು ನಿಮ್ಮ ಮುಖವೇ! ನಿಮ್ಮ ಮಾರ್ಗವೂ ಬೇಕಾಗಿಲ್ಲ, ದರ್ಶನವೂ ಬೇಕಾಗಿಲ್ಲ!

*****

ತಿರುವಳ್ಳುವರ್ ಪ್ರತಿಮೆ ಅನಾವರಣದ ದಿನದಂದು ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಭಾವಚಿತ್ರವನ್ನು ಹಿಡಿದು ಕೆಲ ತಮಿಳು ಭಾಷಾಂಧರು ಘೋಷಣೆ ಕೂಗುತ್ತಿದ್ದರು. ಕೆಲವು ಟಿವಿಗಳಲ್ಲೂ ಈ ದೃಶ್ಯ ಪ್ರಸಾರವಾಯಿತು. ಮುಖ್ಯಮಂತ್ರಿಯ ಭಾವಚಿತ್ರದೊಂದಿಗೆ ಪ್ರಭಾಕರನ್ ಭಾವಚಿತ್ರವನ್ನೂ ಬಳಸಿದ್ದ ಕೆಲವು ದೊಡ್ಡ ಗಾತ್ರದ ಬ್ಯಾನರ್‌ಗಳು ಕಾರ್ಯಕ್ರಮದದ ಸಭಾಂಗಣದ ಸುತ್ತ ಮಿರಿಮಿರಿ ಮಿಂಚುತ್ತಿದ್ದವು.

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಪ್ರಭಾಕರನ್ ಘೋಷಿತ ಅಪರಾಧಿಯಾಗಿದ್ದ. ಎಲ್‌ಟಿಟಿಇ ಭಾರತದಲ್ಲಿ ನಿಷೇಧಿತ ಸಂಘಟನೆ. ಜಾಗತಿಕ ಭಯೋತ್ಪಾದನೆಯಲ್ಲಿ ಆತ್ಮಾಹುತಿ ದಳವನ್ನು ಪರಿಚಯಿಸಿದ್ದೇ ಎಲ್‌ಟಿಟಿಇ.

ಬೆಂಗಳೂರು ತಮಿಳು ಸಂಘ ಹಿಂದಿನಿಂದಲೂ ಎಲ್‌ಟಿಟಿಇ ಕುರಿತು ತಳೆದ ನಿಲುವು ಏನೆಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ತಮಿಳುನಾಡಿನಲ್ಲಿ ಎಲ್‌ಟಿಟಿಇ ಮುಖವಾಣಿಯಾಗೇ ಇರುವ ನೆಡುಮಾರನ್ ಮತ್ತಿತರರೇ ಈ ಸಂಘದ ಆದರ್ಶ. ವಿಶ್ವ ತಮಿಳು ಸಮ್ಮೇಳನದಲ್ಲಿ ಕನ್ನಡಿಗರ ವಿರೋಧದ ನಡುವೆಯೂ ನೆಡುಮಾರನ್ ಕರೆಸಿ ಭಾಷಣ ಮಾಡಿಸಿದ್ದೂ ಇದೇ ತಮಿಳು ಸಂಘವೇ. ಎಲ್‌ಟಿಟಿಇಗೆ ಬೆಂಗಳೂರಿನಲ್ಲಿ ಹಣ ಸಂಗ್ರಹಿಸಿ ದೇಣಿಗೆಯಾಗಿ ನೀಡಲಾಗುತ್ತಿತ್ತು ಎಂಬುದೂ ರಾಜೀವ್ ಹತ್ಯೆಕೋರರ ವಿರುದ್ಧ ಕಾರ್ಯಾಚರಣೆಯಲ್ಲಿ ಬಯಲಾಯಿತು.

ಡಾ.ರಾಜ್ ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ ನಂತರ ರಾಜಿಪಂಚಾಯ್ತಿಗೆ ಹೋದವರು ಯಾರು ಎಂಬುದೂ ಎಲ್ಲರಿಗೆ ಗೊತ್ತಿರುವ ವಿಷಯ. ರಾಜ್ ಬಿಡುಗಡೆಗೆ ವೀರಪ್ಪನ್ ಒಡ್ಡಿದ ಷರತ್ತುಗಳೆಲ್ಲವೂ ಬೆಂಗಳೂರಿನ ಭಾಷಾಂಧ ತಮಿಳರ ಷರತ್ತುಗಳೇ ಆಗಿದ್ದವು ಎಂಬುದನ್ನೂ ಮರೆಯುವಂತಿಲ್ಲ. ರಾಜ್ ಬಿಡುಗಡೆಗೆ ಕಳುಹಿಸಲಾದ ಕೋಟಿಗಟ್ಟಲೆ ಹಣದಲ್ಲಿ ಸಾಕಷ್ಟು ಹಣ ಬೆಂಗಳೂರಿನ ಜನರಿಗೇ ಸಂದಾಯವಾದವು ಎಂಬ ವರ್ತಮಾನವೂ ಇದೆ.

ತಿರುವಳ್ಳುವರ್ ಪ್ರತಿಮೆ ಅನಾವರಣದ ದಿನ ಇದೇ ಶಕ್ತಿಗಳು ತೋಳು, ತೊಡೆ ತಟ್ಟಿ ನಿಂತವು. ಮುಖ್ಯಮಂತ್ರಿಯ ಜತೆ ಪ್ರಭಾಕರನ್ ಫೋಟೋ ಅಂಟಿಸುವಷ್ಟು ಧೈರ್ಯವನ್ನು ಪ್ರದರ್ಶಿಸಿದವು.

ತಮಾಶೆ ಎಂದರೆ ಕನ್ನಡಪ್ರಭ, ವಾರ್ತಾಭಾರತಿ ಹೊರತು ಪಡಿಸಿ ಬೇರೆ ಪತ್ರಿಕೆಗಳು ಪ್ರಭಾಕರನ್ ಭಾವಚಿತ್ರವನ್ನು ಹೊತ್ತು ಕುಣಿಸಿದ ವಿಷಯವನ್ನು ಪ್ರಕಟಿಸಲೇ ಇಲ್ಲ. ಅದು ಇತರ ಪತ್ರಿಕೆಗಳಿಗೆ ಸುದ್ದಿಯಾಗುವಂಥ ವಿಷಯವೇ ಆಗಿರಲಿಲ್ಲವೇನೋ? ಅಥವಾ `ಹೊಸ ಶಕೆ ಆರಂಭ, `ಭಾವನಾತ್ಮಕ ಬೆಸುಗೆ ಇತ್ಯಾದಿ ತಲೆಬರೆಹದ ಸುದ್ದಿಗಳ ನಡುವೆ `ಮೊಸರಲ್ಲಿ ಕಲ್ಲು ಯಾಕೆ ಎಂದು ಅವು ನಿರ್ಧರಿಸಿಬಿಟ್ಟವೇನೋ!

ಇದೇ ಸಂದರ್ಭದಲ್ಲಿ ಅಖಿಲ ಕರ್ನಾಟಕ ಗಡಿ ಹೋರಾಟ ಸಮಿತಿ ಅಧ್ಯಕ್ಷ ರಾವ್ ಬೈಂದೂರ್ ಎಂಬ ಹಿರಿಯ ಜೀವವನ್ನು, ಅವರ ಕೆಲ ಸಂಗಡಿಗರ ಸಮೇತ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿರುವಾಗಲೇ ಬಂಧಿಸಲಾಯಿತು. ಷರತ್ತುಬದ್ಧವಾಗಿ ತಿರುವಳ್ಳುವರ್ ಪ್ರತಿಮೆ ಅನಾವರಣ ಆಗಬೇಕು ಎಂದು ಹೇಳಿದ್ದೇ ಅವರ ತಪ್ಪು. ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು, ಎರಡು ಸಮುದಾಯಗಳ ನಡುವೆ ದ್ವೇಷ ಹಬ್ಬಿಸುವ ಯತ್ನದ ಆರೋಪದಲ್ಲಿ ರಾವ್ ಬೈಂದೂರ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದರು.

ಇತ್ತ ದೇಶದ ಮಾಜಿ ಪ್ರಧಾನಿಯನ್ನು ಕೊಂದ, ನಿಷೇಧಿತ ಸಂಘಟನೆಯ ಮುಖ್ಯಸ್ಥ, ಇತ್ತೀಚಿಗಷ್ಟೆ ಶ್ರೀಲಂಕಾ ಸೈನ್ಯದಿಂದ ಕೊಲ್ಲಲ್ಪಟ್ಟ ಪ್ರಭಾಕರನ್ ಎಂಬ ರಾಷ್ಟ್ರದ್ರೋಹಿಯ ಭಾವಚಿತ್ರದ ಮೆರವಣಿಗೆ ನಡೆಸುವವರೇ ಧನ್ಯರು. ಅವರ ಮೇಲೆ ಕೇಸೂ ಇಲ್ಲ, ದೂರೂ ಇಲ್ಲ. ನಮ್ಮ ಪತ್ರಿಕೆಗಳ ಸಂಪಾದಕೀಯ ಪುಟದಲ್ಲಿ `ಇದು ಸಲ್ಲ ಎಂಬ ಒಂದು ಸಾಲೂ ಇಲ್ಲ. ಕೆಲ ಸಾಹಿತಿಗಳದ್ದು ಯಥಾಪ್ರಕಾರ ಈ ವಿಷಯದಲ್ಲಿ ಗಂಭೀರ ಮೌನ. ಒಂದು ವೇಳೆ ಇದನ್ನೂ ಕನ್ನಡ ಸಂಘಟನೆಗಳು ಪ್ರಶ್ನಿಸಿದರೆ, ಕನ್ನಡ ಚಳವಳಿಗಾರರು ದಡ್ಡರು ಎಂದು ಅವರು ಮತ್ತೆ ಬಾಯಿಬಡಿದು ಕಿರುಚುತ್ತಾರೆ.


*****
ಕನ್ನಡ ಚಳವಳಿಗಾರರು ಬಳಸುವ ಭಾಷೆಯ ಬಗ್ಗೆ, ಉಚ್ಛಾರಣೆಯ ದೋಷದ ಬಗ್ಗೆಯೂ ಮತ್ತೆ ಕೆಲವರು ಚರ್ಚೆ ಆರಂಭಿಸಿದ್ದಾರೆ. ಈ ಕುರಿತು ನಾನು ಹಿಂದೆಯೇ ಬರೆದಿದ್ದೆ. ಸಂಸ್ಕೃತಭೂಯಿಷ್ಠವಾದ ಕನ್ನಡವನ್ನು ಮಾತನಾಡುವವರು ಮಾತ್ರ ಕನ್ನಡಿಗರು ಎಂಬುದು ಇವರ ವರಸೆ. ಹೀಗೆಲ್ಲ ಮಾತನಾಡುವವರು ಮೇಲ್ವರ್ಗಕ್ಕೆ ಸೇರಿದವರು ಎಂಬುದು ಸ್ಪಷ್ಟ.

ಮೊನ್ನೆ ಟಿವಿ ಆಂಕರ್ ಒಬ್ಬರು ಇದೇ ಪ್ರಶ್ನೆಯನ್ನು ಎತ್ತಿದರು. ಕನ್ನಡ ಚಳವಳಿಗಾರರೊಬ್ಬರಿಗೆ ಒಂದೇ ಒಂದು ವಾಕ್ಯ ತಪ್ಪಿಲ್ಲದಂತೆ ಮಾತನಾಡಲು ಬರುವುದಿಲ್ಲ. ಇವರು ಎಂಥ ಚಳವಳಿ ಮಾಡುತ್ತಾರೆ ಎಂದು ಅವರು ಮತ್ತೊಬ್ಬ ಚಳವಳಿಗಾರನಿಗೆ ಪ್ರಶ್ನಿಸುತ್ತಿದ್ದರು.

ಇದೇ ಚಾನೆಲ್‌ಗೆ ಪ್ರೈಮ್‌ಬ್ಯಾಂಡ್‌ನಲ್ಲಿ ಕೇಬಲ್ ಆಪರೇಟರ್‌ಗಳು ಅವಕಾಶ ನೀಡದೇ ಇದ್ದಾಗ, ಆ ಚಾನೆಲ್‌ಗೆ ಆಸರೆಗೆ ನಿಂತಿದ್ದು ಅದೇ ಕನ್ನಡ ಹೋರಾಟದ ಮುಖಂಡರೇ ಎಂಬುದು ವಿಚಿತ್ರ. ಆಗ ಅವರಿಗೆ ಭಾಷಾಶುದ್ಧಿಯ ಅಗತ್ಯತೆ ಕಂಡುಬಂದಿರಲಿಲ್ಲ.

ಚಳವಳಿಗಾರರನ್ನು ಕನ್ನಡದ ಹೆಸರಿನಲ್ಲಿ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವಾಗ ಈ ಮಂದಿಗೆ ಚಳವಳಿಗಾರರ ಭಾಷಾ ಜ್ಞಾನ, ವ್ಯಾಕರಣ ಜ್ಞಾನ ನೆನಪಿಗೆ ಬರುವುದಿಲ್ಲ.

ಕನ್ನಡ ಕಾರ್ಯಕರ್ತನೊಬ್ಬ ಈ ಬಗ್ಗೆ ನೊಂದು ಮಾತನಾಡಿದಾಗ ಆತನಿಗೆ ಹೇಳಿದೆ: ನಿಮಗೆ ಭಾಷಾ ಶುದ್ಧಿ ಇಲ್ಲ ಎಂದು ಹೇಳುವವರಿಗೆ ಹೃದಯವೇ ಶುದ್ಧವಿಲ್ಲ. ಅವರ ದೇಹದ ಭಾಷೆ(ಮ್ಯಾನರಿಸಂ)ಯನ್ನು ಗಮನಿಸಿ ನೋಡಿ. ಅಸಹ್ಯವಾಗುತ್ತದೆ. ಅಂಥವರ ನೀತಿಪಾಠ ನಿಮಗೆ ಬೇಕಾಗೂ ಇಲ್ಲ.

*****

ಬಸವಣ್ಣನ ನಾಡು ಇದು. ಪ್ರತಿಮಾ ಸಂಸ್ಕೃತಿ ನಮ್ಮ ರಾಜ್ಯಕ್ಕೆ ಒಗ್ಗಿಬರದ ವಿಷಯ. `ಸ್ಥಾವರಕ್ಕಳಿವುಂಟು, ಜಂಗಕ್ಕಳಿವಿಲ್ಲ ಎಂದವರು ನಮ್ಮ ಬಸವಾದಿ ಶರಣರು.

ಈಗಾಗಲೇ ಸ್ಥಾಪನೆಯಾಗಿರುವ ಎಲ್ಲ ಪ್ರತಿಮೆಗಳ ಮೇಲೂ ಕಾಗೆ-ಗೂಬೆಗಳು ಕೂತು-ಹೇತು ಹೋಗುತ್ತವೆ. ಒಮ್ಮೊಮ್ಮೆ ಮನುಷ್ಯರೇ ಈ ಕೆಲಸವನ್ನು ಮಾಡುತ್ತಾರೆ. ಮಲ ಸುರಿಯುತ್ತಾರೆ, ಚಪ್ಪಲಿ ಹಾರ ಹಾಕುತ್ತಾರೆ.

ಇವತ್ತು ನಮ್ಮ ಸಾಹಿತಿಗಳ ದಿವ್ಯದೃಷ್ಟಿಯಲ್ಲಿ ಸೌಹಾರ್ದತೆಯ ಸಂಕೇತವಾಗಿರುವ ತಿರುವಳ್ಳುವರ್, ಸರ್ವಜ್ಞ ಪ್ರತಿಮೆಗಳು ನಾಳೆ ದ್ವೇಷದ ರೂಪಕಗಳನ್ನೂ ಹರಡಬಹುದು.

ಅಷ್ಟಕ್ಕೂ ತಮಿಳರ ಆಕ್ರಮಣಶೀಲತೆ, ಸಾಮ್ರಾಜ್ಯಶಾಹಿ ಮನೋಭಾವದ ಪರಿಚಯ ಎಲ್ಲರಿಗೂ ಇದೆ. ತಿರುವಳ್ಳುವರ್ ಪ್ರತಿಮೆ ಅನಾವರಣವಾದ ಮಾತ್ರಕ್ಕೆ ತಮಿಳುನಾಡು ಸರ್ಕಾರ ಕಿತಾಪತಿ ಬಿಡುತ್ತದೆ ಎಂದು ಭಾವಿಸುವವನು ಶತಮೂರ್ಖನೇ ಆಗಿರಬೇಕು. ಮುಂದೆ ಕಾವೇರಿ ವಿಷಯಕ್ಕೋ, ಹೊಗೇನಕಲ್ ವಿಷಯಕ್ಕೋ ಮತ್ತೆ ವಿವಾದ ಎದ್ದು ನಿಂತಾಗ ನಮ್ಮ ವಿಶಾಲ ಹೃದಯದ ಸಾಹಿತಿ-ಪತ್ರಕರ್ತರು ಯಾವ ನಿಲುವು ತಳೆಯುತ್ತಾರೋ ಕಾದು ನೋಡಬೇಕು.

****

ಈ ಲೇಖನ ಬರೆಯುವ ಹೊತ್ತಿಗೂ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡರಿಗೆ ಜೈಲಿನಿಂದ ಬಿಡುಗಡೆಯಾಗಿರಲಿಲ್ಲ. ಜೈಲು ಚಳವಳಿಗಾರರಿಗೆ ಹೊಸದೇನೂ ಅಲ್ಲ. ಇವತ್ತು ಹೋಗುತ್ತಾರೆ, ನಾಳೆ ಬರುತ್ತಾರೆ.

ಆದರೆ ಸರ್ಕಾರದ, ಪ್ರಭುತ್ವದ ಮರ್ಜಿಗೆ ಬಿದ್ದು, ಅವಕಾಶಗಳಿಗಾಗೋ, ಬಿಟ್ಟಿ ಪ್ರಚಾರಕ್ಕಾಗೋ, ಜಾತಿಯ ಕಾರಣಕ್ಕೋ ಚಳವಳಿಗಾರರನ್ನು ನಿಂದಿಸುವ ಕಾಯಕ ಮಾಡಿಕೊಂಡು ಬರುತ್ತಿರುವ ಮೇಧಾವಿಗಳು ತಮ್ಮ ಸುತ್ತಲೇ ಒಂದು ಜೈಲನ್ನು ಕಟ್ಟಿಕೊಂಡಿದ್ದಾರೆ. ಅವರು ಅದರಿಂದ ಯಾವತ್ತೂ ಹೊರಬರಲಾರರು. ಸರ್ಕಾರದ ಜೀತಗಾರಿಕೆಯ ಬಂಧೀಖಾನೆಯಲ್ಲಿ ಅವರದು ಜೀವಾವಧಿ ಶಿಕ್ಷೆ.

*****

ಈ ಲೇಖನದ ಮೂಲಕ ಹಲವಾರು ಗೆಳೆಯರ ಮುನಿಸನ್ನು ಎದುರಿಸಬೇಕಾಗುತ್ತದೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಹೊಸ ಶತ್ರುಗಳು ಸೃಷ್ಟಿಯಾಗುತ್ತಾರೆ ಎಂಬುದೂ ಗೊತ್ತಿದೆ. ಆದರೆ ಕಳೆದ ಹತ್ತು ವರ್ಷಗಳಿಂದ ಕನ್ನಡ ಚಳವಳಿಗಾರರನ್ನು ತುಂಬ ಹತ್ತಿರದಿಂದ ಗಮನಿಸಿಕೊಂಡು ಬಂದಿದ್ದೇನೆ. ಅವರ ತಳಮಳ, ನೋವು ಸಂಕಟಗಳೆಲ್ಲವನ್ನೂ ನಾನು ಪ್ರತ್ಯಕ್ಷ ನೋಡಿದ್ದೇನೆ.

ಹೀಗಾಗಿ ಅವರನ್ನು ಅಪಮಾನಿಸುವ, ಅವರ ಕಾಳಜಿಯನ್ನು ಅನುಮಾನದಿಂದ ನೋಡುವ ಯಾರನ್ನೇ ಆಗಲಿ ನಾನು ವಿರೋಧಿಸುತ್ತೇನೆ. ಅದು ನನ್ನ ಕರ್ತವ್ಯವೆಂದೇ ಭಾವಿಸಿದ್ದೇನೆ.

Sunday, July 19, 2009

ಹಳ್ಳಿ ಥೇಟರ್‌ನ ಪವಾಡ ಮತ್ತು ಪ್ರಸಾದ್

ಪತ್ರಿಕೆ, ಚಳವಳಿ, ಸಂಘಟನೆ ಇತ್ಯಾದಿಗಳಲ್ಲಿ ಹೊರಳಿಕೊಂಡು, ಆದರ್ಶದ ಹುಮ್ಮಸ್ಸಿನಲ್ಲಿ ಓಡಾಡುವಾಗ ನಮ್ಮ ಕಣ್ಣಿಗೆ ಬಿದ್ದವರು ರಕ್ಷಿದಿ ಪ್ರಸಾದ್. ಅವತ್ತಿಗೆ ಅವರು ನಮಗೆ ಒಂಥರ ನಿಗೂಢ ವ್ಯಕ್ತಿ. ದಿನವೂ ಪತ್ರಿಕೆಗಳನ್ನು ಕೊಳ್ಳಲು ಗೆಳೆಯ ನಜರುಲ್ಲಾ ಅವರ ಅಂಗಡಿಗೆ ಅವರು ಬರುತ್ತಿದ್ದರು. ಅವತ್ತು ಹೊಸದಾಗಿ ಬಂದ ಎಲ್ಲ ಪತ್ರಿಕೆಗಳನ್ನೂ ಅವರು ಕೊಳ್ಳುತ್ತಿದ್ದರು. ಸ್ವಲ್ಪ ಹೊತ್ತು ಅಲ್ಲೇ ಹರಟೆ, ಒಂದಷ್ಟು ಓಡಾಟ, ನಂತರ ಬಂದ ಬೈಕ್‌ನಲ್ಲೇ ವಾಪಾಸು ಬೆಳ್ಳೇಕೆರೆಗೆ ಹೋಗುತ್ತಿದ್ದರು.

ಸಕಲೇಶಪುರದ ಮೂಡಿಗೆರೆಗೆ ಹೋಗುವ ರಸ್ತೆಯಲ್ಲಿ ಹಾನುಬಾಳಿಗೂ ಮುನ್ನ ಸಿಗುವ ಬೆಳ್ಳೇಕೆರೆಯಲ್ಲಿ `ಜೈ ಕರ್ನಾಟಕ ಸಂಘದ ಬೋರ್ಡನ್ನು ಆಗಾಗ ನೋಡಿದ್ದೆವು, ಆ ಸಂಘದಲ್ಲಿ ಪ್ರಸಾದ್ ಕ್ರಿಯಾಶೀಲರು ಎಂಬುದು ಗೊತ್ತಿತ್ತು. ನಂತರ ನಿಧಾನವಾಗಿ ಪ್ರಸಾದರ ಎಲ್ಲ ಚಟುವಟಿಕೆಗಳು ಗೊತ್ತಾಗತೊಡಗಿದಾಗಿನಿಂದ ಈ ವ್ಯಕ್ತಿ ಮತ್ತಷ್ಟು ನಿಗೂಢ ಅನಿಸತೊಡಗಿತ್ತು.

ಸಕಲೇಶಪುರದಂಥ ಪಟ್ಟಣದಲ್ಲಿ ಒಂದು ಸಂಘಟನೆಯನ್ನು ಕಟ್ಟಿ ಬೆಳೆಸಲು ನಾವು ಪಟ್ಟ ಪರದಾಟಗಳನ್ನು ನೆನಪಿಸಿಕೊಂಡರೆ ಮೈ ಜುಮ್ಮೆನಿಸುತ್ತದೆ. ಆದರೆ ಪ್ರಸಾದ್ ಬೆಳ್ಳೇಕೆರೆಯಂಥ ಕುಗ್ರಾಮದಲ್ಲಿ ಪವಾಡವನ್ನೇ ಸಾಧಿಸಿದ್ದರು.

ಪ್ರಸಾದ್ ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್ ಕೃತಿಯನ್ನು ಎರಡೆರಡು ಬಾರಿ ಓದಿದೆ. ಅವರ ಮೇಲಿದ್ದ ಗೌರವ ಇಮ್ಮಡಿಯಾಯಿತು ಎಂದಷ್ಟೆ ಹೇಳಿದರೆ ಕ್ಲೀಷೆ ಅನಿಸುತ್ತದೆ. ಹೆಗ್ಗೋಡಿನಲ್ಲಿ ಕುಳಿತು ಸುಬ್ಬಣ್ಣ ಮಾಡಿದ್ದನ್ನೇ ರಕ್ಷಿದಿ ಪ್ರಸಾದ್ ಬೆಳ್ಳೇಕೆರೆಯಲ್ಲಿ ಮಾಡಿದರು. ಸುಬ್ಬಣ್ಣ ಅವರಿಗಿದ್ದ ಆರ್ಥಿಕ ಅನುಕೂಲಗಳು, ಸಾಂಸ್ಕೃತಿಕ ಲೋಕದ ದಿಗ್ಗಜರ ಬೆಂಬಲ ಪ್ರಸಾದ್ ಅವರಿಗಿರಲಿಲ್ಲ. ಆದರೂ ಅವರು ಎದೆಗುಂದಲಿಲ್ಲ. ವಿಶ್ವಾಸ ಕಳೆದುಕೊಳ್ಳಲಿಲ್ಲ. ಅವರ ಜತೆಗಾರರು ಸಹ ಅವರನ್ನು ಕೈಬಿಡಲಿಲ್ಲ. ಎಲ್ಲ ಅಡೆ ತಡೆಗಳ ನಡುವೆಯೂ ಅವರು ಬೆಳ್ಳೇಕೆರೆಯನ್ನು ಕನ್ನಡ ರಂಗಭೂಮಿಯ ಭೂಪಟದಲ್ಲಿ ತಂದು ನಿಲ್ಲಿಸಿದರು. ಇಂಥವು ಎಲ್ಲರಿಂದಲೂ, ಎಲ್ಲ ಕಡೆಯಲ್ಲೂ ಆಗುವುದಿಲ್ಲ. ಹೀಗಾಗಿ ಪ್ರಸಾದ್ ಹಾಗು ಬೆಳ್ಳೇಕೆರೆಯ ಹೆಸರುಗಳೇ ನನ್ನಂಥವರಿಗೆ ಹೆಮ್ಮೆಯನ್ನು ಉಕ್ಕಿಸುವ, ಸ್ಪೂರ್ತಿಯನ್ನು ಚಿಮ್ಮಿಸುವ ಸಾಧನಗಳು.

****



ಅಷ್ಟಕ್ಕೂ ಪ್ರಸಾದ್ ಬೆಳ್ಳೇಕೆರೆಯಂಥ ಕುಗ್ರಾಮದಲ್ಲಿ ಮಾಡಿದ ಪವಾಡವೇನು ಎಂಬುದನ್ನು ಅರಿಯಲು ಅವರ `ಬೆಳ್ಳೇಕೆರೆ ಹಳ್ಳಿಥೇಟರ್ ಕೃತಿಯನ್ನು ಓದಬೇಕು. ತಮ್ಮ ಕೃತಿಯನ್ನು ಅವರು `ಒಂದು ಗ್ರಾಮೀಣ ರಂಗಭೂಮಿಯ ಆತ್ಮಕಥನ ಎಂದು ಅವರು ಕರೆದುಕೊಂಡಿದ್ದಾರೆ.

ಏಕಕಾಲಕ್ಕೆ ಒಂದು ರೋಚಕ ಕಾದಂಬರಿಯೂ, ಆತ್ಮರತಿಯಿಲ್ಲದ ಆತ್ಮಚರಿತ್ರೆಯೂ, ಅಜ್ಞಾತ ಹಳ್ಳಿಯೊಂದರ ಚರಿತ್ರೆಯೂ ಆಗಿಬಿಡುವ ಈ ಕೃತಿಯ ಸೊಗಡು ಇರುವುದೇ ನಿರೂಪಣೆಯ ವಿಧಾನದಲ್ಲಿ. ನಿರುದ್ವಿಗ್ನವಾಗಿ, ಭಾವಾವೇಶವಿಲ್ಲದೆ ತಮ್ಮ ಸುತ್ತಲ ಬದುಕನ್ನು ಕಟ್ಟಿಕೊಡುವ ಪ್ರಸಾದ್ ಒಮ್ಮೊಮ್ಮೆ ತೇಜಸ್ವಿಯವರನ್ನು ನೆನಪಿಸುತ್ತಾರೆ. ಈ ಬಗೆಯ ನಿರುಮ್ಮಳ ಬರವಣಿಗೆ ಪ್ರಸಾದ್ ಅವರಿಗೆ ಸುಲಭವಾಗಿ ಒಗ್ಗಿರುವುದನ್ನು ಗಮನಿಸಿದರೆ, ಇಷ್ಟು ವರ್ಷ ನಾಟಕಗಳನ್ನು ಹೊರತುಪಡಿಸಿ ಏನನ್ನೂ ಬರೆಯಲಿಲ್ಲವೇಕೆ ಎಂಬ ವ್ಯಥೆಯೂ ಕಾಡುತ್ತದೆ.

ಡೈರಿ ಫಾರಂನ ಉದ್ಯೋಗಿಯಾಗಿ, ಇಡೀ ಕಾರ್ಮಿಕವಲಯದ ಜತೆ ಒಡನಾಡುತ್ತ, ಪ್ರಸಾದ್ ಕಟ್ಟಿಕೊಂಡ ಬದುಕೇ ಒಂದು ಕಾವ್ಯ. ಇವತ್ತಿನ ಕಾಲಘಟ್ಟಕ್ಕೆ ಒಂಥರಾ ಸಿನಿಮೀಯ ಅನಿಸುವ ಘಟನೆಗಳು ಇಲ್ಲಿವೆ. ನಿರಕ್ಷರಿ ಎನಿಸಿಕೊಳ್ಳಲು ಅವಮಾನವೆನಿಸಿ, ಅಕ್ಷರ ಕಲಿಯಲು ತೊಡಗುವ ಲಕ್ಷ್ಮಯ್ಯನಿಗೆ ಪುಟ್ಟ ವಯಸ್ಸಿನಲ್ಲೇ ಮೇಷ್ಟ್ರಾಗುವುದರೊಂದಿಗೆ ಪ್ರಸಾದ್ ಅವರ ಸಾಮಾಜಿಕ ಜೀವನ ಆರಂಭಗೊಳ್ಳುತ್ತದೆ.

ತದನಂತರ ಓದು ಬಾರದ ಕಾರ್ಮಿಕರನ್ನೆಲ್ಲ ಗುಡ್ಡೆ ಹಾಕಿ, ಅವರಿಗೆ ಅಕ್ಷರಾಭ್ಯಾಸ ಕಲಿಸುವುದು, ಅದಕ್ಕಾಗಿ ರಾತ್ರಿ ಶಾಲೆಯನ್ನು ತೆರೆಯುವುದು, ನಂತರ ಅದೇ ಜನರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟುವುದು, ಕಟ್ಟಿದ ನಾಟಕ ತಂಡವನ್ನು ರಾಜ್ಯ ಮಟ್ಟದ ಖ್ಯಾತಿಗೆ ತಂದು ನಿಲ್ಲಿಸುವುದು.... ಹೀಗೆ ಸಾಗುತ್ತದೆ ಪ್ರಸಾದ್ ಅವರ ಯಶೋಗಾಥೆ.

ಈ ದೊಡ್ಡ ಪಯಣದಲ್ಲಿ ಪ್ರಸಾದ್ ಅವರಿಗೆ ಹೆಗಲಿಗೆ ಹೆಗಲು ಕೊಟ್ಟವರು ನೂರಾರು ಮಂದಿ. ಬೌದ್ಧಿಕ ವಲಯದ ಜನರಿಗೆ ಸೀಮಿತವಾಗಿದ್ದ ಹವ್ಯಾಸಿ ರಂಗಭೂಮಿಯನ್ನು ಅನಕ್ಷರಕುಕ್ಷಿಗಳು, ಈಗಷ್ಟೆ ಅಕ್ಷರ ಕಲಿತವರು, ಅಲ್ಪಸ್ವಲ್ಪ ಓದಿಕೊಂಡವರಿಗೆ ಒಗ್ಗಿಸುವುದು ಅಷ್ಟು ಸುಲಭದ್ದೇನೂ ಅಲ್ಲ. ಅದೂ ಹೇಳಿಕೇಳಿ ಬೆಳ್ಳೇಕರೆಯಂಥ ವರ್ಷದ ಆರು ತಿಂಗಳು ಮಳೆಯಲ್ಲಿ ಮುಳುಗಿಹೋಗುವ ಮಲೆನಾಡಿನ ಪುಟ್ಟ ಹಳ್ಳಿಯಲ್ಲಿ, ಕೂಲಿಕಾರ್ಮಿಕರ ನಡುವೆ ಇಂಥದ್ದೊಂದು ತಂಡ ಅರಳುವುದು ನಿಜಕ್ಕೂ ಪವಾಡವೇ.

ಇಡೀ ಕಥನದುದ್ದಕ್ಕೂ ಪ್ರಸಾದ್ ಮತ್ತು ಅವರ ತಂಡ ಎದುರಿಸಿದ ಸವಾಲುಗಳನ್ನು ಕಾಣಬಹುದು. ಐದು ರೂಪಾಯಿ ದಿನಗೂಲಿ ಪಡೆಯುವವರಿಂದ ನಾಲ್ಕಾಣೆ ಚಂದಾ ಪಡೆದು ರಂಗಚಟುವಟಿಕೆ ನಡೆಸಿಕೊಂಡು ಬರುವುದನ್ನು ಬೆಂಗಳೂರು-ಮೈಸೂರಿನ ಹವ್ಯಾಸಿ ರಂಗತಂಡಗಳು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲವೇನೋ?

ಅಪಾರ ಬಡತನ, ಹಳ್ಳಿ ರಾಜಕೀಯ, ಅನಕ್ಷರತೆ, ಮೌಢ್ಯ, ಕುಡಿತ, ಜಾತಿ ಜಗಳಗಳ ನಡುವೆ ಇದೊಂದು ತಂಡ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಿಟ್ಟಿಸುವುದು, ರಂಗಾಯಣದಲ್ಲಿ ಪ್ರದರ್ಶನ ನೀಡುವುದು ಒಂದೊಳ್ಳೆ ಕಮರ್ಷಿಯಲ್ ಸಿನಿಮಾಗೆ ಅರ್ಥಪೂರ್ಣ ಕ್ಲೈಮ್ಯಾಕ್ಸ್ ಕೂಡ ಆಗಿಬಿಡಬಹುದು. ಹಾಗೆಯೇ ಜಾಗತೀಕರಣದ ಕಾಲಘಟ್ಟದಲ್ಲಿ ದೇಸೀ ಸಂಸ್ಕೃತಿಯ ಪರ್ಯಾಯ ಹುಡುಕಾಟಗಳಿಗೆ ಅರ್ಥಪೂರ್ಣ ರೂಪಕವೂ ಆಗಬಹುದು.

****

ಹಳ್ಳಿ ಥೇಟರ್ ಕೇವಲ ಬೆಳ್ಳೇಕರೆಯಲ್ಲಿ ಅರಳಿದ ರಂಗಚಟುವಟಿಕೆಗಳ ಕುರಿತ ಕೃತಿಯೇನಲ್ಲ. ತಮ್ಮ ಸಮಕಾಲೀನ ರಾಜಕೀಯ, ಸಾಮಾಜಿಕ ಸ್ಥಿತಿಗತಿಗಳನ್ನೆಲ್ಲ ಪ್ರಸಾದ್ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿನ ದ್ವಿತೀಯಾರ್ಧದ ಕಥನಗಳಿಗೆ ನಾನೂ ಸಹ ಪ್ರತ್ಯಕ್ಷ ಸಾಕ್ಷಿಯೇ. ಒಂದೆರಡು ಕಡೆ ನನ್ನನ್ನೂ ಪ್ರಸಾದ್ ಉಲ್ಲೇಖಿಸಿದ್ದಾರೆ.

ಆರು ತಿಂಗಳು ಮಳೆಯಲ್ಲಿ ಮುಳುಗಿ ಹೊರಜಗತ್ತಿನಿಂದ ಸಂಪರ್ಕವನ್ನೇ ಕಡಿದುಕೊಳ್ಳುವ (ಈಗ ಪರಿಸ್ಥಿತಿ ಸ್ವಲ್ಪ ಬದಲಾಗಿದೆ.) ಮಲೆನಾಡಿನ ಜನರ ರಾಜಕೀಯ ಪ್ರಜ್ಞೆ ನಿಬ್ಬೆರಗಾಗಿಸುವಂಥದ್ದು. ಇಂದಿರಾಗಾಂಧಿ, ದೇವರಾಜ ಅರಸು ಅವರನ್ನು ಜನರು ಸ್ವೀಕರಿಸಿದ ರೀತಿ ವಿಸ್ಮಯಕಾರಿ.

ರೈತ ಸಂಘದ ನಾಟಕೀಯ ಪ್ರವೇಶ, ತದನಂತರದ ಬೆಳವಣಿಗೆಗಳನ್ನೂ ಪ್ರಸಾದ್ ಆ ಸಂಘದಲ್ಲಿ ತೊಡಗಿಕೊಂಡವರಾದ್ದರಿಂದ ಅಧಿಕೃತವಾಗಿ ಉಲ್ಲೇಖಿಸಿದ್ದಾರೆ. ತುರ್ತು ಪರಿಸ್ಥಿತಿ, ಜೆಪಿ ಚಳವಳಿಯೂ ಸೇರಿದಂತೆ ಇನ್ನಿತರ ಚಳವಳಿಗಳೂ ಇಲ್ಲಿ ಪ್ರಾಸಂಗಿಕವಾಗಿ ಬಂದುಹೋಗಿವೆ.

ಪ್ರಸಾದ್ ರೈತ ಸಂಘದಂಥ ಚಳವಳಿಗಳಲ್ಲಿ ಕ್ರಿಯಾಶೀಲರಾಗಿದ್ದವರಾದರೂ ರಾಜಕಾರಣದ ಬಗ್ಗೆ ಸಿನಿಕತನ ಇಟ್ಟುಕೊಂಡವರಲ್ಲ. ಬೆಳ್ಳೇಕೆರೆಯ ಶಾಲೆಗೆ ಒಂದೆಕರೆ ಜಾಗ ಕೊಡಲು ಅರಣ್ಯ ಇಲಾಖೆಯವರು ಕಿರಿಕಿರಿ ಮಾಡುತ್ತಿದ್ದಾಗ ಆಗಿನ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರು ಸಹಾಯ ಮಾಡಿದ್ದು, ಕೇವಲ ಪತ್ರವೊಂದನ್ನು ಬರೆದದಕ್ಕೆ ರಂಗಮಂದಿರ ನಿರ್ಮಾಣಕ್ಕೆ ಬಂಗಾರಪ್ಪ ತಾವು ಮುಖ್ಯಮಂತ್ರಿಯಾಗಿದ್ದಾಗ ಜಾಗ ನೀಡಿದ್ದನ್ನು ಅವರು ಇಲ್ಲಿ ಸ್ಮರಿಸಿಕೊಂಡಿದ್ದಾರೆ. ಚಳವಳಿ, ಹೋರಾಟಗಳಲ್ಲಿ ಮುಳುಗಿದವರಿಗೆ ಅಧಿಕಾರ ರಾಜಕಾರಣದಿಂದ ಏನೂ ಸಾಧ್ಯವಿಲ್ಲ ಎಂಬ ಸಿನಿಕತನ ಆವರಿಸಿರುತ್ತದೆ. ಈ ಎರಡು ಘಟನೆಗಳಲ್ಲದೆ, ತಮ್ಮೂರಿನ ಶಾಲೆ, ರಸ್ತೆ, ನೀರು, ಬಸ್‌ನಿಲ್ದಾಣ ಇತ್ಯಾದಿಗಳಿಗಾಗಿ ಪ್ರಸಾದ್ ಮತ್ತು ಗೆಳೆಯರು ಪೊಲಿಟಿಕಲ್ ಆಕ್ಟಿವಿಸಮ್‌ಗೆ ಮೊರೆ ಹೋಗುತ್ತಾರೆ; ಯಶಸ್ವಿಯೂ ಆಗುತ್ತಾರೆ.

****

ಹಳ್ಳಿ ಥೇಟರ್ ಕೇವಲ ಬೆಳ್ಳೇಕೆರೆಯ ಕಥನವೂ ಅಲ್ಲದೆ, ಇಡೀ ಸಕಲೇಶಪುರ ತಾಲ್ಲೂಕಿನ, ಇನ್ನೂ ಮುಂದುವರೆದು ಚಿಕ್ಕಮಗಳೂರು, ಸಕಲೇಶಪುರ, ಕೊಡುಗು ಜಿಲ್ಲೆಗಳಲ್ಲಿ ಹರಡಿಕೊಂಡ ಮಲೆನಾಡಿನ ಚಿತ್ರಣಗಳನ್ನೂ ನೀಡುತ್ತದೆ. ಮಲೆನಾಡಿನ ರೈತರ, ಕೂಲಿಕಾರ್ಮಿಕರ ಸಮಸ್ಯೆಗಳನ್ನು ಕೃತಿ ಎಳೆಎಳೆಯಾಗಿ ಬಿಡಿಸಿಡುತ್ತದೆ. ಮಲೆನಾಡಿನ ವೈವಿಧ್ಯಮಯ ಬದುಕಿನ ರಂಜನೀಯ ದೃಶ್ಯಗಳೂ ಇಲ್ಲಿವೆ (ಥೇಟ್ ತೇಜಸ್ವಿಯವರ ಕಾದಂಬರಿಗಳಲ್ಲಿ ಕಾಣುವಂತೆ)

ಹೇಳಿಕೇಳಿ ಮಲೆನಾಡಿನ ಜನರು ಜೀವನ್ಮುಖಿಗಳು. ಕಡುಕಷ್ಟದಲ್ಲೂ ಸುಖವನ್ನು ಹುಡುಕಿಕೊಳ್ಳುವವರು. ವಿಪರೀತ ಹಾಸ್ಯಪ್ರಿಯರು. ಇದೆಲ್ಲದರ ನಡುವೆಯೂ ಈ ಜನರು ಜಿದ್ದಿಗೆ ಬಿದ್ದರೆ, ಕುಡುಗೋಲು-ಕತ್ತಿಗಳಿಂದ ಮಾತನಾಡುವವರು. ಇದಕ್ಕೆ ಸಾಕಷ್ಟು ಉದಾಹರಣೆಗಳು ಹಳ್ಳಿಥೇಟರ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಜಗಳ, ಹಲ್ಲೆ, ಕೊಲೆ ಇತ್ಯಾದಿಗಳ ವಿವರಗಳ ಮಧ್ಯೆಯೂ ಇದೆಲ್ಲವನ್ನೂ ಮೀರಿ ನಿಲ್ಲುವುದು ಇಲ್ಲಿನ ಜನರ ಸಾಂಸ್ಕೃತಿಕ ಕ್ರಿಯಾಶೀಲತೆ. ಅದನ್ನು ಪ್ರಸಾದ್ ಇಲ್ಲಿ ಚೆನ್ನಾಗಿ ಹಿಡಿದಿಟ್ಟಿದ್ದಾರೆ.

****

ಕರ್ನಾಟಕ ನಾಟಕ ಅಕಾಡೆಮಿ ಏರ್ಪಡಿಸಿದ್ದ ಗ್ರಾಮೀಣ ರಂಗೋತ್ಸವದಲ್ಲಿ ಪ್ರಸಾದ್ ಬರೆದ ಮಾಯಾಮೃಗ ನಾಟಕವನ್ನು ಬೆಳ್ಳೇಕರೆಯ ಜೈ ಕರ್ನಾಟಕ ಸಂಘದವರು ಆಡಿ ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸುತ್ತಾರೆ.

ವಿಶೇಷವೆಂದರೆ ನಾಟಕ ತಂಡದಲ್ಲಿ ಇದ್ದವರ ಪೈಕಿ ಮೂವರು ಬಡಗಿಗಳು, ಇಬ್ಬರು ಗಾರೆಯವರು, ನಾಲ್ಕು ಜನ ಕೂಲಿಕಾರ್ಮಿಕರು. ಒಬ್ಬ ಟೈಲರ್, ಇಬ್ಬರು ಡ್ರೈವರ್‌ಗಳು, ಒಬ್ಬರು ಶಾಲಾ ಶಿಕ್ಷಕರು-ಉಳಿದವರು ಇಂಥದೇ ಬೇರೆ ಬೇರೆ ವೃತ್ತಿಗಳಲ್ಲಿ ಇದ್ದವರು, ಜತೆಯಲ್ಲಿ ಒಂದಿಬ್ಬರು ಶಾಲಾ ಮಕ್ಕಳು!

ಇಂಥದ್ದೊಂದು ರಂಗತಂಡ ರಾಜ್ಯದ ಇನ್ಯಾವ ಮೂಲೆಯಲ್ಲಾದರೂ ಇರಬಹುದೇ? ಇದ್ದರೂ ಹತ್ತಾರು ವರ್ಷಗಳಿಂದ ಹೀಗೆ ಕ್ರಿಯಾಶೀಲವಾಗಿ ಇದ್ದಿರಲು ಸಾಧ್ಯವೇ?

ಪ್ರಸಾದ್ ಅವರ ಹಳ್ಳಿಥೇಟರ್‌ನ ಕೆಲವು ಅಧ್ಯಾಯಗಳನ್ನು ಚಂಪಕಾವತಿ ಬ್ಲಾಗ್‌ನಲ್ಲಿ ಸುಧನ್ವಾ ದೇರಾಜೆ ಪುಸ್ತಕ ಬಿಡುಗಡೆಗೂ ಮುನ್ನವೇ ಕಾಣಿಸಿದ್ದರು. ಕುತೂಹಲವಿರುವವರು ಚಂಪಕಾವತಿಗೊಮ್ಮೆ ಭೇಟಿ ಕೊಡಿ.

ಬೆಳ್ಳೇಕರೆಯಲ್ಲಿ ಎದ್ದು ನಿಂತಿರುವ ಪ್ರಕೃತಿ ರಂಗಮಂಚವೂ ಸೇರಿದಂತೆ ಆ ಊರಿನ ಸಾಂಸ್ಕೃತಿಕ ವೈಭವ ನೋಡಲು ಹೋಗುವವರಿಗೆ ಅಲ್ಲಿ ಸ್ವಾಗತ ಇದ್ದೇ ಇರುತ್ತದೆ. ಪ್ರಸಾದ್ ಜತೆ ಮಾತನಾಡಲು ಬಯಸುವವರು ೯೪೪೮೮ ೨೫೭೦೧ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು.

ಸದ್ಯಕ್ಕೆ ಪ್ರಸಾದ್ ಸಕಲೇಶಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರೂ ಹೌದು. ಕಸಾಪಗೆ ಅಧ್ಯಕ್ಷರಾದಾಗ ನಾನು ಅವರಿಗೆ ಬರೆದ ಪತ್ರ ಇಲ್ಲಿದೆ.

****

ಆತ್ಮೀಯರಾದ ಶ್ರೀ ರಕ್ಷಿದಿ ಪ್ರಸಾದ್‌ರವರಿಗೆ,

ಅಭಿನಂದನೆಗಳು ಹಾಗು ಕೃತಜ್ಞತೆಗಳು.

ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ಸಕಲೇಶಪುರದಲ್ಲಿ ಸಾಹಿತ್ಯದ ಹೊಸ ಅಲೆ ಎಬ್ಬಿಸಲು ಹೊರಟಿದ್ದೀರಿ. ಬೆಳ್ಳೆಕೆರೆ ನಾಟಕ ಸಂಘದ ಮೂಲಕ ಇಡೀ ಜಗತ್ತಿನ ತಲ್ಲಣಗಳಿಗೆ ಮುಖಾಮುಖಿಯಾಗಿ, ಹಳ್ಳಿಹುಡುಗರ ಅಭಿವ್ಯಕ್ತಿಗಳಿಗೆ ದನಿಯಾದವರು ನೀವು. ಒಂದು ಪುಟ್ಟ ಹಳ್ಳಿಯನ್ನು ಅಲ್ಲಿಯ ಎಲ್ಲ ಸಂವೇದನೆಗಳು ಹಾಗು ಜೀವದ್ರವ್ಯದ ಮೂಲಕವೇ ಹೊರಜಗತ್ತಿಗೆ ತೆರೆದು ಯಾರೂ ತುಳಿಯದ ಮಾರ್ಗವನ್ನು ಹುಟ್ಟುಹಾಕಿದವರು ನೀವು. ಈ ದೃಷ್ಟಿಯಲ್ಲಿ ಹೇಳುವುದಾದರೆ ಹೆಗ್ಗೋಡು ಮತ್ತು ಬೆಳ್ಳೇಕರೆ ಬೇರೆ ಬೇರೆಯಲ್ಲ. ನೀವು ಹಾಗು ಸುಬ್ಬಣ್ಣ ಬೇರೆಯಲ್ಲ.

ಹಾಗೆ ನೋಡಿದರೆ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷರ ಹುದ್ದೆ ನಿಮಗೆ ನಿಮಿತ್ತ ಮಾತ್ರ. ಅದರ ಮೂಲಕ ತಾಲ್ಲೂಕಿನಲ್ಲಿ ಏನನ್ನೋ ಮಾಡಲು ಹೊರಟಿದ್ದೀರಿ ಎಂಬುದು ನನ್ನ ಸಂಭ್ರಮದ ಗುಮಾನಿ! ಬೆಳ್ಳೆಕೆರೆಯನ್ನು ಸಾಂಸ್ಕೃತಿಕ ಜಗತ್ತಿನ ಭೂಪಟದಲ್ಲಿ ತಂದು ನಿಲ್ಲಿಸಿದವರು ನೀವು. ಈಗ ಇಡೀ ಸಕಲೇಶಪುರವನ್ನು ಎಲ್ಲಿಗೆ ಕರೆದೊಯ್ಯುವಿರೋ ಎಂಬ ಸಂತಸದ ಪ್ರಶ್ನೆಯೂ ನನ್ನದು.

ಸಕಲೇಶಪುರದಿಂದ ಒಂದು ಸಣ್ಣ ಕಲರವ ಕೇಳಿದರೂ ಅಲ್ಲಿಂದ ಇನ್ನೂರ ಇಪ್ಪತ್ತು ಕಿ.ಮೀ. ದೂರದಲ್ಲಿ ಕುಳಿತ ನನಗೆ, ನನ್ನಂಥವರಿಗೆ ರೋಮಾಂಚನವಾಗುತ್ತದೆ. ಕರಳು ಬಳ್ಳಿಯ ಸಂಬಂಧ ಎಂದರೆ ಇದೇ ಇರಬೇಕು. ಮುಗಿಯದ ವಾಂಚ್ಯೆ, ತೀರದ ದಾಹ, ಉಳಿದೇ ಉಳಿದ ಅತೃಪ್ತ ಕನಸುಗಳು.

ನಿಮ್ಮ ನೇತೃತ್ವದ ಸಾಹಿತ್ಯ ಪರಿಷತ್ತು ಕಾಫಿಯ ನಾಡಿನಿಂದ ಎಂಬ ಪುಟ್ಟ ಖಾಸಗಿ ಪತ್ರಿಕೆ ತಂದಿರುವುದು ವಿಶೇಷವಾಗಿ ನನಗೆ ಖುಷಿ ತಂದಿದೆ. ಹಿಂದೆ ನಾವು, ಸಕಲೇಶಪುರದಲ್ಲಿ ಕ್ರಿಯಾಶೀಲರಾಗಿದ್ದ ಗೆಳೆಯರೆಲ್ಲ ಸೇರಿ ತಂದಿದ್ದ ಕೈಬರಹದ ಪತ್ರಿಕೆ (ನಂತರ ಅದು ಡಿಟಿಪಿ ಪತ್ರಿಕೆಯಾಗಿ ರೂಪಾಂತರವಾಯಿತು) `ಸಂವಹನವನ್ನು ನೆನಪಿಸಿಕೊಂಡಿರುವುದು ಸಂತೋಷವನ್ನು ಇಮ್ಮಡಿಗೊಳಿಸಿತು. ಸಂವಹನ ವೇದಿಕೆ ಒಂದು ನೆನಪಾಗಿ ಉಳಿಯಿತಲ್ಲ ಎಂಬ ಸಂಕಟದ ಜತೆಯೇ ವೇದಿಕೆಯ ದಿನಗಳ ಹಳೆಯ ನೆನಪುಗಳೆಲ್ಲ ಸಾಲುಸಾಲಾಗಿ ಬಂದುನಿಂತು ಸಂತಸವಾಯಿತು. ಸಂವಹನವನ್ನು ನೆನಪಿಸಿಕೊಂಡು ಬರೆದ ಗೆಳೆಯ ಸ.ಸು.ವಿಶ್ವನಾಥ್‌ಗೂ, ನಿಮಗೂ ಮತ್ತೊಮ್ಮೆ ಧನ್ಯವಾದಗಳು.

ನಿಮ್ಮ ಜತೆ ದೂರವಾಣಿಯಲ್ಲಿ ಮಾತನಾಡಿದಾಗ ಹೇಳಿದಂತೆ `ಕಾಫಿಯ ನಾಡಿನಿಂದ ಪತ್ರಿಕೆ ಹಾಗು ನಿಮ್ಮ ನೇತೃತ್ವದ ಕನ್ನಡ ಸಾಹಿತ್ಯ ಪರಿಷತ್ ಸಕಲೇಶಪುರವನ್ನು ಕಾಡುತ್ತಿರುವ, ತಿಂದು ತೇಗುತ್ತಿರುವ ಎಲ್ಲ ಸಮಸ್ಯೆಗಳಿಗೆ ಎದುರು ನಿಲ್ಲಬೇಕಾಗಿದೆ. ತಾಲ್ಲೂಕು ಎದುರಿಸುತ್ತಿರುವ ಎಲ್ಲ ಸವಾಲುಗಳಿಗೆ ಉತ್ತರ ಹುಡುಕುವ ಯತ್ನ ನಡೆಸಬೇಕಾಗಿದೆ. ಸಾಂಸ್ಕೃತಿಕ ಪರಿಸರ ಜಡವಾಗಿದ್ದಾಗ ಸಮಾಜವೂ ಜಡವಾಗಿರುತ್ತದೆ. ಈ ಜಡತ್ವವನ್ನು ಕೊಡವಿಕೊಂಡು ಎದ್ದೇಳಲು ನಿಮ್ಮಂಥವರ ಪ್ರೇರಣೆ, ಮಾರ್ಗದರ್ಶನ ಅತ್ಯಗತ್ಯ. ಅದು ಈಗ ಸಾಧ್ಯವಾಗಿರುವುದು ನೆಮ್ಮದಿಯ ವಿಷಯ.

ಕಸಾಪ ಹೆಚ್ಚು ಹೆಚ್ಚು ತಲುಪಬೇಕಾಗಿರುವುದು ಶಾಲೆ, ಕಾಲೇಜುಗಳನ್ನು. ಆಧುನಿಕ ಜಗತ್ತು ಹೇರಿರುವ ಲೋಭಕೇಂದ್ರಿತ ಶಿಕ್ಷಣ ವ್ಯವಸ್ಥೆ ಹೊಸಹುಡುಗರಲ್ಲಿ ಚೈತನ್ಯ ಮೂಡಿಸುವ ಬದಲು ಧನದಾಹವನ್ನು ಮೂಡಿಸುತ್ತಿದೆ. ಕೇವಲ ಉದ್ಯೋಗಕ್ಕಾಗಿ, ಆರ್ಥಿಕ ವ್ಯವಸ್ಥೆಯ ಜಾಣ್ಮೆಗಾಗಿ ಕೊಡುವ ಶಿಕ್ಷಣ ಅದು ಶಿಕ್ಷಣವೇ ಅಲ್ಲ. ಶಿಕ್ಷಣ ಮಾನವೀಯವಾಗಿ ಬದುಕುವುದನ್ನು ಕಲಿಸಬೇಕು. ಕಸಾಪ ನಮ್ಮ ಶಾಲೆಗಳಲ್ಲಿ ಓದುವ ಮಕ್ಕಳಲ್ಲಿ ಸಾಹಿತ್ಯಕ, ಸಾಂಸ್ಕೃತಿಕ ಅಭಿರುಚಿಯನ್ನು ಬೆಳೆಸುವ ಕೆಲಸ ಮಾಡಲಿ ಎಂಬುದು ನನ್ನ ಆಸೆ.

`ಕಸಾಪ ಹಾಗು `ಕಾಫಿಯ ನಾಡಿನಲಿ ಎರಡೂ ಬೆಳೆಯಲಿ, ಕಾಫಿಯ ನಾಡು ಹಿಂದೆಂದಿಗಿಂತಲೂ ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾಗಲಿ, ಮಾನವೀಯತೆಯ ಜೀವಸೆಲೆ ಎಂದೂ ಬತ್ತದಿರಲಿ ಎಂದು ಎಲ್ಲ `ಅನಿವಾಸಿ ಸಕಲೇಶಪುರಿಗರ ಪರವಾಗಿ ಹಾರೈಸುತ್ತೇನೆ.

ಎಲ್ಲ ಗೆಳೆಯರಿಗೂ, ಹಿರಿಯರಿಗೂ ನನ್ನ ನೆನಕೆಗಳು.

ಪ್ರೀತಿಯಿಂದ
ದಿನೂ ಸ.ಚಂ. (ದಿನೇಶ್ ಕುಮಾರ್ ಎಸ್.ಸಿ.)

Wednesday, July 15, 2009

ಮಳೆ ಎಂದರೆ...

ಮಳೆ ಎಂದರೆ...
ಏನೋ ಪಿಸುಗುಡಲು ಬಂದಂತೆ ಮೋಡಗಳೊಡಲು
ಏನೋ ಗುನುಗುಡಲು ಬಂದಂತೆ ಗಾಳಿಯ ಕಡಲು
ಅಮ್ಮನ ಕಸೂತಿಯ ಸ್ವೆಟರು
ಕಾಡಿ ಬೇಡಿದ ಮೇಲೆ ಅಪ್ಪ ಕೊಡಿಸಿದ ಬಣ್ಣದ ಛತ್ರಿ
ಮಂಡಿಯವರೆಗಿನ ಕಡುಗಪ್ಪು ಬೂಟು
ತಲೆಕಾಲಿನವರೆಗೆ ಹೊದ್ದ ರೇನ್‌ಕೋಟು
ಗೊಪ್ಪೆ, ಗೊರಗ;
ಮಳೆಗನ್ನೆಯರು ತೊಟ್ಟ ಪ್ಯಾಶ್ಲಿಕ್ಕಿನ ಹೊದಿಕೆ


(ಮಳೆಯಲ್ಲಿ ನೆನೆದು ತೊಪ್ಪೆಯಾಗಿರುವ ಸಕಲೇಶಪುರದ ಚಿತ್ರವಿದು. ಹೇಮಾವತಿ ಇಡೀ ಊರನ್ನೇ ಬಳಸಿ ತಬ್ಬಿ ಕೇಕೆ ಹೊಡೆಯುತ್ತಿದ್ದಾಳೆ.)

ಮಳೆ ಎಂದರೆ,
ಕಪ್ಪೆಗಳ ವಟವಟ
ಹಾವುರಾಣಿಯರ ಸರಸರ
ತಾತ ಆರಿದ್ದನ್ನೆ ಉರಿಸಿ ಸೇದುವ ನಝರ್ ಬೀಡಿ
ಸುಡುಸುಡು ಬೆಲ್ಲದ ಕಾಫಿ
ಅಮ್ಮ ಕೆಂಡದಲ್ಲಿ ಸುಡುವ ಗೇರು, ಹಲಸಿನಗಾಳು
ಗದ್ದೆಯಲ್ಲಿ ಸಿಕ್ಕಿಬೀಳುವ ಏಡಿ
ಹೊಳೆಯಲ್ಲಿ ಹರಿದುಬರುವ ಮರಳಿ ಮೀನು

ಮಳೆ ಎಂದರೆ
ಹಸಿಮಣ್ಣಿನ ಘಮದೊಂದಿಗೆ ಅರಳುವ ನೆನಪು
ನೀರಮನೆಯಲ್ಲಿ ಕಾದು ಕುಳಿತ ಪುಳಕದ ಬಿಸಿನೀರು
ಒಲೆಯ ಮುಂದೆ ಬಿಸಿಕಾಯಿಸಿಕೊಳ್ಳಲು ಚಾಚಿ ಸುಟ್ಟುಕೊಂಡ ಬೆರಳು
ಕೆಂಡ ಸುರಿದು, ಬಿದರಿನ ಬುಟ್ಟಿ ಮುಚ್ಚಿ
ಅದರ ಮೇಲೆ ಯೂನಿಫಾರ್ಮ್ ಹರಡಿ ಒಣಗಿಸುವಾಗ
ಎದ್ದು ಬರುವ ಹಸಿಹಸಿ ವಾಸನೆ

ಮಳೆ ಎಂದರೆ
ಪ್ರೇಮಿಯ ಎದೆನಡುಕ
ವಿರಹಿಯ ಒಡಲ ಉರಿ
ಮೊನಾಲಿಸಾಳ ನಗೆ
ಜಗಜಿತ್‌ನ ಗಜಲ್ಲು
ರಫಿಯ ಕವ್ವಾಲಿ
ಮುಖೇಶನ ದರ್ದ್‌ಭರೆ ಹಾಡು
ಎಲಿಯಟ್ಟನ ಕಾವ್ಯ
ಶೇಕ್ಸ್‌ಪಿಯರನ ನಾಟಕ

ಮಳೆ ಎಂದರೆ
ನನ್ನ ಚಿನ್ಮಯ ಸಂಗಾತಿಯ ಮುಂಗೈ
ಅವಳ ತಲೆಗೆ ಮೆತ್ತಿದ ಸೇವಂತಿಗೆಯ ಸುವಾಸನೆ
ಅವಳ ಶ್ವಾಸ, ಮೈಗಂಧ
ಗಮ್ಮೆನ್ನುವ ಮಡಿಲು

ಮಳೆ ಎಂದರೆ
ತುಡಿತ, ಜೀವ ಮಿಡಿತ
ರಾಗಸೆಳೆತ
ಮೋಹ, ಪ್ರೇಮ-ಕಾಮಗಳ ದಾಹ
ದೇಹಾತ್ಮಗಳ ಬಿಸಿಬಿಸಿ ಮಿಲನ
ನಿಟ್ಟುಸಿರ ವಿರಹ

ಮಳೆ ಎಂದರೆ
ಸುಖ
ಅದಮ್ಯ ಚೇತರಿಕೆಯ ಧನ್ವಂತರಿ

ಮಳೆ ಎಂದರೆ
ದುಃಖ
ಒಡಲ ಮೀಟುವ ವೇದನೆ
ಮಳೆ ಎಂದರೆ
ನೂರು ಮಕ್ಕಳ ಹೆತ್ತ ಗಾಂಧಾರಿಯ ಸ್ವಗತ
ಆಕಾಶದ ರವಿಕೆ
ಭುವಿಯು ಧರಿಸಿದ ನಿಲುವಂಗಿ
ಹಸಿರ ಜಾಥಾ


ಮಳೆ ಎಂದರೆ
ತ್ಯಾಗ
ಮಮಕಾರ
ಪ್ರಾಯ
ವಿಸ್ಮಯ
ಶೃಂಗಾರ

ಮಳೆ ಎಂದರೆ
ಭೂತ, ವರ್ತಮಾನ, ಭವಿಷ್ಯ

ಮಳೆ ಎಂದರೆ
ಅಧ್ಯಾತ್ಮ, ಜಗತ್ತು, ಬ್ರಹ್ಮಾಂಡ

ಮಳೆ ಎಂದರೆ ಮಳೆ
ನಾನು ಪ್ರೀತಿಸುವ ಮಳೆ
ನನ್ನ ದೇಹಾತ್ಮಗಳ ಹಣತೆಯಾದ ಮಳೆ
ನನ್ನ ಬದುಕಿನ ಮಳೆ
ನನ್ನ ಸಾವಿನ ಮಳೆ

ಮಳೆ ಎಂದರೆ
ನನ್ನ ಸಂಗಾತಿಯ ಬೆಚ್ಚನೆ ಮಡಿಲು.

(ನಮ್ಮೂರಲ್ಲಿ ಭರ್ಜರಿ ಮಳೆ. ಆಕಾಶ ಭೂಮಿ ಒಂದಾದ ಹಾಗೆ ಮಳೆ ಸುರಿಯುತ್ತಿದೆ ಎಂದು ಗೆಳೆಯರು ಹೇಳುತ್ತಿದ್ದಾರೆ. ಮಳೆ ಕುರಿತು ಹಿಂದೆ ಒಮ್ಮೆ ಬರೆದಿದ್ದ ಹರುಕು ಮುರುಕು ಬರೆಹ ಇಲ್ಲಿದೆ. ಇದು ಕವಿತೆಯಲ್ಲ; ಹೀಗಾಗಿ ತುಂಬಾ ವಾಚ್ಯವಾಯಿತು ಎಂದು ಗೆಳೆಯರು ಆರೋಪಿಸುವಂತಿಲ್ಲ.
ಮತ್ತೊಂದು ವಿಷಯ: ದೇಸೀಮಾತು ಬ್ಲಾಗ್‌ಗೆ ಇವತ್ತಿಗೆ (ಜು.೧೫) ಸರಿಯಾಗಿ ಒಂದು ವರ್ಷ. ಹಲವು ತಿಂಗಳ ಸೋಮಾರಿತನ, ಜಡತ್ವವನ್ನು ಕೊಡವಿಕೊಂಡು ಇನ್ನು ರೆಗ್ಯುಲರ್ ಆಗಿ ಬರೆಯುತ್ತೇನೆ ಎಂದು ನಿಮ್ಮೆಲ್ಲರನ್ನು ಬೆದರಿಸುತ್ತ, ನಮ್ಮೂರಿನ ಮಳೆಯಲ್ಲಿ ಮಳೆಯಾಗುವ ಕನಸಿನಲ್ಲಿ ಜಾರುತ್ತಿದ್ದೇನೆ.)