Saturday, September 20, 2008

ಯಾರು ಮತಾಂತರಿಗಳು?

ಸುಮಾರು ಒಂದು ವರ್ಷದ ಕೆಳಗೆ ಟಿವಿ ಚಾನೆಲ್ ಒಂದರ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳನ್ನು ಸಂದರ್ಶಿಸಿದ್ದೆ. ಈ ಸಂದರ್ಭದಲ್ಲಿ ನಾನು ಕೇಳಿದ ಕೆಲ ಪ್ರಶ್ನೆಗಳಿಂದ ಶ್ರೀಗಳು ಇರಿಸುಮುರಿಸಿಗೆ ಒಳಗಾದಂತೆ ಕಂಡುಬಂತು. ಅವರಿಗೆ ಕಿರಿಕಿರಿಯೆನಿಸಿರಬಹುದಾದ ಒಂದು ಪ್ರಶ್ನೆ ಮತಾಂತರವನ್ನು ಕುರಿತಾಗಿತ್ತು. ಹಿಂದೂ ಧರ್ಮದ ಒಳಗಿನ ಅಸ್ಪೃಶ್ಯತೆ ನಿವಾರಿಸದೆ ಮತಾಂತರ ವಿರೋಧಿಸುವುದು ನೈತಿಕವಾಗಿ ಎಷ್ಟು ಸರಿ ಎಂಬುದು ನನ್ನ ಪ್ರಶ್ನೆಯಾಗಿತ್ತು. ಮತಾಂತರ ಚಲನಶೀಲ ಸಮಾಜದ ಸಹಜ ಪ್ರಕ್ರಿಯೆಯಲ್ಲವೆ ಎಂದು ಕೇಳಿದ್ದೆ.

ಈ ಪ್ರಶ್ನೆಗೆ ಆಧಾರವಾಗಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಒಡ್ಡಿದ್ದ ಸವಾಲೊಂದನ್ನು ಅವರಿಗೆ ನೆನಪಿಸುವ ಪ್ರಯತ್ನ ಮಾಡಿದ್ದೆ. ಅಂಬೇಡ್ಕರ್‌ರವರು ಬೌದ್ಧಧರ್ಮಕ್ಕೆ ಮತಾಂತರಗೊಳ್ಳುವ ಮುನ್ನ ದೇಶದ ಧಾರ್ಮಿಕ ಜಗತ್ತಿನ ಮೇರುಸ್ಥಾನದಲ್ಲಿರುವ ಶಂಕರಾಚಾರ್ಯ ಪೀಠಕ್ಕೆ ಒಂದು ಸವಾಲೆಸೆದಿದ್ದರು. ಒಂದು ವೇಳೆ ನಿಮ್ಮ ಶಂಕರಾಚಾರ್ಯ ಪೀಠವನ್ನು ಅಸ್ಪೃಶ್ಯರಿಗೆ ಬಿಟ್ಟುಕೊಡುವುದಾದರೆ ನಾನು ಮತಾಂತರಗೊಳ್ಳುವುದಿಲ್ಲ ಎಂದು ಅವರು ನೇರವಾಗಿ ಹೇಳಿದ್ದರು.

ಈ ಪ್ರಶ್ನೆ ಕೇಳುತ್ತಿದ್ದಂತೆ ಪೇಜಾವರರು ಜಾಣಮುಗ್ಧತೆ ಪ್ರದರ್ಶಿಸಿ, ಈ ಘಟನೆಯ ಬಗ್ಗೆ ತಮಗೇನೂ ತಿಳಿದಿಲ್ಲ ಎಂದರು. ಒಂದು ವೇಳೆ ಅಂಬೇಡ್ಕರ್ ಮತಾಂತರಗೊಳ್ಳುವ ಸಂದರ್ಭದಲ್ಲಿ ನಾನು ಪೀಠದಲ್ಲಿ ಇದ್ದಿದ್ದರೆ ಅವರ ಮನವೊಲಿಸಿ ಮತಾಂತರವಾಗದಂತೆ ನೋಡಿಕೊಳ್ಳುತ್ತಿದ್ದೆ ಎಂದು ಅವರು ಹೇಳಿದರು.

ಪೇಜಾವರರಿಗೆ ಮುಜುಗರ ತಂದ ಮತ್ತೊಂದು ಪ್ರಶ್ನೆ ಸಹಪಂಕ್ತಿ ಭೋಜನಕ್ಕೆ ಸಂಬಂಧಿಸಿದ್ದು, ಉಡುಪಿ ಕೃಷ್ಣಮಠವೂ ಸೇರಿದಂತೆ ಬಹುತೇಕ ಮಠಗಳಲ್ಲಿ (ವಿಶೇಷವಾಗಿ ಬ್ರಾಹ್ಮಣ ಮಠಗಳಲ್ಲಿ) ಸಹಪಂಕ್ತಿ ಭೋಜನದ ವ್ಯವಸ್ಥೆಯಿಲ್ಲವಲ್ಲ? ಬ್ರಾಹ್ಮಣರಿಗೆ ಬೇರೆ, ಬ್ರಾಹ್ಮಣೇತರರಿಗೆ ಬೇರೆ ಪಂಕ್ತಿ ಏರ್ಪಡಿಸುವುದರಿಂದ ಅಸಮಾನತೆ ಹೆಚ್ಚಾಗುವುದಿಲ್ಲವೆ? ಎಂದು ಕೇಳಿದಾಗ ಅವರು ನಾಜೂಕಿನ ಉತ್ತರ ನೀಡಿದ್ದರು.

ಕೃಷ್ಣ ಮಠದಲ್ಲಿ ಏಕಪಂಕ್ತಿ ಭೋಜನದ ವ್ಯವಸ್ಥೆ ಮೊದಲಿನಿಂದಲೂ ಇದೆ. ಆದರೆ ಸಂಪ್ರದಾಯಸ್ಥರು (ಬ್ರಾಹ್ಮಣರು) ತಮ್ಮ ಶ್ರದ್ಧೆಗೆ ಅನುಸಾರವಾಗಿ ಸಹಪಂಕ್ತಿ ಭೋಜನ ಮಾಡುವುದಿಲ್ಲ. ಅವರ ಮನಸ್ಸಿಗೆ ನೋವುಂಟುಮಾಡುವುದು ನಮಗಿಷ್ಟವಿಲ್ಲ. ಹೀಗಾಗಿ ಅವರಿಗೆ ಪ್ರತ್ಯೇಕ ಪಂಕ್ತಿಯಲ್ಲಿ ಭೋಜನ ನೀಡಲಾಗುತ್ತದೆ. ಇದು ಪೇಜಾವರರ ಅಡ್ಡಗೋಡೆಯ ಮೇಲೆ ದೀಪವಿಡುವ ಮಾತು. ಪಂಕ್ತಿಭೇದಕ್ಕೆ ಅವರು ಕೊಡುವ ಸಮರ್ಥನೆ ಶಾಕಾಹಾರ-ಮಾಂಸಾಹಾರದ ಭೇದ. ಮಾಂಸಾಹಾರಿಗಳ ಜತೆ ಶಾಕಾಹಾರಿಗಳು ಕುಳಿತು ಊಟ ಮಾಡಲು ಸಮಸ್ಯೆಯಾಗುತ್ತದೆ ಎಂಬುದು ಅವರ ವಾದ.

ಮತಾಂತರ ವಿವಾದ ಹೊತ್ತುರಿಯುವಾಗ ಇದೆಲ್ಲವೂ ನೆನಪಾಗುತ್ತ್ತಿದೆ. ಪೇಜಾವರರ ಮಠವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ರಿಶ್ಚಿಯನ್ ಚರ್ಚ್‌ಗಳ ಮೇಲೆ ಭಜರಂಗದಳದ ಗೂಂಡಾಗಳು ಮೇಲಿಂದ ಮೇಲೆ ದಾಳಿ ನಡೆಸಿದರೂ ಪೇಜಾವರರು ಒಂದೇ ಒಂದು ಖಂಡನೆಯ ಹೇಳಿಕೆ ನೀಡಿದ ಕುರಿತು ವರದಿಯಾಗಿಲ್ಲ. ಪೇಜಾವರರು ನಾನು ತಿಳಿದಂತೆ ಮಾಧ್ಯಮಮೋಹಿಗಳು. ದೇಶದ ಆಗುಹೋಗುಗಳ ಬಗ್ಗೆ ಕಾಲಾಕಾಲಕ್ಕೆ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ತಮ್ಮ ಅಭಿಪ್ರಾಯ ಹೇಳುವವರು. ಆದರೆ ಈ ಸಂದರ್ಭದಲ್ಲಿ ಪೇಜಾವರರ ದಿವ್ಯಮೌನಕ್ಕೆ ಅರ್ಥ ಹುಡುಕುವ ಅಗತ್ಯವೇನೂ ಇಲ್ಲ ಅನಿಸುತ್ತದೆ.

ಮತಾಂತರದ ವಿವಾದ ಭುಗಿಲೆದ್ದಿರುವಾಗ ನನ್ನ ಮೊಬೈಲ್‌ಗೆ ಬಂದ ಸಂದೇಶವೊಂದು ಹೀಗೆ ಹೇಳುತ್ತದೆ: ಈ ದೇಶದಲ್ಲಿ ಅತಿ ಹೆಚ್ಚು ಮತಾಂತರ ಮಾಡಿದ್ದು ಹಿಂದೂ ಧರ್ಮ. ಕಣಿವೆ ಮಾರಮ್ಮ, ಮಲೆ ಮಹದೇಶ್ವರ, ಚೌಡಮ್ಮ, ವೀರಭದ್ರ ಮತ್ತಿತರರನ್ನು ಆರಾಧಿಸುತ್ತ ಯಾವ ಧರ್ಮದ ಹಂಗೂ ಇಲ್ಲದೆ ಬಾಳುತ್ತಿದ್ದ ಜನರಿಗೆ ನೀನು ಹಿಂದೂ ಅಂತ ಬೊಗಳೆ ಬಿಟ್ಟು ಹಣೆಪಟ್ಟಿ ಕಟ್ಟಿದವರು ಇಂದು ಮತಾಂತರದ ಮಾತನಾಡುತ್ತಿದ್ದಾರೆ.

ಈ ಎಸ್‌ಎಂಎಸ್ ಸಂದೇಶದ ಒಳಗಿನ ಮಾತನ್ನು ವಿಸ್ತರಿಸುವ ಪ್ರಯತ್ನವನ್ನು ನಾನು ಮಾಡುತ್ತಿದ್ದೇನೆ. ಕೃಣ್ವಂತೊ ವಿಶ್ವಮಾರ್ಯಂ (ವಿಶ್ವವನ್ನೆಲ್ಲ ಆರ್ಯಮಯವಾಗಿಸೋಣ) ಎಂದು ಹೇಳಿದ್ದು, ಮನುಧರ್ಮವನ್ನು ಜಗತ್ತಿನಾದ್ಯಂತ ಹರಡಲು ಯತ್ನಿಸಿದ್ದು ಯಾರು? ಕ್ರಿಶ್ಚಿಯನ್ನರೆ? ಮುಸಲ್ಮಾನರೆ? ಇವತ್ತು ಹಿಂದೂ ಧರ್ಮ ಎಂದು ಕರೆಯಲಾಗುವ ಮನುಧರ್ಮ ಯಾ ವೈದಿಕ ಧರ್ಮ ಯಾ ಬ್ರಾಹ್ಮಣ ಧರ್ಮವನ್ನು ಹರಡಲು ಯತ್ನಿಸಿದ, ಹೇರಲು ಯತ್ನಿಸಿದ ಸಾವಿರ ಉದಾಹರಣೆಗಳು ಇಲ್ಲವೆ?

ಹಾಗೆ ನೋಡಿದರೆ ಈ ದೇಶದ ಬಹುಸಂಖ್ಯಾತ ದಲಿತರು, ಹಿಂದುಳಿದವರು ಯಾವ ಧರ್ಮಕ್ಕೆ ಸೇರಿದವರು.? ಅವರಿಗೆ ಹಿಂದೂ ಎಂಬ ಹಣೆಪಟ್ಟಿ ಹಚ್ಚಿದವರು ಯಾರು? ವರ್ಣಾಶ್ರಮದ ಆಧಾರದಲ್ಲೇ ನಿಂತಿರುವ ಹಿಂದೂ ಧರ್ಮದಲ್ಲಿ ಇವತ್ತಿಗೂ ದಲಿತರ, ಹಿಂದುಳಿದವರ, ಶೂದ್ರರ ಸ್ಥಾನಮಾನ ಏನು ಎಂಬುದನ್ನು ಶಂಕರಾಚಾರ್ಯ ಪೀಠಗಳಾದಿಯಾಗಿ ಪೇಜಾವರರವರೆಗೆ ಯಾರೂ ಸ್ಪಷ್ಟಪಡಿಸುತ್ತಿಲ್ಲವಲ್ಲ ಯಾಕೆ?

ನಮ್ಮ ನಡುವಿನ ಅಪರೂಪದ ರಾಜಕಾರಣಿ ವಿ.ಶ್ರೀನಿವಾಸ ಪ್ರಸಾದ್ ನೇರವಾಗಿ ಪೇಜಾವರರಿಗೆ ಬಹಿರಂಗ ಸಭೆಯಲ್ಲಿ ಹೇಳಿದ ಮಾತು ನೆನಪಾಗುತ್ತದೆ: ಭಾರತದ ಎಲ್ಲ ಮಠಾಧೀಶರು ಒಂದೇ ಒಂದು ದಿನ ಅಸ್ಪೃಶ್ಯತೆ ನಿವಾರಿಸುವ ಸಲುವಾಗಿ ಉಪವಾಸ ಮಾಡಲಿ. ಮಠಾಧೀಶರ ಮಾತು ಕೇಳುವ ಭಕ್ತರಲ್ಲಾದರೂ ಬದಲಾವಣೆಯಾಗಬಹುದೋ ನೋಡೋಣ ಎಂದು ಅವರು ಹೇಳಿದ್ದರು. ಮಠಾಧೀಶರಿಗೆ ಜಾಣಕಿವುಡು. ಅವರಿಗೆ ಅಸ್ಪೃಶ್ಯತೆ ನಿವಾರಣೆಯಾಗುವುದು ಬೇಕಿಲ್ಲ.

ಮತಾಂತರಗಳ ಇತಿಹಾಸಕ್ಕೆ ಮತ್ತೆ ಹೋಗುವುದಾದರೆ ಈ ದೇಶವನ್ನು ಪ್ರವೇಶಿಸಿದ, ಈ ದೇಶದಲ್ಲೇ ಹುಟ್ಟಿದ ಹಲವು ಧರ್ಮಗಳಿಗೆ ಬ್ರಾಹ್ಮಣರೇ ಮತಾಂತರ ಹೊಂದಿದರಲ್ಲ? ಅವರ ಬಗ್ಗೆ ಮತಾಂತರ ವಿರೋಧಿಗಳ ನಿಲುವೇನು? ವೈದಿಕ ಧರ್ಮವನ್ನು ಧಿಕ್ಕರಿಸಿ ವೀರಶೈವವನ್ನು ಕಟ್ಟಿದ ಬಸವಣ್ಣನವರನ್ನು ಇವರು ಧರ್ಮದ್ರೋಹಿ ಎನ್ನುತ್ತಾರೆಯೆ? ಹುಟ್ಟಿನಿಂದ ಬ್ರಾಹ್ಮಣ ಎನ್ನಲಾದ ಬಸವಣ್ಣ (ಮಾದಿಗ ಇರಬಹುದು ಎಂಬ ಬಂಜಗೆರೆ ಜಯಪ್ರಕಾಶ್ ವಾದ ಇನ್ನೂ ಜೀವಂತವಾಗಿದೆ)ನವರ ಬಗ್ಗೆ ಇವರ ಬಹಿರಂಗದ ನಿಲುವು ಏನು? ಡಾ.ಚಿದಾನಂದ ಮೂರ್ತಿಯಂಥವರು ಎಷ್ಟೇ ಬಡಬಡಿಸಿದರೂ ವೀರಶೈವ ಎಂಬುದು ಹಿಂದೂ ಧರ್ಮದ ಭಾಗವಲ್ಲ, ಅದು ಪ್ರತ್ಯೇಕ ಧರ್ಮ ಎಂಬುದನ್ನು ಬಹುತೇಕ ವೀರಶೈವರು ಇವತ್ತು ಒಪ್ಪಿಕೊಂಡಿದ್ದಾರಲ್ಲವೆ?

ಇವತ್ತು ಯಾವುದನ್ನು ಹಿಂದೂ ಎಂದು ಗುರುತಿಸಲಾಗುತ್ತಿದೆಯೋ ಆ ಧರ್ಮದ ಒಳಗೆ ಎಷ್ಟು ಮತ-ಪಂಥಗಳಿವೆ? ಒಂದಕ್ಕೆ ಒಂದು ತಾಳೆ ಹೊಂದುತ್ತವೆಯೇ? ಬ್ರಾಹ್ಮಣರ ಪೈಕಿಯೇ ದ್ವೈತ, ಅದ್ವೈತ, ವಿಶಿಷ್ಟಾದ್ವೈತಗಳು; ಎಷ್ಟೊಂದು ಭಿನ್ನತೆಗಳಿಲ್ಲವೆ? ಈ ಎಲ್ಲ ಪಂಥಗಳು ಹಿಂದೂಗಳೆಲ್ಲ ಒಂದು ಎಂಬ ಮಾತನ್ನು ನಿಜ ಮಾಡಲು ಯತ್ನಿಸಿದ ಒಂದಾದರೂ ಉದಾಹರಣೆ ಇದೆಯೆ? ಮನುಸ್ಮೃತಿಯಿಂದ ಹಿಡಿದು ಭಗವದ್ಗೀತೆಯವರೆಗೆ ಎಲ್ಲವೂ ಶೂದ್ರರಿಗೆ ಧಾರ್ಮಿಕ ಹಕ್ಕುಗಳನ್ನು ನಿರಾಕರಿಸಿದರೂ, ಹಿಂದೂ ಎಂಬ ಹೆಸರಿನಲ್ಲಿ ಅವರನ್ನು ಕಟ್ಟಿ ಹಾಕುವ ಯತ್ನಗಳು ಎಷ್ಟು ಕಾಲ ನಡೆದೀತು?

ಇವತ್ತು ಹಿಂದೂ ಧರ್ಮದ ದೇವರುಗಳೆಂದು ಪೂಜಿಸಲಾಗುವವರೆಲ್ಲ ಯಾವ ಸಮುದಾಯಗಳಿಗೆ ಸೇರಿದವರು? ಇವರನ್ನು ಹೈಜಾಕ್ ಮಾಡಿಕೊಂಡವರು ಯಾರು? ಶಿವನಿಗೆ, ಗಣಪತಿಗೆ ಜನಿವಾರ ತೊಡಿಸಿದವರು ಯಾರು? ಚೌಡಿ ಹೇಗೆ ಚಾಮುಂಡೇಶ್ವರಿಯಾದಳು? ಗಿರಿಜನ, ಆದಿವಾಸಿ ನಾಯಕರನ್ನೆಲ್ಲ ದೇವರನ್ನಾಗಿಸಿ, ಅವರನ್ನು ಗರ್ಭಗುಡಿಯಲ್ಲಿ ಕೂಡಿಹಾಕಿದವರು ಯಾರು? ಈ ತಳಸಮುದಾಯದ ದೇವರನ್ನು ಮುಟ್ಟಿ ಪೂಜಿಸಲು ಆ ಸಮುದಾಯವರಿಗೇ ಅವಕಾಶ ನಿರಾಕರಿಸಿದವರು ಯಾರು?

ದೇಶದ ಬಹುಸಂಖ್ಯಾತ ದಲಿತ-ಹಿಂದುಳಿದ-ಆದಿವಾಸಿಗಳಿಗೆ ಯಾವ ಧರ್ಮವೂ ಇರಲಿಲ್ಲ. ಅವರನ್ನು ರಾಜಕೀಯ ಕಾರಣಕ್ಕೆ ಹಿಂದೂ ಧರ್ಮಕ್ಕೆ ಕಟ್ಟಿಹಾಕುವ ಪ್ರಯತ್ನಗಳು ಸ್ವಾತಂತ್ರ್ಯಪೂರ್ವದಿಂದಲೂ ನಡೆದಿದೆ. ಕಳೆದ ಎರಡು ದಶಕಗಳಲ್ಲಿ ಇದು ತೀವ್ರವಾಗಿ ನಡೆದಿದೆ. ದಲಿತ-ಹಿಂದುಳಿದ ಜನರಿಗೆ ಇದ್ದ ಪರ್ಯಾಯವಾದರೂ ಯಾವುದು? ಡಾ,ಅಂಬೇಡ್ಕರ್ ಆಶ್ರಯಿಸಿದ ಬೌದ್ಧಧರ್ಮವೂ ಪುರೋಹಿತಶಾಹಿಗಳ ಹಿಡಿತದಲ್ಲಿ ಸಿಕ್ಕಿ ನಲುಗಿದ ಪರಿಣಾಮವಾಗಿ ದಲಿತರು ಅಲ್ಲಿ ಸಂಪೂರ್ಣ ತಮ್ಮನ್ನು ತಾವು ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜೈನಧರ್ಮವು ಪುರೋಹಿತಶಾಹಿಗಳೊಂದಿಗೆ ಕೈಜೋಡಿಸಿ ತನ್ನ ಮೂಲನೆಲೆಯನ್ನು ಕಳೆದುಕೊಂಡಿತು. ಬಸವಣ್ಣನ ಧರ್ಮವನ್ನೂ ಸಹ ಅಲ್ಲಿನ ಮೂಲಭೂತವಾದಿಗಳು ಜಾತಿ ಆಧಾರದಲ್ಲಿ ಪುನರ್ನಿರ್ಮಿಸಿದ ಪರಿಣಾಮವಾಗಿ ಅಲ್ಲೂ ಸಹ ಸಮಾನತೆಯ ಆಶಯಗಳು ಭಗ್ನಗೊಂಡಿವೆ. ೧೫ನೇ ಶತಮಾನದ ನಂತರ ಜಂಗಮ ಸಂಸ್ಕೃತಿಯ ನೆಲೆವೀಡಾದ ವೀರಶೈವದೊಳಗೆ ಸ್ಥಾವರ ಸಂಸ್ಕೃತಿಯ ಪ್ರತಿಪಾದಕರು ಮಠಗಳನ್ನು ನಿರ್ಮಿಸಿ ಅದನ್ನೂ ಜಡಗೊಳಿಸಿದರು. ಹೀಗಾಗಿ ಪರ್ಯಾಯಗಳು ಇಲ್ಲದೆ ನರಳುತ್ತಿದ್ದ ದಲಿತ-ಹಿಂದುಳಿದವರನ್ನು ಹಿಂದೂ ಧರ್ಮದ ಹೆಸರಿನಲ್ಲಿ ಪುರೋಹಿತಶಾಹಿಗಳು ಒಂದೆಡೆ ಶೋಷಿಸುತ್ತ, ಮತ್ತೊಂದೆಡೆ ಹಿಂದೂ ಎಂಬ ಹಣೆಪಟ್ಟಿ ಅಂಟಿಸುತ್ತ ಬಂದವು.

ಇವತ್ತು ಹಿಂದೂ ಧರ್ಮದ ಧಾರ್ಮಿಕ ಕೇಂದ್ರಗಳಾದ ಮಠಗಳು ಚಲನಶೀಲವಾಗಿವೆಯೇ? ಅಲ್ಲಿ ದಲಿತರಿಗೆ, ಆದಿವಾಸಿಗಳಿಗೆ, ಹಿಂದುಳಿದವರಿಗೆ ಪ್ರವೇಶವಿದೆಯೆ? ಈ ಸಮುದಾಯಗಳ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಾಗುತ್ತದೆಯೇ? ಎಲ್ಲ ವರ್ಗದವರನ್ನು ಒಟ್ಟಿಗೆ ಕೂಡಿಸಿ ಊಟ ಹಾಕುವ ಪರಂಪರೆ ಇದೆಯೆ?

ದೇಶದ ಎಲ್ಲ ಭಾಗಗಳಲ್ಲೂ ಈಗಲೂ ಅಸ್ಪೃಶ್ಯತೆ ಜಾರಿಯಲ್ಲೇ ಇದೆಯಲ್ಲವೆ? ಇನ್ನೂ ದಲಿತ ಕೇರಿಗಳು ಎಲ್ಲ ಊರುಗಳಲ್ಲೂ ಕಣ್ಣಿಗೆ ಹೊಡೆದಂತೆ ಕಾಣುವುದಿಲ್ಲವೆ? ದಲಿತರಿಗೆ ಸಾರ್ವಜನಿಕ ಕೆರೆ, ಕೊಳಾಯಿಗಳಲ್ಲಿ ನೀರು ಹಿಡಿಯಲು ಬಿಡುವುದಿಲ್ಲ ಎಂಬುದು ಹಿಂದೂ ಧರ್ಮದ ಉದ್ಧಾರಕರಿಗೆ ಗೊತ್ತಿಲ್ಲವೆ? ದಲಿತರ ಮೇಲೆ ದೌರ್ಜನ್ಯ ನಡೆಯದ ಒಂದೇ ಒಂದು ದಿನವಾದರೂ ಈ ದೇಶದ ಇತಿಹಾಸದಲ್ಲಿ ದಾಖಲಾಗಿದೆಯೆ?

ಹೀಗೆಲ್ಲ ಇರುವಾಗ ಹಿಂದೂ ಧರ್ಮ ಎಂಬುದೊಂದು ಅಸ್ತಿತ್ವದಲ್ಲಿದೆ, ಅದರಲ್ಲಿ ದಲಿತರು-ಹಿಂದುಳಿದವರು ಸಂತುಷ್ಟರಾಗಿ, ಸಮಾನತೆ ಅನುಭವಿಸುತ್ತ, ಸುಖ-ನೆಮ್ಮದಿಯಿಂದ ಇದ್ದಾರೆ ಎಂದು ಭಾವಿಸುವುದೇ ಮೂರ್ಖತನವಲ್ಲವೆ? ಎಲ್ಲ ಸರಿಯಿದ್ದಿದ್ದರೆ ಮನುಧರ್ಮದ ವಿರುದ್ಧ ಕಾಲಕಾಲಕ್ಕೆ ಹಲವು ಮಹಾತ್ಮರು ಹುಟ್ಟಿಕೊಂಡು ಹೋರಾಡುತ್ತಲೇ ಬರುವ ಅಗತ್ಯವಾದರೂ ಏನಿತ್ತು?

ಬುದ್ಧ, ಮಹಾವೀರ, ಗುರುನಾನಕ, ಕಬೀರ, ಬಸವಣ್ಣ, ನಾರಾಯಣ ಗುರು, ಜ್ಯೋತಿ ಬಾಪುಲೆ, ಅಂಬೇಡ್ಕರ್ ಮೊದಲಾದವರೆಲ್ಲ ಹೀಗೆ ವೈದಿಕ ಧರ್ಮದ ವಿರುದ್ಧ ಸಿಡಿದು ನಿಂತವರೇ ಆಗಿದ್ದಾರೆ.

ಮನುಧರ್ಮ ವಕ್ತಾರರು ಸ್ವಾಮಿ ವಿವೇಕಾನಂದರನ್ನು ಹಿಂದೂ ಧರ್ಮದ ಮಹಾನ್ ನಾಯಕರು ಎಂದೇ ಬಿಂಬಿಸುತ್ತಾರೆ. ಆದರೆ ಹಿಂದೂ ಧರ್ಮದ ಒಳಗಿನ ಕೊಳಕುಗಳ ವಿರುದ್ಧ ವಿವೇಕಾನಂದರು ಮಾತನಾಡಿದಷ್ಟು ತೀಕ್ಷ್ಣವಾಗಿ ಯಾರೂ ಮಾತನಾಡಿಲ್ಲ ಎಂಬುದನ್ನು ಅವರು ಮರೆಮಾಚುತ್ತಾರೆ. ಈ ದೇಶದ ಜನರ ಪ್ರಾಣ ಹಿಂಡುತ್ತಿರುವ ಪುರೋಹಿತಶಾಹಿಗಳನ್ನು ಇಲ್ಲಿಂದ ಓಡಿಸುವವರೆಗೆ ಹಿಂದೂ ಧರ್ಮಕ್ಕೆ ಮುಕ್ತಿ ಇಲ್ಲ ಎಂದು ವಿವೇಕಾನಂದರು ಆ ಕಾಲದಲ್ಲೇ ಹೇಳಿದ್ದರು.

ಧಾರ್ಮಿಕ ಸ್ವಾತಂತ್ರ್ಯವಿಲ್ಲದೆ, ತಾನು ಇಷ್ಟ ಪಟ್ಟ ದೇವರನ್ನು ಮುಟ್ಟಿ ಪೂಜಿಸುವ ಅವಕಾಶವಿಲ್ಲದೆ, ಸಾಮಾಜಿಕ ನಿಂದನೆ-ಅವಮಾನ-ದೂಷಣೆಗಳನ್ನು ಅಡಿಗಡಿಗೂ ಅನುಭವಿಸುತ್ತ, ಅಸ್ಪೃಶ್ಯತೆ-ಅಸಮಾನತೆಯ ನರಕದಲ್ಲಿ ಬದುಕುತ್ತಿರುವ ಜನರು ತಮಗೆ ಒಂದು ಧಾರ್ಮಿಕ ಐಡೆಂಟಿಟಿಯನ್ನು ಬಯಸಿದರೆ ತಪ್ಪೇನು? ಮತ್ತೊಂದು ಧರ್ಮ ತಮ್ಮನ್ನು ಕನಿಷ್ಠ ಮನುಷ್ಯರಂತೆ ನಡೆಸಿಕೊಳ್ಳುತ್ತದೆ ಎಂಬುದು ಅವರಿಗೆ ಮನವರಿಕೆ ಆದಲ್ಲಿ ಮತಾಂತರವಾಗುವುದರಲ್ಲಿ ತಪ್ಪೇನು?

ಇಡೀ ಜಗತ್ತು ಬೆಳೆದುಬಂದಿರುವುದೇ ಮತಾಂತರ, ಪಂಥಾಂತರ, ಧರ್ಮಾಂತರಗಳ ಪ್ರಕ್ರಿಯೆಗಳ ಜತೆಜತೆಗೆ. ಇದನ್ನು ನಿರಾಕರಿಸುವವರಿಗೆ ಇತಿಹಾಸ ಪ್ರಜ್ಞೆ ಇರುವ ಸಾಧ್ಯತೆ ಕಡಿಮೆ. ಹಿಂದೂ ಧರ್ಮವೂ ಸೇರಿದಂತೆ ಜಗತ್ತಿನ ಎಲ್ಲ ಧರ್ಮಗಳೂ ಮತಾಂತರ ಪ್ರಕ್ರಿಯೆಯಿಂದಲೇ ಬೆಳೆಯುತ್ತ ಬಂದಿವೆ. ಒಂದು ಧರ್ಮ ಉಸಿರುಗಟ್ಟಿಸಿದಾಗ, ಮತ್ತೊಂದು ಧರ್ಮವನ್ನು ಆಶ್ರಯಿಸುವ ಪರಂಪರೆ ಇಂದು ನಿನ್ನೆಯದಲ್ಲ. ಈ ಚಲನಶೀಲತೆ ತಮ್ಮ ಧರ್ಮಕ್ಕೆ ಮಾರಕವಾದೀತೆಂದು ಬೆದರಿ ಇದನ್ನು ವಿರೋಧಿಸುವುದರಲ್ಲಿ ಯಾವ ಅರ್ಥವೂ ಇಲ್ಲ ಎಂಬುದನ್ನು ಹಿಂದೂ ಧರ್ಮದ ಸ್ವಘೋಷಿತ ರಕ್ಷಕರು ಅರ್ಥಮಾಡಿಕೊಳ್ಳಬೇಕಾಗಿದೆ.

ದೇಶದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಚರ್ಚ್‌ಗಳ ಮೇಲೆ ನಡೆದಿರುವ ದಾಳಿ ಹಿಂದೂ ಧರ್ಮದ ಯಥಾಸ್ಥಿತಿವಾದಿಗಳ ಅಸಹನೆ, ಅಸಹಾಯಕತೆಗೆ ಹಿಡಿದ ಕನ್ನಡಿ. ಈ ಧರ್ಮರಕ್ಷಕರು ಭೀತಿಗೊಂಡಿದ್ದಾರೆ. ಹಿಂದುಳಿದವರ-ದಲಿತರ ಸಮಾಧಿಯ ಮೇಲೆ ಕಟ್ಟಿದ ವೈದಿಕ ಧರ್ಮ ಅನಾಥವಾಗುತ್ತದೆಯೆಂಬ ಭಯ ಅವರನ್ನು ಕಾಡುತ್ತಿದೆ.

ಕಡೆಗೊಂದು ಮಾತು. ಹಿಂದವಃ ಸೋದರಃ ಸರ್ವೆ ಎಂದು ಹೇಳುತ್ತಲೇ ತಳವರ್ಗದ ಜನರಿಗೆ ಮಂಕುಬೂದಿ ಎರಚುತ್ತ ಬಂದ ಜನರನ್ನು ಹಿಡಿದು ಅವರ ಮೂಲದ ಬಗ್ಗೆ ಪ್ರಶ್ನೆ ಕೇಳಿ ನೋಡಿ. ಹಿಂದೂ ಎಂಬ ಶಬ್ದ ಉದ್ಭವವಾಗಿದ್ದು ಯಾವಾಗ ಎಂದು ಕೇಳಿ ನೋಡಿ. ಅವರ ಬಳಿ ಉತ್ತರವಿರುವುದು ಸಾಧ್ಯವಿಲ್ಲ.

ಒಂದು ರಾಜಕೀಯ ಪಕ್ಷವನ್ನು ಆಸರೆಯಾಗಿಟ್ಟುಕೊಂಡು ಹಿಂದೂ ಧರ್ಮ ರಕ್ಷಕರು ನಡೆಸುತ್ತಿರುವ ಉಪಟಳಗಳನ್ನು ಈ ಸಮಾಜ ಸಹಿಸಿಕೊಳ್ಳುವಷ್ಟು ಕಾಲ ಸಹಿಸಿಕೊಳ್ಳುತ್ತದೆ. ತೀರಾ ಅಸಹನೀಯ ಎನಿಸಿದ ದಿನ ಇಡೀ ಸಮಾಜವೇ ಸಿಡಿದು ನಿಲ್ಲುತ್ತದೆ. ಸ್ವಘೋಷಿತ ಧರ್ಮರಕ್ಷಕರ ಆಕ್ರಮಣಶೀಲತೆ ಅವರಿಗೇ ಮುಳುವಾಗುವ ಸಾಧ್ಯತೆಗಳೇ ಹೆಚ್ಚು.

ಈಗಲೂ ಡಾ.ಅಂಬೇಡ್ಕರ್ ಒಡ್ಡಿದ ಸವಾಲನ್ನೇ ಪೇಜಾವರರು ಮತ್ತು ಅವರಂಥವರಿಗೆ ಕೇಳಿ ನೋಡೋಣ: ಈಗಲಾದರೂ ತಮ್ಮ ಮಠಪೀಠಗಳನ್ನು ದಲಿತರಿಗೆ-ಹಿಂದುಳಿದವರಿಗೆ ಬಿಟ್ಟುಕೊಡಲು ಅವರು ಸಿದ್ಧರಿದ್ದಾರೆಯೆ? ಎಲ್ಲ ದೇವಸ್ಥಾನಗಳನ್ನು ತಳಸಮುದಾಯವರಿಗೆ ಬಿಟ್ಟುಕೊಡುವರೆ? ಹೇಗಿದ್ದರೂ ಈ ಎಲ್ಲ ದೇವಸ್ಥಾನಗಳಲ್ಲಿ ಪೂಜೆಗೊಳ್ಳುವ ದೇವರೆಲ್ಲ ಈ ತಳಸಮುದಾಯಗಳಿಗೇ ಸೇರಿದವರಲ್ಲವೆ? ಇಂಥದ್ದೊಂದು ತ್ಯಾಗ ಮಾಡಿದರೆ ಇಡೀ ದೇಶದಲ್ಲಿ ನಡೆಯುವ ಎಲ್ಲ ಬಗೆಯ ಮತಾಂತರವೂ ಸ್ಥಗಿತಗೊಳ್ಳುತ್ತದೆ. ತನ್ಮೂಲಕ ಭಾರತೀಯ ಸಮಾಜಕ್ಕೆ ಪೇಜಾವರರಂಥವರು ಬಹುದೊಡ್ಡ ಕೊಡುಗೆ ನೀಡಿದಂತಾಗುತ್ತದೆ.

ಈ ಸವಾಲನ್ನು ಅವರು ಒಪ್ಪಿಕೊಳ್ಳುವರೆ?

11 comments:

ಹಳ್ಳಿಕನ್ನಡ said...

ತುಂಬಾ ಚೆನ್ನಾಗಿ ಬರೆದಿದ್ದೀರಿ ದಿನೇಶ್. ಸದ್ಯದ ಪರಸ್ಥಿತಿಯಲ್ಲಿ ನಿಮ್ಮಂತವರ ಅವಶ್ಯಕತೆ ತುಂಬಾ ಇದೆ ಸರ್ ಪತ್ರಿಕಾರಂಗಕ್ಕೆ.
-ಮಂಜುನಾಥ ಸ್ವಾಮಿ

Anonymous said...

dinesh,
it is timely well-written article. i too wanted to write a similar article. you have done a wonderful job.
i am impressed by the way you presented facts by referring to Ambedkar's challenge to maths and Pejavar Seer's predicament on conversion.
satish

Anonymous said...

ದಿನೇಶ್ ಅವರೆ,
ನಿಮ್ಮ ಲೇಖನ ಓದಿ ಒಂದಿಷ್ಟು ನೆಮ್ಮದಿಯಾಯಿತು. ಇಂಥ ದನಿಗಳು ಹೆಚ್ಚಾಗಬೇಕು. ನಿಮ್ಮ ಹಾಗೇ ಯೋಚಿಸುವವರಿಗೆ ಬಲ ಬೆಂಬಲ ಎಲ್ಲವೂ ಆಗುವಂಥ ಇಂಥ ಬರಹಗಳನ್ನು ಹೆಚ್ಚಾಗಬೇಕಿದೆ.
ಚೆನ್ನಾಗಿ ಬರೆದಿದ್ದೀರಿ.
-ಓದುಗ

Anonymous said...

dinesh avarige dhanyavadagalu...

Nimma lekana chennagittu. lekanada madye sakastu preshnegalu bandive. avugalannu matte matte kelikollabekada agathya ivattu tumba ide. neevu Ambedkar avara vada mundittiddu. sari. e vichaara matthastu charche adare chenna...

Thanku Dinesh..

Dharaneesh

Anonymous said...

kalakke thakka chavadiyanthe thamma lhekhana mudi bandide.hindhu dharmada hulukugallannu saripadisuva mansugallu iddiddare poorvagrahi pejawara anthavaru hindhugala olagina mamsha hari shakha harigallannu bhinnavagi kannuthiralilla.
abrhamannarige matha-pheeta vahishi,thala samudhayagalige dhevalayagallalli poojege avakasha kalpisi emba savalige nanna sammathi ide.
-madan sharma

Anonymous said...

Lekhan tumba chennagide sir.. Sadyad stitiyalli idu nija.. Nivu hindu dharmada swayam ghosita rakshakarige kelide prasnegallu.. Chennagive.. But avarige uttarane gottille.. Evaru hindu dharmad hesaralli dharamad mool asheyavannu halu madtidira?? Ottare nivu ettiruva prasnegalu sooktavagive

ಮಲ್ಲಿಕಾಜು೯ನ ತಿಪ್ಪಾರ said...

Anonymous said...
Lekhan tumba chennagide sir.. Sadyad stitiyalli idu nija.. Nivu hindu dharmada swayam ghosita rakshakarige kelide prasnegallu.. Chennagive.. But avarige uttarane gottille.. Evaru hindu dharmad hesaralli dharamad mool asheyavannu halu madtidira?? Ottare nivu ettiruva prasnegalu sooktavagive

Anonymous said...

Dear Sir, Its well written. But I dont agree with the spirit of this view.

The aim seems to be to take the fight to the enemy's camp by attacking his/her religion. An honest understanding of the scriptures will never result in the perverted acts that we have witnessed in past centuries.

History is replete with terrible acts of bad men. That doesnt make humanity bad. Hinduism has reformed more since Gandhi and Ambedkar than it has in the past millennium.

The cure is in love and understanding and not in hate speech. For a balanced understanding of scriptures, I would respectfully recommend Shri Bannaje's interpretations.

Thanks
Srinivas

hamsanandi said...

ದಿನೇಶರೆ,

"ಕೃಣ್ವಂತೊ ವಿಶ್ವಮಾರ್ಯಂ" ಎನ್ನುವುದು ರೇಸಿಸ್ಟ್ ಆಗಿ, ಮತಾಂತರಿಸುವ ದಾರಿಯಾಗಿ ಕಂಡಿತೇ ನಿಮಗೆ? ಅದು ತಪ್ಪು ಎನ್ನದೇ ವಿಧಿಯಿಲ್ಲ ಸ್ವಾಮೀ.

ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ಎನ್ನುವ, ಸೋSಯಂ ವೋ ವಿದಧಾತು ವಾಂಛಿತಫಲಂ ತ್ರೈಲೋಕ್ಯನಾಥೋ ವಿಭುಃ ಎನ್ನುವ ಮಾತುಗಳನ್ನೂ ನೀವು ಕೇಳಿರಬೇಕು; ವಿಷಯ ಹಾಗಿರುವಾಗ ಕಣಿವೆ ಮಾರಮ್ಮನ, ಮಲೆ ಮಹದೇಶ್ವರನ್ನ, ಹಾಸನದಮ್ಮನ ಅಥವ ಕೋಲಾರದಮ್ಮನನ್ನ ಪೂಜೆ ಮಾಡುವವರನ್ನ ’ಮತಾಂತರಿಸುವ’ ಮಾತೆಲ್ಲಿ ಬರುತ್ತೆ?

ಗೋವಿಂದ್ರಾಜ್ said...

Sir, you are doing an extraodrinariy and wonderful job by opening a blog besides your newspaper. Your blog is a voice for the voiceless. It is the time that we are in terrible need of people like with secular bent of mind for the society at cross roads. And moreover, it will reach the highly meducated who are still prejudiced despite their good education. They will go through it for sure.

Anonymous said...

ಲೇಖಕರಿಗೆ ನಮಸ್ಕಾರಗಳು
ತಮ್ಮ ಲೇಖನ ತುಂಬಾ ಪ್ರಶ್ನೆಗಳೇ ಇರೋದ್ರಿಂದ ಈ ಲೇಖನವನ್ನ ಕೆಲವು ಬ್ರಾಮ್ಹನರ ಹಿಡಿತದಲ್ಲಿರುವ ಪತ್ರಿಕೆಗಳವರು ಅರ್ಥ ಮಾಡಿಕೊಳ್ಳಬೇಕು