Wednesday, January 28, 2009

ದೇಸೀಮಾತು ಪುಸ್ತಕವಾಗಿದೆ, ಬಿಡುಗಡೆಗೆ ನೀವೂ ಬನ್ನಿ

ಗೆಳೆಯರೆ,

ಬೆಳಗಾವಿಯಲ್ಲಿ ಎಂಟು ದಿನ ಕಳೆದು, ಬೆಂಗಳೂರು ತಲುಪಿಕೊಂಡರೆ ಬಾಕಿ ಉಳಿದ ಕೆಲಸಗಳ ಸಾಲುಸಾಲು. ಅದರ ನಡುವೆ ಬ್ಲಾಗ್ ಅಪಡೇಟ್ ಮಾಡಲು ಸಾಧ್ಯವಾಗಲಿಲ್ಲ. ಬರೆದರೆ ಬೆಳಗಾವಿ ಅನುಭವಗಳದ್ದೇ ಒಂದು ರಾಶಿ ಬರೆಯಬಹುದಿತ್ತು. ಈಗ ಬರೆಯಲು ಹೊರಟರೆ ಎಲ್ಲವೂ ಔಟ್‌ಡೇಟೆಡ್ ಅನ್ನಿಸುತ್ತಿದೆ. ಬೆಳಗಾವಿಯಿಂದ ತಂದ ಕುಂದ, ಕರದಂಟೂ ಖಾಲಿಯಾಗಿದೆ.

ಒಂದು ಖುಷಿಯ ವಿಚಾರ: ದೇಸೀಮಾತು ಪುಸ್ತಕ ರೂಪದಲ್ಲಿ ಹೊರಬಂದಿದೆ. ಈ ಬ್ಲಾಗ್‌ನಿಂದ ಕೆಲವು ಲೇಖನಗಳನ್ನು ಹೆಕ್ಕಿ, ಮತ್ತಷ್ಟನ್ನು ಸೇರಿಸಿ ಈ ಪುಸ್ತಕ ಪೂರೈಸಿದ್ದೇನೆ. ಪುಸ್ತಕವನ್ನು ಪ್ರಕಾಶಿಸಿರುವುದು ಬೆಂಗಳೂರು ಪ್ರೆಸ್ ಕ್ಲಬ್ ಪ್ರಕಾಶನ. ಬಿಡುಗಡೆಯೂ ಪ್ರೆಸ್ ಕ್ಲಬ್‌ನಲ್ಲೇ, ಜ.೩೧ರಂದು ಶನಿವಾರ ಸಂಜೆ ೬ ಗಂಟೆಗೆ.

ಬಿಡುವು ಮಾಡಿಕೊಂಡು ಖಂಡಿತ ಬನ್ನಿ.

ಅಂದಹಾಗೆ ಕೃತಿಗೆ ಮುನ್ನುಡಿ ಬರೆದಿರುವುದು ಜನಪರ ಪತ್ರಕರ್ತ ಎನ್.ಎ.ಎಂ.ಇಸ್ಮಾಯಿಲ್ ಅವರು. ಕೃತಿಯ ಬೆನ್ನುಡಿಯಲ್ಲಿ ಗೆಳೆಯ ಡಾ.ಶತೇಂದ್ರ ಕುಮಾರ್ ಹೀಗೆ ಬರೆದಿದ್ದಾರೆ:

ಪತ್ರಕರ್ತ ಎಸ್.ಸಿ.ದಿನೇಶ್ ಕುಮಾರ್ ಅವರ ದೇಸೀಮಾತು ಕೃತಿ ಹಲವು ದೃಷ್ಟಿಯಲ್ಲಿ ಮಹತ್ವದ ಕೃತಿ. ವ್ಯವಸ್ಥೆಯ ಸೋಗಲಾಡಿತನವನ್ನು ಬಯಲಾಗಿಸುವ ಇಲ್ಲಿನ ಲೇಖನಗಳು ನಮ್ಮ ವರ್ತಮಾನದ ತಲ್ಲಣಗಳನ್ನು ಹಸಿಹಸಿಯಾಗಿ ಧ್ವನಿಸುತ್ತವೆ. ಮತಾಂಧತೆ, ಮಠಾಧೀಶರ ಕಪಟಗಳು, ಕಾರ್ಪರೇಟ್ ಸಂಸ್ಕೃತಿಯ ವೈರುಧ್ಯಗಳು, ಹಿಂದುಳಿದವರ ಸಮಸ್ಯೆಗಳು, ಸಮೂಹಮಾಧ್ಯಮಗಳ ಗೋಸುಂಬೆತನ, ಕನ್ನಡತನದ ಪ್ರಶ್ನೆಗಳು ಇಲ್ಲಿನ ಲೇಖನಗಳಲ್ಲಿ ಚರ್ಚೆಗೆ ಒಳಗಾಗಿವೆ.

ದಿನೇಶ್ ಅವರು ಮೂಲತಃ ಕವಿ, ಭಾವಜೀವಿ. ಪತ್ರಿಕಾರಂಗದ ಚೌಕಟ್ಟಿಗೆ ಒಳಪಟ್ಟು ಅವರೊಳಗಿನ ಕವಿ ತನ್ನ ವ್ಯಾಪ್ತಿಯನ್ನು ವಿಶಾಲಗೊಳಿಸಿಕೊಂಡಂತೆ ಕಾಣುತ್ತಾನೆ. ಅವರ ಗದ್ಯ ಬರವಣಿಗೆ ಸರಳ, ಸ್ಪಷ್ಟ ಹಾಗು ನೇರವಾಗಿ ಎದೆಗೆ ತಾಕುವಂಥದ್ದು. ಇಲ್ಲಿ ಅತಿರಂಜಕತೆ, ಜಟಿಲ ವಾಕ್ಯಸಂಯೋಜನೆ, ಅಸ್ಪಷ್ಟ ಅಭಿವ್ಯಕ್ತಿಗಳನ್ನು ಹುಡುಕಿದರೂ ಸಿಗುವುದಿಲ್ಲ. ತನಗೆ ಅನಿಸಿದ್ದನ್ನು ನೇರವಾಗಿ, ರಮ್ಯ ಉಪಮೆಗಳ ನೆರವಿಲ್ಲದೆ ಹೇಳುವ ಕಲೆಗಾರಿಕೆ ಅವರಿಗೆ ಸಿದ್ಧಿಸಿದೆ. ಹೀಗಾಗಿ ಇಲ್ಲಿನ ಲೇಖನಗಳು ಪಂಡಿತರಿಗಷ್ಟೇ ಅಲ್ಲದೆ ಸಾಮಾನ್ಯ ಓದುಗನಿಗೂ ಸುಲಭವಾಗಿ ತಲುಪುತ್ತವೆ.

ಕಳೆದ ಆರೇಳು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆ ನಿಂತಿರುವ ಮಲೆನಾಡ ಪ್ರತಿಭೆ ದಿನೇಶ್ ಕುಮಾರ್ ಪ್ರವಾಹಕ್ಕೆ ವಿರುದ್ಧವಾಗಿ ಈಜುವ ಸವಾಲನ್ನು ಯಶಸ್ವಿಯಾಗಿ ಎದುರಿಸಿದವರು. ಲೇಖಕನ-ಪತ್ರಕರ್ತನ ವ್ಯಾಪ್ತಿಯನ್ನು ಮೀರಿ ಸಾಮಾಜಿಕ ಚಳವಳಿಯಲ್ಲಿ ಗುರುತಿಸಿಕೊಂಡಿರುವ ಅವರಿಗೆ ಬರವಣಿಗೆ ಸಹ ಚಳವಳಿಯ ಒಂದು ಭಾಗ ಎನಿಸಿದೆ.

ತಮ್ಮ ದೇಸೀಮಾತು ಬ್ಲಾಗ್ ಮೂಲಕ ಅಂತರ್ಜಾಲ ಜಗತ್ತಿನಲ್ಲೂ ಬಹುಬೇಗ ಓದುಗರನ್ನು ಸಂಪಾದಿಸಿರುವ ದಿನೇಶ್ ‘ಇಂದು ಸಂಜೆ‘ ಪತ್ರಿಕೆಯ ಸಂಪಾದಕರಾಗಿ ಹೊಸಸಾಧ್ಯತೆಗಳ ಕಡೆ ತೆರೆದುಕೊಳ್ಳಲು ಯತ್ನಿಸುತ್ತಲೇ ಇದ್ದಾರೆ. ‘ದೇಸೀಮಾತು ಅಪ್ಪಟ ದೇಸೀಪ್ರತಿಭೆಯ ಸಹಜ ಅಭಿವ್ಯಕ್ತಿಯ ಅನಾವರಣ. ಜನಪರ ಪತ್ರಿಕಾವೃತ್ತಿಯ ಹೊಸ ಪರಿಭಾಷೆಯನ್ನು ಕಟ್ಟಿಕೊಟ್ಟಿರುವ ಈ ಕೃತಿ ಹೆಚ್ಚು ಹೆಚ್ಚು ಜನರನ್ನು ತಲುಪಬೇಕಾಗಿದೆ.
-ಡಾ. ಶತೇಂದ್ರ ಕುಮಾರ್

ಕಾರ್ಯಕ್ರಮಕ್ಕೆ ಬನ್ನಿ ಎಂದು ಮತ್ತೊಮ್ಮೆ ನಿಮ್ಮೆಲ್ಲರನ್ನು ಆಹ್ವಾನಿಸುತ್ತ
ಪ್ರೀತಿಯಿಂದ
ದಿನೇಶ್ ಕುಮಾರ್ ಎಸ್.ಸಿ.
(ದಿನೂ ಸ.ಚಂ.)

7 comments:

Anonymous said...

helo,
blog lokavannu bahu bega avarisikondu.utthama lekhanagalannu needi, avelllavannu sangrahisi aste bega pusthakavagi rupisi, adu bidugade aguthiruva sandarbadalli tamage nanna abinandanegalu. pretiyinda karediddheri mareyade baruve. c u 31st.
-mahesh
bangalore

ಮಲ್ಲಿಕಾಜು೯ನ ತಿಪ್ಪಾರ said...

DESHIMAATU pustakavagi baruttiruvadakke nimage abhinandanegalu sir

hEmAsHrEe said...

congrats Dinesh.

ದಿನೇಶ್ ಕುಮಾರ್ ಎಸ್.ಸಿ. said...

ಮಹೇಶ್, ಮಲ್ಲಿಕಾರ್ಜುನ, ಹೇಮಶ್ರೀ
ಥ್ಯಾಂಕ್ಸ್.

ದಿನೇಶ್ ಕುಮಾರ್ ಎಸ್.ಸಿ. said...

ಗೆಳೆಯರೆ,
ತಾಂತ್ರಿಕ ಕಾರಣಗಳಿಗಾಗಿ ಇಂದು ಸಂಜೆ (೩೧-೧-೨೦೦೯) ನಡೆಯಬೇಕಿದ್ದ ಐದು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಪ್ರೆಸ್ ಕ್ಲಬ್ ಮುಂದೂಡಿದೆ.
ಹೀಗಾಗಿ ನನ್ನ ದೇಸಿಮಾತು ಕೃತಿಯ ಬಿಡುಗಡೆ ಇಂದು ನಡೆಯುತ್ತಿಲ್ಲ. ಮುಂದೆ ದಿನಾಂಕ ಹೇಳುವೆ, ಕ್ಷಮಿಸಿ

ಚಿತ್ರಾ ಸಂತೋಷ್ said...

ಅಭಿನಂದನೆಗಳು ಸರ್...
-ಚಿತ್ರಾ

Anonymous said...

Please read and participate

http://thepinkchaddicampaign.blogspot.com/