Tuesday, August 12, 2008

ಸಕಲೇಶಪುರ ಯಾಕೆ ಬೆಳೆಯಲಿಲ್ಲ?

ಗೆಳೆಯ ಮೆಹಬೂಬ ಸಕಲೇಶಪುರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ. ಮೊನ್ನೆ ಸಕಲೇಶಪುರದಲ್ಲಿ ಪತ್ರಿಕಾ ದಿನಾಚರಣೆ. ಅವನ ಸಂಭ್ರಮದಲ್ಲಿ ನಾನೂ ಪಾಲ್ಗೊಳ್ಳಬೇಕು ಎಂಬುದು ಅವನ ಆಸೆ.

ಮೆಹಬೂಬ್ ಎಂಥವನೆಂದರೆ ಮಾತಿನಲ್ಲೇ ಕೊಂದು ಹಾಕುತ್ತಾನೆ. ದಿನೇಶ, ನೀನು ಬಾರದೆ ಹೋದರೆ ನಿನ್ ಜತೆ ಠೂ ಎಂದ ಅವನು. ಜತೆಗೆ ಗೆಳೆಯರಾದ ವಿಶ್ವ, ಮಂಜು ಮೊದಲಾದವರ ಒತ್ತಡ. ಭಾನುವಾರ ಮಧ್ಯಾಹ್ನ ಕಾರ್ಯಕ್ರಮ ಸ್ಥಳ ತಲುಪಿಕೊಂಡಾಗ ಒಂದಿಬ್ಬರ ಭಾಷಣವಷ್ಟೆ ಬಾಕಿ ಇತ್ತು; ಜತೆಗೆ ತಡವಾಗಿ ಬಂದ ನನ್ನ ಮಾತು ಬೇರೆ ಉಳಿದಿತ್ತು.

ಅಲ್ಲಿ ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ಬಿ.ಆರ್.ಗುರುದೇವ್ ಇದ್ದರು. ಪತ್ರಕರ್ತ ಮಿತ್ರರಾದ ಮಂಜುನಾಥ್, ಮದನ್‌ಗೌಡ, ಉದಯ ಕುಮಾರ್, ರಕ್ಷಿದಿ ಅರುಣ್, ಜಾನೆಕೆರೆ ಪರಮೇಶ್ ಮೊದಲಾದವರಿದ್ದರು. ಹಿರಿಯರಾದ ರಾಜಶೇಖರಯ್ಯ, ಬ್ಯಾಕರವಳ್ಳಿ ಜಯಣ್ಣ ಕೂಡ ಇದ್ದರು.

ಅಲ್ಲಿ ನಾನು ಮಾತನಾಡಬೇಕೆಂದುಕೊಂಡದ್ದು ಸಾಕಷ್ಟು. ಆದರೆ ಹೊರಗೆ ಜಿಟಿಜಿಟಿ ಮಳೆ. ಮಳೆಗೆ ಅಂಟಿಕೊಂಡೇ ಬರುವ ಚಳಿ. ಮಳೆಯಲ್ಲಿ, ಚಳಿಯಲ್ಲಿ ಹೊಟ್ಟೆ ಚುರುಗುಟ್ಟುವುದು ಮಾಮೂಲಿ. ಮೆಹಬೂಬ ಒಳ್ಳೆ ಅಡುಗೆ ಮಾಡಿಸಿದ್ದ. ಅಕ್ಕಿ ರೊಟ್ಟಿ, ನೆಂಚಲು ಕೆಸುವಿನ ಸೊಪ್ಪಿನ ದಂಟಿನ ಪಲ್ಯ, ಟೊಮೋಟೋ ಚಟ್ನಿ, ತರಕಾರಿ ಪಲಾವ್ ಜತೆಗೆ ಮಾಂಸಾಹಾರಿಗಳಿಗಾಗಿ ಬೊಂಬಾಟಾಗಿ ಚಿಕನ್ ಫ್ರೈ ರೆಡಿಯಾಗಿತ್ತು. ಈ ಎಲ್ಲ ಖಾದ್ಯಗಳು ಘಮಗುಡುವಾಗ ಯಾರಿಗೆ ತಾನೆ ಭಾಷಣ ಕೇಳುವ ತಾಳ್ಮೆ ಇದ್ದೀತು. ಆದರೂ ನಾನು ಒಂದಷ್ಟು ಮಾತನಾಡಿದೆ, ಮಾತನಾಡಿದ್ದು ಇಲ್ಲಿದೆ.

ನಾನು ಇದೇ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷನಾಗಿ ಸುಮಾರು ೧೦ ವರ್ಷಗಳ ಹಿಂದೆ ಕೆಲಸ ಮಾಡಿದ್ದೆ. ಆ ಕಾರಣಕ್ಕೆ ನನ್ನನ್ನು ಇಲ್ಲಿಗೆ ಕರೆಸಿರಬಹುದು ಎಂದುಕೊಂಡಿದ್ದೇನೆ.

ಇವತ್ತು ಇಲ್ಲಿ ಪತ್ರಿಕಾ ದಿನವನ್ನು ಆಚರಿಸಲಾಗುತ್ತಿದೆ. ೧೬೫ ವರ್ಷಗಳ ಹಿಂದೆ ಆರಂಭವಾದ ಮಂಗಳೂರು ಸಮಾಚಾರ ಪತ್ರಿಕೆ ಹುಟ್ಟಿದ ದಿನವನ್ನೇ ನಾವು ಪತ್ರಿಕಾ ದಿನಾಚರಣೆ ಎಂದು ಆಚರಿಸುತ್ತೇವೆ.

ಪತ್ರಿಕೆಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗ, ಇತ್ಯಾದಿ ಎಂದೆಲ್ಲ ನಾವು ಮಾತನಾಡುತ್ತೇವೆ. ಇವೆಲ್ಲ ಒಂದೊಂದು ಸಲ ಕ್ಲೀಷೆ ಎನಿಸುವುದುಂಟು.

ಕಾಲ ಬದಲಾದಂತೆ ಪತ್ರಿಕೋದ್ಯಮವೂ ಬದಲಾಗಿದೆ, ಆದ್ಯತೆಗಳು ಬದಲಾಗಿವೆ. ಆ ವಿಷಯ ನಾನಿಲ್ಲಿ ಮಾತನಾಡುವುದಿಲ್ಲ.

ಮುಖ್ಯವಾಗಿ ಸಕಲೇಶಪುರದ ಕುರಿತೇ ಒಂದಷ್ಟು ಮಾತನಾಡಬೇಕು ಎನಿಸುತ್ತಿದೆ. ಜಾಗತೀಕರಣ, ಖಾಸಗೀಕರಣ, ಉದಾರೀಕರಣ ಇತ್ಯಾದಿಗಳ ನಂತರ ಇಡೀ ಜಗತ್ತು ಬದಲಾಗಿದೆ, ಬದಲಾಗುತ್ತಿದೆ. ಆದರೆ ಸಕಲೇಶಪುರ ಯಾಕೆ ಬದಲಾಗಲಿಲ್ಲ? ಇದು ನನ್ನ ಪ್ರಶ್ನೆ.

ನಿಜ, ಜಾಗತೀಕರಣದ ಅಬ್ಬರದಲ್ಲಿ ನಗರಗಳು ಬೆಳೆಯುತ್ತವೆ, ಸಣ್ಣ ಪಟ್ಟಣಗಳು-ಹಳ್ಳಿಗಳು ಸರ್ವನಾಶವಾಗುತ್ತವೆ. ಆದರೆ ಅದ್ಭುತವಾದ ನಿಸರ್ಗ ಸಂಪತ್ತನ್ನು ಹೊಂದಿರುವ ಸಕಲೇಶಪುರಕ್ಕೂ ಈ ದುರ್ಗತಿ ಯಾಕೆ ಬಂತು? ಈ ಊರು ೮ ವರ್ಷಗಳ ಕೆಳಗೆ ನಾನು ಬೆಂಗಳೂರಿಗೆ ಹೋಗುವಾಗ ಹೇಗಿತ್ತೋ ಈಗಲೂ ಹಾಗೇ ಇದೆ. ಒಂದಿಷ್ಟೂ ಬೆಳೆದ ಹಾಗೆ ಕಾಣುತ್ತಿಲ್ಲ.

ಇಲ್ಲಿ ಬೆಳೆದಿರುವುದಾದರೂ ಏನು? ದಂಧೆಗಳು ಬೆಳೆದಿವೆ, ಲಾಬಿಗಳು ಬೆಳೆದಿವೆ.
ಇಲ್ಲಿನ ಐದು ಹೋಬಳಿಗಳಲ್ಲೂ ಗ್ರಾನೈಟ್ ಲಾಬಿ, ಮರಳು ಮಾಫಿಯಾ, ಲಿಕ್ಕರ್ ಮಾಫಿಯಾ, ಮರ ಕಳ್ಳಸಾಗಣೆ, ಮಟ್ಕಾ ದಂಧೆ, ಅನಧಿಕೃತ ಕ್ಲಬ್ ದಂಧೆ, ಕಳ್ಳಭಟ್ಟಿ ದಂಧೆ ಬೆಳೆದು ನಿಂತಿದೆ. ಇವನ್ನೆಲ್ಲ ಮಾಡಿಸುವವರು ಯಾರು? ಒಂದಲ್ಲ ಎರಡು ಬಾರಿ ಇಲ್ಲಿ ಕಳ್ಳಭಟ್ಟಿ ಕುಡಿದು ಜನರು ಸತ್ತರಲ್ಲ?ಯಾಕೆ ಇಲ್ಲಿನ ಪ್ರಜ್ಞಾವಂತ ಜನ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ?

ನಾವೆಲ್ಲ ಓದುತ್ತಿದ್ದ ಕಾಲಕ್ಕೆ ಇಲ್ಲಿನ ಶಾಲೆ-ಕಾಲೇಜುಗಳು ದನದ ದೊಡ್ಡಿಗಳ ಹಾಗಿದ್ದವು. ನಾನು ಓದಿದ ಹೈಸ್ಕೂಲ್‌ನಲ್ಲಿ ಬಯಲಾಜಿ, ಗಣಿತಕ್ಕೆ ಮೇಷ್ಟ್ರೇ ಇಲ್ಲ. ಹಾಗೂ ಟೆಕ್ಸ್ಟ್ ಬುಕ್ ಓದಿಕೊಂಡೇ ಪಾಸು ಮಾಡಿದೆವು. ಮತ್ತೆ ಕಾಲೇಜು ಸೇರಿದರೆ ಫಿಜಿಕ್ಸ್‌ಗೆ ಲೆಕ್ಚರರ್ ಇಲ್ಲ.

ಶಿಕ್ಷಣ ನಮ್ಮ ಹಕ್ಕು ಅಂತ ನಮ್ಮ ಅರಿವಿಗೇ ಬಂದಿರಲಿಲ್ಲ. ನಮಗೆ ನೀಡುತ್ತಿದ್ದ ಶಿಕ್ಷಣವನ್ನೂ ಭಿಕ್ಷೆ ಎಂಬಂತೆ ಕೊಡಲಾಯಿತು. ನಾವು ಕೊಡೋದೇ ಇಷ್ಟು, ಬೇಕಾದರೆ ತಗೋ, ಇಲ್ಲದಿದ್ದರೆ ಎದ್ದು ನಡಿ ಎಂಬಂತೆ. ಕಾಲೇಜಿನ ರೌಡಿಗಳು ಬಂದು ನೇರವಾಗಿ ಬೆಲ್ ಬಾರಿಸಿ ನಮ್ಮನ್ನು ಚಳವಳಿಗೆ ಕರೆದುಕೊಂಡು ಹೋಗುತ್ತಿದ್ದರು. ಯಾಕಾಗಿ ಆ ಚಳವಳಿ ಏನೊಂದೂ ನಮಗೆ ಗೊತ್ತಿರಲಿಲ್ಲ. ನಮ್ಮ ಶಾಲೆಯಲ್ಲಿ ಮೇಷ್ಟ್ರೇ ಇರಲಿಲ್ಲವಲ್ಲ, ಅದಕ್ಕಾಗಿ ಯಾರಾದರೂ ನಮ್ಮಿಂದ ಚಳವಳಿ ಹೂಡಿಸಿದ್ದರಾ? ಖಂಡಿತ ಇಲ್ಲ.

ಸಕಲೇಶಪುರದಲ್ಲಿ ಸಾಕಷ್ಟು ಶ್ರೀಮಂತರು, ಕೋಟ್ಯಧೀಶರು ಇದ್ದರು, ಈಗಲೂ ಇದ್ದಾರೆ. ಅವರೆಲ್ಲರೂ ತಮ್ಮ ಮಕ್ಕಳನ್ನು ಊಟಿ, ಮಂಗಳೂರು, ಬೆಂಗಳೂರು, ಮಣಿಪಾಲದ ಶಾಲೆಗಳಿಗೆ ಕಳುಹಿಸಿದರು. ಊಟಿಯಲ್ಲಿ ಆ ಮಕ್ಕಳು ಓದುವ ಜತೆ ಹಾರ್ಸ್ ರೈಡಿಂಗ್, ಸ್ವಿಮ್ಮಿಂಗ್, ಚೆಸ್ ಕಲಿತರು. ನಾವು ಮಧ್ಯಮವರ್ಗದವರು, ಬಡವರು ಪಾಠ ಮಾಡುವ ಮೇಷ್ಟ್ರು ಇಲ್ಲದೆ ಗೋಲಿ, ಲಗೋರಿ, ಬುಗುರಿಯಾಡುತ್ತ ಸಮಯ ಹಾಳುಮಾಡಿಕೊಂಡೆವು.

ನನಗೆ ಈಗಲೂ ಆಶ್ಚರ್ಯವಾಗೋದು ಏನೆಂದರೆ, ಇಲ್ಲಿ ಒಂದು ಒಳ್ಳೆಯ ಶಿಕ್ಷಣ ಸಂಸ್ಥೆ ಕಟ್ಟಲು ಯಾವ ಶ್ರೀಮಂತನೂ ಯಾಕೆ ಯೋಚನೆ ಮಾಡಲಿಲ್ಲ? ಇಲ್ಲಿನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಲು ಯಾವ ಕಾಫಿ ಪ್ಲಾಂಟರ್ ಸಹ ಮುಂದೆ ಬರಲಿಲ್ಲವೇಕೆ? ಒಂದು ವೇಳೆ ಇಲ್ಲಿನ ಸಂತ ಜೋಸೆಫರ ಶಾಲೆಯೊಂದು ಇಲ್ಲದೆ ಹೋಗಿದ್ದರೆ ಸಕಲೇಶಪುರ ಮಕ್ಕಳೆಲ್ಲ ಏನಾಗಿ ಹೋಗುತ್ತಿದ್ದರೋ, ನೆನಪಿಸಿಕೊಂಡರೆ ಭಯವಾಗುತ್ತೆ.

ಈಗಲೂ ಸಹ ಯಾವ ಬದಲಾವಣೆಯಾಗಿದೆ? ಹಳ್ಳಿ ಜನರಿಗೆ ಸಮೀಪದಲ್ಲಿ ಶಾಲೆ, ಕಾಲೇಜು ಇಲ್ಲ. ಇರುವ ಶಾಲೆ-ಕಾಲೇಜುಗಳಲ್ಲಿ ಅಧ್ಯಾಪಕರ ಕೊರತೆ. ಮೇಷ್ಟ್ರು ಇದ್ದರೂ ಕೊಠಡಿ ಇಲ್ಲದ ಶಾಲೆಗಳಿವೆ. ಹೆಣ್ಣು ಮಕ್ಕಳಿಗೆ ಒಂದು ಸಣ್ಣ ಟಾಯ್ಲೆಟ್ ಕೂಡ ಗತಿಯಿಲ್ಲ. ಮಳೆಯಲ್ಲಿ ಮಕ್ಕಳು ಬಸ್‌ಗಾಗಿ ನೆನೆದುಕೊಂಡೇ ಕಾಯಬೇಕು-ಬಸ್ ಶೆಲ್ಟರ್‌ಗಳೂ ಇಲ್ಲ.

ಸಕಲೇಶಪುರದ ಮೂಲ ನಿವಾಸಿಗಳ ಕಥೆ ಏನಾಗಿದೆ. ಇಲ್ಲಿ ಹುಟ್ಟಿ ಬೆಳೆದವರೆಲ್ಲ ಬದುಕಲು ಸಾಧ್ಯವಿಲ್ಲದೆ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಚಾಪೆ ಸುತ್ತಿಕೊಂಡು ಇಲ್ಲಿಗೆ ಬಂದ ಹೊರರಾಜ್ಯದವರು ಇಲ್ಲಿ ಯಜಮಾನಿಕೆ ಮಾಡುತ್ತಿದ್ದಾರೆ. ನೂರು ಎಕರೆ ಮೇಲ್ಪಟ್ಟ ಕಾಫಿ ತೋಟಗಳೆಲ್ಲ ಇವತ್ತು ಯಾರ ಕೈಯಲ್ಲಿದೆ? ರಾಜಸ್ತಾನದಿಂದ ಬಂದ ಮಾರವಾಡಿಗಳು, ಕೇರಳದವರು, ಮಲ್ಟಿನ್ಯಾಷನಲ್ ಕಂಪೆನಿಯವರು, ಐಟಿ-ಬಿಟಿಯವರು, ಗಣಿ ದೊರೆಗಳು ಇವತ್ತು ಸಕಲೇಶಪುರ ತಾಲ್ಲೂಕಿನ ಎಲ್ಲ ಕಾಫಿ ತೋಟಗಳನ್ನು ಕೊಂಡುಕೊಂಡಿದ್ದಾರಲ್ಲವೆ?

ಅವರಿಗೆ ಟ್ಯಾಕ್ಸು ಉಳಿಸಬೇಕು, ಇನ್ವೆಸ್ಟ್‌ಮೆಂಟೂ ಆಗಬೇಕು.
ಸಣ್ಣ ಕಾಫಿ ಬೆಳೆಗಾರರ ಕೂಗು ಯಾರು ಕೇಳುತ್ತಿದ್ದಾರೆ? ಬೆಳೆ ಇಲ್ಲ, ಬೆಲೆ ಇಲ್ಲ ಎಂದರೂ ದೊಡ್ಡ ಮಾರ್‍ವಾಡಿಗಳು ತಲೆ ಕೆಡಿಸಿಕೊಳ್ಳೋದಿಲ್ಲ. ಆದರೆ ಸಣ್ಣ ಬೆಳೆಗಾರರ ಗತಿ? ಅವರು ಕೂಗಿದ್ದೆಲ್ಲ ಇಲ್ಲಿನ ಬೆಟ್ಟಗುಡ್ಡಗಳಿಗೆ ಅಪ್ಪಳಿಸಿ ವಾಪಾಸು ಬಂದಿದೆ ಅಲ್ಲವೆ?

ಸಕಲೇಶಪುರದ ಚಳವಳಿಗಳು ಏನಾದವು? ರೈತ ಚಳವಳಿ ಏನಾಯ್ತು. ವಿಶ್ವನಾಥ್ ಅಂಥವರು ರಾಜಕಾರಣಕ್ಕೆ ಹೋದ ಮೇಲೆ, ಕೆರೋಡಿ ಶಿವು ಸತ್ತ ಮೇಲೆ ಹಸಿರು ಶಾಲು ಹಾಕಿದವರನ್ನು ಈ ತಾಲ್ಲೂಕಿನಲ್ಲಿ ಯಾರಾದರೂ ನೋಡಿದ್ದೀರಾ?

ಅತಿ ಹೆಚ್ಚು ಕೂಲಿ ಕಾರ್ಮಿಕರು ಇರುವ ತಾಲ್ಲೂಕು ಇದು. ತೋಟ ಕಾರ್ಮಿಕರ ಶೋಷಣೆಗೆ ಯಾವ ಅಂಕೆಯೂ ಇಲ್ಲ. ಆದರೆ ಕಾರ್ಮಿಕ ಸಂಘಟನೆಗಳು ಎಲ್ಲಿವೆ? ಅವುಗಳು ನಾಯಕರಾದರೂ ಯಾರು? ಇದ್ದಿದ್ದರಲ್ಲಿ ದಲಿತ ಸಂಘಟನೆಗಳು ಅಷ್ಟೋ ಇಷ್ಟು ಕ್ರಿಯಾಶೀಲವಾಗಿದ್ದರೂ, ರಾಜಕಾರಣದ ಜತೆ ಥಳುಕು ಹಾಕಿಕೊಂಡು ಅವುಗಳೂ ಕುಂಟುತ್ತಿವೆಯಲ್ಲವೆ?

ಬಲಪಂಥೀಯ ಚಳವಳಿಯನ್ನು ಹೊರತುಪಡಿಸಿ ಸಕಲೇಶಪುರದಲ್ಲಿ ಜನಪರ ಧ್ವನಿಗಳೆಲ್ಲ ಯಾಕೆ ಉಡುಗಿ ಹೋಗುತ್ತಿವೆ. ಸಕಲೇಶಪುರದ ಅನಧಿಕೃತ ಕ್ಲಬ್ ದಂಧೆಯ ಬಗ್ಗೆ ಪತ್ರಿಕೆಗಳಲ್ಲಿ ಬರೆದು, ಜಾಗೃತಿ ಮೂಡಿಸಿದ್ದಕ್ಕಾಗಿ ಇಲ್ಲಿನ ಪತ್ರಕರ್ತ ಗೆಳೆಯರಿಗೆ ದಕ್ಕಿದ್ದೇನು? ಅವರ ಮುಖಕ್ಕೆ ಮಸಿ ಬಳಿಯುವ ಕೆಲಸವನ್ನು ಇಲ್ಲಿನ ಪಟ್ಟಭದ್ರರು ಮಾಡಿದರಲ್ಲವೆ?

ಇಡೀ ಜಗತ್ತು ಆಧುನೀಕರಣಗೊಳ್ಳುತ್ತಿದ್ದರೆ ನಾವು ಇಸ್ಪೀಟು ಆಡುತ್ತ ಕಾಲಹರಣ ಮಾಡಿದೆವು. ಇಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ಶಿಕ್ಷಣ ಸಿಗಲಿಲ್ಲ, ಅವರು ಇಸ್ಪೀಟು ಕಲಿಯದೆ ಇನ್ನೇನು ಮಾಡುತ್ತಾರೆ?

ಯಾಕೆ ಇಲ್ಲಿ ಇದುವರೆಗೆ ಒಂದೇ ಒಂದು ಕೈಗಾರಿಕೆ ಸ್ಥಾಪನೆಯಾಗಲಿಲ್ಲ. ಇಲ್ಲಿನ ಮಕ್ಕಳಿಗೆ ಉದ್ಯೋಗ ನೀಡುವಂಥ ಒಂದೇ ಒಂದು ಉದ್ಯಮ ಸ್ಥಾಪನೆಯಾಗಲಿಲ್ಲವೇಕೆ? ಇಲ್ಲಿನ ನಿರುದ್ಯೋಗಿಗಳ ಪರವಾಗಿ ಯಾರೂ ಯಾಕೆ ಮಾತನಾಡಲಿಲ್ಲ?

ರಾಜಸ್ತಾನದಿಂದ ಬಂದವರು ಬಡ್ಡಿಗೆ ದುಡ್ಡು ಕೊಟ್ಟರು. ಇಲ್ಲಿನ ಜನ ಸಾಲ ತೀರಿಸಲಾಗದೆ ಮನೆ-ಮಠ ಮಾರಿಕೊಂಡರು. ಅವರು ಇಲ್ಲಿ ದುಡಿದ ದುಡ್ಡನ್ನು ಮತ್ತೆ ರಾಜಸ್ತಾನಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಬಂಡವಾಳ ಹೂಡಿದರು. ನಾವೆಲ್ಲ ಮಾಡಿದ್ದೇನು?

ಸಕಲೇಶಪುರದಲ್ಲಿ ಏನನ್ನು ಬೆಳೆಯೋದಿಲ್ಲ ಹೇಳಿ? ನಾವಿಲ್ಲಿ ಭತ್ತದಿಂದ ಹಿಡಿದು ಎಲ್ಲವನ್ನೂ ಬೆಳೆಯುತ್ತೇವೆ. ಕಾಫಿ, ಏಲಕ್ಕಿ, ಮೆಣಸು, ಟೀ, ಮೆಣಸಿನ ಕಾಯಿ, ಶುಂಠಿ.... ಯಾವತ್ತಾದರೂ ಬೆಲೆ ಕುಸಿದಾಗ ಬೆಳೆಗಾರರು ಧರಣಿ ಮಾಡಿ ಪ್ರತಿಭಟಿಸಿದ್ದು ಉಂಟೆ. ಬದುಕು ಮೂರಾಬಟ್ಟೆಯಾದರೂ ನಾವು ಯಾಕೆ ಪ್ರತಿರೋಧ ತೋರಲಿಲ್ಲ. ನಮ್ಮ ಪ್ರತಿಭಟನೆಯ ಶಕ್ತಿಯನ್ನು ಕಿತ್ತುಕೊಂಡವರು ಯಾರು?

ಇಲ್ಲಿನ ಕಾಡು ಏನಾಯಿತು? ಕಿರು ಜಲವಿದ್ಯುತ್ ಯೋಜನೆಗಳ ಹೆಸರಿನಲ್ಲಿ ಕಾಡನ್ನೆಲ್ಲ ಕಡಿದು ಹಾಕಿದರಲ್ಲ? ಆಗ ಹುಟ್ಟಿಕೊಂಡ ಚಳವಳಿ ಏನಾಯಿತು? ಹಿಂದೆ ನಾವು ಬಿಸಲೆ ಅರಣ್ಯದಲ್ಲಿ ಚಾರಣಿಗರಿಗಾಗಿ ತಾತ್ಕಾಲಿಕ ಶಿಬಿರ ಮಾಡಿದಾಗ ಪ್ರತಿಭಟಿಸಿದ್ದೆವು. ಕಾಡಿನೊಳಗೆ ಕಾಂಕ್ರೀಟ್ ಬರುವುದು ಬೇಡ ಎಂದು ಅಂದಿನ ಅರಣ್ಯಾಧಿಕಾರಿ ಅಣ್ಣಯ್ಯ ಅವರಿಗೆ ಒತ್ತಡ ತಂದಿದ್ದೆವು. ಇವತ್ತು ಕಾಡಿನೊಳಗೆ ಸರ್ಕಾರದವರೇ ನುಗ್ಗಿದರಲ್ಲ? ಮರಗಿಡ ಕಡಿದರಲ್ಲ? ಹೋಗಲಿ ಅಲ್ಲಿ ಆ ಯೋಜನೆಗಳಲ್ಲಿ ಸಕಲೇಶಪುರದಲ್ಲಿ ಹುಟ್ಟಿ ಬೆಳೆದವರಿಗೆ ಕೆಲಸ ಕೊಟ್ಟಿದ್ದಾರಾ?

ಸಕಲೇಶಪುರವೇನಾದರೂ ಕೇರಳದವರ ಕೈಗೆ ಸಿಕ್ಕಿದ್ದರೆ ಇದನ್ನು ಅದ್ಭುತ ಪ್ರವಾಸಿ ತಾಣ ಮಾಡುತ್ತಿದ್ದರಲ್ಲವೆ? ಹಾಗೇನಾದರೂ ಆಗಿದ್ದರೆ ಇಲ್ಲಿನ ನಿರುದ್ಯೋಗಿಗಳಿಗೆ ಒಂದಷ್ಟು ಕೆಲಸ ದೊರೆಯುತ್ತಿತ್ತಲ್ಲವೆ? ಸಕಲೇಶಪುರದಲ್ಲಿ ಬದುಕಲಾಗದೆ ಬೆಂಗಳೂರಿನ ಫ್ಯಾಕ್ಟರಿಗಳು, ಗಾರ್ಮೆಂಟ್ಸ್‌ಗಳಲ್ಲಿ ಕೇವಲ ೨, ೩ ಸಾವಿರ ರೂಪಾಯಿ ಸಂಬಳಕ್ಕೆ ಕೆಲಸ ಮಾಡುವ ಗತಿ ಬರುತ್ತಿರಲಿಲ್ಲ ಅಲ್ಲವೆ?

ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ಇರುವ ವೈದ್ಯರ ಮೇಲೆ ಭ್ರಷ್ಟಾಚಾರದ ಆರೋಪ. ಲಂಚ ಸಿಗುವ ಇಲಾಖೆಗಳೆಲ್ಲ ತುಂಬಿ ತುಳುಕುತ್ತವೆ. ಆರೋಗ್ಯ, ಶಿಕ್ಷಣ ಇಲಾಖೆಗಳಲ್ಲಿ ಮಾತ್ರ ಖಾಲಿಖಾಲಿ.

ಇದನ್ನೆಲ್ಲ ಸರಿಪಡಿಸಬೇಕಲ್ಲವೆ? ಇಲ್ಲಿನ ನಾಗರಿಕರೆಲ್ಲ ಪಕ್ಷ, ಜಾತಿ, ಧರ್ಮಭೇದಗಳನ್ನು ಮರೆತು ಒಮ್ಮೆ ಊರಿನ ಅಭಿವೃದ್ಧಿಯ ಬಗ್ಗೆ ಯೋಚಿಸಬೇಕಲ್ಲವೆ?

ಇಷ್ಟೆಲ್ಲ ಹೇಳುತ್ತಿರುವ ನೀನು ಬೆಂಗಳೂರಿನಲ್ಲಿ ಕುಳಿತು ಮಾಡುತ್ತಿರುವುದೇನು ಎಂದು ನೀವು ಪ್ರಶ್ನಿಸಬಹುದು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಮಲೆನಾಡು ಭಾಗದ ಪತ್ರಕರ್ತರೆಲ್ಲ ಒಂದು ವೇದಿಕೆಯಲ್ಲಿ ಕೆಲಸ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಮಲೆನಾಡನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳ ಬಗ್ಗೆ ಎಲ್ಲರ ಗಮನ ಸೆಳೆಯುವುದು ನಮ್ಮ ಉದ್ದೇಶ. ಜತೆಗೆ ಮಲೆನಾಡಿಗರು ಹಾಗು ವಿಧಾನಸೌಧದ ಅಧಿಕಾರಸ್ಥರ ನಡುವೆ ಸೇತುವೆಯಾಗುವ ಉದ್ದೇಶವೂ ಇದೆ. ಪತ್ರಿಕೆ, ಮಾಧ್ಯಮಗಳಲ್ಲಿ ಮಲೆನಾಡ ಸಮಸ್ಯೆಗಳಿಗೆ ಅರ್ಥ ಹುಡುಕುವ ಪ್ರಯತ್ನವೂ ನಮ್ಮಿಂದಾಗಲಿದೆ. ಈ ಪ್ರಯತ್ನಕ್ಕೆ ಹಾಸನ ಜಿಲ್ಲೆಯ ಎಲ್ಲ ಪತ್ರಕರ್ತರ ಬೆಂಬಲವನ್ನೂ ಕೋರುತ್ತೇವೆ. ವೇದಿಕೆಯಲ್ಲಿರುವ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಮಂಜುನಾಥ್ ಅವರ ಬೆಂಬಲವನ್ನೂ ಕೋರುತ್ತೇನೆ.

ಇಲ್ಲಿ ಶಾಸಕರಾದ ಎಚ್.ಕೆ.ಕುಮಾರ ಸ್ವಾಮಿಯವರಿದ್ದಾರೆ. ಅವರು ಹೃದಯವಂತರು. ಜನರ ಪರವಾಗಿ ಹಗಲುರಾತ್ರಿ ಕೆಲಸ ಮಾಡುವ ಉತ್ಸಾಹ ಅವರಿಗಿದೆ. ಸಕಲೇಶಪುರದ ಸಮಸ್ಯೆಗಳ ಅರಿವೂ ಅವರಿಗಿದೆ. ಅವರು ಇಲ್ಲಿನ ಚಿತ್ರಣವನ್ನು ಬದಲಿಸುವ ಕೆಲಸಕ್ಕೆ ಸಾರಥ್ಯ ವಹಿಸಲಿ ಎಂದು ವಿನಂತಿಸುತ್ತೇನೆ.

ಸಕಲೇಶಪುರ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾದ ಪಟ್ಟಣ. ನಾನು ಹಿಂದೆ ಇಲ್ಲಿದ್ದಾಗ ಸಂವಹನ ವೇದಿಕೆಯ ಮೂಲಕ ನೂರಾರು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದೆವು. ಸಾಹಿತ್ಯ ಪರಿಷತ್ತೂ ಸಹ ಇಲ್ಲಿ ಕ್ರಿಯಾಶೀಲವಾಗಿತ್ತು. ನಾನು ಪರಿಷತ್ತಿನ ಕಾರ್ಯದರ್ಶಿಯಾಗಿಯೂ ಇಲ್ಲಿ ಕೆಲಸ ಮಾಡಿದ್ದೆ ಆದರೆ ಯಾಕೋ ಏನೋ ಇಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳೂ ಕಡಿಮೆಯಾದಂತಿದೆ.

ಎಲ್ಲಿ ಸಾಂಸ್ಕೃತಿಕ-ಸಾಹಿತ್ಯಿಕ ವಾತಾವರಣ ಇರುವುದಿಲ್ಲವೋ ಅಲ್ಲಿ ಎಲ್ಲ ಬಗೆಯ ಅನಾರೋಗ್ಯಕರ ದಂಧೆಗಳೂ ನಿರಾತಂಕವಾಗಿ ನಡೆಯುತ್ತವೆ. ಮತ್ತೆ ಇಲ್ಲಿ ಜೀವಪರ ಚಟುವಟಿಕೆಗಳನ್ನು ಕ್ರಿಯಾಶೀಲಗೊಳಿಸಬೇಕಾದ ಅನಿವಾರ್ಯತೆ ಇದೆ.

ಇನ್ನು ಸಕಲೇಶಪುರದ ಪತ್ರಕರ್ತ ಮಿತ್ರರು ಯಾರಿಗೂ ಅಂಜದೆ, ಅಳುಕದೆ ತಮ್ಮ ಪತ್ರಿಕಾವೃತ್ತಿಯನ್ನೇ ಒಂದು ಜನರ ಚಳವಳಿ ಎಂಬಂತೆ ಪರಿಭಾವಿಸಿ, ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ಅದನ್ನವರು ಮಾಡಲಿ ಎಂದು ಹೇಳುತ್ತ ನನ್ನ ಮಾತುಗಳನ್ನು ಮುಗಿಸುತ್ತೇನೆ.

4 comments:

Anonymous said...

ಬದುಕಿನ ಅನಿವಾರ್ಯತೆಗಾಗಿ ನೀವು ಬೆಂಗಳೂರು ಸೇರಿ ಕಳೆದು ಹೋಗಿರಬಹುದು ಅಂದು ಕೊಂಡಿದ್ದ ನನಗೆ ನಿಜಕ್ಕೂ ಹುಟ್ಟೂರಿನ ಬಗ್ಗೆ ನಿಮಗಿರುವ ಕಾಳಜಿ ತಿಳಿದು ಖುಷಿಯಾಯಿತು. ತಮ್ಮ ಹುಟ್ಟೂರಿನ ಬಗ್ಗೆ ಎಲ್ಲರೂ ಇಂತಹ ಕಾಳಜಿ ವಹಿಸಿದರೆ ಸಕಲೇಶಪುರದ ಆಭಿವೃದ್ದಿ ಅಸಾದ್ಯವೇನಲ್ಲ.

-ಯೋಗೇಶ್.ಎಸ್.ಎಂ.,ಸಕಲೇಶಪುರ.

kanthbaraha said...
This comment has been removed by the author.
kanthbaraha said...

ಸಕಲೇಶಪುರ ಎಂದರೆ ನಮ್ಮ ಕಲ್ಪನೆಗೆ ಬರುವುದು ಕಾಫಿ ತೋಟ, ಶ್ರೀಮಂತ ಜನ. ನಿಮ್ಮ ಭಾಷಣ, ಲೇಖನದಿಂದಾಗಿ ನಮ್ಮ ತಿಳಿವಳಿಕೆ ತಪ್ಪಾಯಿತು. ನೀವು ಚೆನ್ನಾಗಿ ಬರೆಯುತ್ತೀರಿ ಅಂಥ ಗೊತ್ತಿತ್ತು. ತುಂಬಾ ಚೆನ್ನಾಗಿ ಮಾತಾಡ್ತೀರಿ ಎಂಬುದು ಈಗ ಗೊತ್ತಾಯಿತು. ಸಕಲೇಶಪುರದ ಒಳನೋಟ ನೀಡಿದ ನಿಮಗೆ ಥ್ಯಾಂಕ್ಸ್.

ಲಕ್ಷ್ಮೀಕಾಂತ್ ಎಂ.ಎಲ್.
ಮಂಡ್ಯ

Anonymous said...

1ಇಂದಿನ ಬಹುತೇಕ ಪತ್ರಿಕೆಗಳು ಬರಿಯುತ್ತಿರುವ ಆನೆಕ ಸುದ್ದಿಗಳು ಸಮಾಜದ ಸ್ವಾಸ್ತ್ಯಕಾಪಾಡುವ ಬದಲು ಸಮಾಜದಲ್ಲಿ ಶಾಂತಿ ಕದಡಲು ಹಾಗೂ ಸಮಾಜದೊಳಗೆ ಅನುಮಾನದಿಂದ ಬದುಕುವಂತಹ ವಾತವರಣ ಸೃಷ್ಟಿಸಲು ಕಾರಣವಾಗಿದೆ. ಪತ್ರಕತಱರು ಆತ್ಮಸಾಕ್ಷಿಗೆ ವಿರುದ್ದವಾಗಿ ಬರೆಯುವಂತಹ ಸ್ಥಿತಿಗೆ ಪತ್ರಿಕೆಗಳು ಪ್ರಚೋದನೆ ನೀಡುತ್ತಿವೆ. ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ವ್ಯಾಪಾರಿ ಮನೋಬಾವಕ್ಕೆ ಇಳಿದಿರುವ ಪತ್ರಿಕೆಗಳು ತಮ್ಮ ಧೋರಣೆಗಳನ್ನು ಮರೆತು ಯಾರನ್ನೋ ಒಲೈಸಲು ಯತ್ನಿಸುತ್ತಿವೆ. ಪತ್ರಕತಱರಾದ ನೀವು ಹಾದಿತಪ್ಪುತ್ತಿರುವ ಪ್ರಜಾವಾಣಿಯಂತಹ ಪತ್ರಿಕೆಗೆ ತಿದ್ದಿಹೇಳಲು ಹೊರಟಿರುವ ನಿಮ್ಮ ಪ್ರಯತ್ನ ಶ್ಲಾಘನೀಯ.

-ಮಲ್ನಾಡ್ ಮೆಹಬೂಬ್
-ಜೈಭಿಮ್ ಮಂಜು, ಸಕಲೇಶಪುರ.