Monday, January 23, 2012

ಆಹ್ವಾನ


ಕಲ್ಲುಕವಣೆ ತೂರುವವರು ತೂರಲಿ
ಅವರ ವಿಕೃತ ಖುಷಿಯನ್ನು ನೋಡಿ
ನಾನು ಮರುಕಪಡುತ್ತೇನೆ

ಅವರಿಗೆ ಗೊತ್ತಿಲ್ಲ
ಕಲ್ಲೆಂದರೆ ನನಗೆ ಪ್ರೀತಿ
ಅದರ ಏಟು ಬಿದ್ದ ಜಾಗದಲ್ಲೆಲ್ಲ
ನಾನು ಮತ್ತೆ ಮತ್ತೆ ಹುಟ್ಟಿದ್ದೇನೆ
ರಕ್ತ ಬೀಜಾಸುರನಂತೆ

ನನ್ನ ಅಕ್ಷರಗಳು
ಸುಡುಗಾಡಿನಲ್ಲೂ ಹುಟ್ಟುತ್ತವೆ
ಅವುಗಳಿಗೆ ಯಾರ ಹಂಗೂ ಇಲ್ಲ
ಯಾರಿಲ್ಲವೆಂದರೂ ಕರಗಿದ ಶವಗಳ
ಅಸ್ಥಿಗಳೊಂದಿಗೆ ಮಾತನಾಡುತ್ತವೆ

ಕಡಲ ಮುಂದೆ ಕುಳಿತಿದ್ದೇನೆ
ಇಡಿ ಇಡಿಯಾಗಿ ಕುಡಿದುಬಿಡುವ ಉನ್ಮಾದ
ನೆತ್ತಿಮೇಲೆ ಸುಡುವ ಸೂರ್ಯ
ಇಡಿಯಾಗಿ ಒಳಗೆ ಎಳೆದುಕೊಳ್ಳುವ ಸಡಗರ

ಸಕಲ ಸದ್ಗುಣ ಸಂಪನ್ನರೆಂದರೆ
ವಾಕರಿಕೆ ನನಗೆ,
ಎಂತಲೇ ಅವರಿಗೆ ಆಹ್ವಾನ ನೀಡುತ್ತಿರುವೆ
ಕಲ್ಲು ತೂರುವ ಅವಿವೇಕಿಗಳೇ
ಬನ್ನಿ, ನನ್ನ ಅಹಂಕಾರವನ್ನು ಮೀಟಿ ಒಮ್ಮೆ
ಎಸೆಯುವುದಾದರೆ ಪರ್ವತವನ್ನು ಬುಡಸಮೇತ
ಕಿತ್ತು ಎಸೆಯಿರಿ

ಅಗೋ ಸಂಜೆಯಾಗಿದೆ
ಹೊನ್ನ ಬೆಳಕು
ನಾನು ಆಕಾಶವನ್ನೇ ತಬ್ಬಬೇಕು
ಈಗ ತೊಲಗಿ ಇಲ್ಲಿಂದ

No comments: