Thursday, February 19, 2009

ಮಠಾಧೀಶರು ಸಮಾಜದ ಶತ್ರುಗಳೇ?

ಆನೆಯನೇರಿಕೊಂಡು ಹೋದಿರಿ ನೀವು,
ಕುದುರೆಯನೇರಿಕೊಂಡು ಹೋದಿರಿ ನೀವು.
ಕುಂಕುಮ-ಕಸ್ತುರಿಯ ಪೂಸಿಕೊಂಡು ಹೋದಿರಿ ಅಣ್ಣಾ;
ಸತ್ಯದ ನಿಲುವನರಿಯದೆ ಹೋದಿರಲ್ಲಾ!
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ
ಅಹಂಕಾರವೆಂಬ ಮದಗಜವನೇರಿ
ವಿಧಿಗೆ ಗುರಿಯಾಗಿ ನೀವು ಕೆಟ್ಟು ಹೋದಿರಲ್ಲಾ!
ನಮ್ಮ ಕೂಡಲಸಂಗಮದೇವನನರಿಯದೆ
ನರಕಕ್ಕೆ ಭಾಜನವಾದಿರಲ್ಲಾ!


ಚಿತ್ರದುರ್ಗದ ಸಮ್ಮೇಳನ ಮುಗಿದರೂ, ಸಮ್ಮೇಳನದಲ್ಲಿ ಹುಟ್ಟಿಕೊಂಡ ಕಿಚ್ಚು-ರೊಚ್ಚು ಇನ್ನೂ ಮುಂದುವರೆದಿದೆ. ಸಮ್ಮೇಳನ ಆರಂಭವಾಗುವುದಕ್ಕೆ ಮುನ್ನವೇ `ಮಠಾಧೀಶರು ನಮ್ಮ ಶತ್ರುಗಳು' ಎಂದು ಸಮ್ಮೇಳನಾಧ್ಯಕ್ಷ ಎಲ್.ಬಸವರಾಜು ಹೇಳಿದ್ದರು. ವಿಶೇಷವೆಂದರೆ ಈ ನಾಡಿನ ಸಾವಿರ ಸಾವಿರ ಮಠಾಧೀಶರ ಪೈಕಿ ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮಾತ್ರ ಈ ಹೇಳಿಕೆಯಿಂದ ರೊಚ್ಚಿಗೆದ್ದರು. ಎಲ್.ಬಿಯವರು ಹೇಳಿದ ಮಾತು ತಮ್ಮನ್ನು ಕುರಿತೇ ಆಡಿದ್ದಿರಬೇಕು ಎಂದು ಶಿವಾಚಾರ್ಯರು ಭಾವಿಸಿದರೇನೋ? ಹೀಗಾಗಿ ಅವರು ಎಲ್.ಬಿಯವರ ವಿರುದ್ಧ ಹರಿಹಾಯ್ದರು. ಸಮ್ಮೇಳನ ನಿರ್ವಹಣೆಯಲ್ಲಿ ಮಠಾಧೀಶರ ಪಾತ್ರವೂ ಇದ್ದಿದ್ದರಿಂದಾಗಿ ಎಲ್.ಬಿಯವರು ಸಮ್ಮೇಳನಾಧ್ಯಕ್ಷ ಪದವಿ ತಿರಸ್ಕರಿಸಿ ಈ ಮಾತುಗಳನ್ನು ಆಡಬೇಕಿತ್ತು ಎಂದು ಅಪ್ಪಣೆ ಕೊಡಿಸಿದರು. ಇದಕ್ಕೆ ಪ್ರತಿಯಾಗಿ ಶಿವಾಚಾರ್ಯರ ಮಾತುಗಳನ್ನು ಸಮ್ಮೇಳನದ ವೇದಿಕೆಗಳಲ್ಲೇ ಕಿ.ರಂ.ನಾಗರಾಜ್ ಮತ್ತಿತರರು ಖಂಡಿಸಿದರು.

ಅಲ್ಲಿಗೆ ಎಲ್ಲವೂ ಮುಗಿಯಲಿಲ್ಲ. ಪ್ರಜಾವಾಣಿಗೆ ಬರೆದ ವಾಚಕರ ವಾಣಿಯಲ್ಲಿ ಪ್ರೊ. ಚಂದ್ರಶೇಖರ ಪಾಟೀಲರು ತಮ್ಮ ಎಂದಿನ ಶೈಲಿಯಲ್ಲಿ ಶಿವಾಚಾರ್ಯರನ್ನು ಕುಟುಕಿದರು. `ಶಿವಮೊಗ್ಗದಲ್ಲೂ ಧಮಕಿ ಇತ್ತು. ನಂತರದ ಸಮ್ಮೇಳನಗಳಲ್ಲಿ ಈ ಬಗೆಯ ನೇರ ಹಸ್ತಕ್ಷೇಪವನ್ನು ನಮ್ಮ ರಾಜಕೀಯ ವಲಯದ ಪ್ರಭುಗಳು ಕಡಿಮೆ ಮಾಡಿದ್ದಾರೆ. ಆದರೆ `ಸಿರಿಗರ' ಹೊಡೆಸಿಕೊಂಡ ಸ್ವಾಮಿಗಳ ಕಿತಾಪತಿ ಮಾತ್ರ ಮೊನ್ನೆಯ ಸಮ್ಮೇಳನದಲ್ಲಿ ಎದ್ದು ಕಾಣುವಂತಿತ್ತು. ಇಂಥವರನ್ನು ಕೂಡ ನಮ್ಮ ಪ್ರಜ್ಞಾವಂತ ಜನತೆ ರಿಪೇರಿ ಮಾಡುತ್ತಾರೆ' ಎಂದು ಚಂಪಾ ಬರೆದಿದ್ದರು.

ನಂತರ ಶಿವಾಚಾರ್ಯರ ಸರದಿ. ವಿಜಯಕರ್ನಾಟಕದ ತಮ್ಮ ಬಿಸಿಲು ಬೆಳದಿಂಗಳು ಅಂಕಣದಲ್ಲಿ (ಫೆ.೧೮) ಶಿವಾಚಾರ್ಯರು ಸಮ್ಮೇಳನ ಮತ್ತು ವೈಚಾರಿಕತೆಯ ಪ್ರಹಸನ ಎಂಬ ಲೇಖನವೊಂದನ್ನು ಬರೆದು, ಚಂಪಾ ಅವರನ್ನು ಹಂಗಿಸಿದ್ದಾರೆ. `ಪ್ರಗತಿಪರರು, ಚಿಂತಕರು ಎನಿಸಿಕೊಂಡ ಕೆಲವರು ಬಹಿರಂಗವಾಗಿ ಮಠಗಳೊಂದಿಗೆ ಗುರ್ತಿಸಿಕೊಳ್ಳಲು ಸಿದ್ಧರಿಲ್ಲ. ಆದರೆ ಅಂತರಂಗದಲ್ಲಿ ಮಾತ್ರ ಮಠಗಳ ಸಹಾಯ ಇವರಿಗೆ ಬೇಕೇ ಬೇಕು. ಎಂದು ಹೇಳುತ್ತ ಅದಕ್ಕೆ ಉದಾಹರಣೆಯೊಂದನ್ನು ಪೋಣಿಸಿದ್ದಾರೆ.

ಚಂಪಾ ಮತ್ತೆ ಉತ್ತರಿಸಿದ್ದಾರೆ; ಪ್ರಜಾವಾಣಿಯಲ್ಲಿ. `ತಮ್ಮ ವಿದ್ಯೆಯ ಬಗ್ಗೆ ನನಗೆ ಗೌರವ ಇದೆ. ಆದರೆ ನಿಮ್ಮಲ್ಲಿ ವಿದ್ಯೆಗೆ ತಕ್ಕ ವಿನಯ ಇಲ್ಲ. ನೀವು ಜರ್ಮನಿಯ ಬದಲಾಗಿ ಇಂಗ್ಲೆಂಡಿಗೆ ಹೋಗಿದ್ದರೆ ಚೆನ್ನಾಗಿತ್ತು. ಜರ್ಮನಿಯ ಜ್ಞಾನದೊಂದಿಗೆ ಅಲ್ಲಿಯ ಹಿಟ್ಲರ್ ಪ್ರಜ್ಞೆಯನ್ನೂ ತಂದ ಹಾಗಿದೆ.' ಎಂದು ಚಂಪಾ ನೇರವಾಗಿ ದಾಳಿ ನಡೆಸಿದ್ದಾರೆ.

ಈ ಚರ್ಚೆ ಇನ್ನಷ್ಟು ಮುಂದುವರೆಯುವ ಸಾಧ್ಯತೆಗಳೂ ಇವೆ, ಆಗಲಿ. ಎಲ್ಲ ವಿವಾದಗಳಿಗೆ ಮೂಲಧಾತುವಾಗಿರುವ ಎಲ್.ಬಿಯವರ ಮಾತಿನ ಬಗ್ಗೆ ನನಗನ್ನಿಸಿದ್ದನ್ನು ಇಲ್ಲಿ ಹೇಳಲು ಹೊರಟಿದ್ದೇನೆ.

******

ಚಂಪಾ ಬಳಸಿದ `ಸಿರಿಗರ' ಪದ ಇಂಟರೆಸ್ಟಿಂಗ್ ಅನಿಸಿತು. ಶಿವಾಚಾರ್ಯರು ಪ್ರತಿನಿಧಿಸುವ `ಸಿರಿಗೆರೆ ಪದದ ಹಾಗೆಯೇ ಧ್ವನಿಸುವ `ಸಿರಿಗರ' ಪದವನ್ನು ಚಂಪಾ ಬೇಕೆಂತಲೇ ಬಳಸಿದ್ದರು. ಬಸವಣ್ಣನವರ ವಚನವೊಂದರಲ್ಲೂ ಸಿರಿಗರ ಎಂಬ ಪದದ ಉಲ್ಲೇಖವಿದೆ; ಆ ವಚನ ಇಲ್ಲಿದೆ:

ಹಾವು ತಿಂದವರ ನುಡಿಸಬಹುದು!
ಗರ ಹೊಡೆದವರ ನುಡಿಸಬಹುದು!
ಸಿರಿಗರ ಹೊಡೆದವರ ನುಡಿಸಬಾರದು ನೋಡಯ್ಯ!
ಬಡತನವೆಂಬ ಮಂತ್ರವಾದಿ ಹೋಗಲು
ಒಡನೆ ನುಡಿವರಯ್ಯ ಕೂಡಲಸಂಗಮದೇವ.


ಶಿವಾಚಾರ್ಯರ ಮಾತು ಹಾಗಿರಲಿ, ಸಾವಿರಾರು ಧರ್ಮಗುರುಗಳಿಗೆ ಇಂದು ಹೊಡೆದಿರುವುದು `ಸಿರಿಗರ'ವೇ ಹೌದು. ಮಠಾಧೀಶರು ಇಂದು ಶ್ರೀಮಂತರಲ್ಲಿ ಶ್ರೀಮಂತರು. ಈ ಶ್ರೀಮಂತಿಕೆಯ ಗುಟ್ಟು ರಟ್ಟಾಗುವುದೇ ಇಲ್ಲ. ಯಾವ ಮಠದ ಮೇಲೂ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸುವುದಿಲ್ಲ. ವರ್ಷಕ್ಕೊಮ್ಮೆ ಲಾಭ-ನಷ್ಟದ ಲೆಕ್ಕಾಚಾರ ಕೊಡಿ ಎಂದು ನಮ್ಮ ಸರ್ಕಾರಗಳೂ ಕೇಳುವುದಿಲ್ಲ. ಯಾವ ಲೋಕಾಯುಕ್ತಕ್ಕೂ ಮಠದ ಆಸ್ತಿಪಾಸ್ತಿಯ ತನಿಖೆ ನಡೆಸುವ ಅಧಿಕಾರ ಇಲ್ಲ!

ಪ್ರಬಲ ಮಠಾಧೀಶರಂತೂ ತಮ್ಮ ಶಿಕ್ಷಣ ಸಂಸ್ಥೆಗಳದ್ದೂ ಸೇರಿದಂತೆ ಇತರ ಕೆಲಸಗಳಿಗಾಗಿ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡದ ಬಾಗಿಲು ತುಳಿಯುವುದಿಲ್ಲ. ಕಾರ್‍ಯದರ್ಶಿ ಮಟ್ಟದ ಅಧಿಕಾರಿಗಳೇ ಮಠಕ್ಕೆ ಫೈಲುಗಳನ್ನು ಹಿಡಿದುಕೊಂಡು ಹೋಗುತ್ತಾರೆ. ಅರ್ಥಾತ್ ಸರ್ಕಾರವೇ ಮಠಗಳಿಗೆ ತೆರಳುತ್ತದೆ. ಮಠಗಳಲ್ಲೇ ಸರ್ಕಾರದ ಕೆಲಸಗಳು ನಡೆಯುತ್ತವೆ. ಹಿಂದೊಮ್ಮೆ ಮೈಸೂರಿನ ಹಿರಿಯ ರಾಜಕಾರಣಿ ಎಚ್.ವಿಶ್ವನಾಥ್ ಮಠಗಳ ವಿರುದ್ಧ ಹರಿಹಾಯ್ದಿದ್ದರು. ಆಗಲೂ ಮಠಾಧೀಶರ ಪರವಾಗಿ ರಣಕೇಕೆ ಹಾಕಿದವರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳೇ! ಶಿವಾಚಾರ್ಯರು ತಮ್ಮ ಪ್ರಭಾವವನ್ನು ಎಷ್ಟು ನಿಖರವಾಗಿ ಬಳಸಿದರೆಂದರೆ ಮತ್ತೆ ವಿಶ್ವನಾಥ್ ಆ ಸ್ವಾಮಿಗಳ ವಿರುದ್ಧ ಬಾಯಿ ತೆರೆಯಲೇ ಇಲ್ಲ!

ಹಿಂದೆ ಆದಿಚುಂಚನಗಿರಿ ಮಠದ ಸ್ವಾಮೀಜಿಗಳು ಹೆಲಿಕಾಪ್ಟರ್ ಒಂದನ್ನು ಕೊಂಡುಕೊಂಡರು. ಹಾಸನದ ಜವೇನಹಳ್ಳಿ ಮಠದಲ್ಲಿ ನಡೆದ ಬೃಹತ್ ಕಾರ್ಯಕ್ರಮವೊಂದರಲ್ಲಿ ನಿಡುಮಾಮಿಡಿ ಸ್ವಾಮೀಜಿ ಮಾತನಾಡುತ್ತ, `ಸ್ವಾಮಿಗಳಿಗೇಕೆ ಹೆಲಿಕಾಪ್ಟರ್, ಎಲ್ಲವನ್ನೂ ತ್ಯಾಗ ಮಾಡಿದವರು ಸ್ವಾಮಿಗಳಲ್ಲವೆ? ಯಾಕೆ ಐಷಾರಾಮಿ ಕಾರುಗಳು? ಯಾಕೀ ಐಷಾರಾಮಿ ಜೀವನ?' ಎಂದು ಪ್ರಶ್ನಿಸಿದ್ದರು. ನಂತರ ಹಾಸನಕ್ಕೆ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಚುಂಚನಗಿರಿ ಸ್ವಾಮೀಜಿ `ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ, `ನಾಯಿಗಳು ಬೊಗಳುತ್ತವೆ, ಅವುಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಹೇಳಿದ್ದರು. ಮಠಗಳ ಆಸ್ತಿಪಾಸ್ತಿ, ವೈಭವೋಪೇತ ಬದುಕಿನ ಬಗೆ ಯಾರಾದರೂ ಪ್ರಶ್ನಿಸಿದರೆ ಅವರು `ನಾಯಿ' ಎನ್ನಿಸಿಕೊಳ್ಳಬೇಕಾಗುತ್ತದೆ!

ಸಾಕಷ್ಟು ರಾಜಕಾರಣಿಗಳು ಪ್ರಬಲ ಮಠಾಧೀಶರ ಬಳಿ ತಮ್ಮ ಕಪ್ಪು ಹಣವನ್ನು ತೆಗೆದಿರಿಸಿರುತ್ತಾರೆ ಎಂಬ ಮಾತೂ ಇದೆ. ಹಿರಿಯ ರಾಜಕಾರಣಿಯೊಬ್ಬರು ಮಠವೊಂದರಲ್ಲಿ ಇಟ್ಟ ಹಣವನ್ನು ಆ ಮಠದ ಸ್ವಾಮಿ ಹಿಂದಿರುಗಿಸಲಿಲ್ಲ, ಅದಕ್ಕಾಗಿ ಆ ಸ್ವಾಮಿಗೂ-ರಾಜಕಾರಣಿಗೂ ಜಟಾಪಟಿ ನಡೆಯಿತು ಎಂಬ ಮಾತುಗಳೂ ಇವೆ. ಇದೆಲ್ಲ ಸತ್ಯವೋ ಸುಳ್ಳೋ, ಆದರೆ ಕಪ್ಪು ಹಣ ಇಡುವುದಕ್ಕೆ ಮಠಗಳಿಂತ ಹೆಚ್ಚು ಸೇಫ್ ಜಾಗ ಇನ್ನೊಂದಿಲ್ಲ ಎಂಬುದು ಮಾತ್ರ ನಿಜ. ಯಾಕೆಂದರೆ ಮಠಗಳಿಗೆ ಯಾವ ಪೊಲೀಸು, ಟ್ಯಾಕ್ಸಿನವರೂ ಹೋಗುವುದಿಲ್ಲ. ಕಳುಹಿಸುವ ಧೈರ್ಯ ಯಾವ ಸರ್ಕಾರಕ್ಕೂ ಇಲ್ಲ.

*****

ಕಾಮ ಒಂದನೇ ಭವಿ, ಕ್ರೋಧ ಎರಡನೇ ಭವಿ
ಲೋಭ ಮೂರನೇ ಭವಿ, ಮೋಹ ನಾಲ್ಕನೇ ಭವಿ
ಮದ ಐದನೇ ಭವಿ, ಮತ್ಸರ ಆರನೇ ಭವಿ
ಆಮಿಷ ಏಳನೇ ಭವಿ
ಇಂತೀ ಏಳು ಭವಿಗಳ ತಮ್ಮೊಳಗಿಟ್ಟುಕೊಂಡು
ಲಿಂಗವಿಲ್ಲದವರ ಭವಿ ಭವಿ ಎಂಬರು
ತಮ್ಮಂತರಂಗದಲ್ಲಿದ್ದ ಲಿಂಗಾಂಗದ ಸುದ್ದಿಯನ್ನರಿಯದೆ
ಅಚ್ಚಪ್ರಸಾದಿ-ನಿಚ್ಚಪ್ರಸಾದಿ-ಸಮಯಪ್ರಸಾದಿಗಳೆಂದು
ಜಲಕ್ಕೆ ಕನ್ನವನಿಕ್ಕಿ ಉದಕವ ತಂದು
ಲಿಂಗಮಜ್ಜನಕ್ಕೆರೆವ ಹಗಲುಗಳ್ಳರಿಗೆ ಮೆಚ್ಚುವನೆ
ಚೆನ್ನಮಲ್ಲಿಕಾರ್ಜುನ?


ಬಸವಣ್ಣನ ಪೂರ್ವದಿಂದಲೂ ಭವಿ-ಭಕ್ತ ಸಂಘರ್ಷ ನಡೆದುಬಂದಿದೆ. ಕೆಳಜಾತಿಗಳ ಜನರು ವೀರಶೈವಕ್ಕೆ ಸೇರ್ಪಡೆಯಾದಾಗ ಎದುರಾದ ವಿರೋಧಗಳ ಕುರಿತೇ ನೂರಾರು ವಚನಗಳು ಇವೆ. ಅಕ್ಕಮಹಾದೇವಿ ಸಹ ಈ ವಚನದಲ್ಲಿ ಹೊಸದಾಗಿ `ಭಕ್ತ'ರಾದವರ ವಿರುದ್ಧ ನಡೆದ ಮಸಲತ್ತಿನ ವಿರುದ್ಧ ಮಾತನಾಡಿದ್ದಾಳೆ. ಭವಿ ಎಂದರೆ ಯಾರು ಎಂಬುದಕ್ಕೆ ಅಕ್ಕ ತನ್ನದೇ ಆದ ವ್ಯಾಖ್ಯೆ ನೀಡುತ್ತಾಳೆ. ಆಕೆಯ ಪ್ರಕಾರ ಲಿಂಗವಿಲ್ಲದವರು ಭವಿಗಳಲ್ಲ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಆಮಿಷಗಳನ್ನು ತಮ್ಮ ಒಡಲಲ್ಲಿ ಇಟ್ಟುಕೊಂಡವರೇ ನಿಜವಾದ ಭವಿಗಳು. ಅವರು ಲಿಂಗವಂತರಾದರೂ ಭವಿಗಳು.

`ಸಿರಿಗರ' ಹೊಡೆಸಿಕೊಂಡ ನಮ್ಮ ಬಹುತೇಕ ಮಠಾಧೀಶರೆಲ್ಲರೂ ಅಕ್ಕ ವ್ಯಾಖ್ಯಾನಿಸುವ `ಭವಿ'ಗಳ ಪಟ್ಟಿಯಲ್ಲೇ ಬರುವಂಥವರು. ಇದನ್ನು ನಿರಾಕರಿಸುವ ಶಕ್ತಿಯೂ ಮಠಾಧೀಶರಿಗಿಲ್ಲ. ಈ ಎಲ್ಲ ಮಠಾಧೀಶರೂ ಆಸ್ತಿ ಸಂಗ್ರಹಣೆಯಲ್ಲೇ ಅತಿ ಹೆಚ್ಚು ತೃಪ್ತಿ ಕಾಣುವವರು. ಆಸ್ತಿ ಗಳಿಕೆಯ ಹಾದಿಯಲ್ಲಿ ಅವರು ಎಂಥ ಸಂಘರ್ಷದ ಮಾರ್ಗವನ್ನಾದರೂ ತುಳಿಯಬಲ್ಲರು. ಆಸ್ತಿ ಗಳಿಸಿದ ನಂತರ ಅದರ ಮದದಲ್ಲಿ ಏನು ಬೇಕಾದರೂ ಮಾಡಬಲ್ಲರು, ಮಾತಾಡಬಲ್ಲರು, ದಕ್ಕಿಸಿಕೊಳ್ಳಬಲ್ಲರು.

ಸ್ವಾಮಿಗಳು ಜಂಗಮವಾಗಲು ಬಯಸಲೊಲಲ್ಲರು. ಅವರು ಸ್ಥಾವರಗಳನ್ನು ನಿರ್ಮಿಸಿಕೊಂಡು ಕುಳಿತವರು. ಸ್ಥಾವರಗಳಲ್ಲಿ ಕುಳಿತವರು ಅರಿಷಡ್ವರ್ಗಗಳಿಂದ ದೂರವಿರುವುದು ಸಾಧ್ಯವೇ ಇಲ್ಲ. ದೂರವಿದ್ದೇವೆಂದು ತೋರಿಸಿಕೊಳ್ಳುವುದೂ ಸಾಧ್ಯವಿಲ್ಲ!

ಉಳ್ಳವರು ಶಿವಾಲಯವ ಮಾಡಿಹರು!
ನಾನೇನ ಮಾಡುವೆ? ಬಡವನಯ್ಯ!
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಳಶವಯ್ಯ!
ಕೂಡಲಸಂಗಮದೇವ ಕೇಳಯ್ಯ,
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!


ಬಸವಣ್ಣನವರ ಈ ವಚನವನ್ನು ಅದೆಷ್ಟು ಮಠಾಧೀಶರು ಅದೆಷ್ಟು ಸಾವಿರ ಬಾರಿ ತಮ್ಮ `ಆಶೀರ್ವಚನ'ಗಳಲ್ಲಿ ಹೇಳಿದ್ದಾರೋ? ಪಾಪ, ಅವರಿಗೆ ಸ್ಥಾವರ ಮತ್ತು ಜಂಗಮಕ್ಕಿರುವ ವ್ಯತ್ಯಾಸವೂ ಗೊತ್ತಿಲ್ಲ. ದೇಹವೇ ದೇಗುಲವಾಗುವ ಆತ್ಮ ಸಾಕ್ಷಾತ್ಕಾರ ಅವರ `ಕಾಣ್ಕೆ'ಗೆ ದಕ್ಕುವುದಿಲ್ಲ. ಹೀಗಾಗಿ ಮಠ ಕಟ್ಟಿಕೊಂಡು, ಗುಡಿ ಕಟ್ಟಿಕೊಂಡು ಕುಳಿತವರು ಈ ಮಠಾಧೀಶರು.

*****

ಬಸವಣ್ಣನೂ ಸೇರಿದಂತೆ ಯಾವ ವಚನಕಾರನೂ/ಳೂ ತನ್ನನ್ನು ತಾನು `ನಾವು' ಎಂದು ಸಂಬೋಧಿಸಿಕೊಂಡಿದ್ದಿಲ್ಲ. ಆದರೆ ಶಿವಾಚಾರ್ಯ ಸ್ವಾಮಿಗಳಂಥವರು ಯಾವ ಸಂಕೋಚವೂ ಇಲ್ಲದೆ ಈ ರೀತಿಯ ಆತ್ಮ ಪ್ರತ್ಯಯ ಬಳಸುತ್ತಾರೆ. ಇದು ಮಠದ ಭಕ್ತರಿಗಾಗಿ ಹೊರಡಿಸುವ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂದುಕೊಳ್ಳುವಂತೂ ಇಲ್ಲ. ಪ್ರಕಟವಾಗುವುದು `ವಿಜಯ ಕರ್ನಾಟಕ' ಎಂಬ ನಂ.೧ ಪತ್ರಿಕೆಯಲ್ಲಿ.

ಶಿವಾಚಾರ್ಯರ ಅಹಮಿಕೆಗಳು ಪ್ರದರ್ಶನವಾಗುವುದು ಕೇವಲ ಈ ಬಗೆಯ ಆತ್ಮಪ್ರತ್ಯಯದಿಂದ ಮಾತ್ರವಲ್ಲ. ಈ ಸಾಲುಗಳನ್ನು ಗಮನಿಸಿ: `ಸಮ್ಮೇಳನಾಧ್ಯಕ್ಷರು ಚಿತ್ರದುರ್ಗಕ್ಕೆ ಕಾಲಿಡುತ್ತಿದ್ದಂತೆಯೇ ಮಠಾಧೀಶರು ನಮ್ಮ ಶತ್ರುಗಳು ಎಂಬ ರಣಕಹಳೆಯನ್ನು ಊದಿದರು. ಮೆರವಣಿಗೆಯಲ್ಲಿ ಬಂದು ಸಾನ್ನಿಧ್ಯ ವಹಿಸಿ ವಧೂವರರನ್ನು ಹರಸಿ ಕಾಣಿಕೆ ಪಡೆಯಬೇಕಾಗಿದ್ದ ಸ್ವಾಮಿಗಳು ಸ್ವತಃ ಕಾಣಿಕೆ ಕೊಟ್ಟು ಮುಂದೆ ನಿಂತು ಸಾಹಿತ್ಯ ಕನ್ನಿಕೆಯ ಮದುವೆ ಮಾಡಿಸಿ ಮದುಮಕ್ಕಳ ಮೆರವಣಿಗೆ ಮಾಡಿಸಿದರೂ ಬೀಗರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಶತ್ರುಗಳೆಂದು ಗೊತ್ತಿದ್ದೂ ಬೀಗತನ ಮಾಡುವ ಉದ್ದೇಶ ಬೀಗರಿಗೆ ಏನಿತ್ತೋ ದೇವರೇ ಬಲ್ಲ!'

ಕೆಲವು ಪ್ರಶ್ನೆಗಳು:
ಮೆರವಣಿಗೆಯಲ್ಲಿ ಬಂದು ಶಿವಾಚಾರ್ಯರು ಸಾನ್ನಿಧ್ಯವನ್ನೇ ವಹಿಸಬೇಕೆ? ಎಲ್ಲ ಸಾಹಿತ್ಯ ಪ್ರೇಮಿಗಳಂತೆ ಸಹಜವಾಗಿ ಭಾಗವಹಿಸಲು ಆಗುವುದಿಲ್ಲವೆ? ಸಾಹಿತ್ಯ ಸಮ್ಮೇಳನದಲ್ಲಿ ಕಾಣಿಕೆ ವಸೂಲಿ ಮಾಡಲಾಗಲಿಲ್ಲವಲ್ಲ ಎಂಬ ಕೊರಗೇ ನಿಮಗೇ? ಬದಲಾಗಿ ನೀವೇ ಒಂದಿಷ್ಟು ಕಾಣಿಕೆ ಕೊಡಬೇಕಾಯಿತಲ್ಲ ಎಂಬ ಸಂಕಟವೆ? `ಬೀಗತನದ ಪ್ರಶ್ನೆಗೆ ಬರುವುದಾದರೆ ಸಮ್ಮೇಳನಕ್ಕೆ ಒಂದಿಷ್ಟು ಸಹಾಯ ಮಾಡಿದ ಮಾತ್ರಕ್ಕೆ ಇಡೀ ಸಮ್ಮೇಳನದ ವಾರಸುದಾರಿಕೆಯನ್ನು ನಿಮಗೆ ಕೊಟ್ಟವರ್‍ಯಾರು? ಸಾಹಿತ್ಯ ಪರಿಷತ್ತು ನಡೆಸುವ ಸಾಹಿತ್ಯ ಸಮ್ಮೇಳನ ಮಠಾಧೀಶರ ಖಾಸಗಿ ಸ್ವತ್ತಾಗುವುದು ಸಾಧ್ಯವೆ? ಸಮ್ಮೇಳನಕ್ಕೆ ಸರ್ಕಾರವೂ ದುಡ್ಡು ಕೊಟ್ಟಿದೆ, ಚಿತ್ರದುರ್ಗದ ಸಾಮಾನ್ಯ ಜನರೂ ದೇಣಿಗೆ ಕೊಟ್ಟಿದ್ದಾರೆ, ಸರ್ಕಾರಿ ನೌಕರರೂ ಕಾಸು ಕೊಟ್ಟಿದ್ದಾರೆ. ಹೀಗಿರುವಾಗ `ಶತ್ರುಗಳೊಂದಿಗೆ ಬೀಗತನ ಪ್ರಶ್ನೆಯಾದರೂ ಎಲ್ಲಿಂದ ಉದ್ಭವಿಸುತ್ತದೆ? ಸಿರಿಗೆರೆ ಮಠವೇನಾದರೂ ಸಮ್ಮೇಳನ ಆಯೋಜಿಸಿದ್ದರೆ, ಈ ಮಾತು ಬರುತ್ತಿತ್ತು. ಆದರೆ ಇದು ಹಾಗಲ್ಲ ಎಂಬ ಸಾಮಾನ್ಯಪ್ರಜ್ಞೆ ನಿಮಗಿಲ್ಲವೆ?

******

`ಮಠಾಧೀಶರು ನಮ್ಮ ಶತ್ರುಗಳು ಎಂದು ಎಲ್.ಬಿಯವರು ಯಾವ ಅರ್ಥದಲ್ಲಿ ಹೇಳಿದರೋ? ಆದರೆ ನಾನಂತೂ ಬಹುತೇಕ ಮಠಾಧೀಶರು ಸಮಾಜದ ಶತ್ರುಗಳು ಎಂದೇ ಭಾವಿಸಿದ್ದೇನೆ. (ಮುಂದೆ ಮಠಾಧೀಶರು ಎಂಬ ಪದಬಳಕೆ ಇರುವೆಡೆಯೆಲ್ಲ ಬಹುತೇಕ ಎಂದು ಸೇರಿಸಿಕೊಂಡು ಓದುವುದು) ಯಾಕೆಂದರೆ;
ಇವರು ಅಪ್ಪಟ ಜಾತಿವಾದಿಗಳು, ಕೋಮುವಾದಿಗಳು ಮತ್ತು ಯಥಾಸ್ಥಿತಿವಾದಿಗಳು.
ಮನುಷ್ಯರ ಹೆಗಲ ಮೇಲೆ ಕುಳಿತು ಮೆರವಣಿಗೆ ಮಾಡಿಸಿಕೊಳ್ಳುವ ಜೀವವಿರೋಧಿಗಳು.
ಕಿರೀಟ, ಪಲ್ಲಕ್ಕಿ, ಸಿಂಹಾಸನಗಳನ್ನು ಬಳಸಿ ದರ್ಬಾರು ನಡೆಸುವ ಪ್ರಜಾಪ್ರಭುತ್ವ ವಿರೋಧಿಗಳು.
ಕ್ಯಾಪಿಟೇಷನ್ ಲಾಬಿಯ ಅಧಿಕೃತ ಯಜಮಾನರು, ಶಿಕ್ಷಣವನ್ನು ಬಿಕರಿಗಿಟ್ಟವರು.
ಕಾವಿಯ ನೆರಳಲ್ಲಿ ರಾಜಕಾರಣ ಮಾಡುವವರು, ಧರ್ಮ-ರಾಜಕಾರಣವನ್ನು ಕಲಬೆರಕೆ ಮಾಡಿದವರು.
ಎಲ್ಲಕ್ಕಿಂತ ಮಿಗಿಲಾಗಿ ಅಸ್ಪೃಶ್ಯತೆ, ಮೌಢ್ಯ, ಅಂಧಾನುಕರಣೆ, ಹೀನ ಆಚರಣೆಗಳ ಪೋಷಕರು, ಪ್ರತಿಪಾದಕರು.


ಮಠಾಧೀಶರು ಶಾಲೆ ಕಾಲೇಜು ತೆರೆದು ಜ್ಞಾನದಾಸೋಹ ನೀಡುತ್ತಿಲ್ಲವೆ? ಬಡಮಕ್ಕಳಿಗೆ ಶಿಕ್ಷಣ ನೀಡುತ್ತಿಲ್ಲವೆ? ಅನ್ನ ಕೊಡುತ್ತಿಲ್ಲವೆ? ಇಂಥ ಹಲವಾರು ಪ್ರಶ್ನೆಗಳು ಉದ್ಭವಿಸಬಹುದು. ಯಾರ ದುಡ್ಡಿನಲ್ಲಿ ಈ ಶಿಕ್ಷಣ? ಊಟ? ಅದೆಲ್ಲವನ್ನೂ ಅಮಾಯಕ ಭಕ್ತರು ಕೊಟ್ಟಿದ್ದಲ್ಲವೆ?

*****

ಎಲ್‌ಬಿಯವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಎರಡು ಪ್ರಧಾನ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ದಲಿತರಿಗೆ ವಸತಿ ಶಾಲೆಗಳನ್ನು ತೆರೆಯಬೇಕು ಎಂಬುದು ಅವರ ಒಂದು ಆಗ್ರಹವಾದರೆ, ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕು ಎಂಬುದು ಮತ್ತೊಂದು ಆಗ್ರಹ. ಒಂದು ವೇಳೆ ಶಿಕ್ಷಣ ರಾಷ್ಟ್ರೀಕರಣಗೊಂಡರೆ ಮಠಾಧೀಶರು ನಿರುದ್ಯೋಗಿಗಳಾಗುತ್ತಾರೆ. ಆಗ ಅವರು ಪೂರ್ಣಕಾಲಿಕ ಧರ್ಮಗುರುಗಳಾಗಬಹುದು. ಆಗಲಾದರೂ ಪರಿಸ್ಥಿತಿ ಬದಲಾಗುವುದೆ?

೧೨ನೇ ಶತಮಾನದಲ್ಲೂ ಇದ್ದ ಇಂದಿನ ಮಠಾಧೀಶರಂಥವರನ್ನು ನೋಡಿಯೇ ಬಸವಣ್ಣ ಹೇಳಿದ್ದು:

ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
ಸಲಿಗೆವಂತರಾಗಿ ಒಳಗೈದಾರೆ.
ಆನು ದೇವಾ ಹೊರಗಳವನು!
ಸಂಬೋಳಿಯೆನುತ್ತ, ಇಂಬಿನಲ್ಲಿದೇನೆ.
ಕೂಡಲಸಂಗಮದೇವ.
ನಿಮ್ಮ ನಾಮವಿಡಿದ ಅನಾಮಿಕ ನಾನು.


ಪೂರಕ ಓದಿಗೆ: ಹೌದು, ಮಠಾಧೀಶರೆಲ್ಲ ಸ್ವಜಾತಿ ಪ್ರೇಮಿಗಳು!

5 comments:

Anonymous said...

Dinesh,
A fitting reply to Shivacharya's column in VK. The seer thinks he is the tallest of all individuals on this earth. Even in the Sammelana he read out a poem, where he said the Sammelana was being organised in Chitradurga only because of his role during the opposition to hold it in the city.
The State Government employees who contributed over Rs 65 lakh did not to say that it was they who organised the event. The seer should not forget the people of Chitradurga, particularly autodrivers, hair-stylists, petty shopkeepers and many small-time merchants contributed money whole-heartedly. I repeat they contributed their profit earned through a hard labour.
Even if the swamiji had contributed some amount of cash, it was not his hard-earned money. In other words it is the money 'extorted' from the people, whom they name 'devotees'. Either fear of the swamiji's political clout or rapport he enjoys with a community, with a considerable population in the region, drives money to the math. Nothing else.
One more thing this math never followed roaster system while appointing teaching staff for its
education institutes. When H Vishwanath questioned this, this so-called seer asked him to meet him in his math with files.
I remember, Vishwanth rightly hit back saying he would rather visit the seer as a devotee, not as a minister, who represents the state.
- satish

Anonymous said...

ರಾಜಕಾರಣ, ಅಧಿಕಾರಶಾಹಿ ಸೇರಿದಂತೆ ಎಲ್ಲ ವ್ಯವಸ್ಥೆಗಳೂ ಹಾಳಾಗಿವೆ. ಮಠಾಧೀಶರು ಇದಕ್ಕೆ ಹೊರತಲ್ಲ.
ನಿಮ್ಮ ನಿಲುವನ್ನು ತಿರಸ್ಕರಿಸುವುದು ಸಾಧ್ಯವಿಲ್ಲ, ಆದರೆ ಕಟುವಾಗಿರುವ ಸತ್ಯಗಳನ್ನು ಒಪ್ಪಿಕೊಳ್ಳುವುದು ಕಷ್ಟ ಅಲ್ಲವೆ?
-ನಿರಂಜನ

Anonymous said...

ಮೆರವಣಿಗೆಯಲ್ಲಿ ಬಂದು ಶಿವಾಚಾರ್ಯರು ಸಾನ್ನಿಧ್ಯವನ್ನೇ ವಹಿಸಬೇಕೆ? ಎಲ್ಲ ಸಾಹಿತ್ಯ ಪ್ರೇಮಿಗಳಂತೆ ಸಹಜವಾಗಿ ಭಾಗವಹಿಸಲು ಆಗುವುದಿಲ್ಲವೆ? ಸಾಹಿತ್ಯ ಸಮ್ಮೇಳನದಲ್ಲಿ ಕಾಣಿಕೆ ವಸೂಲಿ ಮಾಡಲಾಗಲಿಲ್ಲವಲ್ಲ ಎಂಬ ಕೊರಗೇ ನಿಮಗೇ? ಬದಲಾಗಿ ನೀವೇ ಒಂದಿಷ್ಟು ಕಾಣಿಕೆ ಕೊಡಬೇಕಾಯಿತಲ್ಲ ಎಂಬ ಸಂಕಟವೆ?
ನೀವು ಎತ್ತಿರುವ ಪ್ರಶ್ನೆಗಳಿಗೆ ಸಿರಿಗೆರೆ ಸ್ವಾಮಿಗಳು ಉತ್ತರಿಸುವರೆ?

Anonymous said...

ದಿನೇಶ್ ಸರ್,
ನೀವು ಎಂದಿನಂತೆ ಮಠಾಧೀಶರ ವಿರುದ್ಧ ಬರೆದಿದ್ದೀರಿ. ಪಾದ್ರಿಗಳು, ಮುಲ್ಲಾಗಳು ನಿಮ್ಮ ಕಣ್ಣಿಗೆ ಕಾಣುವುದಿಲ್ಲವೆ?
ಮಠಾಧೀಶರೇಕೆ ಆಸ್ತಿ ಸಂಗ್ರಹಿಸಬಾರದು? ಹಣ ಮಾಡಬಾರದು?

Unknown said...

matadhesharinda samajamuki kelasagalu aguthilla ende samanyavagi bhavisalaguthiruva sandhrbhadalli, sammelanadali basavaraju avaru sariyada abhiprayavanne mandisidhare.
nijavagiyu thavu matadhesaru samajada shatrugalu embhudannu maha manavathavadi basavanna avara vachanagala mulakha, kela shandharbhagala sahitha sariyage tharatege tegedu kondidheri. samanyaragalu oppada matadipatigalinda samajakke enu upayogavilla.
matadhesaru nijavagiyu samajada shatrugale,
-ibbani