Thursday, February 12, 2009

ಕೊಳಗೇರಿ ಕೋಟ್ಯಧಿಪತಿ: ವಿಮರ್ಶೆಗಳಿಗೊಂದು ವಿಮರ್ಶೆ!

ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುವ ಹೊತ್ತಿನಲ್ಲೇ ಭಾರತದಲ್ಲಿ ಸ್ಲಂಡಾಗ್ ಮಿಲನಿಯೇರ್ ಬಿಡುಗಡೆಯಾಗಿತ್ತು. ಅಧಿವೇಶನ ಕವರೇಜ್‌ಗಾಗಿ ಬೆಳಗಾವಿಯಲ್ಲಿದ್ದ ನಾನು ಕುತೂಹಲ ತಡೆಯಲಾಗದೆ ಸಹೋದ್ಯೋಗಿ ಗೆಳೆಯರಾದ ಶರಣ ಬಸಪ್ಪ, ರಾಮಾಂಜನೇಯ ಅವರೊಂದಿಗೆ ಸಿನಿಮಾ ನೋಡಿದೆ. ಸಿನಿಮಾ ಕುರಿತು ಏನಾದರೂ ಬರೆಯೋಣ ಎಂದು ವಾಪಾಸು ಬರುವಷ್ಟರಲ್ಲಿ ಹತ್ತಾರು ಮಂದಿ ಬ್ಲಾಗರ್‌ಗಳು ಬರೆದಿದ್ದರು. ನಾನು ಅಂದುಕೊಂಡಿದ್ದನ್ನು ಸಾಕಷ್ಟು ಮಂದಿ ಬರೆದಾಗಿತ್ತಾದ್ದರಿಂದ ಸುಮ್ಮನಾದೆ.
ಸಾಂಗತ್ಯದಲ್ಲಿ ನಡೆದ ಚರ್ಚೆಯಂತೂ ಸಾಕಷ್ಟು ಕುತೂಹಲಕಾರಿಯಾಗಿತ್ತು. ಒಳಗೂ ಹೊರಗೂ ಬ್ಲಾಗ್‌ನ ಕುಮಾರ್, ನಗುವ ಬಣ್ಣಗಳು ಬ್ಲಾಗ್‌ನ ಹೇಮಶ್ರೀ ಬರೆದದ್ದು ಹೆಚ್ಚು ಆಪ್ತವೆನ್ನಿಸಿತು.

ಈ ನಡುವೆ ಗೆಳೆಯ, ಪತ್ರಕರ್ತ ಧರಣೀಶ್ ಬೂಕನಕೆರೆ ನನಗೊಂದು ಮೇಲ್ ಕಳಿಸಿದ್ದಾರೆ. ಎಲ್ಲೂ ಪ್ರಕಟವಾಗದ ಬರೆಹವಿದು. ಅವರ ಅನುಮತಿ ಪಡೆದು ಅದನ್ನು ಇಲ್ಲಿ ಪ್ರಕಟಿಸಿದ್ದೇನೆ.

ಪತ್ರಕರ್ತರಿಗೆ, ಬ್ಲಾಗರ್‌ಗಳಿಗೆ ಪರಿಚಿತರೇ ಆಗಿರುವ ಧರಣೀಶ್, ಸ್ಲಂ ಡಾಗ್ ಕುರಿತ ವಿಮರ್ಶೆಗಳನ್ನೇ ವಿಮರ್ಶಿಸಿದ್ದಾರೆ.

ಓವರ್ ಟು ಧರಣೀಶ್...


ಮೇರಾ ಭಾರತ್ ಮಹಾನ್!




ಈ ವಾಕ್ಯ ಇತ್ತೀಚೆಗೆ ಕುಹಕಕ್ಕೆ ಬಳಕೆ ಆಗುವುದೇ ಹೆಚ್ಚು: ಅನುಮಾನವೇ ಬೇಡ ಹಾಗೆ ಕುಹಕವಾಡುವ ಮಂದಿ ಸೋಕಾಲ್ಡ್ ವಿದ್ಯಾವಂತರು! `ಅಕ್ಷರ ಕಲಿತವರು'! ಅವರಲ್ಲಿ `ರಾಷ್ಟ್ರೀಯತೆ' `ಪ್ರಜ್ಞೆ'ಯೂ ಸಿಕ್ಕಾಪಟ್ಟೆ. ಅದರಲ್ಲೂ ಸರಿಯಾದ ರೀತಿಯಲ್ಲಿ ಸಾಹಿತ್ಯ, ಸಂಸ್ಕೃತಿ ಓದಿಕೊಳ್ಳದೆ ಇರುವ ಇವರು ತಮ್ಮದೇ ಆರ್ಕ್ಯೂಟ್ ಕಮ್ಯುನಿಟಿಗಳಲ್ಲಿ, ಬ್ಲಾಗುಗಳಲ್ಲಿ `ದೇಶಭಕ್ತಿ'ಯನ್ನು `ಉಕ್ಕಿ'ಸುತ್ತಾರೆ. ತಾವು ಮಾತ್ರ ಬೆಚ್ಚನೆಯ ಮನೆಯಲ್ಲಿ ಕುಳಿತು ಯುದ್ಧಮಾಡಿ ಎಂದು ಫರ್ಮಾನು ಹೊರಡಿಸುತ್ತಾರೆ. ಮತ ಚಲಾಯಿಸಲು ಸಮಯ ಮಾಡಿಕೊಳ್ಳದಿದ್ದರೂ ಮುಂದಿನ ಪ್ರಧಾನಿ ಯಾರಾಗಬೇಕೆಂದು ನಿರ್ದೇಶನ ಕೊಡುತ್ತಾರೆ. ಯಾರದೋ ಬಗ್ಗೆ ಬೈಯುತ್ತಾ, ಮತ್ಯಾರೋ ಬೈದದ್ದನ್ನೂ ದೊಡ್ಡದು ಮಾಡುತ್ತಾ, ಯಾವುದೋ ದೇವರಿಗೆ ಅವಮಾನವಾಗಿದೆ ಎಂದು ಗುಲ್ಲು ಹಬ್ಬಿಸುತ್ತಾ ಹೋರಾಟಕ್ಕೆ ಇಂಬುಕೊಡುತ್ತಾರೆ.

ಇಂಥ `ಹುಟ್ಟು ಹೋರಾಟಗಾರರು' ಈಗ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ. ಅದೇ `ಸ್ಲಮ್‌ಡಾಗ್ ಮಿಲಿಯನೇರ್ ಮಿಸ್ಟೇಕ್'! ಹಾಲಿವುಡ್ ನಿರ್ದೇಶಕ ಡ್ಯಾನಿ ಬಾಂi `ಸ್ಲಮ್‌ಡಾಗ್ ಮಿಲಿಯನೇರ್' ಸಿನಿಮಾದಲ್ಲಿ ಭಾರತದ ಬಡತನವನ್ನು ಬಂಡವಾಳ ಮಾಡಿಕೊಂಡಿದ್ದಾನೆ ಎನ್ನುವುದು ಇವರ ಆಕ್ರೋಶ. ಪಾಶ್ಚಿಮಾತ್ಯರ ಕಣ್ಣಲ್ಲಿ ಭಾರತ ಯಾವತ್ತೂ ದರಿದ್ರ ದೇಶ ಎನ್ನುವುದನ್ನು ಸ್ಲಮ್‌ಡಾಗ್ ಇನ್ನಷ್ಟು ಪುಷ್ಟೀಕರಿಸಲು ಹೊರಟಿದೆ. ತಮ್ಮ ಜೇಬು ತುಂಬಿಸಿಕೊಳ್ಳಲು ಪಶ್ಚಿಮದವರು ನಮ್ಮ ಕೊಳಕನ್ನು ಜಗತ್ತಿಗೆ ಸಾರಿ ಹೇಳುತ್ತಿದ್ದಾರೆ. ಅವರಿಗೆ ನಮ್ಮ ಕೊಳೆಗೇರಿಗಳಷ್ಟೇ ಕಾಣುತ್ತವೆ, ನಮ್ಮ ಸಾಮರ್ಥ್ಯ ಅರಿವಿಗೆ ಬರುವುದೇ ಇಲ್ಲ ಎನ್ನುವಂತಹ ಉದ್ದನೆಯ ಆರೋಪಗಳ ಪಟ್ಟಿ `ಅಕ್ಷರವಂತರದ್ದು'.

ಆರೋಪ ಮಾಡುವ ಮಂದಿ ಕ್ಷಣ ಮಾತ್ರಕ್ಕಾದರೂ ಮಹಾತ್ಮ ಗಾಂಧೀಜಿಯನ್ನು ಸ್ಮರಿಸಿಕೊಳ್ಳಲಿ. ಗಾಂಧಿ `ಈ ದೇಶದಲ್ಲಿರುವ ದರಿದ್ರ ತೊಲಗುವ ತನಕ ನನಗೆ ಸೂಟು-ಬೂಟು ಬೇಡ' ಎಂದು ಅರೆಬೆತ್ತಲಾದರು. ತುಂಡು ಬಟ್ಟೆಯಲ್ಲೇ ವಿದೇಶ ಸುತ್ತಿ ಬಂದರು. ರಾಷ್ಟ್ರವ್ಯಾಪಿ ಸಂಚರಿಸಿ ಸಂಚಲನ ಉಂಟು ಮಾಡಿದರು. ಗಾಂಧಿಜಿಯನ್ನು ಕೇಳಿ, ಅಥವಾ ನಿಮ್ಮನ್ನು ನೀವೇ ಕೇಳಿಕೊಳ್ಳಿ: ಆ ಮಹಾತ್ಮ ಪ್ರಪಂಚದಾದ್ಯಂತ ಸಾರಿಸಾರಿ ಹೇಳಿದ್ದು ಏನು? ನಮ್ಮ ಬಡತನವಾ? ದಾರಿದ್ರ್ಯವಾ? ಕೊಳಕಾ- ಹುಳುಕಾ? ಏನು?

ಇವು ಕಷ್ಟಕರ ಪ್ರಶ್ನೆಗಳೇನಲ್ಲ. ಉತ್ತರ ಬಲು ಸುಲಭ: ಗಾಂಧಿ ಹೇಳಿದ್ದು ಅವೆಲ್ಲವುಗಳನ್ನು ಮೀರಿದ ಸತ್ಯವನ್ನು. ವಾಸ್ಯವವನ್ನು. ಇಂಥ ಕಹಿ ಸತ್ಯ ಮತ್ತು ಕಟು ವಾಸ್ತವಗಳನ್ನು ಮುಕ್ತವಾಗಿ ಹೇಳಿದರೂ ಗಾಂಧಿ `ನಮ್ಮ ಗಾಂಧೀಜಿ'. ಇಂದಿಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರೇ `ನಮ್ಮ ಪ್ರತಿನಿಧಿ'. ಶಾಂತಿಗಾಗಿ, ಸರಳತೆಗಾಗಿ, ಭಕ್ತಿಗಾಗಿ, ಹೋರಾಟಕ್ಕಾಗಿ ಎಲ್ಲಕೂ ಅವರೇ `ಐಕಾನ್'!

ಗಾಂಧೀಜಿಯನ್ನು `ನಮ್ಮಗಾಂಧಿ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾವು ನಮ್ಮ ಇನ್ನಷ್ಟು ಕೊಳಕು- ಹುಳುಕುಗಳತ್ತ ಚರ್ಚೆಯಾದಾಗಲೂ ಅದನ್ನು ಆರೋಗ್ಯಕರವಾಗಿ ತೆಗೆದುಕೊಳ್ಳಬೇಕಲ್ಲವೇ?

*****

ಸ್ಲಮ್‌ಡಾಗ್ ಮಿಲಿಯನೇರ್ ಕೊಳೆಗೇರಿಯ `ಕೊಳಕು' ಬಾಲಕನೊಬ್ಬನ ಕತೆ. ಕೊಳಕು ಬಾಲಕನೊಬ್ಬ ಕುಬೇರನಾದ ಕತೆ. ಕೊಳೆಗೇರಿಯಲ್ಲೂ ಕೂಡ ದೇವರಿಗೆ ಅರ್ಪಿತವಾಗಲು ಅರ್ಹತೆ ಇರುವ ಸಾವಿರಸಾವಿರ ಹೂವುಗಳಿವೆ ಎನ್ನುವುದನ್ನು ಸ್ಪಷ್ಟೀಕರಿಸುವ ಕತೆ. ಪ್ರತಿಷ್ಠಿತ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ಕಲಿತ ಪಂಡಿತರೇ ಗೆಲ್ಲಲಾಗದ ಸ್ಪರ್ಧೆಯನ್ನು ಅಕ್ಷರವನ್ನೇ ಕಲಿಯದ ಕೊಳೆಗೇರಿಯ ಪೋರನೊಬ್ಬ ಗೆಲ್ಲುವ ಕತೆ. ಕೊಳೆಗೇರಿಯ ಕೊಳಕರು, `ನಾವು ಕೂಡ ಅಕ್ಷರವಂತರನ್ನೂ ಮೀರಿಸಬಲ್ಲೆವು' ಎಂದು ಎದೆತಟ್ಟುವ ಕತೆ. ಪರಮದಾರಿದ್ರ್ಯವನ್ನೇ ಉಂಡು-ಹೊದೆಯುವ ಪೋರನೊಬ್ಬ `ಬುದ್ದಿವಂತರಿಗಾಗಿ ಮಾತ್ರ' ಇರುವ ಆಟಗಳಲ್ಲಿ ಮೇಜುಕುಟ್ಟಿ ಪಂಥಾಹ್ವಾನ ನೀಡುವ ಕತೆ. ಇಂಥ ಅನೇಕ ಸಂಗತಿಗಳಿಂದ ಸ್ಲಮ್‌ಡಾಗ್ ಬಂಡಾಯದ ಸಂಕೇತ.

`ನಾವೇ ಮೇಲು ಎಂದುಕೊಂಡಿರುವವರಿಗೆ' ಈ ಮೂಲಕ ಸ್ಲಮ್‌ಡಾಗ್ ಸವಾಲು ಹಾಕಿದ್ದು ಸುಳ್ಳಲ್ಲ. ಆದರೆ ಯಾವತ್ತೂ ನೇರವಾಗಿ ಏನನ್ನೂ ಹೇಳದ `ಬುದ್ಧಿವಂತರು' ಅದಕ್ಕೆ ಬೇರೆಯದೇ ರೂಪಕೊಟ್ಟು ಸಿನಿಮಾಕ್ಕೆ ಕಾಟ ಕೊಡಲು ಹೊರಟಿದ್ದಾರೆ. ಅದಕ್ಕೆ ಎಂದಿನಂತೆ ದೇಶಭಕ್ತಿಯೇ ಈ `ರಾಷ್ಟ್ರಭಕ್ತ'ರ `ಅಸ್ತ್ರ' ಆಗಿದೆ. `ಭಾರತವನ್ನು ಕೆಟ್ಟದಾಗಿ ಚಿತ್ರೀಕರಿಸಲಾಗಿದೆ' ಎಂದು ಓಳು ಬಿಡುತ್ತಿದ್ದಾರೆ.

ಈ ಉದ್ಧಾಮ ರಾಷ್ಟ್ರಭಕ್ತರಿಗೆ ಮತ್ತೊಂದಿಷ್ಟು ಪ್ರಶ್ನೆಗಳು: ಮುಂಬೈನಲ್ಲಿ ಕೊಳೆಗೇರಿಗಳು ಇಲ್ಲವೇ? ಆ ಕೊಳೆಗೇರಿಗಳಲ್ಲಿ ಸ್ಲಮ್‌ಡಾಗ್ ನಾಯಕ ಜಮಾಲ್‌ನಂಥ ಹುಡುಗರು ಇಲ್ಲವೇ? ಎಂದೂ ಶಾಲೆಗೆ ಹೋಗದ ಅವರ `ಜೀವನಾನುಭ' ದೊಡ್ಡದಲ್ಲವೇ? ಅವರ ಬದುಕು, ಬದುಕಲ್ಲವೇ? ಅವು ಕೂಡ ಕತೆಯಾಗಲು, ಸಿನಿಮಾ ಆಗಲು ಅರ್ಹ ಅಲ್ಲವೇ? ಮೇಲಾಗಿ ಕೊಳೆಗೇರಿಯ ಗಲೀಜಿನಲ್ಲೂ ಗುಲಾಬಿ ಅರಳಬಲ್ಲದು ಎನ್ನುವುದು ಸತ್ಯವಲ್ಲವೇ?

*****

ಸ್ಲಮ್‌ಡಾಗ್ ಮಿಲಿಯನೇರ್ ವಾಸ್ತವವನ್ನು ಹೇಳುವ ಚಿತ್ರ. ಇಲ್ಲಿ ಕೊಳೆಗೇರಿ ಒಂದು ವೇದಿಕೆ. ಕೊಳೆಗೇರಿಯ ಜಮಾಲ್, ಸಲೀಮ್, ಲತಿಕಾ ಪ್ರಮುಖ ಪಾತ್ರಧಾರಿಗಳು. ಮೂವರದು ಮೂರು ಹಾದಿ. ಅಮಿತಾಬ್ ಬಚನ್‌ನ ಅಪ್ಪಟ ಅಭಿಮಾನಿ ಜಮಾಲ್ ಎನ್ನುವ ಕೊಳಕು ಹುಡುಗ ಕ್ರಮೇಣ ಚಾಯ್‌ವಾಲಾ ಆಗಿ, ಮಿಲೇನಿಯರ್ ಆಗಿ ಹೊರಹೊಮ್ಮುತ್ತಾನೆ. ಕೊಳಕು ಮೆತ್ತಿದ ಬಟ್ಟೆಯೊಂದಿಗೆ, ಖಾಲಿ ತಟ್ಟೆಯೊಂದಿಗೆ ಜೊತೆಗಿದ್ದ ಲತಿಕಾಳನ್ನು ಮಿಲಿಯನೇರ್ ಆದ ನಂತರವೂ ಅಷ್ಟೇ ಪ್ರೀತಿಸುತ್ತಾನೆ. ಜಮಾಲ್‌ನ ಅಣ್ಣ ಸಲೀಮ್ ಕೊಳೆಗೇರಿಯ ಹುಡುಗರ ಇನ್ನೊಂದು ಮುಖದಂತೆ, ಇನ್ನೊಂದು ವಿಭಿನ್ನ ಮುಖದಂತೆ, ಖಳನಂತೆ, ಕೊನೆಗೆ ನಿಜವಾದ ಸಹೋದರನಂತೆ ಇದ್ದಾನೆ. ಕಾಡುವ ದೃಷ್ಟಿಯಲ್ಲಿ ಸಲೀಮ್ ಕೂಡ ಹಿಂದೆ ಬೀಳುವುದಿಲ್ಲ. ಲತಿಕಾ ಪಾತ್ರವೂ ಅಷ್ಟೇ. ಇವು ಸಿನಿಮಾದಲ್ಲಿ ಭಾವನಾತ್ಮಕವಾಗಿ ಸೆಳೆದಿಡುವ ಅಂಶಗಳು.

ಬಂಡಾಯವನ್ನು ಬದಿಗಿಟ್ಟು ನೋಡಿದರೂ ಈ ಭಾವನಾತ್ಮಕ ಸಂಗತಿಗಳು ಮನಮುಟ್ಟಬೇಕು. ಆದರೆ ನಮ್ಮ `ಸಿನಿಮಾ ನೋಡುವ' ದೃಷ್ಟಿಕೋನವೇ ಸರಿ ಇಲ್ಲದಿರುವುದರಿಂದ ಅಲ್ಲಿನ ಹುಳುಕು ಮಾತ್ರ ಕಾಣುತ್ತದೆ ಅಷ್ಟೇ. ಈಗ ಆಗಿರುವುದೂ ಅದೇ.


*****

ಸ್ಲಮ್‌ಡಾಗ್ ಮಿಲಿಯನೇರ್ ಸಿನಿಮಾಕ್ಕೆ ಭಾರತದ ದಾರಿದ್ರ್ಯವನ್ನು ಕಥಾವಸ್ತು ಮಾಡಿಕೊಂಡ ಕುರಿತು ಆಕ್ಷೇಪಿಸಲಾಗುತ್ತಿದೆ. ಅದರಲ್ಲಿ ತಪ್ಪೇನಿದೆ? ಎಲ್ಲಾ ಕತೆಗಳಂತೆ ಇದು ಒಂದು ಕತೆ ಮತ್ತು ಕಥಾವಸ್ತು. ಇಷ್ಟಕ್ಕೂ ಇದು ಭಾರತೀಯ ರಾಜತಾಂತ್ರಿಕ ಅಧಿಕಾರಿ ಬರೆದಿರುವ `ಕ್ಯೂ ಅಂಡ್ ಎ' ಕಾದಂಬರಿ ಆಧರಿಸಿ ಮಾಡಿರುವ ಚಿತ್ರ. ಇಲ್ಲಿ ಭಾರತದ ಮುಂಬೈ ಎನ್ನವ ಊರಿನ ಕೊಳೆಗೇರಿಯ ಪರಿಸ್ಥಿತಿಯನ್ನು ಹೇಳಲಾಗಿದೆ. ಈ ಮೂಲಕ ಭಾರತ ಈಗ ಹೇಗಿದೆ ಎನ್ನುವುದನ್ನು ಹೇಳಿದೆ.

ಅದೇ ಅಲ್ಲವೇ ಆಗಬೇಕಿರುವುದು. ಭಾರತ ಈಗ `ಹೀಗಿದೆ' ಎನ್ನುವುದರಿಂದಲೇ ನಾವು ಹೆಚ್ಚು `ಆಕರ್ಷಕ'ರಾಗುವುದು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ನಾವು ಎಲ್ಲ ರೀತಿಯಲ್ಲೂ ಸಮರ್ಥರು, ಸಮೃದ್ಧರು ಎಂದೆಲ್ಲಾ ಫೋಜು ನೀಡುವ ಅಗತ್ಯವಾದರೂ ಏನು?

ಮುಂದೆ ಭಾರತಕ್ಕೆ ಉಜ್ವಲ ಭವಿಷ್ಯವಿದೆ ಎನ್ನುವುದನ್ನು ಭಾರತದ ಪ್ರಗತಿ ಗಮನಿಸಿದ ವಿದೇಶಗಳು, ಸ್ವದೇಶಿಯರು ಸಾಕಷ್ಟು ಬಾರಿ ಹೇಳಿದ್ದಾರೆ. ನಮ್ಮ ಮಾಜಿ ರಾಷ್ಟ್ರಪತಿಗಳೂ ಆದ ವಿಜ್ಞಾನಿ, ಚಿಂತಕ ಡಾ ಅಬ್ದುಲ್ ಕಲಾಂ ಕೂಡ ೨೦೨೦ನೇ ಇಸವಿಯಲ್ಲಿ ಭಾರತದ ಜಗತ್ತಿನ ಬಲಿಷ್ಠ ರಾಷ್ಟ್ರ ಆಗುತ್ತದೆ ಎನ್ನುವ ಭವಿಷ್ಯ ನುಡಿದಿದ್ದಾರೆ.

ಭಾರತಕ್ಕೆ ಉಜ್ವಲ ಭವಿಷ್ಯ ಇದೆ ಎನ್ನುವುದೇ ಆದರೆ ನಾವು ಈಗಿರುವ ಪರಿಸ್ಥಿತಿಯನ್ನು ಮರೆಮಾಚಿ ಮುಂದೊಂದು ದಿನ `ಶ್ರೀಮಂತ'ವಾಗಬೇಕೇ? ಎರಡನೇ ಮಹಾಯುದ್ಧದಲ್ಲಿ ಸಂಪೂರ್ಣ ನಾಶವಾಗಿದ್ದ ಜಪಾನ್ ನಂತರ ಮುಂಚೂಣಿ ರಾಷ್ಟ್ರವಾಯಿತು. ಈಗಲೂ ಜಪಾನ್ ದೇಶದ ಬಗ್ಗೆ ಮಾತನಾಡುವಾಗಲೆಲ್ಲಾ ಅದು ಹಿಂದೆ ಇದ್ದ ಪರಿಸ್ಥಿತಿಯೊಂದಿಗೆ ಹೇಳಲಾಗುತ್ತಿದೆ. ಅದೇ ಅಲ್ಲವಾ ವಾಸ್ತವ? ಏನೂ ಇಲ್ಲದವ ಏನನ್ನಾದರೂ ಮಾಡಿದರೆತಾನೇ ಸಾಧನೆ?

ಭಾರತದ ಕತೆಯೂ ಹಾಗೇ ಆದರೆ ತಪ್ಪೇನು? ಇದೇ ಡ್ಯಾನಿ ಬ್ಲಾಂi ಮುಂದೊಂದು ದಿನ ಭಾರತದ ಶ್ರೀಮಂತ ಸಂಸ್ಕೃತಿಯ ಕುರಿತು. ಸದೃಢ ಭಾರತದ ಬಗ್ಗೆ ಚಿತ್ರಮೊಂದನ್ನು ಮಾಡಬಹುದಲ್ಲವೇ? ಈಗ ಅವರು ವರ್ತಮಾನ ಹೇಳಲಿ, ಗೇಲಿ ಮಾಡಲಿ, ಆದರೆ ಅವುಗಳನ್ನು ತಿದ್ದುಕೊಂಡು, ವಾಸ್ತವವನ್ನು ಒಪ್ಪಿಕೊಂಡು ಭವಿಷ್ಯವವನ್ನು `ಭದ್ರ' ಮಾಡಿಕೊಳ್ಳುವುದು ನಮ್ಮ ಜಾಣತನವಾಗಲಿ.

ಇತಿಹಾಸ ಬಲ್ಲದವನು ಇತಿಹಾಸ ಸೃಷ್ಟಿಸಲಾರ ಎನ್ನುವ ಮಾತು ಮತ್ತೆ ನೆನಪಾಗಬೇಕು. ಜೊತೆಯಲ್ಲಿ ವರ್ತಮಾನವೂ. ಆಗ ಮಾತ್ರ ಭವಿಷ್ಯವೂ ನಿರ್ಮಾಣ ಆಗುತ್ತದೆ. ಇತಿಹಾಸವೂ ನಿರ್ಮಾಣ ಆಗುತ್ತದೆ.

- ಧರಣೀಶ್ ಬೂಕನಕೆರೆ

4 comments:

unnati said...

realy good, keep it up with u r view.

ardhya

Anonymous said...

ಧರಣಿಯವರಿಗೆ,
ಕುಮಾರ್ ಈ ಹಿಂದೆ ಬರೆದ ಲೇಖನ ಮತ್ತು ನಿಮ್ಮ ಲೇಖನ ಏರಡೂ ಸಹ ಸಿನಿಮಾ ಹುಟಿಟಹಾಕಿರುವ ಪರ-ವಿರೋಧಗಳ ಹೊಸ discussion. ಜಮಾಲ್ ನಮ್ಮ ನಿಮ್ಮಂತೆ. ಅವನು ಎಲ್ಲರಂತೆ ಬೇಕು-ಬೇಡಗಳ ಪ್ರ್ರತಿನಿಧಿ. ನಾವು ಸಹ. ನಿಮ್ಮ ಮಾತು ನಿಜ. ಮಿಲಿಯನೆರ್ ಆಗಬಯಸುವ ಜಮಾಲ್ 'ಸುಂದರ ಕನಸು ಹೊತ್ತ ಓಂದು ಭರವಸೆ'. ತಾರಗಳ ಜರತಾರಿ ಇರುವ ಅಂಗಿ ತೊಡುವ ಹಕ್ಕ್ಕಿದೆ ಅವನಿಗೆ. ಗಾಂಧಿ ಭಾರತದ ಅಂಗಿಯಾದರೆ ಜಮಾಲ್ ಅದೇ ಬಟನ್ ಇಲ್ಲದಿರುವ ಅಂಗಿಯ ತಾರೆಗಳ ಜರತಾರಿ.
Thanks to DESIMAATU for publishing such views on the blog.

Nisar Ahmed
Hospet

Unknown said...

adella sari guruve illi ninna vasthavavaada vanu naanu opputtene. illi mattondu sookshma sangathiyanna naavu artha maadikolla beku,adu bharathiyatheyane bandavaala maadikonda directorna hindiruva buddivanthike. ide katheya cinemakke englandna bada huduga hero maadalu saadviralillave directorge.englandnali bada janathe vaasisuva pradeshavane thegedukondu avana deshada vaastava thorisiddare avana cinema maakaade malagiruttittu aadare slum dog millenior moolaka millenior aagtha ironu yaaru aadake kaarana vivarisodu beda anisutte nanage.........danyavaadagalu

ಹೊರಗಣವನು said...

chennagide dharani mattu dinu.
dharani innastu bareyali.