ಸಕಲೇಶಪುರದ ಮೂಡಿಗೆರೆಗೆ ಹೋಗುವ ರಸ್ತೆಯಲ್ಲಿ ಹಾನುಬಾಳಿಗೂ ಮುನ್ನ ಸಿಗುವ ಬೆಳ್ಳೇಕೆರೆಯಲ್ಲಿ `ಜೈ ಕರ್ನಾಟಕ ಸಂಘದ ಬೋರ್ಡನ್ನು ಆಗಾಗ ನೋಡಿದ್ದೆವು, ಆ ಸಂಘದಲ್ಲಿ ಪ್ರಸಾದ್ ಕ್ರಿಯಾಶೀಲರು ಎಂಬುದು ಗೊತ್ತಿತ್ತು. ನಂತರ ನಿಧಾನವಾಗಿ ಪ್ರಸಾದರ ಎಲ್ಲ ಚಟುವಟಿಕೆಗಳು ಗೊತ್ತಾಗತೊಡಗಿದಾಗಿನಿಂದ ಈ ವ್ಯಕ್ತಿ ಮತ್ತಷ್ಟು ನಿಗೂಢ ಅನಿಸತೊಡಗಿತ್ತು.
ಸಕಲೇಶಪುರದಂಥ ಪಟ್ಟಣದಲ್ಲಿ ಒಂದು ಸಂಘಟನೆಯನ್ನು ಕಟ್ಟಿ ಬೆಳೆಸಲು ನಾವು ಪಟ್ಟ ಪರದಾಟಗಳನ್ನು ನೆನಪಿಸಿಕೊಂಡರೆ ಮೈ ಜುಮ್ಮೆನಿಸುತ್ತದೆ. ಆದರೆ ಪ್ರಸಾದ್ ಬೆಳ್ಳೇಕೆರೆಯಂಥ ಕುಗ್ರಾಮದಲ್ಲಿ ಪವಾಡವನ್ನೇ ಸಾಧಿಸಿದ್ದರು.
ಪ್ರಸಾದ್ ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್ ಕೃತಿಯನ್ನು ಎರಡೆರಡು ಬಾರಿ ಓದಿದೆ. ಅವರ ಮೇಲಿದ್ದ ಗೌರವ ಇಮ್ಮಡಿಯಾಯಿತು ಎಂದಷ್ಟೆ ಹೇಳಿದರೆ ಕ್ಲೀಷೆ ಅನಿಸುತ್ತದೆ. ಹೆಗ್ಗೋಡಿನಲ್ಲಿ ಕುಳಿತು ಸುಬ್ಬಣ್ಣ ಮಾಡಿದ್ದನ್ನೇ ರಕ್ಷಿದಿ ಪ್ರಸಾದ್ ಬೆಳ್ಳೇಕೆರೆಯಲ್ಲಿ ಮಾಡಿದರು. ಸುಬ್ಬಣ್ಣ ಅವರಿಗಿದ್ದ ಆರ್ಥಿಕ ಅನುಕೂಲಗಳು, ಸಾಂಸ್ಕೃತಿಕ ಲೋಕದ ದಿಗ್ಗಜರ ಬೆಂಬಲ ಪ್ರಸಾದ್ ಅವರಿಗಿರಲಿಲ್ಲ. ಆದರೂ ಅವರು ಎದೆಗುಂದಲಿಲ್ಲ. ವಿಶ್ವಾಸ ಕಳೆದುಕೊಳ್ಳಲಿಲ್ಲ. ಅವರ ಜತೆಗಾರರು ಸಹ ಅವರನ್ನು ಕೈಬಿಡಲಿಲ್ಲ. ಎಲ್ಲ ಅಡೆ ತಡೆಗಳ ನಡುವೆಯೂ ಅವರು ಬೆಳ್ಳೇಕೆರೆಯನ್ನು ಕನ್ನಡ ರಂಗಭೂಮಿಯ ಭೂಪಟದಲ್ಲಿ ತಂದು ನಿಲ್ಲಿಸಿದರು. ಇಂಥವು ಎಲ್ಲರಿಂದಲೂ, ಎಲ್ಲ ಕಡೆಯಲ್ಲೂ ಆಗುವುದಿಲ್ಲ. ಹೀಗಾಗಿ ಪ್ರಸಾದ್ ಹಾಗು ಬೆಳ್ಳೇಕೆರೆಯ ಹೆಸರುಗಳೇ ನನ್ನಂಥವರಿಗೆ ಹೆಮ್ಮೆಯನ್ನು ಉಕ್ಕಿಸುವ, ಸ್ಪೂರ್ತಿಯನ್ನು ಚಿಮ್ಮಿಸುವ ಸಾಧನಗಳು.
****

ಅಷ್ಟಕ್ಕೂ ಪ್ರಸಾದ್ ಬೆಳ್ಳೇಕೆರೆಯಂಥ ಕುಗ್ರಾಮದಲ್ಲಿ ಮಾಡಿದ ಪವಾಡವೇನು ಎಂಬುದನ್ನು ಅರಿಯಲು ಅವರ `ಬೆಳ್ಳೇಕೆರೆ ಹಳ್ಳಿಥೇಟರ್ ಕೃತಿಯನ್ನು ಓದಬೇಕು. ತಮ್ಮ ಕೃತಿಯನ್ನು ಅವರು `ಒಂದು ಗ್ರಾಮೀಣ ರಂಗಭೂಮಿಯ ಆತ್ಮಕಥನ ಎಂದು ಅವರು ಕರೆದುಕೊಂಡಿದ್ದಾರೆ.
ಏಕಕಾಲಕ್ಕೆ ಒಂದು ರೋಚಕ ಕಾದಂಬರಿಯೂ, ಆತ್ಮರತಿಯಿಲ್ಲದ ಆತ್ಮಚರಿತ್ರೆಯೂ, ಅಜ್ಞಾತ ಹಳ್ಳಿಯೊಂದರ ಚರಿತ್ರೆಯೂ ಆಗಿಬಿಡುವ ಈ ಕೃತಿಯ ಸೊಗಡು ಇರುವುದೇ ನಿರೂಪಣೆಯ ವಿಧಾನದಲ್ಲಿ. ನಿರುದ್ವಿಗ್ನವಾಗಿ, ಭಾವಾವೇಶವಿಲ್ಲದೆ ತಮ್ಮ ಸುತ್ತಲ ಬದುಕನ್ನು ಕಟ್ಟಿಕೊಡುವ ಪ್ರಸಾದ್ ಒಮ್ಮೊಮ್ಮೆ ತೇಜಸ್ವಿಯವರನ್ನು ನೆನಪಿಸುತ್ತಾರೆ. ಈ ಬಗೆಯ ನಿರುಮ್ಮಳ ಬರವಣಿಗೆ ಪ್ರಸಾದ್ ಅವರಿಗೆ ಸುಲಭವಾಗಿ ಒಗ್ಗಿರುವುದನ್ನು ಗಮನಿಸಿದರೆ, ಇಷ್ಟು ವರ್ಷ ನಾಟಕಗಳನ್ನು ಹೊರತುಪಡಿಸಿ ಏನನ್ನೂ ಬರೆಯಲಿಲ್ಲವೇಕೆ ಎಂಬ ವ್ಯಥೆಯೂ ಕಾಡುತ್ತದೆ.
ಡೈರಿ ಫಾರಂನ ಉದ್ಯೋಗಿಯಾಗಿ, ಇಡೀ ಕಾರ್ಮಿಕವಲಯದ ಜತೆ ಒಡನಾಡುತ್ತ, ಪ್ರಸಾದ್ ಕಟ್ಟಿಕೊಂಡ ಬದುಕೇ ಒಂದು ಕಾವ್ಯ. ಇವತ್ತಿನ ಕಾಲಘಟ್ಟಕ್ಕೆ ಒಂಥರಾ ಸಿನಿಮೀಯ ಅನಿಸುವ ಘಟನೆಗಳು ಇಲ್ಲಿವೆ. ನಿರಕ್ಷರಿ ಎನಿಸಿಕೊಳ್ಳಲು ಅವಮಾನವೆನಿಸಿ, ಅಕ್ಷರ ಕಲಿಯಲು ತೊಡಗುವ ಲಕ್ಷ್ಮಯ್ಯನಿಗೆ ಪುಟ್ಟ ವಯಸ್ಸಿನಲ್ಲೇ ಮೇಷ್ಟ್ರಾಗುವುದರೊಂದಿಗೆ ಪ್ರಸಾದ್ ಅವರ ಸಾಮಾಜಿಕ ಜೀವನ ಆರಂಭಗೊಳ್ಳುತ್ತದೆ.
ತದನಂತರ ಓದು ಬಾರದ ಕಾರ್ಮಿಕರನ್ನೆಲ್ಲ ಗುಡ್ಡೆ ಹಾಕಿ, ಅವರಿಗೆ ಅಕ್ಷರಾಭ್ಯಾಸ ಕಲಿಸುವುದು, ಅದಕ್ಕಾಗಿ ರಾತ್ರಿ ಶಾಲೆಯನ್ನು ತೆರೆಯುವುದು, ನಂತರ ಅದೇ ಜನರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟುವುದು, ಕಟ್ಟಿದ ನಾಟಕ ತಂಡವನ್ನು ರಾಜ್ಯ ಮಟ್ಟದ ಖ್ಯಾತಿಗೆ ತಂದು ನಿಲ್ಲಿಸುವುದು.... ಹೀಗೆ ಸಾಗುತ್ತದೆ ಪ್ರಸಾದ್ ಅವರ ಯಶೋಗಾಥೆ.
ಈ ದೊಡ್ಡ ಪಯಣದಲ್ಲಿ ಪ್ರಸಾದ್ ಅವರಿಗೆ ಹೆಗಲಿಗೆ ಹೆಗಲು ಕೊಟ್ಟವರು ನೂರಾರು ಮಂದಿ. ಬೌದ್ಧಿಕ ವಲಯದ ಜನರಿಗೆ ಸೀಮಿತವಾಗಿದ್ದ ಹವ್ಯಾಸಿ ರಂಗಭೂಮಿಯನ್ನು ಅನಕ್ಷರಕುಕ್ಷಿಗಳು, ಈಗಷ್ಟೆ ಅಕ್ಷರ ಕಲಿತವರು, ಅಲ್ಪಸ್ವಲ್ಪ ಓದಿಕೊಂಡವರಿಗೆ ಒಗ್ಗಿಸುವುದು ಅಷ್ಟು ಸುಲಭದ್ದೇನೂ ಅಲ್ಲ. ಅದೂ ಹೇಳಿಕೇಳಿ ಬೆಳ್ಳೇಕರೆಯಂಥ ವರ್ಷದ ಆರು ತಿಂಗಳು ಮಳೆಯಲ್ಲಿ ಮುಳುಗಿಹೋಗುವ ಮಲೆನಾಡಿನ ಪುಟ್ಟ ಹಳ್ಳಿಯಲ್ಲಿ, ಕೂಲಿಕಾರ್ಮಿಕರ ನಡುವೆ ಇಂಥದ್ದೊಂದು ತಂಡ ಅರಳುವುದು ನಿಜಕ್ಕೂ ಪವಾಡವೇ.
ಇಡೀ ಕಥನದುದ್ದಕ್ಕೂ ಪ್ರಸಾದ್ ಮತ್ತು ಅವರ ತಂಡ ಎದುರಿಸಿದ ಸವಾಲುಗಳನ್ನು ಕಾಣಬಹುದು. ಐದು ರೂಪಾಯಿ ದಿನಗೂಲಿ ಪಡೆಯುವವರಿಂದ ನಾಲ್ಕಾಣೆ ಚಂದಾ ಪಡೆದು ರಂಗಚಟುವಟಿಕೆ ನಡೆಸಿಕೊಂಡು ಬರುವುದನ್ನು ಬೆಂಗಳೂರು-ಮೈಸೂರಿನ ಹವ್ಯಾಸಿ ರಂಗತಂಡಗಳು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲವೇನೋ?
ಅಪಾರ ಬಡತನ, ಹಳ್ಳಿ ರಾಜಕೀಯ, ಅನಕ್ಷರತೆ, ಮೌಢ್ಯ, ಕುಡಿತ, ಜಾತಿ ಜಗಳಗಳ ನಡುವೆ ಇದೊಂದು ತಂಡ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಿಟ್ಟಿಸುವುದು, ರಂಗಾಯಣದಲ್ಲಿ ಪ್ರದರ್ಶನ ನೀಡುವುದು ಒಂದೊಳ್ಳೆ ಕಮರ್ಷಿಯಲ್ ಸಿನಿಮಾಗೆ ಅರ್ಥಪೂರ್ಣ ಕ್ಲೈಮ್ಯಾಕ್ಸ್ ಕೂಡ ಆಗಿಬಿಡಬಹುದು. ಹಾಗೆಯೇ ಜಾಗತೀಕರಣದ ಕಾಲಘಟ್ಟದಲ್ಲಿ ದೇಸೀ ಸಂಸ್ಕೃತಿಯ ಪರ್ಯಾಯ ಹುಡುಕಾಟಗಳಿಗೆ ಅರ್ಥಪೂರ್ಣ ರೂಪಕವೂ ಆಗಬಹುದು.
****
ಹಳ್ಳಿ ಥೇಟರ್ ಕೇವಲ ಬೆಳ್ಳೇಕರೆಯಲ್ಲಿ ಅರಳಿದ ರಂಗಚಟುವಟಿಕೆಗಳ ಕುರಿತ ಕೃತಿಯೇನಲ್ಲ. ತಮ್ಮ ಸಮಕಾಲೀನ ರಾಜಕೀಯ, ಸಾಮಾಜಿಕ ಸ್ಥಿತಿಗತಿಗಳನ್ನೆಲ್ಲ ಪ್ರಸಾದ್ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿನ ದ್ವಿತೀಯಾರ್ಧದ ಕಥನಗಳಿಗೆ ನಾನೂ ಸಹ ಪ್ರತ್ಯಕ್ಷ ಸಾಕ್ಷಿಯೇ. ಒಂದೆರಡು ಕಡೆ ನನ್ನನ್ನೂ ಪ್ರಸಾದ್ ಉಲ್ಲೇಖಿಸಿದ್ದಾರೆ.
ಆರು ತಿಂಗಳು ಮಳೆಯಲ್ಲಿ ಮುಳುಗಿ ಹೊರಜಗತ್ತಿನಿಂದ ಸಂಪರ್ಕವನ್ನೇ ಕಡಿದುಕೊಳ್ಳುವ (ಈಗ ಪರಿಸ್ಥಿತಿ ಸ್ವಲ್ಪ ಬದಲಾಗಿದೆ.) ಮಲೆನಾಡಿನ ಜನರ ರಾಜಕೀಯ ಪ್ರಜ್ಞೆ ನಿಬ್ಬೆರಗಾಗಿಸುವಂಥದ್ದು. ಇಂದಿರಾಗಾಂಧಿ, ದೇವರಾಜ ಅರಸು ಅವರನ್ನು ಜನರು ಸ್ವೀಕರಿಸಿದ ರೀತಿ ವಿಸ್ಮಯಕಾರಿ.
ರೈತ ಸಂಘದ ನಾಟಕೀಯ ಪ್ರವೇಶ, ತದನಂತರದ ಬೆಳವಣಿಗೆಗಳನ್ನೂ ಪ್ರಸಾದ್ ಆ ಸಂಘದಲ್ಲಿ ತೊಡಗಿಕೊಂಡವರಾದ್ದರಿಂದ ಅಧಿಕೃತವಾಗಿ ಉಲ್ಲೇಖಿಸಿದ್ದಾರೆ. ತುರ್ತು ಪರಿಸ್ಥಿತಿ, ಜೆಪಿ ಚಳವಳಿಯೂ ಸೇರಿದಂತೆ ಇನ್ನಿತರ ಚಳವಳಿಗಳೂ ಇಲ್ಲಿ ಪ್ರಾಸಂಗಿಕವಾಗಿ ಬಂದುಹೋಗಿವೆ.
ಪ್ರಸಾದ್ ರೈತ ಸಂಘದಂಥ ಚಳವಳಿಗಳಲ್ಲಿ ಕ್ರಿಯಾಶೀಲರಾಗಿದ್ದವರಾದರೂ ರಾಜಕಾರಣದ ಬಗ್ಗೆ ಸಿನಿಕತನ ಇಟ್ಟುಕೊಂಡವರಲ್ಲ. ಬೆಳ್ಳೇಕೆರೆಯ ಶಾಲೆಗೆ ಒಂದೆಕರೆ ಜಾಗ ಕೊಡಲು ಅರಣ್ಯ ಇಲಾಖೆಯವರು ಕಿರಿಕಿರಿ ಮಾಡುತ್ತಿದ್ದಾಗ ಆಗಿನ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರು ಸಹಾಯ ಮಾಡಿದ್ದು, ಕೇವಲ ಪತ್ರವೊಂದನ್ನು ಬರೆದದಕ್ಕೆ ರಂಗಮಂದಿರ ನಿರ್ಮಾಣಕ್ಕೆ ಬಂಗಾರಪ್ಪ ತಾವು ಮುಖ್ಯಮಂತ್ರಿಯಾಗಿದ್ದಾಗ ಜಾಗ ನೀಡಿದ್ದನ್ನು ಅವರು ಇಲ್ಲಿ ಸ್ಮರಿಸಿಕೊಂಡಿದ್ದಾರೆ. ಚಳವಳಿ, ಹೋರಾಟಗಳಲ್ಲಿ ಮುಳುಗಿದವರಿಗೆ ಅಧಿಕಾರ ರಾಜಕಾರಣದಿಂದ ಏನೂ ಸಾಧ್ಯವಿಲ್ಲ ಎಂಬ ಸಿನಿಕತನ ಆವರಿಸಿರುತ್ತದೆ. ಈ ಎರಡು ಘಟನೆಗಳಲ್ಲದೆ, ತಮ್ಮೂರಿನ ಶಾಲೆ, ರಸ್ತೆ, ನೀರು, ಬಸ್ನಿಲ್ದಾಣ ಇತ್ಯಾದಿಗಳಿಗಾಗಿ ಪ್ರಸಾದ್ ಮತ್ತು ಗೆಳೆಯರು ಪೊಲಿಟಿಕಲ್ ಆಕ್ಟಿವಿಸಮ್ಗೆ ಮೊರೆ ಹೋಗುತ್ತಾರೆ; ಯಶಸ್ವಿಯೂ ಆಗುತ್ತಾರೆ.
****
ಹಳ್ಳಿ ಥೇಟರ್ ಕೇವಲ ಬೆಳ್ಳೇಕೆರೆಯ ಕಥನವೂ ಅಲ್ಲದೆ, ಇಡೀ ಸಕಲೇಶಪುರ ತಾಲ್ಲೂಕಿನ, ಇನ್ನೂ ಮುಂದುವರೆದು ಚಿಕ್ಕಮಗಳೂರು, ಸಕಲೇಶಪುರ, ಕೊಡುಗು ಜಿಲ್ಲೆಗಳಲ್ಲಿ ಹರಡಿಕೊಂಡ ಮಲೆನಾಡಿನ ಚಿತ್ರಣಗಳನ್ನೂ ನೀಡುತ್ತದೆ. ಮಲೆನಾಡಿನ ರೈತರ, ಕೂಲಿಕಾರ್ಮಿಕರ ಸಮಸ್ಯೆಗಳನ್ನು ಕೃತಿ ಎಳೆಎಳೆಯಾಗಿ ಬಿಡಿಸಿಡುತ್ತದೆ. ಮಲೆನಾಡಿನ ವೈವಿಧ್ಯಮಯ ಬದುಕಿನ ರಂಜನೀಯ ದೃಶ್ಯಗಳೂ ಇಲ್ಲಿವೆ (ಥೇಟ್ ತೇಜಸ್ವಿಯವರ ಕಾದಂಬರಿಗಳಲ್ಲಿ ಕಾಣುವಂತೆ)
ಹೇಳಿಕೇಳಿ ಮಲೆನಾಡಿನ ಜನರು ಜೀವನ್ಮುಖಿಗಳು. ಕಡುಕಷ್ಟದಲ್ಲೂ ಸುಖವನ್ನು ಹುಡುಕಿಕೊಳ್ಳುವವರು. ವಿಪರೀತ ಹಾಸ್ಯಪ್ರಿಯರು. ಇದೆಲ್ಲದರ ನಡುವೆಯೂ ಈ ಜನರು ಜಿದ್ದಿಗೆ ಬಿದ್ದರೆ, ಕುಡುಗೋಲು-ಕತ್ತಿಗಳಿಂದ ಮಾತನಾಡುವವರು. ಇದಕ್ಕೆ ಸಾಕಷ್ಟು ಉದಾಹರಣೆಗಳು ಹಳ್ಳಿಥೇಟರ್ನಲ್ಲಿ ಕಾಣಿಸಿಕೊಳ್ಳುತ್ತವೆ. ಜಗಳ, ಹಲ್ಲೆ, ಕೊಲೆ ಇತ್ಯಾದಿಗಳ ವಿವರಗಳ ಮಧ್ಯೆಯೂ ಇದೆಲ್ಲವನ್ನೂ ಮೀರಿ ನಿಲ್ಲುವುದು ಇಲ್ಲಿನ ಜನರ ಸಾಂಸ್ಕೃತಿಕ ಕ್ರಿಯಾಶೀಲತೆ. ಅದನ್ನು ಪ್ರಸಾದ್ ಇಲ್ಲಿ ಚೆನ್ನಾಗಿ ಹಿಡಿದಿಟ್ಟಿದ್ದಾರೆ.
****
ಕರ್ನಾಟಕ ನಾಟಕ ಅಕಾಡೆಮಿ ಏರ್ಪಡಿಸಿದ್ದ ಗ್ರಾಮೀಣ ರಂಗೋತ್ಸವದಲ್ಲಿ ಪ್ರಸಾದ್ ಬರೆದ ಮಾಯಾಮೃಗ ನಾಟಕವನ್ನು ಬೆಳ್ಳೇಕರೆಯ ಜೈ ಕರ್ನಾಟಕ ಸಂಘದವರು ಆಡಿ ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸುತ್ತಾರೆ.
ವಿಶೇಷವೆಂದರೆ ನಾಟಕ ತಂಡದಲ್ಲಿ ಇದ್ದವರ ಪೈಕಿ ಮೂವರು ಬಡಗಿಗಳು, ಇಬ್ಬರು ಗಾರೆಯವರು, ನಾಲ್ಕು ಜನ ಕೂಲಿಕಾರ್ಮಿಕರು. ಒಬ್ಬ ಟೈಲರ್, ಇಬ್ಬರು ಡ್ರೈವರ್ಗಳು, ಒಬ್ಬರು ಶಾಲಾ ಶಿಕ್ಷಕರು-ಉಳಿದವರು ಇಂಥದೇ ಬೇರೆ ಬೇರೆ ವೃತ್ತಿಗಳಲ್ಲಿ ಇದ್ದವರು, ಜತೆಯಲ್ಲಿ ಒಂದಿಬ್ಬರು ಶಾಲಾ ಮಕ್ಕಳು!
ಇಂಥದ್ದೊಂದು ರಂಗತಂಡ ರಾಜ್ಯದ ಇನ್ಯಾವ ಮೂಲೆಯಲ್ಲಾದರೂ ಇರಬಹುದೇ? ಇದ್ದರೂ ಹತ್ತಾರು ವರ್ಷಗಳಿಂದ ಹೀಗೆ ಕ್ರಿಯಾಶೀಲವಾಗಿ ಇದ್ದಿರಲು ಸಾಧ್ಯವೇ?
ಪ್ರಸಾದ್ ಅವರ ಹಳ್ಳಿಥೇಟರ್ನ ಕೆಲವು ಅಧ್ಯಾಯಗಳನ್ನು ಚಂಪಕಾವತಿ ಬ್ಲಾಗ್ನಲ್ಲಿ ಸುಧನ್ವಾ ದೇರಾಜೆ ಪುಸ್ತಕ ಬಿಡುಗಡೆಗೂ ಮುನ್ನವೇ ಕಾಣಿಸಿದ್ದರು. ಕುತೂಹಲವಿರುವವರು ಚಂಪಕಾವತಿಗೊಮ್ಮೆ ಭೇಟಿ ಕೊಡಿ.
ಬೆಳ್ಳೇಕರೆಯಲ್ಲಿ ಎದ್ದು ನಿಂತಿರುವ ಪ್ರಕೃತಿ ರಂಗಮಂಚವೂ ಸೇರಿದಂತೆ ಆ ಊರಿನ ಸಾಂಸ್ಕೃತಿಕ ವೈಭವ ನೋಡಲು ಹೋಗುವವರಿಗೆ ಅಲ್ಲಿ ಸ್ವಾಗತ ಇದ್ದೇ ಇರುತ್ತದೆ. ಪ್ರಸಾದ್ ಜತೆ ಮಾತನಾಡಲು ಬಯಸುವವರು ೯೪೪೮೮ ೨೫೭೦೧ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು.
ಸದ್ಯಕ್ಕೆ ಪ್ರಸಾದ್ ಸಕಲೇಶಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರೂ ಹೌದು. ಕಸಾಪಗೆ ಅಧ್ಯಕ್ಷರಾದಾಗ ನಾನು ಅವರಿಗೆ ಬರೆದ ಪತ್ರ ಇಲ್ಲಿದೆ.
****
ಆತ್ಮೀಯರಾದ ಶ್ರೀ ರಕ್ಷಿದಿ ಪ್ರಸಾದ್ರವರಿಗೆ,
ಅಭಿನಂದನೆಗಳು ಹಾಗು ಕೃತಜ್ಞತೆಗಳು.
ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ಸಕಲೇಶಪುರದಲ್ಲಿ ಸಾಹಿತ್ಯದ ಹೊಸ ಅಲೆ ಎಬ್ಬಿಸಲು ಹೊರಟಿದ್ದೀರಿ. ಬೆಳ್ಳೆಕೆರೆ ನಾಟಕ ಸಂಘದ ಮೂಲಕ ಇಡೀ ಜಗತ್ತಿನ ತಲ್ಲಣಗಳಿಗೆ ಮುಖಾಮುಖಿಯಾಗಿ, ಹಳ್ಳಿಹುಡುಗರ ಅಭಿವ್ಯಕ್ತಿಗಳಿಗೆ ದನಿಯಾದವರು ನೀವು. ಒಂದು ಪುಟ್ಟ ಹಳ್ಳಿಯನ್ನು ಅಲ್ಲಿಯ ಎಲ್ಲ ಸಂವೇದನೆಗಳು ಹಾಗು ಜೀವದ್ರವ್ಯದ ಮೂಲಕವೇ ಹೊರಜಗತ್ತಿಗೆ ತೆರೆದು ಯಾರೂ ತುಳಿಯದ ಮಾರ್ಗವನ್ನು ಹುಟ್ಟುಹಾಕಿದವರು ನೀವು. ಈ ದೃಷ್ಟಿಯಲ್ಲಿ ಹೇಳುವುದಾದರೆ ಹೆಗ್ಗೋಡು ಮತ್ತು ಬೆಳ್ಳೇಕರೆ ಬೇರೆ ಬೇರೆಯಲ್ಲ. ನೀವು ಹಾಗು ಸುಬ್ಬಣ್ಣ ಬೇರೆಯಲ್ಲ.
ಹಾಗೆ ನೋಡಿದರೆ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷರ ಹುದ್ದೆ ನಿಮಗೆ ನಿಮಿತ್ತ ಮಾತ್ರ. ಅದರ ಮೂಲಕ ತಾಲ್ಲೂಕಿನಲ್ಲಿ ಏನನ್ನೋ ಮಾಡಲು ಹೊರಟಿದ್ದೀರಿ ಎಂಬುದು ನನ್ನ ಸಂಭ್ರಮದ ಗುಮಾನಿ! ಬೆಳ್ಳೆಕೆರೆಯನ್ನು ಸಾಂಸ್ಕೃತಿಕ ಜಗತ್ತಿನ ಭೂಪಟದಲ್ಲಿ ತಂದು ನಿಲ್ಲಿಸಿದವರು ನೀವು. ಈಗ ಇಡೀ ಸಕಲೇಶಪುರವನ್ನು ಎಲ್ಲಿಗೆ ಕರೆದೊಯ್ಯುವಿರೋ ಎಂಬ ಸಂತಸದ ಪ್ರಶ್ನೆಯೂ ನನ್ನದು.
ಸಕಲೇಶಪುರದಿಂದ ಒಂದು ಸಣ್ಣ ಕಲರವ ಕೇಳಿದರೂ ಅಲ್ಲಿಂದ ಇನ್ನೂರ ಇಪ್ಪತ್ತು ಕಿ.ಮೀ. ದೂರದಲ್ಲಿ ಕುಳಿತ ನನಗೆ, ನನ್ನಂಥವರಿಗೆ ರೋಮಾಂಚನವಾಗುತ್ತದೆ. ಕರಳು ಬಳ್ಳಿಯ ಸಂಬಂಧ ಎಂದರೆ ಇದೇ ಇರಬೇಕು. ಮುಗಿಯದ ವಾಂಚ್ಯೆ, ತೀರದ ದಾಹ, ಉಳಿದೇ ಉಳಿದ ಅತೃಪ್ತ ಕನಸುಗಳು.
ನಿಮ್ಮ ನೇತೃತ್ವದ ಸಾಹಿತ್ಯ ಪರಿಷತ್ತು ಕಾಫಿಯ ನಾಡಿನಿಂದ ಎಂಬ ಪುಟ್ಟ ಖಾಸಗಿ ಪತ್ರಿಕೆ ತಂದಿರುವುದು ವಿಶೇಷವಾಗಿ ನನಗೆ ಖುಷಿ ತಂದಿದೆ. ಹಿಂದೆ ನಾವು, ಸಕಲೇಶಪುರದಲ್ಲಿ ಕ್ರಿಯಾಶೀಲರಾಗಿದ್ದ ಗೆಳೆಯರೆಲ್ಲ ಸೇರಿ ತಂದಿದ್ದ ಕೈಬರಹದ ಪತ್ರಿಕೆ (ನಂತರ ಅದು ಡಿಟಿಪಿ ಪತ್ರಿಕೆಯಾಗಿ ರೂಪಾಂತರವಾಯಿತು) `ಸಂವಹನವನ್ನು ನೆನಪಿಸಿಕೊಂಡಿರುವುದು ಸಂತೋಷವನ್ನು ಇಮ್ಮಡಿಗೊಳಿಸಿತು. ಸಂವಹನ ವೇದಿಕೆ ಒಂದು ನೆನಪಾಗಿ ಉಳಿಯಿತಲ್ಲ ಎಂಬ ಸಂಕಟದ ಜತೆಯೇ ವೇದಿಕೆಯ ದಿನಗಳ ಹಳೆಯ ನೆನಪುಗಳೆಲ್ಲ ಸಾಲುಸಾಲಾಗಿ ಬಂದುನಿಂತು ಸಂತಸವಾಯಿತು. ಸಂವಹನವನ್ನು ನೆನಪಿಸಿಕೊಂಡು ಬರೆದ ಗೆಳೆಯ ಸ.ಸು.ವಿಶ್ವನಾಥ್ಗೂ, ನಿಮಗೂ ಮತ್ತೊಮ್ಮೆ ಧನ್ಯವಾದಗಳು.
ನಿಮ್ಮ ಜತೆ ದೂರವಾಣಿಯಲ್ಲಿ ಮಾತನಾಡಿದಾಗ ಹೇಳಿದಂತೆ `ಕಾಫಿಯ ನಾಡಿನಿಂದ ಪತ್ರಿಕೆ ಹಾಗು ನಿಮ್ಮ ನೇತೃತ್ವದ ಕನ್ನಡ ಸಾಹಿತ್ಯ ಪರಿಷತ್ ಸಕಲೇಶಪುರವನ್ನು ಕಾಡುತ್ತಿರುವ, ತಿಂದು ತೇಗುತ್ತಿರುವ ಎಲ್ಲ ಸಮಸ್ಯೆಗಳಿಗೆ ಎದುರು ನಿಲ್ಲಬೇಕಾಗಿದೆ. ತಾಲ್ಲೂಕು ಎದುರಿಸುತ್ತಿರುವ ಎಲ್ಲ ಸವಾಲುಗಳಿಗೆ ಉತ್ತರ ಹುಡುಕುವ ಯತ್ನ ನಡೆಸಬೇಕಾಗಿದೆ. ಸಾಂಸ್ಕೃತಿಕ ಪರಿಸರ ಜಡವಾಗಿದ್ದಾಗ ಸಮಾಜವೂ ಜಡವಾಗಿರುತ್ತದೆ. ಈ ಜಡತ್ವವನ್ನು ಕೊಡವಿಕೊಂಡು ಎದ್ದೇಳಲು ನಿಮ್ಮಂಥವರ ಪ್ರೇರಣೆ, ಮಾರ್ಗದರ್ಶನ ಅತ್ಯಗತ್ಯ. ಅದು ಈಗ ಸಾಧ್ಯವಾಗಿರುವುದು ನೆಮ್ಮದಿಯ ವಿಷಯ.
ಕಸಾಪ ಹೆಚ್ಚು ಹೆಚ್ಚು ತಲುಪಬೇಕಾಗಿರುವುದು ಶಾಲೆ, ಕಾಲೇಜುಗಳನ್ನು. ಆಧುನಿಕ ಜಗತ್ತು ಹೇರಿರುವ ಲೋಭಕೇಂದ್ರಿತ ಶಿಕ್ಷಣ ವ್ಯವಸ್ಥೆ ಹೊಸಹುಡುಗರಲ್ಲಿ ಚೈತನ್ಯ ಮೂಡಿಸುವ ಬದಲು ಧನದಾಹವನ್ನು ಮೂಡಿಸುತ್ತಿದೆ. ಕೇವಲ ಉದ್ಯೋಗಕ್ಕಾಗಿ, ಆರ್ಥಿಕ ವ್ಯವಸ್ಥೆಯ ಜಾಣ್ಮೆಗಾಗಿ ಕೊಡುವ ಶಿಕ್ಷಣ ಅದು ಶಿಕ್ಷಣವೇ ಅಲ್ಲ. ಶಿಕ್ಷಣ ಮಾನವೀಯವಾಗಿ ಬದುಕುವುದನ್ನು ಕಲಿಸಬೇಕು. ಕಸಾಪ ನಮ್ಮ ಶಾಲೆಗಳಲ್ಲಿ ಓದುವ ಮಕ್ಕಳಲ್ಲಿ ಸಾಹಿತ್ಯಕ, ಸಾಂಸ್ಕೃತಿಕ ಅಭಿರುಚಿಯನ್ನು ಬೆಳೆಸುವ ಕೆಲಸ ಮಾಡಲಿ ಎಂಬುದು ನನ್ನ ಆಸೆ.
`ಕಸಾಪ ಹಾಗು `ಕಾಫಿಯ ನಾಡಿನಲಿ ಎರಡೂ ಬೆಳೆಯಲಿ, ಕಾಫಿಯ ನಾಡು ಹಿಂದೆಂದಿಗಿಂತಲೂ ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾಗಲಿ, ಮಾನವೀಯತೆಯ ಜೀವಸೆಲೆ ಎಂದೂ ಬತ್ತದಿರಲಿ ಎಂದು ಎಲ್ಲ `ಅನಿವಾಸಿ ಸಕಲೇಶಪುರಿಗರ ಪರವಾಗಿ ಹಾರೈಸುತ್ತೇನೆ.
ಎಲ್ಲ ಗೆಳೆಯರಿಗೂ, ಹಿರಿಯರಿಗೂ ನನ್ನ ನೆನಕೆಗಳು.
ಪ್ರೀತಿಯಿಂದ
ದಿನೂ ಸ.ಚಂ. (ದಿನೇಶ್ ಕುಮಾರ್ ಎಸ್.ಸಿ.)